ಬಹಿರಂಗ
ದಲಿತರ ಅವ್ವ ರಮಾಬಾಯಿ ಅಂಬೇಡ್ಕರ್ ಮಾಡಿದ ಮೊಟ್ಟಮೊದಲ ಸಾರ್ವಜನಿಕ ಭಾಷಣ
ರಮಾಬಾಯಿ ಅಂಬೇಡ್ಕರ್ ರವರಿಗೆ ಜನುಮ ದಿನದ ಶುಭಾಶಯಗಳು
ಆ ದಿನದ ಬೆಳಗು ತುಂಬ ಉತ್ಸಾಹದಿಂದಲೇ ಮೂಡಿಬಂತು. ಇಂದು ಮಹಾಮಾತೆ ರಮಾಯೀ ಭೀಮರಾವ್ ಅಂಬೇಡ್ಕರ್ ಸಮಾಜದ ಮಹಿಳಾ ಮಂಡಲದಲ್ಲಿ ಭಾಷಣ ಮಾಡುವವರಿದ್ದರು. ಮನೆಯ ಎಲ್ಲ ಕೆಲಸಗಳನ್ನು ಮುಗಿಸಿದ ರಮಾಯಿ ಸಂಜೆ ಆಗಮಿಸಿದ ಮಹಿಳಾ ಮಂಡಳದ ಇಬ್ಬರು ಹೆಣ್ಣುಮಕ್ಕಳೊಂದಿಗೆ ನಡೆದಳು. ಹಾಗೆ ಹೋಗುವುದಕ್ಕಿಂತ ಮುಂಚೆ ಆಕೆ ತನ್ನ ಮಾವನ (ಸುಬೇದಾರ ರಾಮಜೀ) ಪ್ರತಿಮೆಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಳು. ಮನಸ್ಸಿನಲ್ಲಿಯೇ ತನ್ನ ಪತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿದಳು. ಮಹಿಳಾ ಮಂಡಲದ ಸಭೆಯ ವೇದಿಕೆಯೇರಿದ ರಮಾಯಿ ಮಾತನಾಡತೊಡಗಿದಳು.
“ನನ್ನ ಆತ್ಮೀಯ ತಾಯಂದಿರೆ ಮತ್ತು ಸಹೋದರಿಯರೆ,
ಇಂದು ನಾನು ಮೊಟ್ಟಮೊದಲ ಬಾರಿಗೆ ಮಾತನಾಡಲು ನಿಂತಿದ್ದೇನೆ. ಮಾತಾಡುವಾಗ ಏನಾದರೂ ತಪ್ಪು-ತಡೆಗಳುಂಟಾದರೆ ತಿದ್ದಿಕೊಳ್ಳಿ. ನಾವು ಪ್ರತಿನಿತ್ಯದ ಬದುಕಿನಲ್ಲಿ ನೋಡುವುದೇನೆಂದರೆ, ಪತಿ ಯಾವ ಕಾರ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುತ್ತಾನೋ ಆ ಭಾರವನ್ನು ಸಹಧರ್ಮಿಣಿಯಾಗಿ ಪತ್ನಿಯರೂ ಹೆಗಲು ಕೊಟ್ಟು ಹೊತ್ತುಕೊಳ್ಳಬೇಕಾಗುತ್ತದೆ. ಇಂಥ ಅನುಭವಗಳು ನನ್ನ ಬದುಕಿನಲ್ಲಿ ಸಾಕಷ್ಟು ಇವೆ ಎಂದು ನನಗನ್ನಿಸುತ್ತದೆ. (ಜನಸಮುದಾಯದ ಕರತಾಡನ)
ನನ್ನಂತಹ ಮದುವೆಯಾಗಿರುವ ಹೆಣ್ಣಿಗೆ ಪತಿಸೇವೆಯ ಹೊರತು ಈ ಜಗತ್ತಿನಲ್ಲಿ ಮತ್ತೇ ಕೆಲವು ಸೇವಾಕಾರ್ಯಗಳು ಇವೆ ಎಂಬ ಅರಿವು ಇಲ್ಲಿಯವರೆಗೆ ನನಗಿರಲಿಲ್ಲ. ಆದರೆ ಇಂದು ಈ ಭವ್ಯ ವೇದಿಕೆಯ ಮೇಲೆ ನಿಂತು, ಸೇರಿರುವ ಬಹುದೊಡ್ಡ ಸಂಖ್ಯೆಯ ಜನಸಮುದಾಯವನ್ನು ಕಂಡಾಗ ನನಗನ್ನಿಸುತ್ತಿದೆ ; ‘ಸಕಲರಲ್ಲೂ ಅರಿವು ತುಂಬಿಯೇ ಬಿಡಬೇಕು’ (ಶಹಾಣೆ ಕರೂಣಿ ಸೋಡಾವೆ ಸಕಲಜನ)….. (ಜನಸಮುದಾಯ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಲೇ ಘೋಷಣೆ ಕೂಗತೊಡಗಿದರು ; ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
ನನಗೆ ಇಂತಹ ಜೈಕಾರ ಹಾಕಬೇಡಿ. ಇನ್ನೂ ನಾನು ನಿಮಗಾಗಿ ಏನನ್ನೂ ಮಾಡಿದವಳಲ್ಲ. ಆ ಬಗ್ಗೆ ನನಗೆ ವಿಷಾದವೆನಿಸುತ್ತದೆ. ಇರಲಿ. ನಮ್ಮೆಲ್ಲರ ಮುಂದಾಳು ಡಾ. ಬಾಬಾಸಾಹೇಬ ಅಂಬೇಡ್ಕರರು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ ; ನಾವು ಹೆಣ್ಣುಮಕ್ಕಳೆಲ್ಲ ಮುಂದೆ ಬಂದು, ಸಮಾಜದ ಕ್ರಾಂತಿ-ಚಳುವಳಿಯಲ್ಲಿ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿ ಭಾಗಿಯಾಗಬೇಕು. ಯಾಕೆಂದರೆ ಹೆಣ್ಣುಮಕ್ಕಳು ಏಕನಿಷ್ಠರಾಗಿರುತ್ತಾರೆ. ಯಾವುದೇ ಚಳುವಳಿಯಲ್ಲಿ ಹೆಣ್ಣುಮಕ್ಕಳು ಸಹಭಾಗಿಯಾಗಬೇಕು. ಇದರ ಹೊರತಾಗಿ ಚಳುವಳಿಯ ಹೆಜ್ಜೆ ಮುಂದೆ ಸಾಗುವುದಿಲ್ಲ.(ಜನರಿಂದ ಪ್ರಚಂಡ ಕರತಾಡನ) ಜಗತ್ತಿನ ಕ್ರಾಂತಿ-ಚಳುವಳಿ ಯಾವುದರ ಮೇಲೆ ನಡೆಯುತ್ತವೆ ? ತ್ಯಾಗದ ಮೇಲೆ. ಅದು ಎಂಥದ್ದೇ ತ್ಯಾಗ ಇರಲಿ, ಚಳುವಳಿಗಾರರು ಎಷ್ಟೋ ಅಗ್ನಿದಿವ್ಯ ಹಾದು ಬರಬೇಕಾಗುತ್ತದೆ. ಇಲ್ಲದಿದ್ದರೆ ಬಯಸಿದ ಬಂಗಾರ ದೊರೆಯಲಾರದು. ಈ ಬಗ್ಗೆ ಒಮ್ಮೆ ಡಾ. ಅಂಬೇಡ್ಕರ ಅವರು ಹೇಳಿದ ಒಂದು ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. ಇದು ಗ್ರೀಕ್ ಪುರಾಣದಲ್ಲಿ ಬರುವ ಕತೆ.
ಡಿಮೇಟರ್ ಹೆಸರಿನ ದೇವತೆಯೊಬ್ಬಾಕೆ ಮನುಷ್ಯರೂಪ ಧರಿಸಿ ಭೂಮಿಗೆ ಬಂದಳು. ಆಕೆಯನ್ನು ಅಲ್ಲಿಯ ರಾಣಿಯೊಬ್ಬಳು ದಾಸಿಯನ್ನಾಗಿ ಇಟ್ಟುಕೊಂಡು ತನ್ನ ಬಾಲಕ ಮಗನ ಉಸ್ತುವಾರಿ ನೋಡಿಕೊಂಡಿರಲು ಹೇಳಿದಳು. ರಾಣಿಯ ಆ ಮಗನನ್ನು ‘ದೇವ’ನನ್ನಾಗಿಸಬೇಕು ಎಂಬ ಹಂಬಲ ಆ ದೇವತೆಗೆ ಉಂಟಾಯಿತು. ಹೀಗಾಗಿ ಆಕೆ ದಿನವೂ ರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಎಲ್ಲ ಬಾಗಿಲು-ಕಿಟಕಿಗಳನ್ನು ಮುಚ್ಚುತ್ತಿದ್ದಳು. ತೊಟ್ಟಿಲಲ್ಲಿ ಮಲಗಿದ ಮಗುವನ್ನು ಹೊರತೆಗೆದು, ಅದರ ಮೈಮೇಲಿನ ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿ ಬಿಸಿ ಬೂದಿಯ ಮೇಲೆ ಒಂದಿಷ್ಟು ಕಾಲ ಆ ಮಗುವನ್ನು ಮಲಗಿಸುತ್ತಿದ್ದಳು ! ಕ್ರಮೇಣ ಬೆಂಕಿಯ ಬಿಸಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಮಗುವಿಗೆ ಬಂತು. ಅದರ ಬಲ ವೃದ್ಧಿಸತೊಡಗಿತು. ಆ ಮಗುವಿನಲ್ಲಿ ಅತ್ಯಂತ ತೇಜಸ್ವಿಯಾದ ದೈವೀ ಅಂಶ ವಿಕಸಿತವಾಗತೊಡಗಿತ್ತು. ಆದರೆ ಒಂದು ರಾತ್ರಿ ಆ ಮಗುವಿನ ತಾಯಿ ರಾಣಿ ಅಚಾನಕ್ಕಾಗಿ ಆ ಕೋಣೆಯನ್ನು ಹೊಕ್ಕಳು. ಅಲ್ಲಿ ನಡೆಯುತ್ತಿದ್ದುದ್ದನ್ನೆಲ್ಲ ಕಣ್ಣಾರೆ ಕಂಡ ಆಕೆ ತುಂಬ ನೊಂದುಕೊಂಡಳು. ಆಕೆ ತಕ್ಷಣ ತನ್ನ ಮಗುವನ್ನು ಒಲೆಯ ಮೇಲಿನಿಂದ ಎತ್ತಿ ಎದೆಗವಚಿಕೊಂಡಳು. ಆ ರಾಣಿಗೆ ಆಕೆಯ ಮಗುವೇನೋ ದೊರೆಯಿತು. ಆದರೆ ಸಾಮರ್ಥ್ಯಶಾಲಿ ದೇವನಾಗಬೇಕಿದ್ದ ದೇವನನ್ನೇ ಆಕೆ ಕಳೆದುಕೊಂಡಳು..!
ಈ ಕತೆಯ ತಾತ್ಪರ್ಯ ಇಷ್ಟೆ ; ಕುಲುಮೆಯಲ್ಲಿ ಕಾಯದೆ ದೇವತನ ಬರುವುದಿಲ್ಲ. ಬೆಂಕಿ, ಮನುಷ್ಯನನ್ನು ಶುದ್ಧಿಗೊಳಿಸುತ್ತದೆ ಮತ್ತು ಮನುಷ್ಯನಲ್ಲಿ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಅಸ್ಪೃಶ್ಯ ಎನಿಸಿಕೊಂಡಿರುವವರು ಕಡುಕಷ್ಟ ಮತ್ತು ತ್ಯಾಗದ ಅಗ್ನಿದಿವ್ಯ ಸಹಿಸದೇ ಉದ್ಧಾರವಾಗಲಾರರು. ನೀವು ನಿಮ್ಮನ್ನು ಅಸ್ಪೃಶ್ಯ, ಕೀಳು ಎಂದುಕೊಳ್ಳಬೇಡಿ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ. ‘ಮಗನಾಗಬೇಕು ತೇಜ ; ಮೂರು ಲೋಕದಲ್ಲೂ ಇರಬೇಕು ಆತನದೇ ಧ್ವಜ’ ಎಂಬ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ನುಮುಂದೆ ನಮ್ಮ ಮಕ್ಕಳನ್ನು ಬೆಳೆಸಬೇಕು. ಅದರಲ್ಲೇ ನಮ್ಮ ಉದ್ಧಾರವಿದೆ. ಇಷ್ಟು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ” (ಪ್ರಚಂಡ ಕರತಾಡನ. ಜಯಘೋಷ ‘ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
ದಲಿತರ ಅವ್ವ : ರಮಾಬಾಯಿಯ ಎರಡನೆಯ ಮತ್ತು ಅಂತಿಮ ಭಾಷಣ
ಆ ದಿನ 29ನೇ ಜನೇವರಿ 1932 !
ಡಾ. ಬಾಬಾಸಾಹೇಬ ಅಂಬೇಡ್ಕರರು ಕುಳಿತ್ತಿದ್ದ ಲಂಡನ್ನಿನ ಹಡಗು ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ ಮುಂಬಾಯಿಯ ಬಂದರಿಗೆ ಬಂದು ತಲುಪಿತು. ಸೇರಿದ ಸಾವಿರಾರು ಅನುಯಾಯಿಗಳ ಹೃದಯ ಆನಂದದಿಂದ ತುಂಬಿ ತುಳುಕಿತು !
ಆ ದಿನ ನಸುಕಿನಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರ ನಿಷ್ಟಾವಂತ ಅನುಯಾಯಿಗಳೂ, ಸಂಬಂಧಿಕರೂ ಹಾಗೂ ಹಿತಚಿಂತಕರು ಡಾ. ಬಾಬಾಸಾಹೇಬ ಅಂಬೇಡ್ಕರರ ಹಾದಿಯನ್ನು ತುಂಬ ಉತ್ಸಾಹಿತರಾಗಿಯೇ ಕಾಯುತ್ತಿದ್ದರು. ಪ್ರತಿಯೊಬ್ಬರೂ ಕೈಯಲ್ಲಿ ಹೂಮಾಲೆ-ಹೂಗುಚ್ಛ ಹಿಡಿದುಕೊಂಡು ನಸುಕಿನ ಚಳಿಗೂ ಅಂಜದೆ ಶಾಂತವಾಗಿಯೇ ಕಾಲಿಡಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದರು.
ಆ ಜನಸಂದಣಿಯಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರ ಧರ್ಮಪತ್ನಿ ದಲಿತರ ಅವ್ವ ರಮಾಯಿ ನಿಂತಿದ್ದಳು ! ಸುವಾಸಿತ ಹೂವಿನಿಂದ ಮಾಡಲ್ಪಟ್ಟ ಮಾಲೆಯನ್ನು ಆಕೆ ಹಿಡಿದುಕೊಂಡು ತನ್ನ ‘ಸಾಹೇಬ’ರನ್ನು ಎದುರುಗೊಳ್ಳಲು ನಿಂತಿದ್ದಳು !ತನ್ನ ಸಾಹೇಬನನ್ನು ಯಾವಾಗ ಕಣ್ಣು ತುಂಬಿಕೊಳ್ಳುತ್ತೇನೆಯೋ ಎಂಬ ಕಾತರದಲ್ಲಿ ಆಕೆ ಇದ್ದಳು ! ಅಷ್ಟರಲ್ಲಿ ಗದ್ದಲ, ಜಯಕಾರ ಸುರುವಾದವು. ಡಾ. ಬಾಬಾಸಾಹೇಬ ಅಂಬೇಡ್ಕರರು ಹಡಗಿನಿಂದ ಇಳಿದು ಬರುತ್ತಿದ್ದರು. ಗಗನಭೇದಿ ಘೋಷಣೆ ಮುಳುಗತೊಡಗಿದವು ! ‘ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ !ಅಂಬೇಡ್ಕರ್ ಅಂಬೇಡ್ಕರ್ .. ದಲಿತರ ದೇವ ಅಂಬೇಡ್ಕರ್ ! ಮೊಟ್ಟಮೊದಲು ಸಮತಾ ಸೈನಿಕ ದಳವು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಹಾರ ಹಾಕಿ ಗೌರವ ವಂದನೆ ಸಲ್ಲಿಸಿತು.
ನೋಡು ನೋಡುವಷ್ಟರಲ್ಲಿಯೇ ಹೂಮಾಲೆಗಳನ್ನು ಹಿಡಿದು ನಿಂತಿದ್ದ ಜನಸಮೂಹ ನಾ ಮುಂದು ತಾ ಮುಂದು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಸುತ್ತುವರಿಯಿತು ! ಅಪರಿಮಿತ ಭಕ್ತಿ, ಪ್ರೇಮ ಮತ್ತು ನಿಷ್ಟೆಯ ಸಂಕೇತವಾಗಿ ಹೂಮಾಲೆಗಳು ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳನ್ನು ಅಲಂಕರಿಸಿದವು. ರಮಾಯಿ ಮಾತ್ರ ಈ ಎಲ್ಲ ಗದ್ದಲದಿಂದ ಒಂದಿಷ್ಟು ದೂರವೇ ಉಳಿದಿದ್ದಳು ! ತನ್ನ ‘ಸಾಹೇಬ’ನ ಮೇಲೆ ಸೂಸುತ್ತಿದ್ದ ಅಪಾರ ಜನರ ಅಪರಿಮಿತ ಪರಿಶುದ್ಧ ಪ್ರೇಮವನ್ನು ಆಕೆ ಮೊದಲ ಬಾರಿ ನೋಡುತ್ತಿದ್ದಳು ! ನೋಡುತ್ತ ನೋಡುತ್ತ ಆಕೆಯ ಕಣ್ಣಾಲಿಗಳು ತುಂಬಿದವು ! ಆನಂದಭಾಷ್ಟ ಉದರಿದವು !ಎಲ್ಲರೂ ಮಾಲೆ ಹಾಕಿ ಮುಗಿದಾದ ಮೇಲೆ ರಮಾಯಿ ಕೊನೆಯವಳಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬಳಿಗೆ ಹೋದಳು !ಅಖಂಡವಾಗಿ ನಿಂತ ಡಾ. ಬಾಬಾಸಾಹೇಬ ಅಂಬೇಡ್ಕರರು !ರಮಾಬಾಯಿ ತಲೆಯೆತ್ತಿ ಕೂಡ ನೋಡಲಿಲ್ಲ !ಕೈಯಲ್ಲಿರುವ ಸುವಾಸಿತ ಮಾಲೆಯನ್ನು ಆಕೆ ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳಿಗೆ ಹಾಕಿದಳು !ಆದರೆ ಆಕೆ ದೃಷ್ಟಿ ಮಾತ್ರ ಅವರ ಪದತಲದಲ್ಲಿಯೇ ಇತ್ತು !ಹಗಲು-ರಾತ್ರಿಯೆನ್ನದೆ ಯಾವ ಮೂರ್ತಿಯ ಸೇವೆಯನ್ನು ಮಾಡಿದ್ದಳೋ ಅದೇ ಇಂದು ಎದುರಿಗೇ ನಿಂತಿದ್ದರೂ ಆಕೆ ಕಣ್ಣೆತ್ತಿಯೂ ಕೂಡ ನೋಡಲಿಲ್ಲ !ಹಾಗೆ ನೋಡುವುದಕ್ಕೆ ಆಕೆಯ ನಾಚಿಕೆ ಸ್ವಭಾವ ಮತ್ತು ಆಕೆ ಬಾಳಿದ ಸಂಸ್ಕಾರಗಳು ಅನುಮತಿಸಿರಲಿಕ್ಕಿಲ್ಲ !
ಆದರೆ…. ! ಈ ಹೃದಯಂಗಮವಾದ ಪ್ರಸಂಗವನ್ನು ನೋಡಿದ ಆಗ ಜನತಾ ಪತ್ರಿಕೆಯ ಸಂಪಾದಕರಾಗಿದ್ದ ಸಹಸ್ರಬುದ್ಧೆಯವರ ಚಾಣಾಕ್ಷ ಕಣ್ಣುಗಳು ಮರೆಯಲು ಸಾಧ್ಯವೇ ಇರಲಿಲ್ಲ ! ಸಹಸ್ರಬುದ್ಧೆಯವರು ಸಹಜವಾಗಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಕೊನೆಯಲ್ಲಿ ಮಾಲೆ ಹಾಕಿದ್ದು ಮತ್ತು ಮಾಲೆ ಹಾಕುವಾಗ ತಲೆಯೆತ್ತಿ ನೋಡದಿರುವುದಕ್ಕೆ ಕಾರಣ ಏನು ಎಂದು ರಮಾಯಿಗೆ ಕೇಳಿಯೇ ಬಿಟ್ಟರು ! ರಮಾಯಿಗೆ ಏನು ಹೇಳಬೇಕೆಂದು ಒಂದು ಕ್ಷಣ ತೋಚಲಿಲ್ಲ ! ಸಭೆಯಲ್ಲಿ ಮಾತನಾಡಬೇಕೆಂದರೆ ತನಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ ! ಮಾತನಾಡದಿದ್ದರೆ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಷ್ಠೆಗೆ ಧಕ್ಕೆ ಬರಬಹುದು ! ಹಾಗೆ ನೋಡಿದರೆ ರಮಾಯಿಯೇನೂ ಅರಿಯದ ಹೆಣ್ಣುಮಗಳಲ್ಲ ! ಆಕೆ ನಿಜವಾಗಿಯೂ ಚತುರಳೂ ಬುದ್ಧಿವಂತಳೂ ಆಗಿದ್ದಳು ! ಮರುಕ್ಷಣವೇ ಆಕೆಯ ಮೈಯಲ್ಲಿ ಮಿಂಚು ಹರಿದಾಡಿದ ಅನುಭವವಾಯಿತು. ಆಗ ಆಕೆ ತಡ ಮಾಡಲಿಲ್ಲ ; ತಟ್ಟನೇ ಎದ್ದು ಬಂದು ಮಾತನಾಡಲು ಆರಂಭಿಸಿದಳು !
“ಅಧ್ಯಕ್ಷಮಹೋದಯರೇ, ನನ್ನ ಪತಿಮಹಾದೇವರೆ ಹಾಗೂ ಇಲ್ಲಿ ಸೇರಿರುವ ನನ್ನ ಬಂಧು-ಭಗಿನಿಯರೆ, ಈಗ ತಾನೆ ಸಹಸ್ರಬುದ್ಧೆ ಸಾಹೇಬರು ನನಗೆ ಕೇಳಿರುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಮಾತನಾಡಲೇಬೇಕಿದೆ. ಅದಕ್ಕಾಗಿಯೇ ಎದ್ದಿರುವೆ. ಯಾರು ಸಾಹೇಬರನ್ನು ಯಾವಾಗಲೋ ಒಮ್ಮೆ ಕ್ವಚಿತ್ತಾಗಿ ನೋಡುತ್ತಾರೋ ಅವರೆಲ್ಲ ಅವರನ್ನು ನೋಡಲಿ … ನಾನೋ ಹಗಲು-ರಾತ್ರಿ ಸಾಹೇಬರ ದರ್ಶನ ಪಡೆದು ತೃಪ್ತಳಾದವಳು. ಆದ್ದರಿಂದ ಎಲ್ಲರೂ ಮೊದಲು ಮಾಲೆ ಹಾಕಿದ ಮೇಲೆ ನಾನು ಕೊನೆಯಲ್ಲಿ ಮಾಲೆ ಹಾಕಿದೆ. ಇದು ನಿಮಗೆಲ್ಲ ಗೊತ್ತು. ಇನ್ನು ಡಾ. ಅಂಬೇಡ್ಕರ್ ಸಾಹೇಬರು ಬಡಬಗ್ಗರ-ದೀನದಲಿತರ ಉದ್ದಾರಕ್ಕಾಗಿ ಪಣ ತೊಟ್ಟು ನಿಂತವರು. ನಾನು ಅವರ ಧರ್ಮಪತ್ನಿ. ಅವರ ಸಾಧನೆಗೆ ನನ್ನ ದೃಷ್ಟಿ ತಾಗಬಾರದೆಂಬ ಒಂದೇ ಉದ್ದೇಶದಿಂದ ನಾನು ಅವರ ಮುಖವನ್ನು ನೋಡದೇ ಬರೀ ಅವರ ಪಾದಗಳನ್ನು ಕಣ್ಣು ತುಂಬಿಕೊಂಡೆ.
ಈಗ ಹೇಳಿ ಬಂಧುಗಳೇ, ನಾನು ನೀಡಿದ ಉತ್ತರ ಸರಿಯೇ ? ಸರಿಯಾಗಿಯೇ ಇದ್ದೀತು ಮತ್ತು ಅದು ನಿಮ್ಮೆಲ್ಲರ ಜೊತೆ ಸಹಸ್ರಬುದ್ಧೆಯವರಿಗೂ ಸರಿತೋರಿದೆ ಎಂದು ನಂಬಿ ನಾನು ನನ್ನ ಈ ಭಾಷಣವನ್ನು ಮುಗಿಸುತ್ತೇನೆ. (ಪ್ರಚಂಡ ಕರತಾಡನ ಮತ್ತು ಜಯಕಾರ) ರಮಾಯಿಯ ಭಾಷಣ ಮುಗಿದ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರರು ಕೆಲವು ಮಾತುಗಳನ್ನಾಡಲು ಎದ್ದು ನಿಂತರು. ಸರಿಯಾಗಿಯೇ ಮಾತನ್ನು ಆರಂಭಿಸಿದ ಅವರು ಹೇಳತೊಡಗಿದರು ;”ಬಂಧುಗಳೇ, ದುಂಡುಮೇಜು ಪರಿಷತ್ತಿನಲ್ಲಿ ಸಾಧಿಸಿದ ಸಾಧನೆ ನನ್ನದಲ್ಲ ; ಅದು ಇಲ್ಲಿ ಸೇರಿರುವ ನನ್ನ ಎಲ್ಲ ಅಸಂಖ್ಯಾತ ಬಂಧು-ಭಗಿನಿಯರ ಸಾಧನೆ. ದುಂಡು ಮೇಜು ಪರಿಷತ್ತಿನಲ್ಲಿ ನಾನು ನಿರ್ವಹಿಸಿದ ಪಾತ್ರ ಕುರಿತು ಹಿಂದೂಗಳ ಭಾವಿ ಸಂತತಿ ನನ್ನನ್ನು ರಾಷ್ಟ್ರದ್ರೋಹಿ ಎಂದು ಬಗೆಯಬಹುದು ಎಂಬುದನ್ನು ಬಲ್ಲೆ. ಈಗ ನಾನು ಏನನ್ನೂ ಹೆಚ್ಚು ಹೇಳುವುದಿಲ್ಲ. ಆದರೂ ಈ ಮೊದಲು ಮಾತನಾಡಿದ ಸೌ. ಮೋಹಿತೆಬಾಯಿಯವರು ಸೌ. ರಮಾಬಾಯಿ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ನಾನು ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುವುದು ಒಳಿತು ; ಇಂದಿಗೂ ಸೌ. ಮೋಹಿತೆಬಾಯಿಯವರು ಹೇಳಿದರಲ್ಲಿ ಒಂದನ್ನೂ ನನಗೆ ಈ ನಿಮ್ಮ ಆಯೀಸಾಹೇಬ ಹೇಳಿಲ್ಲ..(ನಗು) .. ನಿಮ್ಮ ಆಯೀಸಾಹೇಬರು ಬಹುದೊಡ್ಡ ಭಾಗೀರಥಿಯಾಗಿದ್ದಾರೆ ಎಂಬುದು ನನಗೆ ಇದೀಗಲೇ ಗೊತ್ತಾಗಿದ್ದು. ಅದು ಸರಿಯೇ ನಿಮ್ಮ ಆಯೀಸಾಹೇಬರು ನಿಜವಾಗಿಯೂ ಭಾಗ್ಯದ ಭಾಗೀರಥಿಯೇ ಆಗಿದ್ದಾರೆ ! ..(ನಗು.. ಸಮೂಹದ ಕರತಾಡನ ಮತ್ತು ಪ್ರಚಂಡವಾದ ಜಯಘೋಷ ನಿರಂತರವಾಗಿತ್ತು : ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ ! ದಲಿತರ ಅವ್ವ ರಮಾಯಿಗೆ ಜಯವಾಗಲಿ !)
–ಅನುವಾದ : ಡಾ. ಸಿದ್ರಾಮ ಕಾರಣಿಕ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್ಲೈನ್ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ2 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ1 day agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ1 day agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


