Connect with us

ಸಿನಿ ಸುದ್ದಿ

ಭೀಮ ಪರಂಬರೈ ಹಾಗೂ ಕಬಿಲನ್ ರಂಜಿತ್..!

Published

on

  • ಬಸವರಾಜು ಕಹಳೆ

Float like a butterfly, sting like a bee”
Muhammad Ali

ಗಾಯಗೊಂಡಿದ್ದು ನಿನ್ನ ಮೈಯಷ್ಟೇ, ನಿನ್ನ ಮನಸ್ಸಲ್ಲ.”

ಇಲ್ಲಿ ನಮ್ಮಂಥವರಿಗೆ ಅವಕಾಶ ಸುಲಭವಾಗಿ ಬರುವುದಿಲ್ಲ. ಈ ಆಟ ನಮ್ಮದು. ಎದುರು ಬರುವವನ ಚಡ್ಡಿ ಒದ್ದೆಯಾಗಬೇಕು. ಮುನ್ನುಗು ಕಬಿಲನ್ ಈ ಕಾಲ ನಮ್ಮದು”
ಇಂಥದ್ದೊಂದು ಡೈಲಾಗ್ ಕಿವಿಗೆ ಬೀಳುತ್ತಿರುವಾಗಲೇ ಸೀನ್ ಮಧ್ಯೆ ಬಾಬಾ ಸಾಹೇಬರ ಭಾವಚಿತ್ರ ಎದ್ದು ಕಾಣುತ್ತದೆ. ಹೀಗೆ ಸಿನಿಮಾದ ಉದ್ಧಕ್ಕೂ ಆಗೊಮ್ಮೆ ಈಗೊಮ್ಮೆ ಬುದ್ಧ, ಭೀಮರು ಎದ್ದು ಕಾಣುತ್ತಾರೆ.

ಕೊಳಗೇರಿಯ ಗುಡಿಸಲುಗಳ ಮಧ್ಯೆ ಬುದ್ಧನ ವಿಗ್ರಹದ ಪಕ್ಕದಲ್ಲೇ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವ ಸನ್ನಿವೇಶ ವಿಶಿಷ್ಟ ಪ್ರತಿಮೆಯಂತೆ ಕಾಣುತ್ತದೆ. ನವ ವಧು ವರರ ಕೈಗೆ ಉಡುಗೊರೆಯಾಗಿ ಬುದ್ಧ, ಭೀಮರ ಫೋಟೋ ಕೊಡುವ ದೃಶ್ಯ ಎದೆಗೂಡಲ್ಲಿ ಸರಪಟಾಕಿ ಹಚ್ಚುತ್ತದೆ. ದ್ರಾವಿಡ ಸ್ವಾಭಿಮಾನದ ಕಪ್ಪು ಪತಾಕೆಯನ್ನು ಬಿಳಿ ಮುಗಿಲಿನಲ್ಲಿ ಹಾರಿಸಿದ ಪೆರಿಯಾರ್ ಕಂಡಾಗಲೂ ಹುಚ್ಚೆದ್ದು ಕುಣಿಯುವ ಉತ್ಸಾಹ ಮೂಡುತ್ತದೆ

ಅಣ್ಣ ಪಾ.ರಂಜಿತ್ ಸಿನಿಮಾ ಅನ್ನೋ ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿಗೆ ತಿಕ ಮಕ ನೋಡದೇ ಯಕ್ಕಾಮಕ್ಕಾ ಗುದ್ದಿ ಕೆಡವಿ ಭೀಮ ಪರಂಪರೆಯ ತಾಕತ್ತು ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ. ಸರ್ಪಟ್ಟ ಪರಂಬರೈ ಸಿನಿಮಾ ನನ್ನ ಕಣ್ಣಿಗೆ ಒಂದೇ ಗುಕ್ಕಿನಲ್ಲಿ ಕಾಣಿಸಿದ್ದು ಹೀಗೆ. ಇಲ್ಲಿ ನನಗೆ ಕಂಡಿದ್ದು ಸರ್ಪಟ್ಟ ಅನ್ನೋ ನಾಲ್ಕು ಪಟ್ಟದ ಕತ್ತಿಗಳ ಕಥೆಯಲ್ಲ. ವರ್ಣಾಶ್ರಮದ ನಾಲ್ಕು ವರ್ಗಗಳ ಪೈಕಿ ಕೊನೆಯ ಶೂದ್ರ ಪರಂಪರೆ ಗೆದ್ದ, ಗೆಲ್ಲುತ್ತಿರುವ, ಗೆಲ್ಲಬೇಕಿರುವ ಕಥೆಯಂತೆ ಕಾಣುತ್ತದೆ.

ಕಬಿಲನ್ (ಆರ್ಯ) ನನಗೆ ಬರೀ ಪಾತ್ರದಂತೆ ಕಾಣುವುದಿಲ್ಲ. ಜಾತಕ ಕಥೆಗಳು ಹೇಳುವಂತೆ ಬುದ್ಧನ ಮತ್ತೊಂದು ಅವತಾರವೇ ಆದ ಕಪಿಲನೇ ಕಬಿಲನ್ ಅನಿಸುತ್ತದೆ. ಇಬ್ಬರೂ ನಿರೀಶ್ವರವಾದವನ್ನೇ ಸಾರಿದ್ದವರು. ಸಿನಿಮಾದಲ್ಲಿ ಕಬಿಲನ್ ಸಿದ್ಧಾರ್ಥನಂತೆಯೂ ಕಾಣುತ್ತಾನೆ. ಅಣ್ಣ ಪಾ.ರಂಜಿತ್ ಎಲ್ಲಾ ಸಿನಿಮಾಗೂ ಹಾಡುಗಳನ್ನು ಬರೆದುಕೊಟ್ಟ ಕವಿ ಕಬಿಲನ್ ಪ್ರೇರಣೆಯಿಂದ ಹುಟ್ಟಿದ ವ್ಯಕ್ತಿತ್ವದಂತೆ ಕಾಣುತ್ತದೆ. ಆರ್ಯನನ್ನು ಮೊದಲು ನೋಡಿದ್ದು ಆ್ಯಟ್ಲಿಯ ರಾಜರಾಣಿಯಲ್ಲೇ. ಆ ಬಳಿಕ ಮದರಾಸಿಪಟ್ಟಿನಂ ನೋಡಿದ್ದೇವೆ. ಈ ಎರಡೂ ಸಿನಿಮಾಗಳಿಗಿಂತಲೂ ಕಬಿಲನ್ ಆಗಿ ಜೀವ ತುಂಬುವ ಕೆಲಸ ಮಾಡಿದ್ದಾನೆ ಆರ್ಯ.

ಪಶುಪತಿ ರಂಗನ್ ವಾತಿಯರ್, ಬೀಡಿ ತಾತ, ವೆಂಬುಲಿ, ಡ್ಯಾಡಿ, ಡ್ಯಾನ್ಸಿಂಗ್ ರೋಸಿ ಈ ಎಲ್ಲಾ ಪಾತ್ರಗಳಿಗಿಂತಲೂ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಎರಡೇ ಎರಡು ಪಾತ್ರ. ಆ ಪಾತ್ರಗಳೇ ಮರಿಯಮ್ಮ ಹಾಗೂ ಬಾಕ್ಯಮ್ಮ. ವಿಶೇಷ ಅಂದ್ರೆ 60 ಸೆಕೆಂಡ್ ಕಾಲ ಬಂದು ಹೋಗುವ ನಮ್ಮ ಕನ್ನಡಿಗ ಕಿಶೋರ್​ಗಿಂತಲೂ ಮರಿಯಮ್ಮ ಹಾಗೂ ಭಾಕ್ಯಮ್ಮ ಪಾತ್ರಗಳು ಈ ಸರ್ಪಟ್ಟ ಪರಂಪರೆಯನ್ನು ಎಳೆದೊಯ್ದ ಸ್ವಾಭಿಮಾನದ ಸೀರೆಯುಟ್ಟ ಕುಸ್ತಿ ಪಟು​ಗಳಂತೆ ಕಾಣುತ್ತಾರೆ.

ಒಬ್ಬಳು ಪುಟ್ಟ ಮಗನೊಂದಿಗೆ ಗಂಡನನ್ನು ಉಳಿಸಿಕೊಳ್ಳೋದಕ್ಕೆ ಸಾಹಸಪಡುವ ಹೆಣ್ಣು ಹುಲಿಯಂತೆ ಕಾಣುತ್ತಾಳೆ. ಮತ್ತೊಬ್ಬಳು ಕುಡಿದು ಮಲಗಿದ ಗಂಡನನ್ನು ಕಾಪಾಡೋದಕ್ಕೆ ಹಸುಗೂಸಿನೊಂದಿಗೆ ಬಗೆದು ಹಾಕುವ ಬಾಣಂತಿ ಹುಲಿಯಂತೆ ಗೆಬರುತ್ತಾಳೆ, ಅಬ್ಬರಿಸುತ್ತಾಳೆ. ರಂಜಿತ್ ಅಣ್ಣನ ಸಿನಿಮಾಗಳಲ್ಲಿ ಇಂಥಾ ಪವರ್​​ಫುಲ್ ಪಾತ್ರಗಳು ಪ್ರತೀ ಸಿನಿಮಾದಲ್ಲೂ ನೋಡಬಹುದು. ಕಬಾಲಿಯ ಕುಮುದವಲ್ಲಿ, ಕಾಲಾನ ಸೆಲ್ವಿ, ಜರೀನಾರಿಗಿಂತಲೂ ಪವರ್​ಫುಲ್ ಪಾತ್ರಗಳು ಮರಿಯಮ್ಮ ಹಾಗೂ ಬಾಕ್ಯಮ್ಮ. ಕಮ್ಮನೆಯ ಕಪ್ಪು ಸಂಸ್ಕೃತಿಯ ಸಣ್ಣ ತುಣುಕಿನಂತೆ ದುಷಾರ ವಿಜಯನ್ ಮರಿಯಮ್ಮನಾಗಿ ಕಾಣುತ್ತಾಳೆ.

“ಅವಕಾಶ ನಮಗಾಗಿ ಬರೋದಿಲ್ಲ. ಅವಕಾಶವನ್ನು ನಾವೇ ಹುಡುಕುತ್ತಾ ಹೋಗಬೇಕು. ಅದನ್ನು ಮನಸ್ಸಿನಲ್ಲಿ ಇಟ್ಟುಕೋ ಗೆಲುವು ನಿನ್ನದೇ. ಹೋಗಪ್ಪಾ ಹೋಗು” ಎನ್ನುವಾಗ ಬೀಡಿ ತಾತನ ಎದುರಿಗೆ ನಿಂತ ಕಬಿಲನ್ ಮಧ್ಯೆ ಮಹಾಸಮುದ್ರ ರಣಕೇಕೆ ಹಾಕುತ್ತಿರುತ್ತದೆ. ಕಡುಗತ್ತಲಿನಲ್ಲಿ ಟೈಟಲ್ ಕಾರ್ಡ್​ನಲ್ಲಿ ಓಡುತ್ತಾ ಸಾಗುವ ನೆತ್ತರುಂಡ ಅಕ್ಷರಗಳು. ಅಲ್ಲಲ್ಲಿ ಕತ್ತಲ ಸೀರೆಯುಡಿಸಿ ತೆಗೆದ ಸೀನ್​ಗಳು ಮತ್ತೊಮ್ಮೆ ಸರ್ಪಟ್ಟ ಪರಂಪರೆಯನ್ನು ನೋಡಬೇಕಿನಿಸುತ್ತದೆ.

My films are an extension of my ideology ಎನ್ನುವ ಪಾ. ರಂಜಿತ್ ಆಡಿದ ಮಾತಿನ ಪ್ರತೀ ಅಕ್ಷರ ಒಂದೊಂದು ಸೀನ್​​ನಲ್ಲಿ ಕಾಣುತ್ತದೆ. ಇಲ್ಲಿ ಐಡಿಯಾಲಜಿ ಅನ್ನೋ ದೊಡ್ಡ ಶಬ್ಧ ಅರ್ಥವಾಗದ ಮಂತ್ರದಂತೆ ಕೇಳಿಸೋದೂ ಇಲ್ಲ. ಕಾಣಿಸೋದೂ ಇಲ್ಲ. ಬದಲಿಗೆ ತಮಟೆಯ ಏಟಿನಂತೆ, ಜೇನ್ನೊಣದ ಕುಟುಕಿನಂತೆ ಅನುಭವಿಸಬಹುದು. ಮೊಲದ ಬಾಡು, ದನದ ಬಾಡು ತಿಂದಷ್ಟೇ ಖುಷಿಯಾಗುತ್ತದೆ.

ಬ್ರಿಟಿಷರು ಕಲಿಸಿ ಹೋದ ಬಾಕ್ಸಿಂಗ್ ನಲ್ಲಿ ಹೆಚ್ಚುಗಾರಿಕೆಯ ಪರಂಪರೆಗಾಗಿ ನಡೆಯುವ ಕಾದಾಟದ ಕಥೆ ಎಂದು ಸುಲಭಕ್ಕೆ ಹೇಳಬಹುದಾದ ಸಿನಿಮಾವನ್ನು ಎದೆಗಣ್ಣಿನಿಂದ ನೋಡಬೇಕಷ್ಟೇ. ರಂಗನ್ ವಾತಿಯರ್ ಹೇಳುವಂತೆ, “ನಿಮಗಿಂತ ಗಂಡ್ಸು ಇಲ್ಲಿ ಯಾರೂ ಇಲ್ಲ ಅನ್ನೋದನ್ನ ಸದಾ ತಲೆಯಲ್ಲಿ ಇಟ್ಟುಕೊಂಡಿರಬೇಕು”. ಎಂದಿನಂತೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಕಿಶೋರ್​ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

Published

on

ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.

ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.

ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ನಾಯಕ ನಟನಾಗಿ ​ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇನ್ನು 2022ರಲ್ಲಿ ​ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ​ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಶ್ರಮ ಮತ್ತು ಫಿಟ್ನೆಸ್

ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.

ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್

ಕುಚುಕು ನಾಯಕ ನಟ ಚೌಹಾಣ್

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
​ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ

ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಬಂಜಾರ ಹವೇಲಿಯ ಹರಿಕಾರ

ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.

​ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

Published

on

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.

ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.

ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.

ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

Continue Reading

ದಿನದ ಸುದ್ದಿ

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

Published

on

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!

ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;

ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.

ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending