ರಾಜಕೀಯ
ವೈವಿಧ್ಯತೆಯ ದಾರ್ಶನಿಕ ಶ್ರೇಷ್ಠತೆ
ಪ್ರಾಥಮಿಕ ಪ್ರೌಢಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣ ರಾಜ್ಯೋತ್ಸವ, ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ, ಪ್ರಾದೇಶಿಕ ಮಹತ್ವದ ದಿನಗಳಂದು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿಯಾಗಿತ್ತು. ಪ್ರಥಮ ಬಹುಮಾನ ಗೆಲ್ಲುವುದರ ಕಡೆಗೆ ಸ್ಪರ್ಧಿಗಳ ಉತ್ಸಾಹ ಕೇಂದ್ರೀಕೃತವಾಗಿರುತ್ತಿತ್ತು. ಹಿರಿಯರು ನಮಗಾಗಿ ಬರೆದುಕೊಡುತ್ತಿದ್ದ ಭಾಷಣದ ಪ್ರತಿಗಳನ್ನು ಓದಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ವಾಕ್ಪಟುತ್ವ, ಭಾಷಿಕ ಸಮಗ್ರತೆಯ ಗುಣಲಕ್ಷಣಗಳು ಅವುಗಳಲ್ಲಿ ಅಡಕವಾಗಿರುತ್ತಿದ್ದವು. ಪದಗಳ ವಿಶೇಷ ಅರ್ಥಗಳು ಗೊತ್ತಿರದಿದ್ದರೂ ಉರು ಹೊಡೆದು ಭಾಷಣವನ್ನು ಒಪ್ಪಿಸುವುದರ ಕಡೆಗೇ ನಮ್ಮ ಗಮನವಿರುತ್ತಿತ್ತು. ಬೆಳೆಯುತ್ತಿದ್ದ ಹಾಗೆ ಧ್ವನಿಯ ಏರಿಳಿತ ಮತ್ತು ಅರ್ಥವತ್ತಾದ ಪ್ರಸ್ತುತಪಡಿಸುವಿಕೆಯ ಮಹತ್ವವನ್ನು ತಿಳಿಸಿಕೊಟ್ಡ ನಂತರ ಆ ರೀತಿ ಯೋಚಿಸಲಾರಂಭಿಸಿದೆವು.
ಸ್ವಾತಂತ್ರ್ಯ ಹೋರಾಟ, ಭಾರತದ ವೈವಿಧ್ಯಮಯ ಸಂಸ್ಕೃತಿ, ಭಾವೈಕ್ಯತೆಯ ಶ್ರೇಷ್ಠತೆಯ ಮೌಲ್ಯಗಳು ನಮ್ಮನ್ನು ಹೆಚ್ಚಾಗಿ ಪ್ರಭಾವಿಸಿದ್ದವು. ಆಮೇಲಾಮೇಲೆ ಭಾಷಣವೆಂದರೆ ಭಾವನಾತ್ಮಕವಾಗಿ ಮಾತನಾಡಿ ಭಾಷಾ ಪ್ರೌಢಿಮೆ ಮೆರೆಯುವುದಲ್ಲ ಎಂಬುದು ಮನದಟ್ಟಾಗತೊಡಗಿತು. ಈಗಾಗಲೇ ಆಗಿಹೋದ ದಾರ್ಶನಿಕ ನಾಯಕರ ಬಗ್ಗೆ ಮಾತನಾಡುವಾಗಲೆಲ್ಲಾ ಅಭಿಮಾನಕ್ಕಿಂತ ಅವರ ಕೊಡುಗೆಗಳ ಸಾರ್ವಕಾಲಿಕ ಶಕ್ತಿಯನ್ನೇ ಗಣನೆಗೆ ತೆಗೆದುಕೊಂಡಾಗಲಷ್ಟೇ ಭಾಷಣಕ್ಕೆ ಸಮಗ್ರತೆ ದಕ್ಕುತ್ತಿತ್ತು. ಯಾರಾದರೂ ಭಾವುಕ ಆವೇಶ, ಭಾಷೆಯ ಅತಿರಂಜಕತೆಯನ್ನು ನೆಚ್ಚಿಕೊಂಡು ಮಾತನಾಡಿದರೆ ಅವರಿಗೆ ಅಂಕಗಳು ಸಿಗುತ್ತಿರಲಿಲ್ಲ. ಬಹುಮಾನವೂ ಲಭಿಸುತ್ತಿರಲಿಲ್ಲ. ಬದಲಾಗಿ ತೀರ್ಪುಗಾರರು ಅಂಥವರನ್ನು ಕರೆದು ಪೂರಕ ಮಾಹಿತಿ, ನಿದರ್ಶನಗಳಿಲ್ಲದೇ ಭಾಷಣ ಸೊರಗುತ್ತದೆ ಎಂದು ತಿಳಿಸುತ್ತಿದ್ದರು. ಭಾವುಕ ಭಾಷಿಕ ಅಬ್ಬರವು ಹುಸಿ ಅಭಿಮಾನವನ್ನು ಉಂಟುಮಾಡುತ್ತದೆಯೇ ಹೊರತು ಅದು ಚಿಂತನೆ ಬಿತ್ತುವುದಿಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ನಂತರ ಭಾಷಣ ಸ್ಪರ್ಧೆ ಏರ್ಪಡುವ ಹೊತ್ತಿಗೆ ಅಂಥವರು ಬದಲಾಗುತ್ತಿದ್ದರು. ಈಗ ಇಂಥ ಮಾರ್ಗದರ್ಶನ ಲಭ್ಯವಾಗುತ್ತಿದ್ದರೂ ಬದಲಾದ ಕಾಲಘಟ್ಟದ ರಾಜಕಾರಣ ದೇಶದಾದ್ಯಂತ ರೂಪಿಸುತ್ತಿರುವ ಹುಸಿ ಅಭಿಮಾನದ ಅಲೆಯ ಹೊಡೆತದ ಪರಿಣಾಮಗಳು ಅಂಥ ಸಕಾರಾತ್ಮಕತೆಯ ಪ್ರಭಾವವನ್ನು ಮೊಟಕುಗೊಳಿಸುತ್ತಿವೆ. ನಾಯಕತ್ವದ ಧಾಟಿ, ಭಾಷಣ ವೈಖರಿ, ಭಾಷೆಯ ಬಳಕೆ, ಅತಿಭಾವುಕತೆಯ ಪ್ರದರ್ಶನ ತಂತ್ರಗಾರಿಕೆ, ಪಕ್ಷಪಾತಿ ಧೋರಣೆ, ಸ್ವಹಿತಾಸಕ್ತಿ ರಕ್ಷಿಸಿಕೊಳ್ಳುವ ರಹಸ್ಯ ಕಾರ್ಯಸೂಚಿಗಳೇ ನಾಯಕರೆನ್ನಿಸಿಕೊಳ್ಳುವವರ ಪ್ರಭಾವವನ್ನು ವಿಸ್ತರಿಸುತ್ತಿವೆ. ಅಂಥವರ ಮಾತುಗಳನ್ನು ಕೇಳಿ ಪ್ರಭಾವಕ್ಕೊಳಗಾಗುವವರು ಅವರ ಭಾಷಣ ಶೈಲಿಯನ್ನೇ ವಾಕ್ಪಟುತ್ವದ ಶ್ರೇಷ್ಠ ಉದಾಹರಣೆ ಎಂದುಕೊಳ್ಳುತ್ತಿದ್ದಾರೆ. ಆ ಭಾಷಿಕ ವೈಭವೀಕರಣವನ್ಮೇ ನೆಚ್ಚಿಕೊಂಡು ಮಾತುಗಳೆಂದರೆ ಹೀಗೆಯೇ ಇರಬೇಕು ಎಂದು ತಲೆದೂಗುತ್ತಿದ್ದಾರೆ. ಹೀಗೆ ಕೇಳುವವರಿದ್ದಾರೆ ಎಂದುಕೊಳ್ಳುವ ಅಂಥವರು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳಲ್ಲಿ ಯಶಸ್ಸು ಕಾಣುತ್ತಲೇ ಇದ್ದಾರೆ. ಅಧಿಕಾರದಲ್ಲಿ ಉಳಿದುಕೊಳ್ಳುವ ತಮ್ಮ ಮನೋಭಿಲಾಷೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅತ್ಯಂತ ಎಚ್ಚರದಲ್ಲಿ ಈಡೇರಿಸಿಕೊಳ್ಳುತ್ತಿದ್ದಾರೆ.
ಆಡಳಿತ ಯಂತ್ರವನ್ನು ಬಳಸಿಕೊಂಡು ಸಕಾರಾತ್ಮಕ ಇತಿಹಾಸಕ್ಕೆ ತದ್ವಿರುದ್ಧವಾದ ಸುಳ್ಳುಗಳನ್ನು ಹರಿಬಿಡುವ ಹುನ್ನಾರಗಳೊಂದಿಗೆ ನಾಯಕರೆನ್ನಿಸಿಕೊಂಡವರು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಆಗಿಹೋದ ನಾಯಕರನ್ನು ನೆನಪಿಸಿಕೊಳ್ಳುವ ಕೃತಕ ನಿಷ್ಠೆಯ ಭಾವುಕತೆಯ ಆವರಣದಲ್ಲಿ ಈ ಸುಳ್ಳುಗಳನ್ನು ಚಾಣಾಕ್ಷಯುತವಾಗಿ ಪ್ರತಿಷ್ಠಾಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಭಾಷೆಯ ನಮ್ಯಗುಣವನ್ನೇ ಉಪಯೋಗಿಸಿಕೊಂಡು ಅಪಭ್ರಂಶಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕ ತಾರ್ಕಿಕ ಪ್ರತಿರೋಧದ ವಿರುದ್ಧ ಆಕ್ರಾಮಕವಾದ ಭಾಷೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ನಾವೆಲ್ಲಾ ಭಾರತವನ್ನು ವಿವಿಧತೆಯಲ್ಲಿ ಏಕತೆ ಸಾಧಿಸಿಕೊಂಡ ದೇಶ ಎಂದು ಗ್ರಹಿಸಿದ್ದೆವು. ಹಿರಿಯರು ಇಂಥದ್ದೊಂದು ವೈವಿಧ್ಯಮಯ ಅಸ್ಮಿತೆಯನ್ನು ಪರಿಚಯಿಸಿ ನಮ್ಮ ತಿಳುವಳಿಕೆಗೆ ಭಿನ್ನ ಸಂಸ್ಕಾರವನ್ಮು ಒದಗಿಸಿದ್ದರು. ಆಗಿನ ಗ್ರಹಿಕೆಯು ದೇಶಾಭಿಮಾನದ ಹುಸಿ ವೇಷವನ್ನು ತೊಟ್ಟಿರಲಿಲ್ಲ. ಸೋಗಲಾಡಿತನದ ಹೆಮ್ಮೆಯ ಭಾವಾವೇಷವನ್ನು ಹೊದ್ದುಕೊಂಡಿರಲಿಲ್ಲ. ಬದಲಾಗಿ ಆ ಗ್ರಹಿಕೆಯು ಅಪ್ಪಟ ವಾಸ್ತವವಾದಿ ನೆಲೆಗಟ್ಟಿನಲ್ಲಿ ನಮ್ಮೊಳಗೆ ಅಂತರ್ಗತವಾಗಿತ್ತು. ಈಗ ಅಂಥ ಗ್ರಹಿಕೆಯ ಮೌಲಿಕ ವ್ಯಕ್ತಿಗತ ಸ್ವಯಂಸಂವಿಧಾನವನ್ನು ಧ್ವಂಸಗೊಳಿಸುವ ಭಾಷಿಕ ಅತಿರೇಕದ ಪ್ರಯತ್ನಗಳೇ ಶ್ರೇಷ್ಡ ಎಂದೆನ್ನಿಸುವ ಹಾಗೆ ಬಿಂಬಿತವಾಗುತ್ತಿವೆ. ಭಾಷಣ ಮತ್ತು ಬರಹದ ವಿವಿಧ ರೂಪಗಳು ಈ ಅಂಶವನ್ನು ಸಾಬೀತುಪಡಿಸುತ್ತಿವೆ. ವಿವಿಧತೆಯ ಒಟ್ಟಂದವನ್ಮು ಕಲುಷಿತಗೊಳಿಸುವುದರೊಂದಿಗೆ ಅಂಥ ಪ್ರಯತ್ನದ ಹಾದಿಯಲ್ಲಿ ಯುವಸಮೂಹ ಸಾಗುವಂತೆ ಭಾಷಿಕ ಹುನ್ನಾರದ ನೆರವಿನೊಂದಿಗೇ ಪ್ರಚೋದಿಸಲಾಗುತ್ತಿದೆ.
ವಿವಿಧತೆಯ ಜಾಗದಲ್ಲಿ ಏಕಭಾರತದ ಪರಿಕಲ್ಪನೆಯ ನಿಧಾನ ವಿಷವನ್ನು ಉಣಬಡಿಸಲಾಗುತ್ತಿದೆ. ಅತ್ಯಾಕರ್ಷಕ ಪುಟವಿನ್ಯಾಸ, ವರ್ಣರಂಜಿತ ಅಕ್ಷರಗಳು, ಜನಪ್ರಿಯ ಸೆಲೆಬ್ರಿಟಿಗಳ ವಯ್ಯಾರದ ನುಡಿಗಳು, ಇಂಥವುಗಳೊಂದಿಗಿನ ಜಾಹಿರಾತು, ಸುದ್ದಿ ಬಿಂಬಗಳು ಆ ವಿಷವನ್ನು ರವಾನಿಸುತ್ತಿವೆ. ಜನರು ಇರಿಸಿಕೊಂಡ ವಿಶ್ವಾಸವನ್ನು ಭಗ್ನಗೊಳಿಸುತ್ತಿವೆ. ವಿವಿಧತೆಯನ್ನು ಉಳಿಸಿಕೊಂಡು ಏಕತೆಯನ್ನು ಸಾಧಿಸುವುದೇ ಆಡಳಿತದ ಪರಮ ಗುರಿಯಾಗಬೇಕು. ವಿವಿಧತೆಗಳ ಸೌಂದರ್ಯದ ಪ್ರಾಬಲ್ಯವಿಲ್ಲದ ಏಕತೆ ಅರ್ಥವಂತಿಕೆ ಕಳೆದುಕೊಳ್ಳುತ್ತದೆ. ವೈವಿಧ್ಯತೆ ಇದ್ದಾಗಲೇ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ. ಏಕಭಾರತ ಕಟ್ಟುವ ಗುಂಗಿನಲ್ಲಿ ಈ ತೋಟಕ್ಕೆ ನುಗ್ಗಿ ಸಾಂಸ್ಕೃತಿಕ ವೈವಿಧ್ಯ ಫಸಲನ್ನು ಧ್ವಂಸಗೊಳಿಸದರೆ ದೇಶ ಸಶಕ್ತವಾಗುವುದಿಲ್ಲ.ಈ ನೆಲದ ಮಣ್ಣು ವೈವಿಧ್ಯಮಯ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಶಾಲೆ- ಕಾಲೇಜುಗಳಲ್ಲಿ ಅನುರಣನಗೊಳ್ಳುವ ನಾಡಗೀತೆಯನ್ನು ಮತ್ತೆ ಓದಿಕೊಳ್ಳಬೇಕಿದೆ. ಹಾಡಿನ ರಾಗಮಾಧುರ್ಯದಂತೆಯೇ ನಾಡಗೀತೆಯ ಪ್ರತಿಯೊಂದು ಸಾಲು ರಚಿತವಾಗಿದೆ. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಸಾಲುಗಳ ವೈಚಾರಿಕ ಸೌಂದರ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ಈ ದೇಶದ ವೈವಿಧ್ಯದ ಸೌಂದರ್ಯವನ್ನು ವಿಶಿಷ್ಠವಾಗಿ ಹಿಡಿದಿಟ್ಡ ಕುವೆಂಪು ಅವರ ವೈಚಾರಿಕ ಪ್ರಜ್ಞೆಯನ್ನು ಆಪ್ತವಾಗಿಸಿಕೊಳ್ಳಬೇಕಿದೆ.
–ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ
ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಲ್ಲದೆ, ಮೃತಪಟ್ಟ ರೈತರ ಹೆಸರಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ಸುಮಾರು 24000 ಪೌತಿ ಖಾತೆಗಳನ್ನು ಬದಲಾಯಿಸಲಾಗಿದ್ದು, ಪೌತಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಜಮೀನು ಮಂಜೂರು ಆಗಿ ಪೋಡಿ ಆಗದೇ ಪ್ರತ್ಯೇಕ ಪಹಣಿ ಬರದೇ ಇರುವುದರಿಂದ ಅಂತಹವುಗಳನ್ನು ಗೈರು ವಿಲೇ ಕಡತವನ್ನು ಮಾಡಲಾಗಿದ್ದು, ಸುಮಾರು 4000 ಜನರಿಗೆ ಈ ಗೈರು ವಿಲೇ ಕಡತವನ್ನು ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯೂ 3ನೇ ಸ್ಥಾನವನ್ನು ಹೊಂದಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


