ದಿನದ ಸುದ್ದಿ
ಹೊಸ ಚರಿತ್ರೆ ಬರೆಯಲಿರುವ ಜನವರಿ-26
ಸ್ವಲ್ಪ ನೇರ ಮತ್ತು ವ್ಯಕ್ತಿಗತ ಪ್ರಶ್ನೆ, ಆ ದಿನಕ್ಕಾಗಿ ತಾವೇನು ಮಾಡಬಹುದು?
ಆತ್ಮೀಯರೆ,
“ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ.
ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ. ಹರಿಯಾಣಾದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರಾಕ್ಟರ್ ಹೊರಟು ಬರಬೇಕೆಂದು ಖಾಪ್ ಪಂಚಾಯಿತಿಗಳೇ ಘೋಷಿಸಿಯಾಗಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹರಾಷ್ಟ್ರ ಎಲ್ಲಾ ಕಡೆಯಿಂದ ಜನರು ಬಂದು ಸೇರುವುದು ಈಗಾಗಲೇ ಪ್ರಾರಂಭವಾಗಿದೆ. ರೈತರು ಶಪಥ ಗೈದಿದ್ದಾರೆ. ಸಾಯುತ್ತೇವೆ ಆದರೆ ಹಿಂಸೆಗೆ ಇಳಿಯುವುದಿಲ್ಲ.
ಈ ಅಹಿಂಸಾತ್ಮಕ ಜನಸಾಗರವನ್ನು ಎದುರಿಸುವ ನೈತಿಕ ಶಕ್ತಿ ಸರ್ಕಾರಕ್ಕಿಲ್ಲ. ಅದರ ಯಾವ ಚಾಣಕ್ಯ ನೀತಿಗಳೂ ಫಲಿಸುತ್ತಿಲ್ಲ. ಅದರೆ ಅದಾನಿ ಅಂಬಾನಿಗಳ ಸೇವೆ ಬಿಡಲು ಸಿದ್ಧವಿಲ್ಲ. ಪರಿಣಾಮ ಹಸ್ತಿನಾಪುರದಲ್ಲಿ ಇತಿಹಾಸ ಮರುಕಳಿಸಲಿದೆ. ಜನವರಿ 26ರಂದು ದೆಹಲಿಯಲ್ಲಿ ಶಾಂತಿಯುತ ಕುರುಕ್ಷೇತ್ರ ನಡೆಯಲಿದೆ. ಫಲಿತಾಂಶವನ್ನು ಸಧ್ಯಕ್ಕೆ ವರ್ತಮಾನಕ್ಕೆ ಬಿಡೋಣ. ಈಗ ನಮ್ಮ ಮುಂದಿನ ಚರ್ಚೆ, ಅಂದಿಗಾಗಿ ಇಂದು ಮತ್ತು ಇಲ್ಲಿ ನಾವೇನು ಮಾಡೋಣ?
ದೆಹಲಿ ಹತ್ತಿರವಿದ್ದಿದ್ದರೆ, ಮೊದಲಿನಂತೆ ಸರಾಗವಾಗಿ ರೈಲು ಹತ್ತಿ ಟಿಕೆಟ್ ಇಲ್ಲದೆ ದೆಹಲಿಗೆ ಪಯಣಿಸುವಂತಿದ್ದರೆ, ನಾವೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊರಡಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಸಾಧ್ಯವಿರುವವರು ಅದಕ್ಕೂ ಹೊರಟರೆ ಒಳ್ಳೆಯದೆ. ಆದರೆ ನಾವೆಲ್ಲರೂ ಸೇರಿ ಅದೇ ದಿನ ಕರ್ನಾಟಕದಲ್ಲಿ ದುಡಿವವರ ದನಿ ಮೊಳಗುವಂತೆ ಮಾಡಲೇಬೇಕು. ಇದಕ್ಕಾಗಿಯೇ ಜನವರಿ 26ರಂದು ಬೆಂಗಳೂರಿನಲ್ಲಿ ರೈತ ಮತ್ತು ಸಮಸ್ತ ದುಡಿವ ಜನರ ಗಣರಾಜ್ಯೋತ್ಸವ ಪೆರೇಡಿಗೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಬೇಕು. ವೈಯಕ್ತಿಕವಾಗಿ ನಾನೇನು ಮಾಡಲಿದ್ದೇನೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕು.
ಕೆಲವು ಸಲಹೆಗಳು
1. ಜನವರಿ 25-26ನ್ನು ಈ ದೇಶದ ದುಡಿವ ಜನರಿಗೆಂದು ತೆಗೆದಿಡಲು ಸಾಧ್ಯವೆ? ನಿಮ್ಮ ಬಳಿ ಇರುವ ವಾಹನದ ಜೊತೆ, [ಕಾರು, ಟ್ರಾಕ್ಟರ್, ಜೀಪು, ಮೋಟಾರ್ ಬೈಕ್, ಸೈಕಲ್ ಯಾವುದಾದರೂ ಸರಿ] ಸಾಧ್ಯವಿರುವ ಮಿತ್ರರನ್ನು, ಕುಟುಂಬದ ಸದಸ್ಯರನ್ನು, ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದು ಸೇರಲು ಸಿದ್ಧತೆ ಮಾಡಿಕೊಳ್ಳಬಹುದೆ?
2. ನಿಮ್ಮ ಊರಿನಲ್ಲಿ ಈಗಿನಿಂದಲೇ ನಿಮ್ಮದೇ ರೀತಿಯಲ್ಲಿ ಈ ಸಂದೇಶ ಎಲ್ಲರಿಗೂ ತಲುಪಿಸುವ ಕೆಲಸವನ್ನು ತಾವು ಮಾಡಬಹುದೆ? ನಾಳೆಯಿಂದ ಬರಲು ಪ್ರಾರಂಭವಾಗುವ ಪೋಸ್ಟರುಗಳನ್ನು ಶೇರ್ ಮಾಡಬಹುದೆ? ಕರಪತ್ರಗಳನ್ನು ಮಿತ್ರರಿಗೆ, ನೆರೆಹೊರೆಯವರಿಗೆ, ಏರಿಯಾಗಳಿಗೆ, ಸಾಧ್ಯವಾದರೆ ಹಳ್ಳಿಗಳಿಗೆ ತಲುಪಿಸಲು ಪ್ರಯತ್ನಿಸಬಹುದೆ?
3. ನಿಮ್ಮ ಸುತ್ತಮುತ್ತ ಇರುವ ಸಂಘಟನೆಗಳ ಸಭೆ ಕರೆದು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಚರ್ಚಿಸಬಹುದೆ? ನಿಮ್ಮ ಪ್ರದೇಶದಲ್ಲಿ ನಿಮ್ಮದೇ ರೀತಿಯಲ್ಲಿ ಪ್ರಚಾರ ಜಾಥ ಹಮ್ಮಿಕೊಳ್ಳಬಹುದೆ?
4. ಬೆಂಗಳೂರಿನಲ್ಲಿ ಸುಮಾರು ಸಿದ್ಧತೆಯ ಕೆಲಸಗಳಿದ್ದು ವಾಲಂಟೀರ್ ಆಗಿ ಕೆಲಸ ಮಾಡಲು ಕೆಲವು ದಿನ ಮೊದಲು ಬೆಂಗಳೂರಿಗೆ ಬರಬಹುದೆ? ನಿಮ್ಮ ಮಿತ್ರರನ್ನು ಅಥವ ಸಂಘಟನೆಯ ಕಾರ್ಯಕರ್ತರನ್ನೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಬಹುದೆ?
4. ದೂರದಿಂದ ಬರುತ್ತಿರುವ ಟ್ರಾಕ್ಟರುಗಳಿಗೆ ಡೀಸಲ್ ಹಾಕಿಸಲು, ಊಟದ ವ್ಯವಸ್ಥೆ ಮಾಡಲು, ಪ್ರಚಾರ ಸಾಮಗ್ರಿಯನ್ನು ಸಿದ್ಧಗೊಳಿಸಲು ಹಣ ಸಂಗ್ರಹ ಮಾಡಿಕೊಡಬಹುದೆ?
5. ಅಂದಿನ ಮೆರವಣಿಗೆಯನ್ನು ದೇಶಪ್ರೇಮದ ಸಂಕೇತವಾಗಿಸಲು ಒಂದಿಷ್ಟು ರಾಷ್ಟ್ರ ಧ್ವಜಗಳನ್ನು ಮಾಡಿಸಿ ಅಥವ ಕೊಂಡು 26ಕ್ಕೆ ತರಬಹುದೆ?
6. ನೀವು ಈ ಹೋರಾಟವನ್ನು ಬೆಂಬಲಿಸಿ ಮತ್ತು 26ಕ್ಕೆ ಬೆಂಗಳೂರು ಬರುವಂತೆ ಆಹ್ವಾನಿಸಿ, ನಿಮ್ಮದೇ ರೀತಿಯಲ್ಲಿ ಪುಟ್ಟ ವಿಡಿಯೋ ಅಥವ ಬರವಣಿಗೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದೆ? ನಿಮಗೆ ಸಂಪರ್ಕದಲ್ಲಿರುವ ಪರ್ಯಾಯ ಮೀಡಿಯಾ ಅಥವ ಮುಖ್ಯವಾಹಿನಿ ಮೀಡಿಯಾಗಳಲ್ಲಿ ಇರುವ ಜನಪರ ಗೆಳೆಯ, ಗೆಳತಿಯರಿಗೆ ಕರೆ ಮಾಡಿ ಇದನ್ನು ತಮ್ಮದೇ ರೀತಿಯಲ್ಲಿ ಸುದ್ದಿ ಮಾಡುವಂತೆ ಕೇಳಿಕೊಳ್ಳಬಹುದೆ?
7. ಜನವರಿ 16ರಂದು ಇದರ ಕರ್ಟನ್ ರೈಸರ್ ಕಾರ್ಯಕ್ರಮ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೆ ದೆಹಲಿ ಹೋರಾಟಕ್ಕೆ ಮುಂದಾಳತ್ವ ನೀಡುತ್ತಿರುವ “ಸಂಯುಕ್ತ ಕಿಸಾನ್ ಮೋರ್ಚಾದ” ತಂಡ ಆಗಮಿಸಲಿದೆ. ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಸಮಾಜದಲ್ಲಿ ಹರಿಬಿಡಲಾಗಿರುವ ಸುಳ್ಳು ಪ್ರಚಾರವನ್ನು ಮುಕ್ತ ಸಂವಾದದಲ್ಲಿ ಬಯಲುಗೊಳಿಸಲಿದ್ದಾರೆ. ಇದರಲ್ಲಿ ತಾವೂ ಭಾಗವಹಿಸಬಹುದೆ?
8. ನೇರವಾಗಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿಸಲು ಹೋರಾಟಗಾರರ ತಂಡವೊಂದು 14ರಂದು ದೆಹಲಿಗೆ ಹೊರಟಿದ್ದು ಅದರ ಜೊತೆ ತಾವೂ ದೆಹಲಿಗೆ ಹೊರಡಬಹುದೆ?
ಆಯ್ಕೆಯ ಸ್ವಾತಂತ್ರ್ಯ ತಮ್ಮದು, ಮೇಲೆ ನಾನು ಸೂಚಿಸಿರುವ ವಿಧಾನವನ್ನೂ ಬಿಟ್ಟು ಬೇರೆಯದೇ ರೀತಿಯಲ್ಲಿ ನೀವು ಕೈಗೂಡಿಸಬಹುದು. ಕೈಗೂಡಿಸುತ್ತೀರಿ ಎಂಬ ಪೂರ್ಣ ವಿಶ್ವಾಸವೂ ಇದೆ. ಇದರ ಮಹತ್ವವನ್ನು ಒತ್ತಿ ಹೇಳಲು ಮತ್ತು ಸಾಧ್ಯತೆಗಳನ್ನು ತೆರೆದಿಡಲು ಮಾತ್ರ ಇದನ್ನು ಬರೆದಿದ್ದೇನೆ. ಜನವರಿ 26 ರಂದು ತಪ್ಪದೇ ಬೆಂಗಳೂರಿನಲ್ಲಿ ಭೇಟಿಯಾಗೋಣ. ಒಂದು ವೇಳೆ ನೀವು ದೆಹಲಿ ಕುರುಕ್ಷೇತ್ರಕ್ಕೇ ಹೋಗುವುದಾದರೆ ಬಂದ ನಂತರ ಭೇಟಿಯಾಗೋಣ.
-ಸಿ.ಎಸ್.ದ್ವಾರಕಾನಾಥ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್
ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.
“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.
ಶ್ರೀ ಎ. ಜಯಪ್ಪ ಅವರು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.
ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ4 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ4 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ6 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ4 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ3 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ2 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

