Connect with us

ದಿನದ ಸುದ್ದಿ

ನುಡಿಯ ಒಡಲು – 15 | ಒಳನುಡಿ ಬಗೆಗಳು : ಎಷ್ಟು..? ಯಾವವು..?

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಳನುಡಿ ಓದಿಗೆ ಎರಡು ಶತಮಾನಗಳ ಚರಿತ್ರೆಯಿದೆ. ಅಂದರೆ ಹತ್ತೊಂಬತ್ತನೇ ಶತಮಾನದ ಶುರುವಿನಿಂದ ಈ ಓದು ನಡೆದುಕೊಂಡು ಬಂದಿದೆ. ಆದರೆ ನಮ್ಮ ಕವಿರಾಜಮಾರ್ಗಕಾರ ಒಳನುಡಿಗಳ ಬಗೆಗಳನ್ನು ಆವತ್ತೇ ಗುರುತಿಸಿದ್ದ ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕು. ಇರಲಿ, ಒಳನುಡಿ ಓದನ್ನು ನಡೆಸಿಕೊಂಡು ಬಂದವರು, ಅದರ ಸ್ವರೂಪವನ್ನು ಅರಿಯುವ ಉದ್ದೇಶಕ್ಕಾಗಿ ಮೂರು ನೆಲೆಯಲ್ಲಿ ತಮ್ಮ ಗುರಿಗಳನ್ನು ಇರಿಸಿಕೊಂಡಿದ್ದರು.

ಆಡುನುಡಿಯ ಬಗೆಗಳು, ಪ್ರಾದೇಶಿಕ ನುಡಿಬಗೆಗಳು ಮತ್ತು ನುಡಿ ಬೆಳವಣಿಗೆಯ ಸ್ವರೂಪ (ಚಾರಿತ್ರಿಕ) ಎಂಬುದಾಗಿ ಅವುಗಳನ್ನು ವಿಂಗಡಿಸಬಹುದು. ಈ ಮೂರು ಬಗೆಯ ಒಳನುಡಿಗಳ ಸ್ವರೂಪವನ್ನು ಅರಿಯಲು ಉಲಿ ಮತ್ತು ಪದಗಳನ್ನು ಮಾತ್ರ ನೆಚ್ಚಿಕೊಂಡಿದ್ದರು.

ಮುಖ್ಯವಾಗಿ ಹೊಸ ಸೊಲ್ಲರಿಮೆಗಾರರು (ನಿಯೋಗ್ರ್ಯಾಂಮೆರಿಯನ್ಸ್) ಉಲಿ ಬದಲಾವಣೆಯ ನಡುವಣ ಬಗೆಗಳನ್ನು ಬಿಡಿಸಿ ನೋಡುವಲ್ಲಿ ಇರುವ ಕುತೂಹಲವನ್ನು ನೋಡಿದರೆ, ಈ ಅಂಶ ನಿಚ್ಚಳವಾಗಿ ಕಾಣುತ್ತದೆ. ಇದಕ್ಕಾಗಿ ಇವರು ನುಡಿತಿಳಿಹ[ಲಿಂಗ್ವಿಸ್ಟಿಕ್ ಡಾಟಾ]ವನ್ನೇ ಆಧರಿಸಿಕೊಂಡಿದ್ದರು ಎಂಬುದು ಬೇರೆ ಮಾತು.

ಇಲ್ಲಿಯವರೆಗೂ ಒಳನುಡಿ ಓದಿನ ಆಸಕ್ತಿ ಕೇವಲ ಉಲಿ ಹಾಗೂ ಪದ (ಕೋಶಾತ್ಮಕ -ಲೆಕ್ಷಿಕಲ್) ರಚನೆಯ ಮಟ್ಟಕ್ಕೆ ಸೀಮಿತವಾಗಿತ್ತು. ಅಂದರೆ ಉಚ್ಚಾರಣೆ ಮತ್ತು ಪದಕ್ಕೆ ಸಂಬಂಧಿಸಿದ ವ್ಯತ್ಯಾಸಗಳನ್ನು ಗುರುತಿಸುವ ನೆಲೆಯಾಗಿತ್ತು. ಕನ್ನಡದ ಸನ್ನಿವೇಶದಲ್ಲಿ ಇಂದೂ ಕೂಡ ಒಳನುಡಿ ಕುರಿತು ಇದೇ ಬಗೆಯ ಓದನ್ನು ಕಾಣುತ್ತೇವೆ. ಅಪವಾದವೆಂಬಂತೆ ಕೆಲವೇ ಕೆಲವಷ್ಟನ್ನು ಓದಗಳನ್ನು ಹೊಸ ತಿಳಿನ ಮಾದರಿಯಲ್ಲಿ ನೋಡಬಹುದು. ಅದೇನೆ ಇರಲಿ ಇವತ್ತಿಗೂ ಒಳನುಡಿಗಳನ್ನು ವಿಂಡಿಸುವ ಬಗೆ ಮತ್ತು ತತ್ವದಲ್ಲಿ ಯಾವುದೇ ಹೊಸತನವನ್ನು ಕಾಣಲು ಸಾಧ್ಯವಾಗಿಲ್ಲ

ಒಳನುಡಿಗಳನ್ನು ಗುರುತಿಸುವುದು ಹೇಗೆ? ಹಾಗೂ ಅವುಗಳ ಸ್ವರೂಪ ಎಂತಹದು?

ಪ್ರತಿಯೊಂದು ಭಾಷೆಯು ತನ್ನ ನಿಗದಿತ ರಾಚನಿಕ ಚೌಕಟ್ಟಿನಲ್ಲಿಯೇ ಹಲವು ನುಡಿಬಗೆಗಳನ್ನು ಒಳಗೊಂಡಿರುತ್ತದೆ, ನುಡಿ ಬಹುಳತೆಯ ಸಂಕೇತವಾಗಿರುವುದೇ ಇದಕ್ಕೆ ಕಾರಣ. ಇಂತಹ ಪ್ರಭೇದಗಳು ಪ್ರಾದೇಶಿಕ, ಚಾರಿತ್ರಿಕ ಹಾಗೂ ಸಾಮಾಜಿಕ ಭಿನ್ನತೆಗಳನ್ನು ಪ್ರತಿನಿಧಿಸುತ್ತೆವೆ. ಸಾಂಪ್ರದಾಯಿಕವಾಗಿ ಈ ಭಿನ್ನತೆ ಅಥವಾ ಭಾಷಿಕ ವ್ಯತ್ಯಸ್ಥ ರೂಪಗಳನ್ನು “ಉಪಭಾಷೆ”ಎಂದೂ ಗುರುತಿಸುವ ರೂಢಿ ಇದೆ.

ಪ್ರತಿಯೊಂದು ನುಡಿ ಸನ್ನಿವೇಶದಲ್ಲಿ ಪ್ರಭೇದಗಳ ಬೆಳವಣಿಗೆ ಒಂದು ಸಹಜ ಭಾಷಿಕ ಪ್ರಕ್ರಿಯೆ. ಈ ಪ್ರಭೇದಗಳೇ ಒಳನುಡಿಗಳಾಗಿ ರೂಪಗೊಳ್ಳುತ್ತವೆ. ಪ್ರತಿ ಭಾಷೆಯ ಒಳನುಡಿಗಳ ನಡುವೆ ಪರಸ್ಪರ ಗ್ರಹಿಕೆ ಸಾಧ್ಯ, ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ಭಾಷೆಗಳೆಂದು ಗುರುತಿಸಲಾಗುತ್ತೆ. ಆದ್ದರಿಂದ ಈ ತರಹದ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಭಿನ್ನತೆ ಇರುತ್ತದೆ.

ಭಾಷೆಯಲ್ಲಿ ರಾಜಕೀಯ-ಸಾಮಾಜಿಕ ಕಾರಣಗಳಿಂದ ಭಾಷೆ-ಉಪಭಾಷೆಗಳೆಂಬ ಡೈಕಾಟಮಿ ಹುಟ್ಟಿಕೊಳ್ಳುತ್ತವೆ. ರಾಜಕೀಯ ಸ್ಥಿತ್ಯಂತರ, ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಕಾರಣ, ವೈಚಾರಿಕ ನಿಲುವುಗಳ ಏರು-ಪೇರಿನಿಂದ ಭಾಷೆ-ಉಪಭಾಷೆಗಳು ವಿಭಿನ್ನ ನೆಲೆಯಲ್ಲಿ ರೂಪಗೊಳ್ಳುತ್ತಿವೆ. ಈ ಭಿನ್ನತೆಗಳು ಪ್ರಮಾಣಭಾಷೆ ಮತ್ತು ಉಪಭಾಷೆಗಳ ನಡುವೆ ಅಂತರ ಹುಟ್ಟಿಸುತ್ತವೆ.

ಇದು ಪ್ರಮಾಣಭಾಷೆಯನ್ನು ಸಾರ್ವತ್ರಿಕವೆಂದು ಉಪಭಾಷೆಯನ್ನು ವೈಯಕ್ತಿಕವೆಂದೂ ಬಿಂಬಿಸುತ್ತದೆ. ಉಪಭಾಷೆ ಅನ್ನುವುದು ಕೇವಲ ಪರಿಭಾಷೆ, ಭಾಷಾಶಾಸ್ತ್ರೀಯವಾಗಿ ಇದೊಂದು ನಿಷ್ಪಕ್ಷಪಾತ ಪದ. ಆದರೆ ಸಾಮಾಜಿಕವಾಗಿ ತಾರತಮ್ಯವನ್ನು ಹುಟ್ಟು ಹಾಕುತ್ತದೆ. ಈ ಭಿನ್ನ ಪ್ರಭೇದಗಳು ಅಥವಾ ಬಗೆಗಳು ಕೇವಲ ತಾರತಮ್ಯದ ನೆಲೆ ಮಾತ್ರವಲ್ಲ.

ಇವುಗಳು ನಮ್ಮ ಸಾಮಾಜಿಕ-ಧಾರ್ಮಿಕ-ಪ್ರಾದೇಶಿಕ ಅಸ್ಮಿತೆಯ ಕುರುಹುಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇಂತಹ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಈ ಭಿನ್ನತೆ ಎದ್ದು ಕಾಣುತ್ತ್ತದೆ. ಕರ್ನಾಟಕ ರಾಜಕೀಯವಾಗಿ ಒಂದು, ಆದರೆ ಭೌಗೋಳಿಕ, ಸಾಮಾಜಿಕ ಹಾಗೂ ಭಾಷಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.
ಹಾಗಾಗಿ ಹಲವು “ಕನ್ನಡ” ಕನ್ನಡಗಳ ಮೊತ್ತ. ಇದನ್ನೇ ಮಾರ್ಗಕಾರ “ಕನ್ನಡಂಗಳ್” ಎಂದಿರಬೇಕು.

ಪ್ರತಿಯೊಂದು ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೋರಿಸುತ್ತದೆ (ಎತ್ತುಗೆಗಾಗಿ. ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು). ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಆರ್ಥಿಕ ನಿಲುವುಗಳು, ಜಾತಿ, ಜನಾಂಗಗಳು ಮುಂತಾದ ಸಾಮಾಜಿಕ ಸಹಾಯದಿಂದ ಭಾಷಿಕ ಭಿನ್ನತೆಯನ್ನು ಗುರುತಿಸುತ್ತವೆ.

ಒಳನುಡಿ: ಪ್ರಕಾರಗಳು

  1. ಚಾರಿತ್ರಿಕ
  2. ಭೌಗೋಳಿಕ
  3. ಸಾಮಾಜಿಕ
  4. ಸಾಂದರ್ಭಿಕ

ನುಡಿ ವ್ಯತ್ಯಾಸಕ್ಕೆ ಕಾರಣವಾಗುವ ಅಂಶಗಳು

  1. ಪ್ರದೇಶ
  2. ಉದ್ಯೋಗ
  3. ಶಿಕ್ಷಣ
  4. ವಯಸ್ಸು
  5. ಲಿಂಗ
  6. ಸಾಮಾಜಿಕ ಅಂತಸ್ತು
  7. ಜನಾಂಗ

ಒಳನುಡಿಗಳನ್ನು ಗುರುತಿಸುವ ಗಡಿಗೆರೆಗಳು
(ಒಳನುಡಿಗಳನ್ನು ಗುರುತಿಸುವ ಈ ಗಡಿಗೆರೆಗಳು ಕಾಲ್ಪನಿಕವಾಗಿರುತ್ತವೆ).

  1. ಕಾಡು
  2. ಬೆಟ್ಟ
  3. ನದಿ

ಚಾರಿತ್ರಿಕ ಒಳನುಡಿ

ಚಾರಿತ್ರಿಕ ಬದಲಾವಣೆಗಳು ಒಳನುಡಿಗಳ ಮೇಲೆ ಯಾವ ಬಗೆಯ ಪ್ರಭಾವಗಳನ್ನು ಬೀರಿವೆ ಎಂಬ ಸಂಗತಿಗಳನ್ನು ಮಾತ್ರ ಬಿಡಿಸಿ ನೋಡುವ ಬಗೆ ಇದಲ್ಲ. ಇಂತಹ ಪ್ರಭಾವಗಳು ಒಳನುಡಿಗಳನ್ನು ರೂಪಿಸುವಲ್ಲಿ ಯಾವ ಬಗೆಯ ಪಾತ್ರ ವಹಿಸಿವೆ ಎಂಬುದು ಮುಖ್ಯ. ಹಾಗಾಗಿ ಈ ಬಗೆಯ ನುಡಿ ಕುರಿತ ವಿವರಗಳು ಒಳನುಡಿಗಳ ಬಗೆಗಿನ ಬಹು ಮುಖ್ಯ ಸಂಗತಿಗಳನ್ನು ತಿಳಿಸಲು ಒತ್ತಾಸೆಯಾಗಿರುತ್ತವೆ.

ಈ ಕಾರಣಕ್ಕಾಗಿಯೇ ಒಳನುಡಿಗಳ ವರ್ಗೀಕರಣಕ್ಕೆ ಅವುಗಳದೆಯಾದ ಮಹತ್ವ ಇರುತ್ತದೆ. ಇವು ನುಡಿ ಚರಿತ್ರೆಯನ್ನು ಕಟ್ಟುವಲ್ಲಿಯೂ ಪ್ರಮುಖ ಮಾನಂಡಗಳಾಗಿ ಕೆಲಸ ಮಾಡುತ್ತವೆ. ಆದರೆ ಹೀಗೆ ನುಡಿ ಚರಿತ್ರೆಯನ್ನು ಕಟ್ಟುವ ವಿಧಾನವೇ ಕಲ್ಪಿತವಾಗಿರುತ್ತದೆ. ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯಲು ಮುಖ್ಯವಾಗಿ ಎರಡು ರೀತಿಯ ಆಧಾರಗಳನ್ನು ಬಳಸಲು ಸಾಧ್ಯವಿದೆ; ಎತ್ತುಗೆಗಾಗಿ ಕನ್ನಡದ ಸನ್ನಿವೇಶವನ್ನು ಬಿಡಿಸಿ ನೋಡುವುದಾದರೆ, ಮೂಲದ್ರಾವಿಡವೆಂಬ ಕಲ್ಪಿತನುಡಿ – ಕನ್ನಡ ನುಡಿಯ ಸಂಬಂಧಿಗಳಾಗಿರುವ ತಮಿಳು, ತೆಲುಗು, ಕುಯಿ, ಕುಡುಖ್ ಮೊದಲಾದ ಇತರ ದ್ರಾವಿಡ ನುಡಿಗಳೊಂದಿಗೆ ಕನ್ನಡವನ್ನು ಹೋಲಿಸಿ ನೋಡಬೇಕು.

ಅವುಗಳ ಮೂಲವನ್ನು ಮೂಲದ್ರಾವಿಡವೆಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳುವ ಮೂಲಕ ಗುರುತಿಸಬಹುದು. ಅನಂತರ ಆ ನುಡಿಯು ಕವಲೊಡೆದು ಬೇರೆಬೇರಾಗಿ ಅಂತಹ ಕವಲುಗಳಲ್ಲಿ ಒಂದರಿಂದ ಕನ್ನಡ ನುಡಿ ಹೇಗೆ ಇಳಿದು ಬಂದಿದೆಯೆಂಬುದನ್ನು ಕಲ್ಪಿಸಿ ಹೇಳಬೇಕಾಗುತ್ತದೆ.

ಕನ್ನಡದ ಒಳನುಡಿಗಳನ್ನು ಪ್ರಾದೇಶಿಕವಾಗಿ ವಿಂಗಡಸಿದರೆ; ಕರಾವಳಿ, ಧಾರವಾಡ, ಬೀದರ್, ಮೈಸೂರು ಇತ್ಯಾದಿಯಾಗಿ ಕನ್ನಡದ ಬೇರೆ ಬೇರೆ ಒಳನುಡಿಗಳನ್ನು ಗುರುತಿಸಬಹುದು. ಮತ್ತು ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಪಟ್ಟಿಮಾಡಿ, ಆ ವ್ಯತ್ಯಾಸಗಳೆಲ್ಲವೂ ಹೇಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ನಡೆದ ಬೇರೆ ಬೇರೆ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ವಾದಿಸಲು ಸಾಧ್ಯವಿದೆ.

ಪರಿಣಾಮವಾಗಿ ಮೂಲಕನ್ನಡ ನುಡಿ ಬೇರೆ ಬೇರೆ ಕವಲುಗಳಾಗಿ ಒಡೆದುಕೊಂಡಿದೆಯೆಂದೂ ಮತ್ತು ಈ ಒಳನುಡಿಗಳು ಆ ನುಡಿಯ ಬೇರೆ ಬೇರೆ ಕವಲುಗಳೆಂದೂ ಕಲ್ಪಿಸಿಕೊಂಡು, ಅವುಗಳ ನಡುವಿರುವ ವ್ಯತ್ಯಾಸಗಳ ಆಧಾರದ ಮೇಲೆ ಮೂಲಕನ್ನಡಕ್ಕೂ ಮತ್ತು ಕನ್ನಡದ ಇವತ್ತಿನ ಪ್ರಭೇದಗಳಿಗೂ ನಡುವಿರುವ ಕಲ್ಪಿತ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.

ಈ ರೀತಿಯ ಮೂಲದ್ರಾವಿಡದಿಂದ ಮೂಲಕನ್ನಡಕ್ಕೂ ಮತ್ತು ಮೂಲಕನ್ನಡದಿಂದ ಅದರ ಬೇರೆ ಬೇರೆ ಆಧುನಿಕ ಪ್ರಭೇದಗಳಿಗೂ ನಡುವೆ ಬೇರೆ ಬೇರೆ ರೀತಿಯ ಬದಲಾವಣೆಗಳ ಮೂಲಕ ಸಂಬಂಧವನ್ನು ಸಾಧಿಸಿದಾಗ ಕನ್ನಡದ ಕಲ್ಪಿತ ಚರಿತ್ರೆ ಸಿದ್ಧವಾಗುತ್ತದೆ. ಮೂಲಕನ್ನಡದಿಂದ ಅದರ ಬೇರೆಬೇರೆ ಪ್ರಭೇದಗಳಿಗೆ ಸಂಬಂಧವನ್ನು ಸಾಧಿಸಿದಲ್ಲಿ ಕನ್ನಡ ಭಾಷೆಯ ಲಿಖಿತ ಚರಿತ್ರೆಯೂ ಕೂಡ ಬಹಳ ಮಟ್ಟಿಗೆ ಸಹಾಯಕವಾಗಬಲ್ಲುದು (ಡಿ.ಎನ್.ಎಸ್.ಭಟ್).

ಕನ್ನಡ ಭಾಷೆಯ ಲಿಖಿತ ಚರಿತ್ರೆ ಬರೆಯಬೇಕಿದ್ದಲ್ಲಿ, ನಾವು ಅದಕ್ಕಾಗಿ ಬೇರೆಬೇರೆ ರೀತಿಯ ಕನ್ನಡ ಬರಹಗಳ ಕಾಲಾನುಕ್ರಮವನ್ನು ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಚರಿತ್ರೆಯನ್ನು ಬರೆಯಬೇಕಾದಾಗ ಬೇರೆಬೇರೆ ಕಾಲಗಳಲ್ಲಿ ಬೆಳೆದುಬಂದ ಶಾಸನಗಳನ್ನು ಹೋಲಿಕೆಮಾಡಿ ಅವುಗಳ ನಡುವಿನ ವ್ಯತ್ಯಾಸಗಳಿಗೆ ಕಾಲಾನುಕ್ರಮವೇ ಕಾರಣವೆನ್ನುವುದನ್ನು ಅರ್ಥೈಸಬೇಕು.

ಶಾಸನಗಳ ನಡುವಿನ ಕಾಲಾನುಕ್ರಮ ವ್ಯತ್ಯಾಸವೇ ನುಡಿಯ ನಡುವಿನ ವ್ಯತ್ಯಾಸವಾಗಬೇಕಿಲ್ಲ. ನುಡಿಯ ಕಾಲಾನುಕ್ರಮ ಶಾಸನ ಕಾಲಾನುಕ್ರಮಕ್ಕಿಂತ ಭಿನ್ನವಾಗಿರಲೂ ಸಾಧ್ಯವಿದೆ. ಇದಕ್ಕೆ ಕಾರಣ ನುಡಿ ಊರಿಂದ ಊರಿಗೆ, ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ.

ಕನ್ನಡದಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಮತ್ತು ಬೇರೆಬೇರೆ ಶತಮಾನಗಳಲ್ಲಿ ರಚಿತವಾದ ಗ್ರಂಥಗಳ ಇಲ್ಲವೇ ಶಾಸನಗಳ ನಡುವಿರುವ ವ್ಯತ್ಯಾಸಗಳು – ಇವೆರಡೂ ಒಂದೇ ತರಹದವುಗಳು. ಎರಡು ಕಡೆಗಳಲ್ಲೂ ಒಂದೇ ರೀತಿಯ ಸ್ವರ ಮತ್ತು ವ್ಯಂಜನ ಭೇದಗಳು ಹಾಗೂ ವ್ಯಾಕರಣ ಭೇದಗಳು ಕಾಣಿಸಿಕೊಳ್ಳುತ್ತವೆ.

ಉದಾ.ಗೆ ಪ್>ಹ್, ತೋಂಟ>ತೋಟ, ಎ>ಇ, (ಮನೆ>ಮನಿ) ಇ>ಎ [ಇಲಿ>ಎಲಿ – ನಂಜನಗೂಡು-ಪುತ್ತೂರು] ಕತ್ತಿ>ಕತ್ತಿ [ಸ್ವರಭೇದ] ಹಾಗೂ ಕ್>ಚ್ (ಕನ್ನಡ – ತಮಿಳು ಉದಾ.ಗೆ ಕೆತ್ತು> ಚೆತ್ತು, ಕೇರಿ> ಚೇರಿ) (ಡಿ.ಎನ್.ಎಸ್.ಭಟ್).

ಲಿಖಿತ ನುಡಿಗೆ ಚಾರಿತ್ರಿಕವಾಗಿ ನಡೆದ ನುಡಿಯ ಬದಲಾಣೆಗಳನ್ನು ವಿವರಿಸುವಲ್ಲಿ ಕೆಲವು ಕೊರತೆಗಳಿವೆ. ಆಡುನುಡಿಯ ಬದಲಾವಣೆಗಳನ್ನು ಹೊರಗಿಟ್ಟು, ಯಾವುದೇ ಭಾಷೆಯ ಚರಿತ್ರೆಯನ್ನು ರಚಿಸುವುದು ಕಷ್ಟ. ಪೂರ್ವದ ಹಳಗನ್ನಡದಿಂದ ಹಳಗನ್ನಡದಲ್ಲಿ ನಡೆದ ಧ್ವನಿ ಬದಲಾವಣೆ ಎ>ಇ – ಕೆಸು>ಕಿಸು, ಪೆರಿಯ>ಪಿರಿಯ (ಹಿರಿಯ), ಎದಿರ್>ಇದಿರ್ (ಇದಿರು), -ಒ>ಉ ತೊೞು>ತುೞು (ದನ), ಪೊಗು>ಪುಗು (ಪ್ರವೇಶಮಾಡು) ಪೂ.ಹಳಗನ್ನಡದಲ್ಲಿದ್ದ ‘ಎ’ಕಾರ ಮತ್ತು ‘ಒ’ಕಾರ ಕರಾವಳಿ ಪ್ರಭೇದಗಳಲ್ಲಿ ಬದಲಾಗದೆ ಹಾಗೆಯೇ ಉಳದಿದೆ. ಎರಡು ವರ್ಣಗಳು ಸೇರಿ ಒಂದೇ ವರ್ಣವಾದಾಗ, ಹಲವಾರು ಪದಭೇದಗಳು ಇಲ್ಲವಾಗುತ್ತವೆ.

ಉದಾ.ಗೆ ‘¾-ರ’ ಈ ವರ್ಣಭೇದ ಈಗ ಇಲ್ಲ

ಹಳಗನ್ನಡ                             ಹೊಸಗನ್ನಡ

ಕರೆ [ಬರಹೇಳು] ಕರೆ

ಕರೆ¾ [ಹಾಲು ಕರೆ]

ಕಿರಿ [ಹಲ್ಲುಕಿರಿ]

ಕಿರಿ ಕಿಱಿ [ಚಿಕ್ಕದು]

ಈ ಬದಲಾವಣೆಗಳು ಏಕೆ ಉಂಟಾದವು ಎಂಬುದನ್ನು ವಿವರಿಸಲು ನಮ್ಮ ನುಡಿಚರಿತ್ರೆಗಳು ಮನಸ್ಸು ಮಾಡುವುದಿಲ್ಲ. ಪದಾದಿಯ ಪಕಾರ ಹಕಾರವಾಯಿತು ಎಂದು ಹೇಳುವುದು ಒಂದು ಪ್ರಕ್ರಿಯೆಯನ್ನು ವರ್ಣಿಸಿದಂತೆ. ಆದರೆ ಕಾರಣ ಮೀಮಾಂಸೆಯನ್ನು ಮಾಡಿದಂತಲ್ಲ. ಈ ಬದಲಾವಣೆಯು ನಮ್ಮಲ್ಲಿ ಕೆಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ (ಕೆ.ವಿ.ಎನ್).

1. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಇಕಾರವಾಗುತ್ತದೆ (ಮನೆ>ಮನಿ, ಕತ್ತಿ>ಕತ್ತಿ, ಇಡು>ಇರು, ಹುಡಿ>ಮಡಿ) ಉಳಿದೆಡೆಯಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಬದಲಾದರೂ ಅದು ಬೇರೆ ಧ್ವನಿಯಾಗಿ ಕಾಣಿಸಿಕೊಳ್ಳುತ್ತದೆ. ಇವೇ ಪದಗಳು ಕನ್ನಡದ ಇನ್ನೊಂದು ಪ್ರಭೇದದಲ್ಲಿ ಅಕಾರಾಂತವಾಗುತ್ತವೆ. (ತಲೆ>ತಲ) ಏಕೆ ಹೀಗೆ?

2. ಪ್>ಹ್ ಬದಲಾವಣೆಯನ್ನೇ ನೋಡೋಣ. ಸ್ವರಗಳ ನಡುವೆ ಬರುವ ಪಕಾರ ಹಕಾರವಾಗುವ ಬದಲು ವಕಾರವಾಗುತ್ತದೆ. ಉದಾ.ಗೆ ಕಪ್ಪು ‘ಮುಚ್ಚು’ ಕವಿ, ಕವುದಿ, ಕೆಪ್ಪು ‘ಕಿವುಡು’

3. ಪ್>ಹ್ ವ್ಯತ್ಯಾಸ ಕನ್ನಡದ ಪದಗಳಿಗೆ ಮಾತ್ರ ಅನ್ವಯಿಸುತ್ತದೆ. ಸಂಸ್ಕೃತದಿಂದ ಬಂದು ಸೇರಿದ ಪಕಾರಾದಿಯುಳ್ಳ ಪದಗಳಿಗೆ ಈ ಬದಲಾವಣೆ ವ್ಯಾಪಿಸಿಲ್ಲ. ಇದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿಲ್ಲ (ಕೆ.ವಿ.ಎನ್).

ಈ ತೊಡಕನ್ನು ಬೇರೆ ಬಗೆಯ ಓದಿನ ಮಾದರಿಗಳಿಂದ ರೂಪಿಸಿಕೊಳ್ಳುವ ಅಗತ್ಯವಿದೆ. ಇತ್ತೀಚಿಗೆ ಅಮೇರಿಕದ ನುಡಿಯರಿಗ ವಿಲಿಯಮ್ ಸೌತ್‌ವರ್ಥ್ನ ಸಂಶೋಧನೆಯ ಫಲಿತದಿಂದ ಹೊರಬಂದಿರುವ ‘ಲಿಂಗ್ವಿಸ್ಟಿಕ್ಸ್ ಆರ್ಕ್ಯಾಲಜಿ ಆಫ್ ಸೌಥ್ ಏಶಿಯಾ’ ಎಂಬ ಹೊತ್ತಿಗೆಯಲ್ಲಿ ಇಂತಹ ತೊಡಕುಗಳನ್ನು ನಿವಾರಿಸಿಕೊಳ್ಳಲು ಬೇಕಾದ ಕೆಲವು ಮಾದರಿಗಳು ಸಿಗುತ್ತವೆ.

ಬರಹದಲ್ಲಿ ನುಡಿಗಳ ದಿಟ ಚಹರೆಗಳು ಯಾವಾಗಲೂ ಸರಿಯಾಗಿಯೇ ಇರುತ್ತವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಆಡುನುಡಿಯಲ್ಲಿ ಭಾಷಿಕ ಅವಶೇಷಗಳು/ಪಳೆಯುಳಿಕೆಗಳು ಉಳದಿರುತ್ತವೆ. ಇಂತಹ ಪಳೆಯುಳಿಕೆಗಳೇ, ನುಡಿ ಬದಲಾವಣೆಯಲ್ಲಿ ಯಾವ ಅಂಶಗಳು ಮೊದಲಾದವು ಮತ್ತು ಯಾವವು ಆನಂತರ ನಡೆದವು ಅನ್ನುವುದನ್ನು ವಿವರಿಸಲು ಒತ್ತಾಸೆಯಾಗಿರುತ್ತವೆ.

ಕನ್ನಡನುಡಿಯ ಆಡುಮಾತುಗಳನ್ನು ಹುಡುಕಿ ತೆಗೆದರೆ, ಆ ಮಾಹಿತಿಗಳಿಂದ ನುಡಿಯ ಚರಿತ್ರೆಗೆ ಅಗತ್ಯವಿರುವ ನುಡಿಯ ವಿವರಗಳು ಸಿಗಬಹುದು. ಆಡುನುಡಿಯೊಳಗಿನ ರಚನೆಗಳು ಏನು ಹೇಳುತ್ತವೆ ಹಾಗೂ ತಮ್ಮ ಮೂಲ ಸ್ವರೂಪವನ್ನು ಹೇಗೆ ಉಳಸಿಕೊಂಡಿವೆ ಎಂಬ ವಿವರಗಳು ತಿಳಿದು ಬರುತ್ತವೆ.

• ಇಂತಹ ಚಿಂತನೆಗಳನ್ನು ಡಿ.ಎನ್.ಎಸ್.ಭಟ್‌ರು ತಮ್ಮ ಅಧ್ಯಯನಗಳಲ್ಲಿ ಈಗಾಗಲೆ ಮಂಡಿಸಿದ್ದಾರೆ. ಈ ಅಧ್ಯಯನಗಳು ಬಹಳ ಕುತೂಹಲಕಾರಿ ವಿಚಾರಗಳನ್ನು ಮಂಡಿಸುತ್ತವೆ. ಎತ್ತುಗೆಗಾಗಿ ಕನ್ನಡದ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವಿನ ಅಂತರವು ಹೆಚ್ಚು ಹಳೆಯದು ಮತ್ತು ಮುಖ್ಯವಾದುದು. ಈ ಪ್ರಭೇದಗಳು ಪ್ರಾಚೀನ ಕನ್ನಡದ ಅನೇಕ ಪದಗಳು ಮತ್ತು ವ್ಯಾಕರಣ ರೂಪಗಳನ್ನು ಇಂದಿಗೂ ಉಳಸಿಕೊಂಡಿವೆಯೆಂದು ಅವರ ಅಭಿಪ್ರಾಯ. ಎತ್ತುಗೆಗಾಗಿ ಹಳಗನ್ನಡದಲ್ಲಿ ಕಾಣಿಸುವ ಪ್, ಬ್, ಮತ್ತು ವ್ ಎಂಬ ಮೂರು ರೂಪಗಳು ಹವ್ಯಕ ಕನ್ನಡದಲಿವೆ ಪೋಪೆನ್>ಹೋಪೆ, ರ‍್ಪೆನ್>ಬಪ್ಪೆ, ಕಾಣ್ಬೆನ್>ಕಾಂಬೆ, ಪಾಡುವೆನ್>ಹಾಡುವೆ.

• ಇಂತಹ ತೌಲನಿಕ ಅಧ್ಯಯನಗಳಿಂದ ಹೊಸ ಬಗೆಯ ತಿಳುವಳಿಕೆ ಸಾಧ್ಯವೆಂಬುದು ನಿಚ್ಚಳವಾಗುತ್ತದೆ. ಈ ತಿಳಿವನ್ನು ಇನ್ನಷ್ಟೂ ಹಿಗ್ಗಿಸುವುದಾದರೆ, ‘ಫಾಲ್ಗುಣ’ ಎಂಬ ಪದ ೧೨ನೇ ಶತಮಾನದ ಕೊಡಗಿನ ಉಪಭಾಷೆಯಲ್ಲಿ ‘ಪಲ್ಗುಣ’ ಎಂದಾಗುತ್ತದೆ. ‘ತಾಯಿ’ ಎಂಬ ಪದ ೧೪ನೇ ಶತಮಾನದ ಉತ್ತರ ಕನ್ನಡದ ಶಾಸನದಲ್ಲಿ ‘ತಯಿ’ ಎಂದಾಗುತ್ತದೆ. ‘ಬಾನ’ ಎಂಬ ಪದ 14ನೇ ಶತಮಾನದ ಉಡಪಿ ಶಾಸನದಲ್ಲಿ ‘ಮಾನ’ ಎಂದಾಗಿದೆ. ‘ಪಡುವಣ’ ಪದವು ಸಹ ‘ಹ್’ ಕಾರವಾಗಿ ‘ಹಡುವಣ’ ಎಂದು ಪ್ರಯೋಗವಾಗಿರುವುದು 11ನೇ ಶತಮಾನದ ಕೊಡಗಿನ ಶಾಸನದಲ್ಲಿ ಬಳಕೆಯಾಗಿದೆ (ಕುಶಾಲಪ್ಪಗೌಡ).

• ‘ಋ’ ಕಾರ ‘ರು, ರಿ, ರ’ ಕಾರವಾಗಿ, ‘ವ್’ ಕಾರ ‘ಬ್’ ಕಾರವಾಗಿ, ‘¾’ ಮತ್ತು ‘¿’ ಕುಳವಾಗಿ, ಶಕಟರೇಫ ರೇಫಯಾಗಿ ಬದಲಾಗಿರುವ ಧ್ವನಿತತ್ವಗಳ ನಿಯಮಗಳನ್ನು ಇನ್ನೂ ಖಚಿತವಾಗಿ ಶೋಧಿಸಲಕ್ಕೆ ಒಳನುಡಿಗಳ ಅಧ್ಯಯನ ಪೂರಕವಾಗಬಲ್ಲುದು ಎಂಬುದನ್ನು ಈ ಮೇಲಿನ ಸಂಗತಿಗಳಿAದ ತಿಳಿಯಬಹುದು.

3. ಪ್ರಾದೇಶಿಕ ಒಳನುಡಿ

ಒಂದು ಸೀಮಿತ ಪ್ರಾದೇಶಿಕ ಗಡಿಯೊಳಗೆ ನೆಲೆನಿಂತಿರುವ ಸಮುದಾಯಗಳು ನಿರ್ದಿಷ್ಟ ಕಾಲದಲ್ಲಿ ಮಾತನಾಡುವ ನುಡಿಬಗೆಗಳನ್ನು ಪ್ರಾದೇಶಿಕ ಒಳನುಡಿಯೆಂದು ಕರೆಯುತ್ತಾರೆ. ಎತ್ತುಗೆಗಾಗಿ ಕನ್ನಡದಲ್ಲಿ ಮೈಸೂರು ಕನ್ನಡ, ಗುಲ್ಬರ್ಗ ಕನ್ನಡ, ಧಾರವಾಡ ಕನ್ನಡ, ಮತ್ತು ಮಂಗಳೂರು ಕನ್ನಡ ಎಂಬಿತ್ಯಾದಿಯಾಗಿ ಗುರುತಿಸಿದ್ದಾರೆ.

ಮತ್ತೆ ಕೆಲವರು ಕರ್ನಾಟಕದಲ್ಲಿರುವ ಜಿಲ್ಲೆಗಳಿಗೊಂದರಂತೆ ಒಳನುಡಿಯನ್ನು ಗುರುತಿಸುತ್ತಾರೆ. ಅಂದರೆ ಮೂವತ್ತು ಜಿಲ್ಲೆಗಳಿರುವುದರಿಂದ ಮೂವತ್ತು ಒಳನುಡಿಗಳಿವೆ ಎಂದರ್ಥ. ಇಂತಹ ಸಾರರೂಪಿ ವ್ಯಾಖ್ಯಾನುಗಳು ಹೇಗೆ ಒಳನುಡಿಗಳ ಬಗೆಗೆ ತೊಡಕುಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ಮುಂದೆ ಚರ್ಚಿಸೋಣ. ಇರಲಿ ನುಡಿಯೊಳಗಿನ ವ್ಯತ್ಯಾಸಗಳನ್ನು ದಿಟವಾಗಿಯೂ ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕವಾಗಿ ಗುಂಪುಮಾಡುವ ನೆಲೆಗಳಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳಿರುತ್ತವೆ ಎಂದು ಒಪ್ಪಲಾಗಿದೆ.

ಹಾಗಾಗಿ ಇಂದಿನ ಕನ್ನಡದಲ್ಲಿ ಪ್ರಾದೇಶಿಕ ಭಿನ್ನತೆಗಳು ನಮ್ಮ ಕಣ್ಣ ಮುಂದಿರುವಂತೆಯೇ, ಕನ್ನಡದಲ್ಲಿ ಚಾರಿತ್ರಿಕ ಭಿನ್ನತೆಗಳು ಇದ್ದವು ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಅದಕ್ಕಾಗಿಯೇ ಕವಿರಾಜಮಾರ್ಗಕಾರ ಕನ್ನಡದಲ್ಲಿ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗಗಳನ್ನು ಗುರುತಿಸಿ, ಅವು ಕನ್ನಡದ ಪ್ರಮುಖ ಪ್ರಾದೇಶಿಕ ಪ್ರಭೇದಗಳೆಂದು ಹೇಳುತ್ತಾನೆ. ಇವನು ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಆಧರಿಸಿಕೊಂಡು, ಅವುಗಳ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲಿ ಬಳಸುವ ಭಾಷೆಯೇ ಕನ್ನಡದ ತಿರುಳು ಎಂದು ಹೇಳುತ್ತಾನೆ.

ಇದು ಭಾಷಾ ಪ್ರಮಾಣೀಕರಣದ ಪ್ರಯತ್ನವೆಂದೇ ಹೇಳಬಹುದು. ಕನ್ನಡದ ದಕ್ಷಿಣ ಮತ್ತು ಉತ್ತರ ಮಾರ್ಗಗಳನ್ನು ಗುರುತಿಸುಲು ತುಂಗಭದ್ರೆಯನ್ನು ಗಡಿಗೆರೆಯನ್ನಾಗಿಸಿದ್ದಾನೆ. ಇದರಿಂದ ತಿಳಿವುದೇನೆಂದರೆ, ಪ್ರಮಾಣೀಕೃತ ಭಾಷೆ ಮತ್ತು ಆಡುಭಾಷೆಗಳು ಬೇರೆಬೇರೆ ಇದ್ದವು ಎಂಬುದು ಇದರಿಂದ ತಿಳಿದುಬರುತ್ತದೆ.

ಆದರೆ ಈ ವರ್ಗೀಕರಣಕ್ಕೆ ಎದುರಾಗಿ ಡಿ.ಎನ್.ಶಂಕರ ಭಟ್‌ರು ಕನ್ನಡದ ಪ್ರಾದೇಶಿಕ ಒಳನುಡಿಗಳನ್ನು ಪೂರ್ವ ಮತ್ತು ಪಶ್ಚಿಮ ಪ್ರಭೇದಗಳೆಂದು ಗುರುತಿಸುತ್ತಾರೆ. ಇವರ ಈ ವರ್ಗೀಕರಣದ ಹಿಂದಿನ ಗುರಿಗಳು ಅತ್ಯಂತ ಕುತೂಹಲಕಾರಿಯಾಗಿವೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು;

• ಬರಹದ ಕನ್ನಡದಲ್ಲಿ ನಡೆಯದಿದ್ದರೂ ಇತರ ಪ್ರಭೇದಗಳಲ್ಲಿ ನಡೆದಿರುವ ಬೇರೆಯೂ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ನಡೆದಿಲ್ಲ, ಉದಾ.ಗೆ ಕ್ರಿಯಾಪ್ರಕೃತಿಗಳ ಕೊನೆಯಲ್ಲಿ ಬರುವ ‘ಎ’ ಕಾರ ‘ಇ’ ಕಾರವಾಗದೆ ‘ಎ’ ಕಾರವಾಗಿಯೇ ಇದೆ.

• ಈ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳಲ್ಲಿ ಕನ್ನಡ ನುಡಿಯ ಚಾರಿತ್ರಿಕ ಬೆಳವಣಿಗೆಯನ್ನು ವಿವರಿಸಲು ಬೇಕಾಗುವ (ನುಡಿ) ಪಳೆಯುಳಿಕೆಗಳು ಸಿಗುತ್ತವೆ.

ಸಾಂಪ್ರದಾಯಿಕವಾಗಿ ನಾಲ್ಕು ಪ್ರಾದೇಶಿಕ ಒಳನುಡಿಗಳನ್ನು ಗುರಿತಿಸಿದ್ದಾರೆ. ಅವುಗಳೆಂದರೆ, ಮೈಸೂರು, ಮಂಗಳೂರು, ಧಾರವಾಡ ಮತ್ತು ಗುಲ್ಬರ್ಗ ಕನ್ನಡಗಳು. ಇವುಗಳಲ್ಲಿಯೂ ಸಾಕಷ್ಟು ಒಳನುಡಿಗಳನ್ನು ಗುರುತಿಸಬಹುದು. ಉದಾ.ಗೆ ಪುತ್ತೂರು ಕನ್ನಡ, ಕುಂದಾಪುರ ಕನ್ನಡ, ಚಾಮರಾಜನಗರ ಕನ್ನಡ, ನಂಜನಗೂಡಿನ ಕನ್ನಡ, ಬಾಗಲಕೋಟೆ ಕನ್ನಡ ಮುಂತಾದವು.

ಈ ಪ್ರಾದೇಶಿಕ ಒಳನುಡಿಗಳ ನಡುವಣ ಭಿನ್ನತೆಗಳನ್ನು ಸ್ಥೂಲವಾಗಿ ಮೂರು ನೆಲೆಗಳಲ್ಲಿ ಗುರುತಿಸಿದ್ದಾರೆ, ಅವುಗಳೆಂದರೆ, ಧ್ವನಿ, ಪದ ಮತ್ತು ವ್ಯಾಕರಣ. ಈ ಮೇಲಿನ ಚರ್ಚೆಗಳಿಂದ ಗೊತ್ತಾಗಿರುವ ಒಂದು ಸಂಗತಿಯೇನೆAದರೆ, ಎಲ್ಲ ಕಾಲಗಳಲ್ಲಿಯೂ ಪ್ರಾದೇಶಿಕ ಒಳನುಡಿಗಳಿದ್ದವು ಎಂಬುದಾಗಿದೆ. ಆದರೆ ಈ ಪ್ರಾದೇಶಿಕ ಒಳನುಡಿಗಳ ನಡುವಿನ ವ್ಯತ್ಯಸಗಳನ್ನು ಗುರುತಿಸಲು ‘ಗಡಿಗೆರೆ’ (ಐಸೋಗ್ಲಾಸ್) ಎಂಬ ಒಂದು ಮಾನದಂಡವನ್ನು ಬಳಸುತ್ತಾರೆ.

ಒಳನುಡಿ ಓದುಗರು ಎರಡು ಅರಿಮೆಪದಗಳನ್ನು ರೂಪಿಸಿದ್ದಾರೆ. ಅವುಗಳಂದರೆ, ನಡುಜಾಗ (ಫೋಕಲ್ ಏರಿಯಾ) ಮತ್ತು ಪಳೆಯುಳಿಕೆ ಜಾಗವೆಂದು (ರೆಲಿಕ್ ಏರಿಯಾ) ಭೌಗೊಳಿಕವಾಗಿ ಫೋಕಲ್ ಏರಿಯಾ ಅನ್ನುವುದು ಯಾವಾಗಲೂ ಕೇಂದ್ರಜಾಗವೇ ಆಗಿರುತ್ತದೆ ಹಾಗೂ ಇಂತಹ ಜಾಗಗಳು ಸಾಂಸ್ಕೃತಿಕ ಬಹುಳತೆ ಕೂಡಿರುವುದಷ್ಟೆಯಲ್ಲದೆ ಆರ್ಥಿಕ ಚಟುವಟಿಕೆಗಳಿಂದಲೂ ಕೂಡಿರುತ್ತವೆ. ಸಹಜವಾಗಿಯೇ ಈ ಜಾಗಗಳು ಭಾಷಿಕ ಹೊಸತನದ ನೆಲೆಬೀಡುಗಳಾಗಿರುತ್ತವೆ.

ಕವಿರಾಜಮಾರ್ಗಕಾರ ಹೇಳುವ ತಿರುಳುಗನ್ನಡ ನಾಡನ್ನು ಇಲ್ಲಿ ಎತ್ತುಗೆಗಾಗಿ ತೋರಿಸಬಹುದು. ಅಂದರೆ ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಕೇಂದ್ರ ಪ್ರದೇಶಗಳನ್ನಾಗಿ ಗುರುತಿಸಿದ್ದಾನೆ. ಭಾಷಿಕ ಹೊಸತನಗಳು ಇಂತಹ ಪ್ರದೇಶಗಳಿಂದಲೇ ಆಯಾ ನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಚದುರಿಕೊಳ್ಳುತ್ತವೆ. ಆದರೆ ಪಳೆಯುಳಿಕೆ ಪ್ರದೇಶಗಳು ಆಯಾ ನಾಡಿನ ಭೌಗೋಳಿಕ ಮೇರೆಗಳನ್ನು ದಾಟಿ ಇಲ್ಲವೇ ಅಂಚಿನಲ್ಲಿ ನೆಲೆಗೊಂಡಿರುತ್ತವೆ.

ಜನಸಾಮನ್ಯರ ಒಡನಾಟಕ್ಕೆ ಎಟುಕದ ಪ್ರದೇಶಗಳು ಇವಾಗಿರುತ್ತವೆ. ಅಂದರೆ ಮಲೈನಾಡುಗಳು ಇಲ್ಲವೇ ಘಟ್ಟದ ಕೆಳಗಿನ ಪ್ರದೇಶಗಳೂ ಆಗಿರುತ್ತವೆ. ಹಾಗಾಗಿ ಡಿ.ಎನ್.ಎಸ್ ಭಟ್ ಅವರು ಕನ್ನಡ ನುಡಿ ಬದಲಾವಣೆಯ ಸುಳಿವು ಇಲ್ಲವೇ ನುಡಿ ಪಳೆಯುಳಿಕೆಯ ಜಾಗಗಳನ್ನು ಪೂರ್ವ-ಪಶ್ಚಿಮ ದಿಕ್ಕುಗಳ ನೆಲೆಯಿಂದ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಮಾರ್ಗಕಾರ ಇದನ್ನು ದಕ್ಷಿಣ ಹಾಗೂ ಉತ್ತರ ದಿಕ್ಕುಗಳ ನೆಲೆಯಿಂದ ಗುರುತಿಸುವ ಬಗೆಯನ್ನು ಕವಿರಾಜಮಾರ್ಗದಲ್ಲಿ ಸೂಚಿಸಿದ್ದಾನೆ.

ಈ ಪಳೆಯುಳಿಕೆಗಳು ಯಾವುದೇ ಹೊರ ಪ್ರಭಾವಕ್ಕೆ ಈಡಾಗದೇ, ತಮ್ಮ ಮೂಲರೂಪದಲ್ಲಿರುತ್ತವೆ. ಇಂತಹ ಆಯಕಟ್ಟಿನ ಜಾಗಗಳಲ್ಲಿ ‘ದಾಂಟು’ ‘ಪಚ್ಚೆ’ ಮುಂತಾದ ಮೂಲರೂಪಗಳು ಆಯಾ ಪ್ರದೇಶದ ಜನರ ಆಡುನುಡಿಯಲ್ಲಿ ಈಗಲೂ ಬಳಕೆಯಲ್ಲಿವೆ. ಮಾಲೂರಿನ ಸುತ್ತಮುತ್ತಲಿನ ತಮಿಳುನಾಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ‘ನಮ್ಮ’ ಎಂಬ ಇನ್‌ಕ್ಲೂಸಿವ್ ಬಹುವಚನದ ಬಳಕೆಯನ್ನು ಕಾಣಬಹುದಾಗಿದೆ. ಈ ಬಗೆಯ ನುಡಿ ಪಳೆಯುಳಿಕೆಗಳನ್ನು ಡಿ.ಎನ್.ಎಸ್.ಭಟ್ ಅವರು ತಮ್ಮ ನುಡಿ ಕಲ್ಪಿತ ಚರಿತ್ರೆಯಲ್ಲಿ ಗುರುತಿಸಿರುತ್ತಾರೆ.

4. ಸಾಮಾಜಿಕ ಒಳನುಡಿಗಳು

• ಸಾಮಾಜಿಕ ಭಿನ್ನತೆಯ ಪರಿಣಾಮ, ಪ್ರತಿ ಭಾಷಾ ಸಮುದಾಯಗಳಲ್ಲಿ ಸಾಮಾಜಿಕ ಒಳನುಡಿಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ, ಆಯಾ ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೊರ್ಪಡಿಸುತ್ತದೆ ಉದಾ.ಗೆ ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು. ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಜನಾಂಗಗಳAತಹ ಇನ್ನಿತರ ಸಾಮಾಜಿಕ ಮಾನದಂಡಗಳು ಕಾರಣವಾಗುತ್ತಿವೆ.

• ಮತ್ತೊಂದು ನೆಲೆಯಲ್ಲಿ ಈ ಒಳನುಡಿಗಳನ್ನು ನಿರ್ಧರಿಸುವ ಮಾನದಂಡಗಳನ್ನು ಈ ಕೆಳಗಿನಂತೆ ಗುರುತಿಸಬಹುದು;

ನೆಲಸುವಿಕೆಯ ಪ್ರಕಾರಗಳು (ಸೆಟಲ್‌ಮೆಂಟ್ ಟೈಪ್ಸ್)
• ವಲಸೆ (ಮೈಗ್ರೇಶನ್)
• ನುಡಿ ಒಡನಾಟ (ಲ್ಯಾಂಗ್ವೇಜ್ ಕಾಂಟ್ಯಾಕ್ಟ್)
• ಸಾಮಾಜಿಕ – ಆರ್ಥಿಕ ಸನ್ನಿವೇಶ (ಇಕಾಲಜಿ)
• ಕರ್ನಾಟಕದಲ್ಲಿ ಮುಖ್ಯವಾಗಿ

ಗುರುತಿಸಬಹುದಾದ ಸಾಮಾಜಿಕ ಒಳನುಡಿಗಳು; ಉದಾ.ಗೆ ಗೌಡ, ಹಾಲಕ್ಕಿ, ಹವ್ಯಕ, ಕೋಟ, ಕುಂಬಾರ, ಲಿಂಗಾಯತ, ಬ್ರಾಹ್ಮಣ, ಹರಿಜನ ಕನ್ನಡ ಮುಂತಾದವುಗಳನ್ನು ಗುರುತಿಸಬಹುದ

5. ಸಾಂದರ್ಭಿಕ (ಒಳ)ನುಡಿಗಳು

• ವಿಶೇಷ ತಿಳುವಳಿಕೆಯನ್ನು ಒಂದು ಮೊತ್ತವಾಗಿ ಸೂಚಿಸುವ ಪರಿಕಲ್ಪನೆಗಳನ್ನು ಸಾಂದರ್ಭಿಕ ನುಡಿಗಳೆಂದು ಹೇಳಬಹುದು.

• ಬಡಿಗಾರಿಕೆ, ಕಮ್ಮಾರಿಕೆ, ಮೀನುಗಾರಿಕೆ, ನೇಕಾರಿಕೆ, ವ್ಯವಸಾಯ, ಬೇಟೆಗಾರಿಕೆ, ಶಿಕ್ಷಣ, ಸಾಂಸ್ಕೃತಿಕ ಚಳಕಗಳು, ವಾಣಿಜ್ಯ, ವಿಜ್ಞಾನ ಮುಂತಾದವುಗಳನ್ನು ಸಾಂದರ್ಭಿಕ ಒಳನುಡಿಗೆ ಉದಾಹರಣೆಗಳನ್ನಾಗಿ ಉಲ್ಲೇಖಿಸಬಹುದು.

ಒಳನುಡಿಗಳ ಅಧ್ಯಯನದ ಪ್ರಯೋಜನವನ್ನು ಹಲವು ಬಗೆಯಲ್ಲಿ ವಿವರಿಸಬಹುದು. ಈ ಕುರಿತು ಮುಂದಿನ ಅಂಕಣದಲ್ಲಿ ವಿವರವಾಗಿ ಬರೆಯುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

Published

on

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.

ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು

ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.

ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.

ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.

ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ

ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.

ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.

ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”

ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending