ದಿನದ ಸುದ್ದಿ
‘ಶರಾವತಿ ಉಳಿಸಿ’ ಸಮಾಲೋಚನಾ ಸಭೆಯ ಮುಖ್ಯಾಂಶಗಳು ಹಾಗೂ ನಿರ್ಣಯಗಳು
ಸುದ್ದಿದಿನ, ಸಾಗರ : ಜೂನ್ 22 ರಂದು ಸಾಗರದ ನೌಕರರ ಭವನದಲ್ಲಿ ನಡೆದ “ಶರಾವತಿ ಉಳಿಸಿ” ಸಮಾಲೋಚನಾ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ನಾ ಡಿಸೋಜಾ, ಹಿರಿಯ ಚಿಂತಕ ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ವಿಲಿಂ, ಕಲಾವಿದ ಪರಿಸರವಾದಿ ಅರುಣ್ ಕುಮಾರ್ ಸಾರಾ, ಕೆ ಜಿ ಕೃಷ್ಣ ಮೂರ್ತಿ, ತುಮರಿ, ರಾಜಕೀಯ ಮುಖಂಡರಾದ ಬಿ ಆರ್ ಜಯಂತ್, ಕಲಗೋಡು ರತ್ನಾಕರ, ಮೇಘರಾಜ್ ಟಿಡಿ, ಮಲ್ಲಿಕಾರ್ಜುನ ಹಕ್ರೆ, ರವಿ ಕುಗ್ವೆ, ಪ್ರಭಾವತಿ ಚಂದ್ರಕಾಂತ್, ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಕುಗ್ವೆ, ಬಿ ಎಚ್ ರಾಘವೇಂದ್ರ, ವಾಮದೇವ ಗೌಡ್ರು, ಹುಚ್ರಾಯಪ್ಪ ಶಿಕಾರಿಪುರ ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.
ಕರೂರು ಗ್ರಾಮ ಪಂಚಾಯತಿ ಸತ್ಯನಾರಾಯಣ ಜಿ ಟಿ ಎಲ್ಲರನ್ನೂ ಸ್ವಾಗತಿಸಿದರು.ಪ್ರಾಸ್ತಸವಿಕವಾಗಿ ಮಾತನಾಡಿದ ಎಚ್ ಬಿ ರಾಘವೇಂದ್ರ ಸಭೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಶರಾವತಿ ನದಿಯಿಂದ ಬೆಂಗಳೂರಿಗೆ ನೀರೆತ್ತುವ ಯೋಜನೆಯ ಹಿನ್ನೆಲೆ, ಸಮಸ್ಯೆ ಗಳನ್ನು ಪತ್ರಕರ್ತ ಶಶಿ ಸಂಪಳ್ಳಿ ವಿವರಿಸಿದರು. ಈ ಯೋಜನೆಯ ಪರಿಸರದ ಆಯಾಮವನ್ನು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ತಿಳಿಸಿದರು. ಕೈಗೊಳ್ಳಬೇಕಾದ ಹೋರಾಟದ ಸ್ವರೂಪ, ಎಲ್ಲರನ್ನೂ ಒಳಗೊಂಡು ಜನಾಂದೋಲನ ನಡೆಸಬೇಕಾಗಿರುವ ಕುರಿತು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹರ್ಷಕುಮಾರ್ ಕುಗ್ವೆ ವಿವರಿಸಿದರು.
ಸಾಹಿತಿ ನಾ ಡಿಸೋಜಾ ಅವರು ಮಾತನಾಡಿ, ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರನ್ನ ಸಾಗಿಸಲು ಏನೆಲ್ಲಾ ಕೆಲಸ ಆಗಬೇಕು, ಎಷ್ಟೊಂದು ಖರ್ಚು ತಗುಲುತ್ತೆ, ಆ ಹಣ ನಮ್ಮೆಲ್ಲರ ಮೇಲೂ ಹೊರೆ, ನೀರನ್ನ ಸಾಗಿಸಲು ಇಲ್ಲಿ ಎಷ್ಟು ನೀರಿದೆ ಎಂಬುದನ್ನು ನಾವು ಪರಿಶೀಲನೆ ಮಾಡಬೇಕು, ಲಿಂಗನಮಕ್ಕೆ ಜಲಾಶಯದಲ್ಲಿ ಶೇ.೪೦ರಷ್ಟು ಹೂಳೇ ತುಂಬಿದೆ, ಇದರ ಬಗ್ಗೆ ಸರ್ಕಾರಕ್ಕೆ ಆಲೋಚನೆಯೇ ಇಲ್ಲ, ಈ ಸಣ್ಣ ನದಿಗೆ ಚಿಕ್ಕಪುಟ್ಟ ಹತ್ತು ಅಣೆಕಟ್ಟುಗಳಿವೆ. ನ್ಯಾಯಾಲಯಗಳು ಕುಡಿಯುವ ನೀರಿನ ಪರವಾಗಿ ಇರುತ್ವೆ, ಇಲ್ಲಿಂದ ಬೆಂಗಳೂರಿಗೆ ನೀರು ಸರಬರಾಜಾಗಲು ಇರುವ ಆಘಾತಗಳ ಬಗ್ಗೆ ನಿಮ್ಮ ಕಳಕಳಿಗೆ ಧನ್ಯವಾದಗಳು. ಎಲ್ಲರೂ ಸೇರಿ ಈ ಯೋಜನೆ ತಡೆಯಲು ಮುಂದಾಗೋಣ ಎಂದರು.
ಚಿಂತಕ ಪ್ರಸನ್ನ ಅವರು ವಿಶ್ವದ ಎಲ್ಲಾ ರಾಷ್ಟ್ರ ಗಳು ನಗರವನ್ನ ಮಿತಿಗೊಳಿಸುವ ಕೆಲಸ ಮಾಡುತ್ತವೆ ಆದರೆ ನಮ್ಮಲ್ಲಿ ಇಲ್ಲ, ಬೆಂಗಳೂರಿನ ದಾಹಕ್ಕೆ ಕಾವೇರಿ ಹೇಮಾವತಿ ಆಯ್ತು ಈಗ ಶರಾವತಿ, ಐವತ್ತು ವರ್ಷ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದೇ ಆದರೆ ಬೆಂಗಳೂರನ್ನ ಮಿತಿಗೊಳಿಸಿ. ಉತ್ತರದ ಭಾರತದಲ್ಲಿ ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ, ಈ ಮಾತನ್ನ ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಬೆಂಗಳೂರು ಎಷ್ಟು ಎತ್ತರವಿದೆ, ಗುಡ್ಡಕ್ಕೆ ನೀರು ಹೊಡೆಯುತ್ತೇವೆ ಎಂಬುದನ್ನ ಯಾವ ನ್ಯಾಯಾಲಯವೂ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಆರ್ ಜಯಂತ್ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಅತ್ಯಂತ ಮೂರ್ಖ ಯೋಜನೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ. ಇದನ್ನು ತಡೆಯಲೇಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಅವರು ಮಾತನಾಡಿ, ಶರಾವತಿ ನದಿ ನೀರನ್ನ ತೆಗೆದುಕೊಂಡು ಹೋಗುವ ಹುನ್ನಾರ ಮೊದಲಿಂದಲೂ ಇತ್ತು..ಈಗ ಮುನ್ನೆಲೆಗೆ ಬಂದಿದೆ. ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಮೊದಲು ಇಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಗಾಗಿ ಒತ್ತಾಯಿಸಬೇಕು ಎಂದರು. ಈ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿಗಳನ್ನ ಕರೆದು ಸಭೆ ಮಾಡೋಣ, ಇಡೀ ಶಿವಮೊಗ್ಗ ಬಂದ್ ಮಾಡಿಸೋಣ ಎಂದರು.
ಶಂಕರಶರ್ಮಾ ಅವರು ಮಾತನಾಡಿ, ತಾಂತ್ರಿಕವಾಗಿ ಯೋಜನೆಯ ಬಗ್ಗೆ ಚರ್ಚೆ ಮಾಡಿ, ಮೂರು ಸಾವಿರ ಮೆಗಾವ್ಯಾಟ್ ಅಂದರೆ ಈ ನೀರೆತ್ತಲು ಇಲ್ಲಿ ತಯಾರಾಗುವ ಅರ್ಧದಷ್ಟು ವಿದ್ಯುತ್ ಬೇಕು, ಈ ಕುರಿತು ನಾವು ವರದಿ ತಯಾರು ಮಾಡೋಣ, ಯಾವ ಭಾಗದಲ್ಲೂ ನಾಲ್ಕು ನೂರು ಕಿಲೋಮೀಟರ್ ಉದ್ದ ಸಾವಿರ ಅಡಿ ಎತ್ತರಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇಲ್ಲ. ನಾವು ಬರೀ ಬೆಂಗಳೂರಿನ ಬೆಳವಣಿಗೆ ನೋಡಿ ಕೂರಬೇಕಾ, ಕಾಳಿ ನದಿ ಪಾತ್ರದ ಜನರು ಹಾಗೂ ಹೊಸಪೇಟೆ ಭಾಗದ ಜನರನ್ನೂ ಹೋರಾಟಕ್ಕೆ ಸೇರಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ಶೇ ನಲವತ್ತರಷ್ಟು ನೀರು ಪೋಲಾಗುತ್ತೆ ಇದು ಅಧಿಕೃತ ಮಾಹಿತಿ. ಬೆಂಗಳೂರಿಗೆ ಹದಿನೆಂಟು ಟಿಎಂಸಿಯಷ್ಟೇ ಸಾಕು ಮೂವತ್ತು ಟಿಎಂಸಿ ಯಾಕೆ.. ಎಂದು ಕೇಳಿದರು.
ಪರಿಸರವಾದಿ ಅಜಯ್ ಶರ್ಮಾ ಮಾತನಾಡಿ, ಮಲೆನಾಡಿಗೆ ಮೊದಲು ನೀರು ಕೊಡಿ ನಮಗಾಗಿ ಉಳಿದರೆ ಅದನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂಬುದನ್ನ ನಾವು ವಿವರಿಸುವ ಅಗತ್ಯ ಇದೆ ಎಂದರು.
ಬಿಜೆಪಿ ಮುಖಂಡ ಮೇಘರಾಜ್ ಟಿ ಡಿ ಅವರು ಮಾತನಾಡಿ, ಈ ವಿಷಯದಲ್ಲಿ ಸರ್ಕಾರ ಹೊಣೆಗೇಡಿಯಾಗಿ ವರ್ತಿಸುತ್ತಿದೆ, ಬೃಹತ್ ಹೋರಾಟವನ್ನು ಎಲ್ಲರೂ ಸೇರಿ ನಡೆಸೋಣ ಎಂದರು.
ಹುಚ್ರಾಯಪ್ಪ ಅವರು ಮಾತನಾಡಿ, ನಾವು ಶಿಕಾರಿಪುರದವರು ಸಾಗರದ ನೀರು ಬಳಸುತ್ತೇವೆ, ಉದಾಹರಣೆಗೆ ಡ್ಯಾಂ ಹೊಸೂರ್, ನಮಗೂ ಇಲ್ಲಿನ ಋಣ ಬಹಳಷ್ಟು ಇದೆ, ಈಗ ಕುಡಿಯಲೂ ನೀರಿಲ್ಲ. ನಾವೂ ಹೋರಾಟಕ್ಕೆ ಸಿದ್ದ ಎಂದರು.
ನಮ್ಮ ನಾಡನ್ನ ಪ್ರತ್ಯೇಕ ರಾಜ್ಯ ಮಾಡಿ ಎಂದಾಗ ಮಾತ್ರ ನಮಗೆ ನ್ಯಾಯ ಸಿಗುತ್ತೆ ಅಂತಹ ಹೋರಾಟ ಆಗಬೇಕು, ಎಚ್ಚರವಿಡಿ ನಾವು ಇಂತಹ ಹೋರಾಟವೇ ಸರ್ಕಾರಕ್ಕೆ ಚಾಟಿ
ನಿತಿನ್ ಹಿರಳೆ ಮಾತನಾಡಿ, ಶರಾವತಿಯನ್ನ ಉಳಿಸಲು, ನಾವು ವರದಿ ಸಿದ್ಧಪಡಿಸಬೇಕು, ಈ ಮೂಲಕ ಇಲ್ಲಿನ ಸಮಸ್ಯೆಗಳನ್ನ ಮನವರಿಕೆ ಮಾಡಿಕೊಡಬೇಕು
ದಂಡಾವತಿ ಹೋರಾಟದ ವಾಮದೇವ ಗೌಡ ಅವರು ಈ ಹೋರಾಟದಲ್ಲಿ ರಾಜಕೀಯ ಮುಖಂಡರ ನಾಯಕತ್ವ ಕೊಡದೇ ಅವರ ಬೆಂಬಲ ಮಾತ್ರ ಪಡೆದು ಎಲ್ಲರ ಹೋರಾಟವಾಗಿ ನಡೆಸಬೇಕು ಎಂದರು.
ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಹಲವರು ಮಾತಾಡುವುದಿದ್ದರೂ ಸಮಯದ ಅಭಾವದಿಂದ ಅವಕಾಶ ಆಗಲಿಲ್ಲ.
ನಿರ್ಣಯಗಳು
- ‘ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ’ ವನ್ನು ಸಭೆ ಅಸ್ತಿತ್ವಕ್ಕೆ ತಂದಿತು.
- ಒಕ್ಕೂಟದ ಹೋರಾಟ ಗೌರವಾಧ್ಯಕ್ಷರಾಗಿ ಕನ್ನಡದ ನಾಡಿ ಎಂದೇ ಖ್ಯಾತರಾದ ಲೇಖಕರು ನಾ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.
- 30 ಜನರ ಸಂಘಟನಾ ಸಮಿತಿ ರಚಿಸಿಲಾಯಿತು.
– ಶಂಕರ್ ಶರ್ಮಾ ಅವರನ್ನೊಳಗೊಂಡ ತಜ್ಞರ ಸಮಿತಿಯಲ್ಲಿ ರಾಜ್ಯ ಮಟ್ಟದ ನೀರಾವರಿ ತಜ್ಞರು, ಪರಿಸರ ತಜ್ಞರನ್ನೊಳಗೊಂಡ ಈ ಸಮಿತಿ ಶೀಘ್ರದಲ್ಲೇ ಸರ್ಕಾರದ ಯೋಜನೆಯ ಅನಾಹುತಗಳ ಕುರಿತು ಒಂದು ವರದಿ ಸಲ್ಲಿಸಬೇಕು. - ಕಾನೂನು ಸಮಿತಿ- ಈ ವಿಷಯದಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲು ವಕೀಲ ಪ್ರವೀಣ್ ಕೆ ವಿ ನೇತೃತ್ವದಲ್ಲಿ ಕಾನೂನು ಸಮಿತಿ ರಚಿಸಲಾಯಿತು
- ಮಾಧ್ಯಮ/ ಸಾಮಾಜಿಕ ಮಾಧ್ಯಮ ಸಮಿತಿ
- ಶರಾವತಿ ಉಳಿಸುವ ಈ ಹೋರಾಟವನ್ನು ಮಾಧ್ಯಮಗಳ ಮೂಲ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಹರ್ಷಕುಮಾರ್ ಕುಗ್ವೆ ಉಸ್ತುವಾರಿಯ ತಂಡವೊಂದನ್ನು ರಚಿಸಲಾಯಿತು.
- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಕುರಿತು ವರದಿಯೊಂದನ್ನು ಸಿದ್ಧಪಡಿಸುವ ಅಗತ್ಯವಿದ್ದು ಈ ಹೊಣೆಯನ್ನು ಮಲ್ಲಿಕಾರ್ಜುನ ಹಕ್ರೆ ಅವರಿಗೆ ವಹಿಸಲಾಯಿತು.
- ವಾಮದೇವ ಗೌಡ ಅವರ ನೇತೃತ್ವದಲ್ಲಿ ಹಣಕಾಸು ಸಮಿತಿ ರಚಿಸಲಾಯಿತು. ಯಾವುದೇ ರಾಜಕೀಯ ಪಕ್ಷದಿಂದ ಹಣ ತೆಗೆದುಕೊಳ್ಳುವಂತಿಲ್ಲ ಹಾಗೂ 5000 ರೂಪಾಯಿಗಿಂತ ಹೆಚ್ಚಿನ ದೇಣಿಗೆ ಪಡೆಯುವಂತಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಜನರಿಂದಲೇ ಹಣ ಸಂಗ್ರಹಿಸಿ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
- ಜುಲೈ 10 ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆ ಬಂದ್ ಕರೆ ನೀಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
- ಕೂಡಲೇ ಶಿವಮೊಗ್ಗದಲ್ಲಿ ಒಂದು ಪತ್ರಿಕಾ ಗೋಷ್ಟಿ ನಡೆಸುವುದು,
ಹೊಸನಗರ, ನಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬಗಳಲ್ಲಿ ಪೂರಕ ಸಭೆಗಳನ್ನು ಶೀಘ್ರದಲ್ಲೇ ಆಯೋಜಿಸಲು ತೀರ್ಮಾನ ಮಾಡಲಾಯಿತು. - ಶರಾವತಿ ನದಿ ಉಳಿಸಿಕೊಳ್ಳುವ ಹೋರಾಟಕ್ಕೆ ನಾಡಿನಾದ್ಯಂತ ಬೆಂಬಲ ಕೋರಲು ನಿರ್ಧರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಕೊಪ್ಪಳ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇಲ್ಲಿ 2022-23 ರಿಂದ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅರೇ ಸರ್ಕಾರಿ ಖಾತೆಯ ಅನುದಾನದಲ್ಲಿ ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ನಿಯಮಬಾಹಿರವಾಗಿ ಖರೀದಿ ಪ್ರಕ್ರಿಯೆಗೆ ಮುಂದಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಪ್ರಾಂಶುಪಾಲರಾದ ಡಾ. ಗಣಪತಿ ಕೆ. ಲಮಾಣಿ ಇವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇವರಿಂದ ಅರೇ ಸರ್ಕಾರಿ ಖಾತೆಯ ಅನುದಾನದ ಬಳಕೆಯ ಅಧಿಕೃತ ದಾಖಲೆಗಳನ್ನು ಪಡೆದು, ಪರಿಶೀಲನೆ ಮಾಡಿದಾಗ ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ಮಾಡಿರುವುದು ಮಾತ್ರವಲ್ಲದೆ, ವೆಂಕಟೇಶ್ ಟ್ರೇರ್ಸ್, ಕುಕನೂರು ಮತ್ತು ವೆಂಕಟೇಶ್ ಟ್ರೇರ್ಸ್, ತಳಕಲ್ಲ ಎಂಬ ಒಂದೇ ಹೆಸರಿನ ಏಜೆನ್ಸಿಯ ಮೂಲಕ ಎರಡು ಸ್ಥಳಗಳ ಹೆಸರಿನಲ್ಲಿ ನಕಲಿ ಜಿ.ಎಸ್.ಟಿ ಬಿಲ್ಲುಗಳನ್ನು ಸೃಷ್ಟಿಸಿಕೊಂಡು ಲಕ್ಷಾಂತರ ರೂಪಾಯಿ ಅನುದಾನವನ್ನು ವಂಚನೆ ಮಾಡಿರುವುದು ಕಂಡುಬದಿರುತ್ತದೆ.
ಪ್ರಾಂಶುಪಾಲರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. 3 ತಿಂಗಳು ಕಳೆದರೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಯಾವುದೇ ಪ್ರತ್ಯುತ್ತರ ನೀಡದ ಕಾರಣ, ನಕಲಿ ಜಿ.ಎಸ್.ಟಿ ಮೂಲಕ ಹಣ ವಂಚಿಸಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ
ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯಿಂದ ಫಾಸ್ಟ್ ಫುಡ್ ತಯಾರಿಕೆ ಕುರಿತ 12 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಫೆಬ್ರವರಿ 16 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿಯನ್ನು ಸಲ್ಲಿಸಬಹುದು. 18 ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು. ತರಬೇತಿ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9481506564, 9740982585, 9380162042, 9241482541, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಪ್ರೊ.ಪೂರ್ಣಾನಂದ, ಎ.ನಾರಾಯಣ, ಸತೀಶ್ ಆಚಾರ್ಯ ಸೇರಿದಂತೆ ಹಲವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
-
ದಿನದ ಸುದ್ದಿ7 days agoಇದೇ 11 ರಂದು ಜಿಎಂ ವಿಶ್ವವಿದ್ಯಾಲಯದಲ್ಲಿ ಪ್ರಥಮ ಘಟಿಕೋತ್ಸವ : ಕುಲಪತಿ ಡಾ. ಎಸ್.ಆರ್. ಶಂಕಪಾಲ್
-
ದಿನದ ಸುದ್ದಿ3 days agoತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
-
ದಿನದ ಸುದ್ದಿ4 days agoಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ
-
ದಿನದ ಸುದ್ದಿ4 days agoಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

