Connect with us

ಅಂತರಂಗ

ಅರಿಮೆಯ ಅರಿವಿರಲಿ – 28 : ವಿಲಕ್ಷಣ ಸಮಾಜ

Published

on

  • ಯೋಗೇಶ್ ಮಾಸ್ಟರ್

ಯಾವ ನಮ್ಮ ಸಂಘಜೀವನದ ಬಹುದೊಡ್ಡ ಶಕ್ತಿಯೆಂದು ಬಹಳ ಕೊಂಡಾಡುತ್ತೇವೆಯೋ ಆ ಸಮಾಜವು ಬಹಳ ವಿಲಕ್ಷಣವಾಗಿದೆ. ಅರಿಮೆಗಳೇ ಆಗಲಿ ಅಥವಾ ಇತರ ಮಾನಸಿಕ ಸಮಸ್ಯೆಗಳೇ ಆಗಲಿ ಅದರದೇ ಬಹುದೊಡ್ಡ ಕಾಣಿಕೆ. ಅದರ ದೃಷ್ಟಿಯ ಮಾನದಂಡದ ಆಧಾರದ ಮೇಲೆಯೇ ಒಬ್ಬನ ವರ್ತನೆ ಮತ್ತು ಆಲೋಚನೆಗಳು ಸರಿಯಿದೆಯೇ ಇಲ್ಲವೇ, ವಿಲಕ್ಷಣವೇ, ಸುಲಕ್ಷಣವೇ, ಅವಲಕ್ಷಣವೇ ಎಂದು ನಿರ್ಧರಿಸುವುದು. ಅದರಲ್ಲೂ ಅಪರಾಧದ ಅರಿಮೆಯನ್ನು, ಕೀಳರಿಮೆ, ಮೇಲರಿಮೆಯೇ ಮೊದಲಾದ ಸಮಸ್ಯೆಗಳನ್ನು ಅರಿಯುವಲ್ಲಿ ಸಮಾಜದ ವಿಲಕ್ಷಣತೆಯನ್ನು ಅರಿಯಲೇ ಬೇಕು.

ಪ್ರಾಮಾಣಿಕತೆ ಮೌಲ್ಯವೇ?

ಪ್ರಾಮಾಣಿಕತೆ ಬಹುದೊಡ್ಡ ಮೌಲ್ಯ ಎಂದು ನೈತಿಕತೆಯ ಹಲವು ಗುಣಗಳಲ್ಲಿ ಮಹತ್ತರ ಸ್ಥಾನ ಕೊಡುತ್ತೇವೆ. ಆನೆಸ್ಟಿ ಈಸ್ ಬೆಸ್ಟ್ ಪಾಲಿಸಿ ಎನ್ನುತ್ತೇವೆ. ಸರಿ, ಪ್ರಾಮಾಣಿಕತೆ ಎಂದರೇನು? ನಂಬಿಕೆಗೆ ಅರ್ಹವಾಗಿರುವಂತಹ ಗುಣ, ಸತ್ಯಕ್ಕೆ ನಿಷ್ಠವಾಗಿರುವ ಸ್ವಭಾವ, ವಾಸ್ತವದ ಸತ್ಯವನ್ನು ಬದ್ಧತೆಯಿಂದ ಒಪ್ಪಿದ್ದು ಅದನ್ನು ಹುಸಿಯಿಂದ ಮುಚ್ಚದೇ, ವಸ್ತುವಿಗೆ ನಿಷ್ಟವಾಗಿದ್ದು, ಮತ್ತೇನನ್ನೋ ತೋರಿಕೆಯಲ್ಲಿ ಪ್ರದರ್ಶಿಸದೇ ಇರುವುದು ಪ್ರಾಮಾಣಿಕತೆ ಎಂದು ಅರ್ಥೈಸಬಹುದು. ಇನ್ನೂ ಸ್ವಲ್ಪ ಬಿಡಿಸೋಣ, ವಸ್ತುನಿಷ್ಟವಾಗಿದ್ದು ಅಂತರಂಗದಲ್ಲಿ ಏನಿದೆಯೋ ಅದನ್ನೇ ಬಹಿರಂಗದಲ್ಲೂ ನಿಷ್ಟೆಯಿಂದ ಪ್ರಕಟಿಸುವುದು.

ಪ್ರಾಮಾಣಿಕತೆ ಎಂದರೆ ನಮ್ಮ ಸಮಾಜಉದಾಹರಣೆಗಳನ್ನು ಕೊಡಲು ಬಹಳ ಇಷ್ಟಪಡುವ ಸಂಗತಿಗಳ ಬಗೆಗಳೆಂದರೆ,ಆಟೋಚಾಲಕರೊಬ್ಬರು ತಮ್ಮ ಗಾಡಿಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಲಕ್ಷಾಂತರ ರೂಪಾಯಿಗಳನ್ನು ಅಥವಾ ಅಷ್ಟು ಮೌಲ್ಯದ ಚಿನ್ನಾಭರಣಗಳನ್ನು ಪೋಲಿಸ್ ಸ್ಟೇಷನ್‍ಗೆ ಒಪ್ಪಿಸುವುದು. ಹೌದು, ಇದು ನಿಜಕ್ಕೂ ಪ್ರಾಮಾಣಿಕತೆಯೇ. ತನ್ನದಲ್ಲದ ವಸ್ತುವನ್ನು ತಾನು ಸುಖಿಸುವ ಬದಲು, ಅದನ್ನು ಕಳೆದುಕೊಂಡವರ ನೋವು ಮತ್ತು ಸಂಕಟಗಳನ್ನು ಊಹಿಸಿಕೊಂಡು, ಪಾಪ ಎಂದು ಅವರಿಗೆ ಕನಿಕರಿಸಿ, ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡು, ಪ್ರಲೋಭನೆಗಳೊಂದಿಗೆ ಹೋರಾಡಿ ಗೆದ್ದು ಬದುಕಿನ ಲೌಕಿಕ ಸುಖಕ್ಕೆ ಬೇಕಾದ ಹಣವನ್ನು ನಿರಾಕರಿಸುವುದು ಸಂನ್ಯಾಸಿಗಳು ಅನಿವಾರ್ಯವಾಗಿ ಮಾಡುವ ಸರ್ವಸಂಗ ಪರಿತ್ಯಾಗಕ್ಕಿಂತ ದೊಡ್ಡದೇ. ನಮಗೆಲ್ಲಾ ಈ ಪ್ರಾಮಾಣಿಕತೆ ಬಹಳ ಪ್ರೀತಿಯಾಗುತ್ತದೆ.ಸರಿ, ಮತ್ತೊಂದು ಬಗೆಯ ಪ್ರಾಮಾಣಿಕತೆಯನ್ನು ನೋಡೋಣ.

ಯಾರದೋ ಮನೆಗೆ ಹೋಗಿದ್ದೇವೆ. ಬಹಳ ದಿನಗಳ ನಂತರದ ಭೇಟಿ. ದೂರ ಪ್ರಯಾಣ ಮಾಡಿದ್ದೇವೆ. ಅವರು ನಮ್ಮನ್ನು ನೋಡಿದ ತಕ್ಷಣ ತುಂಬಾ ಉಲ್ಲಾಸ ಮತ್ತು ಉತ್ಸಾಹದಿಂದ ಮಾತಾಡುತ್ತಾ ನಮಗೆ ಹಸಿವಾಗಿರಬಹುದೆಂಬ ಆಲೋಚನೆಯೂ ಕೂಡಾ ಮಾಡದೇ, “ಬಹುಕಾಲ ನಂತರದ ನಮ್ಮಿಬ್ಬರ ಈ ಭೇಟಿ ಹೇಗನಿಸುತ್ತಿದೆ” ಎಂದು ಉತ್ಸುಕರಾಗಿ ಕೇಳುತ್ತಾರೆ. ನಾವು “ನೀವೀಗ ನಮ್ಮ ಹಸಿವಿಗೆ ಉಣಬಡಿಸಿದರೆ ಬಹಳ ಸುಖಕರವೂ, ಸಂತೋಷವೂ ಆಗಿರುತ್ತದೆ. ಇದೇ ಹಸಿವು ಮುಂದುವರಿದರೆ ಸಂಕಟವೂ, ದುಃಖವೂ ಆಗುತ್ತದೆ” ಎಂದು ನಮ್ಮ ಸಾಂದರ್ಭಿಕ ಅಗತ್ಯವನ್ನು ಅಲ್ಲಿ ತಿಳಿಸುತ್ತೇವೆ.

ಆಗ ಅವರು “ಅಯ್ಯೋ, ಕ್ಷಮಿಸಿ. ನಿಮ್ಮನ್ನು ನೋಡಿದ ಖುಷಿಯಲ್ಲಿ ಎಲ್ಲವೂ ಮರೆತು ಹೋಯಿತು” ಎಂದು ಅವರ ಮರೆವುಗೇಡಿತನಕ್ಕೆ ಕ್ಷಮೆ ಕೇಳಿ ಮುಂದಿನ ವ್ಯವಸ್ಥೆಯನ್ನು ಮಾಡುತ್ತಾರೆ. ಅವರು ಅವರ ಉತ್ಸಾಹದ ಉಲ್ಲಾಸದಲ್ಲಿ ಪ್ರಾಮಾಣಿಕವಾಗಿ ಮೈಮರೆತಿದ್ದರು. ನಾವು ನಮ್ಮ ಹಸಿವಿನ ಬಾಧೆಯಲ್ಲಿ ಪ್ರಾಮಾಣಿಕವಾಗಿ ಆ ಭೇಟಿಯ ಸಂತೋಷಕ್ಕೆ ಮೈಮರೆತಿರಲಿಲ್ಲ. ಇಬ್ಬರೂ ಪ್ರಾಮಾಣಿಕರೇ. ಪರಸ್ಪರ ಅದನ್ನು ವ್ಯಕ್ತಪಡಿಸಿದೆವು. ಸಮಾಜವಾಗಲಿ, ಅಲ್ಲಿ ಪರಸ್ಪರ ನಾವಾಗಲಿ ನಕಾರಾತ್ಮಕವಾಗೇನೂ ಆಲೋಚಿಸಲಿಲ್ಲ.

ಈಗ ಪ್ರಾಮಾಣಿಕತೆಯ ಇನ್ನೊಂದು ಉದಾಹರಣೆ ನೋಡೋಣ. ನಾವು ಗೆಳೆಯರಿಬ್ಬರು. ಅವನು ಹೊಸದಾಗಿ ಮದುವೆಯಾಗಿರುವ ಹೆಂಡತಿಯನ್ನು ಕರೆದುಕೊಂಡು ನನ್ನ ಮನೆಗೆ ಬಂದಿದ್ದಾನೆ. ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ ಅವನಿಗೆ ಇರುವ ವಿಪರೀತ ಹೆಮ್ಮೆ ಕಾಣಿಸುತ್ತಿದೆ. ನನ್ನ ಬಾಯಿಂದ ಅವನಿಗೆ ಅದನ್ನು ಕೇಳುವ ಆಸೆಯೂ ಉತ್ಕಟವಾಗಿದೆ. ಒಂದಷ್ಟು ಊಟೋಪಚಾರಗಳು ಮುಗಿದ ಮೇಲೆ ನಾವಿಬ್ಬರೇ ಇರುವಾಗ ಕೇಳುತ್ತಾನೆ. “ಹೇಗನಿಸಿದಳು? ಪ್ರಾಮಾಣಿಕವಾಗಿ ಹೇಳು.” ಹೇಳಿದೆ, “ನಿನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ. ತುಂಬಾ ಜಾಣೆ ಅಂತಲೂ ತೋರುತ್ತದೆ. ಅವಳ ಮುಖ ಮಾತ್ರವಲ್ಲ ದೇಹ” ಅಂಗಾಂಗಗಳನ್ನೆಲ್ಲಾ ವಿವರಿಸಿ ವರ್ಣಿಸುತ್ತಿದ್ದೇನೆ. ಅವನ ಮುಖ ಕೆಂಪೇರುತ್ತಿದೆ ಕೋಪದಿಂದ, ನಾನು ಮುಂದುವರಿಸಿ, “ಇಷ್ಟು ಚೆನ್ನಾಗಿರುವ ಹೆಣ್ಣು ನಿನಗೆ ಯೋಗ್ಯವಲ್ಲ ಎನಿಸುತ್ತದೆ” ಇನ್ನೂ ಮುಂದುವರಿಸಿ, “ಅವಳೊಂದಿಗೆ ನಾನು ಸುಖಿಸಬೇಕು ಎಂದು ಆಸೆಯಾಗುತ್ತಿದೆ” ಎಂದು ಮುಗಿಸಿದ್ದೇನೆ.

ಅವನು ಕೋಪದಿಂದ ಚೀರಾಡುತ್ತಾನೆ, ಹೊಡೆಯಲು ಬರುತ್ತಾನೆ, ಒಂದು ವೇಳೆ ಅವನಿಗೆ ದೈಹಿಕವಾಗಿ ಸಾಮರ್ಥ್ಯವಿದ್ದರೆ ನನಗೆ ಚೆನ್ನಾಗಿ ಹೊಡೆಯುತ್ತಾನೆ, ಅವನ ಹೆಂಡತಿ ವಿಷಯ ತಿಳಿದು ನನ್ನ ಮುಖದ ಮೇಲೆ ಉಗಿದು ಹೋಗುತ್ತಾಳೆ. ನನಗೆ ಹೆಂಡತಿಯೇನಾದರೂ ಇದ್ದರೆ ಬರಲು ತೆಗೆದುಕೊಂಡು ಬಾರಿಸುತ್ತಾಳೆ. ನನ್ನ ಸ್ನೇಹಿತ ಊರೆಲ್ಲಾ ಈ ಕತೆ ಹೇಳುತ್ತಾನೆ. ‘ಥೂ, ಹೊಲಸು ನನ್ನ ಮಗ. ಅವನಿಗೆ ಮಾನಸಿಕ ರೋಗವಿರಬೇಕು. ಅವನು ಹುಚ್ಚ. ಅತಿಕಾಮಿ. ಅನಾಗರಿಕ’ ಇತ್ಯಾದಿಗಳನ್ನೆಲ್ಲಾ ಹೇಳಿ ಬೈಯುತ್ತಾರೆ. ಹಾಗಾದರೆ ಪ್ರಾಮಾಣಿಕವಾಗಿರಬೇಕೆಂದು ಬಯಸುವ ಸಮಾಜ ಪ್ರಾಮಾಣಿಕವಾಗಿಯೇ ವ್ಯಕ್ತಿಯೊಬ್ಬ ತನ್ನ ಮನದಾಳದ ಅನಿಸಿಕೆ ಮತ್ತು ಬಯಕೆಯನ್ನು ಹೇಳಿದರೆ ಹೀಗೇಕೆ ಉರಿದುರಿದು ಉಗಿದಿದ್ದು?

ನಿಜ ಸುಳ್ಳುಗಳ ನಡುವೆ

ಇನ್ನು ಸತ್ಯದ ವಿಷಯಕ್ಕೆ ಬರೋಣ. ಅಸಲಿಗೆ ‘ಸತ್ಯ’ ಎಂದರೇನು? ಸತ್ಯವೆಂಬ ವಸ್ತು ಅಥವಾ ವಿಚಾರ ಇರುವುದಾಗಿರಬೇಕು. ಇಲ್ಲವಾಗಿರುವುದಲ್ಲ. ಇಷ್ಟೇ ಸುಲಭ ಮತ್ತು ಸರಳವೇ ಸತ್ಯದ ವ್ಯಾಖ್ಯಾನ?
ಇರಲಿ, ನಾನು ಹಕ್ಕಿಯೊಂದು ತಂತಿಯ ಮೇಲೆ ಕುಳಿತಿರುವುದನ್ನು ನೋಡಿದೆ. ಅದು ಸತ್ಯ. ತಂತಿಯ ಮೇಲೆ ಹಕ್ಕಿ ಕೂತಿದೆ ಎಂದು ಹೇಳುತ್ತೇನೆ. ಅಂದರೆ ಸತ್ಯವನ್ನು ಹೇಳಿದ್ದೇನೆ. ತಂತಿಯ ಮೇಲೆ ಹಕ್ಕಿ ಕೂತಿಲ್ಲ. ಆದರೆ ನಾನು ಹಕ್ಕಿ ತಂತಿಯ ಮೇಲೆ ಕೂತಿದೆ ಎಂದು ಹೇಳುತ್ತೇನೆ. ಅದು ಸುಳ್ಳು. ಇಲ್ಲದಿರುವುದನ್ನು ಇದೆ ಎನ್ನುವುದು, ಇರುವುದನ್ನು ಇಲ್ಲ ಎನ್ನುವುದು ಸುಳ್ಳು ತಾನೇ? ತಂತಿಯ ಮೇಲೆ ಹಕ್ಕಿ ಕೂತಿದೆ ಎಂದು ನಾನು ಹೇಳುತ್ತೇನೆ. ಅದು ಸತ್ಯ. ಅದನ್ನು ನನ್ನಿಂದ ಕೇಳಿಸಿಕೊಂಡ ನೀವು ಬಂದು ನೋಡಿದಿರಿ. ಅದು ಹಾರಿ ಹೋಗಿತ್ತು. ಇರಲಿಲ್ಲ.

ನೀವೀಗ ಬಂದವರು ನನ್ನ ಸತ್ಯವನ್ನು ಹೇಗೆ ಒಪ್ಪಿಕೊಳ್ಳುವಿರಿ? ಹೌದು ಹಕ್ಕಿ ಕೂತಿದೆ ಎನ್ನಲಾಗದು. ನಾನು ಹಾರಿ ಹೋಯಿತು ಎನ್ನಬೇಕು. ನೀವು ಹೌದಾ ಎನ್ನುವಿರಿ. ನನ್ನೊಡನೆ ಹಿಂದೆ ಆಗಿರುವ ಅನುಭವಗಳ ಆಧಾರದಲ್ಲಿ ನೀವು ಅದನ್ನು ನಿಜವೆಂದು ಒಪ್ಪುತ್ತೀರಿ ಅಥವಾ ಸುಳ್ಳೆಂದು ನಿರಾಕರಿಸುತ್ತೀರಿ. ತೋಳ ಬಂತು ತೋಳ ಕತೆ ನೆನಪಿಸಿಕೊಳ್ಳಿ. ಅಂದರೆ, ನಿಜ ಮತ್ತು ಸುಳ್ಳುಗಳೂ ಕೂಡಾ ವಸ್ತುವಿನ ಅಥವಾ ವಿಚಾರದ ಅಸ್ತಿತ್ವಕ್ಕಿಂತ ಮುಖ್ಯವಾಗಿ ಗ್ರಹಿಸುವುದರ ಆಧಾರದ ಮೇಲೆ, ನಾವು ನಂಬಲು ಇಷ್ಟಪಡುವುದರ ಆಧಾರದ ಮೇಲೆ ಅವಲಂಬಿತವಾಗಿದೆ ಅಂತಾಯ್ತು. ಹಾಗಾದರೆ ಸತ್ಯವನ್ನು ಸರ್ವಕಾಲಿಕ ಮೌಲ್ಯವೆಂದು ಹೇಗೆ ನಿರ್ಧರಿಸುವಿರಿ?

ದೃಷ್ಟಿಯಲ್ಲಿದೆ ಸೌಂದರ್ಯ

ಅವಳು ಸಿಂಗರಿಸಿಕೊಂಡು ಬಂದಳು. ನಾನು ಮತ್ತು ನೀವು; ಇಬ್ಬರೂ ಅಲ್ಲಿದ್ದೇವೆ. ಅವಳು ಕೇಳಿದಳು “ನಾನು ಹೇಗೆ ಕಾಣುತ್ತಿದ್ದೇನೆ?”
ನೀವು ಹೇಳಿದಿರಿ, “ತುಂಬಾ ಸುಂದರವಾಗಿ ಕಾಣುತ್ತಿದ್ದೀಯ” ಎಂದು. “ನಿಜ ಹೇಳು” ಎಂದಳು ಅವಳು. “ಅಸಹ್ಯವಾಗಿದ್ದೀಯ. ಚೂರೂ ಚೆನ್ನಾಗಿಲ್ಲ. ನಿನಗೆ ಕಲರ್ ಸೆನ್ಸೇ ಇಲ್ಲ. ಕೆಟ್ಟದಾಗಿ ಇರುವುದರ ಜೊತೆಗೆ ಕೆಟ್ಟದಾಗಿ ಬಟ್ಟೆ ಹಾಕಿದ್ದೀಯ” ಎನ್ನುತ್ತೇನೆ. ಇದು ನಿಜ. ಅವಳು ಚೆನ್ನಾಗಿಲ್ಲ. ಸೌಂದರ್ಯ ಎಂದರೆ ಏನೇನೋ ಮಾನದಂಡ ನನಗಿದೆ. ಬಣ್ಣಗಳ ಆಯ್ಕೆಯ ಬಗ್ಗೆ ನನಗೆ ತುಂಬಾ ಶಾಸ್ತ್ರೀಯ ಜ್ಞಾನವಿದೆ. ನಾನು ನಿಜವನ್ನೇ ಹೇಳುತ್ತಿದ್ದೇನೆ. ನೀವು ಹೇಳುತ್ತೀರಿ, “ಇಲ್ಲ. ಅವಳು ಸುಂದರವಾಗಿದ್ದಾಳೆ. ಆ ಬಣ್ಣಗಳೂ ಒಂದು ರೀತಿಯಲ್ಲಿ ಸುಂದರವಾಗಿದೆ.” ನಿಮ್ಮ ಮಾತನ್ನು ನಾನು ಒಪ್ಪದೇ “ನೀನು ಸುಳ್ಳು ಹೇಳುತ್ತಿದ್ದೀಯ.ಅವಳನ್ನು ಮೆಚ್ಚಿಸುವ ಸಲುವಾಗಿ” ಎಂದು ಆರೋಪ ಮಾಡುತ್ತೇನೆ.

ಗೊತ್ತಾಯ್ತಲ್ಲಾ? ಸೌಂದರ್ಯ ಮಾತ್ರವಲ್ಲ ನೋಡುಗನ ದೃಷ್ಟಿಯಲ್ಲಿರುವುದು. ಸತ್ಯವೂ ಕೂಡಾ ಗ್ರಹಿಕೆಯ ಮೇಲೆ ಅವಲಂಬಿತವಾಗಿರುವುದು. ಕರುಣೆ ಒಂದು ಅತ್ಯುತ್ತಮ ಮೌಲ್ಯ. ಅದನ್ನು ಹೊಂದಿರುವುದು ಶ್ರೇಷ್ಟ ವ್ಯಕ್ತಿತ್ವದ ಭಾಗ. ಸರಿ, ಅಲ್ಲೊಂದು ಅತ್ಯಾಚಾರ ನಡೆಯಿತು. ಬಲಿಪಶುವಾದ ಹೆಣ್ಣು ಮಗು ಸತ್ತಿತು. ಆರೋಪಿಯನ್ನು ಎನ್ ಕೌಂಟರ್ ಮಾಡಿಯೋ ಅಥವಾ ಮರಣದಂಡನೆ ನೀಡಿಯೋ ಸಾಯಿಸಿದರು. ನನಗೆ ಈಗ ಬಲಿಯಾದ ಆ ಅತ್ಯಾಚಾರದ ಆರೋಪಿಯ ಬಗ್ಗೆ ಕರುಣೆ ಬಂತು. ಪಾಪ, ಆತನನ್ನು ಕೊಲ್ಲಬಾರದು. ಆತನಿಗೆ ಹಿಂಸೆ ಕೊಡಬಾರದು. ಆತನನ್ನು ದಯೆಯಿಂದ ಕಾಣಬೇಕು ಎನ್ನುತ್ತೇನೆ. ಅತ್ಯಾಚಾರಿಗೆ ಕರುಣೆ ತೋರಬಾರದು ಎನ್ನುತ್ತದೆ ಬಹುಮಂದಿಯ ಸಮೂಹ.

ಅಂದರೆ ಅತ್ಯುತ್ತಮ ಆಂತರಿಕ ಮೌಲ್ಯವೆಂದು ನೀವು ಗ್ರಹಿಸಿರುವ ಮತ್ತು ಅಭ್ಯಾಸ ಮಾಡಿರುವ ಕರುಣೆಯನ್ನು ನೀವು ಪ್ರದರ್ಶಿಸಬೇಕಾದರೂ ಸಮಾಜದ ಅನುಮತಿ ಬೇಕು. ಯಾರಿಗೆ ಕರುಣೆ ತೋರಿಸಬೇಕು, ಯಾರಿಗೆ ತೋರಿಸಬಾರದು ಅದು ನಿರ್ಧರಿಸುತ್ತದೆ.

ನಾನು ರಸ್ತೆಯಲ್ಲಿ ಕೈ ಒಡ್ಡಿದವರಿಗೆ ಹಣವನ್ನು ನೀಡಿದಾಗ, “ಅಪಾತ್ರರಿಗೆ ದಾನ ಮಾಡಬಾರದು.ಅವರು ಅದನ್ನು ಅನ್ನಕ್ಕೆ ಬಳಸುವುದಿಲ್ಲ. ಮದ್ಯಪಾನಕ್ಕೆ ಬಳಸುತ್ತಾರೆ.ಹಾಗಾಗಿ ಹಣ ಕೊಟ್ಟು ರೂಢಿ ಮಾಡಬಾರದು” ಎಂದು ಅದೆಷ್ಟು ಜನ ತಡೆದಿಲ್ಲ! ಔದಾರ್ಯವೆನ್ನುವುದು ಮಹೋನ್ನತ ಮೌಲ್ಯವಾಗಿದ್ದರೂ ಅದನ್ನು ಪಡೆಯಲು ಪಾತ್ರ ಅಪಾತ್ರಗಳನ್ನು ನಿರ್ಧರಿಸಲು ಹಲವು ಮಾನದಂಡಗಳನ್ನು ನಮ್ಮೊಡನೆಯ ಸಹಜೀವಿಗಳೇ ಹೊಂದಿರುವರು.

ಈ ಬಗೆಯ ಹಲವು ಮೌಲ್ಯಗಳು ಅತ್ಯಂತ ಪ್ರಶಂಸೆಗೆ ಮತ್ತು ಮಾನ್ಯತೆಗೆ ಪಾತ್ರವಾಗಿದ್ದರೂ ಅವುಗಳ ಪ್ರದರ್ಶನದಲ್ಲಿ ವ್ಯಕ್ತಿಗಳಿಗೆ ಭಯಂಕರ ತೊಡಕುಗಳಿವೆ. ವ್ಯಕ್ತಿಯೊಬ್ಬನಲ್ಲಿ ಸತ್ಯವಾಗಿ ಹುಟ್ಟುವ ವಿಚಾರಗಳನ್ನು ಅಥವಾ ಭಾವನೆಗಳನ್ನು ಅವನು ಪ್ರಾಮಾಣಿಕವಾಗಿಯೇ ಅಭಿವ್ಯಕ್ತಿಗೊಳಿಸಲಾಗದಂತಹ ವ್ಯವಸ್ಥೆ ನಮ್ಮ ಸಮಾಜದ್ದು. ಅದಕ್ಕೇ ವಿಲಕ್ಷಣ ಎಂದಿದ್ದು. ಯಾವುದನ್ನು ಮೌಲ್ಯವೆಂದು ಗ್ರಹಿಸಲಾಗಿರುತ್ತದೆಯೋ ಅದನ್ನು ಕಾರ್ಯರೂಪಕ್ಕೆ ತರಲು ತೊಡಕುಗಳಿವೆ. ಸಂಘರ್ಷಗಳಾಗುತ್ತವೆ.

ಇದರಿಂದಾಗಿಯೇ ವ್ಯಕ್ತಿಯ ಮನಸ್ಸಿನಲ್ಲಿ ತಾಕಲಾಟಗಳುಉಂಟಾಗುವುದು.ಪ್ರಾಮಾಣಿಕತೆಯಿಂದ ಇರು ಎನ್ನುವ ಸಮಾಜ ಅಂತಹ ಪ್ರಾಮಾಣಿಕತೆಯನ್ನು ಖಂಡಿಸುತ್ತದೆ, ಇಂತಹ ಪ್ರಾಮಾಣಿಕತೆಯನ್ನು ಪುರಸ್ಕರಿಸುತ್ತೇವೆ ಎನ್ನುತ್ತದೆ. ಸತ್ಯ ಹೇಳು ಎನ್ನುತ್ತದೆ. ಆದರೆ ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್’ ಎನ್ನುತ್ತದೆ. ಸತ್ಯವನ್ನು ಹೇಳುವುದಿದ್ದರೂ ಪ್ರಿಯವಾಗುವಂತೆ ಹೇಳು. ನಿನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯಂತೆ ಪ್ರಾಮಾಣಿಕವಾಗಿ ಹೇಳಿಬಿಡಬೇಡ ಎನ್ನುತ್ತದೆ. ಮೌಲ್ಯ ಮತ್ತು ನೈತಿಕತೆ ಇತ್ಯಾದಿಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲೇ ಮಾನವನ ಮನಸ್ಸು ಸೊರಗಿ ಹೋಗಿರುತ್ತದೆ.

ಅರಿಮೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳು ಇಂತಹ ಮನಸ್ಸಿನ ಒಳ ಬೇಗುದಿಯ ಪರಿಣಾಮಗಳೇ. ಸತ್ಯ, ಪ್ರಾಮಾಣಿಕತೆ, ಔದಾರ್ಯ, ಕರುಣೆ ಇತ್ಯಾದಿ ಮೌಲ್ಯಗಳೇ ನಿಜ. ಆದರೆ ಅವುಗಳನ್ನು ಒಬ್ಬ ವ್ಯಕ್ತಿ ಸುಮ್ಮನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಮೌಲ್ಯ ಎನ್ನುವುದು ಇಲ್ಲವೇ? ಮೌಲ್ಯಕ್ಕೆ ಮೌಲ್ಯ ಮಾಪನವಿದೆಯೇ? ಮನುಷ್ಯತ್ವ ಎಂದರೇನು? ಮಾನವೀಯ ಮೌಲ್ಯಗಳು ಎನ್ನುವವು ನೈಸರ್ಗಿಕವೇ? ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending