ದಿನದ ಸುದ್ದಿ
ಕಾರಂತರು ಸಾಯಲಿ ಎಂದು ಬಯಸಿದ್ದ ಅಮಿನ್ ಮಟ್ಟು ಕೊಟ್ಟ ಸಮರ್ಥನೆ ಏನು ಗೊತ್ತಾ?
ಸುದ್ದಿದಿನ ಡೆಸ್ಕ್: ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಲ್ಲಿ ಆರೆಸ್ಸೆಸ್ ಅನ್ನು ಸಮರ್ಥಿಸಿಕೊಂಡಾಗ ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಸಾಯಲಿ ಎಂದು ಬಯಸಿದ್ದೆ ಎಂಬುದಾಗಿ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾರಂತರ ಕುರಿತು ತಮಗಿರುವ ಪ್ರೀತಿ, ಹಾಗೂ ಮನಸ್ಸಿನಲ್ಲಿದ್ದ ಅವರ ಬಿಂಬ ಒಡೆದುಹೋದಾಗ ಆದ ನೋವು ಎಲ್ಲವನ್ನೂ ಈ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರು ಬರೆದಿರುವ ಫೇಸ್ ಬುಕ್ ಪೋಸ್ಟ್ ಗೆ ಮೆಚ್ಚುಗೆಯ ಕಮೆಂಟ್ ಗಳು ವ್ಯಕ್ತವಾಗುತ್ತಿವೆ. ಆ ಪೋಸ್ಟ್ ಹೀಗಿದೆ.
ಶಿವರಾಮ ಕಾರಂತರು ನನ್ನ ಮೊದಲ ವೈಚಾರಿಕ ಗುರು. ನಾನು ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳಿಂದ ನೇರವಾಗಿ ಕಾರಂತರ ಕಾದಂಬರಿಗಳಿಗೆ ಗ್ರಾಜುವೇಟ್ ಆದವನು. ಸಾಹಿತ್ಯದ ವಿದ್ಯಾರ್ಥಿಯಲ್ಲದ ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವರ ಅಲ್ಲಿಯವರೆಗಿನ ಎಲ್ಲ ಕೃತಿಗಳನ್ನು ಓದಿಮುಗಿಸಿದವನು. ನನ್ನೊಳಗಿನ ವೈಚಾರಿಕ ಸ್ಪಷ್ಟತೆಗೆ ಮೊದಲು ಕಾರಣರಾದವರು ಕಾರಂತರು. ಅಂಬೇಡ್ಕರ್, ಲೋಹಿಯಾ, ಗಾಂಧೀಜಿ, ಕುವೆಂಪು, ಲಂಕೇಶ್ ನನಗೆ ಸಿಕ್ಕಿದ್ದು ನಂತರದ ದಿನಗಳಲ್ಲಿ. ಆದರೆ ಇವರನ್ನು ಓದಲು ಪ್ರೇರಣೆ ನೀಡಿದವರು ಕಾರಂತರು.
ಕಾರಂತರು ಘೋಷಿಸಿಕೊಳ್ಳದೆ ಇದ್ದರೂ ಅವರ ಕೃತಿಗಳಲ್ಲಿ ವೈಚಾರಿಕತೆಯ ಒಂದು ಒಳ ಹರಿವು ಇರುತ್ತಿತ್ತು. ಅದನ್ನು ಅವರು ಒಂದು Statement ರೀತಿ ಹೇಳದೆಯೇ ನಮ್ಮೊಳಗೆ ವೈಚಾರಿಕತೆಯನ್ನು ಬಿತ್ತುತ್ತಾ ಹೋದವರು. ಈ ಮೂಲಕವೇ ನನ್ನಂತಹವರಿಗೆ ಓದಿನ ಪಯಣದ ದಾರಿಯನ್ನು ತಿಳಿಸಿಕೊಟ್ಟವರು.
ಇದನ್ನು ಹಿಂದೊಮ್ಮೆ ಬರೆದಿದ್ದೆ, ನಾನು ಓದಲು ತರುತ್ತಿದ್ದ ಕಾದಂಬರಿಗಳನ್ನು ಓದತೊಡಗಿದ್ದ ನಿವೃತ್ತ ಜೀವನ ಕಳೆಯುತ್ತಿದ್ದ ನನ್ನ ತಂದೆ, ಕೊನೆಯ ದಿನಗಳಲ್ಲಿ ದೇವರು-ಧರ್ಮದ ಬಗ್ಗೆ ನನ್ನಂತೆಯೇ ಮಾತನಾಡತೊಡಗಿದ್ದರು.
ಕಾರಂತರು ನನ್ನೊಳಗೆ ವೈಚಾರಿಕತೆಯ ಕಿಡಿ ಹಚ್ಚಿದ್ದರೆ, ತಾನೇ ಬದಲಾಗುವ ಮೂಲಕ ನನ್ನ ನಿಲುವು ಸರಿ ಎಂದು endorse ಮಾಡಿದವರು ನನ್ನ ತಂದೆ.
ಆದ್ದರಿಂದ ಕಾರಂತರ ಬಗ್ಗೆ ಯಾರಾದರೂ ಬೈದರೆ ನನ್ನ ತಂದೆಗೆ ಬೈದಷ್ಟೇ ಕೋಪ ಬರ್ತಿತ್ತು. ‘ಬಾಳ್ವೆಯ ಬೆಳಕು’ ಬಗ್ಗೆ ಸ್ನೇಹಿತರ ಜತೆ _ಹಲವುಸುತ್ತಿನ ಜಗಳವಾಡಿದ್ದೆ.
ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನೊಳಗೆ ಅಚ್ಚೊತ್ತಿದ್ದ ಎರಡು ಬಿಂಬಗಳು, ಕಾರಂತರದ್ದು ಮತ್ತು ನನ್ನ ತಂದೆಯದ್ದು. ನನ್ನೊಳಗಿನ ಆ ಎರಡು ಬಿಂಬಗಳನ್ನು ನಾನು ಪ್ರೀತಿಸುತ್ತಾ ಬಂದವನು. ಆ ಬಿಂಬಗಳು ಛಿದ್ರಗೊಳ್ಳುವುದನ್ನು ನನಗೆ ಸಹಿಸಲಾಗುತ್ತಿರಲಿಲ್ಲ.
ಕಾರಂತರು ಮೊದಲಿನಿಂದಲೂ ಕಮ್ಯುನಿಷ್ಟರ ಟೀಕಾಕಾರರಾಗಿದ್ದರು. ಈ ವಿಷಯದಲ್ಲಿ ಅವರ ಕೆಲವು ಭಿನ್ನಾಭಿಪ್ರಾಯಗಳು ನನ್ನದೂ ಆಗಿದ್ದವು.
ಆದರೆ…
ಬಾಬರಿ ಮಸೀದಿ ಧ್ವಂಸದ ಘಟನೆಯನ್ನು ಅವರು ಬೆಂಬಲಿಸತೊಡಗಿದಾಗ ನನ್ನೊಳಗಿನ ಕಾರಂತರ ಬಿಂಬ ಅಲುಗಾಡತೊಡಗಿತ್ತು.
ಈದ್ಗಾ ಮೈದಾನದ ವಿವಾದದ ಸಂದರ್ಭದಲ್ಲಿ ಕಾರಂತರು ಧಾರವಾಡಕ್ಕೆ ಬಂದಿದ್ದರು. ಅವರನ್ನು ಧಾರವಾಡ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ನಲ್ಲಿ ನಾನು ಸಂದರ್ಶನ ಮಾಡಿದ್ದೆ. ಆಗ ಅವರು ಈದ್ಗಾ ಮೈದಾನ ವಿವಾದದ ಹಿಂದಿನ ಕೋಮುವಾದಿ ಅಜೆಂಂಡಾದ ಅರಿವಿಲ್ಲದಂತೆ ಸಂಘ ಪರಿವಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದು ಕೇಳಿ ಆಘಾತಕ್ಕೀಡಾಗಿದ್ದೆ. ನನ್ನೊಳಗೆ ಕಟ್ಟಿಕೊಂಡಿದ್ದ ಕಾರಂತರ ಬಿಂಬ ಛಿದ್ರಗೊಳ್ಳುತ್ತಿತ್ತು. ನನ್ನ ಕೈ ಹಿಡಿದು ಮುನ್ನಡೆಸುತ್ತಾ ಬಂದಿದ್ದ ವೈಚಾರಿಕ ಕಾರಂತರು ಇಲ್ಲವಾದರಲ್ಲಾ ಎಂಬ ನೋವು ನನ್ನನ್ನು ತಿನ್ನತೊಡಗಿತ್ತು. ವೈಚಾರಿಕ ಕಾರಂತರು ಶಾಶ್ವತವಾಗಿ ಉಳಿಯಬೇಕಾದರೆ, ಕೋಮುವಾದದ ಸಮರ್ಥಕ ಕಾರಂತರು ಅಳಿಯಬೇಕು ಎಂದು ಒಂದು ಕ್ಷಣ ನನಗನಿಸಿದ್ದು ನಿಜ. ಈ ಅಳಿವು-ಉಳಿವು ದೈಹಿಕವಾದುದಲ್ಲ, ಅದು ಬರವಣಿಗೆಯ ಅಳಿವು-ಉಳಿವಿಗೆ ಸಂಬಂಧಿಸಿದ್ದು.
ಆದರೆ ಕಾರಂತರು ನನ್ನೊಳಗಿನ ಅವರ ಬಿಂಬವನ್ನು ಶಾಶ್ವತವಾಗಿ ಛಿದ್ರಗೊಳ್ಳಲು ಬಿಡಲಿಲ್ಲ. ಯಾಕೆಂದರೆ ಅವರು ತಾನು ಬರೆದುದನ್ನೇ disown ಮಾಡುವಂತೆ ಬರೆಯಲಿಲ್ಲ. ಸಾಹಿತಿ ತನ್ನ ಕೃತಿಗಳ ಮೂಲಕ ಬದುಕುತ್ತಾನೆ. ಲೇಖಕ ಕಾಲವಾದ ನಂತರವೂ ಬರವಣಿಗೆ ಉಳಿಯುತ್ತದೆ, ಅದಕ್ಕೆ ಸಾವಿರುವುದಿಲ್ಲ.
ಶಿವರಾಮ ಕಾರಂತರು ಈಗ ಬದುಕಬೇಕಿತ್ತು. ೧೯೭೫ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ಮಾಡಿದವರು ಕಾರಂತರು. ಅವರು ಬದುಕಿದ್ದರೆ ಈಗಿನ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ದ ಅವರೇ ಮೊದಲು ದನಿ ಎತ್ತುತ್ತಿದ್ದರೇನೋ?

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್; ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್ಗೆ ನೇರ ಪ್ರವೇಶಕ್ಕೆ https://khtigadag.ac.in/
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.
ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.
ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ. ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

