ರಾಜಕೀಯ
ಚುನಾವಣಾ ರಾಜಕಾರಣ : ಆಶಾದಾಯಕ ಅವಕಾಶಗಳು
ದೇಶ ಮತ್ತೊಂದು ಮಹಾಚುನಾವಣೆಯ ಹೊಸಿಲಲ್ಲಿದೆ. ಯಾರು ಅಧಿಕಾರ ಅಲಂಕರಿಸಬಹುದು ಎಂಬ ಸಹಜ ಕುತೂಹಲ ಎಲ್ಲೆಡೆಯಲ್ಲಿಯೂ ಇದೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಅಖಾಡ ಸನ್ನದ್ಧವಾಗಿದೆ. ಲೋಕಸಭೆ ಚುನಾವಣೆ ಎಂದಾಕ್ಷಣ ಮುಂದಿನ ನಾಯಕ ಯಾರು ಎಂಬ ನಿರೀಕ್ಷೆ ಸಹಜವಾಗಿಯೇ ಗರಿಗೆದರುತ್ತದೆ. ಈ ಕುತೂಹಲಕ್ಕನುಗುಣವಾದ ನಿರೀಕ್ಷೆಯನ್ನು ಭಾರತದ ರಾಜಕಾರಣ ಹೇಗೆ ಈಡೇರಿಸುತ್ತದೆ ಎನ್ನುವುದರ ಮೇಲೆ ಭವಿಷ್ಯದ ಹೆಜ್ಜೆಗಳು ನಿರ್ಣಯಿಸಲ್ಪಡುತ್ತವೆ. ಜನಮನ್ನಣೆಯ ಗೆಲುವು ದಕ್ಕಿಸಿಕೊಳ್ಳಲು ರಾಜಕಾರಣಕ್ಕೆ ಎರಡು ಬಗೆಯ ಅವಕಾಶಗಳಿರುತ್ತವೆ. ಸಕಾರಾತ್ಮಕ ಆಲೋಚನೆಗಳ ಬಲದಲ್ಲಿ ದಾರ್ಶನಿಕ ನಾಯಕತ್ವ ಸಾಬೀತುಪಡಿಸುವ ಬದ್ಧತೆಯ ನಡೆಯೊಂದಿಗೆ ಮೊದಲ ಅವಕಾಶದ ಸಾಧ್ಯತೆ ಇರುತ್ತದೆ. ಇಡೀ ದೇಶವನ್ನು ಹಿಂದಕ್ಕೆಳೆಸುವ ಸಂಕುಚಿತ ಕಾರ್ಯಸೂಚಿಯೊಂದಿಗೆ ಜನರ ಜಡತೆಯನ್ನು ಮತ್ತಷ್ಟು ಸ್ಥಾಯಿಗೊಳಿಸುವ ಪ್ರಯತ್ನಗಳೊಂದಿಗಿನ ಅವಕಾಶ ಮತ್ತೊಂದು. ಭಾರತದ ರಾಜಕಾರಣವು ಇಂಥ ಸೀಮಿತ ದೃಷ್ಟಿಕೋನದ ಅವಕಾಶವಾದಿ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಸಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಲಭ್ಯವಾಗುತ್ತವೆ. ಸ್ವಾತಂತ್ರ್ಯೋತ್ತರ ಅವಧಿ, ಜಾಗತೀಕರಣದ ತದನಂತರದ ಕಾಲಘಟ್ಟ ಮತ್ತು ಹೊಸ ಶತಮಾನದ ಸ್ಥಿತ್ಯಂತರಗಳ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಚರ್ಚೆಯನ್ನು ವಿಸ್ತರಿಸಬಹುದು.
ಜಡತೆಯಿಂದ ಗೆಲುವಿನ ಲಾಭ!
ಅಧಿಕಾರಕ್ಕ ಬಂದ ಕ್ಷಣದಿಂದಲೇ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರದರ್ಶಿತವಾಗುವ ಎಚ್ಚರದ ರಾಜಕೀಯ ನಡೆ ಇಲ್ಲಿಯ ಸಾಮಾನ್ಯ ಗುಣಲಕ್ಷಣ. ಇದಕ್ಕೆ ಹೊಸ ಬಗೆಯ ತೀವ್ರತೆ ಸಿಕ್ಕಿದ್ದು ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ. ಆಗಿನ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ರಾಜಕಾರಣ ಚಾಣಾಕ್ಷ ತಂತ್ರಗಾರಿಕೆಯ ತೀವ್ರತರ ತಿರುವಿನ ಘಟ್ಟ ತಲುಪಿದ್ದು ಸ್ಪಷ್ಟವಾಗುತ್ತದೆ. ಅಧಿಕಾರ ಪಡೆಯುವ ಏಕೈಕ ಕಾರ್ಯಸೂಚಿಯನ್ನಷ್ಟೇ ನೆಚ್ಚಿಕೊಂಡು ರಾಜಕೀಯ ಪಕ್ಷಗಳು ಕಾರ್ಯೋನ್ಮುಖವಾಗುವುದು, ಅದಕ್ಕಾಗಿ ಚಾಣಾಕ್ಷ ತಂತ್ರಗಾರಿಕೆಯ ನೆರವು ಪಡೆಯುವುದು, ಆ ಮೂಲಕ ಗೆಲುವು ಸಾಧ್ಯವಾಗಿಸಿಕೊಳ್ಳುವುದು – ಇವೆಲ್ಲವೂ ಗೊತ್ತಿರುವ ಸಂಗತಿಗಳೇ. ಆದರೆ, 2014ರ ಚುನಾವಣೆಯು ಈ ದೇಶದಲ್ಲಿ ಸ್ಥಾವರವಾಗಿ ಉಳಿದುಕೊಂಡಿದ್ದ ಜಡತೆಯ ನಿರ್ಲಿಪ್ತ ಮನಸ್ಥಿತಿಯನ್ನು ಬೇರೊಂದು ರೀತಿಯಲ್ಲಿ ಬಳಸಿಕೊಂಡು ಗೆಲುವು ತಂದುಕೊಳ್ಳುವ ಅವಕಾಶವನ್ನು ದಯಪಾಲಿಸಿತು. ಇದನ್ನು ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಂಡವರು ಗೆಲುವಿನ ನಗೆ ಬೀರಿದರು.
ಹಳೆ ಆಲದ ಮರಕ್ಕೆ ಜೋತುಬೀಳುವಿಕೆ
ಹಿಂದೆ ಬಹಳ ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಅನುಸರಿಸಿದ ಹಾದಿಯನ್ನೇ ಬೇರೊಂದು ಬಗೆಯಲ್ಲಿ ಮಾದರಿಯಾಗಿಸಿಕೊಂಡ ಕಾರಣಕ್ಕಾಗಿಯೇ ಆ ಗೆಲುವು ಸಾಧಿಸಲು ಸಾಧ್ಯವಾಯಿತು. ಹಿಂದಿನವರದ್ದು ಹಳೆಯ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯ ರಾಜಕಾರಣವೇ ಆಗಿತ್ತು. ಹಳೆಯ ಸಾಧನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಅದರ ಜಪಗೈದು ಜನರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆಯ ಕಡೆಗೇ ಅದರ ಆದ್ಯತೆ ಇತ್ತು. ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದಿದ್ದವರು ಹಳೆಯದ್ದರ ಆಧಾರದಲ್ಲಿ ಹೊಸದೊಂದು ರಾಜಕೀಯ ಸಂಸ್ಕøತಿಯನ್ನು ರೂಪಿಸುವ ಹೊಣೆಗಾರಿಕೆ ನಿರ್ವಹಿಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟರು. ಹೀಗಾಗಿ ‘ಹಳೆಯ ಬೇರು, ಹೊಸ ಚಿಗುರು’ ಎಂಬ ಪ್ರಯೋಗಶೀಲ ದೃಷ್ಟಿಕೋನ ಸೋಲನ್ನು ಅನುಭವಿಸಿತು. ಹಳೆಯ ಬೇರುಗಳೊಂದಿಗೆ ನಂಟು ಉಳಿಸಿಕೊಂಡು ಹೊಸದಾದ ಹೆಜ್ಜೆಗಳೊಂದಿಗೆ ಬದಲಾವಣೆಯ ಅಲೆಯನ್ನು ಮೂಡಿಸುವುದರ ಕಡೆಗಿನ ವ್ಯಾಪಕ ಸಾಧ್ಯತೆಗಳು ಮೊಟಕುಗೊಂಡವು.
ನಕಾರಾತ್ಮಕತೆಯ ಪುನರಾವರ್ತನೆ
ಪ್ರಶ್ನಿಸುವ ತಾರ್ಕಿಕತೆಯನ್ನು ಚಾಣಾಕ್ಷಯುತವಾಗಿ ಹತ್ತಿಕ್ಕುವ ಆಡಳಿತಾರೂಢ ಪ್ರಾಬಲ್ಯವು ಸ್ವಾತಂತ್ರ್ಯೋತ್ತರ ರಾಜಕೀಯ ವಲಯದ ಮೊದಲ ಆದ್ಯತೆಯಾಗಿ ಪ್ರಾಮುಖ್ಯತೆ ಪಡೆದುಕೊಂಡಿತು. ಇದನ್ನು ಹಿನ್ನೆಲೆಗೆ ಸರಿಸುವ ಪರ್ಯಾಯ ರಾಜಕಾರಣದ ತಾತ್ವಿಕ ಮಾದರಿಗಳು ವಿವಿಧ ದಶಕಗಳಲ್ಲಿ ಕಾಣಿಸಿಕೊಂಡರೂ ಜನಜನಿತವಾದ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರ ವ್ಯಕ್ತಿಗತ ಪ್ರತಿಷ್ಠೆ ಮತ್ತು ಆರಾಧನಾ ಮನೋಭಾವಕ್ಕೇ ಹೆಚ್ಚಿನ ಆದ್ಯತೆ ಸಿಕ್ಕಿತು. ಇದು ಐದು ವರ್ಷಗಳ ಅಧಿಕಾರಾವಧಿಯ ಪ್ರತಿ ಹಂತದಲ್ಲೂ ನುಸುಳಿಕೊಳ್ಳತೊಡಗಿತು. ಈಗ ಅದೇ ನಕಾರಾತ್ಮಕತೆ ಬೇರೆ ರೀತಿಯಲ್ಲಿ ಪುನರಾವರ್ತಿತವಾಗಿದೆ.
ವೈರುಧ್ಯದ ರಾಜಕೀಯ ನಡೆ
ಚುನಾವಣಾ ರಾಜಕಾರಣವು ಸಂಕುಚಿತ ಅಜೆಂಡಾ ಆಧಾರದಲ್ಲಿ ಅಭಿವ್ಯಕ್ತವಾದರೆ ಏನೇನಾಗುತ್ತದೆ ಎನ್ನುವುದನ್ನು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚರಿತ್ರೆಯ ಮೂಲಕ ತಿಳಿದುಕೊಳ್ಳಬಹುದು. ಇದರ ಅಧ್ಯಯನ ಮತ್ತು ಸೂಕ್ಷ್ಮ ಅವಲೋಕನದಿಂದ ಇಲ್ಲಿಯ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಜೀವಪರ ಸಂವೇದನೆಯ ಮೌಲಿಕ ಆಲೋಚನೆ ಮತ್ತು ವಾದಗಳನ್ನು ಮುನ್ನೆಲೆಗೆ ತಂದು ಅದಕ್ಕನುಗುಣವಾದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರತಿಪಾದನೆಯ ನೆರವಿನೊಂದಿಗೆ ಅಧಿಕಾರಕ್ಕೆ ಬಂದವರು ಮತ್ತು ಉದಾತ್ತವಾದ ಧಾರ್ಮಿಕ ಅಂಶಗಳನ್ನು ಸಂಕುಚಿತಗೊಳಿಸಿ ಸಂಘರ್ಷ ಮೂಡಿಸಿ ಅಧಿಕಾರಕ್ಕೆ ಹತ್ತಿರಾಗುವ ಜಾಯಮಾನದ ರಾಜಕೀಯ ವರ್ತನೆಗಳವರ ದಿಗ್ವಿಜಯದ ಜೊತೆಗೆ ಇಂಥ ವೈರುಧ್ಯಗಳಿವೆ. ಎರಡೂ ವಲಯಗಳು ಅಧಿಕಾರರೂಢ ಮತ್ತು ವಿರೋಧ ಪಕ್ಷ ಎಂಬ ನೆಲೆಗಳಲ್ಲಿ ವಿಂಗಡಣೆಯಾಗಿ ವಾದಗಳನ್ನು ಮುಂದಿಡುತ್ತಾ ಜನಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ.
ಒಮ್ಮೆ ಅವರಿಗೆ, ಮತ್ತೊಮ್ಮೆ ಇವರಿಗೆ ಎನ್ನುವ ಹಾಗೆ ಅಧಿಕಾರದ ಅವಕಾಶ ಪ್ರಾಪ್ತವಾಗಿದೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಈ ಎರಡೂ ವಲಯಗಳ ರಾಜಕೀಯ ನಡೆ ಯಾವ ಬಗೆಯ ಉದಾತ್ತತೆಯೊಂದಿಗಿತ್ತು ಎಂಬುದನ್ನು ಪರಿಶೀಲಿಸಿದರೆ ಇಡೀ ಭಾರತದ ರಾಜಕಾರಣದ ಬಹುದೊಡ್ಡ ಮಿತಿಗಳು ಎದ್ದುಕಾಣುತ್ತವೆ. ಅಧಿಕಾರಕ್ಕೆ ಬರುವವರೆಗೆ ಪ್ರತಿಪಾದಿಸಿದ ವಿಶಾಲವಾದ ಮೌಲಿಕ ಆಲೋಚನೆಗಳನ್ನೇ ಅಧಿಕಾರಕ್ಕೆ ಬಂದ ನಂತರ ಮರೆಯುವ ಜಾಣ್ಮೆಯನ್ನು ಸ್ಥಾಯಿಯಾಗಿಸಿಕೊಂಡ ಪಕ್ಷ ರಾಜಕಾರಣವೊಂದರ ವಿಕಲಾಂಗ ಲಕ್ಷಣವು ಪಕ್ಷಾತೀತ ನೆಲೆಯಲ್ಲಿ ಸರ್ವವ್ಯಾಪಿಯಾಯಿತು. ಇಂಥ ದ್ವಂದ್ವವನ್ನು ಪ್ರಶ್ನಿಸುತ್ತಲೇ ಧರ್ಮಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ಲಾಭದ ಆಕಾಂಕ್ಷೆಯಲ್ಲಿ ತಪ್ಪಾಗಿ ವಿಶ್ಲೇಷಿಸಿ ಅಧಿಕಾರಕ್ಕೇರಿದವರೂ ಮತ್ತದೇ ಹಾದಿ ಹಿಡಿದರು. ಹೀಗಾಗಿಯೇ ರಾಜಕೀಯ ಪಕ್ಷಗಳ ಕೆಳಹಂತದ ಯುವ ಕಾರ್ಯಕರ್ತರಿಗೆ ಉದಾತ್ತವಾದ ನಾಯಕತ್ವದ ಮಾದರಿಯೇ ಇಲ್ಲದಂತಾಯಿತು.
ಬಹುಮತ ಪ್ರಾಶಸ್ತ್ಯದ ಮತ್ತೊಂದು ಮುಖ
ಈ ಹಂತದಲ್ಲಿಯೇ ಪ್ರಶ್ನಿಸುವ ಧ್ವನಿಗಳೊಂದಿಗೆ ಇರುವವರನ್ನೇ ದ್ವಂದ್ವಕ್ಕೆ ಸಿಲುಕಿಸುವ ವಿತಂಡವಾದಿ ದೃಷ್ಟಿಕೋನಗಳು ಕಳೆದ 2014 ಚುನಾವಣೆಯ ಸಂದರ್ಭದಲ್ಲಿ ವೈಭವೀಕೃತವಾದವು. ಇವರನ್ನು ಪ್ರಶ್ನೆ ಮಾಡುತ್ತೀರಿ. ಮತ್ತಿನ್ಯಾರನ್ನು ಆಯ್ಕೆ ಮಾಡುತ್ತೀರಿ? ಇಷ್ಟು ವರ್ಷಗಳ ಕಾಲ ಆಳಿದವರು ಏನು ಸಾಧಿಸಿದರು? ಎಂಬ ಮರುಪ್ರಶ್ನೆ ಎಸೆದು ಚರ್ಚೆ ಒಳಗೊಳ್ಳಬಹುದಾದ ವಿಶಾಲ ಆವರಣವನ್ನೇ ಒಡೆದುಬಿಡುವ ಪ್ರವೃತ್ತಿ ಮುಂದುವರೆಯಿತು. ಇದೇ ಪ್ರವೃತ್ತಿಯನ್ನೇ ಮುಖ್ಯವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಪಕ್ಷದ ಪರವಾದ ಅಲೆ ಮೂಡಿಸುವ ಉದ್ದೇಶಕ್ಕೆ ಬಳಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಯಶಸ್ಸು ಕಂಡಿತು. ಹಿಂದಿನವರ ಮೌನಕ್ಕಿಂತ ಈಗಿನವರ ಮಾತು ಹೆಚ್ಚು ಆಪ್ತ ಎಂಬ ಕಾರಣಕ್ಕಾಗಿ ಮತನೀಡುವ ಅಪೇಕ್ಷೆ ಸಾಮೂಹಿಕವಾಗಿ ಅಭಿವ್ಯಕ್ತವಾಯಿತು. ಸಮಸ್ಯೆಗಳನ್ನು ಅಸಹಾಯಕ ಮೌನ ಮತ್ತು ದಿವ್ಯ ನಿರ್ಲಿಪ್ತತೆಯೊಂದಿಗೆ ನಿರ್ಲಕ್ಷಿಸಿದವರಿಗಿಂತಲೂ ಅವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದನ್ನು ಭಾಷಿಕ ಪ್ರೌಢಿಮೆಯಲ್ಲಿ ಮನಗಾಣಿಸಿದವರು ಮುಖ್ಯ ಎಂಬ ಭಾವನೆಯೇ ಸಾರ್ವತ್ರಿಕವಾಗಿ ಹೊಸಬರಿಗೆ ಭಾರೀ ಬಹುಮತದ ಪ್ರಾಶಸ್ತ್ಯ ದೊರಕಿ ಅಧಿಕಾರದ ಅವಕಾಶ ಲಭ್ಯವಾಯಿತು.
ದಿಕ್ಕುತಪ್ಪಿಸುವ ಹುನ್ನಾರಗಳು
ಈಗ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಬಗೆಯ ಇತಿಹಾಸ ಪುನರಾವರ್ತಿತಗೊಳ್ಳುವ ಎಲ್ಲ ವಿದ್ಯಮಾನಗಳಿಗೆ ನಾವೀಗ ಸಾಕ್ಷಿಯಾಗುತ್ತಲೇ ಇದ್ದೇವೆ. ಒಂದು ದೇಶದ ವಿರುದ್ಧ ಯುದ್ಧ ಆಗಬೇಕು ಎಂಬ ಅಗ್ರೆಸ್ಸಿವ್ ಪ್ರತಿಪಾದನೆಯು ಪೀಳಿಗೆಯೊಂದರ ರಾಜಕೀಯ ಆದ್ಯತೆಯನ್ನೇ ಸಂಕುಚಿತಗೊಳಿಸಿ ಬಹುಮತ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಪ್ರಭಾವೀ ಎಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಕಣ್ಣಮುಂದೆಯೇ ಇವೆ. ಸುಳ್ಳುಗಳ ತರಹೇವಾರಿ ವಿವರಗಳು ಬಗೆಬಗೆಯ ಬಣ್ಣಗಳನ್ನು ಪಡೆದು ಜನರ ನಿರ್ಧಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತಿರುವ ವಾಸ್ತವವನ್ನು ಅಷ್ಟು ಸುಲಭವಾಗಿ ನಿರಾಕರಿಸುವಂತಿಲ್ಲ. ರಾಜಕಾರಣಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲಂತೂ ಭಾರತೀಯ ಪ್ರಜಾಪ್ರಭುತ್ವದ ದಿಕ್ಕುತಪ್ಪಿಸುವ ಹುನ್ನಾರಗಳು ಯಾವ ಸ್ವರೂಪದ್ದವು ಎಂಬುದು ಸ್ಪಷ್ಟವಾಗುತ್ತದೆ. ಇಡೀ ದೇಶದಲ್ಲಿ ಆಗಬೇಕಿದ್ದ ಚರ್ಚೆಗಳ ಬದಲು ಅನಗತ್ಯ ವಿವರಗಳೇ ಪ್ರಾಮುಖ್ಯತೆ ಪಡೆದುಕೊಂಡು ಯಾರಿಗೆ ಲಾಭವಾಗುತ್ತದೆ ಎಂಬ ಸೂಕ್ಷ್ಮತೆ ಗೊತ್ತಾಗುತ್ತದೆ.
ಪ್ರಚೋದನಾತ್ಮಕ ಒಮ್ಮತದ ಉತ್ಪನ್ನ
ವಿಧವೆ ಎಂಬ ಕಾರಣಕ್ಕಾಗಿ ಮಹಿಳೆಯ ರಾಜಕೀಯ ಪ್ರವೇಶಕ್ಕೆ ವ್ಯಕ್ತವಾಗುವ ಪ್ರತಿರೋಧ, ರಾಜಕೀಯ ನಾಯಕಿಯ ತಂದೆ ಯಾರೆಂಬುದೇ ಗೊತ್ತಿಲ್ಲ ಎಂಬುದನ್ನೇ ಚಿತ್ರಿಸಿ ಇಂಥವರ ಆಯ್ಕೆ ಸಮರ್ಥನೀಯವಲ್ಲ ಎಂಬ ವಾದ, ಸಂಘರ್ಷವನ್ನು ಸಮರ್ಥಿಸುವ ನುಡಿಗಳನ್ನಾಡಿದಾಗಲೇ ಪರವಾದ ಅಲೆಯನ್ನು ಸೃಷ್ಟಿಸಿಕೊಳ್ಳಬಹುದೆಂಬ ತಪ್ಪುಕಲ್ಪನೆ, ಜನಪ್ರಿಯ ತಾರೆಯನ್ನು ರಾಜಕೀಯಕ್ಕೆ ಕರೆತಂದು ಜನರನ್ನು ಸೆಳೆದುಕೊಳ್ಳುವ ಪ್ರಯತ್ನ, ಸುದ್ದಿಮಾಧ್ಯಮಗಳನ್ನು ಕೊಂಡುಕೊಂಡು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಚಾಣಾಕ್ಷತೆ, ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾದ ಸುದ್ದಿಮಾಧ್ಯಮ ಮುಖ್ಯಸ್ಥರು ಮತ್ತು ರಾಜಕೀಯ ಪಕ್ಷಗಳ ನಡುವಿನ ಅಸಂವಿಧಾನಿಕ ನಂಟು, ಅದರ ವಿಸ್ತರಣೆ ಎಂಬಂತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಬರೀ ವಿವಾದಕ್ಕೆಳೆಸುವ ಮಾತುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಸುದ್ದಿಮಾಧ್ಯಮ ಪ್ರಜ್ಞೆ – ಇವೆಲ್ಲವೂ ಸದ್ಯದ ಚುನಾವಣಾ ರಾಜಕಾರಣದ ಒಳಸುಳಿಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಭಾವನೆಗಳನ್ನು ಪ್ರಚೋದಿಸಿ ಒಮ್ಮತವನ್ನು ಉತ್ಪಾದಿಸಿಕೊಳ್ಳುವ ತಂತ್ರಗಾರಿಕೆಯು ಭಾರತದಲ್ಲಿ ಅತ್ಯಂತ ಜಾಗರೂಕತೆಯಿಂದ ಪ್ರಯೋಗಿಸಲ್ಪಡುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುತ್ತವೆ.
ಭಾವನಾತ್ಮಕ ಪ್ರಚೋದನೆಯ ನೆರವಿನೊಂದಿಗೆ ಪೂರಕವಾದ ಒಮ್ಮತವನ್ನು ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯು ಭಾರತೀಯ ರಾಜಕಾರಣಕ್ಕೆ ಹೊಸದೇನೂ ಅಲ್ಲ. ಅಸಮಾನತೆಯ ಕಾರಣಕ್ಕಾಗಿಯೇ ಭಾರತದಲ್ಲಿ ಬೇರೂರಿರುವ ತಾರತಮ್ಯದ ದೃಷ್ಟಿಕೋನಗಳನ್ನು ಒಡೆದುಹಾಕುವ ಅಪ್ಪಟ ವೈಚಾರಿಕ ಆಂದೋಲನಗಳು ನಡೆದರೂ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಅವುಗಳ ಚಲನೆ ನಿರಂತರವಾಗುಳಿಯಲಿಲ್ಲ. ಇಂಥ ವೈಚಾರಿಕ ಆಂದೋಲನಗಳನ್ನು ರಾಜಕೀಯ ಅಸ್ಮಿತೆಯ ಸಶಕ್ತತೆಗೆ ಬಳಸಿಕೊಳ್ಳುವ ಜಾಣ್ಮೆಯ ರಾಜಕಾರಣದ ಬದಲು ಅವುಗಳನ್ನು ಭಾವುಕ ನೆಲೆಯಲ್ಲಿ ಗ್ರಹಿಸುವ ಒತ್ತಡ ಸೃಷ್ಟಿಸಿ ಪ್ರಬಲರು ಮತ್ತು ದುರ್ಬಲರ ನಡುವಿನ ಕಂದರ ಹೆಚ್ಚಿಸುವ ಪ್ರಯತ್ನಗಳಾದವು. ಈ ಹಂತದಲ್ಲಿ ಭಿನ್ನಾಭಿಪ್ರಾಯಗಳುಂಟಾದವು. ಗುಂಪುಗಳಾದವು.
ಹೀಗೆ ವೈಚಾರಿಕ ಆಂದೋಲನಗಳನ್ನು ಕಟ್ಟಬೇಕಾದ ವಲಯವೇ ಒಡೆದುಹೋಯಿತು.
ಸಮಸ್ಯೆಯ ಮೂಲಪತ್ತೆಯ ಅನಿವಾರ್ಯತೆ
ಅವುಗಳು ಎತ್ತಿದ ಪ್ರಶ್ನೆಗಳನ್ನೇ ಮುಂದಿಟ್ಟು ಚುನಾವಣೆಗಳನ್ನು ಎದುರಿಸಿದ ಪಕ್ಷ ರಾಜಕಾರಣವು ಅಧಿಕಾರ ಪಡೆಯುವಲ್ಲಿ ಯಶಸ್ಸು ಸಾಧಿಸಿತು. ಅಧಿಕಾರ ಪಡೆದ ನಂತರ ಈ ವೈಚಾರಿಕ ಆಂದೋಲನ ಎತ್ತಿದ್ದ ಪ್ರಶ್ನೆಗಳ ಹಿಂದಿದ್ದ ಸಂಕಟಗಳನ್ನು ಪರಿಹರಿಸುವುದರ ಕಡೆಗೆ ರಚನಾತ್ಮಕ ಪ್ರಯತ್ನವನ್ನು ನಡೆಸಲೇ ಇಲ್ಲ. ಅಷ್ಟೇ ಅಲ್ಲ, ಭಾವುಕ ವ್ಯಾಪ್ತಿಯಲ್ಲಿ ಅಗ್ರಸ್ಥಾನ ಪಡೆದು ಚರ್ಚೆಗೊಳಗಾಗುವ ದೇವರು, ಧರ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ವಿವೇಚನೆ ಎತ್ತರಿಸುವ ಸಂವಾದ ರೂಪಿಸುವ ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ನಿಭಾಯಿಸಲಿಲ್ಲ. ಈ ಸ್ಪೇಸ್ಅನ್ನು ಮೂಲಭೂತವಾದಿ ದೃಷ್ಟಿಕೋನದ ರಾಜಕಾರಣ ಸಕಾಲಿಕವಾಗಿ ಬಳಸಿಕೊಂಡು ಅಧಿಕಾರದ ನಿರ್ಣಾಯಕ ಆವರಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿತು. ಸಮಸ್ಯೆಯ ಈ ಮೂಲವನ್ನು ಗೊತ್ತುಮಾಡಿಕೊಳ್ಳದೇ ನಾವು ಸದ್ಯದಲ್ಲಿ ಇದಕ್ಕಿಂದ ಭಿನ್ನವಾದ ಹೊಸದೊಂದು ಪರ್ಯಾಯ ರಾಜಕಾರಣದ ಆಕೃತಿಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಅಪೂರ್ವ ಅವಕಾಶ ಬಿಟ್ಟುಕೊಡುವ ಚಾಳಿ
ಈಗ ಸುದ್ದಿಮಾಧ್ಯಮಗಳು ಅತ್ಯುತ್ಸಾಹದಲ್ಲಿ ಇಂತಿಷ್ಟು ಹೊಸ ಮತದಾರರು ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಬಿಂಬಿಸುತ್ತಿವೆ. ಹೀಗೆ ಬಿಂಬಿಸುತ್ತಲೇ ಯುವಶಕ್ತಿ ಯಾರ ಪರ ನಿಲ್ಲಬೇಕು ಎಂಬರ್ಥದ ವಿಶ್ಲೇಷಣೆಗಳನ್ನು ಪರೋಕ್ಷವಾಗಿ ಮುಂದಿಡುತ್ತಿವೆ. ಸೈನಿಕರ ಮೇಲೆ ದಾಳಿ ನಡೆದಾಗ ಯುದ್ಧದ ಮೂಲಕವೇ ಪರಿಹಾರ ಸಾಧ್ಯ ಎಂಬ ಬಿಂಬಗಳನ್ನು ಕಟ್ಟಿಕೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನೆರೆಯ ರಾಷ್ಟ್ರಕ್ಕೆ ಬುದ್ಧಿ ಕಲಿಸಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸುತ್ತಿವೆ. ಇನ್ನೂ ಕೆಲವು ಮಾಧ್ಯಮಗಳು ಮುಖ್ಯವಾಗಿ ಉಗ್ರರ ವಿರುದ್ಧದ ರಚನಾತ್ಮಕ ಕಾರ್ಯಾಚರಣೆ ಮತ್ತು ಪಾಕಿಸ್ತಾನದೊಂದಿಗಿನ ಸೌಹಾರ್ದಯುತ ಮಾತುಕತೆಯ ಹಾದಿ ಅನುಸರಣೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಿವೆ. ಈ ಚರ್ಚೆಯ ಲಾಭವನ್ನು ಪಡೆಯುವ ಹವಣಿಕೆಯನ್ನು ಪಕ್ಷಗಳು ತೋರುತ್ತಿವೆ. ಇವೆಲ್ಲದ್ದರ ಮಧ್ಯೆ ಚುನಾವಣಾ ಅಖಾಡದಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದು ಮುಂಚೂಣಿಗೆ ತಂದುಕೊಳ್ಳಲೇಬೇಕಾದ ಸಂಗತಿಗಳು ಪ್ರಾತಿನಿಧ್ಯವನ್ನೇ ಪಡೆಯುತ್ತಿಲ್ಲ. ಇಂಥ ಅಪೂರ್ವ ಅವಕಾಶವನ್ನು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಬಿಟ್ಟುಕೊಡುತ್ತಿವೆ.
ಸವಾಲುಗಳ ನಿರ್ವಹಣೆಯ ಚಾಣಾಕ್ಷತೆಯ ಅಗತ್ಯತೆ
ಸಮಸ್ಯೆಗಳ ಪ್ರಮಾಣ ವ್ಯಾಪಕವಾಗಿದ್ದಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸವಾಲಿನ ನಿರ್ವಹಣೆಯ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಇಂಥ ಚಾಕಚಕ್ಯತೆಯೊಂದಿಗಿನ ನಿರ್ವಹಣೆಯ ಸವಾಲನ್ನು ಅತ್ಯಂತ ಶ್ರದ್ಧೆಯಿಂದ ಭಾರತೀಯ ರಾಜಕಾರಣ ಸ್ವೀಕರಿಸಲಿಲ್ಲ. ಸ್ವೀಕರಿಸುವುದನ್ನು ಪ್ರಾಥಮಿಕ ಆದ್ಯತೆಯ ಭಾಗವನ್ನಾಗಿ ಪರಿಗಣಿಸಲಿಲ್ಲ. ಬದಲಾಗಿ ಅದು ಜನರ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡು ಅದರ ಮೇಲೆ ಮತದ ಫಸಲು ಪಡೆಯುವ ಆಸೆಗಳನ್ನು ಈಡೇರಿಸುವುದರ ಕಡೆಗೆ ಹುಮ್ಮಸ್ಸನ್ನು ಮೀಸಲಾಗಿರಿಸಿಕೊಂಡಿತು. ಸಮಾಜವಾದಿ, ಜಾತ್ಯಾತೀತತೆ, ಬಂಡಾಯ ಮನೋಧರ್ಮದ ಚಳುವಳಿಗಳಿಂದ ಹೊಸ ಅಲೆ ಸೃಷ್ಟಿಸುವ ಪ್ರಯತ್ನಗಳಾದವು. ಆದರೆ ಅವುಗಳ ಪ್ರಭಾವವನ್ನು ವಿಸ್ತರಿಸುವುದಕ್ಕೆ ಇಲ್ಲಿಯ ರಾಜಕಾರಣ ಅವಕಾಶ ನೀಡಲಿಲ್ಲ. ಅವುಗಳನ್ನು ಸದೆಬಡೆಯುವ ಪ್ರತಿತಂತ್ರಗಳನ್ನು ಹೆಣೆದು ಸಾಂಪ್ರದಾಯಿಕ ಜಡತೆಯೊಂದಿಗಿನ ಜನರ ಮನೋಧರ್ಮದ ಮಿತಿಗಳನ್ನೇ ತನ್ನ ಗೆಲುವಿನ ತಂತ್ರಗಳಿಗಾಗಿ ಬಳಸಿಕೊಂಡಿತು. ಇದರ ಕಾರಣಕ್ಕಾಗಿಯೇ ಈಗ ಹೊಸ ವಿತಂಡವಾದಿ ದೃಷ್ಟಿಕೋನಗಳು ಜನಪ್ರಿಯ ಎಂಬ ಭಾವ ಮೂಡಿಸಲಾಗುತ್ತಿದೆ.
ಉಜ್ವಲ ಭವಿಷ್ಯದ ಸಾಧ್ಯತೆಗಳು
ಬುದ್ಧಿ ಮತ್ತು ಜೀವ – ಇವೆರಡೂ ಅಸಂಗತ ಎಂಬ ವೈರುಧ್ಯದ ನಿಲುವುಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಬುದ್ಧಿಜೀವದ ವಿವೇಚನಾಪೂರ್ಣ ಅಸ್ತಿತ್ವ ಅಪಾಯಕಾರಿ ಎಂದು ನಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಬುದ್ಧಿಜೀವವು ಧರ್ಮಾಧಾರಿತ ಭಾರತೀಯ ಸಾಮಾಜಿಕತೆಯನ್ನು ಭಿನ್ನವಾಗಿ ಮರುರೂಪಿಸುವುದಕ್ಕೆ ಅತ್ಯಾವಶಕ ಎಂಬ ತಾತ್ವಿಕತೆಯನ್ನು ರಾಜಕಾರಣ ಅರ್ಥೈಸಿಕೊಳ್ಳುತ್ತಿಲ್ಲ. ಧರ್ಮ, ದೇವರು, ಸಮಾಜ, ರಾಜಕಾರಣ, ಆರ್ಥಿಕತೆ – ಇವೆಲ್ಲವನ್ನೂ ಬುದ್ಧಿಜೀವದ ಜೀವಂತಿಕೆಯ ಬೆಂಬಲದೊಂದಿಗೆ ವಿವೇಕಪೂರ್ಣ ಪ್ರಜ್ಞೆಯೊಂದಿಗೆ ಅರ್ಥೈಸಿಕೊಳ್ಳಬೇಕು ಎಂಬ ಸ್ವಯಂಸಂವಿಧಾನವು ರೂಪುಗೊಳ್ಳಬೇಕಾಗಿದೆ. ಅದಕ್ಕಾಗಿ ರಾಜಕಾರಣವು ದಾರ್ಶನಿಕ ನಾಯಕತ್ವದ ಸತ್ವದೊಂದಿಗೆ ಗುರುತಿಸಿಕೊಳ್ಳಬೇಕು. ಇಂಥ ಸತ್ವವನ್ನು ಮುನ್ನೆಲೆಗೆ ತರುವುದಕ್ಕೆ ಚುನಾವಣೆಯ ಅಖಾಡವನ್ನು ಪೂರಕವಾಗಿಸಿಕೊಳ್ಳಬೇಕು. ಅಂಥ ಹೆಜ್ಜೆಗಳೊಂದಿಗೇ ಭಾರತದ ಉಜ್ವಲ ಭವಿಷ್ಯ ಅಡಗಿದೆ ಎಂಬುದನ್ನು ಬಹುಬೇಗ ಗೊತ್ತುಮಾಡಿಕೊಳ್ಳಬೇಕು.
-ಡಾ.ಎನ್.ಕೆ.ಪದ್ಮನಾಭ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ2 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ