ರಾಜಕೀಯ
ದಾದಾಸಾಹೇಬ್ ಕಾನ್ಷೀರಾಮ್ : ಕೆಲವು ವಿಚಾರಗಳು | ಅಂಬೇಡ್ಕರ್ ಜಯಂತಿಗೆ ರಜೆ ಕ್ಯಾನ್ಸಲ್ ಮಾಡಿದ್ದಕ್ಕೆ ಬಿಎಸ್ಪಿ ಹುಟ್ಟಿಕೊಂಡಿತು..!

- ಆರ್ ಹೆಚ್ ಬಿ
ಅಂಬೇಡ್ಕರ್ ಜಯಂತಿ ದಲಿತರಿಗೆ ಅದೆಷ್ಟು ಮಹತ್ವದ್ದು? ಬಹುಶಃ ಅದು ವರ್ಣಿಸಲಸದಳ. ಅದಕ್ಕೆ ರಜೆ ನೀಡದ್ದಕ್ಕೆ, ನೀಡಿದ್ದ ರಜೆಯನ್ನು ರದ್ದುಮಾಡಿದ್ದಕ್ಕೆ ಒಂದು ಬೃಹತ್ ರಾಜಕೀಯ ಪಕ್ಷವೇ ಹುಟ್ಟಿಕೊಂಡಿತೆಂದರೆ…! ಹೌದು, ಇದು ಸತ್ಯ. ಇತಿಹಾಸಕಾರರು ಗುರುತಿಸಿರುವಂತೆ 1964ರಲ್ಲಿ ಕಾನ್ಷೀರಾಮ್ ರವರು ಅಧಿಕಾರಿಯಾಗಿದ್ದ DRDO ಕಚೇರಿಯಲ್ಲಿ ಆ ವರ್ಷ ಇದ್ದಕ್ಕಿದ್ದಂತೆ ಅಂಬೇಡ್ಕರ್ ಜಯಂತಿ, ಬುದ್ಧ ಜಯಂತಿ ಮತ್ತು ವಾಲ್ಮೀಕಿ ಜಯಂತಿಗಳಿಗೆ ರಜೆ ಕ್ಯಾನ್ಸಲ್ ಮಾಡಲಾಗಿತ್ತು. ಅದರ ಬದಲು ಬೇರೆ ಹಿಂದೂ ಹಬ್ಬಗಳಿಗೆ ರಜೆ ನೀಡಲಾಗಿತ್ತು. ಇದರ ವಿರುದ್ಧ ಸಿಡಿದು ನಿಂತ ಕಾನ್ಷೀರಾಮ್ರವರು ‘ತಮ್ಮ ಕಚೇರಿಯಲ್ಲೇ ಅಂಬೇಡ್ಕರ್ ಜಯಂತಿ ರಜೆ ರದ್ದು ಮಾಡಿದರೆ?’ ಎಂದು ನೌಕರರ ಮುಂದಾಳತ್ವ ವಹಿಸಿ ದೊಡ್ಡ ಹೋರಾಟ ರೂಪಿಸಿದರು. ಪರಿಣಾಮ BAMCEF ನಂತಹ ಬೃಹತ್ ನೌಕರರ ಸಂಘಟನೆ, DS4 ನಂತಹ ಬೃಹತ್ ಹೋರಾಟದ ಹಾದಿ, ಬಿಎಸ್ಪಿಯಂತಹ ರಾಜಕೀಯ ಪಕ್ಷ ಹುಟ್ಟಿಕೊಂಡಿತು. ಈ ನಿಟ್ಟಿನಲ್ಲಿ 1964ರಲ್ಲಿ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಗೊಳಿಸಿಲ್ಲದಿದ್ದರೆ ಕಾನ್ಷೀರಾಮ್ ರವರು ಮದುವೆಯಾಗಿ, ಡಿಆರ್ಡಿಒದಲ್ಲಿ ಓರ್ವ ಸಾಮಾನ್ಯ ಸಂಶೋಧಕನಾಗಿ ಸಾಮಾನ್ಯ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು! ಆದರೆ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಮಾಡಿದ್ದರಿಂದ ಕಾನ್ಷೀರಾಮ್ರೊಳಗೊಬ್ಬ ಹೋರಾಟಗಾರ, ಅಪ್ರತಿಮ ನಾಯಕ ಎದ್ದು ನಿಂತಿದ್ದ. So, that is the power of Ambedkar Jayanthi and power of Kanshiram!
ಪ್ರವಾದಿ ಮಾದರಿಯ ಹುರುಪು
ಕಾನ್ಷೀರಾಮ್ರವರು BAMCEF ಹೆಸರಿನಲ್ಲಿ ನೌಕರರನ್ನು ಸಂಘಟಿಸಿದ್ದು ಎಲ್ಲರಿಗೂ ತಿಳಿದಿದೆ. ತಮ್ಮ ಕನಸನ್ನು ನನಸುಗೊಳಿಸಲು ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು ಎಂಬ ಐಡಿಯಾ ಸಾಹೇಬರಿಗೆ ಬಂದದ್ದು 1973ರಲ್ಲಿ. ಆದರೆ ಅದು ಸಾಕಾರಗೊಳ್ಳಲು ಸುಮಾರು ಐದು ವರ್ಷಗಳು ಬೇಕಾಯಿತು. ಈ ಸಂದರ್ಭದಲ್ಲಿ ಸಾಹೇಬರು ನೌಕರರನ್ನು ಸಂಘಟಿಸುವ ಪರಿ ಹೇಗಿತ್ತು? ದಾದಾಸಾಹೇಬರೇ ನೆನೆಪಿಸಿಕೊಳ್ಳುವಂತೆ “ಆಗಾಗ ನಾನು ಸರ್ಕಾರಿ ಕಚೇರಿಗಳಿಗೆ ಭೇಟಿಕೊಡಲು ಹೋದಾಗ ಜನ ನನ್ನನ್ನು ನೋಡಿ ಓ! ಹುಚ್ಚ ಬಂದ ಎಂದು ಓಡಿಹೋಗುತ್ತಿದ್ದರು!” (Views and Interviews of Kanshiram by N.Manohara Prasad, Pp.126) ಆದರೆ ದಾದಾಸಾಹೇಬರ ಪ್ರವಾದಿ ಮಾದರಿಯ ಹುರುಪು ಅವರ ಅನುಯಾಯಿಗಳನ್ನು ಅವರತ್ತ ಸೆಳೆಯಲು ಪ್ರಾರಂಭಿಸಿತು!
ನೌಕರರು ಮೆದುಳಿನ ಬ್ಯಾಂಕುಗಳು!
ಕಾನ್ಷೀರಾಮ್ ರವರು ನೌಕರರಲ್ಲಿ ತಪ್ಪಿತಸ್ಥ ಭಾವನೆಯನ್ನು ತುಂಬಿದರು. ತಾನೆಲ್ಲ ಪಡೆದೆ ತಾನು ಸಮಾಜಕ್ಕೆ ಏನು ಕೊಟ್ಟೆ? ಎಂಬ ಭಾವವದು. ನೌಕರರು ಬರೇ ಹಣಕಾಸು ನೀಡುವುದಷ್ಟೆ ಅಲ್ಲ, ಮುಖ್ಯವಾಗಿ ಕಾನ್ಷೀರಾಮ್ರವರು ನೌಕರರ talent(ಪ್ರತಿಭೆ)ಗಳನ್ನು ಬಳಸಿದರು. ಈ ಬಗ್ಗೆ ಸ್ವತಃ ಕಾನ್ಷೀರಾಮ್ರವರು ಒಂದೆಡೆ “we use them as brain banks” ಎನ್ನುತ್ತಾರೆ. ಅಂದರೆ “ನಾನು ಅವರನ್ನು ಮೆದುಳಿನ ಬ್ಯಾಂಕ್ ಥರ ಬಳಸಿದೆ” ಎಂದರ್ಥ! ಇದಕ್ಕೆ ಅವರು ಕೊಡುವ ವಿವರಣೆ “ಅವರು (ನೌಕರರು) ದೇಶಾದ್ಯಂತ ಹರಡಿದ್ದಾರೆ. ಅವರ ಹಣಕಾಸು ಶಕ್ತಿ ಮತ್ತು ಬುಧ್ಧಿಶಕ್ತಿ ಎರಡೂ ಬೆಲೆಕಟ್ಟಲಾಗದ್ದು”. ಹೌದು, ಕಾನ್ಷೀರಾಮ್ರವರು ಹೇಳಿದ ಮೆದುಳಿನ ಬ್ಯಾಂಕ್; ಶೋಷಿತ ಸಮುದಾಯದ ನೌಕರರ ಬಳಿ ದುಡ್ಡಿದೆ, ಹಾಗೆ ಮೆದುಳಿನಲ್ಲಿ ಅಪಾರ ಬುದ್ಧಿಶಕ್ತಿ ಇದೆ. ಆ ಬುದ್ದಿಶಕ್ತಿಯ ಕಾರಣಕ್ಕೆ ಅವರು ಸರ್ಕಾರಿ ಕಚೇರಿಗಳಿಗೆ ನೌಕರರಾಗಿ ಬಂದಿರುವುದು. ಅಂದಹಾಗೆ ಬುದ್ಧಿಶಕ್ತಿ, ಅದು ಮಾತನಾಡುವ ಶಕ್ತಿ ಇರಬಹುದು, ಸಂಘಟನಾ ಶಕ್ತಿ ಇರಬಹುದು, ಬರೆಯುವ ಶಕ್ತಿ ಇರಬಹುದು, ಇದನ್ನೆಲ್ಲ ಸಮುದಾಯಕ್ಕೆ ವಾಪಸ್ ಕೊಡುವಂತೆ ಸಾಹೇಬರು ಹೇಳಿದರು. ಅದನ್ನೆ pay back to society ಎಂದರು.
ಶಿಕ್ಷಕನ ಕೈಕೆಳಗೆ ಐಎಎಸ್ ಅಧಿಕಾರಿಗಳು!
BAMCEF ಸಂಘಟನೆಯಲ್ಲಿದ್ದಾಗ ಅಲ್ಲಿ ನೌಕರರ ಕೇಡರ್ ಬಗ್ಗೆ ಅಂದರೆ ದರ್ಜೆಯ ಬಗ್ಗೆ ಯಾವುದೇ ತಾರತಮ್ಯವಿರಲಿಲ್ಲ. ಲಕ್ನೋದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “ಕಾನ್ಷೀರಾಮ್ ರವರು ವಿವಿಧ ದರ್ಜೆಯ ನೌಕರರ ನಡುವೆ ಇದ್ದ ಸೇವಾ ಅಂದರೆ ನಾನು ಮೇಲ್ಮಟ್ಟದ ನೌಕರ ಅವನು ತಳಮಟ್ಟದ ನೌಕರ ಎಂಬ ಬೇಲಿಯನ್ನು ಮುರಿದರು. ಹೇಗೆಂದರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “BAMCEF ನ ಸ್ಥಳೀಯ ಸಂಯೋಜಕನಾದ ಓರ್ವ ಶಿಕ್ಷಕನ ಮನೆಯಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದಂತೆ ಕಚೇರಿಯ ಹಿರಿಯ ಅಧಿಕಾರಿಗಳೆಲ್ಲ ಆತ್ಮೀಯತೆಯಿಂದ ಸಭೆ ಸೇರುತ್ತಿದ್ದೆವು”.
ಭಾಷಣ ಕೇಳಲೂ ಹಣ ಕೊಡಬೇಕು!
ಕಾನ್ಷೀರಾಮ್ವರಿಗೆ ಪಕ್ಷ ಕಟ್ಟಲು ಇಷ್ಟೊಂದು ದುಡ್ಡು ಎಲ್ಲಿ ಬರುತ್ತದೆ? ಎಂಬುದು ಅಂದಿನ ಪತ್ರಕರ್ತರ ಸಂದೇಹವಾಗಿತ್ತು. ಆಗ ಕೆಲವು ಪತ್ರಕರ್ತರು ಕಾನ್ಷೀರಾಮ್ ರವರು ಅಂದಿನ ಉತ್ತರಪ್ರದೇಶದ ದೊಡ್ಡ ಬಿಸಿನೆಸ್ಮನ್ ಹಾಜಿ ಮಸ್ತಾನ್ ಮಿರ್ಝಿಯವರ ಜೊತೆ ಸಂಪರ್ಕದಲ್ಲಿದ್ದಾರೆ. ಅವರೇ ಇವರಿಗೆ ಹಣ ಕೊಡುವುದು ಎಂದು ಗುಲ್ಲೆಬ್ಬಿಸಿದರು. (ಯಾಕೆಂದರೆ 90ರ ದಶಕದಲ್ಲೇ ಲಕ್ನೋದಲ್ಲಿ ನಡೆದ ರ್ಯಾಲಿಯೊಂದರಲ್ಲಿ ದಾದಾಸಾಹೇಬರು ಜನರನ್ನು ಕರೆತರಲು ಬರೇ ಬಸ್ಸುಗಳಿಗೆ ಖರ್ಚು ಮಾಡಿದ್ದ ಹಣವೇ 22 ಲಕ್ಷ!) ಆಗ ಈ ಹಾಜಿ ಮಸ್ತಾನ್ ಮಿರ್ಝಿಯ ಕಥೆಗೆ ಸಾಹೇಬರು ಹೇಳಿದ್ದು “ಹಾಜಿ ಮಸ್ತಾನ್ ಸಣ್ಣ ವ್ಯಾಪಾರಿ. ಆತ ನನಗೆ ಎಷ್ಟು ಅಂತ ಕೊಡಲಿಕ್ಕೆ ಸಾಧ್ಯ? ನಿಜ ಹೇಳಬೇಕೆಂದರೆ ಭಾರತದ ಯಾವುದೇ ರಾಜಕೀಯ ಪಕ್ಷವೂ ಇಷ್ಟು ಹಣ ಖರ್ಚು ಮಾಡಿಲ್ಲ. ಅಷ್ಟು ಹಣವನ್ನು ನಾನು ಖರ್ಚು ಮಾಡಿದ್ದೇನೆ”. ಹಾಗಿದ್ದರೆ ಇದಕ್ಕೆಲ್ಲ ಹಣ? ಅದಕ್ಕೆ ದಾದಾಸಾಹೇಬರು ಹೇಳುವುದು “ನನಗೆ ವಿವಿಧ ಮೂಲಗಳಿಂದ ಹಣ ಬರುತ್ತದೆ. ಅಂದಹಾಗೆ ಆ ಮೂಲಗಳು ಎಂದೂ ಬತ್ತುವುದೇ ಇಲ್ಲ. ಮುಖ್ಯವಾಗಿ ಸದಸ್ಯತ್ವ ಶುಲ್ಕ ಮತ್ತು ಕಾಲಕಾಲಕ್ಕೆ ಕಾರ್ಯಕರ್ತರು ನೀಡುವ ದೇಣಿಗೆಯಿಂದ ಹಣ ಬರುತ್ತದೆ”. ಇದಲ್ಲದೆ ತಮ್ಮ ಭಾಷಣಗಳಿಗೆ ಕಡೇ ಪಕ್ಷ 52000 ಜನ ಸೇರಲೇಬೇಕು ಎಂದು ತಾಕೀತು ಮಾಡುತ್ತಿದ್ದ ಕಾನ್ಷೀರಾಮ್ರವರು ಕಡ್ಡಾಯವಾಗಿ ತಲಾ ಒಬ್ಬೊಬ್ಬರಿಂದ 1 ರೂನಂತೆ 52000 ಶುಲ್ಕ ವಸೂಲಿ ಮಾಡಿಸುತ್ತಿದ್ದರು! ಇದರ ಬಗ್ಗೆ ಜೋಕ್ ಕಟ್ ಮಾಡುತ್ತಿದ್ದ ಅವರು “ಈ ಮೊತ್ತವನ್ನು ಶೀಘ್ರದಲ್ಲೇ 1 ಲಕ್ಷಕ್ಕೆ ಏರಿಸಬೇಕೆಂದಿದ್ದೇನೆ” ಎನ್ನುತ್ತಿದ್ದರು. ಅಂದರೆ ಅವರು ಏರಿಸುತ್ತಿದ್ದದ್ದು ಬರೇ ಹಣವನ್ನಷ್ಟೆ ಅಲ್ಲ, ಜನರನ್ನೂ ಕೂಡ ಎಂಬುದು ಅಲ್ಲಿ ತಿಳಿಯಬೇಕಾದ ಅಂಶ!
ದಾದಾಸಾಹೇಬರನ್ನು ಸಿಐಎ ಏಜೆಂಟ್ ಎಂದ ಅಂದಿನ ಸರ್ಕಾರ!
ಅಬ್ಬಾ, 1987ರಲ್ಲಿ ಕಾನ್ಷೀರಾಮ್ರವರು ಉತ್ತರಪ್ರದೇಶದ ಬಿಜ್ನೋರ್ ನಿಂದ ಲೋಕಸಭೆಗೆ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜ್ನೋರ್ ಜಿಲ್ಲೆ ಪೂರ್ತಿ ಒಂದು ಕರಪತ್ರ ಹಂಚಲಾಗಿತ್ತು ಮತ್ತು ಆ ಕರಪತ್ರದಲ್ಲಿದ್ದದ್ದು ಏನು ಗೊತ್ತೆ? ಕಾನ್ಷೀರಾಮ್ ಸಿಐಎ ಏಜೆಂಟ್ ಎಂದು! ಸಿಐಎ(ಸೆಂಟ್ರಲ್ ಇಂಟೆಲ್ಲೆಜೆನ್ಸಿ ಆಫ್ ಅಮೆರಿಕಾ) ಅದು ಭಾರತದ ‘ರಾ’ ಮತ್ತು ಪಾಕಿಸ್ತಾನದ ಐಎಎಸ್ಐ ನಂತೆ ಅಮೆರಿಕಾದ ಗುಪ್ತಚರ ಇಲಾಖೆ. ಅಂದರೆ ಭಾರತವನ್ನು ದುರ್ಬಲಗೊಳಿಸಲು ಅಮೆರಿಕಾ ಕಳುಹಿಸಿರುವ ಗುಪ್ತಚರ ಇಲಾಖೆಯ ಏಜೆಂಟ್ ಕಾನ್ಷೀರಾಮ್ ಎಂದು ಆ ಕರಪತ್ರದಲ್ಲಿ ಮುದ್ರಿಸಲಾಗಿತ್ತು! ಮತ್ತು ಚುನಾವಣಾ ಆ ಸಮಯದಲ್ಲಿ ಅದನ್ನು ಹಂಚಲಾಗಿತ್ತು. ಈ ಬಗ್ಗೆ ಆಕ್ರೋಶಭರಿತರಾಗಿ ಕಾನ್ಷೀರಾಮ್ರವರು ಹೇಳಿದ್ದು “ನಾನು ಸಿಐಎ ಏಜೆಂಟ್ ಆಗಿದ್ದರೆ ಈ ಸರ್ಕಾರವೇಕೆ ನನ್ನ ವಿರುದ್ಧ ಕ್ರಮ ಜರುಗಿಸಿಲ್ಲ? ಇದು ತೋರಿಸುವುದೇನೆಂದರೆ ಇದು ಹಿಜಡಾಗಳ ಸರ್ಕಾರ!” ಎಂದು.
ಜಾತಿಗಳನ್ನು ಒಗ್ಗೂಡಿಸುವವರು ಜಾತಿವಾದಿಯಾಗಲು ಹೇಗೆ ಸಾಧ್ಯ?
ಒಮ್ಮೆ ಪತ್ರಕರ್ತರು ದಾದಾಸಾಹೇಬರನ್ನು ಕೇಳಿದ್ದು “ಜಾತಿವಾದಿ ಪಕ್ಷವೊಂದನ್ನು ಕಟ್ಟಿರುವ ನಿಮ್ಮಿಂದ ಜಾತಿ ನಿರ್ಮೂಲನೆ ಹೇಗೆ ಸಾಧ್ಯ?” ಎಂದು. ಅದಕ್ಕೆ ಸಾಹೇಬರು ಕೊಟ್ಟ ಉತ್ತರ “ಬಿಎಸ್ಪಿ ಜಾತಿವಾದಿ ಪಕ್ಷವಲ್ಲ. ನಾವು ಈ ದೇಶದ 6000 ಜಾತಿಗಳನ್ನು ಒಗ್ಗೂಡಿಸುತ್ತಿದ್ದೇವೆ ಮತ್ತು ಹೀಗಿರುವಾಗ ನಮ್ಮನ್ನು ನೀವು ಯಾವ ಅರ್ಥದಲ್ಲಿ ಜಾತಿವಾದಿ ಎನ್ನುವಿರಿ?”. ಹೌದು, ದಾದಾಸಾಹೇಬರ ಮಾತಿನಂತೆ ಈ ದೇಶದ ಎಲ್ಲ ಜಾತಿಗಳೂ ಒಗ್ಗೂಡದೆ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ.
ಯತಾಸ್ಥಿತಿವಾದಿ ಗಾಂಧಿ
ಒಮ್ಮೆ ಪತ್ರಕರ್ತರು ಸಾಹೇಬರಿಗೆ “ನಿಮ್ಮ ಕಾರ್ಯಕರ್ತರು ಗಾಂಧಿ ಬಗ್ಗೆ ಇಷ್ಟೊಂದು ಹಗೆತನ ಸಾಧಿಸಲು ಏನು ಕಾರಣ?” ಎಂದರು. ಅದಕ್ಕೆ ದಾದಾಸಾಹೇಬರು ಹೇಳುತ್ತಾರೆ “ಗಾಂಧಿ ಈ ದೇಶದ ಪ್ರತಿಯೊಂದರ ಮೂಲ! ನನಗೆ ಬದಲಾವಣೆ ಬೇಕು, ಡಾ.ಅಂಬೇಡ್ಕರ್ರವರು ಕೂಡ ಬದಲಾವಣೆ ಬಯಸಿದ್ದರು. ಆದರೆ ಗಾಂಧಿ ಯತಾಸ್ಥಿತಿವಾದದ ವಾರಸುದಾರರು. ಅವರಿಗೆ ಶೂದ್ರ ಶೂದ್ರನಾಗೇ ಉಳಿಯಬೇಕು. ಅಂದಹಾಗೆ ಗಾಂಧಿ ಈ ದೇಶವನ್ನು ಇಬ್ಬಾಗಗೊಳಿಸಲು ಏನೇನುಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಈ ನಿಟ್ಟಿನಲ್ಲಿ ಹೇಳುವುದಾದರೆ ನಾವು ಈ ದೇಶವನ್ನು ಒಗ್ಗೂಡಿಸುವ ದಿಸೆಯಲ್ಲಿ ಕೆಲಸಮಾಡುತ್ತಿದ್ದೇವೆ ಮತ್ತು ಎಲ್ಲ ರೀತಿಯ ಮಾನವ ನಿರ್ಮಿತ ವಿಭಜನೆಗಳನ್ನು ತೊಲಗಿಸುತ್ತೇವೆ”!
ಬಹುಜನ ಸಮಾಜ ಪಕ್ಷವೇ ಯಾಕೆ?
ಈ ಪ್ರಶ್ನೆಗೆ ಕಾನ್ಷೀರಾಮ್ ರವರು ಬರೆಯುತ್ತಾರೆ “ಇಂದು ಭಾರತದಲ್ಲಿ ಏಳು ರಾಷ್ಟ್ರೀಯ ಪಕ್ಷಗಳಿವೆ. ಈ ಎಲ್ಲ ಏಳು ರಾಷ್ಟ್ರೀಯ ಪಕ್ಷಗಳು ಪ್ರಬಲ ಹಿಂದೂ ಜಾತಿಗಳ ಕೈಯಲ್ಲಿವೆ. ಆ ಪ್ರಬಲ ಜಾತಿಗಳವರು ತಮ್ಮ ಆಳ್ವಿಕೆ ಮುಂದುವರೆಸಲು ಮತ್ತು ಹಿತಾಸಕ್ತಿ ಕಾಪಾಡಿಕೊಳ್ಳಲು ಈ ಏಳೂ ಪಕ್ಷಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ದಲಿತ-ಶೋಷಿತ ಸಮಾಜ ತನ್ನ ಬಳಿ ಶೇ.85 ಮತ ಬ್ಯಾಂಕ್ ಇದ್ದರೂ ಕೂಡ ಅಸಹಾಯಕ ಪರಿಸ್ಥಿತಿಯಲ್ಲಿದೆ. ಇದಕ್ಕಾಗಿ ನನಗೆ ಅನಿಸಿದ್ದೆಂದರೆ ನಾವು ನಮ್ಮದೇ ಆದ ಸ್ವಂತ ರಾಜಕೀಯ ಪಕ್ಷ ಹೊಂದಬೇಕು” ಎಂಬುದು.
ತ್ಯಾಗಕ್ಕೆ ಮತ್ತೊಂದು ಹೆಸರೇ ಕಾನ್ಷೀರಾಮ್
ತ್ಯಾಗ; ಬಹುಶಃ ಈ ಪದ ಕಾನ್ಷೀರಾಮ್ ರವರಿಗೆ ಅನ್ವರ್ಥವಾಗುತ್ತದೆ. ಮಹಾಭಾರತದಲ್ಲಿ ಕರ್ಣ ತನ್ನ ಕಲಶ ಕುಂಡಲಿಗಳನ್ನು ಕೊಟ್ಟು ತನ್ನ ಪ್ರಾಣ ತ್ಯಾಗ ಮಾಡಿದ. ಆದರೆ ದಾದಾಸಾಹೇಬರು? ತಮ್ಮ ನೌಕರಿ, ತಮ್ಮ ಕುಟುಂಬ, ತಮ್ಮ ಬಳಿಯಿದ್ದ ನೌಕರಿಯಿಂದ ಸಂಪಾದಿಸಿದ್ದ ಆ ಹಣ ಮತ್ತು ಆ ನೌಕರಿಯಿಂದ ಮಜಾ ಮಾಡಬಹುದಾಗಿದ್ದ ಆ ಅಮೂಲ್ಯ ಸಮಯ ಎಲ್ಲವನ್ನೂ ತ್ಯಾಗಮಾಡಿದರು. ಸರ್ಕಾರಿ ನೌಕರರಾಗಲು ಎಲ್ಲರೂ ಹಪಹಪಿಸುವುದನ್ನು ನೋಡುತ್ತೇವೆ. ಅದೂ ದಾದಾಸಾಹೇಬರು ಆ ಕಾಲದಲ್ಲೇ ಬಿಎಸ್ಸಿ ಮಾಡಿ ಡಿಆರ್ಡಿಒದಂಥ ಉನ್ನತ ಸಂಸ್ಥೆ ಸೇರಿದ್ದರು. ನಿವೃತ್ತಿಯಾಗುವ ಹೊತ್ತಿಗೆ ಅವರು ಈ ದೇಶದ ದೊಡ್ಡ ವಿಜ್ಞಾನಿಯಾಗಿ ಲಕ್ಷ ಲಕ್ಷ ಗಳಿಸಿ ವೈಭವೋಪೇತ ಜೀವನ ನಡೆಸಬಹುದಿತ್ತು. ಆದರೆ ಶೋಷಿತ ಸಮುದಾಯಕ್ಕೋಸ್ಕರ ಅದನ್ನು ಬಿಟ್ಟದ್ದು, ಶೋಷಿತ ಬಹುಜನರ ಏಳಿಗೆಗಾಗಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಶಪಥಗೈದದ್ದು, ಅಂತೆಯೇ ನುಡಿದಂತೆ ನಡೆದದ್ದು, ಅಗಾಧವನ್ನು ಸಾಧಿಸಿದ್ದು, ಬಹುಶಃ ಆ ತ್ಯಾಗಕ್ಕೆ ಎಣೆಯಿಲ್ಲ. ವರ್ಣಿಸಲು ಪದಗಳಿಲ್ಲ. ತನ್ನ ಪರಿಮಳವನ್ನು ಪ್ರಪಂಚಕ್ಕೆ ನೀಡಿ ತಾನು ಬಾಡುವ ಸುಂದರ ಹೂವು ಕಾನ್ಷೀರಾಮ್ರವರು. ನಿಂತುಹೋಗಿದ್ದ ಅಂಬೇಡ್ಕರ್ ರಥವನ್ನು 40 ವರ್ಷಗಳ ಕಾಲ ಮುನ್ನಡೆಸಿದರು. ಮರೆತುಹೋಗಬಹುದಾಗಿದ್ದ ಜೈಭೀಮ್ ಅನ್ನು ಬಾನೆತ್ತರಕೆ ಮೊಳಗಿಸಿದರು. ಅವರು ಇಂದು ನಮ್ಮ ನಡುವೆ ಇಲ್ಲದಿರಬಹುದು (ನಿಧನ; ಅಕ್ಟೋಬರ್ 9, 2006). ಆದರೆ ಅವರ ಅಮರ ತ್ಯಾಗ ನಮ್ಮ ನಡುವೆ ಉಳಿಯುತ್ತದೆ… ನಮ್ಮನ್ನು ಸದಾ ಕಾಡುತ್ತದೆ… ಅಶ್ರುತರ್ಪಣದೊಂದಿಗೆ…
ಜೈಭೀಮ್… ಜೈಭಾರತ್… ಜೈಕಾನ್ಷೀರಾಮ್…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 1 ಸಾವಿರದ 350 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಸುದ್ದಿದಿನ,ದಾವಣಗೆರೆ:ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದ ಬಳಿ ಅನುದಾನದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿಂದು 1 ಸಾವಿರದ 350 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿ-ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಹಣ ಇಲ್ಲದಿದ್ದರೆ ಇಷ್ಟೊಂದು ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಪ್ರಶ್ನಸಿದರು.
ರಾಜ್ಯದಲ್ಲಿ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಲ-ಸಲ್ಲ್ಲದ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಾಮನೂರು ಶಿವಶಂಕರಪ್ಪ ಒಂದು ಕುಟುಂಬ, ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ : ಡಿಸಿಎಂ ಡಿ.ಕೆ.ಶಿವಕುಮಾರ್

ಸುದ್ದಿದಿನ,ದಾವಣಗೆರೆ:ಜಿಲ್ಲಾ ವ್ಯಾಪ್ತಿಯ ಸುಮಾರು ₹1350 ಕೋಟಿ ರೂ. ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.
ದಾವಣಗೆರೆಯಲ್ಲಿ ನಡೆದ ಇಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸುಕದಿಂದ ಭಾಗಿಯಾಗಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ 6 ಶಾಸಕರು ಮತ್ತು ಒಬ್ಬ ಸಂಸದರನ್ನು ಆಯ್ಕೆ ಮಾಡಿ, ನಿಮ್ಮ ಸೇವೆಗೆ ಅವಕಾಶವನ್ನು ಮಾಡಿಕೊಟ್ಟಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದರು.
ನಿಮ್ಮೆಲ್ಲರ ಶಕ್ತಿಯಿಂದಾಗಿ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಇಡೀ ದೇಶಕ್ಕೆ ಸಂದೇಶವನ್ನು ಕಳುಹಿಸಿರುವುದು ನಮ್ಮ ಪುಣ್ಯ. ಬೆಲೆಯೇರಿಕೆಯಿಂದ ತತ್ತರಿಸಿದ ಸಾವಿರಾರು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಮೂಲಕ ನೆರವಾಗುತ್ತಿದ್ದೇವೆ. ಹಲವು ವರ್ಷಗಳಿಂದ ದಾಖಲೆ ಇಲ್ಲದೇ ಅಲೆಯುತ್ತಿದ್ದವರಿಗೆ ‘ಭೂ ಗ್ಯಾರಂಟಿ’ ಯೋಜನೆ ಕೊಟ್ಟಿದ್ದೇವೆ. ಕಂದಾಯ ಇಲಾಖೆ ಮೂಲಕ ದರಖಾಸ್ತು ಪೋಡಿ ವಿತರಣೆ ಮಾಡಿದ್ದೇವೆ. ಈ ಹಿಂದೆ ಯಾವುದೇ ಸರ್ಕಾರವು ಇಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆಯೋ ಆ ಸಂದರ್ಭದಲ್ಲಿ ಬಡವರ ಬದುಕು ಬದಲಾಯಿಸುವ ಕಾರ್ಯಕ್ರಮವನ್ನು ರೂಪಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ನಮ್ಮ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಮತ್ತು ಅವರ ಕುಟುಂಬ ಒಂದು ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ನಾನು ಬಂದಾಗ ಯಾರು ಸಹಾಯ ಮಾಡುವವರು ಇರಲಿಲ್ಲ. ಬಿಜೆಪಿ ಸರ್ಕಾರವಿದ್ದರೂ ಸಹಾಯ ಮಾಡಲಿಲ್ಲ. ಆಗ ಅವರು 10 ಕೋಟಿ ರೂ. ಹಣವನ್ನು ಕೊಟ್ಟು ಲಸಿಕೆಯನ್ನು ದಾವಣಗೆರೆ ಜನರಿಗಾಗಿ ಹಂಚಿ ಮಾನವೀಯತೆ ಮೆರೆದಿದ್ದರು. ಅಂತಹ ಹೃದಯ ಶ್ರೀಮಂತಿಕೆ ಇರುವವರು ನಮ್ಮ ಶಾಮನೂರು ಶಿವಶಂಕರಪ್ಪನವರು. ಇಂದು ಅವರ 95ನೇ ಜನ್ಮೋತ್ಸವ ಸಂಭ್ರಮ ಆಚರಿಸಿದ್ದೇವೆ. ಅಂದಿನಿಂದ ಇಂದಿನವರೆಗೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರು ಹಲವು ಕ್ಷೇತ್ರದಲ್ಲಿ ಸಾಧನೆಗೈದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯನ್ನು ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ4 days ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ4 days ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ
-
ಅಂಕಣ1 day ago
ಕವಿತೆ | ಅವ ಸುಡುತ್ತಾನೆ
-
ದಿನದ ಸುದ್ದಿ4 days ago
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ
-
ದಿನದ ಸುದ್ದಿ43 minutes ago
ಶಾಮನೂರು ಶಿವಶಂಕರಪ್ಪ ಒಂದು ಕುಟುಂಬ, ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ : ಡಿಸಿಎಂ ಡಿ.ಕೆ.ಶಿವಕುಮಾರ್