Connect with us

ರಾಜಕೀಯ

ಚುನಾವಣಾ ರಾಜಕಾರಣ : ಆಶಾದಾಯಕ ಅವಕಾಶಗಳು

Published

on

Photo courtesy : LAW.COM

ದೇಶ ಮತ್ತೊಂದು ಮಹಾಚುನಾವಣೆಯ ಹೊಸಿಲಲ್ಲಿದೆ. ಯಾರು ಅಧಿಕಾರ ಅಲಂಕರಿಸಬಹುದು ಎಂಬ ಸಹಜ ಕುತೂಹಲ ಎಲ್ಲೆಡೆಯಲ್ಲಿಯೂ ಇದೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಅಖಾಡ ಸನ್ನದ್ಧವಾಗಿದೆ. ಲೋಕಸಭೆ ಚುನಾವಣೆ ಎಂದಾಕ್ಷಣ ಮುಂದಿನ ನಾಯಕ ಯಾರು ಎಂಬ ನಿರೀಕ್ಷೆ ಸಹಜವಾಗಿಯೇ ಗರಿಗೆದರುತ್ತದೆ. ಈ ಕುತೂಹಲಕ್ಕನುಗುಣವಾದ ನಿರೀಕ್ಷೆಯನ್ನು ಭಾರತದ ರಾಜಕಾರಣ ಹೇಗೆ ಈಡೇರಿಸುತ್ತದೆ ಎನ್ನುವುದರ ಮೇಲೆ ಭವಿಷ್ಯದ ಹೆಜ್ಜೆಗಳು ನಿರ್ಣಯಿಸಲ್ಪಡುತ್ತವೆ. ಜನಮನ್ನಣೆಯ ಗೆಲುವು ದಕ್ಕಿಸಿಕೊಳ್ಳಲು ರಾಜಕಾರಣಕ್ಕೆ ಎರಡು ಬಗೆಯ ಅವಕಾಶಗಳಿರುತ್ತವೆ. ಸಕಾರಾತ್ಮಕ ಆಲೋಚನೆಗಳ ಬಲದಲ್ಲಿ ದಾರ್ಶನಿಕ ನಾಯಕತ್ವ ಸಾಬೀತುಪಡಿಸುವ ಬದ್ಧತೆಯ ನಡೆಯೊಂದಿಗೆ ಮೊದಲ ಅವಕಾಶದ ಸಾಧ್ಯತೆ ಇರುತ್ತದೆ. ಇಡೀ ದೇಶವನ್ನು ಹಿಂದಕ್ಕೆಳೆಸುವ ಸಂಕುಚಿತ ಕಾರ್ಯಸೂಚಿಯೊಂದಿಗೆ ಜನರ ಜಡತೆಯನ್ನು ಮತ್ತಷ್ಟು ಸ್ಥಾಯಿಗೊಳಿಸುವ ಪ್ರಯತ್ನಗಳೊಂದಿಗಿನ ಅವಕಾಶ ಮತ್ತೊಂದು. ಭಾರತದ ರಾಜಕಾರಣವು ಇಂಥ ಸೀಮಿತ ದೃಷ್ಟಿಕೋನದ ಅವಕಾಶವಾದಿ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಸಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಲಭ್ಯವಾಗುತ್ತವೆ. ಸ್ವಾತಂತ್ರ್ಯೋತ್ತರ ಅವಧಿ, ಜಾಗತೀಕರಣದ ತದನಂತರದ ಕಾಲಘಟ್ಟ ಮತ್ತು ಹೊಸ ಶತಮಾನದ ಸ್ಥಿತ್ಯಂತರಗಳ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಚರ್ಚೆಯನ್ನು ವಿಸ್ತರಿಸಬಹುದು.

ಜಡತೆಯಿಂದ ಗೆಲುವಿನ ಲಾಭ!

ಅಧಿಕಾರಕ್ಕ ಬಂದ ಕ್ಷಣದಿಂದಲೇ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರದರ್ಶಿತವಾಗುವ ಎಚ್ಚರದ ರಾಜಕೀಯ ನಡೆ ಇಲ್ಲಿಯ ಸಾಮಾನ್ಯ ಗುಣಲಕ್ಷಣ. ಇದಕ್ಕೆ ಹೊಸ ಬಗೆಯ ತೀವ್ರತೆ ಸಿಕ್ಕಿದ್ದು ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ. ಆಗಿನ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ರಾಜಕಾರಣ ಚಾಣಾಕ್ಷ ತಂತ್ರಗಾರಿಕೆಯ ತೀವ್ರತರ ತಿರುವಿನ ಘಟ್ಟ ತಲುಪಿದ್ದು ಸ್ಪಷ್ಟವಾಗುತ್ತದೆ. ಅಧಿಕಾರ ಪಡೆಯುವ ಏಕೈಕ ಕಾರ್ಯಸೂಚಿಯನ್ನಷ್ಟೇ ನೆಚ್ಚಿಕೊಂಡು ರಾಜಕೀಯ ಪಕ್ಷಗಳು ಕಾರ್ಯೋನ್ಮುಖವಾಗುವುದು, ಅದಕ್ಕಾಗಿ ಚಾಣಾಕ್ಷ ತಂತ್ರಗಾರಿಕೆಯ ನೆರವು ಪಡೆಯುವುದು, ಆ ಮೂಲಕ ಗೆಲುವು ಸಾಧ್ಯವಾಗಿಸಿಕೊಳ್ಳುವುದು – ಇವೆಲ್ಲವೂ ಗೊತ್ತಿರುವ ಸಂಗತಿಗಳೇ. ಆದರೆ, 2014ರ ಚುನಾವಣೆಯು ಈ ದೇಶದಲ್ಲಿ ಸ್ಥಾವರವಾಗಿ ಉಳಿದುಕೊಂಡಿದ್ದ ಜಡತೆಯ ನಿರ್ಲಿಪ್ತ ಮನಸ್ಥಿತಿಯನ್ನು ಬೇರೊಂದು ರೀತಿಯಲ್ಲಿ ಬಳಸಿಕೊಂಡು ಗೆಲುವು ತಂದುಕೊಳ್ಳುವ ಅವಕಾಶವನ್ನು ದಯಪಾಲಿಸಿತು. ಇದನ್ನು ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಂಡವರು ಗೆಲುವಿನ ನಗೆ ಬೀರಿದರು.

ಹಳೆ ಆಲದ ಮರಕ್ಕೆ ಜೋತುಬೀಳುವಿಕೆ

ಹಿಂದೆ ಬಹಳ ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಅನುಸರಿಸಿದ ಹಾದಿಯನ್ನೇ ಬೇರೊಂದು ಬಗೆಯಲ್ಲಿ ಮಾದರಿಯಾಗಿಸಿಕೊಂಡ ಕಾರಣಕ್ಕಾಗಿಯೇ ಆ ಗೆಲುವು ಸಾಧಿಸಲು ಸಾಧ್ಯವಾಯಿತು. ಹಿಂದಿನವರದ್ದು ಹಳೆಯ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯ ರಾಜಕಾರಣವೇ ಆಗಿತ್ತು. ಹಳೆಯ ಸಾಧನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಅದರ ಜಪಗೈದು ಜನರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆಯ ಕಡೆಗೇ ಅದರ ಆದ್ಯತೆ ಇತ್ತು. ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದಿದ್ದವರು ಹಳೆಯದ್ದರ ಆಧಾರದಲ್ಲಿ ಹೊಸದೊಂದು ರಾಜಕೀಯ ಸಂಸ್ಕøತಿಯನ್ನು ರೂಪಿಸುವ ಹೊಣೆಗಾರಿಕೆ ನಿರ್ವಹಿಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟರು. ಹೀಗಾಗಿ ‘ಹಳೆಯ ಬೇರು, ಹೊಸ ಚಿಗುರು’ ಎಂಬ ಪ್ರಯೋಗಶೀಲ ದೃಷ್ಟಿಕೋನ ಸೋಲನ್ನು ಅನುಭವಿಸಿತು. ಹಳೆಯ ಬೇರುಗಳೊಂದಿಗೆ ನಂಟು ಉಳಿಸಿಕೊಂಡು ಹೊಸದಾದ ಹೆಜ್ಜೆಗಳೊಂದಿಗೆ ಬದಲಾವಣೆಯ ಅಲೆಯನ್ನು ಮೂಡಿಸುವುದರ ಕಡೆಗಿನ ವ್ಯಾಪಕ ಸಾಧ್ಯತೆಗಳು ಮೊಟಕುಗೊಂಡವು.

ನಕಾರಾತ್ಮಕತೆಯ ಪುನರಾವರ್ತನೆ

ಪ್ರಶ್ನಿಸುವ ತಾರ್ಕಿಕತೆಯನ್ನು ಚಾಣಾಕ್ಷಯುತವಾಗಿ ಹತ್ತಿಕ್ಕುವ ಆಡಳಿತಾರೂಢ ಪ್ರಾಬಲ್ಯವು ಸ್ವಾತಂತ್ರ್ಯೋತ್ತರ ರಾಜಕೀಯ ವಲಯದ ಮೊದಲ ಆದ್ಯತೆಯಾಗಿ ಪ್ರಾಮುಖ್ಯತೆ ಪಡೆದುಕೊಂಡಿತು. ಇದನ್ನು ಹಿನ್ನೆಲೆಗೆ ಸರಿಸುವ ಪರ್ಯಾಯ ರಾಜಕಾರಣದ ತಾತ್ವಿಕ ಮಾದರಿಗಳು ವಿವಿಧ ದಶಕಗಳಲ್ಲಿ ಕಾಣಿಸಿಕೊಂಡರೂ ಜನಜನಿತವಾದ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರ ವ್ಯಕ್ತಿಗತ ಪ್ರತಿಷ್ಠೆ ಮತ್ತು ಆರಾಧನಾ ಮನೋಭಾವಕ್ಕೇ ಹೆಚ್ಚಿನ ಆದ್ಯತೆ ಸಿಕ್ಕಿತು. ಇದು ಐದು ವರ್ಷಗಳ ಅಧಿಕಾರಾವಧಿಯ ಪ್ರತಿ ಹಂತದಲ್ಲೂ ನುಸುಳಿಕೊಳ್ಳತೊಡಗಿತು. ಈಗ ಅದೇ ನಕಾರಾತ್ಮಕತೆ ಬೇರೆ ರೀತಿಯಲ್ಲಿ ಪುನರಾವರ್ತಿತವಾಗಿದೆ.

ವೈರುಧ್ಯದ ರಾಜಕೀಯ ನಡೆ

ಚುನಾವಣಾ ರಾಜಕಾರಣವು ಸಂಕುಚಿತ ಅಜೆಂಡಾ ಆಧಾರದಲ್ಲಿ ಅಭಿವ್ಯಕ್ತವಾದರೆ ಏನೇನಾಗುತ್ತದೆ ಎನ್ನುವುದನ್ನು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚರಿತ್ರೆಯ ಮೂಲಕ ತಿಳಿದುಕೊಳ್ಳಬಹುದು. ಇದರ ಅಧ್ಯಯನ ಮತ್ತು ಸೂಕ್ಷ್ಮ ಅವಲೋಕನದಿಂದ ಇಲ್ಲಿಯ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಜೀವಪರ ಸಂವೇದನೆಯ ಮೌಲಿಕ ಆಲೋಚನೆ ಮತ್ತು ವಾದಗಳನ್ನು ಮುನ್ನೆಲೆಗೆ ತಂದು ಅದಕ್ಕನುಗುಣವಾದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರತಿಪಾದನೆಯ ನೆರವಿನೊಂದಿಗೆ ಅಧಿಕಾರಕ್ಕೆ ಬಂದವರು ಮತ್ತು ಉದಾತ್ತವಾದ ಧಾರ್ಮಿಕ ಅಂಶಗಳನ್ನು ಸಂಕುಚಿತಗೊಳಿಸಿ ಸಂಘರ್ಷ ಮೂಡಿಸಿ ಅಧಿಕಾರಕ್ಕೆ ಹತ್ತಿರಾಗುವ ಜಾಯಮಾನದ ರಾಜಕೀಯ ವರ್ತನೆಗಳವರ ದಿಗ್ವಿಜಯದ ಜೊತೆಗೆ ಇಂಥ ವೈರುಧ್ಯಗಳಿವೆ. ಎರಡೂ ವಲಯಗಳು ಅಧಿಕಾರರೂಢ ಮತ್ತು ವಿರೋಧ ಪಕ್ಷ ಎಂಬ ನೆಲೆಗಳಲ್ಲಿ ವಿಂಗಡಣೆಯಾಗಿ ವಾದಗಳನ್ನು ಮುಂದಿಡುತ್ತಾ ಜನಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ.

Rajadharma a column by Dr.N k padmanabh

ಒಮ್ಮೆ ಅವರಿಗೆ, ಮತ್ತೊಮ್ಮೆ ಇವರಿಗೆ ಎನ್ನುವ ಹಾಗೆ ಅಧಿಕಾರದ ಅವಕಾಶ ಪ್ರಾಪ್ತವಾಗಿದೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಈ ಎರಡೂ ವಲಯಗಳ ರಾಜಕೀಯ ನಡೆ ಯಾವ ಬಗೆಯ ಉದಾತ್ತತೆಯೊಂದಿಗಿತ್ತು ಎಂಬುದನ್ನು ಪರಿಶೀಲಿಸಿದರೆ ಇಡೀ ಭಾರತದ ರಾಜಕಾರಣದ ಬಹುದೊಡ್ಡ ಮಿತಿಗಳು ಎದ್ದುಕಾಣುತ್ತವೆ. ಅಧಿಕಾರಕ್ಕೆ ಬರುವವರೆಗೆ ಪ್ರತಿಪಾದಿಸಿದ ವಿಶಾಲವಾದ ಮೌಲಿಕ ಆಲೋಚನೆಗಳನ್ನೇ ಅಧಿಕಾರಕ್ಕೆ ಬಂದ ನಂತರ ಮರೆಯುವ ಜಾಣ್ಮೆಯನ್ನು ಸ್ಥಾಯಿಯಾಗಿಸಿಕೊಂಡ ಪಕ್ಷ ರಾಜಕಾರಣವೊಂದರ ವಿಕಲಾಂಗ ಲಕ್ಷಣವು ಪಕ್ಷಾತೀತ ನೆಲೆಯಲ್ಲಿ ಸರ್ವವ್ಯಾಪಿಯಾಯಿತು. ಇಂಥ ದ್ವಂದ್ವವನ್ನು ಪ್ರಶ್ನಿಸುತ್ತಲೇ ಧರ್ಮಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ಲಾಭದ ಆಕಾಂಕ್ಷೆಯಲ್ಲಿ ತಪ್ಪಾಗಿ ವಿಶ್ಲೇಷಿಸಿ ಅಧಿಕಾರಕ್ಕೇರಿದವರೂ ಮತ್ತದೇ ಹಾದಿ ಹಿಡಿದರು. ಹೀಗಾಗಿಯೇ ರಾಜಕೀಯ ಪಕ್ಷಗಳ ಕೆಳಹಂತದ ಯುವ ಕಾರ್ಯಕರ್ತರಿಗೆ ಉದಾತ್ತವಾದ ನಾಯಕತ್ವದ ಮಾದರಿಯೇ ಇಲ್ಲದಂತಾಯಿತು.

ಬಹುಮತ ಪ್ರಾಶಸ್ತ್ಯದ ಮತ್ತೊಂದು ಮುಖ

ಈ ಹಂತದಲ್ಲಿಯೇ ಪ್ರಶ್ನಿಸುವ ಧ್ವನಿಗಳೊಂದಿಗೆ ಇರುವವರನ್ನೇ ದ್ವಂದ್ವಕ್ಕೆ ಸಿಲುಕಿಸುವ ವಿತಂಡವಾದಿ ದೃಷ್ಟಿಕೋನಗಳು ಕಳೆದ 2014 ಚುನಾವಣೆಯ ಸಂದರ್ಭದಲ್ಲಿ ವೈಭವೀಕೃತವಾದವು. ಇವರನ್ನು ಪ್ರಶ್ನೆ ಮಾಡುತ್ತೀರಿ. ಮತ್ತಿನ್ಯಾರನ್ನು ಆಯ್ಕೆ ಮಾಡುತ್ತೀರಿ? ಇಷ್ಟು ವರ್ಷಗಳ ಕಾಲ ಆಳಿದವರು ಏನು ಸಾಧಿಸಿದರು? ಎಂಬ ಮರುಪ್ರಶ್ನೆ ಎಸೆದು ಚರ್ಚೆ ಒಳಗೊಳ್ಳಬಹುದಾದ ವಿಶಾಲ ಆವರಣವನ್ನೇ ಒಡೆದುಬಿಡುವ ಪ್ರವೃತ್ತಿ ಮುಂದುವರೆಯಿತು. ಇದೇ ಪ್ರವೃತ್ತಿಯನ್ನೇ ಮುಖ್ಯವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಪಕ್ಷದ ಪರವಾದ ಅಲೆ ಮೂಡಿಸುವ ಉದ್ದೇಶಕ್ಕೆ ಬಳಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಯಶಸ್ಸು ಕಂಡಿತು. ಹಿಂದಿನವರ ಮೌನಕ್ಕಿಂತ ಈಗಿನವರ ಮಾತು ಹೆಚ್ಚು ಆಪ್ತ ಎಂಬ ಕಾರಣಕ್ಕಾಗಿ ಮತನೀಡುವ ಅಪೇಕ್ಷೆ ಸಾಮೂಹಿಕವಾಗಿ ಅಭಿವ್ಯಕ್ತವಾಯಿತು. ಸಮಸ್ಯೆಗಳನ್ನು ಅಸಹಾಯಕ ಮೌನ ಮತ್ತು ದಿವ್ಯ ನಿರ್ಲಿಪ್ತತೆಯೊಂದಿಗೆ ನಿರ್ಲಕ್ಷಿಸಿದವರಿಗಿಂತಲೂ ಅವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದನ್ನು ಭಾಷಿಕ ಪ್ರೌಢಿಮೆಯಲ್ಲಿ ಮನಗಾಣಿಸಿದವರು ಮುಖ್ಯ ಎಂಬ ಭಾವನೆಯೇ ಸಾರ್ವತ್ರಿಕವಾಗಿ ಹೊಸಬರಿಗೆ ಭಾರೀ ಬಹುಮತದ ಪ್ರಾಶಸ್ತ್ಯ ದೊರಕಿ ಅಧಿಕಾರದ ಅವಕಾಶ ಲಭ್ಯವಾಯಿತು.

ದಿಕ್ಕುತಪ್ಪಿಸುವ ಹುನ್ನಾರಗಳು

ಈಗ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಬಗೆಯ ಇತಿಹಾಸ ಪುನರಾವರ್ತಿತಗೊಳ್ಳುವ ಎಲ್ಲ ವಿದ್ಯಮಾನಗಳಿಗೆ ನಾವೀಗ ಸಾಕ್ಷಿಯಾಗುತ್ತಲೇ ಇದ್ದೇವೆ. ಒಂದು ದೇಶದ ವಿರುದ್ಧ ಯುದ್ಧ ಆಗಬೇಕು ಎಂಬ ಅಗ್ರೆಸ್ಸಿವ್ ಪ್ರತಿಪಾದನೆಯು ಪೀಳಿಗೆಯೊಂದರ ರಾಜಕೀಯ ಆದ್ಯತೆಯನ್ನೇ ಸಂಕುಚಿತಗೊಳಿಸಿ ಬಹುಮತ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಪ್ರಭಾವೀ ಎಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಕಣ್ಣಮುಂದೆಯೇ ಇವೆ. ಸುಳ್ಳುಗಳ ತರಹೇವಾರಿ ವಿವರಗಳು ಬಗೆಬಗೆಯ ಬಣ್ಣಗಳನ್ನು ಪಡೆದು ಜನರ ನಿರ್ಧಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತಿರುವ ವಾಸ್ತವವನ್ನು ಅಷ್ಟು ಸುಲಭವಾಗಿ ನಿರಾಕರಿಸುವಂತಿಲ್ಲ. ರಾಜಕಾರಣಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲಂತೂ ಭಾರತೀಯ ಪ್ರಜಾಪ್ರಭುತ್ವದ ದಿಕ್ಕುತಪ್ಪಿಸುವ ಹುನ್ನಾರಗಳು ಯಾವ ಸ್ವರೂಪದ್ದವು ಎಂಬುದು ಸ್ಪಷ್ಟವಾಗುತ್ತದೆ. ಇಡೀ ದೇಶದಲ್ಲಿ ಆಗಬೇಕಿದ್ದ ಚರ್ಚೆಗಳ ಬದಲು ಅನಗತ್ಯ ವಿವರಗಳೇ ಪ್ರಾಮುಖ್ಯತೆ ಪಡೆದುಕೊಂಡು ಯಾರಿಗೆ ಲಾಭವಾಗುತ್ತದೆ ಎಂಬ ಸೂಕ್ಷ್ಮತೆ ಗೊತ್ತಾಗುತ್ತದೆ.

ಪ್ರಚೋದನಾತ್ಮಕ ಒಮ್ಮತದ ಉತ್ಪನ್ನ

ವಿಧವೆ ಎಂಬ ಕಾರಣಕ್ಕಾಗಿ ಮಹಿಳೆಯ ರಾಜಕೀಯ ಪ್ರವೇಶಕ್ಕೆ ವ್ಯಕ್ತವಾಗುವ ಪ್ರತಿರೋಧ, ರಾಜಕೀಯ ನಾಯಕಿಯ ತಂದೆ ಯಾರೆಂಬುದೇ ಗೊತ್ತಿಲ್ಲ ಎಂಬುದನ್ನೇ ಚಿತ್ರಿಸಿ ಇಂಥವರ ಆಯ್ಕೆ ಸಮರ್ಥನೀಯವಲ್ಲ ಎಂಬ ವಾದ, ಸಂಘರ್ಷವನ್ನು ಸಮರ್ಥಿಸುವ ನುಡಿಗಳನ್ನಾಡಿದಾಗಲೇ ಪರವಾದ ಅಲೆಯನ್ನು ಸೃಷ್ಟಿಸಿಕೊಳ್ಳಬಹುದೆಂಬ ತಪ್ಪುಕಲ್ಪನೆ, ಜನಪ್ರಿಯ ತಾರೆಯನ್ನು ರಾಜಕೀಯಕ್ಕೆ ಕರೆತಂದು ಜನರನ್ನು ಸೆಳೆದುಕೊಳ್ಳುವ ಪ್ರಯತ್ನ, ಸುದ್ದಿಮಾಧ್ಯಮಗಳನ್ನು ಕೊಂಡುಕೊಂಡು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಚಾಣಾಕ್ಷತೆ, ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾದ ಸುದ್ದಿಮಾಧ್ಯಮ ಮುಖ್ಯಸ್ಥರು ಮತ್ತು ರಾಜಕೀಯ ಪಕ್ಷಗಳ ನಡುವಿನ ಅಸಂವಿಧಾನಿಕ ನಂಟು, ಅದರ ವಿಸ್ತರಣೆ ಎಂಬಂತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಬರೀ ವಿವಾದಕ್ಕೆಳೆಸುವ ಮಾತುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಸುದ್ದಿಮಾಧ್ಯಮ ಪ್ರಜ್ಞೆ – ಇವೆಲ್ಲವೂ ಸದ್ಯದ ಚುನಾವಣಾ ರಾಜಕಾರಣದ ಒಳಸುಳಿಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಭಾವನೆಗಳನ್ನು ಪ್ರಚೋದಿಸಿ ಒಮ್ಮತವನ್ನು ಉತ್ಪಾದಿಸಿಕೊಳ್ಳುವ ತಂತ್ರಗಾರಿಕೆಯು ಭಾರತದಲ್ಲಿ ಅತ್ಯಂತ ಜಾಗರೂಕತೆಯಿಂದ ಪ್ರಯೋಗಿಸಲ್ಪಡುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ಭಾವನಾತ್ಮಕ ಪ್ರಚೋದನೆಯ ನೆರವಿನೊಂದಿಗೆ ಪೂರಕವಾದ ಒಮ್ಮತವನ್ನು ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯು ಭಾರತೀಯ ರಾಜಕಾರಣಕ್ಕೆ ಹೊಸದೇನೂ ಅಲ್ಲ. ಅಸಮಾನತೆಯ ಕಾರಣಕ್ಕಾಗಿಯೇ ಭಾರತದಲ್ಲಿ ಬೇರೂರಿರುವ ತಾರತಮ್ಯದ ದೃಷ್ಟಿಕೋನಗಳನ್ನು ಒಡೆದುಹಾಕುವ ಅಪ್ಪಟ ವೈಚಾರಿಕ ಆಂದೋಲನಗಳು ನಡೆದರೂ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಅವುಗಳ ಚಲನೆ ನಿರಂತರವಾಗುಳಿಯಲಿಲ್ಲ. ಇಂಥ ವೈಚಾರಿಕ ಆಂದೋಲನಗಳನ್ನು ರಾಜಕೀಯ ಅಸ್ಮಿತೆಯ ಸಶಕ್ತತೆಗೆ ಬಳಸಿಕೊಳ್ಳುವ ಜಾಣ್ಮೆಯ ರಾಜಕಾರಣದ ಬದಲು ಅವುಗಳನ್ನು ಭಾವುಕ ನೆಲೆಯಲ್ಲಿ ಗ್ರಹಿಸುವ ಒತ್ತಡ ಸೃಷ್ಟಿಸಿ ಪ್ರಬಲರು ಮತ್ತು ದುರ್ಬಲರ ನಡುವಿನ ಕಂದರ ಹೆಚ್ಚಿಸುವ ಪ್ರಯತ್ನಗಳಾದವು. ಈ ಹಂತದಲ್ಲಿ ಭಿನ್ನಾಭಿಪ್ರಾಯಗಳುಂಟಾದವು. ಗುಂಪುಗಳಾದವು.

ಹೀಗೆ ವೈಚಾರಿಕ ಆಂದೋಲನಗಳನ್ನು ಕಟ್ಟಬೇಕಾದ ವಲಯವೇ ಒಡೆದುಹೋಯಿತು.
ಸಮಸ್ಯೆಯ ಮೂಲಪತ್ತೆಯ ಅನಿವಾರ್ಯತೆ
ಅವುಗಳು ಎತ್ತಿದ ಪ್ರಶ್ನೆಗಳನ್ನೇ ಮುಂದಿಟ್ಟು ಚುನಾವಣೆಗಳನ್ನು ಎದುರಿಸಿದ ಪಕ್ಷ ರಾಜಕಾರಣವು ಅಧಿಕಾರ ಪಡೆಯುವಲ್ಲಿ ಯಶಸ್ಸು ಸಾಧಿಸಿತು. ಅಧಿಕಾರ ಪಡೆದ ನಂತರ ಈ ವೈಚಾರಿಕ ಆಂದೋಲನ ಎತ್ತಿದ್ದ ಪ್ರಶ್ನೆಗಳ ಹಿಂದಿದ್ದ ಸಂಕಟಗಳನ್ನು ಪರಿಹರಿಸುವುದರ ಕಡೆಗೆ ರಚನಾತ್ಮಕ ಪ್ರಯತ್ನವನ್ನು ನಡೆಸಲೇ ಇಲ್ಲ. ಅಷ್ಟೇ ಅಲ್ಲ, ಭಾವುಕ ವ್ಯಾಪ್ತಿಯಲ್ಲಿ ಅಗ್ರಸ್ಥಾನ ಪಡೆದು ಚರ್ಚೆಗೊಳಗಾಗುವ ದೇವರು, ಧರ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ವಿವೇಚನೆ ಎತ್ತರಿಸುವ ಸಂವಾದ ರೂಪಿಸುವ ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ನಿಭಾಯಿಸಲಿಲ್ಲ. ಈ ಸ್ಪೇಸ್‍ಅನ್ನು ಮೂಲಭೂತವಾದಿ ದೃಷ್ಟಿಕೋನದ ರಾಜಕಾರಣ ಸಕಾಲಿಕವಾಗಿ ಬಳಸಿಕೊಂಡು ಅಧಿಕಾರದ ನಿರ್ಣಾಯಕ ಆವರಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿತು. ಸಮಸ್ಯೆಯ ಈ ಮೂಲವನ್ನು ಗೊತ್ತುಮಾಡಿಕೊಳ್ಳದೇ ನಾವು ಸದ್ಯದಲ್ಲಿ ಇದಕ್ಕಿಂದ ಭಿನ್ನವಾದ ಹೊಸದೊಂದು ಪರ್ಯಾಯ ರಾಜಕಾರಣದ ಆಕೃತಿಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.

ಅಪೂರ್ವ ಅವಕಾಶ ಬಿಟ್ಟುಕೊಡುವ ಚಾಳಿ

ಈಗ ಸುದ್ದಿಮಾಧ್ಯಮಗಳು ಅತ್ಯುತ್ಸಾಹದಲ್ಲಿ ಇಂತಿಷ್ಟು ಹೊಸ ಮತದಾರರು ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಬಿಂಬಿಸುತ್ತಿವೆ. ಹೀಗೆ ಬಿಂಬಿಸುತ್ತಲೇ ಯುವಶಕ್ತಿ ಯಾರ ಪರ ನಿಲ್ಲಬೇಕು ಎಂಬರ್ಥದ ವಿಶ್ಲೇಷಣೆಗಳನ್ನು ಪರೋಕ್ಷವಾಗಿ ಮುಂದಿಡುತ್ತಿವೆ. ಸೈನಿಕರ ಮೇಲೆ ದಾಳಿ ನಡೆದಾಗ ಯುದ್ಧದ ಮೂಲಕವೇ ಪರಿಹಾರ ಸಾಧ್ಯ ಎಂಬ ಬಿಂಬಗಳನ್ನು ಕಟ್ಟಿಕೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನೆರೆಯ ರಾಷ್ಟ್ರಕ್ಕೆ ಬುದ್ಧಿ ಕಲಿಸಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸುತ್ತಿವೆ. ಇನ್ನೂ ಕೆಲವು ಮಾಧ್ಯಮಗಳು ಮುಖ್ಯವಾಗಿ ಉಗ್ರರ ವಿರುದ್ಧದ ರಚನಾತ್ಮಕ ಕಾರ್ಯಾಚರಣೆ ಮತ್ತು ಪಾಕಿಸ್ತಾನದೊಂದಿಗಿನ ಸೌಹಾರ್ದಯುತ ಮಾತುಕತೆಯ ಹಾದಿ ಅನುಸರಣೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಿವೆ. ಈ ಚರ್ಚೆಯ ಲಾಭವನ್ನು ಪಡೆಯುವ ಹವಣಿಕೆಯನ್ನು ಪಕ್ಷಗಳು ತೋರುತ್ತಿವೆ. ಇವೆಲ್ಲದ್ದರ ಮಧ್ಯೆ ಚುನಾವಣಾ ಅಖಾಡದಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದು ಮುಂಚೂಣಿಗೆ ತಂದುಕೊಳ್ಳಲೇಬೇಕಾದ ಸಂಗತಿಗಳು ಪ್ರಾತಿನಿಧ್ಯವನ್ನೇ ಪಡೆಯುತ್ತಿಲ್ಲ. ಇಂಥ ಅಪೂರ್ವ ಅವಕಾಶವನ್ನು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಬಿಟ್ಟುಕೊಡುತ್ತಿವೆ.

ಸವಾಲುಗಳ ನಿರ್ವಹಣೆಯ ಚಾಣಾಕ್ಷತೆಯ ಅಗತ್ಯತೆ

ಸಮಸ್ಯೆಗಳ ಪ್ರಮಾಣ ವ್ಯಾಪಕವಾಗಿದ್ದಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸವಾಲಿನ ನಿರ್ವಹಣೆಯ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಇಂಥ ಚಾಕಚಕ್ಯತೆಯೊಂದಿಗಿನ ನಿರ್ವಹಣೆಯ ಸವಾಲನ್ನು ಅತ್ಯಂತ ಶ್ರದ್ಧೆಯಿಂದ ಭಾರತೀಯ ರಾಜಕಾರಣ ಸ್ವೀಕರಿಸಲಿಲ್ಲ. ಸ್ವೀಕರಿಸುವುದನ್ನು ಪ್ರಾಥಮಿಕ ಆದ್ಯತೆಯ ಭಾಗವನ್ನಾಗಿ ಪರಿಗಣಿಸಲಿಲ್ಲ. ಬದಲಾಗಿ ಅದು ಜನರ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡು ಅದರ ಮೇಲೆ ಮತದ ಫಸಲು ಪಡೆಯುವ ಆಸೆಗಳನ್ನು ಈಡೇರಿಸುವುದರ ಕಡೆಗೆ ಹುಮ್ಮಸ್ಸನ್ನು ಮೀಸಲಾಗಿರಿಸಿಕೊಂಡಿತು. ಸಮಾಜವಾದಿ, ಜಾತ್ಯಾತೀತತೆ, ಬಂಡಾಯ ಮನೋಧರ್ಮದ ಚಳುವಳಿಗಳಿಂದ ಹೊಸ ಅಲೆ ಸೃಷ್ಟಿಸುವ ಪ್ರಯತ್ನಗಳಾದವು. ಆದರೆ ಅವುಗಳ ಪ್ರಭಾವವನ್ನು ವಿಸ್ತರಿಸುವುದಕ್ಕೆ ಇಲ್ಲಿಯ ರಾಜಕಾರಣ ಅವಕಾಶ ನೀಡಲಿಲ್ಲ. ಅವುಗಳನ್ನು ಸದೆಬಡೆಯುವ ಪ್ರತಿತಂತ್ರಗಳನ್ನು ಹೆಣೆದು ಸಾಂಪ್ರದಾಯಿಕ ಜಡತೆಯೊಂದಿಗಿನ ಜನರ ಮನೋಧರ್ಮದ ಮಿತಿಗಳನ್ನೇ ತನ್ನ ಗೆಲುವಿನ ತಂತ್ರಗಳಿಗಾಗಿ ಬಳಸಿಕೊಂಡಿತು. ಇದರ ಕಾರಣಕ್ಕಾಗಿಯೇ ಈಗ ಹೊಸ ವಿತಂಡವಾದಿ ದೃಷ್ಟಿಕೋನಗಳು ಜನಪ್ರಿಯ ಎಂಬ ಭಾವ ಮೂಡಿಸಲಾಗುತ್ತಿದೆ.

ಉಜ್ವಲ ಭವಿಷ್ಯದ ಸಾಧ್ಯತೆಗಳು

ಬುದ್ಧಿ ಮತ್ತು ಜೀವ – ಇವೆರಡೂ ಅಸಂಗತ ಎಂಬ ವೈರುಧ್ಯದ ನಿಲುವುಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಬುದ್ಧಿಜೀವದ ವಿವೇಚನಾಪೂರ್ಣ ಅಸ್ತಿತ್ವ ಅಪಾಯಕಾರಿ ಎಂದು ನಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಬುದ್ಧಿಜೀವವು ಧರ್ಮಾಧಾರಿತ ಭಾರತೀಯ ಸಾಮಾಜಿಕತೆಯನ್ನು ಭಿನ್ನವಾಗಿ ಮರುರೂಪಿಸುವುದಕ್ಕೆ ಅತ್ಯಾವಶಕ ಎಂಬ ತಾತ್ವಿಕತೆಯನ್ನು ರಾಜಕಾರಣ ಅರ್ಥೈಸಿಕೊಳ್ಳುತ್ತಿಲ್ಲ. ಧರ್ಮ, ದೇವರು, ಸಮಾಜ, ರಾಜಕಾರಣ, ಆರ್ಥಿಕತೆ – ಇವೆಲ್ಲವನ್ನೂ ಬುದ್ಧಿಜೀವದ ಜೀವಂತಿಕೆಯ ಬೆಂಬಲದೊಂದಿಗೆ ವಿವೇಕಪೂರ್ಣ ಪ್ರಜ್ಞೆಯೊಂದಿಗೆ ಅರ್ಥೈಸಿಕೊಳ್ಳಬೇಕು ಎಂಬ ಸ್ವಯಂಸಂವಿಧಾನವು ರೂಪುಗೊಳ್ಳಬೇಕಾಗಿದೆ. ಅದಕ್ಕಾಗಿ ರಾಜಕಾರಣವು ದಾರ್ಶನಿಕ ನಾಯಕತ್ವದ ಸತ್ವದೊಂದಿಗೆ ಗುರುತಿಸಿಕೊಳ್ಳಬೇಕು. ಇಂಥ ಸತ್ವವನ್ನು ಮುನ್ನೆಲೆಗೆ ತರುವುದಕ್ಕೆ ಚುನಾವಣೆಯ ಅಖಾಡವನ್ನು ಪೂರಕವಾಗಿಸಿಕೊಳ್ಳಬೇಕು. ಅಂಥ ಹೆಜ್ಜೆಗಳೊಂದಿಗೇ ಭಾರತದ ಉಜ್ವಲ ಭವಿಷ್ಯ ಅಡಗಿದೆ ಎಂಬುದನ್ನು ಬಹುಬೇಗ ಗೊತ್ತುಮಾಡಿಕೊಳ್ಳಬೇಕು.

-ಡಾ.ಎನ್.ಕೆ.ಪದ್ಮನಾಭ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ

Published

on

1.03 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಂದ ಸ್ಥಳ ಪರಿಶೀಲನೆ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಸುದ್ದಿದಿನ,ಬಳ್ಳಾರಿ:ರಾಜ್ಯ ಸರ್ಕಾರವು 2 ವ಼ರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕಾರ್ಯಕ್ರಮ ಆಯೋಜನೆ ಕುರಿತಂತೆ, ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

2023 ರ ಮೇ 20 ರಂದು ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು ಈಗ ಎರಡು ವರ್ಷ ಪೂರೈಸುತ್ತಿದೆ. ಅಂದೇ ಕ್ಯಾಬಿನೆಟ್ ಸಭೆಯಲ್ಲಿ ಪಂಚ ಗ್ಯಾರಂಟಿ ಜಾರಿಗೆ ಕುರಿತಂತೆ ಚರ್ಚಿಸಲಾಗಿತ್ತು. ಪ್ರಥಮವಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷಿö್ಮ ಮತ್ತು ಯುವನಿಧಿ ಸೇರಿದಂತೆ ಹಂತ-ಹAತವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಗೆಲ್ಲಿಸಿದಂತಹ ಪ್ರಜಾಪ್ರಭುತ್ವದ ಮತದಾರರಿಗೆ ನಮ್ಮ ಸರ್ಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವಷÀð ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷ 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು.

2024-25 ನೇ ಸಾಲಿನಲ್ಲಿ 3,71,000 ಕೋಟಿ ರೂ. ಬಜೆಟ್ ಗಾತ್ರವಿತ್ತು. 2025-26 ನೇ ಸಾಲಿನಲ್ಲಿ ಬಜೆಟ್ ನ ಗಾತ್ರವನ್ನು 4,09,000 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 38,000 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನುಡಿದಂತೆ ನಡೆದ ಸರ್ಕಾರ ನಮ್ಮದು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿ ಗೆ 5 ಸಾವಿರ ಕೋಟಿ ರೂ

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂ. ನೀಡಿದೆ. ಈ ಭಾಗದ 371 (ಜೆ) ವಿಶೇಷ ಸ್ಥಾನಮಾನವನ್ನು ನಮ್ಮ ಸರ್ಕಾರವೇ ಜಾರಿಗೊಳಿಸಿದ್ದು ಎಂದು ಮನನ ಮಾಡಿದ ಅವರು, ಕೇಂದ್ರ ಸರ್ಕಾರವು ತಿದ್ದುಪಡಿ ಬಳಿಕ ವಿಶೇಷ ಸ್ಥಾನಮಾನ ನೀಡಲು ಪ್ರತಿಬಿಂಬಿಸಿತ್ತು, ಆದರೆ ಈವರೆಗೆ ಒಂದು ರೂ. ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸರ್ಕಾರವು ವಸತಿ ಯೋಜನೆಯಡಿ ಒಂದೇ ಒಂದು ಮನೆ ನೀಡಲಾಗಲಿಲ್ಲ, ಈ ಬಾರಿ ವಸತಿ ಯೋಜನೆಯಡಿ ಮನೆ ವಿತರಿಸುವ ಕುರಿತಂತೆ ವಸತಿ ಸಚಿವರು ಪ್ರಸ್ತಾಪಿಸಿದ್ದಾರೆ ಎಂದರು.

1.03 ಲಕ್ಷ ಹಕ್ಕುಪತ್ರ ವಿತರಣೆ

ನಮ್ಮ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದ್ದು, ಇನ್ನುಮುಂದೆಯೂ ನಡೆಯುತ್ತೇವೆ ಎಂದು ಜನರಿಗೆ ತಿಳಿಯಪಡಿಸಲು ಮೇ 20 ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸೌಲಭ್ಯ ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಮೊಹಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ

Published

on

  • ಗಿರೀಶ್ ಕುಮಾರ್ ಗೌಡ

ಸುದ್ದಿದಿನ,ವಿಜಯನಗರ:ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು ಕಳೆದೆರಡು ವರ್ಷಗಳಿಂದ 90 ಸಾವಿರ ಕೋಟಿಗೂ ಹೆಚ್ಚು ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಿದೆ. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ಗಣನೀಯ ಸಾಧನೆ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಅವರು ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ, ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಕಾರ್ಯಕ್ರಮವನ್ನು ಮೇ.20 ರಂದು ಸರ್ಕಾರದಿಂದ ಏರ್ಪಡಿಸಲಾಗಿದ್ದು, ಇದರ ಪೂರ್ವಸಿದ್ದತೆ ಪರಿಶೀಲನೆಗೆ ಆಗಮಿಸಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, 2023 ರ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಪಕ್ಷ ಸರ್ಕಾರ ರಚನೆ ಮಾಡಿತು. ಮೊದಲ ಸಂಪುಟ ಸಭೆಯಲ್ಲಿಯೇ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ಆದರೆ ವಿರೋಧ ಪಕ್ಷದವರು ಇದರಿಂದ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅನೇಕ ಟೀಕೆಯನ್ನು ಮಾಡಿದವು. ಅಂದು ಟೀಕೆ ಮಾಡಿದವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಇಂದು ನಕಲು ಮಾಡುವಂತಾಗಿದೆ. ಈಗ ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ನಿದರ್ಶನ 2024-25 ರಲ್ಲಿ ಸರ್ಕಾರದ ಬಜೆಟ್ ಗಾತ್ರ ರೂ.3,71,000 ಕೋಟಿ, 2025-26 ರಲ್ಲಿ ಇದು ರೂ.4,09,000 ಕೋಟಿರೂಗಳಿಗೆ ಏರಿಕೆಯಾಗಿರುವುದು ಒಂದು ವರ್ಷದಲ್ಲಿ 38,000 ಸಾವಿರ ಕೋಟಿ ರೂಗಳು ಸರ್ಕಾರದ ಹೆಚ್ಚುವರಿ ಆದಾಯವಾಗಿದೆ. ಬಜೆಟ್ ಮಂಡನೆಯನ್ನು ಸಂಗ್ರಹವಾಗುವ ತೆರಿಗೆ ಮತ್ತು ಆದಾಯವನ್ನು ಆಧರಿಸಿ ಬಜೆಟ್ ಸಿದ್ದಪಡಿಸಲಾಗುತ್ತದೆ. ಆದಾಯ ಇಲ್ಲದೇ ಬಜೆಟ್ ಗಾತ್ರ ಹೆಚ್ಚುತ್ತಿರಲಿಲ್ಲ ಎಂದರು.

ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಗಳು ಕುಂಠಿತವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಗ್ಯಾರಂಟಿ ಜೊತೆಗೆ ಅಭಿವೃದ್ದಿಗೂ ಅನುದಾನ ನೀಡಿದ್ದು ಅನೇಕ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇನ್ನೂರು, ಮುನ್ನೂರು ಮತ್ತು ಏಳುನೂರು ಕೋಟಿವರೆಗೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ರೂ.90,000 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ. ವಿರೋಧ ಪಕ್ಷದವರು ಅಭಿವೃದ್ದಿಗೆ ಹಣವಿಲ್ಲ ಎಂದು ಹೇಳುತ್ತಿದ್ದು, 2024-25 ರಲ್ಲಿ ಆಸ್ತಿ ಸೃಜನೆಗಾಗಿ ರೂ.51,000 ಕೋಟಿ ವೆಚ್ಚ ಮಾಡಲಾಗಿದೆ. 2025-26 ರಲ್ಲಿ ಆಸ್ತಿ ಸೃಜನೆಗಾಗಿ ರೂ.83,000 ಕೋಟಿ ವರೆಗೆ ವೆಚ್ಚ ಮಾಡುತ್ತಿದ್ದು ಗ್ಯಾರಂಟಿಗೆ ರೂ.50,018 ಕೋಟಿ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನವನ್ನೂ ಸಹ ಪೂರಕ ಬಜೆಟ್‌ಲ್ಲಿ ನೀಡಲಾಗುತ್ತದೆ. ಆದರೆ ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ ಎಂದರು.

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಬದ್ದ

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಕೆಕೆಆರ್‌ಡಿಬಿಗೆ ಕಳೆದ ಬಜೆಟ್‌ನಲ್ಲಿ ರೂ.5,000 ಕೋಟಿ ರೂಗಳು ನೀಡಿದ್ದು, ಈ ವರ್ಷವೂ ಅಷ್ಟೇ ಅನುದಾನ ನೀಡಲಾಗಿದೆ. ಆದರೆ ಹಿಂದಿನ ಸರ್ಕಾರ ಕೊನೆ ವರ್ಷ ರೂ.3,000 ಕೋಟಿ ರೂಗಳನ್ನು ಕೆಕೆಆರ್‌ಡಿಬಿಗೆ ನೀಡಿತ್ತು. 371ಜೆ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು ಇದರ ಅಭಿವೃದ್ದಿಗೆ ಕೇಂದ್ರ ಅನುದಾನ ನೀಡಬೇಕಿತ್ತು. ಆದರೆ ಒಂದು ಬಿಡಿಗಾಸು, ಒಂದೇ ಒಂದು ರೂಪಾಯಿಯನ್ನು ನೀಡಿಲ್ಲ ಎಂದರು. ಮೇ.20 ರಂದು ಹೊಸಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ 1,03,000 ಜನರಿಗೆ ಕಂದಾಯ ಇಲಾಖೆಯಿಂದ ಆಸ್ತಿಯ ಹಕ್ಕುಪತ್ರಗಳನ್ನು ನೀಡಲಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ಸರ್ಕಾರ ಜನರಿಗಾಗಿ ಮಾಡಿದ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನರು ಬರಲಿದ್ದಾರೆ. ಅಂದಾಜು ಮೂರು ಲಕ್ಷಕ್ಕಿಂತ ಹೆಚ್ಚಿನ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಭಾಗವಹಿಸುತ್ತಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ವಿರೋಧ ಪಕ್ಷದ ನಾಯಕರನ್ನು ಸಹ ಅಹ್ವಾನಿಸಲಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳ ಸಮನ್ವಯತೆಯಿಂದ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್, ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಸಚಿವ ಎನ್.ಎಸ್.ಭೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಯೋಜನಾ ಸಚಿವರಾದ ಡಿ.ಸುಧಾಕರ್, ಸಂಸದ ಈ.ತುಕಾರಾಂ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶೀನಿವಾಸ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕಂಪ್ಲಿ ಶಾಸಕ ಗಣೇಶ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ಮೊಣಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಮೊಹಮ್ಮದ್ ನೋಂಗ್ಜಾಯ್ ಅಕ್ರಮ್ ಷಾ ಅಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀಹರಿಬಾಬು.ಬಿ.ಎಲ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.

www.suddidina.com | contact : watsapp 9980346243
Continue Reading

ದಿನದ ಸುದ್ದಿ

ಶಾಸಕರ ಹಿಡಿತ ತಪ್ಪಿದ ‘ಕೈ’ ಕಾರ್ಯಕರ್ತರಲ್ಲಿ ಶಂಕೆ

Published

on

    • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸಮುದಾಯದ ಭದ್ರ ಕೋಟೆಯಲ್ಲಿ ಬಹುದಿನದ ಕನಸು ನನಸಾಗಲಿಲ್ಲ

ಸಮುದಾಯಕ್ಕೆ ಸರ್ಮಪಣೆ ‘ಕೈ’ ಸಾಧನಾ ಸಮಾವೇಶ

ಸುದ್ದಿದಿನಡೆಸ್ಕ್:ಎರಡು ವರ್ಷ ಕಳೆದರೂ ರೈತರ ಜೀವನಾಡಿಯಾದ ವಿಜಯನಗರ ಜಿಲ್ಲೆಯ ಸಕ್ಕರೆ ಕಾರ್ಖಾನೆ ನಿರ್ಮಾಣ ಆಗದೇ ಇರೋದು ಜೊತೆಗೆ ತುಂಗಭದ್ರಾ ಜಲಾಶಯದ ಹೂಳು ಎತ್ತದೆ ಇರೋದು ದೊಡ್ಡ ದುರಂತವಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಕ್ಕರೆ ಕಾರ್ಖಾನೆ ಆರಂಭವಾಗಿಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ವಿಜಯನಗರ ಜಿಲ್ಲೆಗೆ ಬಹಳ‌ ಅನಾಯ್ಯವಾಗಿದೆ ಅನುದಾನ ಬಿಡುಗಡೆಯಲ್ಲಿ ಮತ್ತು ಸ್ವಪಕ್ಷದ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ ಶಾಸಕ ಗವಿಯಪ್ಪ
ಯಾವುದೇ ಅಭಿವೃದ್ಧಿ ಗಳನ್ನು ಕೈಗೊಳ್ಳದೇ, ಯೋಜನೆಗಳಿಗೆ ಶಿಲಾನ್ಯಾಸ ಮಾಡದೇ ವಿಜಯನಗರದ ಜಿಲ್ಲೆಯಲ್ಲಿ ಎರಡು ವರ್ಷದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.

ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡ ಶಾಸಕ ಗವಿಯಪ್ಪ ಅವರು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಭಾಗಿನ ಕಾರ್ಯಕ್ರಮದಲ್ಲಿ ಮುನಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಾಸು ಹೋಗಿದ್ದರು. ಅವರ ಕಛೇರಿಯವರೆಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕರೆಯಲು ಹೋದರೂ ಸಹ ಬರಲಿಲ್ಲ. ಇದರಿಂದ ಸಹ ಶಾಸಕರು ಸಿಎಂ ಮೇಲೆ ಮುನಿಸಿಕೊಂಡರು.

ಜಿಲ್ಲೆಯ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಗವಿಯಪ್ಪ ವಿರುದ್ಧ ಇವರು ಕ್ಷೇತ್ರಕ್ಕೆ ‘ಶಾಪ’ ಎಂದು ಹೇಳಿ, ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಕಾರ್ಯಕರ್ತರ ನಡುವೆ ಅಸಮಾಧಾನಗಳ ನಡುವೆ ಸ್ವಪಕ್ಷಗಳಿಂದ ಶಿರಾಜ್ ಶೇಖ್ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಇವರಿಬ್ಬರ ನಡುವಿನ ಜಗಳ ಸಮಾಧಾನ ಮಾಡಲು ಕೆ.ಪಿ.ಸಿ.ಸಿ ಮಧ್ಯೆ ಪ್ರವೇಶ ಮಾಡಿ ಸಂಧಾನ ಮಾಡುವಲ್ಲಿ ವಿಫಲವಾಯಿತು.
ಸಾಧನೆ ಮತ್ತು ಸಮರ್ಪಣೆ ಇವುಗಳಲ್ಲಿ ಯಾವುದನ್ನು ಮಾಡುತ್ತಾರೋ ಅವರಲ್ಲಿಯೇ ಗೊಂದಲ ಇದೆ. ಯಾವುದು ಸಮರ್ಪಣೆ ?, ಯಾವುದು ಸಾಧನೆ‌ ? ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿ ಅವಳಿ ಜಿಲ್ಲೆಗೆ ಸಚಿವರನ್ನು ನೇಮಕ ಮಾಡದೇ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎನ್ನುವುದು ಸಾರ್ವಜನಿಕರಲ್ಲಿ, ರಾಜಕೀಯದಲ್ಲಿ ಗೊಂದಲ ನಿರ್ಮಾಣ ಮಾಡಿದೆ.

ಜಿಲ್ಲೆಯಲ್ಲಿ ಶಾಸಕಾಂಗ ಮತ್ತು ಆಡಳಿತದಲ್ಲಿ ಒಂದೇ ಸಮುದಾಯದವರು ಇರೋದರಿಂದ ಅಭಿವೃದ್ಧಿ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎನ್ನುವ ಮಾಹಿತಿಯನ್ನು ಈ ಕ್ಷೇತ್ರದ ಜನರಿಗೆ ತಿಳಿಸಲು ಈ ಸಮರ್ಪಣೆ ಕಾರ್ಯಕ್ರಮ ಮಾಡುತ್ತಿದ್ದಾರೆ.

ದಿವಂಗತ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧೀ ಕಟ್ಟೆಯನ್ನು ನಾಲ್ಕು ದಿನಗಳಲ್ಲಿ ಅಭಿವೃದ್ಧಿ ಪಡಿಸಿರುವುದು ವಿಜಯನಗರ ಕ್ಷೇತ್ರದ ಜನರಿಗೆ ಹಾಗು ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಗವಿಯಪ್ಪ ನೀಡುತ್ತಿರುವುದು ಬಹು ದೊಡ್ಡ ಕೊಡುಗೆ ಆಗಿದೆ.
ಇನ್ನು ಈ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಸಮರ್ಪಣೆ, ಸಾಧನ ಸಮಾವೇಶ ಮಾಡಿದರೆ ಶಾಸಕ ಗವಿಯಪ್ಪ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎನ್ನುವ ಹಿಂಬಾಲಕರ ನಿರೀಕ್ಷೆ ಸಹ ಇದೆ.

2025 ಮೇ 20 ರಂದು ನಡೆಯುವ ಜಿಲ್ಲೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ಸಾಧನ ಸಮಾವೇಶದಲ್ಲಿ ಎಷ್ಟೆಲ್ಲಾ ಗೊಂದಲದ ನಡುವೆ ಯಶಸ್ವಿಯಾಗುವುದೇ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆ ಆಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending