Connect with us

ದಿನದ ಸುದ್ದಿ

ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಮಾದರಿಯಲ್ಲಿ ಬೌದ್ಧ ಧರ್ಮ ಕಟ್ಟಲು ಬಾಬಾಸಾಹೇಬ್ ಅಂಬೇಡ್ಕರರು ರೂಪಿಸಿದ್ದ ನೀಲನಕ್ಷೆ

Published

on

  • ರಘೋತ್ತಮ ಹೊ.ಬ

1954 ಡಿಸೆಂಬರ್ 4 ರಂದು ಬರ್ಮಾದ ರಂಗೂನ್ ನಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತದೆ. ಆ ಸಮ್ಮೇಳನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ಮುಖ್ಯ ಅತಿಥಿಯಾಗಿರುತ್ತಾರೆ. ಆ ಸಂದರ್ಭದಲ್ಲಿ ಬೌದ್ಧ ಶಾಸನ ಕೌನ್ಸಿಲ್ ನಲ್ಲಿ ಅವರು ಭಾರತದಲ್ಲಿ ಬೌದ್ಧ ಧರ್ಮ ಬೆಳೆಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ವಿವರಿಸಲು ಸಭೆಗೆ ನೀಲನಕ್ಷೆ ಮಾದರಿಯಲ್ಲಿ ಒಂದು ಮನವಿ ಪತ್ರ ಸಲ್ಲಿಸುತ್ತಾರೆ.

ಆ ನೀಲನಕ್ಷೆಯ ಮುಖ್ಯಾಂಶಗಳನ್ನು ದಾಖಲಿಸುವುದಾದರೆ

ಮೊದಲಿಗೆ ಬಾಬಾಸಾಹೇಬರು ಹೇಳುವುದು ಮತಾಂತರ ಹೊಂದಿದವರಿಗೆ ಅಗತ್ಯವಾಗಿರುವ ಒಂದು ಬೌದ್ಧ ಧರ್ಮಗ್ರಂಥದ ಬಗ್ಗೆ. ಈ ನಿಟ್ಟಿನಲ್ಲಿ ಕ್ರೈಸ್ತ ಧರ್ಮ ಹೋಲಿಸುವ ಅವರು ಕ್ರೈಸ್ತ ಧರ್ಮ ಬೆಳೆಯಲು ಕಾರಣ ಅವರಲ್ಲಿ ಇರುವ ಬೈಬಲ್ ನಂತಹ ಯಾರಾದರೂ ಸುಲಭವಾಗಿ ಇಟ್ಟುಕೊಳ್ಳಬಹುದಾದ ಸಣ್ಣ ಪುಸ್ತಕ. ಆದರೆ ಬೌದ್ಧ ಧರ್ಮಕ್ಕೆ ಅಂತಹ ಅನುಕೂಲ ಇಲ್ಲ ಎನ್ನುತ್ತಾರೆ.

ಇದಕ್ಕೆ ಅವರು ಕೊಡುವ ಕಾರಣ ಸಾಮಾನ್ಯ ಅನುಯಾಯಿಯೊಬ್ಬ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪಾಳಿ ಭಾಷೆಯ 73 ಆ ಬೃಹತ್ ಸಂಪುಟಗಳನ್ನು ಓದಲಾರ ಎಂಬುದು. ಖಂಡಿತ, ಬಾಬಾಸಾಹೇಬರು ಹೇಳುವಂತೆ 73 ಆ ಬೃಹತ್ ಸಂಪುಟಗಳನ್ನು ಸಾಮಾನ್ಯ ಓದುಗನಿರಲಿ ಪಂಡಿತರೂ ಕೂಡ ಓದಲಾರರು. ಈ ನಿಟ್ಟಿನಲ್ಲಿ ಬೈಬಲ್ ಮಾದರಿಯಲ್ಲೇ ಬೌದ್ಧಧರ್ಮಕ್ಕೂ ಧರ್ಮ ಗ್ರಂಥವೊಂದನ್ನು ತಯಾರಿಸುವ ಇಂಗಿತ ವ್ಯಕ್ತಪಡಿಸುವ ಬಾಬಾಸಾಹೇಬರು ಆ ಗ್ರಂಥದಲ್ಲಿ ಬುದ್ಧನ ಸಾಮಾಜಿಕ ಮತ್ತು ನೈತಿಕ ನಿಲುವಿಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯತೆ ಹೇಳುತ್ತಾರೆ.

ಯಾಕೆಂದರೆ ಅವರು ಹೇಳುವುದು ಇದುವರೆಗೂ ಬೌದ್ಧ ಗ್ರಂಥಗಳಲ್ಲಿ ಆದ್ಯತೆ ಕೊಟ್ಟಿರುವುದು ಧ್ಯಾನ, ಚಿಂತನೆ ಮತ್ತು ಅಭಿಧಮ್ಮಕ್ಕೆ. ಈ ದಿಸೆಯಲ್ಲಿ ಈ ಮಾದರಿಯಲ್ಲಿ ಅಂದರೆ ಧ್ಯಾನ, ಚಿಂತನೆ ಮತ್ತು ಅಭಿಧಮ್ಮದ ಮಾದರಿಯಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಹರಡುವುದನ್ನು ಮುಂದುವರೆಸಿದ್ದೇ ಆದರೆ ಅದು ಅಕ್ಷರಶಃ ಬೌದ್ಧ ಧರ್ಮದ ಬೆಳವಣಿಗೆಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಅಂಬೇಡ್ಕರರು.

ಇನ್ನು ಎರಡನೇ ಅಂಶ ತಮ್ಮ ಆ ನೀಲನಕ್ಷೆಯಲ್ಲಿ ಬಾಬಾಸಾಹೇಬರು ಹೇಳುವುದು; ಬೌದ್ಧ ಧರ್ಮದಲ್ಲಿ ಸಾಮಾನ್ಯ ಅನುಯಾಯಿಗಳಿಗೆ ಕ್ರೈಸ್ತ ಧರ್ಮದ ಮಾದರಿಯಲ್ಲಿ ದೀಕ್ಷೆ ನೀಡುವ ಪದ್ಧತಿ ಆರಂಭಿಸುವ ಬಗ್ಗೆ. ಯಾಕೆಂದರೆ ಅವರು ಹೇಳುವುದು ಬೌದ್ಧ ಧರ್ಮದಲ್ಲಿ ಭಿಕ್ಕುಗಳಿಗೆ ಮಾತ್ರ ಈ ಥರದ ದೀಕ್ಷಾ ನೀಡುವ ಪದ್ಧತಿ ಇದ್ದು ಮತಾಂತರ ಆಗುವ ಸಾಮಾನ್ಯ ಅನುಯಾಯಿಗಳಿಗೆ ಅಂತಹ ಯಾವುದೇ ದೀಕ್ಷಾ ಪದ್ಧತಿ ಇಲ್ಲ ಎಂದು.

ಈ ಹಿನ್ನೆಲೆಯಲ್ಲಿ ಎಷ್ಟೋ ಜನ ಬೌದ್ಧ ಧರ್ಮಕ್ಕೆ ಸೇರುತ್ತಾರದರೂ ಅಂತಹ ಒಂದು ದೀಕ್ಷಾ ಪದ್ಧತಿ ಇಲ್ಲದ್ದರಿಂದಾಗಿ ಇದ್ದಕ್ಕಿದ್ದಂತೆ ಅವರು ಬಿಟ್ಟು ಹೋಗುತ್ತಿದ್ದಾರೆ. ಆದ್ದರಿಂದ ಕ್ರೈಸ್ತ ದೀಕ್ಷೆಯ ಮಾದರಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೌದ್ಧ ಎನಿಸಿಕೊಳ್ಳಲು ಕಡ್ಡಾಯವಾಗಿ ಅಂತಹ ಒಂದು ದೀಕ್ಷೆ ಸ್ವೀಕರಿಸುವ ಅಗತ್ಯತೆ ಅವರು ಹೇಳುತ್ತ ಅಂತೆಯೇ ಒಂದು ಬೌದ್ಧ ದೀಕ್ಷಾ ಪದ್ಧತಿಯನ್ನು ಆರಂಭಿಸುವ ಬಗ್ಗೆ ಅಂಬೇಡ್ಕರ್ ರು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ.

ಹಾಗೆಯೇ ಆ ದೀಕ್ಷೆಯಲ್ಲಿ ಕೇವಲ ಪಂಚಶೀಲ ಉಚ್ಛರಿಸಿದರಷ್ಟೆ ಸಾಲದು ಜೊತೆಗೆ ಅಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಬೇಕು ಹೇಗೆಂದರೆ ದೀಕ್ಷೆ ಸ್ವೀಕರಿಸಿದ ತಕ್ಷಣ ಆತನಲ್ಲಿ ತಾನು ಹಿಂದೂ ಎಂಬ ಮನೋಭಾವ ಹೋಗಬೇಕು ಆತ ಹೊಸ ಮನುಷ್ಯನಂತೆ ಆಗಬೇಕು ಎಂದು ಅಂಬೇಡ್ಕರರು ತಮ್ಮ ಆ ದೀಕ್ಷಾ ಪದ್ಧತಿ ಇರಬೇಕಾದ ರೀತಿಯನ್ನು ಹೇಳುತ್ತಾರೆ.

ಮುಂದುವರಿದು ಬೌದ್ಧ ಧರ್ಮ ಬೆಳವಣಿಗೆಯ ತಮ್ಮ ಆ ಬೃಹತ್ ಯೋಜನೆಯ ನೀಲನಕ್ಷೆಯಲ್ಲಿ ಅವರು ಹೇಳುವುದು ಬೌದ್ಧ ಧರ್ಮ ಬೋಧಕರ ಬಗ್ಗೆ. ಈ ನಿಟ್ಟಿನಲ್ಲಿ ಬೌದ್ಧ ಧರ್ಮ ಬೋಧಕರನ್ನು ನೇಮಿಸಿಕೊಳ್ಳಬೇಕೆನ್ನುವ ಅಂಬೇಡ್ಕರರು ಅಂತಹ ಬೋಧಕರು ಸಾಮಾನ್ಯ ಅನುಯಾಯಿಗಳಿಗೆ ಧಮ್ಮ ಬೋಧಿಸಬೇಕು ಮತ್ತು ಅನುಯಾಯಿಗಳು ಬುದ್ಧನ ಆ ಧಮ್ಮವನ್ನು ಹೇಗೆ ಪಾಲಿಸುತ್ತಿದ್ದಾರೆ ಎಂಬುದನ್ನೂ ಗಮನಿಸುತ್ತಿರಬೇಕು ಎನ್ನುತ್ತಾರೆ.

ಹಾಗೆಯೇ ಆ ಬೋಧಕರಿಗೆ ಸಂಬಳ ನೀಡುವ ಅಗತ್ಯತೆ ಹೇಳುವ ಅಂಬೇಡ್ಕರರು ಮದುವೆಯಾಗಿರುವವರನ್ನು ಕೂಡ ಅಂತಹ ಬೌದ್ಧ ಧಮ್ಮ ಬೋಧಕ ವೃತ್ತಿಗೆ ನೇಮಿಸಿಕೊಳ್ಳಬಹುದು ಎನ್ನುತ್ತಾರೆ, ಜೊತೆಗೆ ಅಂತಹವರು ಆರಂಭದಲ್ಲಿ ಪಾರ್ಟ್ ಟೈಮ್ ವೃತ್ತಿ ಮಾಡುತ್ತಿದ್ದರು ಕೂಡ ತಪ್ಪೇನಿಲ್ಲ ಎನ್ನುತ್ತಾರೆ. ಅಂದರೆ ಬಾಬಾಸಾಹೇಬರ ಪ್ರಕಾರ ಅಂತಹ ಧಮ್ಮ ಬೋಧಕರು ತಮ್ಮ ಧಮ್ಮ ಬೋಧನೆಯ ಜೊತೆ ಜೊತೆಗೆ ತಮ್ಮ ಸಂಸಾರ ಮತ್ತು ತಮ್ಮ ವೃತ್ತಿಯನ್ನೂ ಕೂಡ ನಿರ್ವಹಿಸಬಹುದು.

ಮುಂದುವರಿದು ಬಾಬಾಸಾಹೇಬರು ಹೇಳುವುದು ಬೌದ್ಧ ಧಾರ್ಮಿಕ ಪೂಜಾ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ. ಅಂದಹಾಗೆ ಅಂತಹ ಶಾಲೆಗಳಲ್ಲಿ ಉದ್ದೇಶಿತ ಆ ಧಮ್ಮ ಬೋಧಕರು ಬೌದ್ಧ ಧರ್ಮವನ್ನು ಬೋಧಿಸಬಹುದು, ಅದರ ಜೊತೆಗೆ ಇತರ ಧರ್ಮಗಳನ್ನು ಬೌದ್ಧ ಧರ್ಮದ ಜೊತೆಗೆ ಹೋಲಿಸಿ ಧಮ್ಮದ ಅಧ್ಯಯನ ಮಾಡಬಹುದು ಎನ್ನುತ್ತಾರೆ.

ಈ ಸಂದರ್ಭದಲ್ಲಿ ಬಾಬಾಸಾಹೇಬರು ಒಂದು ಪ್ರಮುಖ ವಿಚಾರ ಪ್ರಸ್ತಾಪಿಸುತ್ತಾರೆ. ಅದು ವಿಹಾರದಲ್ಲಿ ಪ್ರತಿ ಭಾನುವಾರ ಬೌದ್ಧ ಪೂಜಾ ಸಂಪ್ರದಾಯವೊಂದನ್ನು ಆರಂಭಿಸುವ ಬಗ್ಗೆ. ಅಂದಹಾಗೆ ಅಂತಹ ಪೂಜೆಯ ನಂತರ ಧಮ್ಮ ಪ್ರವಚನ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ ಈ ನೀಲನಕ್ಷೆಯಂತೆ ಒಂದು ಬೌದ್ಧ ಧರ್ಮ ಗ್ರಂಥ ರಚಿಸುವುದು, ಒಂದು ಬೌದ್ಧ ದೀಕ್ಷಾ ಪದ್ಧತಿ ಸೃಷ್ಟಿಸುವುದು, ಬೌದ್ಧ ಬೋಧಕರನ್ನು ನೇಮಿಸಿಕೊಳ್ಳುವುದು ಮತ್ತು ಪೂಜಾ ಪದ್ಧತಿಯೊಂದನ್ನು ಪ್ರಾರಂಭಿಸಿ ಪ್ರತಿ ಭಾನುವಾರ ಬೌದ್ಧ ಅನುಯಾಯಿಗಳು ಅಂತಹ ವಾರದ ಪ್ರಾರ್ಥನೆಯಲ್ಲಿ ಕಡ್ಡಾಯ ವಾಗಿ ಪಾಲ್ಗೊಳ್ಳುವಂತೆ ಮಾಡುವುದು ಅವರ ಆ ಮಹತ್ವದ ಯೋಜನೆ ಮತ್ತು ಯೋಚನೆಯಾಗಿತ್ತು.

ಹಾಗಿದ್ದರೆ ಧಮ್ಮ ಬೆಳೆಸಲು ಇದಿಷ್ಟೇ ಸಾಕೆ? ವಿಹಾರಗಳು ಬೇಡವೆ? ಇದಕ್ಕೂ ತಮ್ಮ ನೀಲನಕ್ಷೆಯಲ್ಲಿ ಹೇಳುವ ಬಾಬಾಸಾಹೇಬರು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ದೊಡ್ಡ ದೊಡ್ಡ ಬೌದ್ಧ ದೇಗುಲಗಳನ್ನು ವಿಹಾರಗಳನ್ನು ನಿರ್ಮಿಸುವ ವಿಚಾರ ಪ್ರಸ್ತಾಪಿಸುತ್ತಾರೆ. ಹಾಗೆಯೇ ಮಿಶನರಿ ಮಾದರಿಯಲ್ಲಿ ಈ ನಾಲ್ಕು ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಕೂಡ ಬಾಬಾಸಾಹೇಬರು ತಮ್ಮ ಆ ನಕ್ಷೆಯಲ್ಲಿ ಹೇಳುತ್ತಾರೆ.

ಮುಂದುವರಿದು ಎಲ್ಲಾ ಧರ್ಮದವರಲ್ಲಿ ಬೌದ್ಧ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಬೌದ್ಧ ಧರ್ಮದ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ, ಗೆದ್ದವರಿಗೆ ಬಹುಮಾನ ನೀಡುವ ಮಾತನ್ನೂ ಬಾಬಾಸಾಹೇಬರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಪುನರುತ್ಥಾನಕ್ಕೆ ತಾನು ಹೀಗೆ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದೇನೆ ಮತ್ತು ಮುಂದೆಂದೂ ಅದು ಭಾರತದಿಂದ ಕಾಣೆಯಾಗದಂತೆ ನಾನು ಎಚ್ಚರಿಕೆ ವಹಿಸುವುದಾಗಿ ಬರ್ಮಾದ ಆ ಅಂತರರಾಷ್ಟ್ರೀಯ ಸಭೆಗೆ ಅವರು ತಿಳಿಸುತ್ತಾರೆ.

ನಿಜ ಹೇಳಬೇಕೆಂದರೆ ಅಂಬೇಡ್ಕರರು ಹಾಕಿಕೊಂಡಿದ್ದ ಈ ನೀಲ ನಕ್ಷೆ ಕಾರ್ಯ ರೂಪಕ್ಕೆ ಬಂದಿದ್ದರೆ ಖಂಡಿತ ಭಾರತದಲ್ಲಿ ಬೌದ್ಧ ಧರ್ಮ ಅಕ್ಷರಶಃ ಪುನರುಜ್ಜೀವನ ಗೊಂಡಿರುತ್ತಿತ್ತು. ಆದರೆ ದುರಂತ ಎಂದರೆ ಅವರು ಆ ನೀಲನಕ್ಷೆ ತಯಾರಿಸಿದ ಎರಡೇ ವರ್ಷದಲ್ಲಿ ಪರಿನಿಬ್ಬಾಣ ಹೊಂದಿದ್ದರು. ಈ ನಡುವೆ ಮತ್ತೂ ದುರಂತವೆಂದರೆ ಬಾಬಾಸಾಹೇಬರ ಅನುಯಾಯಿಗಳಿಗೆ ಅದನ್ನು ಅಂದರೆ ಬೌದ್ಧ ಧರ್ಮವನ್ನು ಪುನರುಜ್ಜೀವನ ಗೊಳಿಸುವ ಮಾತಿರಲಿ ಅಂಬೇಡ್ಕರರು ಹಾಕಿ ಕೊಂಡಿದ್ದ ಆ ನೀಲನಕ್ಷೆಯತ್ತ ಕಣ್ಣೆತ್ತಿ ನೋಡುವ ತಾಳ್ಮೆಯೂ ಇಲ್ಲದಿರುವುದು. ಈ ನಿಟ್ಟಿನಲ್ಲಿ ತಡವಾಗಿದ್ದರೂ ಈಗಲಾದರೂ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಬಾಬಾಸಾಹೇಬರು ಹಾಕಿದ್ದ ನೀಲನಕ್ಷೆಯತ್ತ ಅವರ ಅನುಯಾಯಿಗಳು ನೋಡಲಿ. ಬೌದ್ಧ ಧರ್ಮದ ಪುನರುತ್ಥಾನಕ್ಕೆ, ಪುನರುಜ್ಜೀವನಕ್ಕೆ ಪಣ ತೊಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending