ದಿನದ ಸುದ್ದಿ
ಹೆಣ್ಣಿಲ್ಲದೆ ಜಗ ಬದುಕುವುದುಂಟೆ..?
- ವಿನಯಕುಮಾರ್ ಎಚ್ ಸಿ, ಕನ್ನಡ ಉಪನ್ಯಾಸಕ,ಎಸ್ ಪಿ ಎಸ್ ಎಸ್ ಸೈನ್ಸ್ ಪಿಯು ಕಾಲೇಜು,ದಾವಣಗೆರೆ
ಆತ್ಮೀಯರೆ ನಮಸ್ತೆ. ಹಾಗೆ ಅಂತರಾಷ್ರ್ಟೀಯ ಮಹಿಳಾದಿನದ ಶುಭಕಾಮನೆ. ಗೌರವಾನ್ವಿತರೆ ನಾವು ನೀವೆಲ್ಲಾ ಈ ಭೂಮಿ ಇರೋದಕ್ಕೆ ಜೀವಂತವಾಗಿ ಖುಷಿಯಾಗಿ ಆನಂದವಾಗಿ ಬಾಳ್ವೆ ಮಾಡ್ತಿರೋದು. ಭೂಮಿ ಇಲ್ಲದೆ ಜೀವಸಂಕುಲಗಳ ಇರುವಿಕೆಯ ಊಹಿಸಲು ಸಾಧ್ಯವೆ ಯೋಚಿಸಿ.ಅದರ ಉದರದಲ್ಲೇ ಜಗದ ಎಲ್ಲಾ ದೇವರು ಅವರ ವಾಸಸ್ಥಾನ ಇರೋದು.ಅದಲ್ಲದೆ ಮತ್ತೆಲ್ಲೂ ಇಲ್ಲ.
ಎಲ್ಲಾ ಧರ್ಮದ ದೇವರುಗಳು ನೆಲೆಯಾಗಿರೋದು ಈ ಭೂಮಿ ಮೇಲೆ ಅಲ್ವೇ?ಆದರೆ ಅಜ್ಞಾನದ ಅಂಧತ್ವ ಮನುಜರಲ್ಲಿ ತುಂಬಿ ತುಳುಕುತ್ತಿರುವುದರಿಂದ ಶೀತಲ ಸಮರ ಶುರುವಾಗಿ ಇಂದು ಬೀದಿಗೆ ಬಂದು ಬಿದ್ದಿದೆ.ವಿವೇಕಿಗಳು ಪ್ರಜ್ಞಾವಂತರು ಯೋಗಿಗಳು ಮೌನವಾಗಿಯೇ ಭೂಮಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದಾರೆ.ಅವರು ಅಂದಿನಿಂದ ಇಂದಿನವರೆಗು ಶ್ರೇಷ್ಟರೆನಿಸಿಕೊಂಡೇ ಇದ್ದಾರೆ.
ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರೆ 8/3/22 “ಅಂತರಾಷ್ರ್ಟೀಯ ಮಹಿಳಾದಿನ” ಆದ ಕಾರಣ ಮನುಷ್ಯನಿಗೆ ಅಷ್ಟೇ ಅಲ್ಲದೆ ಜಗದ ಜೀವಗಳಿಗೆ ಭೂಮಿಯೇ ಆಧಾರ.ಈ ಭೂಮಿಯನ್ನು ನಮ್ಮ ಪೂರ್ವಜರು ಅದರಲ್ಲೂ ಬುದ್ಧಿವಂತರು ಮನುಷ್ಯತ್ವ ಉಳ್ಳವರು ಮಾತ್ರ ಹೆಣ್ಣು ದೇವತೆ ಅಂತ ನೋಡ್ತಿದ್ದಾರೆ.ಆದರೆ ಹಲವು ಅವಿವೇಕಿಗಳು ಅದ್ಯಾರೊ ಮನು ಎಂಬುವವನು ಬರೆದ ಬರಹವೇ ಅತೀ ಶ್ರೇಷ್ಟ ಎಂಬಂತೆ ಅದರಂತೆ ಅವಿವೇಕಿಗಳಾಗಿ ಜೀವಿಸುತ್ತಿದ್ದಾರೆ.ಹೆಣ್ಣನ್ನ ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ.
ಆ ರೀತಿ ನಡೆಸಿಕೊಳ್ಳುವವರ ಬದುಕು ಅಕ್ಷರ ಸಹ ಪಾತಾಳ ಹಿಡಿದಿದೆ.ಇದರೆ ಅದನ್ನ ಹೊರಗೆ ಹೇಳುತ್ತಿಲ್ಲ.ಯಾಕೆಂದರೆ ಗಂಡೆಂಬ ದರ್ಪ.ಈ ಮೂರ್ಖ ಮಂದಿಗಳು ಈಶ್ವರನನ್ನ ಬಹಳ ಭಕ್ತಿಯಿಂದ ಪೂಜಿಸುತ್ತಾರೆ ಅನ್ನೋಣ. ಆದರೆ ಆತ ಅರ್ಧನಾರೀಶ್ವರ ಆಗಿರೋದು ತಿಳಿಯದಷ್ಟು ಅಧಮರಾಗಿದ್ದಾರೆ ಅಲ್ಲವೆ? ಹೆಣ್ಣೆಂದರೆ ಏನು ಅವಳ ಶಕ್ತಿ ಏನು ಯೋಗ್ಯತೆ ಏನು ಹೇಗೆ ಗೌರವಿಸಬೇಕು ಎಂಬುದನ್ನು ಇಡೀ ಜಗತ್ತನ್ನೇ ಕಾಯುತ್ತಿರುವ ಈಶ್ವರನನ್ನು ನೋಡಿದರೆ ತಿಳಿಯುತ್ತೆ.ಇವರು ಕೇವಲ ತೋರಿಕೆಯ ಜನ.
ನಿಜವಾದ ಭಕ್ತರಂತೆ ನಟಿಸುತ್ತಿದ್ದಾರೆ.ಅಂಥವರೆ ಮನೆಯಲ್ಲಿ ಹೆಣ್ಣನ್ನ ಬಹಳ ಶೋಷಣೆ ಮಾಡ್ತಿರೋದು.ಆ ಅಜ್ಞಾನಿಗಳಿಗೆ ಮದುವೆ ಆಗುವಾಗ ಮಾತ್ರ ಹೆಣ್ಣೇ ಬೇಕು.ಆದರೆ ಅವರಿಗೆ ಹುಟ್ಟುವ ಮಗು ಮಾತ್ರ ಗಂಡೇ ಆಗಿರ್ಬೇಕು.ಇವರ ಅಮ್ಮನು ಗಂಡೇ ಆಗಿದ್ರೆ ಇವನು ಎಲ್ಲಿ ಬರ್ತಿದ್ದ? ಪೈಶಾಚಿಕ ಮನಸ್ಸುಳ್ಳವರಿಗೆ ಹೆಣ್ಣಿನ ಮಹಿಮೆ ಒಂದೇ ಒಂದು ಭಾಗವು ತಿಳಿದಿಲ್ಲ.ಇಡೀ ಜಗತ್ತು ಇಂದು ಜೀವಂತವಾಗಿರಲು ಒಂದು ಹೆಣ್ಣೇ ಹೊರತು ಗಂಡಲ್ಲ.ಈ ಭೂಮಿ ಜಗತ್ತಿನ ಸಕಲ ಜೀವ ರಾಶಿಗಳಿಗೆ ಹೆಣ್ಣಾಗಿ ಪ್ರೀತಿಯಿಂದ ಆಶ್ರಯ ಕೊಟ್ಟು ಸಲಹುತ್ತಿರೋದು.
ಇಷ್ಟೆಲ್ಲಾ ಹಾರಾಡುತ್ತಿರುವ ಗಂಡು ಎರಡೇ ಎರಡು ದಿನ ಮನೆ ಮಕ್ಕಳ ನೋಡ್ಕೊಂಡು ನಿಭಾಯಿಸಲಿ ಗೊತ್ತಾಗುತ್ತೆ.ಹೆಣ್ಣಿನ ಮಹತ್ವ ಏನು ಹೆಣ್ಣಿಲ್ಲದ ಮನೆ ಹೇಗಿರುತ್ತೆ ಎನ್ನುವುದು ತಿಳಿಯುತ್ತೆ.ಒಂದು ಸಣ್ಣ ಉದಾಹರಣೆ ಎಂದರೆ ಒಂದು ಕುಟುಂಬ.ಅದರಲ್ಲಿ ಆ ದಂಪತಿಗಳಿಗೆ ಮೂರು ಅಥವಾ ಐದು ಗಂಡು ಒಂದೇ ಒಂದು ಹೆಣ್ಣುಮಗಳು.ಅವಳ ಮದುವೆ ಮಾಡಿ ಗಂಡನ ಮನೆಗೆ ಕಳಿಸಿರ್ತಾರೆ. ಗಂಡು ಮಕ್ಕಳೆಲ್ಲರೂ.ಯಾವುದೊ ಒಂದು ಸಣ್ಣ ಮಾತಿಗೆ ಈ ನಾಲ್ವರು ಅಣ್ಣ ತಮ್ಮರು ಮಾತು ಬಿಟ್ಟಿರ್ತರೆ.
ಹೀಗಿರುವಾಗ ಒಮ್ಮೆ ಈ ಅವರ ತಾಯಿಗೆ ಖಾಯಿಲೆ ಬಂದಿರುತ್ತೆ .ಆಗ ಮಕ್ಕಳು ಅವರ ತಾಯಿಗೆ ಆಸ್ಪತ್ರೆಗೆ ಕರೆದ್ಹೋಗಿ ಬರ್ತರೆ.ವೈದ್ಯರು ಹೇಳಿದಂತೆ ಹೊತ್ತು ಹೊತ್ತಿಗೆ ಗಂಜಿ ಹಾಲು ಅನ್ನ ತಿಳಿಸಾರು ಕೊಡ್ಬೇಕು ಅಂತ ತಿಳಿಸಿರ್ತಾರೆ.ಆಸ್ಪತ್ರೆಯಿಂದ ಮನೆಗೆ ಬರ್ತಾರೆ.ಅನ್ನ ಮಾಡಿ ತಿಳಿ ಸಾಂಬಾರ್ ಮಾಡ್ಬೇಕು ಅನ್ನುವಾಗ ಇವರಿಗೆ ಅಡುಗೆ ಕೆಲಸವೇ ಗೊತ್ತಿಲ್ಲ.ಮತ್ತೆ ತಂದೆ ವಯಸ್ಸಾದವರು. ಮನೆಯಲ್ಲಿ ಬೇರೆ ಹೆಣ್ಣಿಲ್ಲ.ಜೊತೆಗೆ ಹಿರಿಯವಳೆ ಹೆಣ್ಣು ಮಗಳು.ಎಲ್ಲರೂ ವಿದ್ಯಾವಂತರೆ.ಇನ್ನೂ ಮದುವೆ ಆಗಿರ್ಲಿಲ್ಲ.ಆದರೆ ಅಡುಗೆ ವಿದ್ಯೆ ಕಲಿತ್ತಿಲ್ಲ.ಅವರ ತಾಯಿಯೇ ಅಡುಗೆ ಮಾಡಿ ಬಡಿಸುತ್ತಿದ್ದದ್ದು.
ಅಡುಗೆ ಹೇಗ್ಮಾಡ್ತರೆ ಹೇಳಿ?ಅಕ್ಕ ನಿಗೆ ಕರೆಯಲು ಮಾತು ಬಿಟ್ಟಿದ್ದಾರೆ.ಹೇಗೆ ಕರಿತಾರೆ ಹೇಳಿ?ಅಕ್ಕ ಪಕ್ಕದವರು ಎಷ್ಟು ದಿನ ಇವರಿಗೆ ಸಹಾಯ ಮಾಡ್ತರೆ?ಅವರು ಹೇಳಿದ್ರು “ಮೊಗ ನಮಗು ನೂರಾರು ಕೆಲ್ಸ ಇವೆ ನಿಮ್ಮ ಅಕ್ಕನ ಕರಿಸ್ಕಳ್ಳಿ”ಅಂತೇಳಿ ಬರದಾದರು.ಇವರಿಗೆ ಮದುವೆ ಆಗಿ ಆಗಿ ಅಂತೇಳಿ ಅವರ ತಾಯಿ ಸಾಕಾಗಿದ್ದಳು.ಅವರೆಲ್ಲ ಹೆಣ್ಣಿನ ವಿರೋಧಿಯಾಗಿದ್ದರು.
ಯಾರೂ ಅನ್ನ ಮಾಡಲು ಬಾರದಿದ್ದಾಗ ಪಾಪ ಇವರ ತಾಯಾಯೆ ತೂರಾಡಿಕೊಂಡು ಅಡುಗೆ ಮಾಡಲು ಹೋಗುವಾಗ ಮಕ್ಕಳಿಗೆ ಹೇಳಿದಳು.”ಹೇ ಮಕ್ಳ ನಿಮಗೆ ಕಾಯಿಲೆ ಕಸಾಲೆ ಬಂದಾಗ ನಾನು ಓಡಾಡಿ ನಿಮಗಾಗಿ ನಿಮ್ಮನ್ನು ನನ್ನ ಕಂಕಳಲ್ಲಿ ಎತ್ಕೊಂಡು ಆಸ್ಪತ್ರೆಗೆ ಓಡಾಡಿ ಟೈಂ ಟೈಂಗೆ ಸರಿಯಾಗಿ ಊಟ ತಿಂಡಿ ಮಾಡಿ ಜೋಪಾನ ಮಾಡಿದೆ.ಯಾವುದೊ ಸಣ್ಣ ಮಾತಿಗೆ ನನ್ನ ಮಗಳ ಮನೆಗೆ ಬರುಕ್ಕಿಲ್ಲದಂಗೆ ಮಾಡಿದ್ರಿ.
ಈಗ ನನಗೆ ಒಂದು ತುತ್ತು ಅನ್ನ ಬೇಯಿಸಿಕೊಡೋಕೆ ಆಗದೆ ನಿಂತಿದ್ದೀರಲ್ಲ.ನಿಮ್ಮಂತವರು ನೂರು ಜನ ಇದ್ರು ಏನ್ಬಂತ್ರೋ ಭಾಗ್ಯ?ಹೆಣ್ಣನ್ನ ಆಗಿನಿಂದಲೂ ಕೀಳಾಗೆ ನೋಡ್ತಾ ಬಂದ್ರಿ.ಈಗ ನಿಮಗೆ ಯಾರೂ ಹೆಣ್ಣು ಕೊಡ್ತಿಲ್ಲ.ಈಗ ನನಗೆ ಮಕ್ಳಿದ್ದೂ ಇಲ್ಲದಂತಾಗಿದೆ.ಮೊದಲು ಹೆಣ್ಣು ಅಂದ್ರೆ ಏನು ಅಂತ ಮೊದಲು ತಿಳಿರಿ.ನಿಮ್ಮ ಓದಿಗೆ ಬೆಂಕಿ ಹಾಕ್ತು.ಅದ ತಿಪ್ಪೆಗೆ ಬಿಸಾಕಿ.ಹೆತ್ತೋರಿಗೆ ಅನ್ನ ಕೊಡದ ನೀವು ಯಾವ ಹೆಣ್ಣನ್ನ ಪ್ರೀತಿಯಿಂದ ನೋಡ್ಕೊತಿರಿ?ಏನೇ ಆಗಲಿ ಒಂದು ಮನೆಗೆ ಗಂಡಿನ ಸುಳಿ ಇಲ್ಲದೇ ಇದ್ರು ಪರ್ವಾಗಿಲ್ಲ ಹೆಣ್ಣಿರ್ಬೇಕು.
ಅವಳಿಗೆ ಮಾತ್ರ ಗೊತ್ತು ಹೆಣ್ಣಿನ ನೋವು.ನನ್ನ ಕಣ್ಮುಂದೆ ನೀವ್ಯಾರು ಇರ್ಬೇಡಿ ಹೋಗಿ ಎಂದು ಸ್ವಲ್ಪ ಸಿಟ್ಟಾದಳು.ನಂತರ ಓಡೋಗಿ ತಮ್ಮ ಅಕ್ಕನ ಕಾಲ್ಹಿಡಿದು ಕ್ಷಮೆ ಕೇಳಿ ತೌರಿಗೆ ಕರೆ ತಂದು ತಾಯಿಯ ಸೇವೆ ಮಾಡಿಸಿ ಪ್ರೀತಿಯಿಂದ ಬೀಳ್ಕೊಟ್ಟರು.ನೋಡಿ ಹೆಣ್ಣಿಲ್ಲದ ಮನೆ ಅಂದ್ರೆ ದೇವರಿಲ್ಲದ ಗುಡಿಯೆ ಸರಿ.ಆಕೆ ಕೇವಲ ಭೋಗದ ವಸ್ತುವಾಗಲಿ ಮಕ್ಕಳ ಹಡೆವ ಯಂತ್ರವಾಗಲಿ ಅಲ್ಲ.ಅಷ್ಟೇ ಅಲ್ಲ ಅವಳು ಎಂದಿಗೂ ಗಂಡಿನ ಗುಲಾಮಳಲ್ಲ.ಅವಳು ಬದುಕಿನ ಹಾದಿ ಮನೆಯ ಬೆಳಕು ಮತ್ತೊಂದು ಜೀವಕ್ಕೆ ಜೀವ ಕೊಡೊ ಜೀವದಾತೆ.ಹೆತ್ತ ತಾಯಿಯ ನಂತರದ ಎರಡನೇ ತಾಯಿˌ ಗುರುˌ ಗೆಳತಿˌ ಪ್ರೇಮಮಯಿ ಸಕಲವೂ ಕೂಡ.
ಇಂದು ವಿದ್ಯಾವಂತರು ಹೆಚ್ಚು ಓದಿರೋರು ಹೆಣ್ಣು ಮಕ್ಕಳೆ.ಹಾಗೆ ಉನ್ನತ ಉದ್ಯೋಗದಲ್ಲಿರೋರು ಹೆಣ್ಣುಗಳೆ.ದೇಶದ ಯಾವುದೇ ನದಿಗಳ ಹೆಸರು ಕೇಳಿ ನೋಡಿ.ಅವುಗಳಿಗೆಲ್ಲಾ ಹೆಣ್ಣಿನ ಹೆಸರನ್ನೇ ಇಟ್ಟಿರೋದು.ಇಂದಿನ ಹಲವು ಮಾನವ ರೂಪದ ಮನುಷ್ಯರು ಹೆಣ್ಣನ್ನು ಬಹಳ ನಿಕೃಷ್ಟವಾಗಿ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಹಾಗೆ ಹಲವಾರು ರೋಗಗಳಿಂದ ನರಳುತ್ತಿದ್ದಾರೆ.ಹೆಣ್ಣಿಲ್ಲದ ಬದುಕು ಮರುಭೂಮಿಯಿದ್ದಂತೆ. ಹೆಣ್ಣನ್ನ ದೈವ ಸ್ವರೂಪಿಯಾಗಿ ಕಂಡು ದೇವರ ಗುಡಿಯಲ್ಲಿ ಕೂರಿಸಿ ದೇವಿ ˌತಾಯಿˌ ಮಾತೆ ಅಂತ ಪೂಜಿಸಿದ ಶ್ರೇಷ್ಟರೆಂದರೆ ಶ್ರೀರಾಮಕೃಷ್ಣ ಪರಮಹಂಸರು ಮಾತ್ರ.
ಅದಕ್ಕಾಗೆ ಅವರು ಅಂದಿನಿಂದ ಇಂದಿಗು ಮುಂದೆಂದೂ ಅತೀ ಶ್ರೇಷ್ಟದಂಪತಿಯಾಗಿದ್ರೂ ಸಂತರಾಗೆ ಉಳಿದು ದೈವ ಸಂಭೂತರಾದರು. ಗಂಡಸರೇ ಇಂದು ಯಾರು ಹೆಚ್ಚಲ್ಲ ಕಡಿಮೆ ಇಲ್ಲ.ಸರ್ವರೂ ಸಮಾನರೆ.ಮೊದಲು ನಿಮ್ಮ ಮನದಲ್ಲಿರುವ ಹೆಣ್ಣು ಅನ್ನೋ ಕೀಳಾದ ಕೊಳೆ ತೊಳೆದು ನೋಡಿ.
ಅಲ್ಲೇ ಹೆಣ್ಣು ದೇವತೆಯಾಗಿ ಕಾಣ್ತಳೆ ಅಲ್ವೇ? ನೋಡಿ ನೀವು ಹೆಣ್ಣನ್ನ ಕೀಳಾಗಿ ನೋಡುವವರು ಹೆಣ್ಣು ದೇವತೆಗಳಾದ ಪಾರ್ವತಿ ಸರಸ್ವತಿ ಆದಿಶಕ್ತಿ ಮಾರಿ ಚಾಮುಂಡಿ ಉಚ್ಚಮ್ಮ ಬೋರಮ್ಮ ಕಾಳಮ್ಮ ಚೌಡೇಶ್ಪರಿ ಹೀಗೆ ಹಲವಾರು ಹೆಸರಿನಿಂದ ಪೂಜಿಸಲ್ಪಡುವ ದೇವತೆಗಳನ್ಯಾಕೆ ಪೂಜಿಸುತ್ತೀರಿ ಹೇಳಿ?ಆದಿಶಕ್ತಿಗೆ ತ್ರಿಮೂರ್ತಿಗಳೆ ವಂದಿಸಿದ್ದಾರೆ ಅಂದಮೇಲೆ ಕೇವಲ ಮಾನವರಾದ ನಾವು ಹೆಣ್ಣನ್ನ ಪೂಜ್ಯ ಭಾವನೆ ಬೇಡ ಪ್ರೀತಿ ಸ್ನೇಹದಿಂದ ನೋಡಿಕೊಳ್ಳಲು ಏನು ರೋಗ ಹೇಳಿ? ಮೊದಲು ನಿಮ್ಮ ಒಳ ಮನಸ್ಸನ್ನ ಕೇಳಿ.
ನೀವು ಹೇಗಿದ್ದೀರಿ ಹೇಗೆ ನಡ್ಕೊತಾ ಇದ್ದೀರಿ.ಒಳಮನಸ್ಸೇನು? ಹೊರ ಮನಸ್ಸೇನು ಎಂಬುದನ್ನ.ಆಗ ನಿಮಗೆ ಸತ್ಯದ ಅರಿವಾಗುತ್ತದೆ.ಇಲ್ಲದಿರೆ ಜೀವನ ಬರಡಾಗಿ ಎಲ್ಲಾ ಇದ್ದೂ ಏನು ಇಲ್ಲದಂತಾಗುತ್ತದೆ.ಹೆಣ್ಣೇ ಪ್ರೀತಿ ಹೆಣ್ಣೇ ಜಗತ್ತು.ಹಾಗಾಗಿ ಹೆಣ್ಣನ್ನು ಯಾರೂ ಎಂದಿಗೂ ಕೀಳಾಗಿ ನೋಡಬೇಡಿ ಎಂದು ಹೇಳುತ್ತಾ ಅವರ ಸುದಿನದ ಸುಸಂದರ್ಭದಲ್ಲಿ ಅವರಿಗೆ ಮತ್ತೊಮ್ಮೆ ಶುಭ ಕೋರುತ್ತೇನೆ.ಮನ ಅರಳಲಿ ಮನದ ಮಲೀನ ಅಳಿಯಲಿ.ಎಲ್ಲರಿಗು ಶುಭವಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243