Connect with us

ದಿನದ ಸುದ್ದಿ

ನುಡಿಯ ಒಡಲು – 16 | ವಿಚಾರ ಸಂವಹನ : ತೊಡಕುಗಳೆಂತಹವು..?

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ವಿಚಾರ ಎಂಬ ಪರಿಕಲ್ಪನೆಯ ಅರ್ಥ ವ್ಯಾಪ್ತಿ ದೊಡ್ಡದು. ಇದರ ತಾತ್ವಿಕ ಚೌಕಟ್ಟನ್ನು ಕುರಿತು ವಿಶ್ಲೇಷಣೆ ಮಾಡುವ ಬದಲಾಗಿ, ಈ ಪರಿಕಲ್ಪನೆಯ ತಾತ್ವಿಕ ಪರಿಣಾಮಗಳ ಬಗೆಗೆ ಮಾತ್ರ ಇಲ್ಲಿ ಚರ್ಚಿಸುತ್ತೇನೆ. ಏಕೆಂದರೆ ಬಹುತೇಕ ಸನ್ನಿವೇಶದಲ್ಲಿ ಓದುಗರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು ಎನ್ನುವ ಅಭಿಪ್ರಾಯಗಳನ್ನು ಕೇಳುತ್ತೇವೆ ಹಾಗೂ ಹೇಳುತ್ತಿರುತ್ತೇವೆ.

ಅಂದರೆ ಬರೆಯುವವರು ಮತ್ತು ಓದುವವರು ಬೇರೆ ಬೇರೆ ವರ್ಗಕ್ಕೆ ಸೇರಿದ್ದೇವೆ ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲಿದೆ. ಇಂತಹದೊಂದು ನಿಲುವು ಯಾಕೇ ತಲೆಯೆತ್ತಿದೆ ಎಂದು ಕೇಳಿದರೆ, ಈ ಪ್ರಶ್ನೆಗೆ ಉತ್ತರಿಸುವುದು ದುಸ್ತರ. ಸಂವಹನ ನಡೆಸುವ ಪ್ರತೀ ಸಂದರ್ಭದಲ್ಲಿಯೂ ನಾವಾಡುವ ಮಾತುಕತೆ, ಭಾಷಣ, ಪ್ರವಚನ, ಸಂಭಾಷಣೆ ಹಾಗೂ ಬರೆಯುವ ಸಂಕಥನಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತೇವೆ.

ಅಂದರೆ ಅರ್ಥ ಮಾಡಿಕೊಳ್ಳುವ ಬಗೆಗಳನ್ನು ಸಾಮಾನ್ಯವಾಗಿ ಸಂವಹನಶೀಲವಾಗಿದೆ ಎಂದು ಇಲ್ಲವೇ ಸಂವಹನ ಸಹಜವಾಗಿಲ್ಲವೆಂದು ಹೇಳುತ್ತಿರುತ್ತೇವೆ. ಸಂವಹನ ಪ್ರಕ್ರಿಯೆಯಲ್ಲಿ ಎದುರಾಗುವ ಬಿಕ್ಕಟ್ಟುಗಳಿಗೆ ಏನು ಕಾರಣಗಳಿರಬಹುದು ಎಂದು ಕೇಳಿದರೆ, ಆಯಾ ವ್ಯಕ್ತಿ ಬಳಸುವ ಭಾಷೆಯ ಸ್ವರೂಪ, ನಿರೂಪಣೆ ಮತ್ತು ವಾಕ್ಯಸರಣಿಗಳಲ್ಲಿಯೇ ತೊಡಕುಗಳಿವೆ ಎಂದು ಹೇಳುತ್ತೇವೆ. ಇಡಿಯಾಗಿ ಇದನ್ನು ಸಂಕೀರ್ಣ ಸ್ಥಿತಿಯೆಂದು ಗುರುತಿಸುತ್ತೇವೆ.

ಈ ಸಂಕೀರ್ಣತೆ ಭಾಷೆಗೆ ಸಂಬಂಧಿಸಿದ ಸಂಗತಿಯೋ? ಇಲ್ಲವೇ ವಿಚಾರಕ್ಕೆ ಸಂಬಂಧಿಸಿದ್ದೋ? ಎನ್ನುವುದರ ಬಗೆಗೆ ನಮಗೆ ಯಾವುದೇ ಖಚಿತತೆ ಇರುವುದಿಲ್ಲ. ಒಟ್ಟಾರೆ ಈ ಸ್ಥಿತಿಯನ್ನು ಸಂವಹನಶೀಲವಲ್ಲದ್ದು ಎಂದು ಭಾವಿಸುತ್ತೇವೆ. ಇದುವೇ ಸರಿಯಾದ ನಿಲುವು ಎಂದೂ ನಂಬಲಾಗುತ್ತದೆ. ಈ ನಿಲುವನ್ನು ಪರಿಶೀಲಿಸುವ ಬದಲಾಗಿ ಸರಿಯಾದುದು ಎಂದು ಒಪ್ಪಿಕೊಳ್ಳಲಾಗುತ್ತದೆ.

ಹೇಳುವವರು, ಕೇಳುವವರು, ಬರೆಯುವವರು ಮತ್ತು ಓದುವವರು ಇವರೆಲ್ಲರಲ್ಲೂ ನುಡಿ ರಚನೆ ಮತ್ತು ಬಳಕೆಯ ನೆಲೆಗಳು ಸಮಾನವಾಗಿರುತ್ತವೆ. ನುಡಿಯ ಕಸುವನ್ನು ಪಡೆಯುವ ಬಗೆಯಲ್ಲಿ ಯಾವುದೇ ಏರುಪೇರುಗಳಿರುವುದಿಲ್ಲ. ಈ ನುಡಿ ಕಸುವು ಎನ್ನುವುದು ಎಲ್ಲರಲ್ಲೂ ಸಮಾನವಾಗಿಯೇ ನೆಲೆಗೊಂಡಿರುತ್ತದೆ. ಆದರೆ ಸಂವಹನದ ಮೂಲಕ ಮಾಡುವ ವಿಶ್ಲೇಷಣೆ, ವ್ಯಾಖ್ಯಾನ ಇಲ್ಲವೇ ನಿರ್ವಚಿಸುವ ಕ್ರಮಗಳಲ್ಲಿ ವ್ಯತ್ಯಾಸಗಳು ಏರ್ಪಡುವುದು ಸಹಜ.

ಏಕೆಂದರೆ, ಪ್ರತೀ ನುಡಿಯೊಳಗೆ ವಿಚಾರ ಸಂವಹನ ಮತ್ತು ಸಾಮಾನ್ಯ ಸಂವಹನವನ್ನು ಏರ್ಪಡಿಸುವ ಬಗೆಗಳನ್ನು ಸಜ್ಜುಗೊಳಿಸುವ ಜರೂರಿರುತ್ತದೆ. ಈ ವಿನ್ಯಾಸ ಸಾರ್ವತ್ರಿಕವಾಗಿ ಎಲ್ಲ ನುಡಿಗಳಲ್ಲಿಯೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಸಂಬಂಧಿಸಿದ ‘ಅರಿವು’ ಮತ್ತು ‘ಅಭಿವ್ಯಕ್ತಿಶೀಲ’ ಚಟುವಟಿಕೆಗಳಲ್ಲಿ ಜನರು ಭಾಷೆ ಮತ್ತು ಭಾಷಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಬಿಕ್ಕಟ್ಟುಗಳನ್ನು ನಿರಂತರವಾಗಿ ಎದುರಿಸುತ್ತಾರೆ.

ನಾವು ದಿನನಿತ್ಯ ಬದುಕಿನಲ್ಲಿ ಕೆಲವು ನಿರ್ದಿಷ್ಟ ರೂಢಿಗಳಲ್ಲಿಯೇ ಮುಳುಗಿರುತ್ತೇವೆ ಹಾಗೂ ಅಷ್ಟರಲ್ಲಿಯೇ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದೆಲ್ಲವೂ ಭಾಷೆಯ ಮೂಲಕ ನಡೆಯುತ್ತದೆ ದಿಟ. ಆದರೆ ಭಾಷೆಯು ಹಲವು ಬಗೆಯ ಸಂಜ್ಞೆ, ಸಂಕೇತಗಳನ್ನು ಬಳಸಿಕೊಳ್ಳುತ್ತದೆ. ಈ ಲೋಕದ ಎಲ್ಲ ವಿದ್ಯಮಾನಗಳನ್ನು ಅರಿಯಲು ಮತ್ತು ಅರ್ಥೈಸಲು ಈ ಸಂಜ್ಞಾ ವ್ಯಾಪಾರಗಳ ಮೂಲಕ ಪ್ರಯತ್ನಿಸುತ್ತೇವೆ.

ಇದೆಲ್ಲವೂ ಕೇವಲ ಭಾಷೆಯ ಮೇಲೆ ಮಾತ್ರ ಕೇಂದ್ರಿಕೃತವಾಗಿರುವುದಿಲ್ಲ. ಬದಲಾಗಿ ಭಾಷೆ ಅಮೂರ್ತ ವಿದ್ಯಮಾನವಾಗಿ ಹೊರಹೊಮ್ಮುತ್ತದೆ. ಸಾಮಾನ್ಯವಾಗಿ ಭಾಷೆಯು ಏಕಕಾಲಕ್ಕೆ ಪಾರದರ್ಶಕವೂ ಮತ್ತು ಅಗೋಚರವೂ ಆಗಿರುತ್ತದೆ. ಈ ಇಕ್ಕಟ್ಟಿನಲ್ಲಿಯೇ ನಾವು ಲೋಕದ ಎಲ್ಲ ವ್ಯವಹಾರಗಳನ್ನು ಗ್ರಹಿಸುತ್ತೇವೆ, ಅರ್ಥೈಸುತ್ತೇವೆ ಮತ್ತು ಅವುಗಳ ಬಗೆಗೆ ಮಾತ್ನಾಡುತ್ತೇವೆ. ಮಾತು, ಮಾತಿಗೆ ಸಂಬಂಧಿಸಿದ ವಿಷಯ ಮತ್ತು ವ್ಯಕ್ತಿಗಳ ನಡುವಣ ಸಂಬಂಧಗಳ ಮೂಲಕವೇ ನಮ್ಮ ಬಹುತೇಕ ಸಂವಹನ ಚಟುವಟಿಕೆಗಳು ಏರ್ಪಡುತ್ತವೆ.

ಹಾಗಾದರೆ, ಭಾಷೆಯನ್ನು ಪಾರದರ್ಶಕ ಮತ್ತು ಕ್ರಿಯಾಶೀಲ ವ್ಯಾಪಾರವನ್ನಾಗಿ ಗ್ರಹಿಸಲು ಹೇಗೆ ಸಾಧ್ಯ? ಏಕೆಂದರೆ ನುಡಿ ಕಸುವು ಪ್ರಕಟಗೊಳ್ಳುವ ಇಡೀ ಪ್ರಕ್ರಿಯೆಯಲ್ಲಿ ಕೇವಲ ಭಾಷಿಕ ವಿವರಗಳು ಮಾತ್ರ ಪಾಲ್ಗೊಳ್ಳುವುದಿಲ್ಲ. ಹೊರತಾಗಿ ಸಾಂಸ್ಕೃತಿಕ, ಮಾನಸಿಕ ಹಾಗೂ ಸಾಂಕೇತಿಕ ವಿದ್ಯಮಾನಗಳು ಸೇರಿರುತ್ತವೆ. ಯಾವುದೇ ಅಮೂರ್ತ ರೂಪ, ವಿದ್ಯಮಾನ, ವಸ್ತುಗಳನ್ನು ಗುರುತಿಸುವುದು ಮಾತ್ರ ಇದೇ ಭಾಷಿಕ ವ್ಯಾಪಾರಗಳಿಂದ. ಈ ಭಾಷಿಕ ವ್ಯವಹಾರಗಳನ್ನು ‘ಕ್ರಿಯೆ’ ಮತ್ತು ‘ರಚನೆ’ಗಳ ಸ್ವರೂಪದಲ್ಲಿ ಗುರುತಿಸಲಾಗುತ್ತೆ. ಆದ್ದರಿಂದ ಈ ಭಾಷಿಕ ವಿದ್ಯಮಾನಗಳನ್ನು ಅತ್ಯಂತ ಸಮಂಜಸವಾದ ನೆಲೆಗಳನ್ನಾಗಿ ಒಪಿಕೊಳ್ಳಲಾಗುತ್ತದೆ.

ನಾವು ಮಾತ್ನಾಡುವ, ಕೇಳುವ, ಯಾವುದೇ ಮಾತಿಗೆ ಪ್ರತಿಕ್ರಿಯಿಸುವ ಬಗೆಗಳು ‘ಸಂವಾದದಲ್ಲಿ ಮಾತಿಗೆ’ ತೊಡಗಿಕೊಳ್ಳುವ ಬಗೆಯಾಗಿದೆ. ಸಂವಾದ ಕೇವಲ ಭಾಷಿಕ ವ್ಯವಹಾರವಲ್ಲ. ಅದು ಸಾಮಾಜಿಕ, ಮಾನಸಿಕ ನಂಟುಗಳನ್ನು ಪಡೆದಿರುತ್ತದೆ. ಇಡೀ ಲೋಕಾನುಭವನ್ನು ಗ್ರಹಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ನಾವು ಪ್ರತಿಭಾನ (ಇಂಟ್ಯೂಶನ್) ಹಾಗೂ ಬುದ್ಧಿವ್ಯಾಪಾರ (ರೀಸನ್)ಗಳಿಂದ ಪಡೆಯುತ್ತೇವೆ ಎಂಬ ವಾದವು ಪ್ರಬಲವಾಗಿದೆ. ಆದರೆ ಮನುಷ್ಯನ ಮಾನಸಿಕ ತಂತ್ರಗಾರಿಕೆಗೆ ಹೊರತಾದ ವಿಶೇಷ ಭಾಷಿಕ ಸಾಮರ್ಥ್ಯವು ಮನುಷ್ಯರಲ್ಲಿ ಅಂತಸ್ಥವಾಗಿದೆ. ಪರಿಣಾಮವಾಗಿ ಭಾಷೆಯ ಮೂಲ ವಿಷಯ ಹಾಗೂ ಅರ್ಥಗಳು, ಮಾನವನ ಆಲೋಚನಾಕ್ರಮಕ್ಕೆ ಆಳವಾದ ಅಂಶಗಳಾಗಿವೆ ಎನ್ನುವ ಚಿಂತನೆಗೆ ಬಲಬಂದಿದೆ.

ಫ್ರೆಂಚ್ ತತ್ವಜ್ಞಾನಿಯ ರೆನೆ ಡೆಕಾರ್ಟಸ್‍ನ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎನ್ನುವ ಪ್ರಸಿದ್ಧ ಮಾತಿದೆ. ಇದು ಮನುಷ್ಯನ ಅಸ್ತಿತ್ವದ ಮೂಲ ಚಹರೆಯಾಗಿದೆ. ಮನುಷ್ಯ ಯೋಚಿಸಬಲ್ಲ ಎಂಬೀ ನೆಲೆಯೇ ಆತನ/ಅವಳ ಪ್ರಾಥಮಿಕ ಗುರುತಾಗಿದೆ. ಬುದ್ಧಿವ್ಯಾಪಾರ (ರೀಸನ್) ಮತ್ತು ವಿಜ್ಞಾನ (ಸೈಯನ್ಸ್) ಎಂಬ ಪರಿಕಲ್ಪನೆಗಳು ಮನುಷ್ಯನ ಚಿಂತನೆಯ ತಳಹದಿಯಾಗಿದೆ. ಈ ಇಡೀ ಆಲೋಚನಾ ಕ್ರಮವು ‘ವೈಚಾರಿಕ ಅನುಮಾನ’ (ರಾಡಿಕಲ್ ಡೌಟ್)ಎನ್ನುವ ತಾತ್ವಿಕ ಪರಿಕಲ್ಪನೆಯ ಆಧಾರದ ಮೇಲೆ ನಿಂತಿದೆ.

ಯಾವುದೇ ತಿಳಿವು ಒಂದು ಆತ್ಯಂತಿಕ ಸತ್ಯವೆಂದು ನಿರ್ದರಿಸಲು ಆಗುವುದಿಲ್ಲ ಎಂಬುದನ್ನು ಈ ಮಾತು ಸೂಚಿಸುತ್ತದೆ. ಕೇವಲ ಮನಸ್ಸು ಇಲ್ಲವೇ ಪ್ರಜ್ಞೆಯ ಮೂಲಕ ಮಾತ್ರ ಗ್ರಹಿಕೆಗಳನ್ನು ನಂಬುವ, ಅನುಮಾನಿಸುವ ನೆಲೆಯಿರುತ್ತದೆ. ಈ ಇಡೀ ನೆಲೆಯನ್ನು ಡೆಕಾರ್ಟಸ್ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎಂದು ಸೂತ್ರೀಕರಿಸಿದ್ದಾನೆ. ಇದನ್ನೇ ಇತಾಲಿಯ ಭಾಷಾ ಚಿಂತಕ ಆಂಡ್ರಿಯಾ ಮೋರೊ ‘ಐ ಸ್ಪೀಕ್ ದೇರ್ಫೋರ್ ಐ ಆ್ಯಮ್’ ಎಂದೂ ಗುರುತಿಸಿದ್ದಾನೆ.

ಮನಸ್ಸು (ಮೈಂಡ್) ಮತ್ತು ದೇಹ (ಬಾಡಿ) ಎರಡು ಭಿನ್ನ ಮತ್ತು ವಿಶಿಷ್ಟ ಘಟಕಗಳು ಎಂಬ ಪ್ರಮೇಯವನ್ನೂ ಡೆಕಾರ್ಟಸ್ ಮಂಡಿಸಿದನು. ಏಕೆಂದರೆ ದೇಹ ಮನಸ್ಸಿನಂತೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕವಲ್ಲ. ಇಡೀ ಲೋಕವ್ಯವಹಾರವನ್ನು ಗ್ರಹಿಸುವುದು ಕೇವಲ ಮನಸ್ಸಿನಿಂದ ಮಾತ್ರ. ಮನಸ್ಸು ಇರುವುದರಿಂದಲೇ ದೇಹವನ್ನೂ ಗ್ರಹಿಸಲಾಗುತ್ತದೆ. ಇಲ್ಲಿ ದೇವರ ಅಸ್ತಿತ್ವವನ್ನು ನಿರಾಕರಿಸಿ ಮನಸ್ಸು ಮತ್ತು ಬುದ್ಧಿವ್ಯಾಪಾರಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡಲಾಯಿತು.

ಭಾಷೆಯಲ್ಲಿಯೂ ಬೇರೆ ಬೇರೆ ಪದಗಳನ್ನು ಸಂಯೋಜಿಸಿಕೊಂಡು ವಿಶಿಷ್ಟ ಅರ್ಥಗಳನ್ನು ರೂಪಿಸುವ ಸಾಮರ್ಥ್ಯವೂ ಇದೇ ಮನಸ್ಸಿನಲ್ಲಿ ಅಂತಸ್ಥವಾಗಿರುವ ನುಡಿ ಕಸುವಿನಿಂದ ಮಾತ್ರ. ಆದರೆ ಈ ಸಾಮರ್ಥ್ಯವನ್ನು ಸಾಂಸ್ಕೃತಿಕ ಪರಿಣತಿಯನ್ನಾಗಿ ರೂಪಿಸಿಕೊಳ್ಳುವ ಅವಶ್ಯಕತೆಯಿದೆ. ಈ ಪರಿಣತಿಯನ್ನು ಪಡೆಯದ ಮನುಷ್ಯನು ಕೂಡ ನುಡಿಯನ್ನು ಅರಿಯದ ಇಲ್ಲವೇ ನುಡಿಯದ ಮೂರ್ಖನೂ ಅಲ್ಲ ಮತ್ತು ಶತದಡ್ಡನೂ ಅಲ್ಲ. ಹಾಗಾಗಿ ನುಡಿಯ ಮೂಲಕ ಪ್ರಕಟಗೊಳ್ಳುವ ಎಲ್ಲ ವ್ಯಾಪಾರಗಳನ್ನು ಗ್ರಹಿಸುವ ಪ್ರಾಥಮಿಕ ಸಾಮರ್ಥ್ಯ ಪ್ರತೀ ಮನುಷ್ಯರಲ್ಲಿ ಅಂತಸ್ಥವಾಗಿದೆ.

ಅದರೆ ವೈಚಾರಿಕ ವಿನ್ಯಾಸಗಳನ್ನು ಗ್ರಹಿಸುವಲ್ಲಿ ತೊಡಕುಗಳು ಎದುರಾಗುತ್ತವೆ. ಏಕೆಂದರೆ ಎಲ್ಲ ಬಗೆಯ ಜ್ಞಾನ/ವಿಚಾರದ ಸಮರ್ಥನೆಗಳು ವೈಜ್ಞಾನಿಕ ಮತ್ತು ಸಾರ್ವತ್ರಿಕವಾಗಿರುವುದಿಲ್ಲ. ನುಡಿಯ ಜೊತೆಗೆ ಸಾಂಸ್ಕೃತಿಕ, ವೈಜ್ಞಾನಿಕ ಇತ್ಯಾದಿ ವಿಶೇಷ ಪರಿಣತಿಯನ್ನು ಮನುಷ್ಯರು ರೂಪಿಸಿಕೊಂಡಾಗ ಮಾತ್ರ ಗ್ರಹಿಕೆಗೆ ಯಾವುದೇ ತೊಡಕುಗಳಿರುವುದಿಲ್ಲ. ಅದರೆ ಹೇಳುವ ಇಲ್ಲವೇ ಬರೆಯುವ ಸನ್ನಿವೇಶದಲ್ಲಿ ಇಂತಹದೊಂದು ಬಿಕ್ಕಟ್ಟು ಏರ್ಪಡುವುದಿಲ್ಲ. ವ್ಯಕ್ತಿ ತಾನಾಡುವ ಮಾತುಗಳಿಗೆ ಖಚಿತ ಅರ್ಥಗಳನ್ನು ಕಲ್ಪಿಸಿಕೊಂಡು ಹೇಳುತ್ತಾನೆ/ಳೆ ಮತ್ತು ಬರೆಯುತ್ತಾಳೆ/ನೆ. ತಾನಾಡುವ ಮಾತು/ಬರಹಗಳ ಅರ್ಥ ನಿರ್ದಿಷ್ಟತೆಯನ್ನು ಗ್ರಹಿಸದೇ ಹೋದರೆ ಏನೆಲ್ಲ ಅಪಾಯಗಳು ಉಂಟಾಗಬಹುದು ಎಂಬ ನೆನಪಿನಲ್ಲಿಯೇ ಅಪಾಯಗಳಿವೆ ಅಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.

ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.

4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್

Published

on

ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.

“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.

ಶ್ರೀ ಎ. ಜಯಪ್ಪ ಅವರು ಎನ್‌.ಎಸ್‌.ಎಸ್‌. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್‌. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

Published

on

ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.

ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending