Connect with us

ದಿನದ ಸುದ್ದಿ

ಸಾಮಾಜಿಕ ಜಾಲತಾಣಗಳು ಮತ್ತು ಸುಳ್ಳು ಸುದ್ದಿಗಳು..!

Published

on

  • ವಿವೇಕಾನಂದ. ಹೆಚ್.ಕೆ.

ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ ವಿಧಿಸಬೇಕು ಎಂಬ ಕೂಗಿನ ಜೊತೆ ಕೆಲವು Watsapp ಗುಂಪುಗಳಲ್ಲಿ Forward ಮಾಡುವ ಸಂದೇಶಗಳಿಂದ ನಿರ್ವಾಹಕರು ತೊಂದರೆಗೆ ಆಗುವ ಭಯ ಕಾಡುತ್ತಿದೆ.

ಹಾಗಾದರೆ ವಾಸ್ತವ ಏನು ?

ಸುಳ್ಳು ವಂಚನೆ ಮೋಸ ವಿಷ ಕಾರುವ ಪ್ರಚೋದನಕಾರಿ ವಿಷಯಗಳು ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ ಯಾವಾಗಲೂ ಕಾನೂನು ಬಾಹಿರವೇ,ಅನೈತಿಕವೇ ಮತ್ತು ನಿಷಿದ್ಧವೇ. ಅದು ಸೋಷಿಯಲ್‌ ಮೀಡಿಯಾ ‌ಆಗಲಿ ಅಥವಾ ಎಲ್ಲೇ ಆಗಿರಲಿ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ.

ಒಂದು ವೇಳೆ ಅದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಅತ್ಯಂತ ಅಪಾಯಕಾರಿ ಹಂತ ತಲುಪಿದೆ ಎಂದು ಹೇಳಿದರೆ ಇಡೀ ಸಮಾಜದ ಮಾನಸಿಕ ವರ್ತನೆಯ ಬಗ್ಗೆಯೇ ಅನುಮಾನಿಸಬೇಕಾಗುತ್ತದೆ. ಹಾಗಾದರೆ ನಾವೆಲ್ಲರೂ ಸುಳ್ಳು ವಂಚನೆಯ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಬುದ್ದಿ ಶಕ್ತಿ ನಮಗಿಲ್ಲವೇ.

ಇದನ್ನೂ ಓದಿ | ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್..!

ಸ್ವಲ್ಪ ಯೋಚಿಸಿ ನೋಡಿದರೆ ಸಾಮಾಜಿಕ ಜಾಲತಾಣಗಳನ್ನು ಅತಿಹೆಚ್ಚು ಸದುಪಯೋಗ ಮತ್ತು ದುರುಪಯೋಗ ಪಡಿಸಿಕೊಂಡ ಕುಖ್ಯಾತಿ ರಾಜಕೀಯ ಪಕ್ಷಗಳು ಮತ್ತು ಸಂಘಟನಾತ್ಮಕ ಪಂಥಗಳಿಗೆ ಸಲ್ಲುತ್ತದೆ.

ಇವು ಈ ಜಾಲತಾಣಗಳ ನಿರ್ವಹಣೆಗೆ ಏಜೆಂಟರುಗಳನ್ನು ನೇಮಿಸಿಕೊಂಡರು. ಕೆಲವು ಅಧೀಕೃತ ಮತ್ತೆ ಕೆಲವು ಅನಧಿಕೃತ. ಇವುಗಳ ಕೆಲಸ ಇತಿಹಾಸವನ್ನು ತಿರುಚುವುದು, ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು, ಮಹಾಪುರುಷರ ಸಂದೇಶಗಳನ್ನು ತಪ್ಪಾಗಿ ಬರೆದು ತಮ್ಮ ಪರವಾಗಿ ತಿದ್ದುವುದು, ವಿರೋಧಿಗಳನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಇಲ್ಲಸಲ್ಲದ ಆರೋಪಗಳನ್ನು ಜಾಣ್ಮೆಯಿಂದ ಇತರರ ತಲೆಗೆ ಕಟ್ಟುವುದು.

ಪೋಟೋ ಶಾಪ್ ಸಂಕಲನ ತಂತ್ರದಿಂದ ಯಾರದೋ ತಲೆಗೆ ಇನ್ಯಾರನ್ನೋ ಜೋಡಿಸುವುದು, ಸುಳ್ಳು ಧ್ವನಿ ಸುರಳಿಗಳನ್ನು ಪ್ರಸಾರ ಮಾಡುವುದು, ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂಮನೊಬ್ಬ ಹಿಂದೂ ವೇಷ ಧರಿಸಿ, ಹಿಂದೂ ಒಬ್ಬ ಮುಸ್ಲಿಂ ವೇಷ ಧರಿಸಿ ಅನಾಹುತಕಾರಿಯಾಗಿ ಮಾತನಾಡುವುದು ಮುಂತಾದ ಅನೇಕ ಕುತಂತ್ರಗಳನ್ನು ಹರಿಯ ಬಿಡುತ್ತಾರೆ. ಇದು ಕೊನೆಗೆ ನಿಜ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸಗಳನ್ನೇ ಗೊಂದಲಗೊಳಿಸಿದೆ. ಅದರ ಲಾಭವನ್ನು ಅವು ಪಡೆದರೆ ನಷ್ಟ ಮಾತ್ರ ಜನರ ಪಾಲಿಗೆ.

ಹಾಗಾದರೆ ಸುದ್ದಿಗಳ ನಿಖರತೆಯನ್ನು ಗುರುತಿಸುವುದು ಹೇಗೆ ?

ನೋಡಿ ಈಗಿನ ವ್ಯವಸ್ಥೆಯಲ್ಲಿ ಇದಕ್ಕೆ ದಿಡೀರನೇ ಒಂದು ಸ್ಪಷ್ಟ ಪರಿಹಾರ ಸಿಗುವುದಿಲ್ಲ. ಸತ್ಯ ಹರಿಶ್ಚಂದ್ರರ ಉಗಮವೂ ಆಗುವುದಿಲ್ಲ. ಇರುವುದರಲ್ಲಿ ನಾವು ಒಪ್ಪಬಹುದಾದ ಒಂದು ಸರಳ ಪರಿಹಾರವೆಂದರೆ..

ಏನೇ ಆಪಾದನೆಗಳು, ಪಕ್ಷಪಾತಗಳು, ವಿವೇಚನಾರಹಿತ ವಿಮರ್ಶೆಗಳು, ಸ್ಪರ್ಧಾತ್ಮಕ ತಂತ್ರಗಳು ಇದ್ದರೂ ಈಗಲೂ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‌ನಂಬಲರ್ಹ ಸುದ್ದಿಗಳು ಪ್ರಸಾರವಾಗುತ್ತವೆ. ಅಧೀಕೃತ ಸುದ್ದಿ ಸಂಸ್ಥೆಗಳು, ಸರ್ಕಾರದ ಆಡಳಿತ ವ್ಯವಸ್ಥೆ, ಪೋಲೀಸ್, ಮುಂತಾದ ಎಲ್ಲವೂ ಮೊದಲು ಸುದ್ದಿಗಳನ್ನು ಇವುಗಳಿಗೆ ಕಳುಹಿಸುತ್ತವೆ‌.

ಈ ಮಾಧ್ಯಮಗಳಿಗೆ ಗೊತ್ತಿಲ್ಲದ ವಿಶ್ವದ ಯಾವುದೇ ದೊಡ್ಡ ಘಟನೆಗಳು ಇರುವುದೇ ಇಲ್ಲ. ಏನೇ ಅಪರಾಧ, ಅಪಘಾತ, ಅವಘಡ, ಸಾಧನೆ, ಪತನ, ಕ್ರಾಂತಿ, ಬದಲಾವಣೆ ಎಲ್ಲವೂ ಬಹುತೇಕ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ. ಹಾಗೆಂದು ಸಂಪೂರ್ಣ ಎಲ್ಲವೂ ಎಂದು ಅಲ್ಲ.

ಕೆಲವು ಅಪರೂಪದ, ಕುತಂತ್ರದ, ಜನರಿಗೆ ಮರೆಮಾಚಿದ ಸುದ್ದಿಗಳು ಇರುತ್ತವೆ. ಆದರೆ ಅದು ಬಯಲಾಗುವುದು ಸಹ ಮಾಧ್ಯಮಗಳಿಂದಲೇ. ಯಾರೋ ಒಬ್ಬ ಜನಪ್ರಿಯ ವ್ಯಕ್ತಿಯ ಸಾವು ಮೊದಲು ಅಲ್ಲಿನ ಸ್ಥಳೀಯ ಜನರಿಗೆ ತಲುಪಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದರೂ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಲ್ಲಿ ಬಂದೇ ಬರುತ್ತದೆ.

ಹಾಗೆಯೇ ಈ ಮಾಧ್ಯಮಗಳಲ್ಲಿ ಒಂದಷ್ಟು ಊಹೆ, ಆತುರ, ಕೆಟ್ಟ ವಿಮರ್ಶೆ, ವ್ಯಕ್ತಿ ನಿಂದನೆ ಇರುತ್ತದೆ. ಆದರೆ ತಲೆಬುಡವಿಲ್ಲದ ಅತ್ಯಂತ ಅಪಾಯಕಾರಿ ಸುದ್ದಿಗಳನ್ನು ಪ್ರಸಾರ ಮಾಡಲು ಭಯಪಡುತ್ತಾರೆ. ಏಕೆಂದರೆ ಅವರು ಸುದ್ದಿಗಳನ್ನು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಹೊಂದಿದ್ದಾರೆ ಮತ್ತು Accountability ಇದೆ. ಅವರ ಮೇಲೆಯೂ ಮಾನಹಾನಿ ಮೊಕದ್ದಮೆ ಹೂಡಬಹುದು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ. ಯಾರೋ ಒಬ್ಬ ವ್ಯಕ್ತಿ ವೈಯಕ್ತಿಕ ಸಂದೇಶವನ್ನು ಅಥವಾ ದೃಶ್ಯಗಳನ್ನು ಬೇಕಂತಲೇ ಹರಿಯ ಬಿಡಬಹುದು. ಅದು ಹೊಸದೋ ಹಳೆಯದೋ ನಿಜವೋ ಸುಳ್ಳೋ ಯಾರಿಗೂ ತಿಳಿಯುವುದಿಲ್ಲ ಮತ್ತು ಅದಕ್ಕೆ ಯಾರೂ ಜವಾಬ್ದಾರರಿರುವುದಿಲ್ಲ. ನೀವು ಯಾರನ್ನು ಪ್ರಶ್ನಿಸಲು ಸಿಗುವುದಿಲ್ಲ.

ಈಗ ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೆಲವು ನಿಭಂದನೆಗಳನ್ನು ವಿಧಿಸಿದೆ ಎಂಬ ಮಾಹಿತಿ ಇದೆ. ಇದು ಹೊಸದೇನು ಅಲ್ಲ. ಎಂದಿನಂತೆ ಸುಳ್ಳು ಪ್ರಚೋದನಕಾರಿ ವಿಷಯಗಳಿಗೆ ಮಾತ್ರ ಸಂಬಂಧಿಸಿದೆ. ಸತ್ಯವನ್ನು, ಸ್ವತಂತ್ರ ಅಭಿಪ್ರಾಯವನ್ನು,
ಅಧೀಕೃತ ಮಾಹಿತಿಯನ್ನು ಕಾನೂನು ಮತ್ತು ನೈತಿಕತೆಯ ಮಿತಿಯೊಳಗೆ ವ್ಯಕ್ತಪಡಿಸಲು ಯಾವುದೇ ಅಂಜಿಕೆ ಬೇಡ.

Forward ಮಾಡುವ ವಿಷಯದಲ್ಲಿ ಮಾತ್ರ ಜಾಗೃತವಾಗಿರಿ. ಒಂದು ವೇಳೆ ಸುದ್ದಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗದೆ ಕೇವಲ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತಿದ್ದರೆ ಅದನ್ನು ಅಷ್ಟಾಗಿ ನಂಬಬಾರದು ಮತ್ತು Forward ಮಾಡಬಾರದು. ಯಾರೋ ‌ದೇಶಭಕ್ತಿಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಏನನ್ನೋ ಹೇಳಿದರೆ ಅದನ್ನು ಓದಬಹುದೇ ಹೊರತು Forward ಮಾಡಬಾರದು.

ಬೇಕಾದರೆ ಅದರ ಸಾರಾಂಶವನ್ನು ಸ್ವತಂತ್ರ ಅಭಿಪ್ರಾಯದೊಂದಿಗೆ ಮತ್ತು ಒಂದು ಅನುಮಾನದೊಂದಿಗೆ ಸ್ವತಃ ಬರೆಯಬಹುದು. ಕರೋನ ಔಷಧಿ, ಸಾವಿನ ಅಂಕಿ ಸಂಖ್ಯೆಗಳು ಮುಂತಾದ ವಿಷಯಗಳ ಬಗ್ಗೆ ಯಾವುದೇ ಸಂದೇಶ ಕಳಿಸಬಾರದು. ಹೊಸ ಸಂಶೋಧನಾ ವರದಿ ಸರ್ಕಾರಕ್ಕೆ ಮಾತ್ರ ಕಳುಹಿಸಿ.

ಸುಳ್ಳುಗಳನ್ನೇ ಧೈರ್ಯವಾಗಿ ರಾಜಾರೋಷವಾಗಿ ಪ್ರಸಾರ ಮತ್ತು ಪ್ರಚಾರ ಮಾಡುವ ಸಂದರ್ಭದಲ್ಲಿ, ಅದರ ಮುಖಾಂತರವೇ ಸಮಾಜವನ್ನು ನಿಯಂತ್ರಣ ಪಡೆಯುವ ಸಮಯದಲ್ಲಿ ಸತ್ಯ ಹೇಳುವವರು ಹೆದರಿಕೊಳ್ಳಬಾರದು. ಸುಳ್ಳು ಸತ್ಯವನ್ನು ಸೋಲಿಸಲು ಬಿಡಬಾರದು.

ಖಂಡಿತವಾಗಿಯೂ ಸತ್ಯ ಸುಳ್ಳಿಗಿಂತ ಹೆಚ್ಚು ಬಲಶಾಲಿ ಮತ್ತು ಪರಿಣಾಮಕಾರಿ. ಆದರೆ ನಾವು ನಿಜಕ್ಕೂ ಪ್ರಾಮಾಣಿಕರಾಗಿರಬೇಕು ಮತ್ತು ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ನಮಗೆ ಅನುಕೂಲಕರ ಮುಖವಾಡ ತೊಟ್ಟು ಸತ್ಯವನ್ನು ‌ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ನಡೆ ನುಡಿ ನೇರವಾಗಿದ್ದರೆ ಸುಳ್ಳನ್ನು ಗೆಲ್ಲುಬಹುದು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ‘ಅಲ್ಲಮಪ್ರಭು’

ಆದ್ದರಿಂದ ವ್ಯವಸ್ಥೆ ಯಾವುದೇ ಇರಲಿ, ಮಾಧ್ಯಮ ಯಾವುದೇ ಇರಲಿ, ಕಾನೂನು ಏನೇ ಹೇಳಲಿ, ಸುಳ್ಳು ಪ್ರಚೋದನೆ ಅನೈತಿಕತೆ ಖಂಡಿತ ಶಿಕ್ಷಾರ್ಹ ಅಪರಾಧ ಮತ್ತು ಅಮಾನವೀಯ ಹಾಗೂ ದೇಶದ್ರೋಹ. ಆದರೆ ಸತ್ಯಕ್ಕೆ, ಸಮಾಜ ಒಪ್ಪಿತ, ಕಾನೂನಿನ ವ್ಯಾಪ್ತಿಯ ನೈತಿಕತೆಗೆ ಯಾವುದೇ ತಡೆ ಇಲ್ಲ.

ಸಾಮಾನ್ಯ ಜ್ಞಾನ ಇಲ್ಲಿ ಮುಖ್ಯ

ಸಾಮಾಜಿಕ ಜಾಲತಾಣಗಳು ಸಾಮಾನ್ಯ ಜನರ ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ವೇದಿಕೆ. ಅದರ ಧ್ವನಿ ಅಡಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಕೆಟ್ಟದ್ದರ ನೆಪದಲ್ಲಿ ಒಳ್ಳೆಯದನ್ನು ನಾಶ ಮಾಡುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending