Connect with us

ಬಹಿರಂಗ

ನಮ್ಮ ನಡುವಿನ ಮನು ನಮ್ಮೊಳಗಿನ ಸ್ಮೃತಿ

Published

on

ಈ ಲೇಖನ ಬೇರೊಂದು ಸಂದರ್ಭದಲ್ಲಿ ಬರೆದದ್ದು, ಎರಡು ತಿಂಗಳ ಹಿಂದೆ, ಇವತ್ತಿನ ಸಂದರ್ಭಕ್ಕೂ ಅನ್ವಯಿಸುತ್ತದೆ. ಹಾಗಾಗಿ ಮತ್ತೊಮ್ಮೆ ಓದುಗರ ಮುಂದೆ.

  • ನಾ ದಿವಾಕರ

ಭಾರತ ಮತ್ತೊಮ್ಮೆ ವಿಕೃತಿಯೆಡೆಗೆ ಹೊರಳುತ್ತಿರುವಂತಿದೆ. ಮನುಕುಲದ ಅಸ್ತಿತ್ವವನ್ನೇ ಇಲ್ಲವಾಗಿಸುವ ಯುದ್ಧಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಮನಸುಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಮಾನವ ಸಮಾಜದಲ್ಲಿ ಸಹಜೀವನವನ್ನು ಗಟ್ಟಿಗೊಳಿಸುವ ಪ್ರೀತಿ ಪ್ರೇಮ ಬಾಂಧವ್ಯಗಳನ್ನು ಯುದ್ಧ ಎಂದು ಬಣ್ಣಿಸಲಾಗುತ್ತಿದೆ.

ಪ್ರೀತಿ ಎನ್ನುವುದು ಒಂದು ರೀತಿಯಲ್ಲಿ ಯುದ್ಧವೇ ಸರಿ ಆದರೆ ಜೀವಕಂಟಕ ಯುದ್ಧವಲ್ಲ, ಎರಡು ಜೀವಗಳನ್ನು ಬೆಸೆಯುವ ಯುದ್ಧ. ಎರಡು ಹೃದಯ ಸಾಮ್ರಾಜ್ಯಗಳ ನಡುವೆ ನಡೆಯುವ ಯುದ್ಧದಲ್ಲಿ ಅಂತಿಮವಾಗಿ ಗೆಲ್ಲುವುದು ಮಾನವನ ಆಂತರ್ಯದಲ್ಲಿರುವ ಸಂವೇದನೆ, ಸಹನೆ ಮತ್ತು ಮಾನವೀಯತೆ. ಈ ಮೂರು ಮೌಲ್ಯಗಳು ಇಲ್ಲದಾದಾಗ ಇದು ಜಿಹಾದ್‍ನಂತೆ (ಧರ್ಮಯುದ್ಧ) ಕಾಣುತ್ತದೆ. ಭಾರತದಲ್ಲಿ ಆಗುತ್ತಿರುವುದೂ ಇದೇ.

20ನೆಯ ಶತಮಾನ ಇಡೀ ಮನುಕುಲಕ್ಕೆ ಸಂವೇದನೆಯನ್ನು ಕಲಿಸಬೇಕಿತ್ತು. ಏಕೆಂದರೆ ಇದು ಆಧುನಿಕ ಜಗತ್ತಿನ ಕನ್ನಡಿಯಂತೆ. ಒಂದು ಶತಮಾನದ ಅವಧಿಯಲ್ಲಿ ಮಾನವ ಸಮಾಜ ಕಂಡ ಸಾವು, ನೋವು, ಹಿಂಸೆ, ಕ್ರೌರ್ಯ, ದೌರ್ಜನ್ಯ ಮತ್ತು ವಿನಾಶಕಾರಿ ಬೆಳವಣಿಗೆಗಳು ನಮ್ಮಲ್ಲಿ, ಅಂದರೆ ಮಾನವ ಸಮಾಜದಲ್ಲಿ, ಮಾನವ ಪ್ರೀತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸಬೇಕಿತ್ತು. ಭೀಕರ ಯುದ್ಧದ ನಡುವೆಯೂ ಪ್ರೀತಿಯನ್ನು ಹುಡುಕುವ ಹೃದಯಗಳು ಆಗಲೂ ಇದ್ದವು. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ, ಹಿಟ್ಲರನ ಕ್ರೌರ್ಯದ ನಡುವೆ, ತೈಲ ಮಾರುಕಟ್ಟೆಗಾಗಿ ನಡೆದ ವಿಧ್ವಂಸಕ ಸಮರಗಳಲ್ಲಿ, ಸಾಮ್ರಾಜ್ಯಶಾಹಿ ಬೆಳೆಸಿದ ಭಯೋತ್ಪಾದನೆಯಲ್ಲಿ, ಮತಧರ್ಮಗಳು ಬೆಳೆಸಿದ ಮತಾಂಧತೆಯಲ್ಲಿ ಪ್ರೀತಿಯನ್ನು ಹೆಕ್ಕಿ ತೆಗೆಯುವ ಪ್ರಯತ್ನಗಳೂ ನಡೆದೇ ಇದ್ದವು.

ಆದರೆ ಕೊನೆಯಲ್ಲಿ ಗೆದ್ದಿದ್ದು ಹಿಂಸೆಯೇ, ವಿಕ್ರಮ ಸಾಧಿಸಿದ್ದು ಯುದ್ಧಪರಂಪರೆಯೇ. ಪ್ರೀತಿಸಲು ಕಾರಣ ಬೇಕಿಲ್ಲ ಎರಡು ಹೃದಯಗಳು ಸ್ಪಂದಿಸಿದರೆ ಪ್ರೀತಿ ಹುಟ್ಟುತ್ತದೆ, ಎರಡೂ ಹೃದಯಗಳನ್ನು ಸಾಯಲು ಬಿಡದೆ ಕಾಪಾಡುತ್ತದೆ. ಆದರೆ ಯುದ್ಧ ಮಾಡಲು ಕಾರಣ ಬೇಕು. ನಿಮಿತ್ತ ಬೇಕು. ಅದು ಭೌಗೋಳಿಕ ಹಸಿವು, ಸಂಪತ್ತಿನ ಮೋಹ, ಅಧಿಪತ್ಯದ ಹಪಹಪಿ, ಶ್ರೇಷ್ಠತೆಯ ಪಾರಮ್ಯ, ದಿಗ್ವಿಜಯದ ಅಹಮಿಕೆ ಹೀಗೆ ಹಲವು ಕಾರಣಗಳು ಇಲ್ಲದೆ ಯುದ್ಧ ಸಂಭವಿಸುವುದಿಲ್ಲ.

ಈ ಕಾರಣಗಳನ್ನು ನಾವು ಇಸ್ಲಾಂ ಹೆಸರಿನಲ್ಲಿ ಸಾವಿರಾರು ಕೊಲೆ ಮಾಡಿರುವ ಭಯೋತ್ಪಾದಕರಲ್ಲಿ, ಹಿಂದುತ್ವದ ಹೆಸರಿನಲ್ಲಿ ಸಾವಿರಾರು ಶವಯಾತ್ರೆಗಳನ್ನು ಸಂಭ್ರಮಿಸಿರುವ ಮತಾಂಧರಲ್ಲಿ, ಜಾತಿ ಶ್ರೇಷ್ಠತೆಗಾಗಿ ನೂರಾರು ಜೀವಗಳನ್ನು ದಹಿಸಿ ವಿಕೃತಿ ಮೆರೆದಿರುವ ಮೇಲ್ಜಾತಿಗಳಲ್ಲಿ ಮತ್ತು ವರ್ಣಬೇಧ ನೀತಿಯನ್ನು ಸಂರಕ್ಷಿಸಲು ಪಣತೊಟ್ಟಿರುವ ಮನಸುಗಳಲ್ಲಿ ಕಾಣಲು ಸಾಧ್ಯ. 21ನೆಯ ಶತಮಾನದ ಆಧುನಿಕ ಭಾರತ, ಸಾವಿರಾರು ವರ್ಷಗಳ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಭಾರತ ಈ ವಿಕೃತಿಯಿಂದ ಹೊರಬರಬೇಕಿತ್ತು. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಕಾಣಲಾಗದಷ್ಟು ಸಮಾಜ ಸುಧಾರಣೆಯ ಪ್ರಯತ್ನಗಳು ಇಲ್ಲಿ ನಡೆದಿವೆ. ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಇದನ್ನು ಕಂಡಿದ್ದೇವೆ.

ಆದರೆ ಈ ಮನಸ್ಥಿತಿ ಬದಲಾಗದಿರುವಂತೆ ಈ ದೇಶದ ಸ್ಥಾಪಿತ ಜಾತಿ ವ್ಯವಸ್ಥೆ ಮತ್ತು ಮತಧಾರ್ಮಿಕ ನೆಲೆಗಳು ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಎಚ್ಚರವಹಿಸಿವೆ. ಸಮಾಜ ಸುಧಾರಕರನ್ನು ತನ್ನೊಳಗೆ ಸಮೀಕರಿಸಿಕೊಳ್ಳುವ ಮೂಲಕ ಅಥವಾ ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಅಥವಾ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸದ ನೆಲೆಯಲ್ಲಿ ಯಥಾಸ್ಥಿತಿಯನ್ನು ಸಂರಕ್ಷಿಸುವ ಮೂಲಕ ವಿಕೃತ ಮನಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ.

ಈ ಮನಸ್ಥಿತಿಯನ್ನೇ ಮನುಸ್ಮೃತಿ ಎನ್ನುವ ಪ್ರಾಚೀನ ಸಂಹಿತೆಗಳ ಗ್ರಂಥ ಪ್ರತಿಪಾದಿಸುತ್ತದೆ. ಪ್ರೀತಿಸಬೇಕಾದ ಎರಡು ಹೃದಯಗಳು ಮತಧಾರ್ಮಿಕ ಕಾರಣದಿಂದಲೋ, ಜಾತಿ ಬೇಧದ ಕಾರಣದಿಂದಲೋ ಅಥವಾ ಶ್ರೇಷ್ಠ-ಕನಿಷ್ಠದ ಅಸ್ಮಿತೆಗಳ ಕಾರಣದಿಂದಲೋ, ಪರಿಶುದ್ಧತೆ ಮತ್ತು ಮಾಲಿನ್ಯದ ಕಾರಣದಿಂದಲೋ ಏಕೆ ದೂರವೇ ಇರಬೇಕು, ಹೇಗೆ ದೂರ ಇರಬೇಕು ಮತ್ತು ಒಂದು ವೇಳೆ ಹತ್ತಿರ ಬಂದರೆ ಏನೇನು ಅನಾಹುತಗಳು ಸಂಭವಿಸುತ್ತವೆ ಎಂದು ವ್ಯಾಖ್ಯಾನಿಸುವ ಒಂದು ಕೃತಿ ಮನುಸ್ಮೃತಿ. ಇದಕ್ಕಿಂತಲೂ ಹೆಚ್ಚಿನದಾಗಿ ಏನೂ ಹೇಳದ ಒಂದು ಗ್ರಂಥ. ಆದರೆ ಇದನ್ನು ಹೇಳಲು ಧರ್ಮಶಾಸ್ತ್ರಗಳನ್ನು ಉಲ್ಲೇಖಿಸುವ ಮೂಲಕ ಮೇಲ್ಜಾತಿಗಳಲ್ಲಿ ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಒಂದು ಗ್ರಂಥ.

ಮನುಸ್ಮೃತಿಯ ಅನುಸರಣೆಗೆ ದೊರೆಯುವ ಮಾನ್ಯತೆ, ಈ ಗ್ರಂಥವನ್ನು ಧಿಕ್ಕರಿಸುವ ಧೋರಣೆಗೆ ದೊರೆಯುವುದಿಲ್ಲ ಎನ್ನುವುದೇ ಭಾರತೀಯ ಸಮಾಜದ ದೌರ್ಬಲ್ಯ . ಏಕೆ ಹೀಗೆ ? ಏಕೆಂದರೆ ನಾವು ಮನುಸ್ಮೃತಿ ಎನ್ನುವ ಗ್ರಂಥವನ್ನು ಮಾತ್ರ ಸುಟ್ಟಿದ್ದೇವೆ, ಈ ಗ್ರಂಥ ನಮ್ಮ ಸಾಮಾಜಿಕ ವಲಯದಲ್ಲಿ, ಸಾಂಸ್ಥಿಕವಾಗಿ, ವ್ಯಕ್ತಿಗತವಾಗಿ, ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಗಟ್ಟಿಯಾದ ನೆಲೆ ಕಂಡುಕೊಂಡಿದೆ.

ಗ್ರಂಥದ ಅಧ್ಯಯನದ ಅವಶ್ಯಕತೆಯೇ ಇಲ್ಲದೆ,ಮನು ಎಂಬ ಒಬ್ಬ ಸನಾತನಿ ಭಾರತದಲ್ಲಿ ಬ್ರಾಹ್ಮಣ್ಯದ ನೆಲೆಯನ್ನು ಗಟ್ಟಿಗೊಳಿಸಲು ರೂಪಿಸಿದ ಸಂಹಿತೆಗಳನ್ನು ಚಾಚೂತಪ್ಪದಂತೆ ಪಾಲಿಸಿಕೊಂಡು ಬರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಇದೆ. ಒಂದು ಸಮಾಜೋ ಸಾಂಸ್ಕೃತಿಕ ಪರಂಪರೆ ವ್ಯವಸ್ಥೆಯಾಗಿ ರೂಪುಗೊಂಡು, ಇಡೀ ಭೌಗೋಳಿಕ ಪ್ರದೇಶದ ಜನತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನಲು ಇದೊಂದು ನಿದರ್ಶನ.

ಹಾಗಾಗಿಯೇ ಟಿ ವಿ ವಾಹಿನಿಯಲ್ಲಿ ಬರುವ ಒಂದು ಕಾರ್ಯಕ್ರಮದಲ್ಲಿ ಮನುಸ್ಮೃತಿಯ ದಹನದ ಪ್ರಶ್ನೆ ಕೇಳಿಬಂದರೆ ಈ ಸಮಾಜೋ ಸಾಂಸ್ಕೃತಿಕ ವ್ಯವಸ್ಥೆ ಸಿಡಿದೇಳುತ್ತದೆ. ಕೌನ್ ಬನೇಗ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಪ್ರಶ್ನೋತ್ತರದ ಒಂದು ಭಾಗವಾಗಿ ಮೂಡಿಬಂದಿದೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅಂಬೇಡ್ಕರ್ ವಾದಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ಮನುಸ್ಮೃತಿಯನ್ನು ಕುರಿತು ಅವರ ನಿಲುವು ಏನು ಎನ್ನುವುದೂ ಅಸ್ಪಷ್ಟವೇ.

ಆದರೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಂದರೆ ಮನುಸ್ಮೃತಿ ಪ್ರಶ್ನಾತೀತವಾಗಿದೆ ಎಂದರ್ಥ ಅಲ್ಲವೇ ? ಭಾರತದ ಮಧ್ಯಮ ವರ್ಗಗಳಿಗೆ, ದಲಿತರನ್ನೂ ಸೇರಿದಂತೆ ಇದೊಂದು ಕ್ಷುಲ್ಲಕ ಘಟನೆಯಾಗಿ ಮರೆಯಾಗಿಬಿಡುತ್ತದೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿರುವ ಸಾಂಸ್ಕೃತಿಕ ರಾಜಕಾರಣಕ್ಕೆ ಇದು ಮತ್ತೊಂದು ರಸ್ತೆ ವಿಭಜಕವಾಗಿ ಜನರನ್ನು ಕವಲುಹಾದಿಗಳಲ್ಲಿ ನಿಲ್ಲಿಸಲು ಸಹಾಯಕವಾಗುತ್ತದೆ.

ಆದರೆ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಈ ಪ್ರಶ್ನೆ ಇನ್ನೂ ಬಹಳ ವರ್ಷಗಳ ಕಾಲ ಕೇಳಿಬರುತ್ತಲೇ ಇರುತ್ತದೆ. ಮನುಸ್ಮೃತಿ ಏಕೆ ಪ್ರಶ್ನಾತೀತವಾಗಿರಬೇಕು ? “ ಡಾ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸಲು ಕಾರಣವೇನು ” ಎಂಬ ವಿಚಾರದ ಬಗ್ಗೆ ಈ ದೇಶದ ಎಷ್ಟು ಶಾಲೆಗಳಲ್ಲಿ ಪ್ರಬಂಧ ಅಥವಾ ಚರ್ಚಾಸ್ಪರ್ಧೆ ಆಯೋಜಿಸಲು ಸಾಧ್ಯ ? ಈ ಪ್ರಶ್ನೆಯೇ ಎಷ್ಟು ಚರ್ಚಾಸ್ಪದವಾಗಬಹುದು.

ಯೋಚಿಸೋಣ. ಡಾ ಬಿ ಆರ್ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸುವ ಮೂಲಕ, ಆ ಗ್ರಂಥ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡಿದ್ದರು. ಹಾಗೆಯೇ “ ನಾವು ಇಂದು ಕೇವಲ ಗ್ರಂಥವನ್ನು ಸುಡುತ್ತಿದ್ದೇವೆ ಮುಂದೊಂದು ದಿನ ಈ ಗ್ರಂಥದಲ್ಲಿನ ಜಾತಿ ಶ್ರೇಷ್ಠತೆಯ ವಿಕೃತ ಚಿಂತನೆಗಳನ್ನೂ ಹೀಗೆಯೇ ದಹಿಸುತ್ತೇವೆ ” ಎಂದು ಈ ದೇಶದ ಜಾತಿ ವ್ಯವಸ್ಥೆಯ ವಾರಸುದಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದರು.

ಅವರ ಮೊದಲನೆಯ ಸಂದೇಶವನ್ನು ಈಗಲೂ ಭಾರತದ ಜಾತಿಪೀಡಿತ ಮನಸುಗಳು, ಶ್ರೇಷ್ಠತೆಯ ಪ್ರತಿಪಾದಕ ಸಮುದಾಯಗಳು ಪಠಿಸುತ್ತಿವೆ. ಆದರೆ ಎರಡನೆಯ ಸಂದೇಶ ಬಹುಶಃ ನೇಪಥ್ಯಕ್ಕೆ ಸರಿದಿದೆ. ಏಕೆಂದರೆ ಮನುಸ್ಮೃತಿ ಮತಧರ್ಮದ ಹೆಸರಿನಲ್ಲಿ ಆಚರಣಾತ್ಮಕವಾಗಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನವ ಬ್ರಾಹ್ಮಣ್ಯ ಎಲ್ಲ ಜಾತಿಗಳಲ್ಲೂ ಆವರಿಸಿದೆ.

ಜಾತಿ ಶ್ರೇಣೀಕರಣ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಇದನ್ನು ಸಂರಕ್ಷಿಸುವ ಮೂಲಕವೇ ಜಾತಿಗಳ ಮೂಲಕ ಜನಸಾಮಾನ್ಯರನ್ನು ವಿಭಜಿಸುತ್ತಾ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಉಳಿಸಿಕೊಂಡು ಹೋಗುವ ಮನುಸ್ಮೃತಿಯ ಧ್ಯೇಯ ಸಾಧಿಸಲು ಸಂಘಪರಿವಾರ ತನ್ನದೇ ಆದ ವ್ಯೂಹ ರಚಿಸಿರುವುದನ್ನು ಹಿಂದುತ್ವ ರಾಜಕಾರಣದಲ್ಲಿ ನಾವು ಕಾಣಬೇಕಲ್ಲವೇ ? ರಾಮಮಂದಿರ ಮತ್ತು ಕಾಶ್ಮೀರ ಈ ವ್ಯೂಹದ ಎರಡು ಧೃವಗಳು ಎನ್ನುವುದನ್ನು ಹಿಂದುತ್ವದೊಡನೆ ಗುರುತಿಸಿಕೊಂಡಿರುವ ಅಂಬೇಡ್ಕರ್ ಅನುಯಾಯಿಗಳಿಗೆ ಅರ್ಥವಾಗಬೇಕಲ್ಲವೇ ?

ಕಂಬಾಲಪಲ್ಲಿಯಿಂದ ಹಥ್ರಾಸ್‍ವರೆಗಿನ ಬೆಳವಣಿಗೆಗಳನ್ನು ಖೈರ್ಲಾಂಜಿಯ ಮೂಲಕ ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಸುಳಿಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. 20 ವರ್ಷಗಳ ಹಿಂದೆ, ಗತ ಶತಮಾನದ ಕೊನೆಯ ವರ್ಷದಲ್ಲಿ, ಕಂಬಾಲಪಲ್ಲಿಯಲ್ಲಿ ಒಂದು ದಲಿತ ಕುಟುಂಬದ ಸಜೀವ ದಹನವಾಗಿತ್ತು. ಏಳು ಜೀವಗಳು ಸುಟ್ಟುಹೋಗಿದ್ದವು.

ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ದಲಿತ ಅಸ್ಮಿತೆ ಮತ್ತು ಜಾತಿ ಶ್ರೇಷ್ಠತೆಯ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆರು ವರ್ಷಗಳ ನಂತರ 2006ರಲ್ಲಿ ಖೈರ್ಲಾಂಜಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಾರ್ವಜನಿಕವಾಗಿಯೇ ಸಂಭವಿಸಿತ್ತು. ದಲಿತ ಹೆಣ್ಣುಮಕ್ಕಳ ಸಾರ್ವಜನಿಕ ಬೆತ್ತಲೆ ಮೆರವಣಿಗೆ ಮತ್ತು ಕೊಲೆ ಸದ್ದಿಲ್ಲದೆ ಅಡಗಿಹೋಯಿತು. 2020ರಲ್ಲಿ ಹಥ್ರಾಸ್‍ನಲ್ಲಿ ಒಂದು ಹೆಣ್ಣು ಮಗು ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾಗಿ ಅಸುನೀಗಿದಳು. ಆಕೆಯ ಶವವನ್ನು ಸದ್ದಿಲ್ಲದೆ ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲೇ ದಹಿಸಲಾಯಿತು.

ಕಂಬಾಲಪಲ್ಲಿಗೂ ಹಥ್ರಾಸ್‍ಗೂ ಇರುವ ವ್ಯತ್ಯಾಸವಾದರೂ ಏನು ? ಸುಟ್ಟವರು ಯಾರು ಎಂಬುದಷ್ಟೇ. ಎರಡೂ ಪ್ರಕರಣಗಳಲ್ಲಿ ಮತ್ತು ಖೈರ್ಲಾಂಜಿಯಲ್ಲೂ ಸಹ ದೌರ್ಜನ್ಯಕ್ಕೆ ಕಾರಣವಾಗಿದ್ದು ಮನುಸ್ಮೃತಿಯಲ್ಲಿ ಹೇಳಲಾಗುವ ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಪ್ರಾಬಲ್ಯ . ಮನು ಅಪರಾಧಗಳನ್ನು ಶ್ರೇಣೀಕರಣಗೊಳಿಸುವಂತೆಯೇ ಅಪರಾಧಿಗಳನ್ನೂ ಶ್ರೇಣೀಕರಣಗೊಳಿಸುತ್ತಾನೆ.

ಮನುಷ್ಯನ ಹುಟ್ಟು ಅವನ ಅಪರಾಧಿ ಸ್ಥಾನವನ್ನೂ ನಿರ್ಧರಿಸುತ್ತದೆ. ಮನುಸ್ಮೃತಿಯನ್ನು ರಚಿಸಿದ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಇನ್ನೂ ನಾಗರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರಲಿಲ್ಲ ಎಂದು ಹೇಳಬಹುದಾದರೆ, ಇಂದಿನ ಪರಿಸ್ಥಿತಿಯಲ್ಲಿ ಏನು ಹೇಳಬಹುದು ? ಹಥ್ರಾಸ್ ಘಟನೆಯಲ್ಲೂ ಇದೇ ಅನಾಗರಿಕ ಪ್ರಜ್ಞೆ ಅನಾವರಣವಾಗಿರುವುದನ್ನು ಕಂಡಿದ್ದೇವೆ ಅಲ್ಲವೇ ?

ಈ ಮೂರೂ ಘಟನೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ನಿಶ್ಚಿತ. ಎರಡು ಘಟನೆಗಳನ್ನು ನಾವು ಮರೆತಿದ್ದೇವೆ. ನಡುವೆ ಊನ ಗ್ರಾಮದಲ್ಲಿ ನಡೆದ ಘಟನೆಯನ್ನು ಒಂದು ಸಿನೆಮಾದ ಚಿತ್ರೀಕರಣದಂತೆ ನೇಪಥ್ಯಕ್ಕೆ ಸರಿಸಿಬಿಟ್ಟಿದ್ದೇವೆ. ಹಥ್ರಾಸ್ ಸಹ ಮೆಲ್ಲನೆ ಬದಿಗೆ ಸರಿದುಬಿಡುತ್ತದೆ. ಇಷ್ಟರ ನಡುವೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಒಂದು ಸಂದೇಶ ಮನುಸ್ಮೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಂತಿದೆ.

ಅಸ್ಪೃಶ್ಯ ಸಮುದಾಯಗಳು, ದಲಿತರು ನಾಲ್ಕು ಗೋಡೆಗಳ ನಡುವೆ ಅನುಭವಿಸುವ ಜಾತಿ ನಿಂದನೆಯ ಅಪಮಾನಗಳು ಎಸ್‍ಸಿ/ಎಸ್‍ಟಿ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವುದನ್ನು ಗಮನಿಸಿದರೆ ಈ ದೇಶ ಸಂವಿಧಾನಕ್ಕಿಂತಲೂ ಹೆಚ್ಚು ಮನುಸ್ಮೃತಿಯನ್ನೇ ಅನುಸರಿಸುತ್ತಿದೆ ಎಂಬ ಶಂಕೆ ಕಾಡುತ್ತದೆ.

ಖೈರ್ಲಾಂಜಿ, ಕಂಪಾಲಪಲ್ಲಿ ಘಟನೆಗಳು “ಖುಲೇ ಆಕಾಶ್ ಕೆ ನೀಚೆ” ಎಂದು ಹಿಂದಿಯಲ್ಲಿ ಹೇಳುವಂತೆ ಎಲ್ಲರ ಕಣ್ಣೆದುರಿನಲ್ಲೇ ನಡೆಯಿತಲ್ಲವೇ ? ಅಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿತೇ ? ಈ ದೇಶದ ಅಸ್ಪೃಶ್ಯ ಸಮುದಾಯದ ಅಮಾಯಕರು ನಾಲ್ಕು ಗೋಡೆಗಳ ನಡುವೆ ದೌರ್ಜನ್ಯ ಅಪಮಾನಗಳನ್ನು ಮೌನವಾಗಿ ಸಹಿಸುತ್ತಲೇ ಬಂದಿದ್ದಾರೆ.

ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ, ವಿದ್ಯಾಸಂಸ್ಥೆಗಳಲ್ಲೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ, ಬೌದ್ಧಿಕವಾಗಿ ಇದು ನಡೆಯುತ್ತಲೇ ಇರುತ್ತದೆ. ಅಪಮಾನ ಅಥವಾ ಮಾನಸಿಕ ಚಿತ್ರಹಿಂಸೆ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಒಂದು ನೊಂದ, ದಮನಿತ ಮನಸು ಅನುಭವಿಸುವ ಯಾತನೆಯೇ ಹೊರತು, ಸಾರ್ವಜನಿಕವಾಗಿ ನಿರ್ವಚಿಸಬಹುದಾದ ವಿದ್ಯಮಾನವಲ್ಲ. ನ್ಯಾಯ ವಿತರಣಾ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನು ಅವಲಂಬಿಸುವುದರಿಂದ ಈ ಸೂಕ್ಷ್ಮ ಅರ್ಥವಾಗದಿರಬಹುದು. ಆದರೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅರ್ಥವಾಗಬೇಕಲ್ಲವೇ ?

ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅಸ್ಪೃಶ್ಯ ಸಮುದಾಯವನ್ನು, ಶೋಷಿತರನ್ನು ಮತ್ತು ದಲಿತರನ್ನು ಪ್ರತಿನಿಧಿಸುವ ದೇಹಗಳು ಹೇರಳವಾಗಿವೆ. ಮನಸುಗಳು ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಏಕೆಂದರೆ ಅಧಿಕಾರ ಕೇಂದ್ರಗಳು ಈ ಮನಸುಗಳಲ್ಲಿ ಮನುಸ್ಮೃತಿಯ ಚಿಂತನೆಗಳನ್ನೇ ಬಿತ್ತುತ್ತವೆ. ಮನುಸ್ಮೃತಿ ಕೇವಲ ಒಂದು ಮತಧಾರ್ಮಿಕ ಸಂಹಿತೆಯಲ್ಲ.

ಅಧಿಕಾರ ರಾಜಕಾರಣದ ಒಂದು ನೀತಿ ಸಂಹಿತೆಯೂ ಹೌದು. ಇದು ಕಳೆದ 20-30 ವರ್ಷಗಳ ರಾಜಕಾರಣದಲ್ಲಿ, ವಿಶೇಷವಾಗಿ ಹಿಂದುತ್ವ ರಾಜಕಾರಣ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್‍ನ ತೀರ್ಪು, ಹಥ್ರಾಸ್ ಘಟನೆಯ ಬಗ್ಗೆ ಶೋಷಿತ ಸಮುದಾಯಗಳ ಮೌನ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವವರ ಜಾಣ ಕುರುಡು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.

ಮನುಸ್ಮೃತಿ ಇಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ತೋರುತ್ತದೆ. ಅಪರಾಧದ ಶ್ರೇಣೀಕರಣ ಮತ್ತು ಅಪರಾಧಿಗಳ ಶ್ರೇಣೀಕರಣವನ್ನೂ ಸಹ ಮನುಸ್ಮೃತಿಯ ನೆಲೆಯಲ್ಲೇ ಇಂದಿನ ಆಡಳಿತ ವ್ಯವಸ್ಥೆ ನಿರೂಪಿಸುತ್ತಿದೆ. ನಾವು ಮತಧಾರ್ಮಿಕ ಅಸ್ಮಿತೆ, ಜಾತಿ ಅಸ್ಮಿತೆ ಮತ್ತು ರಾಜಕೀಯ ನಿಷ್ಠೆಯ ಹೆಸರಿನಲ್ಲಿ ಇದನ್ನು ಗಮನಿಸುತ್ತಿಲ್ಲ.

ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಗೌತಮ್ ನವಲಖಾ, ವರಾವರರಾವ್, ಪ್ರೊ. ಸಾಯಿಬಾಬಾ ಇವರೆಲ್ಲರನ್ನೂ ಒಂದೆಡೆ ನಿಲ್ಲಿಸಿ ಅರ್ನಾಬ್ ಗೋಸ್ವಾಮಿಯನ್ನು ಮುಖಾಮುಖಿಯಾಗಿಸಿದಾಗ ನಮಗೆ ಮನುಸ್ಮೃತಿಯ ಶ್ರೇಣೀಕೃತ ವ್ಯವಸ್ಥೆಯ ವಿಕೃತ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತದೆ. ನವ ಬ್ರಾಹ್ಮಣ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಆಳವಾಗಿ ಬೇರೂರಿರುವಂತೆಯೇ ಆಡಳಿತ ವ್ಯವಸ್ಥೆಯಲ್ಲೂ ಬೇರೂರಿರುವುದನ್ನು ಈಗಲೂ ಗಮನಿಸದೆ ಹೋದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಡಾ ಅಂಬೇಡ್ಕರ್ ಮನುಸ್ಮೃತಿಯ ಮುದ್ರಿತ ಅಕ್ಷರಗಳನ್ನು ಸುಟ್ಟುಹಾಕುವ ಮೂಲಕ ತಮ್ಮ ಹಾಗೂ ತಾವು ಪ್ರತಿನಿಧಿಸುವ ಶೋಷಿತ ಸಮುದಾಯದ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ಶತಮಾನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸುಡಬೇಕಿರುವುದು ನಮ್ಮ ಮನಸಿನಲ್ಲಿ ಬೇರೂರಿರುವ ಆ ಸ್ಮೃತಿಯ ಬೇರುಗಳನ್ನು ,ಪಳೆಯುಳಿಕೆಗಳನ್ನು. ಸುಶಿಕ್ಷಿತ, ಆಧುನಿಕ, ಪಾಶ್ಚಾತ್ಯ ಚಿಂತನೆ ಮತ್ತು ದೇಸಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಮಧ್ಯಮ ವರ್ಗಗಳಲ್ಲಿ, ಹಿತವಲಯದ “ನಾಗರಿಕ ಪ್ರಜೆಗಳಲ್ಲಿ”, ಇವರ ಪ್ರಜ್ಞೆಯಲ್ಲಿ ಬೇರೂರಿರುವ ಮನು ನಿರ್ವಚಿಸಿದ ಸ್ಮೃತಿಯನ್ನು ಸುಡುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸ್ಮೃತಿಯಿಂದ ಹೊರತಾಗಿದ್ದೇವೆ ಎಂದು ಮೇಲ್ನೋಟಕ್ಕೆ ಪ್ರದರ್ಶಿಸಿಕೊಳ್ಳುತ್ತಲೇ ಮನುಸ್ಮೃತಿಯ ಆರಾಧಕರೊಡನೆ ಗುರುತಿಸಿಕೊಂಡಿರುವವರೂ ಇದನ್ನು ತಮ್ಮ ಆದ್ಯತೆ ಎಂದೇ ಪರಿಗಣಿಸಬೇಕಿದೆ.

ಇಲ್ಲವಾದಲ್ಲಿ ಇಂದು ಮದುವೆಯಾಗಲು ಮತಾಂತರ ನಿಷಿದ್ಧ ಎನ್ನುವ ವ್ಯವಸ್ಥೆ ನಾಳೆ ಜಾತಿ ದೌರ್ಜನ್ಯದಿಂದ ಬೇಸತ್ತು ಮತಾಂತರವಾಗುವುದನ್ನೂ ನಿಷೇಧಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳಂತೆಯೇ ಅಂತರ್ ಜಾತಿ ವಿವಾಹಗಳೂ ಸಹ ಮಸಣದಲ್ಲಿ ನ್ಯಾಯ ಕೇಳಬೇಕಾದ ವಿದ್ಯಮಾನಗಳಾಗಿಬಿಡುತ್ತವೆ. ನಾವು ಗ್ರಂಥದತ್ತ ನೋಡುತ್ತಿದ್ದೇವೆ ಅವರು ಸ್ಮೃತಿಯನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇದು ಯೋಚಿಸಬೇಕಾದ ವಿಚಾರವಲ್ಲವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending