Connect with us

ಬಹಿರಂಗ

ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮವೆಂಬೋ ಮಾಂತ್ರಿಕ

Published

on

  • ನಾ ದಿವಾಕರ

ಭಾರತ ಬದಲಾಗುತ್ತಿದೆ. ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಮಾರುಕಟ್ಟೆ ಬಂಡವಾಳದ ಸುಳಿಯಲ್ಲಿ ಸಿಲುಕಿ ಉನ್ಮತ್ತ ಸ್ಥಿತಿ ತಲುಪಿರುವ ಭಾರತದ ಒಂದು ವರ್ಗ ಈ ಬದಲಾದ ಭಾರತದ ರಾಯಭಾರಿಯಂತೆ ಕಾಣುತ್ತಿದೆ. ಕೋವಿದ್ 19 ಸಂದರ್ಭದಲ್ಲಿ ಬದಲಾಗುತ್ತಿರುವ ಭಾರತದ ವಿಭಿನ್ನ ಮಜಲುಗಳು ಸಾರ್ವಜನಿಕ ಬದುಕಿನಲ್ಲಿ ಹಂತಹಂತವಾಗಿ ತೆರೆದುಕೊಳ್ಳುತ್ತಿವೆ. 2019ರ ಉತ್ತರಾರ್ಧದಲ್ಲಿ ದೇಶಾದ್ಯಂತ ಸೃಷ್ಟಿಯಾದ ಸಾಮಾಜಿಕ ಪ್ರಕ್ಷುಬ್ಧತೆ, ಸಾಂಸ್ಕೃತಿಕ ಉನ್ಮಾದ ಮತ್ತು ರಾಜಕೀಯ ಪಲ್ಲಟಗಳ ನಡುವೆಯೇ ಭಾರತ ಕೊರೋನಾ ದಾಳಿಗೆ ಸಿಲುಕಿ ದಿಕ್ಕುಗಾಣದ ದೆಸೆಯಲ್ಲಿ ನಿಂತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಕೊರೋನಾ ಸತ್ಯ ದರ್ಶನದ ಹೆಬ್ಬಾಗಿಲಿನಂತೆ ಕಾಣುತ್ತಿದೆ. ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿದ್ದ ಬೃಹತ್ ಜನಸಮುದಾಯ ಇಂದು ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಎದ್ದು ನಿಂತಿದೆ.

ಈ ಜನಸಮುದಾಯಗಳ ಒಳಗಿನಿಂದಲೇ “ ಅನ್ಯರನ್ನು ” ಗುರುತಿಸಿ ಸ್ವಚ್ಚ ಭಾರತವನ್ನು ನಿರ್ಮಿಸುವ ಕನಸು ಕಾಣುತ್ತಿದ್ದ ಬೌದ್ಧಿಕ-ರಾಜಕೀಯ ವಲಯಕ್ಕೆ ತಮ್ಮ ಆಂತರ್ಯವನ್ನು ಸ್ವಚ್ಚಗೊಳಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.

ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ ಆದರೆ ಕೊರೋನಾದಿಂದ ಉದ್ಭವಿಸಿರುವ ಸಾವು ಬದುಕಿನ ಸಂಘರ್ಷ ಕೆಲವೇ ವರ್ಗಗಳನ್ನು ಮುನ್ನೆಲೆಗೆ ತಂದಿದೆ. ಈ ಸಂಘರ್ಷದ ನೆಲೆಯಲ್ಲೇ ಭಾರತೀಯ ಸಮಾಜದ ಪ್ರಜ್ಞಾವಂತ ಮನಸುಗಳು ಪ್ರಬುದ್ಧ ಭಾರತದ ಕನಸು ಕಾಣಬೇಕಿದೆ.

ನಾವು ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದೇವೆ ಎನ್ನುವ ಒಂದು ಚಿಂತನೆ ನಮ್ಮ ಸೂಕ್ಷ್ಮತೆಯನ್ನು ಮತ್ತಷ್ಟು ಹರಿತಗೊಳಿಸಬೇಕಿತ್ತು. ಆದರೆ ಈ ಯುದ್ಧ ಎನ್ನುವ ಪದ ಅಕ್ಷರಶಃ ರಣರಂಗದ ಪರಿಭಾಷೆಯಲ್ಲಿ ವ್ಯಕ್ತವಾಗುತ್ತಿದ್ದು ಶತ್ರು-ಮಿತ್ರರ ಶೋಧಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.

ಇದರ ಒಂದು ಅಕ್ಷರತುಣುಕು ಪ್ರಜಾವಾಣಿ ಪತ್ರಿಕೆಯ ಸಂದರ್ಶನವೊಂದರಲ್ಲಿ ಕಂಡುಬರುತ್ತದೆ. ಸಂಘಪರಿವಾರದ ವಕ್ತಾರ ದತ್ತಾತ್ರೇಯ ಹೊಸಬಾಳೆಯವರೊಡನೆ ಪತ್ರಿಕೆ ನಡೆಸಿದ ಸಂದರ್ಶನವನ್ನು ನೋಡಿದಾಗ ಭಾರತದ ಸಾಂಸ್ಕೃತಿಕ ರಾಜಕಾರಣ ಒಂದು ವೈರಾಣುವನ್ನೂ ಆವಾಹನೆ ಮಾಡುವಷ್ಟು ಬಲಿಷ್ಟವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಗೆ ನಾವು ಒಗ್ಗಿಹೋಗಿದ್ದೇವೆ. ಸದಾ ರಣರಂಗದ ಗುಂಗಿನಲ್ಲೇ ಇರುವ ಉನ್ಮತ್ತ ಮನಸುಗಳು ಇಲ್ಲದ ಶತ್ರುಗಳನ್ನು ಹುಡುಕುತ್ತಲೇ ತಮ್ಮೊಳಗಿನ ವೈರತ್ವದ ಭಾವನೆಯನ್ನು ಮತಧಾರ್ಮಿಕ ಕುಲುಮೆಗಳಲ್ಲಿ ಬೇಯಿಸುತ್ತಿರುತ್ತವೆ. ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಿರುವ ದುರಂತ ಇದು.

ಈ ದುರಂತದ ಸೋದರ ಸಂಬಂಧಿಯಾಗಿ ಹಣಕಾಸು ಬಂಡವಾಳ ವ್ಯವಸ್ಥೆ ಅಗೋಚರ ಪ್ರಪಂಚವೊಂದನ್ನು ಸೃಷ್ಟಿಸಿಬಿಟ್ಟಿದೆ. ಕೊರೋನಾ ಕೃಪೆಯಿಂದ ಈ ಪ್ರಪಂಚ ಇಂದು ನಮ್ಮ ಕಣ್ಣೆದುರು ನಿಂತಿದೆ. ದೇಶದ ಬಹುಸಂಖ್ಯಾತ ಪ್ರಜೆಗಳನ್ನು ಪ್ರತಿನಿಧಿಸುವ ಈ ಪ್ರಪಂಚ ನಮ್ಮ ಮುಂದಿನ ದಿನಗಳಲ್ಲಿ ನಿರ್ಣಾಯಕ ನೆಲೆ ತಲುಪಲಿದೆ.

ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ದತ್ತಾತ್ರೇಯ ಹೊಸಬಾಳೆಯವರ ಮೂರು ಅಭಿಪ್ರಾಯಗಳು ಪ್ರಜಾತಂತ್ರದ ಪ್ರಜ್ಞೆಗೆ ಘಾಸಿ ಉಂಟುಮಾಡುತ್ತವೆ. 9/11ರ ಸಂದರ್ಭದಲ್ಲಿ ಅಮೆರಿಕದ ವಿರೋಧ ಪಕ್ಷಗಳು ಸರ್ಕಾರದ ಬೆನ್ನಿಗೆ ನಿಂತಿದ್ದವು, 1971ರ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು.

ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಮಿಲಿಟರಿಯನ್ನು ಬಳಸುವ ಪರಿಸ್ಥಿತಿ ಎದುರಾಗಲಿಲ್ಲ ಎಂದು ಜನರನ್ನು ಅಭಿನಂದಿಸಿದ್ದಾರೆ. ಈ ಮೂರು ವಾಕ್ಯಗಳಲ್ಲೂ ಕೊರೋನಾ ರಣಕೇಕೆ(ಸುದ್ದಿಮನೆಯ ಪರಿಭಾಷೆಯಲ್ಲಿ) ಮತ್ತು ಸಾಂಸ್ಕೃತಿಕ ರಾಜಕಾರಣದ ರಣೋತ್ಸಾಹದ ಛಾಯೆ ಕಂಡುಬರುತ್ತದೆ.

ಸಂದರ್ಶನ ನೀಡಿದ ವ್ಯಕ್ತಿ ಯಾರು ಎನ್ನುವುದಕ್ಕಿಂತಲೂ, ಒಂದು ಸಂಘಟನೆಯ ಸದಸ್ಯರಿಗೆ ಸಮಸ್ತ ಭಾರತೀಯರ ರಾಯಭಾರಿಯಾಗಿ ಮಾತನಾಡುವ ಅವಕಾಶ ನೀಡಿದ ಮಾಧ್ಯಮದ ನಡೆ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ದತ್ತಾತ್ರೇಯ ಅವರ ಅಭಿಪ್ರಾಯಗಳು ವೈಯಕ್ತಿಕ-ತಾತ್ವಿಕ ಮತ್ತು ಸಂಘಟನಾತ್ಮಕ ನೆಲೆಯಲ್ಲಿ ವ್ಯಕ್ತವಾಗುವಂತಹುದು.

ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸೋಣ. ಪತ್ರಿಕೆಯ ಸಂಪಾದಕ ಮಂಡಲಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮನ್ನಿಸೋಣ. ಆದರೆ ರಾಜ್ಯದ ಪ್ರತಿಷ್ಠಿತ ಸುದ್ದಿ ಪತ್ರಿಕೆಯೊಂದರ ಮುಖಪುಟದಲ್ಲಿ ಇಂತಹ ಅಭಿಪ್ರಾಯಗಳು ವಿಜೃಂಭಿಸಿದಾಗ ಪ್ರಜ್ಞಾವಂತ ಮನಸುಗಳಿಗೆ ಆತಂಕ ಉಂಟಾಗುವುದು ಸಹಜ. ಇತರ ಯಾವುದೇ ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿದ್ದರೂ ನಿರ್ಲಕ್ಷಿಸಬಹುದಿತ್ತೇನೋ.

ಇರಲಿ, ಇಲ್ಲಿ ಸಮಸ್ಯೆ ಇರುವುದು ಒಂದು ಪತ್ರಿಕೆ ಅಥವಾ ಒಬ್ಬ ವ್ಯಕ್ತಿಯಲ್ಲಿ ಅಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆ ಎದುರಿಸುತ್ತಿರುವ ಸವಾಲು ಇಂತಹ ಸೂಕ್ಷ್ಮ ಸಂಗತಿಗಳನ್ನೂ ನಿಷ್ಕರ್ಷೆಗೊಡ್ಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ನಾವು ಇಂದು ಮಾಧ್ಯಮ ಎಂದು ಭಾವಿಸುವ ವಿದ್ಯುನ್ಮಾನ ಸುದ್ದಿಮನೆಗಳು, ಮುದ್ರಣ ಲೋಕದ ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ತಾಣಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳು ಎನ್ನುವ ಭ್ರಮೆ ನಮ್ಮಿಂದ ಇನ್ನೂ ದೂರವಾಗದೆ ಉಳಿದಿರುವುದೇ ಅಚ್ಚರಿಯ ಸಂಗತಿ. ಬಹುಶಃ ನಮ್ಮ ಸಮಾಜದಲ್ಲಿ ತಾಳ್ಮೆ, ಸಹನೆ ತುಸು ಹೆಚ್ಚಾಗಿಯೇ ಇದೆ ಎನ್ನುವುದನ್ನು ಇದು ನಿರೂಪಿಸುತ್ತದೆ.

1990ರ ಸಂದರ್ಭದ ಸಾಂಸ್ಕೃತಿಕ ರಾಜಕಾರಣ ಮತ್ತು ಜಾಗತಿಕ ಬಂಡವಾಳದ ಪ್ರಹಾರದಿಂದ ಚೇತರಿಸಿಕೊಳ್ಳುವ ಮುನ್ನವೇ ನಮಗೆ ಸತ್ಯದರ್ಶನವಾಗಿದ್ದರೆ ಅದಕ್ಕೆ ಕೊರೋನಾ ಕಾರಣವಾಗಿದೆ. ಒಂದು ವರ್ಷದ ಹಿಂದೆ ದೇಶವ್ಯಾಪಿ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದ “ ವಲಸಿಗರು ” ಇಂದೂ ಸಹ ಸಮಾಜೋ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದಾರೆ.

ಅಂದು ನಿಕೃಷ್ಟರಾಗಿ ನಿರ್ಲಕ್ಷ್ಯಕ್ಕೆ ಅರ್ಹರಾಗಿದ್ದ ಈ ಸಮುದಾಯ ಇಂದು ಕಾಳಜಿ, ಕಳಕಳಿಗೆ ಅರ್ಹತೆ ಪಡೆದಿದ್ದರೂ, ಒಂದು ನೆಲೆಯಲ್ಲಿ ನಿಕೃಷ್ಟರಾಗಿಯೇ ಕಾಣುತ್ತಿದ್ದಾರೆ. ಈ ಅಂಶವನ್ನು ಬದಿಗಿಟ್ಟು ನೋಡಿದಾಗ, ಕೊರೋನಾ ಸಂದರ್ಭದಲ್ಲಿ ನಮಗೆ ಈ ದೇಶದ ಮುದ್ರಣ ಲೋಕ ಮತ್ತು ಡಿಜಿಟಲ್ ಲೋಕದ ಸುದ್ದಿಮನೆಗಳು ದಿನನಿತ್ಯ ಕಾಡುತ್ತವೆ.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನುವ ಪ್ರತಿಷ್ಠಿತ ಸ್ಥಾನ ಪಡೆದಿರುವ ಈ ಜಗತ್ತು ಇಂದು, ಈ ಆಶಯದ ಆಂತರ್ಯವನ್ನೇ ಮರೆತಂತೆ ಕಾಣುತ್ತಿರುವುದು ದುರಂತ. ಪ್ರಜಾವಾಣಿಯಲ್ಲಿನ ಒಂದು ಸಂದರ್ಶನ ಆಕ್ಷೇಪಾರ್ಹವಾಗಿ ಕಾಣುವುದು ಇಲ್ಲಿಯೇ.

ಮಾಧ್ಯಮ ಲೋಕದಲ್ಲಿ ಸ್ವತಂತ್ರ , ಸ್ವಾಯತ್ತ ಮತ್ತು ನಿಷ್ಪಕ್ಷಪಾತ ಧೋರಣೆಯನ್ನೇ ಮೂಲಮಂತ್ರವಾಗಿ ಭಾವಿಸುವ ಪರಂಪರೆಗೆ ಬಹುಶಃ ನಾವು ವಿದಾಯ ಹೇಳಿದ್ದೇವೆ ಎನಿಸುತ್ತದೆ. ವ್ಯವಸ್ಥೆ, ಪ್ರಭುತ್ವ ಮತ್ತು ಆಡಳಿತಾರೂಢ ಸರ್ಕಾರ ಈ ಮೂರರ ನಡುವಿನ ಅಂತರ, ವ್ಯತ್ಯಾಸ ಮತ್ತು ಕಂದರವನ್ನು ಮೂಲತಃ ಮಾಧ್ಯಮಗಳು ಬಿಂಬಿಸಬೇಕಾಗುತ್ತದೆ.

ಹಾಗಾದಲ್ಲಿ ಮಾತ್ರ ಸರ್ಕಾರದ ಕ್ರಮಗಳಿಂದ ಅಸಮಧಾನ ಹೊಂದಿರುವ, ಪ್ರಭುತ್ವದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ, ವ್ಯವಸ್ಥೆಯ ಲೋಪಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಸೂಕ್ಷ್ಮ ಮನಸುಗಳಿಗೆ ಅಕ್ಷರಗಳ ಮೂಲಕ, ಮಾತುಗಳ ಮೂಲಕ ಸ್ಪಂದಿಸಲು ಸಾಧ್ಯ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಈ ಕಾಲಘಟ್ಟದ ದುರಂತ.

ತತ್ವ, ಸಿದ್ಧಾಂತ, ನೀತಿ ಮತ್ತು ಮೌಲ್ಯ ಈ ನಾಲ್ಕೂ ಸಹ ಒಂದು ದೇಶದ ಬೌದ್ಧಿಕ ವಲಯದ ಆಸ್ತಿ. ಹಾಗೆಯೇ ದೇಶದ ಮುನ್ನಡೆಗೆ ಪೂರಕವಾಗಬಹುದಾದ ಬೌದ್ಧಿಕ , ಭೌತಿಕ ಸರಕುಗಳು. ಈ ಸರಕುಗಳನ್ನು ನಾವು ಯಾವ ನೆಲೆಯಲ್ಲಿ ನಿಂತು ಬಳಸುತ್ತೇವೆ, ಹೇಗೆ ನಿಷ್ಕರ್ಷೆ ಮಾಡುತ್ತೇವೆ, ಯಾವ ದಿಕ್ಕಿನಲ್ಲಿ ಇವುಗಳನ್ನು ಕೊಂಡೊಯ್ಯುತ್ತೇವೆ ಮತ್ತು ಯಾರ ಪರವಾಗಿ ಈ ನಾಲ್ಕೂ ನೆಲೆಗಳು ನಿಲ್ಲುತ್ತವೆ ಈ ಪ್ರಶ್ನೆಗಳು ಒಂದು ಪ್ರಬುದ್ಧ ಸಮಾಜವನ್ನು ಕಾಡಲೇಬೇಕು.

ಇವುಗಳಿಂದಾಚೆಗೂ ಒಂದು ಪ್ರಪಂಚ ಇದೆ ಎಂದಾದರೆ ಅದು ಅರಾಜಕತೆಯ ನೆಲೆಯಲ್ಲೇ ಇರಬೇಕಾಗುತ್ತದೆ. ಭಾರತ ಈ ನಾಲ್ಕೂ ವಿದ್ಯಮಾನಗಳನ್ನು ಶತಮಾನಗಳಿಂದ ಪರಸ್ಪರ ವಿರುದ್ಧ ನೆಲೆಗಳಲ್ಲಿ, ವೈರುಧ್ಯಗಳ ನಡುವೆ, ವಿರೋಧಾಭಾಸಗಳೊಡನೆ ಮತ್ತು ಸಾಪೇಕ್ಷ ನೆಲೆಗಳಲ್ಲಿ ಎದುರಿಸುತ್ತಲೇ ಬಂದಿದೆ.

1990ರ ನಂತರದಲ್ಲಿ ಈ ನೆಲೆಗಳು ಹೆಚ್ಚು ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದ್ದು, ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ವಾದಗಳ ಅಥವಾ ಇಸಂಗಳ ಸಂಘರ್ಷದಲ್ಲಿ ಈ ನಾಲ್ಕೂ ವಿದ್ಯಮಾನಗಳು ಯಾವುದೇ ನೆಲೆಯಲ್ಲಿ ನಿಂತರೂ ಜನಸಮುದಾಯಗಳ ಮೂಲ ಆಶಯಗಳು ಮತ್ತು ಸಮಷ್ಟಿ ಪ್ರಜ್ಞೆಯ ಸಂರಕ್ಷಣೆಯ ಅನಿವಾರ್ಯತೆ ಎದುರಾದಾಗ ಮಾನವೀಯತೆ ಎನ್ನುವ ಒಂದು ವಿದ್ಯಮಾನ ಗೋಚರಿಸಲೇಬೇಕಲ್ಲವೇ ?

ವಸುದೈವ ಕುಟುಂಬಕಂ ಎನ್ನುವ ಅಸ್ಪಷ್ಟ ಘೋಷವಾಕ್ಯಕ್ಕಿಂತಲೂ ವಿಶ್ವಮಾನವತೆ ಎನ್ನುವ ವಿಶಾಲ ಹೃದಯದ ಒಂದು ಪದ ನಮ್ಮ ಮನಸುಗಳಿಗೆ ಹತ್ತಿರವಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ ? ಇದು ಮಾಧ್ಯಮ ಜಗತ್ತಿನಿಂದ ಕಣ್ಮರೆಯಾಗುತ್ತಿದೆ.

ಇಲ್ಲಿ ಮಾಧ್ಯಮ ಜಗತ್ತು ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬೇಕಿತ್ತು. ತನ್ನ ಅಸ್ತಿತ್ವ ಮತ್ತು ಅಸ್ಮಿತೆಗೂ, ಈ ದೇಶದ ಬಹುಸಂಖ್ಯೆಯ ಜನಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಗೂ ಅವಿನಾಭಾವ ಸಂಬಂಧ ಇದೆ, ಈ ಸಂಬಂಧವನ್ನು ಹೊಸೆಯುವ ಸೂಕ್ಷ್ಮ ತಂತುಗಳನ್ನು ನಿಷ್ಕ್ರಿಯಗೊಳಿಸಲು ಸಮಾಜೋ ರಾಜಕೀಯ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸದಾ ಸಕ್ರಿಯವಾಗಿರುತ್ತವೆ ಎನ್ನುವ ಪ್ರಜ್ಞೆ ಮಾಧ್ಯಮ ಜಗತ್ತಿನಲ್ಲಿ ಸದಾ ಜಾಗೃತವಾಗಿರಬೇಕಿತ್ತು.

ಪ್ರಭುತ್ವ ಮತ್ತು ಸರ್ಕಾರ ಅಥವಾ ವ್ಯವಸ್ಥೆ ಈ ಬಹುಸಂಖ್ಯೆಯ ಜನಸಮುದಾಯಗಳನ್ನು ಪ್ರತಿನಿಧಿಸುವುದಿಲ್ಲ, ನಿಯಂತ್ರಿಸುತ್ತವೆ. ಈ ಪ್ರಾತಿನಿಧಿಕ ಹೊಣೆಯನ್ನು ಹೊರಬೇಕಾದುದು ಮಾಧ್ಯಮ ಲೋಕದ ಆದ್ಯತೆಯಾಗಬೇಕಲ್ಲವೇ ?

ಈ ಕೊರತೆಯ ವಿರಾಟ್ ಸ್ವರೂಪವನ್ನು ನಾವು ಕೊರೋನಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನೂ ಸೇರಿದಂತೆ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳೂ ಬಿಕರಿಯಾಗುತ್ತಿದ್ದರೂ, ತಾನು ಹರಾಜು ಮಾರುಕಟ್ಟೆಯ ಬಲಿಪೀಠದಲ್ಲಿ ತಲೆತಗ್ಗಿಸಿ ನಿಲ್ಲುವುದಿಲ್ಲ ಎನ್ನುವ ದಿಟ್ಟತನ ಮಾಧ್ಯಮ ಜಗತ್ತಿಗೆ ಇರಬೇಕಿತ್ತು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದನ್ನು ಕಂಡಿದ್ದೇವೆ.

ಆದರೆ ಪರಿಸ್ಥಿತಿ ಏನೇ ಇದ್ದರೂ ಇಂದು ವಸ್ತುಸ್ಥಿತಿ ಬದಲಾಗಿದೆ. ಹಣಕಾಸು ಬಂಡವಾಳದ ಮಾರುಕಟ್ಟೆ ಅಧಿಪತ್ಯದೊಂದಿಗೆ, ಸಾಂಸ್ಕೃತಿಕ ರಾಜಕಾರಣ ಮತ್ತು ಜಾತಿ ರಾಜಕಾರಣದ ಕಬಂಧ ಬಾಹುಗಳು ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿಕೊಂಡಿವೆ. ಪ್ರಭುತ್ವದ ನೆಲೆಗಳು ಈ ಅತಿಕ್ರಮಿತ ಕೋಟೆಯಲ್ಲಿ ಕಂಡುಬರುತ್ತಿವೆ. ಚುನಾಯಿತ ಸರ್ಕಾರಗಳು ತಮ್ಮ ಮೂಲ ನೆಲೆ ಮತ್ತು ಸೆಲೆ ಎರಡನ್ನು ಮರೆತು ಸ್ವಂತಿಕೆ ಕಳೆದುಕೊಂಡಿವೆ.

ಇಂತಹ ವಿಷಮ ಸ್ಥಿತಿಯಲ್ಲಿ 130 ಕೋಟಿ ಜನತೆಯ ಸೂಕ್ಷ್ಮ ಸಂವೇದನೆಗೆ ಸ್ಪಂದಿಸುವ ನೈತಿಕ ಹೊಣೆ ಮಾಧ್ಯಮ ಲೋಕದ ಮೇಲಿದೆ. ಕೆಂಪುಕೋಟೆಯ ಮೇಲಿನ ಛಾಯೆ ಮಾಧ್ಯಮ ಲೋಕದಲ್ಲಿ ಕತ್ತಲು ಆವರಿಸುವಂತೆ ಮಾಡುವ ಪರಂಪರೆ ಇಡೀ ಮಾಧ್ಯಮ ಜಗತ್ತನ್ನೇ ಬದಲಿಸಿಬಿಟ್ಟಿದೆ. ಬಿತ್ತರವಾಗಬೇಕಿದ್ದ ಸುದ್ದಿಗಳು ಉತ್ಪಾದನೆಯಾಗುತ್ತಿವೆ.

ಮಾಧ್ಯಮ ಲೋಕದ ಮಸೂರಗಳು ಸಿಕ್ಕುಗಳಿಗೆ ಸಿಲುಕಿ, ಸೂತ್ರ ಕಳೆದುಕೊಂಡಂತಾಗಿವೆ. ಪತ್ರಿಕೋದ್ಯಮದ ಕಣ್ಣೋಟ ಮತ್ತು ಮುನ್ನೋಟ ಮಸೂರದಲ್ಲೇ ಇರುತ್ತದೆ ಅಲ್ಲವೇ ? ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಬೇಕಾದ ಮಾಧ್ಯಮ ಲೋಕ ಇಂದು ಉಸಿರುಗಟ್ಟಿರುವ ಸಮಾಜವನ್ನು ಅಕ್ಷರ ಸರಕು ಸಾಗಿಸುವ ಸಾಧನದಂತೆ ಬಳಸಿಕೊಳ್ಳುತ್ತಿದೆ. ಇದರ ನೇರ ಪರಿಣಾಮವನ್ನು ಕೊರೋನಾ ಸಂದರ್ಭದಲ್ಲೇ ಕಂಡಿದ್ದೇವೆ.

ಪ್ರಜಾತಂತ್ರ ಮೌಲ್ಯಗಳ ರಕ್ಷಣೆ ಮಾಧ್ಯಮ ಲೋಕದ ಮೌಖಿಕ ಅಭಿವ್ಯಕ್ತಿಯಿಂದ ಸಾಧ್ಯವಾಗುವಷ್ಟೇ ಅಕ್ಷರದಿಂದಲೂ ಸಾಧ್ಯವಾಗುತ್ತದೆ. ಸುದ್ದಿಮನೆಗಳ ಈ ಅಕ್ಷರಗಳು ಯಾವುದೇ ಚೌಕಟ್ಟಿನೊಳಗೆ ಬಂಧನಕ್ಕೊಳಗಾಗದೆ ಮುಕ್ತ ವಾತಾವರಣದಲ್ಲಿ ಹರಿದಾಡಿದಾಗ ಸಮಾಜದ ವಿಭಿನ್ನ ವರ್ಗಗಳು ಇವುಗಳ ನಡುವೆ ತಮ್ಮ ನೆಲೆ ಕಂಡುಕೊಳ್ಳುತ್ತವೆ.

ಶೋಷಿತ, ಅವಕಾಶವಂಚಿತ, ದಮನಿತ ಜನಸಮುದಾಯಗಳು ಈ ನೆಲೆಯಲ್ಲೇ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತವೆ. ಇದು ಪ್ರಜಾತಂತ್ರ ವ್ಯವಸ್ಥೆಯ ಬಲವರ್ಧನೆಗೆ ನೆರವಾಗುತ್ತದೆ. ಪತ್ರಿಕೋದ್ಯಮ ಎನ್ನುವ ಪದವನ್ನು ನಾವೆಷ್ಟೇ ಬಳಸಿದರೂ ಪತ್ರಿಕೆ ಉದ್ಯಮವಾಗುವುದನ್ನು ಸಹಿಸಲಾಗುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳಿಗೂ ಇದು ಅನ್ವಯಿಸುತ್ತದೆ.

ಮಾಧ್ಯಮ ಲೋಕದಲ್ಲಿ ಮಾಂತ್ರಿಕ ಶಕ್ತಿ ಇದೆ. ಈ ಮಾಂತ್ರಿಕ ಶಕ್ತಿಯನ್ನು ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಯಾಗುತ್ತವೆ. ವ್ಯಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಮಾದ್ಯಮ ವಸ್ತುನಿಷ್ಠೆಯನ್ನು ಮರೆತು ವ್ಯಕ್ತಿನಿಷ್ಠೆಗೆ ಬಲಿಯಾಗುತ್ತದೆ. ಬೌದ್ಧಿಕ ಸಮಾಜ ವಿನಾಶದತ್ತ ಸಾಗುತ್ತದೆ.

ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿ ಮತ್ತು ಮಾರುಕಟ್ಟೆಯ ಲೆಕ್ಕಾಚಾರಗಳು ಈ ಮಾಂತ್ರಿಕ ಶಕ್ತಿಯನ್ನು ನಿಯಂತ್ರಿಸುವಂತಾದರೆ ಮಾಧ್ಯಮ ಲೋಕ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸುಲಭವಾಗಿ ಕಳೆದುಕೊಳ್ಳುತ್ತದೆ. ಇಂದು ಈ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.

ದುರದೃಷ್ಟವಶಾತ್ ಇಂದು ನಾವು ಔದ್ಯಮಿಕ ಸ್ವರೂಪದ ಮಾಧ್ಯಮಗಳ ನಡುವೆ ಬದುಕುತ್ತಿದ್ದೇವೆ. ಹಾಗಾಗಿಯೇ ಸುದ್ದಿಮನೆಗಳಲ್ಲಿ ಅಭಿಪ್ರಾಯಗಳ ಉತ್ಪಾದನೆಯಾದರೆ, ಮುದ್ರಣ ಮನೆಗಳಲ್ಲಿ ಅಕ್ಷರಗಳು ಉತ್ಪಾದನೆಯಾಗುತ್ತವೆ. ಎರಡೂ ಕಡೆ ಅಕ್ಷರ/ಅಭಿಪ್ರಾಯ ಮೂಡುವ ಪರಿಕಲ್ಪನೆ ಇಲ್ಲವಾಗಿದೆ.

ಪರ್ಯಾಯವೇನು ಎನ್ನುವ ಪ್ರಶ್ನೆಯೊಡನೆಯೇ ನಾವು ಮತ್ತೊಂದು ಮಾಧ್ಯಮ ಜಗತ್ತನ್ನು ಸೃಷ್ಟಿಸುವ ಹಂತಕ್ಕೆ ತಲುಪಿದ್ದೇವೆ. ಅಧಿಕಾರ ರಾಜಕಾರಣ ಮತ್ತು ವ್ಯವಸ್ಥೆಯ ಬಾಹುಗಳಿಂದ ದೂರ ಉಳಿದು ಈ ಹೊಸ ಜಗತ್ತನ್ನು ಸಂರಕ್ಷಿಸಿ, ಮಾನವೀಯ ನೆಲೆಯಲ್ಲಿ ಅಕ್ಷರಗಳನ್ನು ಬಿತ್ತುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಆಗ ಮಾತ್ರ ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending