Connect with us

ಲೈಫ್ ಸ್ಟೈಲ್

ಮೂಕಜೀವಿಗಳ ಪಾಡು ಕೇಳೋರು ಯಾರು..?

Published

on

ಪ್ಲಾಸ್ಟಿಕ್ ಘನತ್ಯಾಜ್ಯ ಮತ್ತಿತರ ಅಪಾಯಕಾರಿ ತ್ಯಾಜ್ಯಗಳ ತಿಪ್ಪೆಯಲ್ಲಿರುವ ಈ ಮೂಕದನಗಳು ನಾನು ವಾಸವಿರುವ ಬೆಂಗಳೂರು ವಿವಿಯ ಜ್ಞಾನಭಾರತಿ ಪಕ್ಕದ ಜಗಜ್ಯೋತಿನಗರ ಬಡಾವಣೆ ಸೇರಿದಂತೆ ಮರಿಯಪ್ಪನಪಾಳ್ಯ – ಭುವನೇಶ್ವರಿ ನಗರ – ನಾಗದೇವನಹಳ್ಳಿ ಬಡಾವಣೆಗಳಲ್ಲಿ ಬೀಡಾಡಿಗಳಾಗಿವೆ. ಕೆಂಗೇರಿ ಔಟರ್ ರಿಂಗ್ ರೋಡಿನಲ್ಲಿ ಮತ್ತು ರೈಲ್ವೆ ಅಳಿಗಳಲ್ಲಿ ಅಪಘಾತಕ್ಕೀಡಾಗಿ ಅನೇಕ ದನಗಳು ಅಸುನೀಗಿವೆ. ರಸ್ತೆಗಳಲ್ಲಿ ಮತ್ತು ಪಾದಚಾರಿ ರಸ್ತೆಗಳಲ್ಲಿ ಅಡ್ಡ ನುಗ್ಗುವ ಇವು ಪ್ರಯಾಣಿಕರಿಗೆ ತೊಂದರೆದಾಯಕವಾಗಿ ಪರಿಣಮಿಸುತ್ತಲೂ ಇವೆ.

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆ ಎಂದರೂ ಐದಾರು ದನಗಳು ಅಪಘಾತಕ್ಕೀಡಾಗಿರುವುದನ್ನು ನಾನು ನೋಡಿದ್ದೇನೆ. ಕೆಲವು ಕಾಲು ಮುರಿದು, ಕೊಂಬು ಮುರಿದು, ಮೈಮೇಲೆ ಗಾಯಗಳಾಗಿ ನರಳಿ ಸತ್ತಿದ್ದರೆ ಮತ್ತೆ ಕೆಲವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸಿ ಸತ್ತುಹೋಗಿವೆ. ಈ ದನಗಳ ಮಾಲೀಕರು ಯಾರೆಂಬುದು ನನಗೆ ಈವರೆಗೆ ಯಾರಿಂದಲೂ ತಿಳಿದುಕೊಳ್ಳಲಾಗಿಲ್ಲ. ಯಾವುದೇ ದನಕ್ಕೆ ಹಗ್ಗ ಮೂಗದಾರ ಕೊರಳದಾರ ಮೊಕಾಡ ಇರುವುದಿಲ್ಲ.

ಇಂತಹ ದನಗಳಲ್ಲಿ ನಾನು ಗುರುತಿಸಿದ ಕೆಲವು ಹಸುಗಳು ಕರುಗಳು ಹೋರಿಗಳು ಒಂದೊಂದೇ ಕಾಣೆಯಾಗುತ್ತಿರುತ್ತವೆ. ಯಾವುದೋ ಜಾನುವಾರು ಚೋರರಿಂದ ಇವು ಕಳುವಾಗುತ್ತಿರಬಹುದು ಅನ್ನಿಸುತ್ತಿದೆ. ಈ ದನಗಳು ಮೇವು ನೀರಿಗಾಗಿ ಅಲೆದಾಡುವಾಗ ಕೆಲವೊಮ್ಮೆ ಅಂಗಡಿಗಳ ವಸ್ತುಗಳಿಗೆ ಬಾಯಾಕುತ್ತವೆ. ಮನೆಗಳ ಮುಂದಿರುವ ಮರಗಿಡಗಳಿಗೆ ಬಾಯಾಕುತ್ತವೆ. ಈ ಮೂಕದನಗಳ ಮೇಲೆ ಕರುಣೆ ಇಲ್ಲದ ಜನ ತುಂಡುಕೋಲು ಪ್ಲಾಸ್ಟಿಕ್ ಪೈಪು ಕಬ್ಬಿಣದ ಕಂಬಿ ಮುಂತಾದ ವಸ್ತುಗಳಿಂದ ನಿರ್ದಯವಾಗಿ ಬಾರಿಸಿ ಓಡಿಸುತ್ತಾರೆ. ಆಸಿಡ್ ಎರಚಿರುವ ಉದಾಹರಣೆಗಳೂ ಇವೆ.

ಈಗ ನಾನು ಹೇಳಹೊರಟಿರುವ ಸಂಗತಿ ಏನೆಂದರೆ, ಕಳೆದ ಮಳೆಗಾಲದಲ್ಲಿ ಈ ಭಾಗದಲ್ಲಿ ಸಮೃದ್ಧಿಯಾಗಿ ಮಳೆಬಾರದ ಕಾರಣದಿಂದ ಈಗ ಬೇಸಿಗೆಯ ರಣ ಬಿಸಿಲಿನ ತಾಪ ಮತ್ತು ನೀರಿನ ತತ್ವಾರ ಭಯಾನಕವಾಗಿದೆ. ವಾರಕ್ಕೆರಡು ಸಲವೋ ಅಥವಾ ಮೂರು ಸಲವೋ ನೀರು ಸರಬರಾಜು ಮಂಡಲಿಯವರು ವಿತರಿಸುವ ನೀರು ಗೃಹ ಬಳಕೆಗೂ ಸಾಲದಾಗಿ ಈ ಬಡಾವಣೆಗಳ ಜನರಿಗೆ ಕುಡಿಯುವ ನೀರಿಗೆ ಭೀಕರ ಸಮಸ್ಯೆ ಎದುರಾಗಿದೆ. ಮಾತು ಬಲ್ಲ ಮನುಷ್ಯರಾದ ನಮ್ಮ ಪರಿಸ್ಥಿತಿಯೇ ಹೀಗಿರುವಾಗ ಮೂಕಜೀವಿಗಳಾದ ಈ ಬೀಡಾಡಿ ದನಗಳು, ಬೀದಿ ನಾಯಿಗಳು, ಪಕ್ಷಿ ಸಂಕುಲ, ಅಳಿಲು ಹಾವು ಹಲ್ಲಿ ಹೋತಿ ಕೋತಿ ಕಪ್ಪೆ ಹುಳುಉಪ್ಪಟೆ ಮುಂತಾದ ಸಣ್ಣಪುಟ್ಟ ಜೀವಿಗಳ ಪಾಡೇನು? ಅವುಗಳಿಗೆ ಕುಡಿಯುವ ನೀರು ಮತ್ತು ಅಹಾರ ಎಲ್ಲಿ ದೊರೆಯುತ್ತದೆ? ಪ್ಲಾಸ್ಟಿಕ್ ತ್ಯಾಜ್ಯದ ತಿಪ್ಪೆಯನ್ನು ಆಹಾರಕ್ಕಾಗಿ ಆಶ್ರಯಿಸಿರುವ ಈ ಮೂಕಜೀವಿಗಳ ಪಾಡು ಘನಘೋರ ನರಕವಾಗಿ ಮಾರ್ಪಟ್ಟಿದೆ.

ವಿಸರ್ಜಿತ ಕೊಳೆತ ತರಕಾರಿ, ಕಸ, ಪ್ಲಾಸ್ಟಿಕ್, ಕೊಳಕು ಪೇಪರ್ ತಿಂದು ವಿಚಿತ್ರ ಕಾಯಿಲೆಗಳಿಗೆ ಗುರಿಯಾಗಿ ಬಳಲುವುದು ಒಂದು ಕಡೆಯಾದರೆ, ಈ ದನಗಳಿಗೆ ಕುಡಿಯಲು ನೀರು ಸಿಗದೆ ಮೂಕವಾಗಿ ಗೋಳಿಡುತ್ತಿರುವ ಕರುಣಾಜನಕ ಸ್ಥಿತಿ ಮತ್ತೊಂದು ಕಡೆಗೆ ಕಾಣಿಸುತ್ತಾ ಕರುಳು ಹಿಂಡಿದಂತಾಗುತ್ತಿದೆ. ಇಲ್ಲಿನ ನಿವಾಸಿಗಳು ಕಸ ವಿಲೇವಾರಿಯ ಗಾಡಿಯವರಿಗೆ ತಮ್ಮ ಮನೆಗಳ ತ್ಯಾಜ್ಯಗಳನ್ನು ನೀಡುತ್ತಿರುವುದರಿಂದ ಈ ಜೀವಿಗಳಿಗೆ ತ್ಯಾಜ್ಯಾಹಾರಗಳೂ ಸಿಗದಂತಾಗಿದೆ. ಇಂತಹ ಮೂಕಜೀವಿಗಳ ಬಗ್ಗೆ ದಯಾದರ್ಶ ಕಾರುಣ್ಯವುಳ್ಳ ಜನ ತಮ್ಮ ಮನೆಯ ಮತ್ತು ನೆರೆಹೊರೆಯ ಮನೆಗಳ ಉಳಿಕೆ ಆಹಾರ ತ್ಯಾಜ್ಯ ಮತ್ತು ನೀರನ್ನು ಒದಗಿಸಿದರೆ ಇಂತಹ ಗೊಟ್ಟು ಕಾಲದಲ್ಲಿ ಈ ಜೀವಿಗಳನ್ನು ಕಾಪಾಡಿದ ಸಾರ್ಥಕತೆಯಾದರೂ ಸಿಕ್ಕೀತು.

ನಾನು ಮತ್ತು ನನ್ನ ಕುಟುಂಬದವರು ತರಕಾರಿ ತ್ಯಾಜ್ಯ, ಹಣ್ಣುಗಳ ತ್ಯಾಜ್ಯ, ಉಳಿದ ಆಹಾರ ಮುಂತಾದ ಪದಾರ್ಥಗಳನ್ನು ಒಂದು ಡಬ್ಬದಲ್ಲಿ ಶೇಖರಿಸಿ ನಮ್ಮ ಮನೆ ಮುಂದಕ್ಕೆ ಬರುವ ಬೀಡಾಡಿ ದನಗಳಿಗೂ ಬೀದಿ ನಾಯಿಗಳಿಗೂ ಒದಗಿಸುತ್ತಿದ್ದೇವೆ. ನಾನು 1992 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಜ್ಞಾನಭಾರತಿಯ ವಿಶಾಲ ಕ್ಯಾಂಪಸ್ ದಟ್ಟವಾದ ಹಸಿರು ಮರಗಳಿಂದ ಕಂಗೊಳಿಸುತ್ತಿತ್ತು. ನಂತರದ ಕಾಲದಲ್ಲಿ Institute for Socio Economic Change ( ISEC ), National Law School of India University (NLSOIU), National Academic Accreditation Council (NAACK), ಇಂದಿರಾಗಾಂಧಿ ಕಲಾಗ್ರಾಮ, ರಾಷ್ಟ್ರೀಯ ನಾಟಕ ಶಾಲೆ- NSD (National School of Drama), ಕುವೆಂಪು ಭಾಷಾಭಿವೃದ್ಧಿ ಪ್ರಾಧಿಕಾರ ಇನ್ನೂ ಮುಂತಾದ ಇಲಾಖೆಗಳ ಕಛೇರಿಗಳು ಜ್ಞಾನಭಾರತಿಯ ಕ್ಯಾಂಪಸ್ಸಿನೊಳಕ್ಕೆ ಪ್ರವೇಶಿಸಿದವು. ಅಪಾರ ಕಾಡು ನಾಶವಾಗಿ ಕಛೇರಿಗಳ ಭವ್ಯ ಕಾಂಕ್ರೀಟು ಕಟ್ಟಡಗಳು ಎದ್ದು ನಿಂತವು, ಇದರ ಜೊತೆಗೆ ಭೂಗಳ್ಳರ ಒತ್ತುವರಿಯಿಂದ ಹಾಗೂ ಮರಗಳ್ಳರಿಂದ ಜ್ಞಾನಭಾರತಿಯ ಆವರಣದ ಅಪಾರ ಪ್ರಮಾಣದ ಕಾಡು ನಾಶವಾಗಿ ಹೋಯಿತು. ಅಮೂಲ್ಯ ಸಸ್ಯ ಪ್ರಭೇದಗಳು ನಾಶವಾಗಿಹೋದವು.

ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಇಲ್ಲಿನ ವೃಷಭಾವತಿ ನದಿಯ ನೀರು ಇವತ್ತಿನಂತೆ ತೀರಾ ಕೆಟ್ಟಿರಲಿಲ್ಲ. ಜ್ಞಾನಭಾರತಿ ಕಾಡಿನಲ್ಲಿದ್ದ ಅಳಿಲು ಆಮೆ ಗುಬ್ಬಿ ಗೊರವಂಕ ನರಿ ಹಾವು ಹಲ್ಲಿ ಹೋತಿ ಕೋತಿ ಮುಂತಾದ ಜೀವಿಗಳಲ್ಲದೆ ನೆರೆಯ ಹಳ್ಳಿಗಳ ರೈತಾಪಿಗಳ ದನಕರು ಕುರಿಮೇಕೆ ಮುಂತಾದ ಮೂಕಜೀವಿಗಳಿಗೆ ಇಲ್ಲಿ ನೀರಿನ ಒಡ್ಡುಗಳಿದ್ದವು, ಸಣ್ಣ ಸಣ್ಣ ಕಟ್ಟೆ ಕುಂಟೆಗಳಿದ್ದವು. ಆಗಿನ ಕಾಲದಲ್ಲಿ ಜ್ಞಾನಭಾರತಿಯ ಆವರಣದ ಕಾಡಿನಲ್ಲಿ ಕಾಣಿಸದಿದ್ದ ನವಿಲುಗಳ ಒಂದು ಗುಂಪು ಈಗ್ಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಬನ್ನೇರುಘಟ್ಟ ಕಾಡಿನಿಂದ ಬಂದು ವಂಶಾಭೀವೃದ್ದಿ ಮಾಡಿಕೊಂಡು ಮೂವತ್ತಕ್ಕೂ ಹೆಚ್ಚು ನವಿಲುಗಳು ಇಲ್ಲಿಯೇ ನೆಲೆಸಿವೆ. ನಾನು ಬಾಡಿಗೆ ಹಿಡಿದು ಕಳೆದ ಹನ್ನೊಂದು ವರ್ಷಗಳಿಂದ ವಾಸವಿರುವ #388, 1 ನೇ ಮುಖ್ಯರಸ್ತೆ, ಜಗಜ್ಯೋತಿನಗರ, ಜ್ಞಾನಭಾರತಿ, ಬೆಂಗಳೂರು ಇಲ್ಲಿನ ಮನೆಯ ಎದುರಿಗೇ ಜ್ಞಾನಭಾರತಿ ಕ್ಯಾಂಪಸ್ಸಿನ ಕಾಂಪೌಂಡ್ ಗೋಡೆಯಿದೆ. ಪ್ರತೀ ದಿನ ನಮ್ಮ ಮನೆಯ ಮುಂದಿರುವ ಕಾಂಪೌಂಡ್ ಗೆ ಹೊಂದಿಕೊಂಡ ಮರಗಳ ನಡುವೆ ಈ ನವಿಲುಗಳು ಕೂಗುತ್ತಾ ಗರಿಬಿಚ್ಚಿ ನರ್ತಿಸುವುದನ್ನು ನಾವು ನೋಡುತ್ತಿದ್ದೇವೆ. ಈ ನವಿಲುಗಳು ಮತ್ತು ಶ್ರೀಗಂಧದ ಮರಗಳು ಚೋರರ ಕೈಗೆ ಸಿಕ್ಕಿರುವುದು ಸುಳ್ಳಲ್ಲ. ಇವುಗಳ ರಕ್ಷಣೆಗೆ ಯಾರು ಹೊಣೆ?

ವೃಷಭಾವತಿ ನದಿಯು ಇಂದು ಕೊಳಚೆ ಚರಂಡಿಯಾಗಿ ರೂಪಾಂತರವಾಗಿದ್ದು ನದಿ ಎಂಬ ಹೆಸರು ಈಗ ಉಳಿದಿಲ್ಲ. ಹಿಂದೆ ಇದ್ದ ಕೆರೆ ನೀರಿನ ನಾಲೆ ಕಾಲುವೆಗಳೆಲ್ಲವೂ ಇಂದು ಕೊಳಚೆ ಮೋರಿಗಳಾಗಿ ನೀರು ವಿಷ ತ್ಯಾಜ್ಯದಿಂದ ತುಂಬಿಹೋಗಿದೆ, ಸುತ್ತಮುತ್ತ ಹತ್ತಿರದಲ್ಲಿರುವ ಕೆರೆಗಳಲ್ಲಿ ಇದೇ ವಿಷತ್ಯಾಜ್ಯದ ನೀರು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಇಲ್ಲಿನ ಯಾವ ನೀರೂ ಈ ಜೀವಿಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಕ್ರಿಕೆಟ್ ಗೆಲುವು, ಗಣಪತಿ ಉತ್ಸವ, ದೀಪಾವಳಿ, ಹುಟ್ಟಿದ ಹಬ್ಬ, ರಾಜ್ಯೋತ್ಸವ, ರಂಜಾನ್, ಕ್ರಿಸ್ಮಸ್ ಮುಂತಾದ ಆಚರಣೆಗಳನ್ನು ಆಚರಿಸಲು ವಿಷಕಾರಕ ರಾಸಾಯನಿಕಗಳ ಪಟಾಕಿಗಳನ್ನು ಸುಡುವ ಹುಚ್ಚರು, ಗಾಳಿ ನೀರು ಮಣ್ಣು ಮೌನ ಎಲ್ಲವನ್ನೂ ಮಲಿನಗೊಳಿಸುವ ಕೇಡುಗಳಿಗೆ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ. ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿಗೆ ಇಲ್ಲಿನ ನದಿ ಮತ್ತು ನಾಲೆಗಳೇ ಆಸರೆಯಾಗಿವೆ. ಇಷ್ಟರ ನಡುವೆಯೂ ಶ್ರೀಮಂತರ ಮಹಲುಗಳಲ್ಲಿ ಅನಗತ್ಯವಾಗಿ ನೀರು ಪೋಲಾಗಿ ಚರಂಡಿಗೆ ಹರಿದುಹೋಗುತ್ತಿದೆ. ಅನಗತ್ಯವಾಗಿ ನೂರಾರು ವಿದ್ಯುತ್ ದೀಪಗಳು ಅಲಂಕಾರಿಕ ದೀಪಗಳು ಉರಿಯುತ್ತಿರುತ್ತವೆ. ಹೋಸ್ ಪೈಪುಗಳನ್ನು ಹಿಡಿದು ಮನೆ ಮುಂದಿನ ಉದ್ಯಾನಕ್ಕೆ, ಅಲಂಕಾರಿಕ ಸಸ್ಯಗಳಿಗೆ ನೀರಾಯಿಸುವ, ಕಾರುಗಳನ್ನು ತೊಳೆಯಲು, ಮನೆ ಆವರಣ ತೊಳೆಯಲು ಅಪಾರ ಪ್ರಮಾಣದ ನೀರನ್ನು ಬಳಸಿ ಚರಂಡಿಗೆ ಹರಿದುಹೋಗುತ್ತಿರುವುದನ್ನು ನೋಡಿದರೆ ಅಂಥವರ ಸಿರಿವಂತಿಕೆ ಅಸಹ್ಯ ಹುಟ್ಟಿಸುತ್ತಿದೆ. ಮೂಕಜೀವಿಗಳಿಗೆ ನೀರು ಆಹಾರ ಒದಗಿಸದ ಈ ಶ್ರೀಮಂತ ಪಾಪಿಗಳು ಹೇಗಾದರೂ ನೆಮ್ಮದಿಯಾಗಿ ಉಸಿರಾಡುತ್ತಿದ್ದಾರೋ ನನಗೆ ತಿಳಿಯುತ್ತಿಲ್ಲ.

ಕರುಣಾಳು ಗೆಳೆಯರೇ ನಿಮ್ಮಲ್ಲಿ ನನ್ನ ಪ್ರಾರ್ಥನೆ ಏನೆಂದರೆ, ನಾವು ನಮ್ಮ ಸಹಮಾನವರೊಂದಿಗೆ ಸೌಹಾರ್ದ ಸಾಮರಸ್ಯಗಳಿಂದ ಬದುಕುತ್ತಿರುವಂತೆಯೇ ನಮ್ಮ ಸಹಜೀವಿಗಳಿಗೆ ನೀರು ಆಹಾರ ಒದಗಿಸುವುದರೊಂದಿಗೆ ಸಾಮರಸ್ಯದಿಂದ ಸಹಬಾಳ್ವೆ ನಡೆಸೋಣ.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending