ಭಾವ ಭೈರಾಗಿ
ಕವಿತೆ | ಒಲವು

- ಮೂಲ : ಪಾಬ್ಲೋ ನೆರೂಡಾ, ಅನುವಾದ : ತೇಜಶ್ರೀ
ಹೆಣ್ಣೆ, ನಾನು ನಿನ್ನ ಮಗುವಾಗಬೇಕಿತ್ತು, ಕುಡಿಯಲು ಹಾಲು ನಿನ್ನೆದೆಯಿಂದ, ಮೊಗೆಮೊಗೆದು ಕುಡಿವಂತೆ ಜೀವಜಲವ ತಿಳಿನೀರ ಬಾವಿಯಿಂದ,
ಸನಿಹದಿಂದ ನೋಡಬಹುದಿತ್ತು, ಅನುಭವಿಸಬಹುದಿತ್ತು ನಿನ್ನ ಕಂಕುಳಲಿ ನಾನು ಹಸುಳೆ, ನಿನ್ನ ಹೊನ್ನುನಗೆ ನಿನ್ನ ಹರಳುದನಿ ಹಾಗೆ ಪಡೆಯುವುದೆ ಚಂದ.
ನರನಾಡಿಗಳಲ್ಲಿ ನಿನ್ನ ಸಂಚಲನ ನದಿಯಲ್ಲಿ ಹರಿಯುವ ದೇವರ ಹಾಗೆ,
ಮಣ್ಣುಸುಣ್ಣಗಳಿಂದ ಸವೆದ ಮೂಳೆಗಳಾಗು ಆಗಲೂ ನನಗಿಷ್ಟ ನೀನು ಹೀಗೆ,
ಸುಮ್ಮನೆ ಚಲಿಸುವೆ ನೀನು ನೆನಪಿನ ನೆಲದಲ್ಲಿ ನೋವು ಕೊಡದ ಹಾಗೆ,
ಕವಿತೆ ಸಾಲುಗಳಲ್ಲಿ ಮೈಪಡೆವೆಯಲ್ಲಿ ಕೊಳೆಕಸರ ಲೇಪವಿರದೆ, ಹೀಗೆ.
ಹೇಗೆಲ್ಲ ಎಷ್ಟೆಲ್ಲ ಪ್ರೀತಿಸುತ್ತೇನೆ ನಿನ್ನ
ನನ್ನಂತೆ ಒಲಿದವರಿಲ್ಲ ನಿನ್ನ!
ಸಾವು ಬಂದರು ನನಗೋ ನಿನಗೋ
ಇನ್ನಷ್ಟು ಪ್ರೀತಿಸುವೆ ನಿನ್ನ
ಮತ್ತಷ್ಟು ಮುಗಿಲಷ್ಟು
ಅದರ ಮೇಲೆ
ಇನ್ನಷ್ಟು.
ಕವಿತೆಯ ಶೀರ್ಷಿಕೆ : ‘ಲವ್, Book of Twilight ಕೃತಿಯಿಂದ. ಅನುವಾದ : Ilan Stavans
( ಕವಯಿತ್ರಿ, ಅನುವಾದಕಿ ತೇಜಶ್ರೀ ಅವರ “ನನ್ನೊಳಗಿನ ನಿನ್ನ ನಡಿಗೆ – ಪಾಬ್ಲೂ ನೆರೂಡಾ ಕವಿತೆಗಳು ಪುಸ್ತಕದಿಂದ ‘ಒಲವು‘ ಕವಿತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪಲ್ಲವ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಯಾವ ಕಾಲದ ಶಾಸ್ತ್ರವೇನು ಹೇಳಿದರೇನು..?

- ಕುವೆಂಪು
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !
ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?
ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?
ಅಂತು ಮನು ತಾನು ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!
ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ .
ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !
ನಂಬದನು; ಅದನುಳಿದು ಋಷಿಯು ಬೇರಿಲ್ಲ!
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮೆಗೆ ಶ್ರೀಧರ್ಮಸೂತ್ರ !(ರಾಷ್ಟ್ರಕವಿ ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯ’ ಕವನಸಂಕಲನದಿಂದ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವಳೀಗ ಕಾಯುವುದಿಲ್ಲ

- ಶಮೀಮ ಕುತ್ತಾರ್, ಮಂಗಳೂರು
ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.
ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.
ಬಲದ ಬಲೆಯಾಗಿ
ಬಗಲಲ್ಲಿ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.
ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.
ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.
ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…
ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..
ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಇಷ್ಟಂತೂ ಹೇಳಬಲ್ಲೆ..!

- ರಂಗಮ್ಮ ಹೊದೇಕಲ್, ತುಮಕೂರು
ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!
ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!
ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!
ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!
ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!
ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!
ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!
ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!
ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!
ನಾವು ಈ ನೆಲದ ಮಕ್ಕಳು
ಬೆಂಕಿಯೂ.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಅವಹೇಳನಕಾರಿ ಹೇಳಿಕೆ ; ಲೋಕಿಕೆರೆ ನಾಗರಾಜ್ ಕೂಡಲೇ ಕ್ಷಮೆ ಕೇಳಬೇಕು : ಸವಿತಾ ಹುಲ್ಲುಮನೆ ಗಣೇಶ್ ಆಗ್ರಹ
-
ದಿನದ ಸುದ್ದಿ3 days ago
ದೇಶಾದ್ಯಂತ 11 ದಿನಗಳ ಕಾಲ ತಿರಂಗ ಯಾತ್ರೆ
-
ದಿನದ ಸುದ್ದಿ5 days ago
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತ : ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
-
ದಿನದ ಸುದ್ದಿ4 days ago
ದಾವಣಗೆರೆ | ಮುಂಗಾರು ವಿಪತ್ತು ನಿರ್ವಹಣೆಗೆ ಸಿದ್ದತೆ, ಸಿಡಿಲಬ್ಬರ ಮುನ್ನೆಚ್ಚರಿಕೆಗೆ ಆಪ್ ಅಳವಡಿಸಿಕೊಳ್ಳಲು ಸಲಹೆ
-
ದಿನದ ಸುದ್ದಿ3 days ago
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರವು : ಪ್ರಧಾನಿ ನರೇಂದ್ರ ಮೋದಿ
-
ದಿನದ ಸುದ್ದಿ4 days ago
ದಾವಣಗೆರೆ | ಡಿ.ಇ.ಎಲ್.ಇಡಿ. ದಾಖಲಾತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಚನ್ನಗಿರಿ | ಇದೇ 15 ರಂದು ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ3 days ago
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ