Connect with us

ಅಂತರಂಗ

ಅರಿಮೆಯ ಅರಿವಿರಲಿ-57 : ಮಡಿವಂತಿಕೆ ಮತ್ತು ಮಾನಭಂಗ

Published

on

Art by Der Kunstdruck (Europe)
  • ಯೋಗೇಶ್ ಮಾಸ್ಟರ್

ಹಿಂದೆಂದಿನಿಂದಲೂ ಆಗುತ್ತಿರುವಂತೆ ಈಗಲೂ ಅಲ್ಲಲ್ಲಿ ಗುಂಪು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣ ವರದಿಯಾಗುತ್ತಿರುತ್ತದೆ. ಅತ್ಯಾಚಾರ ಮಾಡಿದವನನ್ನು ಸಾರ್ವಜನಿಕವಾಗಿ ತುಂಡುತುಂಡಾಗಿ ಕತ್ತರಿಸಿ ಎಂಬ ಆಕ್ರೋಶ ದೇಶಾದ್ಯಂತ ಭುಗಿಲೇಳುತ್ತದೆ. ಆರೋಪಿಗಳ ಪೋಷಕರೂ ಕೂಡಾ ತಮ್ಮ ಮೋಹವನ್ನು ಮೀರಿ ತಪ್ಪಿಗೆ ಶಿಕ್ಷೆಯಾಗಲಿ ಎಂದು ನ್ಯಾಯದ ಪರವಾಗಿ ನಿಲ್ಲುತ್ತಾರೆ ಅಥವಾ ನನ್ನ ಮಗು ಅಂತವನಿರಲಿಲ್ಲ, ಸಹವಾಸದಿಂದ ಹಾಗಾದ ಎಂದು ಅವನ ಪರ ಗೋಳಿಡುತ್ತಾರೆ.

ಅತ್ಯಾಚಾರಕ್ಕೆ ಒಳಗಾದವರ ಕಂಡು ಮಮ್ಮಲ ಮರುಗುವಾಗಲೇ ಆರೋಪಿಗಳ ಕಡೆಗೂ ನೋಡಲೇ ಬೇಕಿದೆ. ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿಯುವುದಿಲ್ಲವೇ? ಈ ಹಿಂದೆ ಅವರು ಯಾವ ಅತ್ಯಾಚಾರ ಪ್ರಕರಣಗಳನ್ನು ಕೇಳೇ ಇಲ್ಲವೇ? ಹಾಗೆಯೇ ಇಂತಹ ಅಪರಾಧಗಳಿಗೆ ವ್ಯಾಪಕ ಖಂಡನೆ, ತೀವ್ರವಾದ ವಿಚಾರಣೆ ಮತ್ತು ಕಠಿಣ ಶಿಕ್ಷೆಗಳೆಲ್ಲವೂ ಕಾದಿರುತ್ತವೆ ಎಂದೇನೂ ತಿಳಿಯದಷ್ಟು ಮುಗ್ಧರೇ ಅಥವಾ ಅಜ್ಞಾನಿಗಳೇ? ಇದನ್ನು ಪೂರೈಸಿದ ನಂತರ ತಾವು ಸಿಕ್ಕಿಬೀಳುವುದಿಲ್ಲ ಎಂದು ಅವರು ನಂಬಿದ್ದರೇ? ಅಥವಾ ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಯೋಜನೆ ಇತ್ತೇ? ಈ ಅತ್ಯಾಚಾರ ಅವರಿಗೆ ಮೊದಲನೆಯದೇ? ಅಥವಾ ಹಲವು ರೀತಿಗಳಲ್ಲಿ ತಮ್ಮ ತೀವ್ರ ಕಾಮುಕತೆಯನ್ನು ಪೂರೈಸಿಕೊಳ್ಳುತ್ತಿದ್ದವರು ಈ ಪ್ರಕರಣದಲ್ಲಿ ಅದು ಅತಿಯಾಗಿ ದೊಡ್ಡ ತಪ್ಪಾಗಿಬಿಟ್ಟಿತೇ?
ಅವೆಲ್ಲಾ ನಮಗೆ ಗೊತ್ತಿಲ್ಲ.

ಅತ್ಯಾಚಾರವಾಗಿ ಹತ್ಯೆಯಾಗಿದೆ. ಇಂತಹ ಕ್ರೂರ ಕೃತ್ಯಕ್ಕೆ ಕ್ರೂರವಾಗಿ ಶಿಕ್ಷೆಯಾಗಬೇಕು ಎಂದುಬಿಟ್ಟರೆ, ಕ್ರೂರ ಕ್ರಿಯೆಗೆ ಕ್ರೂರ ಪ್ರತಿಕ್ರಿಯೆ ಕೊಟ್ಟಿದ್ದಷ್ಟೇ ಸಾಧನೆ. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವುದು ಕೂಡಾ ಕ್ರೌರ್ಯದ ಮತ್ತೊಂದು ಮುಖವೇ ಹೊರತು ಅತ್ಯಾಚಾರವೆಂಬ ಕ್ರೌರ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಎಷ್ಟೂ ಕ್ರಮಿಸಿದಂತಾಗುವುದಿಲ್ಲ.

ಸಾವಿರಾರು ವರ್ಷಗಳಿಂದ ಅಪರಾಧಗಳಿಗೆ ಕಠಿಣ ಶಿಕ್ಷೆಗಳಾಗಿವೆ. ಅವುಗಳೆಲ್ಲದರ ಅಂದಿನ ಇತಿಹಾಸ ಮತ್ತು ಇಂದಿನ ಸುದ್ಧಿಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಆದರೂ ಇಂದಿಗೂ ಅಪರಾಧಗಳನ್ನು ಕಾಣುತ್ತಿದ್ದೇವೆ. ಈ ಅಪರಾಧಗಳ ಹಿಂದಿನ ಪ್ರೇರಣೆಗಳನ್ನು ಗುರುತಿಸಬೇಕಾಗಿದೆ. ಏಕೆಂದರೆ ಶಿಕ್ಷೆಗಳು ನೈತಿಕತೆಯನ್ನು ಕಾಪಾಡುವಲ್ಲಿ ವಿಫಲವಾಗಿವೆ. ಶಿಕ್ಷೆಯ ಭಯಕ್ಕೆ ಪಾಲಿಸುವಂತಹ ನೈತಿಕತೆಯ ಪ್ರಾಮಾಣಿಕತೆ ಎಷ್ಟರಮಟ್ಟಿಗಿರುತ್ತದೆ?

ಅಂತರಂಗದ ಸ್ಫೋಟ

ಅತ್ಯಾಚಾರ ಮತ್ತು ಭ್ರಷ್ಟಾಚಾರಗಳಂತಹ ಯಾವ ಅಪರಾಧಗಳೂ ಒಮ್ಮಿಂದೊಮ್ಮೆಲೆ ಆಕಸ್ಮಿಕವಾಗಿ ಘಟಿಸಿಬಿಡುವಂತಹ ತಪ್ಪೇನಲ್ಲ. ಗುಪ್ತಗಾಮಿನಿಯಾಗಿದ್ದು ಸಡಿಲ ಪದರವನ್ನು ಬೇಧಿಸಿ ಭುಗಿಲೇಳುವ ಸ್ಫೋಟ. ಈ ಸ್ಫೋಟವಾದಾಗ ಬಲಿಪಶು ಮತ್ತು ಆರೋಪಿಗಳಿಬ್ಬರಲ್ಲಿ ಬಲಿಪಶು ಆದವರಿಗೆ, ಹಾಗಾಗಲು ಬಹಳ ಸ್ಥೂಲವಾದ ಮತ್ತು ತಾಂತ್ರಿಕ ಕಾರಣಗಳಿರುತ್ತವೆ.

ಉದಾಹರಣೆಗೆ; ಅಲ್ಲಿಗೆ ಬಂದದ್ದು, ಗಾಡಿ ಕೆಟ್ಟಿದ್ದು, ಸಹಾಯ ಮಾಡುತ್ತೇವೆ ಎಂದವರನ್ನು ಸಾಂದರ್ಭಿಕವಾಗಿ ಅಥವಾ ಸಮಯಾನುಸಾರವಾಗಿ ನಂಬಿದ್ದು, ದಾಳಿ ಮಾಡುವವರಿಂದ ತಪ್ಪಿಸಿಕೊಳ್ಳಲಾಗದೇ ಹೋಗಿದ್ದು; ಇತ್ಯಾದಿ. ಆದರೆ, ಆರೋಪಿಗಳ ವಿಷಯದಲ್ಲಿ ಬಹಳ ಸೂಕ್ಷ್ಮವಾದ ಕಾರಣಗಳಿರುತ್ತವೆ. ಈ ಸೂಕ್ಷ್ಮವಾದ ಕಾರಣಗಳನ್ನು ತಿಳಿಯುವುದರಲ್ಲಿ ವಿಫಲವಾಗುತ್ತಿರುವ ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಗಳು ಇಂತಹ ಮತ್ತಷ್ಟು ಆರೋಪಿಗಳನ್ನು ಸಮಾಜಕ್ಕೆ ನೀಡುತ್ತಲೇ ಇರುತ್ತವೆ.

ಅತ್ಯಾಚಾರವೆಂದರೇನು?

ಅತ್ಯಾಚಾರ ಎನ್ನುವುದು ಹಲವು ವಿಷಯಗಳ ಮೊತ್ತ. ಅದರಲ್ಲಿ ಪ್ರಧಾನವಾಗಿ ಕಾಣುವುದು ಎರಡು. ಒಂದು ಕ್ರೌರ್ಯ ಮತ್ತೊಂದು ಲೈಂಗಿಕತೆ. ತೀವ್ರತರವಾದ ಲೈಂಗಿಕ ದೌರ್ಜನ್ಯವು ಅತ್ಯಾಚಾರವಾಗಿ ಪ್ರಕಟವಾಗುತ್ತದೆ. ಈ ಪ್ರಕಟಣೆ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡಿರುವ ಫಲವಲ್ಲ. ಈ ಅತ್ಯಾಚಾರವೆಂಬ ಫಲದ ಹಿಂದೆ ಸಾಕಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಭಾವಗಳ ಕೃಷಿ ಇರುತ್ತದೆ. ಈ ಪ್ರಭಾವಗಳು ಒಬ್ಬ ವ್ಯಕ್ತಿಯನ್ನು ಆರೋಪಿಯನ್ನಾಗಿ ರೂಪಿಸುವುದು.

ಬಾಲ್ಯ, ಸನಿಹದ ಸಂಬಂಧಗಳು, ಅವರ ಮೇಲಾಗಿರಬಹುದಾದ ದೌರ್ಜನ್ಯಗಳು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು, ಮೆದುಳಿನ ಅಥವಾ ನರಗಳ ಕೆಲವು ಸಮಸ್ಯೆಗಳು, ಸ್ಯಾಡಿಸ್ಟಿಕ್ ಅಂದರೆ ಕ್ರೌರ್ಯದಿಂದ ಸಂತೋಷಪಡುವಂತಹ ಗುಣಗಳು, ನೈಸರ್ಗಿಕವಾಗಿರುವ ತೃಪ್ತಿಗಳನ್ನು ಅಸಹಜವಾಗಿ ಈಡೇರಿಸಿಕೊಳ್ಳುವಂತಹ ಗೀಳುಗಳು, ಮಾದಕ ವಸ್ತುಗಳ ವ್ಯಸನಗಳು, ಸಹಜ ಲೈಂಗಿಕತೆಯ ಬಗ್ಗೆ ಇರುವಂತಹ ಸಾಮಾಜಿಕ ಕಳಂಕ (ಸ್ಟಿಗ್ಮಾ), ಆರೋಗ್ಯಕರ ಲೈಂಗಿಕತೆಯ ಮತ್ತು ಸಾಮಾನ್ಯ ಲೈಂಗಿಕ ಶಿಕ್ಷಣದ ಕೊರತೆ, ಪುಂಡತನದ ಗುಂಪಿನ ಸದಸ್ಯರ ಸಮಾನ ಅಭಿರುಚಿಗಳ ತೀವ್ರತೆಗಳು; ಹೀಗೆ ಇನ್ನೂ ಹಲವು ವಿಷಯಗಳು ಪ್ರಭಾವಿಸಿರುತ್ತವೆ.

ಇವು ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಮತ್ತು ಅಸಹಜ ವರ್ತನೆಗಳಿಗೆ ಕಾರಣವಾಗಿರುತ್ತವೆ. ತನ್ನ ಭಾವನೆಗಳನ್ನು, ಬಯಕೆಗಳನ್ನು ಅಥವಾ ಹಾತೊರೆಯುವಿಕೆಗಳನ್ನು ಹತ್ತಿಕ್ಕಿಕೊಳ್ಳಲಾಗದಂತೆ ವರ್ತಿಸುವುದಾಗಲಿ, ವಿವೇಚನೆಗೆ ಆಸ್ಪದವನ್ನೇ ಕೊಡದೇ ಪ್ರಯತ್ನಿಸುವುದಾಗಲಿ; ಅನಿಯಂತ್ರಣದ ಸಮಸ್ಯೆಯೇ. ಕೋಪ, ಅಸೂಯೆ, ಲೋಭ ಇತ್ಯಾದಿಗಳನ್ನು ನಿಯಂತ್ರಿಸಿಕೊಳ್ಳದೇ ವರ್ತಿಸುವ ಅಥವಾ ಉತ್ಮತ್ತರಾಗುವ ಬಗೆಯೇ ಲೈಂಗಿಕವಾಂಛೆಯ ವಿಷಯದಲ್ಲೂ ಇಣುಕುತ್ತದೆ.

ಮೇಲೆ ಹೆಸರಿಸಿದ ಯಾವುದೇ ಭಾವಗಳನ್ನು ಅಥವಾ ಉತ್ಕಟ ವಾಂಛೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಹೋದಾಗ, ನಿಯಂತ್ರಣವಿಲ್ಲದೇ ವರ್ತಿಸಿದಾಗ ಅಪರಾಧವಾಗುತ್ತದೆ. ಆಸೆಗಳು ಅಪರಾಧಗಳಾಗಿ ಪರಿವರ್ತಿತವಾಗುವುದು ನಿಯಂತ್ರಣದ ಕೊರತೆಯಿಂದಲೇ.

ಸಮಾನ ವ್ಯಸನಿಗಳ ಕೂಟ

ವ್ಯಸನಗಳು, ಮಾನಸಿಕ ಮತ್ತು ಮನೋದೈಹಿಕ ಸಮಸ್ಯೆಗಳು, ಉತ್ಕಟ ಬಯಕೆಗಳು ಇರುವವರು ತಮ್ಮಂತಹ ಮನಸ್ಥಿತಿ ಮತ್ತು ಸಮಸ್ಯೆಗಳಿರುವಂತಹ ವ್ಯಕ್ತಿಗಳ ಸಂಗವನ್ನು ಬಯಸುವುದು ಮತ್ತು ಅಸಾಂಸ್ಥಿಕ ಸಂಘವನ್ನು ಮಾಡಿಕೊಂಡು ತಮ್ಮ ವಾಂಛೆಗಳನ್ನು ತೀರಿಸಿಕೊಳ್ಳುವುದು ವಾಸ್ತವದ ಮತ್ತೊಂದು ಮಗ್ಗಲು. ಧೂಮಪಾನಿಗಳ ತಂಡ ಸಾಮೂಹಿಕ ಧೂಮಯಜ್ಞದಲ್ಲಿ ತೊಡಗುವಂತೆ ಅತಿಕಾಮಿಗಳೂ ಕೂಡಾ ಸಂಘಟಿತರಾಗುವರು. ಅವರಿಗೆ ಪರಿಣಾಮಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಆ ಹೊತ್ತಿಗೆ ಅದನ್ನು ಮರೆಯುವಷ್ಟು ಉನ್ಮತ್ತರಾಗಿರುತ್ತಾರೆ. ಈ ಉನ್ಮತ್ತತೆಗೆ ಮದ್ಯವಾಗಲಿ ಅಥವಾ ಇನ್ನಾವುದೇ ಮಾದಕವಸ್ತುವಾಗಲಿ ಕಾರಣವಲ್ಲ. ಆದರೆ, ಅವು ಅವರನ್ನು ಹುರಿದುಂಬಿಸಲು ಸಹಕಾರಿಯಾಗಿರುತ್ತವೆ.

ಅತಿಕಾಮ ಸಮಸ್ಯೆ

ಅತ್ಯಾಚಾರ ಎಂಬ ಪದಕ್ಕೆ ಹಿಂದೆ ಸಮಾನಾರ್ಥಕವಾಗಿ ಮಾನಭಂಗ ಎಂಬ ಪದವನ್ನೂ ಬಳಸುತ್ತಿದ್ದರು. ಅತ್ಯಾಚಾರ ಎಂಬುದು ವ್ಯಕ್ತಿಯ ಕ್ರಿಯೆಗೆ ಸಂಬಂಧಿಸಿದ್ದಾಗಿದ್ದರೆ, ಈ ಮಾನಭಂಗ ಎನ್ನುವ ಪದವು ಸಮಾಜಕೇಂದ್ರಿತ ದೃಷ್ಟಿ. ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾದರೆ ಅವಳ ಮಾನ ಮರ್ಯಾದೆ ಹೋಯಿತು ಎನ್ನುವ ಧೋರಣೆ ಈಗ ಸುಧಾರಿಸಿದ್ದು, ಆಕೆಯ ಮೇಲೆ ಬಲತ್ಕಾರ ಮತ್ತು ದೌರ್ಜನ್ಯವಾಯಿತು, ಅವಳ ದೇಹ, ಮನಸ್ಸು ಮತ್ತು ಅಂಗಗಳ ಮೇಲೆ ಅತಿಕ್ರಮಣ ಮಾಡಿದ ಕ್ರೌರ್ಯವನ್ನು ಈಗ ಗುರುತಿಸುತ್ತಿದ್ದೇವೆ.

ಸಮಾಜವೂ ಕೂಡಾ ‘ಮಾನ’ ಎಂಬುವ ವಿಷಯಕ್ಕಿಂತ ಅತ್ಯಾಚಾರಿಯ ಕ್ರೌರ್ಯ ಮತ್ತು ಸಂತ್ರಸ್ತೆಯ ಸಂಕಟವನ್ನು ಗುರುತಿಸುತ್ತಿದೆ. ಬಲಿಪಶುವನ್ನು ಕರುಣೆಯಿಂದ ಕಾಣುವ, ಆರೋಪಿಯನ್ನು ಕೋಪದಿಂದ ಕಾಣುವ ಹಂತಕ್ಕೆ ಸಮಾಜವು ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಕಾಸವಾಗಿದೆ, ಒಂದಿಷ್ಟು ಪ್ರಗತಿ ಹೊಂದಿದೆ ಎನ್ನಬಹುದು. ಆದರೆ ಇಷ್ಟು ಸಾಲದು. ಏನೇನೂ ಸಾಲದು. ಅತ್ಯಾಚಾರವನ್ನು ಕೊನೆಗಾಣಿಸಬೇಕಾದರೆ ಲೈಂಗಿಕ ಶಿಕ್ಷಣವನ್ನು ಕಡೆಗಣಿಸಬಾರದು.

ಯಾವುದೋ ವ್ಯಕ್ತಿಯೊಳಗೆ ಧುತ್ತನೆ ಸೇರಿಕೊಂಡ ವೈರಸ್ಸು ಲೈಂಗಿಕ ದೌರ್ಜನ್ಯವನ್ನು ಮಾಡಿಸುವುದಲ್ಲ. ಲೈಂಗಿಕತೆಯ ಬಗ್ಗೆ ಇರುವ ಮಡಿವಂತಿಕೆಯೇ ಕಾಮುಕತೆಯ ರಹಸ್ಯ ಬೆಳವಣಿಗೆಗೆ ಕಾರಣ. ಈಗಲೂ ನಮ್ಮಲ್ಲಿ ಲೈಂಗಿಕತೆಯನ್ನು ಕಾಮುಕತೆ ಎಂದೇ ತಿಳಿಯುವ ಜನರಿದ್ದಾರೆ. ಕಾಮವು ಸಹಜ ತೃಷೆ.

ಆದರೆ ಅತಿಕಾಮವು ವ್ಯಕ್ತಿಗಳಲ್ಲಿ ಆಸಕ್ತಿಗಳಾಗಿರಬಹುದು, ಗೀಳು, ವ್ಯಸನ ಅಥವಾ ಸಮಸ್ಯೆಯಾಗಿರಬಹುದು. ಬರಿಯ ಆಸಕ್ತಿಯ ಹಂತದಲ್ಲಿರುವವರು ಅದನ್ನು ತಮ್ಮದೇ ಆದಂತಹ ರೀತಿಗಳಲ್ಲಿ ತೃಪ್ತರಾಗಲು ಯತ್ನಿಸುತ್ತಿರುತ್ತಾರೆ. ಅವರು ತಮ್ಮ ಖಾಸಗೀ ಬದುಕಿನ ಮೂಲೆಗಳೆಲ್ಲೋ ತಿಣುಕಾಡಿಕೊಳ್ಳುತ್ತಾರೆ. ಆದರೆ ಇದೇ ಅತಿಕಾಮುಕತೆಯು ಗೀಳಾಗಿ, ವ್ಯಸನವಾಗಿ ವ್ಯಕ್ತಿಯಲ್ಲಿ ಗೂಡುಗೊಂಡರೆ, ಸಮಸ್ಯೆ ಎಂದು ಗ್ರಹಿಸಿ ಸಮಾಲೋಚನೆಯನ್ನೂ ಮತ್ತು ತಕ್ಕಂತಹ ಚಿಕಿತ್ಸೆಗಳನ್ನೂ ನೀಡಬೇಕಾಗುತ್ತದೆ.

ಪ್ಯಾರಾಫಿಲಿಕ್ ಡಿಸಾರ್ಡರ್ ಅಂದರೆ ವ್ಯಕ್ತಿಯಲ್ಲಿನ ಅತಿಕಾಮುಕತೆಯ ಸಮಸ್ಯೆ ನಾನಾ ರೀತಿಗಳಲ್ಲಿ ಕಾಣಿಸಿಕೊಳ್ಳುವವು.

  1. ಇಣುಕು ಕಾಮ (Voyeuristic disorder) : ಬೇರೆಯವರ ಲೈಂಗಿಕ ಚಟುವಟಿಕೆಗಳನ್ನು ಕದ್ದು ನೋಡುವುದು. ಗುಪ್ತಾಂಗಗಳನ್ನು ಇಣುಕಿ ನೋಡುವುದು ಇತ್ಯಾದಿ.
  2. ಪ್ರದರ್ಶನ ಕಾಮ (Exhibitionistic disorder): ತಮ್ಮ ಗುಪ್ತಾಂಗಗಳನ್ನು ಅಥವಾ ತಮ್ಮ ಲೈಂಗಿಕತೆಯ ಆಸಕ್ತ ಅಂಗಗಳನ್ನು
    ಸಾರ್ವಜನಿಕವಾಗಿ ಪ್ರದರ್ಶಿಸುವ ಗೀಳು.
  3. ಪ್ರಚೋದನ ಕಾಮ (Frotteuristic disorder) : ತಮ್ಮ ಗುಪ್ತಾಂಗವನ್ನು ಮತ್ತೊಬ್ಬರ ದೇಹಕ್ಕೆ ಅಥವಾ ಅಂಗಕ್ಕೆ ಉದ್ದೇಶಪೂರ್ವಕವಾಗಿ ತಗುಲಿಸುತ್ತಾ ಅಥವಾ ಉಜ್ಜುತ್ತಾ ಅವರಲ್ಲಿ ಕಾಮುಕತೆಯನ್ನು ಪ್ರಚೋದಿಸುವುದು ಮತ್ತು ತಮ್ಮೊಂದಿಗೆ ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು.
  4. ಸೇಡಿನ ಕಾಮ (Sexual masochism disorder): ತಾವು ಕಡೆಗಣಿಸಲ್ಪಟ್ಟಿದ್ದೇವೆ, ದಮನಿಸಲ್ಪಟ್ಟಿದ್ದೇವೆ, ನಿಯಂತ್ರಿಸಲ್ಪಟ್ಟಿದ್ದೇವೆ, ಕೆಟ್ಟದಾಗಿ ನಡೆಸಿಕೊಳ್ಳಲ್ಪಟ್ಟಿದ್ದೇವೆಂದು ಭಾವಿಸಿ, ಅದಕ್ಕೆ ಸೇಡುತೀರಿಸಿಕೊಳ್ಳಲು ಲೈಂಗಿಕ ದೌರ್ಜನ್ಯವನ್ನು ಎಸಗವುದು.
  5. ಕ್ರೌರ್ಯಾಮುದ ಕಾಮ (Sexual sadism disorder): ಬೇರೆಯವರಿಗೆ ಹಿಂಸೆ ನೀಡಿ, ಅವರು ಪಡುವ ನೋವಿನಿಂದ, ದುಃಖದಿಂದ ಆನಂದವನ್ನು ಪಡೆಯುತ್ತಾ ತನ್ನ ಕಾಮವನ್ನು ತೃಪ್ತಿಗೊಳಿಸಿಕೊಳ್ಳುವುದು.
  6. ಶಿಶುಕಾಮ (Pedophilic disorder) : ಈ ಸಮಸ್ಯೆ ಇರುವವರು ತಮ್ಮ ಲೈಂಗಿಕತೃಷೆಗೆ ಬೇಟೆಯಾಡುವುದು ಮಕ್ಕಳನ್ನು.
  7. ಅಲೈಂಗಿಕಾಂಗ ಕಾಮ (Fetishistic disorder): ಗುಪ್ತಾಂಗವೇ ಅಲ್ಲದ ದೇಹದ ಇತರ ಭಾಗಗಳ ಮೇಲೆ ಮತ್ತು ಕಾಮಕ್ಕೆ ಸಂಬಂಧವೇ ಇಲ್ಲದಂತಹ ವಸ್ತುಗಳಿಂದ ತಮ್ಮ ಲೈಂಗಿಕ ತೃಷೆಯನ್ನು ಈಡೇರಿಸಿಕೊಳ್ಳುವ ಗೀಳು.
  8. ವಸ್ತ್ರಕಾಮ (Transvestic disorder) : ತನ್ನ ವಿರುದ್ಧ ಲಿಂಗಿಯ ವಸ್ತ್ರಗಳನ್ನು ತಾನು ತೊಟ್ಟುಕೊಂಡು ಲೈಂಗಿಕ ತೃಪ್ತಿಯನ್ನು ಪಡೆಯುವುದು.
  9. ಧ್ವನಿ ಕಾಮ (Telephone scatologia) : ಇದು ಕಾಮವಾಣಿ. ಬರಿಯ ದೂರವಾಣಿ ಕರೆಗಳನ್ನು ನೀಡುತ್ತಾ, ಪಡೆಯುತ್ತಾ ಕಾಮೋತ್ತೇಜಕ ಮಾತುಗಳನ್ನಾಡಿಕೊಂಡು ಕಾಮಾತುರವನ್ನು ನೀಗಿಕೊಳ್ಳುವುದು.
  10. ಶವಕಾಮ ((Necrophilia) : ಶವಗಳೊಂದಿಗೆ ಸಂಭೋಗವನ್ನು ಮಾಡುವುದು. ಅದು ಅವರಿಗೆ ಹೇಗೆ ಸಾಧ್ಯವಾಗುತ್ತದೆಯೋ ತಿಳಿಯದು. ಇತರ ಅಸಹಜ ಲೈಂಗಿಕಾಸಕ್ತರನ್ನು ಸಾಮಾನ್ಯವಾಗಿ ಸಮಾಜದಲ್ಲಿ ಗುರುತಿಸಬಹುದು. ಆದರೆ ಇಂತವರನ್ನು ನಾನಂತೂ ನೇರವಾಗಿ ಕಂಡಿಲ್ಲ. ಆದರೆ ಶವಸಂಭೋಗದ ಮತ್ತು ಶವದ ಮೇಲೆ ಸಂಭೋಗದ ಪ್ರಸ್ತಾಪಗಳು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.
  11. ಅಂಗಕಾಮ ((Partialism) : ಜನನೇಂದ್ರಿಯಗಳಲ್ಲದೇ ಅಂಡು, ಕೂದಲು, ಮೊಲೆಗಳಂತಹ ದೇಹದ ಭಾಗಗಳನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಳ್ಳುವುದು.
  12. ಪಶುಕಾಮ ((Zoophilia): ಹಸು, ಕರು, ಎಮ್ಮೆ, ಮೇಕೆ, ಕುದುರೆ, ನಾಯಿಗಳಂತಹ ಪ್ರಾಣಿಗಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು.
  13. ಮಲಕಾಮ ((Coprophilia): ಮಲವನ್ನು ಮೂಸುವುದು, ಸೇವಿಸುವುದು, ರುಚಿನೋಡುವುದು, ಮಲವಿಸರ್ಜಿಸುವುದನ್ನು ನೋಡಿಕೊಂಡಿರುವುದು ಕೂಡಾ ಕಾಮತೃಪ್ತಿ.
  14. ಗುದಕಾಮ ((Klismaphilia): ಗುದದ್ವಾರದಿಂದ ದ್ರವವನ್ನು ಸೇರಿಸಿಕೊಳ್ಳುವುದು, ಮಾದಕವಸ್ತುಗಳನ್ನು ಸೇರಿಸಿಕೊಳ್ಳುವ ಮೂಲಕ ಲೈಂಗಿಕಾನಂದವನ್ನು ಪಡೆಯುವುದು.
  15. ಮೂತ್ರಕಾಮ ((Urophilia): ಮೂತ್ರವನ್ನು ಮೂಸುವ, ಸೇವಿಸುವ ಮತ್ತು ಅದರ ವಿಸರ್ಜನೆಯನ್ನು ಕೇಳುತ್ತಾ ಅಥವಾ ಮಾಡುವ ಮೂಲಕ ಆನಂದಿಸುವ ಕಾಮ.
  16. ಭಾವಕಾಮ ((Autogynephilia): ಪುರುಷರು ತಮ್ಮನ್ನು ಸ್ತ್ರೀಯೆಂದು ಭಾವಿಸಿಕೊಂಡು ಪಡುವ ಲೈಂಗಿಕ ತೃಪ್ತಿ.
  17. ನಿರ್ವಾತ ಕಾಮ ( (Asphyxiophilia ಅಥವಾ hypoxyphilia): ಮೆದುಳಿಗೆ ಆಮ್ಲಜನಕದ ಸರಬರಾಜಿನ ಕೊರತೆಯನ್ನು ತಂದುಕೊಂಡು, ನಿರ್ವಾತದ ಸ್ಥಿತಿಯಲ್ಲಿ ಲೈಂಗಿಕಾನಂದವನ್ನು ಪಡೆವುದು.
  18. ಚಿತ್ರೀಕೃತ ಕಾಮ (Video voyeurism) : ಇತರರ ಖಾಸಗೀ ಮೂಲೆಗಳಲ್ಲಿ ಇಣುಕಿ, ವಸ್ತ್ರಗಳನ್ನು ಬದಲಾಯಿಸುವ, ಸ್ನಾನ ಮಾಡುವ, ಪಾಯಖಾನೆಗಳಲ್ಲಿರುವ, ಬೆತ್ತಲಾಗಿರುವ, ಸಂಭೋಗಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಅದನ್ನು ನೋಡುವ ಮೂಲಕ ಅಥವಾ ಇತರರಿಗೆ ತೋರಿಸುವ ಮೂಲಕ ತಮ್ಮ ಕಾಮತೃಷೆಯನ್ನು ತಣಿಸಿಕೊಳ್ಳುವುದು.
  19. ಹಸುಗೂಸು ಕಾಮ ((Infantophilia): ತೀರಾ ಎಳೆಯ ಕಂದಮ್ಮಗಳನ್ನು, ತೊಟ್ಟಿಲಿನ ಹಸುಗೂಸುಗಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು.

ಹೀಗೆ ಲೈಂಗಿಕಾಸಕ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ನಾನಾ ವ್ಯಕ್ತಿಗಳು ನಾನಾ ದಾರಿಗಳನ್ನು ತಮ್ಮ ಇಚ್ಛೆ ಇಲ್ಲದೆಯೇ ಕಂಡುಕೊಂಡಿರುತ್ತಾರೆ. ನಾವು ನೆನಪಿನಲ್ಲಿಡಲೇಬೇಕಾದ ವಿಷಯವೆಂದರೆ, ಮೇಲೆ ತಿಳಿಸಿದ ಯಾವುವೂ ಅವರ ಪ್ರಜ್ಞಾಪೂರ್ವಕ ಇಚ್ಛೆಯ ಅಥವಾ ಉದ್ದೇಶಿತ ಆಯ್ಕೆಯ ಅನುಗುಣವಾಗಿ ಅಲ್ಲ. ಇವುಗಳು ಅವರ ಅನೈಚ್ಛಿಕ ಮನೋದೈಹಿಕ ಸಮಸ್ಯೆ. ಇದಕ್ಕೆ ಕಾರಣಗಳು ಮಾತ್ರ ನಿಜಕ್ಕೂ ನೇರವಾಗಿ ತಿಳಿಯದು.

ಆದರೆ ಕೌಟುಂಬಿಕ, ಶಾರೀರಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಭಾವಗಳೆಲ್ಲಾ ಕೆಲಸ ಮಾಡಿರುತ್ತವೆ ಎಂಬುದಂತೂ ಸತ್ಯ. ಈ ಲೈಂಗಿಕ ಅಸಹಜತೆಯ ವರ್ತನೆಗಳು ಹೆಂಗಸರಿಗಿಂತ ಗಂಡಸರಲ್ಲಿಯೇ ಇಪ್ಪತ್ತು ಪಟ್ಟು ಅಧಿಕ ಎಂದು ಅಧ್ಯಯನಗಳು ತಿಳಿಸುತ್ತವೆ.

ಈ ಸಮಸ್ಯೆಗಳು ಧುತ್ತೆಂದು ವಯಸ್ಕರಲ್ಲಿ ಕಾಣಿಸಿಕೊಳ್ಳುವಂತಹದ್ದೇನಲ್ಲ. ಬಾಲ್ಯದಲ್ಲಿ, ಕಿಶೋರಾವಸ್ಥೆಯಲ್ಲಿ ಕಂಡುಬಂದು ವಯಸ್ಕರಾದಾಗ ಫಲ ನೀಡುತ್ತದೆ. ಒಟ್ಟಾರೆ ಸ್ಥೂಲವಾಗಿ ಹೇಳುವುದಾದರೆ, ಲೈಂಗಿಕ ದೌರ್ಜನ್ಯಗಳ ತಡೆಗಟ್ಟುವುದಕ್ಕೆ ಶಿಕ್ಷೆಗಳ ತೀಕ್ಷ್ಣತೆಗಳಿಂದ ಸಾಧ್ಯವಿಲ್ಲ.

ಲೈಂಗಿಕ ಶಿಕ್ಷಣ ಒಂದು ಹಂತದಲ್ಲಿ ದೌರ್ಜನ್ಯಗಳನ್ನು ಕ್ಷೀಣಗೊಳಿಸುವ ಸಾಧ್ಯತೆಗಳಿವೆ. ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊಡೆದುಹಾಕುವ, ಲೈಂಗಿಕ ಕಾರ್ಯಕರ್ತರನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವ, ಲೈಂಗಿಕ ವಿಚಾರಗಳ ಬಗ್ಗೆ ಕೌಟುಂಬಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಕ್ತವಾಗಿ ಸಂವಾದಿಸುವ ವಾತಾವರಣಗಳನ್ನು ಸೃಷ್ಟಿಸುವಲ್ಲಿ ನಾವು ಸಫಲವೇ ಆದಲ್ಲಿ ಅತ್ಯಾಚಾರದ ಭೀಕರ ಮತ್ತು ಅಮಾನವೀಯ ಸಂಗತಿಗಳು ಘಟಿಸದಿರಬಹುದು.

ಅತ್ಯಾಚಾರಿಗಳನ್ನು ಸಮಾಜವೇ ಪರೋಕ್ಷವಾಗಿ ಮತ್ತು ಅಜ್ಞಾನದಿಂದ ರೂಪಿಸಿ, ಅಥವಾ ನಮ್ಮ ಸಹಜೀವಿಗಳಲ್ಲೇ ರೂಪುಗೊಂಡಿರುವ ಅತ್ಯಾಚಾರಿಗಳನ್ನು ಗುರುತಿಸಲು, ಚಿಕಿತ್ಸೆ ನೀಡಲು ನಾವೇ ವಿಫಲವಾಗಿ ಮತ್ತೆ ಅವರನ್ನೇ ಶಿಕ್ಷಿಸುವುದು ನನ್ನ ದೃಷ್ಟಿಯಲ್ಲಿ ಹೊಣೆಗೇಡಿತನ. ಅತ್ಯಾಚಾರ ಮತ್ತು ಅದರಷ್ಟೇ ಭೀಕರವಾಗಿರುವ ಅನೇಕಾನೇಕ ಸಂಗತಿಗಳಿಗೆ ನಾವು ಶಿಕ್ಷೆಯಿಂದ ನಿರ್ನಾಮ ಬಯಸಿದ್ದಲ್ಲಿ ಅದು ಅಪ್ರಾಯೋಗಿಕ ಮತ್ತು ವಿಫಲ ಯತ್ನ.

ನಮ್ಮದೇ ಮನೆಯ, ನಮ್ಮದೇ ಮಗುವಿನ ಲೈಂಗಿಕಾಸಕ್ತಿಗಳನ್ನು ನಾವು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಜನನೇಂದ್ರಿಯ ಎನ್ನುವುದು ಬರಿಯ ವಿಸರ್ಜನಾಂಗವಾಗಿ ಮಾತ್ರ ಬಳಕೆಯಾಗುವುದನ್ನು ಮಾತ್ರ ಪೋಷಕರಾದವರು ಗಮನಿಸಬೇಕೆಂಬುವ ಒಂದು ಅಲಿಖಿತ ಶಾಸನವೊಂದನ್ನು ಅನುಸರಿಸುತ್ತಿದ್ದೇವೆ.

ಲೈಂಗಿಕಾಸಕ್ತಿಯ ಅಥವಾ ಲೈಂಗಿಕಾನುಭವದ ಬಗ್ಗೆ ಹಂಚಿಕೊಳ್ಳುವ ಆಪ್ತತೆ ಬೆಳೆದಾಕ್ಷಣ ಸಂಬಂಧದ ಪಾವಿತ್ರ್ಯತೆಗೆ ಧಕ್ಕೆ ಎಂಬಂತೆ ಅರಿಮೆಯುಂಟಾಗುವಂತಹ ಸಾಮಾಜಿಕ ವ್ಯವಸ್ಥೆಯಲ್ಲಿದ್ದೇವೆ. ಮುಖ್ಯವಾಗಿ ಲೈಂಗಿಕಾಸಕ್ತಿ ಎನ್ನುವುದು ಮಗುವಿನಲ್ಲಿಯೇ ಮೊಳೆಯುತ್ತಿರುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರಬೇಕು. ಲೈಂಗಿಕ ಶಿಕ್ಷಣ ಮತ್ತು ಲೈಂಗಿಕಾಸಕ್ತಿಯ ಗಮನ ಎಂದರೆ ಸಂಭೋಗದ ಪ್ರಾತ್ಯಕ್ಷಿಕೆ ಎಂಬ ಕಪೋಲಕಲ್ಪಿತ ಭ್ರಮೆಯನ್ನು ಬಿಡಬೇಕು.

ಮಕ್ಕಳ ಜೊತೆಗೆ ಮುಕ್ತವಾಗಿದ್ದಷ್ಟು ಅವರು ಬೆಳೆದಂತೆ ತಮ್ಮ ಲೈಂಗಿಕ ತುಮುಲಗಳನ್ನಾಗಲಿ ಅಥವಾ ತಳಮಳವನ್ನಾಗಲಿ ಒಂದು ವೇಳೆ ನೇರವಾಗಿ ಹೇಳದಿದ್ದರೂ, ನಮಗೆ ಗೊತ್ತಾಗುವ ರೀತಿಯಲ್ಲಿ ವ್ಯಕ್ತಪಡಿಸಬಲ್ಲರು. ಆಗ ನಾವು ಪ್ರತ್ಯಕ್ಷ ಅಥವಾ ಪರೋಕ್ಷ ಸಮಾಲೋಚನೆ ಮಾಡುವ ಸಾಧ್ಯತೆಗಳಿರುತ್ತವೆ. ಸಾಲದಕ್ಕೆ ಆ ಲೈಂಗಿಕಾಸಕ್ತಿ ಮತ್ತು ತಳಮಳಗಳು ನಮಗೂ ಏನೂ ಹೊಸತಲ್ಲವಲ್ಲ!

ಒಬ್ಬನ ನೈತಿಕ ಬದ್ಧತೆ, ಪ್ರಾಮಾಣಿಕ ಆತ್ಮಾವಲೋಕನ ಮತ್ತುದಿಟವಾದ ಜೀವಪರ ಕಾಳಜಿಯು ಅಪರಾಧಗಳು ಆಗದಂತೆ ನೋಡಿಕೊಳ್ಳುತ್ತವೆ. ಅಪರಾಧಿಗಳನ್ನು ಶಿಕ್ಷಿಸುವ ಆತುರಕ್ಕಿಂತ ಅಪರಾಧಿಗಳನ್ನಾಗಿ ರೂಪುಗೊಳಿಸದಿರುವಂತಹ ಕೌಟುಂಬಿಕ ಮತ್ತು ಸಾರ್ವತ್ರಿಕ ಶಿಕ್ಷಣ ನಮಗೆ ಬೇಕಿದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending