ದಿನದ ಸುದ್ದಿ
ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಮಾದರಿಯಲ್ಲಿ ಬೌದ್ಧ ಧರ್ಮ ಕಟ್ಟಲು ಬಾಬಾಸಾಹೇಬ್ ಅಂಬೇಡ್ಕರರು ರೂಪಿಸಿದ್ದ ನೀಲನಕ್ಷೆ
- ರಘೋತ್ತಮ ಹೊ.ಬ
1954 ಡಿಸೆಂಬರ್ 4 ರಂದು ಬರ್ಮಾದ ರಂಗೂನ್ ನಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತದೆ. ಆ ಸಮ್ಮೇಳನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ಮುಖ್ಯ ಅತಿಥಿಯಾಗಿರುತ್ತಾರೆ. ಆ ಸಂದರ್ಭದಲ್ಲಿ ಬೌದ್ಧ ಶಾಸನ ಕೌನ್ಸಿಲ್ ನಲ್ಲಿ ಅವರು ಭಾರತದಲ್ಲಿ ಬೌದ್ಧ ಧರ್ಮ ಬೆಳೆಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ವಿವರಿಸಲು ಸಭೆಗೆ ನೀಲನಕ್ಷೆ ಮಾದರಿಯಲ್ಲಿ ಒಂದು ಮನವಿ ಪತ್ರ ಸಲ್ಲಿಸುತ್ತಾರೆ.
ಆ ನೀಲನಕ್ಷೆಯ ಮುಖ್ಯಾಂಶಗಳನ್ನು ದಾಖಲಿಸುವುದಾದರೆ
ಮೊದಲಿಗೆ ಬಾಬಾಸಾಹೇಬರು ಹೇಳುವುದು ಮತಾಂತರ ಹೊಂದಿದವರಿಗೆ ಅಗತ್ಯವಾಗಿರುವ ಒಂದು ಬೌದ್ಧ ಧರ್ಮಗ್ರಂಥದ ಬಗ್ಗೆ. ಈ ನಿಟ್ಟಿನಲ್ಲಿ ಕ್ರೈಸ್ತ ಧರ್ಮ ಹೋಲಿಸುವ ಅವರು ಕ್ರೈಸ್ತ ಧರ್ಮ ಬೆಳೆಯಲು ಕಾರಣ ಅವರಲ್ಲಿ ಇರುವ ಬೈಬಲ್ ನಂತಹ ಯಾರಾದರೂ ಸುಲಭವಾಗಿ ಇಟ್ಟುಕೊಳ್ಳಬಹುದಾದ ಸಣ್ಣ ಪುಸ್ತಕ. ಆದರೆ ಬೌದ್ಧ ಧರ್ಮಕ್ಕೆ ಅಂತಹ ಅನುಕೂಲ ಇಲ್ಲ ಎನ್ನುತ್ತಾರೆ.
ಇದಕ್ಕೆ ಅವರು ಕೊಡುವ ಕಾರಣ ಸಾಮಾನ್ಯ ಅನುಯಾಯಿಯೊಬ್ಬ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪಾಳಿ ಭಾಷೆಯ 73 ಆ ಬೃಹತ್ ಸಂಪುಟಗಳನ್ನು ಓದಲಾರ ಎಂಬುದು. ಖಂಡಿತ, ಬಾಬಾಸಾಹೇಬರು ಹೇಳುವಂತೆ 73 ಆ ಬೃಹತ್ ಸಂಪುಟಗಳನ್ನು ಸಾಮಾನ್ಯ ಓದುಗನಿರಲಿ ಪಂಡಿತರೂ ಕೂಡ ಓದಲಾರರು. ಈ ನಿಟ್ಟಿನಲ್ಲಿ ಬೈಬಲ್ ಮಾದರಿಯಲ್ಲೇ ಬೌದ್ಧಧರ್ಮಕ್ಕೂ ಧರ್ಮ ಗ್ರಂಥವೊಂದನ್ನು ತಯಾರಿಸುವ ಇಂಗಿತ ವ್ಯಕ್ತಪಡಿಸುವ ಬಾಬಾಸಾಹೇಬರು ಆ ಗ್ರಂಥದಲ್ಲಿ ಬುದ್ಧನ ಸಾಮಾಜಿಕ ಮತ್ತು ನೈತಿಕ ನಿಲುವಿಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯತೆ ಹೇಳುತ್ತಾರೆ.
ಯಾಕೆಂದರೆ ಅವರು ಹೇಳುವುದು ಇದುವರೆಗೂ ಬೌದ್ಧ ಗ್ರಂಥಗಳಲ್ಲಿ ಆದ್ಯತೆ ಕೊಟ್ಟಿರುವುದು ಧ್ಯಾನ, ಚಿಂತನೆ ಮತ್ತು ಅಭಿಧಮ್ಮಕ್ಕೆ. ಈ ದಿಸೆಯಲ್ಲಿ ಈ ಮಾದರಿಯಲ್ಲಿ ಅಂದರೆ ಧ್ಯಾನ, ಚಿಂತನೆ ಮತ್ತು ಅಭಿಧಮ್ಮದ ಮಾದರಿಯಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಹರಡುವುದನ್ನು ಮುಂದುವರೆಸಿದ್ದೇ ಆದರೆ ಅದು ಅಕ್ಷರಶಃ ಬೌದ್ಧ ಧರ್ಮದ ಬೆಳವಣಿಗೆಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಅಂಬೇಡ್ಕರರು.
ಇನ್ನು ಎರಡನೇ ಅಂಶ ತಮ್ಮ ಆ ನೀಲನಕ್ಷೆಯಲ್ಲಿ ಬಾಬಾಸಾಹೇಬರು ಹೇಳುವುದು; ಬೌದ್ಧ ಧರ್ಮದಲ್ಲಿ ಸಾಮಾನ್ಯ ಅನುಯಾಯಿಗಳಿಗೆ ಕ್ರೈಸ್ತ ಧರ್ಮದ ಮಾದರಿಯಲ್ಲಿ ದೀಕ್ಷೆ ನೀಡುವ ಪದ್ಧತಿ ಆರಂಭಿಸುವ ಬಗ್ಗೆ. ಯಾಕೆಂದರೆ ಅವರು ಹೇಳುವುದು ಬೌದ್ಧ ಧರ್ಮದಲ್ಲಿ ಭಿಕ್ಕುಗಳಿಗೆ ಮಾತ್ರ ಈ ಥರದ ದೀಕ್ಷಾ ನೀಡುವ ಪದ್ಧತಿ ಇದ್ದು ಮತಾಂತರ ಆಗುವ ಸಾಮಾನ್ಯ ಅನುಯಾಯಿಗಳಿಗೆ ಅಂತಹ ಯಾವುದೇ ದೀಕ್ಷಾ ಪದ್ಧತಿ ಇಲ್ಲ ಎಂದು.
ಈ ಹಿನ್ನೆಲೆಯಲ್ಲಿ ಎಷ್ಟೋ ಜನ ಬೌದ್ಧ ಧರ್ಮಕ್ಕೆ ಸೇರುತ್ತಾರದರೂ ಅಂತಹ ಒಂದು ದೀಕ್ಷಾ ಪದ್ಧತಿ ಇಲ್ಲದ್ದರಿಂದಾಗಿ ಇದ್ದಕ್ಕಿದ್ದಂತೆ ಅವರು ಬಿಟ್ಟು ಹೋಗುತ್ತಿದ್ದಾರೆ. ಆದ್ದರಿಂದ ಕ್ರೈಸ್ತ ದೀಕ್ಷೆಯ ಮಾದರಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೌದ್ಧ ಎನಿಸಿಕೊಳ್ಳಲು ಕಡ್ಡಾಯವಾಗಿ ಅಂತಹ ಒಂದು ದೀಕ್ಷೆ ಸ್ವೀಕರಿಸುವ ಅಗತ್ಯತೆ ಅವರು ಹೇಳುತ್ತ ಅಂತೆಯೇ ಒಂದು ಬೌದ್ಧ ದೀಕ್ಷಾ ಪದ್ಧತಿಯನ್ನು ಆರಂಭಿಸುವ ಬಗ್ಗೆ ಅಂಬೇಡ್ಕರ್ ರು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ.
ಹಾಗೆಯೇ ಆ ದೀಕ್ಷೆಯಲ್ಲಿ ಕೇವಲ ಪಂಚಶೀಲ ಉಚ್ಛರಿಸಿದರಷ್ಟೆ ಸಾಲದು ಜೊತೆಗೆ ಅಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಬೇಕು ಹೇಗೆಂದರೆ ದೀಕ್ಷೆ ಸ್ವೀಕರಿಸಿದ ತಕ್ಷಣ ಆತನಲ್ಲಿ ತಾನು ಹಿಂದೂ ಎಂಬ ಮನೋಭಾವ ಹೋಗಬೇಕು ಆತ ಹೊಸ ಮನುಷ್ಯನಂತೆ ಆಗಬೇಕು ಎಂದು ಅಂಬೇಡ್ಕರರು ತಮ್ಮ ಆ ದೀಕ್ಷಾ ಪದ್ಧತಿ ಇರಬೇಕಾದ ರೀತಿಯನ್ನು ಹೇಳುತ್ತಾರೆ.
ಮುಂದುವರಿದು ಬೌದ್ಧ ಧರ್ಮ ಬೆಳವಣಿಗೆಯ ತಮ್ಮ ಆ ಬೃಹತ್ ಯೋಜನೆಯ ನೀಲನಕ್ಷೆಯಲ್ಲಿ ಅವರು ಹೇಳುವುದು ಬೌದ್ಧ ಧರ್ಮ ಬೋಧಕರ ಬಗ್ಗೆ. ಈ ನಿಟ್ಟಿನಲ್ಲಿ ಬೌದ್ಧ ಧರ್ಮ ಬೋಧಕರನ್ನು ನೇಮಿಸಿಕೊಳ್ಳಬೇಕೆನ್ನುವ ಅಂಬೇಡ್ಕರರು ಅಂತಹ ಬೋಧಕರು ಸಾಮಾನ್ಯ ಅನುಯಾಯಿಗಳಿಗೆ ಧಮ್ಮ ಬೋಧಿಸಬೇಕು ಮತ್ತು ಅನುಯಾಯಿಗಳು ಬುದ್ಧನ ಆ ಧಮ್ಮವನ್ನು ಹೇಗೆ ಪಾಲಿಸುತ್ತಿದ್ದಾರೆ ಎಂಬುದನ್ನೂ ಗಮನಿಸುತ್ತಿರಬೇಕು ಎನ್ನುತ್ತಾರೆ.
ಹಾಗೆಯೇ ಆ ಬೋಧಕರಿಗೆ ಸಂಬಳ ನೀಡುವ ಅಗತ್ಯತೆ ಹೇಳುವ ಅಂಬೇಡ್ಕರರು ಮದುವೆಯಾಗಿರುವವರನ್ನು ಕೂಡ ಅಂತಹ ಬೌದ್ಧ ಧಮ್ಮ ಬೋಧಕ ವೃತ್ತಿಗೆ ನೇಮಿಸಿಕೊಳ್ಳಬಹುದು ಎನ್ನುತ್ತಾರೆ, ಜೊತೆಗೆ ಅಂತಹವರು ಆರಂಭದಲ್ಲಿ ಪಾರ್ಟ್ ಟೈಮ್ ವೃತ್ತಿ ಮಾಡುತ್ತಿದ್ದರು ಕೂಡ ತಪ್ಪೇನಿಲ್ಲ ಎನ್ನುತ್ತಾರೆ. ಅಂದರೆ ಬಾಬಾಸಾಹೇಬರ ಪ್ರಕಾರ ಅಂತಹ ಧಮ್ಮ ಬೋಧಕರು ತಮ್ಮ ಧಮ್ಮ ಬೋಧನೆಯ ಜೊತೆ ಜೊತೆಗೆ ತಮ್ಮ ಸಂಸಾರ ಮತ್ತು ತಮ್ಮ ವೃತ್ತಿಯನ್ನೂ ಕೂಡ ನಿರ್ವಹಿಸಬಹುದು.
ಮುಂದುವರಿದು ಬಾಬಾಸಾಹೇಬರು ಹೇಳುವುದು ಬೌದ್ಧ ಧಾರ್ಮಿಕ ಪೂಜಾ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ. ಅಂದಹಾಗೆ ಅಂತಹ ಶಾಲೆಗಳಲ್ಲಿ ಉದ್ದೇಶಿತ ಆ ಧಮ್ಮ ಬೋಧಕರು ಬೌದ್ಧ ಧರ್ಮವನ್ನು ಬೋಧಿಸಬಹುದು, ಅದರ ಜೊತೆಗೆ ಇತರ ಧರ್ಮಗಳನ್ನು ಬೌದ್ಧ ಧರ್ಮದ ಜೊತೆಗೆ ಹೋಲಿಸಿ ಧಮ್ಮದ ಅಧ್ಯಯನ ಮಾಡಬಹುದು ಎನ್ನುತ್ತಾರೆ.
ಈ ಸಂದರ್ಭದಲ್ಲಿ ಬಾಬಾಸಾಹೇಬರು ಒಂದು ಪ್ರಮುಖ ವಿಚಾರ ಪ್ರಸ್ತಾಪಿಸುತ್ತಾರೆ. ಅದು ವಿಹಾರದಲ್ಲಿ ಪ್ರತಿ ಭಾನುವಾರ ಬೌದ್ಧ ಪೂಜಾ ಸಂಪ್ರದಾಯವೊಂದನ್ನು ಆರಂಭಿಸುವ ಬಗ್ಗೆ. ಅಂದಹಾಗೆ ಅಂತಹ ಪೂಜೆಯ ನಂತರ ಧಮ್ಮ ಪ್ರವಚನ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.
ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ ಈ ನೀಲನಕ್ಷೆಯಂತೆ ಒಂದು ಬೌದ್ಧ ಧರ್ಮ ಗ್ರಂಥ ರಚಿಸುವುದು, ಒಂದು ಬೌದ್ಧ ದೀಕ್ಷಾ ಪದ್ಧತಿ ಸೃಷ್ಟಿಸುವುದು, ಬೌದ್ಧ ಬೋಧಕರನ್ನು ನೇಮಿಸಿಕೊಳ್ಳುವುದು ಮತ್ತು ಪೂಜಾ ಪದ್ಧತಿಯೊಂದನ್ನು ಪ್ರಾರಂಭಿಸಿ ಪ್ರತಿ ಭಾನುವಾರ ಬೌದ್ಧ ಅನುಯಾಯಿಗಳು ಅಂತಹ ವಾರದ ಪ್ರಾರ್ಥನೆಯಲ್ಲಿ ಕಡ್ಡಾಯ ವಾಗಿ ಪಾಲ್ಗೊಳ್ಳುವಂತೆ ಮಾಡುವುದು ಅವರ ಆ ಮಹತ್ವದ ಯೋಜನೆ ಮತ್ತು ಯೋಚನೆಯಾಗಿತ್ತು.
ಹಾಗಿದ್ದರೆ ಧಮ್ಮ ಬೆಳೆಸಲು ಇದಿಷ್ಟೇ ಸಾಕೆ? ವಿಹಾರಗಳು ಬೇಡವೆ? ಇದಕ್ಕೂ ತಮ್ಮ ನೀಲನಕ್ಷೆಯಲ್ಲಿ ಹೇಳುವ ಬಾಬಾಸಾಹೇಬರು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ದೊಡ್ಡ ದೊಡ್ಡ ಬೌದ್ಧ ದೇಗುಲಗಳನ್ನು ವಿಹಾರಗಳನ್ನು ನಿರ್ಮಿಸುವ ವಿಚಾರ ಪ್ರಸ್ತಾಪಿಸುತ್ತಾರೆ. ಹಾಗೆಯೇ ಮಿಶನರಿ ಮಾದರಿಯಲ್ಲಿ ಈ ನಾಲ್ಕು ನಗರಗಳಲ್ಲಿ ಅಂದರೆ ಮದ್ರಾಸ್, ಬಾಂಬೆ, ನಾಗಪುರ ಮತ್ತು ದೆಹಲಿಯಲ್ಲಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಕೂಡ ಬಾಬಾಸಾಹೇಬರು ತಮ್ಮ ಆ ನಕ್ಷೆಯಲ್ಲಿ ಹೇಳುತ್ತಾರೆ.
ಮುಂದುವರಿದು ಎಲ್ಲಾ ಧರ್ಮದವರಲ್ಲಿ ಬೌದ್ಧ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಬೌದ್ಧ ಧರ್ಮದ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ, ಗೆದ್ದವರಿಗೆ ಬಹುಮಾನ ನೀಡುವ ಮಾತನ್ನೂ ಬಾಬಾಸಾಹೇಬರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಪುನರುತ್ಥಾನಕ್ಕೆ ತಾನು ಹೀಗೆ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದೇನೆ ಮತ್ತು ಮುಂದೆಂದೂ ಅದು ಭಾರತದಿಂದ ಕಾಣೆಯಾಗದಂತೆ ನಾನು ಎಚ್ಚರಿಕೆ ವಹಿಸುವುದಾಗಿ ಬರ್ಮಾದ ಆ ಅಂತರರಾಷ್ಟ್ರೀಯ ಸಭೆಗೆ ಅವರು ತಿಳಿಸುತ್ತಾರೆ.
ನಿಜ ಹೇಳಬೇಕೆಂದರೆ ಅಂಬೇಡ್ಕರರು ಹಾಕಿಕೊಂಡಿದ್ದ ಈ ನೀಲ ನಕ್ಷೆ ಕಾರ್ಯ ರೂಪಕ್ಕೆ ಬಂದಿದ್ದರೆ ಖಂಡಿತ ಭಾರತದಲ್ಲಿ ಬೌದ್ಧ ಧರ್ಮ ಅಕ್ಷರಶಃ ಪುನರುಜ್ಜೀವನ ಗೊಂಡಿರುತ್ತಿತ್ತು. ಆದರೆ ದುರಂತ ಎಂದರೆ ಅವರು ಆ ನೀಲನಕ್ಷೆ ತಯಾರಿಸಿದ ಎರಡೇ ವರ್ಷದಲ್ಲಿ ಪರಿನಿಬ್ಬಾಣ ಹೊಂದಿದ್ದರು. ಈ ನಡುವೆ ಮತ್ತೂ ದುರಂತವೆಂದರೆ ಬಾಬಾಸಾಹೇಬರ ಅನುಯಾಯಿಗಳಿಗೆ ಅದನ್ನು ಅಂದರೆ ಬೌದ್ಧ ಧರ್ಮವನ್ನು ಪುನರುಜ್ಜೀವನ ಗೊಳಿಸುವ ಮಾತಿರಲಿ ಅಂಬೇಡ್ಕರರು ಹಾಕಿ ಕೊಂಡಿದ್ದ ಆ ನೀಲನಕ್ಷೆಯತ್ತ ಕಣ್ಣೆತ್ತಿ ನೋಡುವ ತಾಳ್ಮೆಯೂ ಇಲ್ಲದಿರುವುದು. ಈ ನಿಟ್ಟಿನಲ್ಲಿ ತಡವಾಗಿದ್ದರೂ ಈಗಲಾದರೂ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಬಾಬಾಸಾಹೇಬರು ಹಾಕಿದ್ದ ನೀಲನಕ್ಷೆಯತ್ತ ಅವರ ಅನುಯಾಯಿಗಳು ನೋಡಲಿ. ಬೌದ್ಧ ಧರ್ಮದ ಪುನರುತ್ಥಾನಕ್ಕೆ, ಪುನರುಜ್ಜೀವನಕ್ಕೆ ಪಣ ತೊಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

