ದಿನದ ಸುದ್ದಿ
ನುಡಿಯ ಒಡಲು – 15 | ಒಳನುಡಿ ಬಗೆಗಳು : ಎಷ್ಟು..? ಯಾವವು..?
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಒಳನುಡಿ ಓದಿಗೆ ಎರಡು ಶತಮಾನಗಳ ಚರಿತ್ರೆಯಿದೆ. ಅಂದರೆ ಹತ್ತೊಂಬತ್ತನೇ ಶತಮಾನದ ಶುರುವಿನಿಂದ ಈ ಓದು ನಡೆದುಕೊಂಡು ಬಂದಿದೆ. ಆದರೆ ನಮ್ಮ ಕವಿರಾಜಮಾರ್ಗಕಾರ ಒಳನುಡಿಗಳ ಬಗೆಗಳನ್ನು ಆವತ್ತೇ ಗುರುತಿಸಿದ್ದ ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕು. ಇರಲಿ, ಒಳನುಡಿ ಓದನ್ನು ನಡೆಸಿಕೊಂಡು ಬಂದವರು, ಅದರ ಸ್ವರೂಪವನ್ನು ಅರಿಯುವ ಉದ್ದೇಶಕ್ಕಾಗಿ ಮೂರು ನೆಲೆಯಲ್ಲಿ ತಮ್ಮ ಗುರಿಗಳನ್ನು ಇರಿಸಿಕೊಂಡಿದ್ದರು.
ಆಡುನುಡಿಯ ಬಗೆಗಳು, ಪ್ರಾದೇಶಿಕ ನುಡಿಬಗೆಗಳು ಮತ್ತು ನುಡಿ ಬೆಳವಣಿಗೆಯ ಸ್ವರೂಪ (ಚಾರಿತ್ರಿಕ) ಎಂಬುದಾಗಿ ಅವುಗಳನ್ನು ವಿಂಗಡಿಸಬಹುದು. ಈ ಮೂರು ಬಗೆಯ ಒಳನುಡಿಗಳ ಸ್ವರೂಪವನ್ನು ಅರಿಯಲು ಉಲಿ ಮತ್ತು ಪದಗಳನ್ನು ಮಾತ್ರ ನೆಚ್ಚಿಕೊಂಡಿದ್ದರು.
ಮುಖ್ಯವಾಗಿ ಹೊಸ ಸೊಲ್ಲರಿಮೆಗಾರರು (ನಿಯೋಗ್ರ್ಯಾಂಮೆರಿಯನ್ಸ್) ಉಲಿ ಬದಲಾವಣೆಯ ನಡುವಣ ಬಗೆಗಳನ್ನು ಬಿಡಿಸಿ ನೋಡುವಲ್ಲಿ ಇರುವ ಕುತೂಹಲವನ್ನು ನೋಡಿದರೆ, ಈ ಅಂಶ ನಿಚ್ಚಳವಾಗಿ ಕಾಣುತ್ತದೆ. ಇದಕ್ಕಾಗಿ ಇವರು ನುಡಿತಿಳಿಹ[ಲಿಂಗ್ವಿಸ್ಟಿಕ್ ಡಾಟಾ]ವನ್ನೇ ಆಧರಿಸಿಕೊಂಡಿದ್ದರು ಎಂಬುದು ಬೇರೆ ಮಾತು.
ಇಲ್ಲಿಯವರೆಗೂ ಒಳನುಡಿ ಓದಿನ ಆಸಕ್ತಿ ಕೇವಲ ಉಲಿ ಹಾಗೂ ಪದ (ಕೋಶಾತ್ಮಕ -ಲೆಕ್ಷಿಕಲ್) ರಚನೆಯ ಮಟ್ಟಕ್ಕೆ ಸೀಮಿತವಾಗಿತ್ತು. ಅಂದರೆ ಉಚ್ಚಾರಣೆ ಮತ್ತು ಪದಕ್ಕೆ ಸಂಬಂಧಿಸಿದ ವ್ಯತ್ಯಾಸಗಳನ್ನು ಗುರುತಿಸುವ ನೆಲೆಯಾಗಿತ್ತು. ಕನ್ನಡದ ಸನ್ನಿವೇಶದಲ್ಲಿ ಇಂದೂ ಕೂಡ ಒಳನುಡಿ ಕುರಿತು ಇದೇ ಬಗೆಯ ಓದನ್ನು ಕಾಣುತ್ತೇವೆ. ಅಪವಾದವೆಂಬಂತೆ ಕೆಲವೇ ಕೆಲವಷ್ಟನ್ನು ಓದಗಳನ್ನು ಹೊಸ ತಿಳಿನ ಮಾದರಿಯಲ್ಲಿ ನೋಡಬಹುದು. ಅದೇನೆ ಇರಲಿ ಇವತ್ತಿಗೂ ಒಳನುಡಿಗಳನ್ನು ವಿಂಡಿಸುವ ಬಗೆ ಮತ್ತು ತತ್ವದಲ್ಲಿ ಯಾವುದೇ ಹೊಸತನವನ್ನು ಕಾಣಲು ಸಾಧ್ಯವಾಗಿಲ್ಲ
ಒಳನುಡಿಗಳನ್ನು ಗುರುತಿಸುವುದು ಹೇಗೆ? ಹಾಗೂ ಅವುಗಳ ಸ್ವರೂಪ ಎಂತಹದು?
ಪ್ರತಿಯೊಂದು ಭಾಷೆಯು ತನ್ನ ನಿಗದಿತ ರಾಚನಿಕ ಚೌಕಟ್ಟಿನಲ್ಲಿಯೇ ಹಲವು ನುಡಿಬಗೆಗಳನ್ನು ಒಳಗೊಂಡಿರುತ್ತದೆ, ನುಡಿ ಬಹುಳತೆಯ ಸಂಕೇತವಾಗಿರುವುದೇ ಇದಕ್ಕೆ ಕಾರಣ. ಇಂತಹ ಪ್ರಭೇದಗಳು ಪ್ರಾದೇಶಿಕ, ಚಾರಿತ್ರಿಕ ಹಾಗೂ ಸಾಮಾಜಿಕ ಭಿನ್ನತೆಗಳನ್ನು ಪ್ರತಿನಿಧಿಸುತ್ತೆವೆ. ಸಾಂಪ್ರದಾಯಿಕವಾಗಿ ಈ ಭಿನ್ನತೆ ಅಥವಾ ಭಾಷಿಕ ವ್ಯತ್ಯಸ್ಥ ರೂಪಗಳನ್ನು “ಉಪಭಾಷೆ”ಎಂದೂ ಗುರುತಿಸುವ ರೂಢಿ ಇದೆ.
ಪ್ರತಿಯೊಂದು ನುಡಿ ಸನ್ನಿವೇಶದಲ್ಲಿ ಪ್ರಭೇದಗಳ ಬೆಳವಣಿಗೆ ಒಂದು ಸಹಜ ಭಾಷಿಕ ಪ್ರಕ್ರಿಯೆ. ಈ ಪ್ರಭೇದಗಳೇ ಒಳನುಡಿಗಳಾಗಿ ರೂಪಗೊಳ್ಳುತ್ತವೆ. ಪ್ರತಿ ಭಾಷೆಯ ಒಳನುಡಿಗಳ ನಡುವೆ ಪರಸ್ಪರ ಗ್ರಹಿಕೆ ಸಾಧ್ಯ, ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ಭಾಷೆಗಳೆಂದು ಗುರುತಿಸಲಾಗುತ್ತೆ. ಆದ್ದರಿಂದ ಈ ತರಹದ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಭಿನ್ನತೆ ಇರುತ್ತದೆ.
ಭಾಷೆಯಲ್ಲಿ ರಾಜಕೀಯ-ಸಾಮಾಜಿಕ ಕಾರಣಗಳಿಂದ ಭಾಷೆ-ಉಪಭಾಷೆಗಳೆಂಬ ಡೈಕಾಟಮಿ ಹುಟ್ಟಿಕೊಳ್ಳುತ್ತವೆ. ರಾಜಕೀಯ ಸ್ಥಿತ್ಯಂತರ, ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಕಾರಣ, ವೈಚಾರಿಕ ನಿಲುವುಗಳ ಏರು-ಪೇರಿನಿಂದ ಭಾಷೆ-ಉಪಭಾಷೆಗಳು ವಿಭಿನ್ನ ನೆಲೆಯಲ್ಲಿ ರೂಪಗೊಳ್ಳುತ್ತಿವೆ. ಈ ಭಿನ್ನತೆಗಳು ಪ್ರಮಾಣಭಾಷೆ ಮತ್ತು ಉಪಭಾಷೆಗಳ ನಡುವೆ ಅಂತರ ಹುಟ್ಟಿಸುತ್ತವೆ.
ಇದು ಪ್ರಮಾಣಭಾಷೆಯನ್ನು ಸಾರ್ವತ್ರಿಕವೆಂದು ಉಪಭಾಷೆಯನ್ನು ವೈಯಕ್ತಿಕವೆಂದೂ ಬಿಂಬಿಸುತ್ತದೆ. ಉಪಭಾಷೆ ಅನ್ನುವುದು ಕೇವಲ ಪರಿಭಾಷೆ, ಭಾಷಾಶಾಸ್ತ್ರೀಯವಾಗಿ ಇದೊಂದು ನಿಷ್ಪಕ್ಷಪಾತ ಪದ. ಆದರೆ ಸಾಮಾಜಿಕವಾಗಿ ತಾರತಮ್ಯವನ್ನು ಹುಟ್ಟು ಹಾಕುತ್ತದೆ. ಈ ಭಿನ್ನ ಪ್ರಭೇದಗಳು ಅಥವಾ ಬಗೆಗಳು ಕೇವಲ ತಾರತಮ್ಯದ ನೆಲೆ ಮಾತ್ರವಲ್ಲ.
ಇವುಗಳು ನಮ್ಮ ಸಾಮಾಜಿಕ-ಧಾರ್ಮಿಕ-ಪ್ರಾದೇಶಿಕ ಅಸ್ಮಿತೆಯ ಕುರುಹುಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇಂತಹ ಭಿನ್ನತೆಯನ್ನೇ ಅನನ್ಯತೆ ಎಂದೂ ಹೇಳುತ್ತೆವೆ. ಹಾಗಾಗಿ ನಮ್ಮ ಗ್ರಹಿಕೆ ಮತ್ತು ಸಂವೇದನೆಯಲ್ಲಿಯೂ ಈ ಭಿನ್ನತೆ ಎದ್ದು ಕಾಣುತ್ತ್ತದೆ. ಕರ್ನಾಟಕ ರಾಜಕೀಯವಾಗಿ ಒಂದು, ಆದರೆ ಭೌಗೋಳಿಕ, ಸಾಮಾಜಿಕ ಹಾಗೂ ಭಾಷಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.
ಹಾಗಾಗಿ ಹಲವು “ಕನ್ನಡ” ಕನ್ನಡಗಳ ಮೊತ್ತ. ಇದನ್ನೇ ಮಾರ್ಗಕಾರ “ಕನ್ನಡಂಗಳ್” ಎಂದಿರಬೇಕು.
ಪ್ರತಿಯೊಂದು ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೋರಿಸುತ್ತದೆ (ಎತ್ತುಗೆಗಾಗಿ. ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು). ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಆರ್ಥಿಕ ನಿಲುವುಗಳು, ಜಾತಿ, ಜನಾಂಗಗಳು ಮುಂತಾದ ಸಾಮಾಜಿಕ ಸಹಾಯದಿಂದ ಭಾಷಿಕ ಭಿನ್ನತೆಯನ್ನು ಗುರುತಿಸುತ್ತವೆ.
ಒಳನುಡಿ: ಪ್ರಕಾರಗಳು
- ಚಾರಿತ್ರಿಕ
- ಭೌಗೋಳಿಕ
- ಸಾಮಾಜಿಕ
- ಸಾಂದರ್ಭಿಕ
ನುಡಿ ವ್ಯತ್ಯಾಸಕ್ಕೆ ಕಾರಣವಾಗುವ ಅಂಶಗಳು
- ಪ್ರದೇಶ
- ಉದ್ಯೋಗ
- ಶಿಕ್ಷಣ
- ವಯಸ್ಸು
- ಲಿಂಗ
- ಸಾಮಾಜಿಕ ಅಂತಸ್ತು
- ಜನಾಂಗ
ಒಳನುಡಿಗಳನ್ನು ಗುರುತಿಸುವ ಗಡಿಗೆರೆಗಳು
(ಒಳನುಡಿಗಳನ್ನು ಗುರುತಿಸುವ ಈ ಗಡಿಗೆರೆಗಳು ಕಾಲ್ಪನಿಕವಾಗಿರುತ್ತವೆ).
- ಕಾಡು
- ಬೆಟ್ಟ
- ನದಿ
ಚಾರಿತ್ರಿಕ ಒಳನುಡಿ
ಚಾರಿತ್ರಿಕ ಬದಲಾವಣೆಗಳು ಒಳನುಡಿಗಳ ಮೇಲೆ ಯಾವ ಬಗೆಯ ಪ್ರಭಾವಗಳನ್ನು ಬೀರಿವೆ ಎಂಬ ಸಂಗತಿಗಳನ್ನು ಮಾತ್ರ ಬಿಡಿಸಿ ನೋಡುವ ಬಗೆ ಇದಲ್ಲ. ಇಂತಹ ಪ್ರಭಾವಗಳು ಒಳನುಡಿಗಳನ್ನು ರೂಪಿಸುವಲ್ಲಿ ಯಾವ ಬಗೆಯ ಪಾತ್ರ ವಹಿಸಿವೆ ಎಂಬುದು ಮುಖ್ಯ. ಹಾಗಾಗಿ ಈ ಬಗೆಯ ನುಡಿ ಕುರಿತ ವಿವರಗಳು ಒಳನುಡಿಗಳ ಬಗೆಗಿನ ಬಹು ಮುಖ್ಯ ಸಂಗತಿಗಳನ್ನು ತಿಳಿಸಲು ಒತ್ತಾಸೆಯಾಗಿರುತ್ತವೆ.
ಈ ಕಾರಣಕ್ಕಾಗಿಯೇ ಒಳನುಡಿಗಳ ವರ್ಗೀಕರಣಕ್ಕೆ ಅವುಗಳದೆಯಾದ ಮಹತ್ವ ಇರುತ್ತದೆ. ಇವು ನುಡಿ ಚರಿತ್ರೆಯನ್ನು ಕಟ್ಟುವಲ್ಲಿಯೂ ಪ್ರಮುಖ ಮಾನಂಡಗಳಾಗಿ ಕೆಲಸ ಮಾಡುತ್ತವೆ. ಆದರೆ ಹೀಗೆ ನುಡಿ ಚರಿತ್ರೆಯನ್ನು ಕಟ್ಟುವ ವಿಧಾನವೇ ಕಲ್ಪಿತವಾಗಿರುತ್ತದೆ. ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯಲು ಮುಖ್ಯವಾಗಿ ಎರಡು ರೀತಿಯ ಆಧಾರಗಳನ್ನು ಬಳಸಲು ಸಾಧ್ಯವಿದೆ; ಎತ್ತುಗೆಗಾಗಿ ಕನ್ನಡದ ಸನ್ನಿವೇಶವನ್ನು ಬಿಡಿಸಿ ನೋಡುವುದಾದರೆ, ಮೂಲದ್ರಾವಿಡವೆಂಬ ಕಲ್ಪಿತನುಡಿ – ಕನ್ನಡ ನುಡಿಯ ಸಂಬಂಧಿಗಳಾಗಿರುವ ತಮಿಳು, ತೆಲುಗು, ಕುಯಿ, ಕುಡುಖ್ ಮೊದಲಾದ ಇತರ ದ್ರಾವಿಡ ನುಡಿಗಳೊಂದಿಗೆ ಕನ್ನಡವನ್ನು ಹೋಲಿಸಿ ನೋಡಬೇಕು.
ಅವುಗಳ ಮೂಲವನ್ನು ಮೂಲದ್ರಾವಿಡವೆಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳುವ ಮೂಲಕ ಗುರುತಿಸಬಹುದು. ಅನಂತರ ಆ ನುಡಿಯು ಕವಲೊಡೆದು ಬೇರೆಬೇರಾಗಿ ಅಂತಹ ಕವಲುಗಳಲ್ಲಿ ಒಂದರಿಂದ ಕನ್ನಡ ನುಡಿ ಹೇಗೆ ಇಳಿದು ಬಂದಿದೆಯೆಂಬುದನ್ನು ಕಲ್ಪಿಸಿ ಹೇಳಬೇಕಾಗುತ್ತದೆ.
ಕನ್ನಡದ ಒಳನುಡಿಗಳನ್ನು ಪ್ರಾದೇಶಿಕವಾಗಿ ವಿಂಗಡಸಿದರೆ; ಕರಾವಳಿ, ಧಾರವಾಡ, ಬೀದರ್, ಮೈಸೂರು ಇತ್ಯಾದಿಯಾಗಿ ಕನ್ನಡದ ಬೇರೆ ಬೇರೆ ಒಳನುಡಿಗಳನ್ನು ಗುರುತಿಸಬಹುದು. ಮತ್ತು ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಪಟ್ಟಿಮಾಡಿ, ಆ ವ್ಯತ್ಯಾಸಗಳೆಲ್ಲವೂ ಹೇಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ನಡೆದ ಬೇರೆ ಬೇರೆ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ವಾದಿಸಲು ಸಾಧ್ಯವಿದೆ.
ಪರಿಣಾಮವಾಗಿ ಮೂಲಕನ್ನಡ ನುಡಿ ಬೇರೆ ಬೇರೆ ಕವಲುಗಳಾಗಿ ಒಡೆದುಕೊಂಡಿದೆಯೆಂದೂ ಮತ್ತು ಈ ಒಳನುಡಿಗಳು ಆ ನುಡಿಯ ಬೇರೆ ಬೇರೆ ಕವಲುಗಳೆಂದೂ ಕಲ್ಪಿಸಿಕೊಂಡು, ಅವುಗಳ ನಡುವಿರುವ ವ್ಯತ್ಯಾಸಗಳ ಆಧಾರದ ಮೇಲೆ ಮೂಲಕನ್ನಡಕ್ಕೂ ಮತ್ತು ಕನ್ನಡದ ಇವತ್ತಿನ ಪ್ರಭೇದಗಳಿಗೂ ನಡುವಿರುವ ಕಲ್ಪಿತ ಚರಿತ್ರೆಯನ್ನು ಬರೆಯಲು ಸಾಧ್ಯವಾಗುತ್ತದೆ.
ಈ ರೀತಿಯ ಮೂಲದ್ರಾವಿಡದಿಂದ ಮೂಲಕನ್ನಡಕ್ಕೂ ಮತ್ತು ಮೂಲಕನ್ನಡದಿಂದ ಅದರ ಬೇರೆ ಬೇರೆ ಆಧುನಿಕ ಪ್ರಭೇದಗಳಿಗೂ ನಡುವೆ ಬೇರೆ ಬೇರೆ ರೀತಿಯ ಬದಲಾವಣೆಗಳ ಮೂಲಕ ಸಂಬಂಧವನ್ನು ಸಾಧಿಸಿದಾಗ ಕನ್ನಡದ ಕಲ್ಪಿತ ಚರಿತ್ರೆ ಸಿದ್ಧವಾಗುತ್ತದೆ. ಮೂಲಕನ್ನಡದಿಂದ ಅದರ ಬೇರೆಬೇರೆ ಪ್ರಭೇದಗಳಿಗೆ ಸಂಬಂಧವನ್ನು ಸಾಧಿಸಿದಲ್ಲಿ ಕನ್ನಡ ಭಾಷೆಯ ಲಿಖಿತ ಚರಿತ್ರೆಯೂ ಕೂಡ ಬಹಳ ಮಟ್ಟಿಗೆ ಸಹಾಯಕವಾಗಬಲ್ಲುದು (ಡಿ.ಎನ್.ಎಸ್.ಭಟ್).
ಕನ್ನಡ ಭಾಷೆಯ ಲಿಖಿತ ಚರಿತ್ರೆ ಬರೆಯಬೇಕಿದ್ದಲ್ಲಿ, ನಾವು ಅದಕ್ಕಾಗಿ ಬೇರೆಬೇರೆ ರೀತಿಯ ಕನ್ನಡ ಬರಹಗಳ ಕಾಲಾನುಕ್ರಮವನ್ನು ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಚರಿತ್ರೆಯನ್ನು ಬರೆಯಬೇಕಾದಾಗ ಬೇರೆಬೇರೆ ಕಾಲಗಳಲ್ಲಿ ಬೆಳೆದುಬಂದ ಶಾಸನಗಳನ್ನು ಹೋಲಿಕೆಮಾಡಿ ಅವುಗಳ ನಡುವಿನ ವ್ಯತ್ಯಾಸಗಳಿಗೆ ಕಾಲಾನುಕ್ರಮವೇ ಕಾರಣವೆನ್ನುವುದನ್ನು ಅರ್ಥೈಸಬೇಕು.
ಶಾಸನಗಳ ನಡುವಿನ ಕಾಲಾನುಕ್ರಮ ವ್ಯತ್ಯಾಸವೇ ನುಡಿಯ ನಡುವಿನ ವ್ಯತ್ಯಾಸವಾಗಬೇಕಿಲ್ಲ. ನುಡಿಯ ಕಾಲಾನುಕ್ರಮ ಶಾಸನ ಕಾಲಾನುಕ್ರಮಕ್ಕಿಂತ ಭಿನ್ನವಾಗಿರಲೂ ಸಾಧ್ಯವಿದೆ. ಇದಕ್ಕೆ ಕಾರಣ ನುಡಿ ಊರಿಂದ ಊರಿಗೆ, ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ.
ಕನ್ನಡದಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಮತ್ತು ಬೇರೆಬೇರೆ ಶತಮಾನಗಳಲ್ಲಿ ರಚಿತವಾದ ಗ್ರಂಥಗಳ ಇಲ್ಲವೇ ಶಾಸನಗಳ ನಡುವಿರುವ ವ್ಯತ್ಯಾಸಗಳು – ಇವೆರಡೂ ಒಂದೇ ತರಹದವುಗಳು. ಎರಡು ಕಡೆಗಳಲ್ಲೂ ಒಂದೇ ರೀತಿಯ ಸ್ವರ ಮತ್ತು ವ್ಯಂಜನ ಭೇದಗಳು ಹಾಗೂ ವ್ಯಾಕರಣ ಭೇದಗಳು ಕಾಣಿಸಿಕೊಳ್ಳುತ್ತವೆ.
ಉದಾ.ಗೆ ಪ್>ಹ್, ತೋಂಟ>ತೋಟ, ಎ>ಇ, (ಮನೆ>ಮನಿ) ಇ>ಎ [ಇಲಿ>ಎಲಿ – ನಂಜನಗೂಡು-ಪುತ್ತೂರು] ಕತ್ತಿ>ಕತ್ತಿ [ಸ್ವರಭೇದ] ಹಾಗೂ ಕ್>ಚ್ (ಕನ್ನಡ – ತಮಿಳು ಉದಾ.ಗೆ ಕೆತ್ತು> ಚೆತ್ತು, ಕೇರಿ> ಚೇರಿ) (ಡಿ.ಎನ್.ಎಸ್.ಭಟ್).
ಲಿಖಿತ ನುಡಿಗೆ ಚಾರಿತ್ರಿಕವಾಗಿ ನಡೆದ ನುಡಿಯ ಬದಲಾಣೆಗಳನ್ನು ವಿವರಿಸುವಲ್ಲಿ ಕೆಲವು ಕೊರತೆಗಳಿವೆ. ಆಡುನುಡಿಯ ಬದಲಾವಣೆಗಳನ್ನು ಹೊರಗಿಟ್ಟು, ಯಾವುದೇ ಭಾಷೆಯ ಚರಿತ್ರೆಯನ್ನು ರಚಿಸುವುದು ಕಷ್ಟ. ಪೂರ್ವದ ಹಳಗನ್ನಡದಿಂದ ಹಳಗನ್ನಡದಲ್ಲಿ ನಡೆದ ಧ್ವನಿ ಬದಲಾವಣೆ ಎ>ಇ – ಕೆಸು>ಕಿಸು, ಪೆರಿಯ>ಪಿರಿಯ (ಹಿರಿಯ), ಎದಿರ್>ಇದಿರ್ (ಇದಿರು), -ಒ>ಉ ತೊೞು>ತುೞು (ದನ), ಪೊಗು>ಪುಗು (ಪ್ರವೇಶಮಾಡು) ಪೂ.ಹಳಗನ್ನಡದಲ್ಲಿದ್ದ ‘ಎ’ಕಾರ ಮತ್ತು ‘ಒ’ಕಾರ ಕರಾವಳಿ ಪ್ರಭೇದಗಳಲ್ಲಿ ಬದಲಾಗದೆ ಹಾಗೆಯೇ ಉಳದಿದೆ. ಎರಡು ವರ್ಣಗಳು ಸೇರಿ ಒಂದೇ ವರ್ಣವಾದಾಗ, ಹಲವಾರು ಪದಭೇದಗಳು ಇಲ್ಲವಾಗುತ್ತವೆ.
ಉದಾ.ಗೆ ‘¾-ರ’ ಈ ವರ್ಣಭೇದ ಈಗ ಇಲ್ಲ
ಹಳಗನ್ನಡ ಹೊಸಗನ್ನಡ
ಕರೆ [ಬರಹೇಳು] ಕರೆ
ಕರೆ¾ [ಹಾಲು ಕರೆ]
ಕಿರಿ [ಹಲ್ಲುಕಿರಿ]
ಕಿರಿ ಕಿಱಿ [ಚಿಕ್ಕದು]
ಈ ಬದಲಾವಣೆಗಳು ಏಕೆ ಉಂಟಾದವು ಎಂಬುದನ್ನು ವಿವರಿಸಲು ನಮ್ಮ ನುಡಿಚರಿತ್ರೆಗಳು ಮನಸ್ಸು ಮಾಡುವುದಿಲ್ಲ. ಪದಾದಿಯ ಪಕಾರ ಹಕಾರವಾಯಿತು ಎಂದು ಹೇಳುವುದು ಒಂದು ಪ್ರಕ್ರಿಯೆಯನ್ನು ವರ್ಣಿಸಿದಂತೆ. ಆದರೆ ಕಾರಣ ಮೀಮಾಂಸೆಯನ್ನು ಮಾಡಿದಂತಲ್ಲ. ಈ ಬದಲಾವಣೆಯು ನಮ್ಮಲ್ಲಿ ಕೆಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ (ಕೆ.ವಿ.ಎನ್).
1. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಇಕಾರವಾಗುತ್ತದೆ (ಮನೆ>ಮನಿ, ಕತ್ತಿ>ಕತ್ತಿ, ಇಡು>ಇರು, ಹುಡಿ>ಮಡಿ) ಉಳಿದೆಡೆಯಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಬದಲಾದರೂ ಅದು ಬೇರೆ ಧ್ವನಿಯಾಗಿ ಕಾಣಿಸಿಕೊಳ್ಳುತ್ತದೆ. ಇವೇ ಪದಗಳು ಕನ್ನಡದ ಇನ್ನೊಂದು ಪ್ರಭೇದದಲ್ಲಿ ಅಕಾರಾಂತವಾಗುತ್ತವೆ. (ತಲೆ>ತಲ) ಏಕೆ ಹೀಗೆ?
2. ಪ್>ಹ್ ಬದಲಾವಣೆಯನ್ನೇ ನೋಡೋಣ. ಸ್ವರಗಳ ನಡುವೆ ಬರುವ ಪಕಾರ ಹಕಾರವಾಗುವ ಬದಲು ವಕಾರವಾಗುತ್ತದೆ. ಉದಾ.ಗೆ ಕಪ್ಪು ‘ಮುಚ್ಚು’ ಕವಿ, ಕವುದಿ, ಕೆಪ್ಪು ‘ಕಿವುಡು’
3. ಪ್>ಹ್ ವ್ಯತ್ಯಾಸ ಕನ್ನಡದ ಪದಗಳಿಗೆ ಮಾತ್ರ ಅನ್ವಯಿಸುತ್ತದೆ. ಸಂಸ್ಕೃತದಿಂದ ಬಂದು ಸೇರಿದ ಪಕಾರಾದಿಯುಳ್ಳ ಪದಗಳಿಗೆ ಈ ಬದಲಾವಣೆ ವ್ಯಾಪಿಸಿಲ್ಲ. ಇದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿಲ್ಲ (ಕೆ.ವಿ.ಎನ್).
ಈ ತೊಡಕನ್ನು ಬೇರೆ ಬಗೆಯ ಓದಿನ ಮಾದರಿಗಳಿಂದ ರೂಪಿಸಿಕೊಳ್ಳುವ ಅಗತ್ಯವಿದೆ. ಇತ್ತೀಚಿಗೆ ಅಮೇರಿಕದ ನುಡಿಯರಿಗ ವಿಲಿಯಮ್ ಸೌತ್ವರ್ಥ್ನ ಸಂಶೋಧನೆಯ ಫಲಿತದಿಂದ ಹೊರಬಂದಿರುವ ‘ಲಿಂಗ್ವಿಸ್ಟಿಕ್ಸ್ ಆರ್ಕ್ಯಾಲಜಿ ಆಫ್ ಸೌಥ್ ಏಶಿಯಾ’ ಎಂಬ ಹೊತ್ತಿಗೆಯಲ್ಲಿ ಇಂತಹ ತೊಡಕುಗಳನ್ನು ನಿವಾರಿಸಿಕೊಳ್ಳಲು ಬೇಕಾದ ಕೆಲವು ಮಾದರಿಗಳು ಸಿಗುತ್ತವೆ.
ಬರಹದಲ್ಲಿ ನುಡಿಗಳ ದಿಟ ಚಹರೆಗಳು ಯಾವಾಗಲೂ ಸರಿಯಾಗಿಯೇ ಇರುತ್ತವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಆಡುನುಡಿಯಲ್ಲಿ ಭಾಷಿಕ ಅವಶೇಷಗಳು/ಪಳೆಯುಳಿಕೆಗಳು ಉಳದಿರುತ್ತವೆ. ಇಂತಹ ಪಳೆಯುಳಿಕೆಗಳೇ, ನುಡಿ ಬದಲಾವಣೆಯಲ್ಲಿ ಯಾವ ಅಂಶಗಳು ಮೊದಲಾದವು ಮತ್ತು ಯಾವವು ಆನಂತರ ನಡೆದವು ಅನ್ನುವುದನ್ನು ವಿವರಿಸಲು ಒತ್ತಾಸೆಯಾಗಿರುತ್ತವೆ.
ಕನ್ನಡನುಡಿಯ ಆಡುಮಾತುಗಳನ್ನು ಹುಡುಕಿ ತೆಗೆದರೆ, ಆ ಮಾಹಿತಿಗಳಿಂದ ನುಡಿಯ ಚರಿತ್ರೆಗೆ ಅಗತ್ಯವಿರುವ ನುಡಿಯ ವಿವರಗಳು ಸಿಗಬಹುದು. ಆಡುನುಡಿಯೊಳಗಿನ ರಚನೆಗಳು ಏನು ಹೇಳುತ್ತವೆ ಹಾಗೂ ತಮ್ಮ ಮೂಲ ಸ್ವರೂಪವನ್ನು ಹೇಗೆ ಉಳಸಿಕೊಂಡಿವೆ ಎಂಬ ವಿವರಗಳು ತಿಳಿದು ಬರುತ್ತವೆ.
• ಇಂತಹ ಚಿಂತನೆಗಳನ್ನು ಡಿ.ಎನ್.ಎಸ್.ಭಟ್ರು ತಮ್ಮ ಅಧ್ಯಯನಗಳಲ್ಲಿ ಈಗಾಗಲೆ ಮಂಡಿಸಿದ್ದಾರೆ. ಈ ಅಧ್ಯಯನಗಳು ಬಹಳ ಕುತೂಹಲಕಾರಿ ವಿಚಾರಗಳನ್ನು ಮಂಡಿಸುತ್ತವೆ. ಎತ್ತುಗೆಗಾಗಿ ಕನ್ನಡದ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವಿನ ಅಂತರವು ಹೆಚ್ಚು ಹಳೆಯದು ಮತ್ತು ಮುಖ್ಯವಾದುದು. ಈ ಪ್ರಭೇದಗಳು ಪ್ರಾಚೀನ ಕನ್ನಡದ ಅನೇಕ ಪದಗಳು ಮತ್ತು ವ್ಯಾಕರಣ ರೂಪಗಳನ್ನು ಇಂದಿಗೂ ಉಳಸಿಕೊಂಡಿವೆಯೆಂದು ಅವರ ಅಭಿಪ್ರಾಯ. ಎತ್ತುಗೆಗಾಗಿ ಹಳಗನ್ನಡದಲ್ಲಿ ಕಾಣಿಸುವ ಪ್, ಬ್, ಮತ್ತು ವ್ ಎಂಬ ಮೂರು ರೂಪಗಳು ಹವ್ಯಕ ಕನ್ನಡದಲಿವೆ ಪೋಪೆನ್>ಹೋಪೆ, ರ್ಪೆನ್>ಬಪ್ಪೆ, ಕಾಣ್ಬೆನ್>ಕಾಂಬೆ, ಪಾಡುವೆನ್>ಹಾಡುವೆ.
• ಇಂತಹ ತೌಲನಿಕ ಅಧ್ಯಯನಗಳಿಂದ ಹೊಸ ಬಗೆಯ ತಿಳುವಳಿಕೆ ಸಾಧ್ಯವೆಂಬುದು ನಿಚ್ಚಳವಾಗುತ್ತದೆ. ಈ ತಿಳಿವನ್ನು ಇನ್ನಷ್ಟೂ ಹಿಗ್ಗಿಸುವುದಾದರೆ, ‘ಫಾಲ್ಗುಣ’ ಎಂಬ ಪದ ೧೨ನೇ ಶತಮಾನದ ಕೊಡಗಿನ ಉಪಭಾಷೆಯಲ್ಲಿ ‘ಪಲ್ಗುಣ’ ಎಂದಾಗುತ್ತದೆ. ‘ತಾಯಿ’ ಎಂಬ ಪದ ೧೪ನೇ ಶತಮಾನದ ಉತ್ತರ ಕನ್ನಡದ ಶಾಸನದಲ್ಲಿ ‘ತಯಿ’ ಎಂದಾಗುತ್ತದೆ. ‘ಬಾನ’ ಎಂಬ ಪದ 14ನೇ ಶತಮಾನದ ಉಡಪಿ ಶಾಸನದಲ್ಲಿ ‘ಮಾನ’ ಎಂದಾಗಿದೆ. ‘ಪಡುವಣ’ ಪದವು ಸಹ ‘ಹ್’ ಕಾರವಾಗಿ ‘ಹಡುವಣ’ ಎಂದು ಪ್ರಯೋಗವಾಗಿರುವುದು 11ನೇ ಶತಮಾನದ ಕೊಡಗಿನ ಶಾಸನದಲ್ಲಿ ಬಳಕೆಯಾಗಿದೆ (ಕುಶಾಲಪ್ಪಗೌಡ).
• ‘ಋ’ ಕಾರ ‘ರು, ರಿ, ರ’ ಕಾರವಾಗಿ, ‘ವ್’ ಕಾರ ‘ಬ್’ ಕಾರವಾಗಿ, ‘¾’ ಮತ್ತು ‘¿’ ಕುಳವಾಗಿ, ಶಕಟರೇಫ ರೇಫಯಾಗಿ ಬದಲಾಗಿರುವ ಧ್ವನಿತತ್ವಗಳ ನಿಯಮಗಳನ್ನು ಇನ್ನೂ ಖಚಿತವಾಗಿ ಶೋಧಿಸಲಕ್ಕೆ ಒಳನುಡಿಗಳ ಅಧ್ಯಯನ ಪೂರಕವಾಗಬಲ್ಲುದು ಎಂಬುದನ್ನು ಈ ಮೇಲಿನ ಸಂಗತಿಗಳಿAದ ತಿಳಿಯಬಹುದು.
3. ಪ್ರಾದೇಶಿಕ ಒಳನುಡಿ
ಒಂದು ಸೀಮಿತ ಪ್ರಾದೇಶಿಕ ಗಡಿಯೊಳಗೆ ನೆಲೆನಿಂತಿರುವ ಸಮುದಾಯಗಳು ನಿರ್ದಿಷ್ಟ ಕಾಲದಲ್ಲಿ ಮಾತನಾಡುವ ನುಡಿಬಗೆಗಳನ್ನು ಪ್ರಾದೇಶಿಕ ಒಳನುಡಿಯೆಂದು ಕರೆಯುತ್ತಾರೆ. ಎತ್ತುಗೆಗಾಗಿ ಕನ್ನಡದಲ್ಲಿ ಮೈಸೂರು ಕನ್ನಡ, ಗುಲ್ಬರ್ಗ ಕನ್ನಡ, ಧಾರವಾಡ ಕನ್ನಡ, ಮತ್ತು ಮಂಗಳೂರು ಕನ್ನಡ ಎಂಬಿತ್ಯಾದಿಯಾಗಿ ಗುರುತಿಸಿದ್ದಾರೆ.
ಮತ್ತೆ ಕೆಲವರು ಕರ್ನಾಟಕದಲ್ಲಿರುವ ಜಿಲ್ಲೆಗಳಿಗೊಂದರಂತೆ ಒಳನುಡಿಯನ್ನು ಗುರುತಿಸುತ್ತಾರೆ. ಅಂದರೆ ಮೂವತ್ತು ಜಿಲ್ಲೆಗಳಿರುವುದರಿಂದ ಮೂವತ್ತು ಒಳನುಡಿಗಳಿವೆ ಎಂದರ್ಥ. ಇಂತಹ ಸಾರರೂಪಿ ವ್ಯಾಖ್ಯಾನುಗಳು ಹೇಗೆ ಒಳನುಡಿಗಳ ಬಗೆಗೆ ತೊಡಕುಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ಮುಂದೆ ಚರ್ಚಿಸೋಣ. ಇರಲಿ ನುಡಿಯೊಳಗಿನ ವ್ಯತ್ಯಾಸಗಳನ್ನು ದಿಟವಾಗಿಯೂ ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕವಾಗಿ ಗುಂಪುಮಾಡುವ ನೆಲೆಗಳಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳಿರುತ್ತವೆ ಎಂದು ಒಪ್ಪಲಾಗಿದೆ.
ಹಾಗಾಗಿ ಇಂದಿನ ಕನ್ನಡದಲ್ಲಿ ಪ್ರಾದೇಶಿಕ ಭಿನ್ನತೆಗಳು ನಮ್ಮ ಕಣ್ಣ ಮುಂದಿರುವಂತೆಯೇ, ಕನ್ನಡದಲ್ಲಿ ಚಾರಿತ್ರಿಕ ಭಿನ್ನತೆಗಳು ಇದ್ದವು ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಅದಕ್ಕಾಗಿಯೇ ಕವಿರಾಜಮಾರ್ಗಕಾರ ಕನ್ನಡದಲ್ಲಿ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗಗಳನ್ನು ಗುರುತಿಸಿ, ಅವು ಕನ್ನಡದ ಪ್ರಮುಖ ಪ್ರಾದೇಶಿಕ ಪ್ರಭೇದಗಳೆಂದು ಹೇಳುತ್ತಾನೆ. ಇವನು ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಆಧರಿಸಿಕೊಂಡು, ಅವುಗಳ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲಿ ಬಳಸುವ ಭಾಷೆಯೇ ಕನ್ನಡದ ತಿರುಳು ಎಂದು ಹೇಳುತ್ತಾನೆ.
ಇದು ಭಾಷಾ ಪ್ರಮಾಣೀಕರಣದ ಪ್ರಯತ್ನವೆಂದೇ ಹೇಳಬಹುದು. ಕನ್ನಡದ ದಕ್ಷಿಣ ಮತ್ತು ಉತ್ತರ ಮಾರ್ಗಗಳನ್ನು ಗುರುತಿಸುಲು ತುಂಗಭದ್ರೆಯನ್ನು ಗಡಿಗೆರೆಯನ್ನಾಗಿಸಿದ್ದಾನೆ. ಇದರಿಂದ ತಿಳಿವುದೇನೆಂದರೆ, ಪ್ರಮಾಣೀಕೃತ ಭಾಷೆ ಮತ್ತು ಆಡುಭಾಷೆಗಳು ಬೇರೆಬೇರೆ ಇದ್ದವು ಎಂಬುದು ಇದರಿಂದ ತಿಳಿದುಬರುತ್ತದೆ.
ಆದರೆ ಈ ವರ್ಗೀಕರಣಕ್ಕೆ ಎದುರಾಗಿ ಡಿ.ಎನ್.ಶಂಕರ ಭಟ್ರು ಕನ್ನಡದ ಪ್ರಾದೇಶಿಕ ಒಳನುಡಿಗಳನ್ನು ಪೂರ್ವ ಮತ್ತು ಪಶ್ಚಿಮ ಪ್ರಭೇದಗಳೆಂದು ಗುರುತಿಸುತ್ತಾರೆ. ಇವರ ಈ ವರ್ಗೀಕರಣದ ಹಿಂದಿನ ಗುರಿಗಳು ಅತ್ಯಂತ ಕುತೂಹಲಕಾರಿಯಾಗಿವೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು;
• ಬರಹದ ಕನ್ನಡದಲ್ಲಿ ನಡೆಯದಿದ್ದರೂ ಇತರ ಪ್ರಭೇದಗಳಲ್ಲಿ ನಡೆದಿರುವ ಬೇರೆಯೂ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ನಡೆದಿಲ್ಲ, ಉದಾ.ಗೆ ಕ್ರಿಯಾಪ್ರಕೃತಿಗಳ ಕೊನೆಯಲ್ಲಿ ಬರುವ ‘ಎ’ ಕಾರ ‘ಇ’ ಕಾರವಾಗದೆ ‘ಎ’ ಕಾರವಾಗಿಯೇ ಇದೆ.
• ಈ ಪೂರ್ವ ಮತ್ತು ಪಶ್ಚಿಮ ಪ್ರಭೇದಗಳಲ್ಲಿ ಕನ್ನಡ ನುಡಿಯ ಚಾರಿತ್ರಿಕ ಬೆಳವಣಿಗೆಯನ್ನು ವಿವರಿಸಲು ಬೇಕಾಗುವ (ನುಡಿ) ಪಳೆಯುಳಿಕೆಗಳು ಸಿಗುತ್ತವೆ.
ಸಾಂಪ್ರದಾಯಿಕವಾಗಿ ನಾಲ್ಕು ಪ್ರಾದೇಶಿಕ ಒಳನುಡಿಗಳನ್ನು ಗುರಿತಿಸಿದ್ದಾರೆ. ಅವುಗಳೆಂದರೆ, ಮೈಸೂರು, ಮಂಗಳೂರು, ಧಾರವಾಡ ಮತ್ತು ಗುಲ್ಬರ್ಗ ಕನ್ನಡಗಳು. ಇವುಗಳಲ್ಲಿಯೂ ಸಾಕಷ್ಟು ಒಳನುಡಿಗಳನ್ನು ಗುರುತಿಸಬಹುದು. ಉದಾ.ಗೆ ಪುತ್ತೂರು ಕನ್ನಡ, ಕುಂದಾಪುರ ಕನ್ನಡ, ಚಾಮರಾಜನಗರ ಕನ್ನಡ, ನಂಜನಗೂಡಿನ ಕನ್ನಡ, ಬಾಗಲಕೋಟೆ ಕನ್ನಡ ಮುಂತಾದವು.
ಈ ಪ್ರಾದೇಶಿಕ ಒಳನುಡಿಗಳ ನಡುವಣ ಭಿನ್ನತೆಗಳನ್ನು ಸ್ಥೂಲವಾಗಿ ಮೂರು ನೆಲೆಗಳಲ್ಲಿ ಗುರುತಿಸಿದ್ದಾರೆ, ಅವುಗಳೆಂದರೆ, ಧ್ವನಿ, ಪದ ಮತ್ತು ವ್ಯಾಕರಣ. ಈ ಮೇಲಿನ ಚರ್ಚೆಗಳಿಂದ ಗೊತ್ತಾಗಿರುವ ಒಂದು ಸಂಗತಿಯೇನೆAದರೆ, ಎಲ್ಲ ಕಾಲಗಳಲ್ಲಿಯೂ ಪ್ರಾದೇಶಿಕ ಒಳನುಡಿಗಳಿದ್ದವು ಎಂಬುದಾಗಿದೆ. ಆದರೆ ಈ ಪ್ರಾದೇಶಿಕ ಒಳನುಡಿಗಳ ನಡುವಿನ ವ್ಯತ್ಯಸಗಳನ್ನು ಗುರುತಿಸಲು ‘ಗಡಿಗೆರೆ’ (ಐಸೋಗ್ಲಾಸ್) ಎಂಬ ಒಂದು ಮಾನದಂಡವನ್ನು ಬಳಸುತ್ತಾರೆ.
ಒಳನುಡಿ ಓದುಗರು ಎರಡು ಅರಿಮೆಪದಗಳನ್ನು ರೂಪಿಸಿದ್ದಾರೆ. ಅವುಗಳಂದರೆ, ನಡುಜಾಗ (ಫೋಕಲ್ ಏರಿಯಾ) ಮತ್ತು ಪಳೆಯುಳಿಕೆ ಜಾಗವೆಂದು (ರೆಲಿಕ್ ಏರಿಯಾ) ಭೌಗೊಳಿಕವಾಗಿ ಫೋಕಲ್ ಏರಿಯಾ ಅನ್ನುವುದು ಯಾವಾಗಲೂ ಕೇಂದ್ರಜಾಗವೇ ಆಗಿರುತ್ತದೆ ಹಾಗೂ ಇಂತಹ ಜಾಗಗಳು ಸಾಂಸ್ಕೃತಿಕ ಬಹುಳತೆ ಕೂಡಿರುವುದಷ್ಟೆಯಲ್ಲದೆ ಆರ್ಥಿಕ ಚಟುವಟಿಕೆಗಳಿಂದಲೂ ಕೂಡಿರುತ್ತವೆ. ಸಹಜವಾಗಿಯೇ ಈ ಜಾಗಗಳು ಭಾಷಿಕ ಹೊಸತನದ ನೆಲೆಬೀಡುಗಳಾಗಿರುತ್ತವೆ.
ಕವಿರಾಜಮಾರ್ಗಕಾರ ಹೇಳುವ ತಿರುಳುಗನ್ನಡ ನಾಡನ್ನು ಇಲ್ಲಿ ಎತ್ತುಗೆಗಾಗಿ ತೋರಿಸಬಹುದು. ಅಂದರೆ ಕೊಪಣ, ಪುಲಿಗೆರೆ, ಕಿಸುವೊಳಲು, ಒಕ್ಕುಂದ ಮುಂತಾದ ಕೆಲವು ಪಟ್ಟಣಗಳನ್ನು ಕೇಂದ್ರ ಪ್ರದೇಶಗಳನ್ನಾಗಿ ಗುರುತಿಸಿದ್ದಾನೆ. ಭಾಷಿಕ ಹೊಸತನಗಳು ಇಂತಹ ಪ್ರದೇಶಗಳಿಂದಲೇ ಆಯಾ ನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಚದುರಿಕೊಳ್ಳುತ್ತವೆ. ಆದರೆ ಪಳೆಯುಳಿಕೆ ಪ್ರದೇಶಗಳು ಆಯಾ ನಾಡಿನ ಭೌಗೋಳಿಕ ಮೇರೆಗಳನ್ನು ದಾಟಿ ಇಲ್ಲವೇ ಅಂಚಿನಲ್ಲಿ ನೆಲೆಗೊಂಡಿರುತ್ತವೆ.
ಜನಸಾಮನ್ಯರ ಒಡನಾಟಕ್ಕೆ ಎಟುಕದ ಪ್ರದೇಶಗಳು ಇವಾಗಿರುತ್ತವೆ. ಅಂದರೆ ಮಲೈನಾಡುಗಳು ಇಲ್ಲವೇ ಘಟ್ಟದ ಕೆಳಗಿನ ಪ್ರದೇಶಗಳೂ ಆಗಿರುತ್ತವೆ. ಹಾಗಾಗಿ ಡಿ.ಎನ್.ಎಸ್ ಭಟ್ ಅವರು ಕನ್ನಡ ನುಡಿ ಬದಲಾವಣೆಯ ಸುಳಿವು ಇಲ್ಲವೇ ನುಡಿ ಪಳೆಯುಳಿಕೆಯ ಜಾಗಗಳನ್ನು ಪೂರ್ವ-ಪಶ್ಚಿಮ ದಿಕ್ಕುಗಳ ನೆಲೆಯಿಂದ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಮಾರ್ಗಕಾರ ಇದನ್ನು ದಕ್ಷಿಣ ಹಾಗೂ ಉತ್ತರ ದಿಕ್ಕುಗಳ ನೆಲೆಯಿಂದ ಗುರುತಿಸುವ ಬಗೆಯನ್ನು ಕವಿರಾಜಮಾರ್ಗದಲ್ಲಿ ಸೂಚಿಸಿದ್ದಾನೆ.
ಈ ಪಳೆಯುಳಿಕೆಗಳು ಯಾವುದೇ ಹೊರ ಪ್ರಭಾವಕ್ಕೆ ಈಡಾಗದೇ, ತಮ್ಮ ಮೂಲರೂಪದಲ್ಲಿರುತ್ತವೆ. ಇಂತಹ ಆಯಕಟ್ಟಿನ ಜಾಗಗಳಲ್ಲಿ ‘ದಾಂಟು’ ‘ಪಚ್ಚೆ’ ಮುಂತಾದ ಮೂಲರೂಪಗಳು ಆಯಾ ಪ್ರದೇಶದ ಜನರ ಆಡುನುಡಿಯಲ್ಲಿ ಈಗಲೂ ಬಳಕೆಯಲ್ಲಿವೆ. ಮಾಲೂರಿನ ಸುತ್ತಮುತ್ತಲಿನ ತಮಿಳುನಾಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ‘ನಮ್ಮ’ ಎಂಬ ಇನ್ಕ್ಲೂಸಿವ್ ಬಹುವಚನದ ಬಳಕೆಯನ್ನು ಕಾಣಬಹುದಾಗಿದೆ. ಈ ಬಗೆಯ ನುಡಿ ಪಳೆಯುಳಿಕೆಗಳನ್ನು ಡಿ.ಎನ್.ಎಸ್.ಭಟ್ ಅವರು ತಮ್ಮ ನುಡಿ ಕಲ್ಪಿತ ಚರಿತ್ರೆಯಲ್ಲಿ ಗುರುತಿಸಿರುತ್ತಾರೆ.
4. ಸಾಮಾಜಿಕ ಒಳನುಡಿಗಳು
• ಸಾಮಾಜಿಕ ಭಿನ್ನತೆಯ ಪರಿಣಾಮ, ಪ್ರತಿ ಭಾಷಾ ಸಮುದಾಯಗಳಲ್ಲಿ ಸಾಮಾಜಿಕ ಒಳನುಡಿಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ, ಆಯಾ ಸಮುದಾಯವು ತನ್ನ ಮೂಲಭೂತ ವರ್ತನೆಯಲ್ಲಿಯೇ ಭಿನ್ನತೆಯನ್ನು ತೊರ್ಪಡಿಸುತ್ತದೆ ಉದಾ.ಗೆ ಉಡಿಗೆ, ಊಟ, ಸಾಮಾಜಿಕ ಸಂಭಾಷಣೆ ಮುಂತಾದವು. ಇದಕ್ಕೆ ಪೂರಕವಾಗಿ ಇತಿಹಾಸ, ಅಂತಸ್ತು, ಜನಾಂಗಗಳAತಹ ಇನ್ನಿತರ ಸಾಮಾಜಿಕ ಮಾನದಂಡಗಳು ಕಾರಣವಾಗುತ್ತಿವೆ.
• ಮತ್ತೊಂದು ನೆಲೆಯಲ್ಲಿ ಈ ಒಳನುಡಿಗಳನ್ನು ನಿರ್ಧರಿಸುವ ಮಾನದಂಡಗಳನ್ನು ಈ ಕೆಳಗಿನಂತೆ ಗುರುತಿಸಬಹುದು;
• ನೆಲಸುವಿಕೆಯ ಪ್ರಕಾರಗಳು (ಸೆಟಲ್ಮೆಂಟ್ ಟೈಪ್ಸ್)
• ವಲಸೆ (ಮೈಗ್ರೇಶನ್)
• ನುಡಿ ಒಡನಾಟ (ಲ್ಯಾಂಗ್ವೇಜ್ ಕಾಂಟ್ಯಾಕ್ಟ್)
• ಸಾಮಾಜಿಕ – ಆರ್ಥಿಕ ಸನ್ನಿವೇಶ (ಇಕಾಲಜಿ)
• ಕರ್ನಾಟಕದಲ್ಲಿ ಮುಖ್ಯವಾಗಿ
ಗುರುತಿಸಬಹುದಾದ ಸಾಮಾಜಿಕ ಒಳನುಡಿಗಳು; ಉದಾ.ಗೆ ಗೌಡ, ಹಾಲಕ್ಕಿ, ಹವ್ಯಕ, ಕೋಟ, ಕುಂಬಾರ, ಲಿಂಗಾಯತ, ಬ್ರಾಹ್ಮಣ, ಹರಿಜನ ಕನ್ನಡ ಮುಂತಾದವುಗಳನ್ನು ಗುರುತಿಸಬಹುದ
5. ಸಾಂದರ್ಭಿಕ (ಒಳ)ನುಡಿಗಳು
• ವಿಶೇಷ ತಿಳುವಳಿಕೆಯನ್ನು ಒಂದು ಮೊತ್ತವಾಗಿ ಸೂಚಿಸುವ ಪರಿಕಲ್ಪನೆಗಳನ್ನು ಸಾಂದರ್ಭಿಕ ನುಡಿಗಳೆಂದು ಹೇಳಬಹುದು.
• ಬಡಿಗಾರಿಕೆ, ಕಮ್ಮಾರಿಕೆ, ಮೀನುಗಾರಿಕೆ, ನೇಕಾರಿಕೆ, ವ್ಯವಸಾಯ, ಬೇಟೆಗಾರಿಕೆ, ಶಿಕ್ಷಣ, ಸಾಂಸ್ಕೃತಿಕ ಚಳಕಗಳು, ವಾಣಿಜ್ಯ, ವಿಜ್ಞಾನ ಮುಂತಾದವುಗಳನ್ನು ಸಾಂದರ್ಭಿಕ ಒಳನುಡಿಗೆ ಉದಾಹರಣೆಗಳನ್ನಾಗಿ ಉಲ್ಲೇಖಿಸಬಹುದು.
ಒಳನುಡಿಗಳ ಅಧ್ಯಯನದ ಪ್ರಯೋಜನವನ್ನು ಹಲವು ಬಗೆಯಲ್ಲಿ ವಿವರಿಸಬಹುದು. ಈ ಕುರಿತು ಮುಂದಿನ ಅಂಕಣದಲ್ಲಿ ವಿವರವಾಗಿ ಬರೆಯುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

