Connect with us

ನೆಲದನಿ

ನುಡಿಯ ಒಡಲು -17 | ದೇಶಿ ನುಡಿಗಳು ಮತ್ತು ಜ್ಞಾನಮೀಮಾಂಸೆಯ ಸವಾಲುಗಳು

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ದೇಶಿ ನುಡಿಗಳು ಎಂದರೇನು? ಎಂಬೀ ಪ್ರಶ್ನೆಯ ಮೂಲಕ ಜ್ಞಾನಮೀಮಾಂಸೆಯ ಸವಾಲುಗಳನ್ನು ಕುರಿತು ಚರ್ಚಿಸಬೇಕಿದೆ. ಈ ಲೋಕದ ಯಾವುದೇ ನುಡಿಯನ್ನು ಕುರಿತು ಯೋಚಿಸುವಾಗಲೂ ನಮಗೆ ಎದುರಾಗುವ ಸವಾಲೇನೆಂದರೆ, ನಾವು ಆಡುವ ನುಡಿಗೂ ನಮ್ಮ ಬದುಕಿನ ಅನುಭವ, ಆಲೋಚನೆ ಹಾಗೂ ನಮಗೆ ಅಗತ್ಯವಾಗಿರುವ ಜ್ಞಾನಶಿಸ್ತುಗಳು ಮೈದಾಳುವ ನುಡಿಗಳು ಬಹುತೇಕವಾಗಿ ಬೇರೆ ಬೇರೆಯಾಗಿರುತ್ತವೆ.

ಈ ಬಿಕ್ಕಟ್ಟುಗಳೇ ಇವತ್ತು ದೇಶಿ ನುಡಿಗಳ ಬಗೆಗೆ ಯೋಚಿಸುವಂತೆ ಮಾಡುತ್ತವೆ. ನುಡಿ ನುಡಿಗಳ ನಡುವಣ ನಂಟಸ್ತಿಕೆ ಅಧಿಕಾರ ಸಂಬಂಧವನ್ನು ರೂಪಿಸುವುದು ಒಂದು ಬಗೆ. ಜ್ಞಾನದ ನುಡಿ ಉದ್ಯೋಗದ ನುಡಿ, ಅನ್ನದ ನುಡಿ, ಶಿಕ್ಷಣ ಮಾಧ್ಯಮ ಮೊದಲಾದ ವಿದ್ಯಮಾನಗಳು ಆಯಾ ನುಡಿಗೆ ತಂದು ಕೊಡುವ ಮಾನ್ಯತೆ ಮತ್ತೊಂದು ಬಗೆಯದು. ಇವೆರಡೂ ಪ್ರಕ್ರಿಯೆಗಳು ಬಹುತೇಕವಾಗಿ ಯಾವುದೇ ಒಂದು ನುಡಿಯನ್ನು ಬಲಪಡಿಸಲು ಒತ್ತಾಸೆಯಾಗುತ್ತವೆ.

ಇವತ್ತಿಗೂ ನುಡಿಯೊಂದು ಸಬಲೀಕರಣಗೊಳ್ಳಲು ಏನೆಲ್ಲ ನುಡಿ ಯೋಜನೆ ಹಾಗೂ ನುಡಿ ನೀತಿಗಳನನ್ನು ಹಮ್ಮಿಕೊಂಡರೂ ಆಯಾ ನುಡಿಗಳ ಕಸುವನ್ನು ಮನ್ನಣೆ ಮಾಡುವ ಬಗೆಗಳಲ್ಲಿ ತಾರತಮ್ಯಗಳು ತಲೆದೊರುತ್ತವೆ. ಅಧಿಕಾರ ನುಡಿಯಾಗುವ ಮತ್ತು ಜ್ಞಾನಮೀಮಾಂಸೆಯ ನುಡಿಯಾಗುವ ಪ್ರಕ್ರಿಯೆಗಳ ಸ್ವರೂಪ ಬೇರೆ ಬೇರೆಯಾದರೂ, ಅವುಗಳ ಮನೋಧರ್ಮ ಮಾತ್ರ ಒಂದೆಯಾಗಿರುತ್ತದೆ. ಕನ್ನಡ ನುಡಿಯನ್ನು ಕುರಿತು ಚಿಂತಿಸುವ ಒಂದೊಂದು ಸನ್ನಿವೇಶವೂ ಸಂಸ್ಕೃತ ಇಲ್ಲವೇ ಇಂಗ್ಲಿಶು ನುಡಿಗಳ ಪ್ರಭಾವ, ಪರಿಣಾಮ ಹಾಗೂ ಯಜಮಾನ್ಯದ ಚೌಕಟ್ಟುಗಳನ್ನು ವಿಶ್ಲೇಷಿಸುವುದಾಗಿದೆ.

ಸಮೂಹಗಳು ತಮ್ಮ ಬದುಕಿನುದ್ದಕ್ಕೂ ನೆಮ್ಮಿಕೊಂಡು ಬಂದಿರುವ ನುಡಿಗಳ ಮೂಲಕ ಜ್ಞಾನ, ಉದ್ಯೋಗ, ಶಿಕ್ಷಣ ಮೊದಲಾದವುಗಳು ಸಿಗದೇ ಹೋದರೆ, ಅಂತಹ ಸಮೂಹಗಳ ಸಾಮಾಜಿಕ, ರಾಜಕೀಯ ಏಳ್ಗೆಯು ಸಾಧ್ಯವಿಲ್ಲ. ಪರನುಡಿಗಳ ಮೂಲಕವೇ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಏನೆಲ್ಲ ಬಿಕ್ಕಟ್ಟುಗಳ ಎದುರಾಗುತ್ತವೆಂದರೆ, ಯಾವ ನುಡಿಯಲ್ಲಿ ತಮ್ಮ ಬದುಕಗಳ ಅನುಭವ ಸಾಂದ್ರಗೊಳ್ಳುತ್ತದೆಯೋ, ಅಂತಹದೊಂದು ನುಡಿಯೇ ನಿಷ್ಪ್ರಯೋಕವಾಗಿ ಕಂಡರೆ, ಬದುಕುಗಳು ಹೇಗೆತಾನೇ ಸಮಕಾಲೀನ ಸನ್ನಿವೇಶದ ಸವಾಲುಗಳನ್ನು ಈಡೇರಿಸಿಕೊಳ್ಳಲು ಸಾಧ್ಯ? ದಿಟ, ಜ್ಞಾನದ ವಿನ್ಯಾಸಗಳು, ಅನುಭವದ ಬೇರೆ ಬೇರೆ ಮಾದರಿಗಳು ಎಲ್ಲ ನುಡಿಗಳಲ್ಲಿಯೂ ಅಡಕವಾಗಿರುತ್ತವೆ.

ಈ ಮಾತು ಗ್ರೀಕ್, ಸಂಸ್ಕ್ರುತ ಮೊದಲಾದ ನುಡಿಗಳಿಗೂ ಅನ್ವಯವಾಗುತ್ತದೆ. ಯಾವುದೇ ಒಂದು ಕಾಲದಲ್ಲಿ ಜನಬದುಕಿನ ಜ್ಞಾನಮೀಮಾಂಸೆ ಹಾಗೂ ಅನುಭವಗಳೇ ಈ ನುಡಿಗಳಲ್ಲಿ ನೆಲೆಗೊಂಡಿರುತ್ತವೆ. ಹೀಗೆ ನೆಲೆನಿಂತಿರುವ ಜ್ಞಾನ ಹಾಗೂ ಅನುಭವ ಎಲ್ಲ ಕಾಲದ ಎಲ್ಲ ಸಮುದಾಯಗಳ ಬದುಕನ್ನು ನಿಭಾಯಿಸುವುದಕ್ಕೆ ಒತ್ತಾಸೆಯಾಗುತ್ತವೆಯೇ? ಎಂಬ ಪ್ರಶ್ನೆ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಏಕೆಂದರೆ, ದೇಶಿ ನುಡಿಗಳು ಸ್ವಂತಿಕೆಯ ವಿನ್ಯಾಸಗಳ ಮೂಲಕ ಆಯಾ ಕಾಲದ ಬದುಕಿನ ವಿವಿಧ ಸಂಕಥನಗಳನ್ನು ಇಡೀಯಾಗಿ ನಮ್ಮುಂದೆ ಮಂಡಿಸುತ್ತವೆ. ಈ ಸಂಕಥನಗಳಿಗೆ ಪ್ರಾಬಲ್ಯ ಹಾಗೂ ಪ್ರತಿರೋಧದ ಎರಡೂ ಆಯಾಮಗಳಿರುತ್ತವೆ. ಸಮುದಾವೊಂದು ತನ್ನ ಒಡಲೊಳಗೆ ಏರ್ಪಟ್ಟಿರುವ ಸಾಮಾಜಿಕ-ರಾಜಕೀಯ ಪರಿಣಾಮಗಳನ್ನು ಅರಿಯಬೇಕೆಂದರೆ ಅದಕ್ಕಿರುವ ಒಂದೇ ಒಂದು ದಾರಿ, ತಾನು ನಿರಂತರವಾಗಿ ಸಂವಹನವನ್ನು ನಿಭಾಯಿಸಿಕೊಂಡು, ತನ್ನ ಅನುಭವದ ವಿವಿಧ ಸಂಕಥನಗಳನ್ನು ಅಭಿವ್ಯಕ್ತಿಸಲು ಯಾವ ನುಡಿ ಮಾಧ್ಯಮವಾಗಿದೆಯೋ, ಆಯಾ ನುಡಿಗಳ ಮೂಲಕವೇ ತನ್ನ ಬದುಕಿಗೆ ಬೇಕಾಗುವ ತಿಳಿವಿನ ದಾರಿಗಳನನ್ನು ರೂಪಿಸಿಕೊಳ್ಳುವುದೂ ಅನಿವಾರ್ಯವೇ ಆಗಿದೆ.

ಇಂತದೊಂದು ಚಿಂತನೆ ನಮ್ಮನ್ನು ಭಾಷಿಕ ಸಾಪೇಕ್ಷ ಸಿದ್ಧಾಂತಕ್ಕೆ ಈಡು ಮಾಡುತ್ತದೆ. ನಾವಾಡುವ ನುಡಿ ನಮ್ಮ ಲೋಕಾನುಭವನ್ನು ರೂಪಿಸುತ್ತದೆ. ಸಹಜವಾಗಿ ನಮ್ಮ ಆಲೋಚನೆಯ ಕ್ರಮಗಳು ಕೂಡ ಇಂತಹ ಲೋಕಾನುಭವದ ಪರಿಣಾಮಗಳಿಂದ ಮೈದಾಳುತ್ತವೆ ಎಂಬ ನಿರ್ಣಯಗಳಿಗೆ ನಾವು ಬದ್ಧರಾಗುತ್ತೇವೆ. ಒಂದು ಕಾಲದಲ್ಲಿ ಈ ಮಾತಿಗೆ ಬೇಕಾದಷ್ಟು ಸಮರ್ಥನೆಗಳಿದ್ದವು.

ಆದರೆ ಇವತ್ತು ಚಾಮ್ಸ್ಕಿಯ ವಿಚಾರಗಳು ಹೆಚ್ಚು ಹೆಚ್ಚು ತಾತ್ವಿಕ ಹಾಗೂ ವೈಜ್ಞಾನಿಕ ಸಮರ್ಥನೆಗಳಿಂದ ಬಲಗೊಂಡಿದ್ದರಿಂದ, ಚಿಂತನೆ ಮತ್ತು ನುಡಿಗಳ ನಡುವಣ ಅಂತರ್ಸಂಬಂಧವನ್ನು ವಿವರಿಸುವ ಚೌಕಟ್ಟೂ ಬೇರೆಯಾಗಿದೆ. ಸಮಕಾಲೀನ ಸನ್ನಿವೇಶದಲ್ಲಿ ಶಿಕ್ಷಣದ ಮಹತ್ವವನ್ನೂ ಅರಿಯಲು ನುಡಿ ಮತ್ತು ಸಂಕಥನಗಳಿಗೆ ಅತೀಯಾದ ಮಹತ್ವವನ್ನು ನೀಡಲಾಗಿದೆ. ಚಿಂತನೆಗಳನ್ನು ಅಭಿವ್ಯಕ್ತಿಸುವ ಅಸ್ತ್ರವನ್ನಾಗಿ ಮಾತ್ರ ಇವತ್ತು ನುಡಿಯನ್ನು ಬಳಸಲು ಸಾಧ್ಯವಿಲ್ಲ.

ಏಕೆಂದರೆ, ಗ್ರಹಿಕೆಯ ಅಗಾಧತೆಯನ್ನು ಮತ್ತು ತಾತ್ವಿಕತೆಯ ಸಾಧ್ಯತೆಗಳನ್ನು ಕಂಡರಿಯಲು ನುಡಿಯೇ ಮಹತ್ವದ ಸಂಗತಿಯಾಗಿದೆ. ಹಾಗಾಗಿ ನುಡಿ ಮತ್ತು ಚಿಂತನೆಗಳ ನಡುವಣ ಗಡಿಗೆರೆಯು ಅಳಿಸಿ ಹೋಗಿದೆ ಎಂದೂ ಹೇಳಲು ಸಾಧ್ಯವಿಲ್ಲ. ಕಾರಣ ಯಾವುದು ಎಲ್ಲಿ ಆರಂಭಗೊಳ್ಳುತ್ತದೆ ಇಲ್ಲವೇ ಯಾವುದು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಗುರುತಿಸುವುದು ಕೂಡ ದುಸ್ತರ. ಆದ್ದರಿಂದ, ಯಾವುದೇ ಚಿಂತನೆಯ ಬೆಳವಣಿಗೆ ಮತ್ತು ಅದರ ಕ್ರೊಢೀಕರಣದ ನಡುವೆ ಅಂತರಗಳಿವೆ ಎನ್ನುವ ವಾದಗಳನ್ನೂ ಇನ್ನೂ ಒಪ್ಪಲಾಗಿಲ್ಲ.

ಹಾಗೇನೇ ಆಯಾ ನುಡಿಗಳಲ್ಲಿ ಹುದುಗಿರುವ ತಾತ್ವಿಕತೆಯ ಬಗೆಗಿನ ಪ್ರಶ್ನೆಗಳನ್ನು ನಿರಲಕ್ಷಿಸಲೂ ಸಾಧ್ಯವಿಲ್ಲ. ಅಂದರೆ ನುಡಿಯ ಕಸುವನ್ನು ಕುರಿತು ಯೋಚಿಸುವುದೆಂದರೆ, ಆಯಾ ನುಡಿಯು ಉತ್ಪಾದಿಸುವ ‘ಜ್ಞಾನ ಮೀಮಾಂಸೆಯ ವಿನ್ಯಾಸಗಳನ್ನನು’ ಕುರಿತು ಯೋಚಿಸುವುದಾಗಿದೆ. ಹಾಗಾಗಿ ವಿಟಗ್ನ್ಸ್ಟೇನ್ ಹೇಳಿದ ‘ನನ್ನ ಭಾಷೆಯ ಮಿತಿ ಅದು ನನ್ನ ಜ್ಞಾನದ ಮಿತಿ’ ಎನ್ನುವ ಮಾತು ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆಯಾ ಲೋಕದ ವಸ್ತು ವಿನ್ಯಾಸಗಳನ್ನು ಸೈದ್ಧಾಂತಿಕವಾಗಿ ಹಾಗೂ ಸೃಜನಾತ್ಮಕವಾಗಿ ಬಣ್ಣಿಸಲು ಆಯಾ ನುಡಿಗಳ ಮೂಲಕವೇ ಸಾಧ್ಯವಾಗಬೇಕು.

ಹೌದು ಒಂದು ನುಡಿಯಲ್ಲಿ ವಿಕಾಸಗೊಳ್ಳುವ ಜ್ಞಾನ ಹಾಗೂ ವೈಚಾರಿಕ ವಿನ್ಯಾಸಗಳನ್ನು ಕೇವಲ ನುಡಿಗೆ ಸೀಮಿತಗೊಳಿಸಿ ನೋಡುವ ಹೊರತಾಗಿ ಯಾವುದೇ ನುಡಿಯೊಂದಿಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ ಆಚರಣೆಗಳನ್ನು ಒಳ್ಗೊಂಡಂತೆ ಚಿಂತಿಸಬೇಕಾಗುತ್ತದೆ. ಉದಾ.ಗೆ ಲೆಕ್ಕಶಾಸ್ತ್ರದ ತಿಳಿವು ಹಾಗೂ ಸಾಮಾಜಿಕ ಆಚವರಣೆಗಳ ನಡುವಣ ನಂಟಸ್ತಿಕೆಯನ್ನು ವಿಶ್ಲೇಷಿಸುವ ಮೂಲಕ ನುಡಿ ಮತ್ತು ತಾತ್ವಿಕತೆಯನ್ನು ಅರಿಯಬೇಕಿದೆ.

ಜ್ಞಾನದ ಅಧ್ಯಯನ ಮತ್ತು ನುಡಿಯ ಅಧ್ಯಯವನ್ನು ಮಾಡುವಾಗ ಎರಡು ಭಿನ್ನ ಆಯಾಮಗಳು ಹೊರಹೊಮ್ಮುತ್ತವೆ. ಒಂದಡೆ, ನಿಗೂಢ, ಅಮೂರ್ಥ ಭಾಷಾಜ್ಞಾನದೊಂದಿಗೆ ‘ಸಾಮಾನ್ಯ ನುಡಿ ಬಳಕೆದಾರರು’ ಇದ್ದರೆ, ಇನ್ನೊಂದಡೆ ಭಾಷಾಶಾಸ್ತ್ರಜ್ಞರು, ತತ್ವಜ್ಞಾನಿಗಳು, ಭಾಷಾ ಸಿದ್ಧಾಂತಿಗಳು ಇವರೆಲ್ಲರೂ ಸಾಮಾನ್ಯ ಭಾಷಾ ಬಳಕೆದಾರರ ಭಾಷಾಶಾಸ್ತ್ರೀಯ ಸಾಮರ್ಥ್ಯವನ್ನು ವೈಜ್ಞಾನಿಕ ಶಿಸ್ತನ್ನಾಗಿ ಅನುಸರಿಸಲಾಗುತ್ತದೆ.

ಈ ವ್ಯತ್ಯಾಸವು ಭಾಷೆಯ ಜ್ಞಾನಮೀಮಾಂಸೆಯ ನೆಲೆ ಹಾಗೂ ನಿಲುವುಗಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈ ಮುಂದಿನ ಮಾತುಗಳು ಈ ಹೊತ್ತಿನ ಅತ್ಯಂತ ಮಹತ್ವದ ಹಾಗೂ ಪ್ರಚಲಿತ ವಿದ್ಯಮಾನಗಳಾಗಿ ತೋರುತ್ತವೆ.

  1. ಅಭಿವ್ಯಕ್ತಿ ಮತ್ತು ಸಂವಹನಗಳೆರಡರಲ್ಲೂ ಅತ್ಯಂತ ಸಂಕೀರ್ಣವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಾಗ, ನಾವು ಮನುಷ್ಯರು ಭಾಷೆಯನ್ನು ಹೇಗೆ ಬಳಸುತ್ತೇವೆ?
  2. ಸಾಮಾನ್ಯ ಭಾಷಾ ಬಳಕೆದಾರರ ಭಾಷಾಜ್ಞಾನಕ್ಕೆ ನಿಷ್ಠರಾಗಿ ಹಾಗೂ ಫಲಪ್ರದವಾಗಿ, ಅತ್ಯಂತ ಸಂಕೀರ್ಣವಾದ ವಿದ್ಯಮಾನಗಳನ್ನು ಭಾಷಾಶಾಸ್ತ್ರಜ್ಞರು ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಶೋಧಿಸಿ, ವಿವರಿಸಬಲ್ಲರು?

ಒಬ್ಬ ಭಾಷಾಶಾಸ್ತಜ್ಞ್ರ ಇಲ್ಲವೇ ತತ್ವಜ್ಞಾನಿಗೆ ಬೇರೆ ಯಾವುದೇ ಪ್ರಶ್ನೆಗಳು ಎದುರಾಗಬಹುದು ಆದರೆ ಇವರಿಬ್ಬರೂ ಕೂಡ ಈ ಮೂಲಭೂತ ಪ್ರಶ್ನೆಗಳನ್ನೇ ನೆಲೆಯಾಗಿಸಿಕೊಂಡು ತಮ್ಮ ತಿಳುವಳಿಕೆಗಳನ್ನು ವಿಸ್ತರಿಸಬಹುದು. ಕುತೂಹಲದ ಸಂಗತಿಯೇನೆಂದರೆ, ಈ ಪ್ರಶ್ನೆಗಳ ಬಗೆಗಿನ ವೈಯಕ್ತಿಕ ನಂಬಿಕೆಗಳು ಯಾವುದೇ ಬಗೆಯ ಪ್ರಜ್ಞಾಪೂರಕವಾದ ನಿಲುವುಗಳಾಗಿ ಪರಿಗಣಿಸಲ್ಪಟ್ಟಿರುವುದಿಲ್ಲ.

ಈ ಮಾತುಗಳನ್ನು ಚಾಮ್ಸ್ಕಿಯ ಚಿಂತನೆಗಳ ಮೂಲಕ ಇನ್ನಷ್ಟು ನಿಚ್ಚಳವಾಗಿ ವಿವರಿಸಬಹುದು. ಅಂದರೆ ಸಾಮಾನ್ಯ ಭಾಷಾ ಬಳಕೆದಾರರು, ಜ್ಞಾನದ ರಚನೆಗಳನ್ನು ಪಡೆದುಕೊಂಡಿರುತ್ತಾರೆ. ಇದನ್ನು ಭಾಷೆಯ ಸಂಕೀರ್ಣ ವ್ಯವಸ್ಥೆಗಳ ನಿಯಮ ಇಲ್ಲವೇ ತತ್ವವೆಂದು ಕರೆಯುವುದು ಅತ್ಯಂತ ಸಮಂಜಸ. ಹಾಗೂ ಭಾಷಾಧ್ಯಯನಕ್ಕೆ ಇರಬಹುದಾದ ಒಂದು ವೈಜ್ಞಾನಿಕ ಆಯಾಮವೇನೆಂದರೆ, ಜ್ಞಾನವನ್ನು ಖಚಿತವಾಗಿ ನಿರೂಪಿಸುವ ಆಯಾಮವನ್ನೂ ಇದು ಒಳ್ಗೊಂಡಿರಬೇಕು.

ಹಲವು ಕಾರಣಗಳಿಗಾಗಿ ಈ ಎರಡೂ ಬಗೆಯ ಆಲೋಚನಾ ಕ್ರಮಗಳ ಬಗೆಗೆ ಚಿಂತಕರು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಹಾಗೂ ಈ ಎರಡೂ ಮಾದರಿಗಳನ್ನು ನೆಮ್ಮಿಕೊಂಡೇ ನಮ್ಮ ಸಾಮಾನ್ಯ ತಿಳುವಳಿಕೆಯನ್ನು ವಿಸ್ತರಿಸುವ ವಿನ್ಯಸಗಳನ್ನೂ ನೋಡಬಹುದು.

ಮೇಲಿನ ಎಲ್ಲ ಚರ್ಚೆಗಳು ದೇಶಿ ನುಡಿಗಳ ಸ್ವರೂಪವನ್ನು ಅರಿಯುವ ಹಾಗೂ ಜ್ಞಾನಮೀಮಾಂಸೆಯ ಸವಾಲುಗಳು ಹೇಗೆ ಎದುರಾಗುತ್ತವೆ ಎಂಬ ತಾತ್ವಿಕ ವಿನ್ಯಾಸಗಳನ್ನು ಕುರಿತಿವೆ. ಆದ್ದರಿಂದ ಇವತ್ತು ನಾವು ದೇಶಿ ನುಡಿಗಳ ಮೂಲಕ ಜ್ಞಾನಮೀಮಾಂಸೆ ಇಲ್ಲವೇ ಜ್ಞಾನಶಿಸ್ತುಗಳನ್ನು ರೂಪಿಸಲು ಸಾಧ್ಯವಿಲ್ಲ ಅನ್ನುವುದಕ್ಕೆ ಇರಬಹುದಾದ ತಾತ್ವಿಕ ಕೊರತೆಗಳನ್ನೂ ಈ ಚರ್ಚೆಗಳು ಸೂಕ್ಷ್ಮವಾಗಿ ಪ್ರಕಟಿಸುತ್ತವೆ.

ಕನ್ನಡದ ಮೂಲಕ ವಿಜ್ಞಾನ, ತಂತ್ರಜ್ಞಾನ ಹಾಗೂ ಇತರೆ ಶಾಸ್ತ್ರೀಯ ವಿಚಾರಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ ಎನ್ನುವವರು ಅರಿಯಬೇಕಾದ ಮೂಲಭೂತ ಸತ್ಯವೇನೆಂದರೆ, ನಮ್ಮ ಗ್ರಹಿಕೆ ಮತ್ತು ಚಿಂತನೆಗಳು ಮೈದಾಳುವ ವಿನ್ಯಾಸಗಳನ್ನು ವೈಜ್ಞಾನಿಕವಾಗಿ ಅರಿಯದೇ ಹೋದರೆ ನುಡಿ ಬಗೆಗಿನ ಚಿಂತನೆಗಳು ಸೇರಿದಂತೆ ಯಾವುದೇ ತಾತ್ವಿಕ ವಿಚಾರಗಳು ಮೌಢ್ಯತೆಯ ಫಲಿತಗಳಾಗುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending