ಅಂತರಂಗ
ಅರಿಮೆಯ ಅರಿವಿರಲಿ-26 : ಹಿಟ್ಟಿನ ಹುಂಜ
- ಯೋಗೇಶ್ ಮಾಸ್ಟರ್
ಜನ್ನನ ಯಶೋಧರ ಚರಿತೆಯಲ್ಲಿ ರಾಜ ಯಶೋಧರನ ಮಡದಿ ಅಮೃತಮತಿಯು ಮಾವುತ ಅಷ್ಟಾವಂಕನಿಗೆ ಆಕರ್ಷಿತಳಾಗುತ್ತಾಳೆ. ಇದನ್ನು ಕಂಡ ರಾಜ ಅವರನ್ನು ಕೊಲ್ಲಲು ಖಡ್ಗ ತೆಗೆಯುತ್ತಾನೆ. ಆದರೆ ಅಹಿಂಸೆಯನ್ನು ಪಾಲಿಸುವ ಜೈನಧರ್ಮದವನಾದ್ದರಿಂದ ಸುಮ್ಮನಾಗುತ್ತಾನೆ. ಅವನ ದುಗುಡ ಕಂಡ ಅವನ ತಾಯಿ ಕಾರಣ ಕೇಳಿದರೆ, ವಾಸ್ತವವನ್ನು ಹೇಳಲು ಹಿಂಜರಿಯುವ ರಾಜ ಕೆಟ್ಟ ಕನಸೊಂದನ್ನು ಕಂಡೆ ಎನ್ನುತ್ತಾನೆ. ದುಃಸ್ವಪ್ನ ಬಾಧೆಯ ಪರಿಹಾರಕ್ಕೆ ಜೋತಿಷಿ ಹುಂಜವನ್ನು ಬಲಿಕೊಡಲು ಹೇಳುತ್ತಾರೆ. ಮತ್ತದೇ ಅಹಿಂಸಾ ಧರ್ಮ.
ಸರಿ, ಒಂದು ಹಿಟ್ಟಿನ ಹುಂಜವನ್ನು ಮಾಡಿ ಬಲಿಕೊಡುವ ಶಾಸ್ತ್ರ ಮಾಡಲು ಸಿದ್ಧರಾಗುತ್ತಾರೆ. ಹಿಟ್ಟಿನ ಹುಂಜದ ಸೌಂದರ್ಯಕ್ಕೆ ಮರುಳಾದ ಒಂದು ಆತ್ಮ ಅದರಲ್ಲಿ ಬಂದು ಸೇರಿಕೊಳ್ಳುತ್ತದೆ. ಅದು ತಿಳಿಯದೇ ಯಶೋಧರ ಹಿಟ್ಟಿನ ಹುಂಜವನ್ನು ಕತ್ತರಿಸಿದಾಗ ಅದು ‘ಕ್ಕೊಕ್ಕೊಕ್ಕೋ’ ಎಂದು ವಿಕಾರವಾಗಿ ಕೂಗುತ್ತಾ ರಕ್ತಕಾರಿಕೊಂಡು ಬಿದ್ದು ಸಾಯುತ್ತದೆ. ಇದರಿಂದ ಮನನೊಂದ ಯಶೋಧರ ಪ್ರಾಯಶ್ಚಿತ್ತವಾಗಿ ಕಾಡಿಗೆ ಹೋಗಲು ನಿರ್ಧರಿಸುತ್ತಾನೆ. ಹೀಗೆ ಕತೆ ಮುಂದುವರಿಯುತ್ತದೆ.
ಕೂಗುತ್ತಾ ಸಾಯುವ ಹಿಟ್ಟಿನ ಹುಂಜದ ರೂಪಕವು ವ್ಯಕ್ತಿಯ ಮನೋಭಾವವು ಅವನ ಕ್ರಿಯೆಗಳಲ್ಲಿ, ವರ್ತನೆಗಳಲ್ಲಿ ಪ್ರಕಟಗೊಳ್ಳುತ್ತದೆ. ರಕ್ತ ಮಾಂಸವಿಲ್ಲದ ಹಿಟ್ಟಿನ ಹುಂಜವು ರಕ್ತಕಾರುವಂತೆ ಅಪರಾಧದ ಅರಿಮೆಯುಳ್ಳ ವ್ಯಕ್ತಿಗಳ ಕ್ರಿಯೆಗಳು ಮತ್ತು ಆಲೋಚನೆಗಳು ಅನಗತ್ಯವಾದ ಅಪರಾಧ ಪ್ರಜ್ಞೆಯಿಂದ ಕೂಡಿರುತ್ತವೆ.
ಯಶೋಧರನಿಗೆ ಕೊಲ್ಲುವ ಕೋಪ ಬಂದಿತ್ತು. ಆದರೆ ಅವನ ಧಾರ್ಮಿಕ ಕಟ್ಟುಪಾಡು ಅವನ ಕೈ ಕಟ್ಟಿಹಾಕಿತು. ಮನಸ್ಸಿನ ಒಳಗೆ ಹುಟ್ಟಿದ ಹಿಂಸೆ ಮಾಡುವಷ್ಟರ ಕೋಪ ಹೊರಗೆ ಬರಲೇ ಬೇಕಾಗಿತ್ತು. ಅದು ಹಿಟ್ಟಿನ ಹುಂಜದ ಬಲಿಯಲ್ಲಿ ಹೊರಗೆ ಬಂತು.
ಎಲ್ಲೋ, ಏಕೋ, ಹೇಗೋ ಹುಟ್ಟಿದ ಆಲೋಚನೆಗಳು, ಘಟನೆಗಳು, ಸಾಕ್ಷೀಕರಿಸುವ ಸಂಗತಿಗಳು, ಅನುಭವಗಳು ವ್ಯಕ್ತಿಗಳಲ್ಲಿ ಅರಿಮೆಗಳನ್ನು ಸೃಷ್ಟಿಸುತ್ತವೆ. ಅವುಗಳು ಮುಂದೆ ವಿಷಯಗಳು ಅಥವಾ ಸಂಗತಿಗಳು ವಾಸ್ತವದಲ್ಲಿರಲಿ ಇಲ್ಲದಿರಲಿ ಕೆಲಸ ಮಾಡುತ್ತಿರುತ್ತವೆ, ನಿಜವಾಗಿರುವಂತೆ. ಅದೇ ಅರಿಮೆಗಳು ಉಂಟು ಮಾಡುವ ಸಮಸ್ಯೆ.
ಐದು ಬಗೆಗಳು
ಏನಾದರೂ ತಪ್ಪಾದಾಗ ‘ಹೌದು, ನಾನು ಈ ತಪ್ಪು ಮಾಡಿದೆ’ ಎಂದು ತಪ್ಪೊಪ್ಪಿಕೊಳ್ಳುವುದು ಸಾಧಾರಣ. ಆದರೆ, ತಪ್ಪು ಮಾಡದಿದ್ದರೂ ತನ್ನ ಎಲ್ಲಾ ಕ್ರಿಯೆಗಳೂ ತಪ್ಪಿನಿಂದಲೇ ಕೂಡಿವೆ ಎಂದು ಭಾವಿಸುತ್ತಿರುವುದು ಗಿಲ್ಟ್ ಕಾಂಪ್ಲೆಕ್ಸ್ ಅಥವಾ ಅಪರಾಧದ ಅರಿಮೆ. ಸಾಧಾರಣವಾಗಿ ಅಪರಾಧದ ಅರಿಮೆಯಲ್ಲಿ ಐದು ರೀತಿಗಳನ್ನು ಗಮನಿಸಬಹುದು. ತಪ್ಪಾಗಿ ನಡೆದುಕೊಳ್ಳುವುದು ಅಥವಾ ತಪ್ಪಾದ ಕೆಲಸ ಮಾಡುವುದು, ಅಪರಾಧದ ಆಲೋಚನೆಗಳನ್ನು ಮಾಡುತ್ತಿರುವುದು, ಹುಸಿ ಆರೋಪಗಳನ್ನು ತಾನೇ ಮಾಡಿಕೊಳ್ಳುವುದು, ಕರುಣೆಗಾಗಿ ತನ್ನನ್ನು ಆರೋಪಿಸಿಕೊಳ್ಳುವುದು ಮತ್ತು ಅಪರಾಧ ಮಾಡಿದ ಮೇಲೆ ಅದರ ಭಾವದಲ್ಲಿರುವುದು.
ಸಾಮಾನ್ಯವಾಗಿ ಅಪರಾಧದ ಅರಿಮೆಯ ಮೂಲ ಬಾಲ್ಯದಲ್ಲೇ. ತಪ್ಪು ಮಾಡಿದಾಗ ಸಿಗುವ ಶಿಕ್ಷೆಯಿಂದ ತಪ್ಪು ಮಾಡಿಬಿಡುತ್ತೇನೆ ಅಥವಾ ತಪ್ಪು ಆಗಿಬಿಟ್ಟರೆ ಎಂಬ ಆತಂಕ ಮೊಳೆಯ ತೊಡಗುತ್ತದೆ. ಇದೂ ಕೂಡಾ ಅತಿ ಸಣ್ಣವಯಸ್ಸಿನಲ್ಲಿಯೇ ಅಪರಾಧದರಿಮೆಯು ಮೂಡುವ ಬಗೆ. ಒಂದು ವೇಳೆ ಮಕ್ಕಳು ಅನಾರೋಗ್ಯಕರವಾದಂತಹ ಧೋರಣೆಯನ್ನು ತಮ್ಮ ತಪ್ಪುಗಳ ಬಗ್ಗೆ ಹೊಂದತೊಡಗಿದರೆ ಮುಂದೆ, ಅಂದರೆ ಅವರು ವಯಸ್ಕರಾದಾಗ ಅದು ಬಹಳ ಗಟ್ಟಿಯಾದ ಮನೋಭಾವವಾಗುತ್ತದೆ. ಸುಳ್ಳು ಹೇಳುವ ಮಗುವಿಗೆ ಶಿಕ್ಷೆ ಕೊಡಲಾಯಿತೆಂದು ಇಟ್ಟುಕೊಳ್ಳಿ. ಮಗುವಿಗೆ ಆ ಸುಳ್ಳು ಹೇಳುವ ಕಾರಣವೊಂದು ಇದ್ದಿರುತ್ತದೆ. ಅದನ್ನು ನೀವು ಪರಿಗಣಿಸಲಿಲ್ಲ. ಬರಿಯ ಸುಳ್ಳು ಹೇಳುವ ಕಾರಣಕ್ಕೆ ದಂಡಿಸಿದಿರಿ. ನಿಮ್ಮಿಂದ ದಂಡನೆಗೆ ಗುರಿಯಾಗದಂತೆ ಸುಳ್ಳನ್ನು ಹೇಳುವ ತಂತ್ರಗಾರಿಕೆಯನ್ನು ಅವನು ರೂಢಿಸಿಕೊಳ್ಳುತ್ತಾನೆ. ಮುಂದೊಬ್ಬ ಸುಳ್ಳು ಸಾಮಾಜ್ರ್ಯದ ಚಕ್ರವರ್ತಿಯಾಗುತ್ತಾನೆ.
ಮಕ್ಕಳು ನಿಜವನ್ನೇ ಹೇಳಿದಾಗ ತಾವು ಎದುರಿಸುವ ಸಮಸ್ಯೆಗಳಿಗೆ ಹೆದರಿ ಪೆÇೀಷಕರಿಗೆ ಹಿತವಾದ ಮತ್ತು ಅವರು ಮೆಚ್ಚುವ ಸುಳ್ಳುಗಳನ್ನು ಹೇಳುತ್ತಾರೆ. ಅದನ್ನು ಮನೆಯವರು ಒಪ್ಪುತ್ತಾರೆ. ಈ ಯಶಸ್ಸಿನಿಂದ ಉತ್ತೇಜಿತವಾಗುವ ಮಗುವು ಗಿಲ್ಟ್ ಕಾನ್ಶಸ್ (ಅಪರಾಧ ಪ್ರಜ್ಞೆ) ಇಲ್ಲದೆಯೇ ಆರಾಮವಾಗಿ ಸುಳ್ಳುಗಳನ್ನು ಹೇಳುತ್ತಿರುತ್ತದೆ. ಒಂದು ವೇಳೆ ಅವನು ಸುಳ್ಳು ಹೇಳಿದಾಗಲೆಲ್ಲಾ ಸಿಕ್ಕಿ ಹಾಕಿಕೊಂಡ ಎಂದಿಟ್ಟುಕೊಳ್ಳಿ. ಅದಕ್ಕೆ ಬೇಕಾದಷ್ಟು ಬೈಗುಳ ಮತ್ತು ದಂಡನೆಗಳು ಆಗ್ಗಿಂದಾಗೆ ಸಿಕ್ಕಿವೆ ಎಂದಿಟ್ಟುಕೊಳ್ಳಿ. ಕಾಲಾಂತರದಲ್ಲಿ ತಾನು ಸಹಜವಾಗಿ ಮಾತಾಡುವಾಗಲೂ ತಪ್ಪು ಮಾತಾಡುತ್ತಿರುವ ಅಪರಾಧದ ಅರಿಮೆ ಬೆಳೆಯುತ್ತದೆ.
ಒಂದು ತಿಳಿದುಕೊಳ್ಳೋಣ.
ಮನಸ್ಸಿಗೆ ಬಲಸಿಗುವುದಾದರೂ, ಸಮಸ್ಯೆಗೆ ಒಳಗಾಗುವುದಾದರೂ ವ್ಯಕ್ತಿಯ ಸುತ್ತಲೂ, ಅದರಲ್ಲೂ ಮಗುವಿನ ಸುತ್ತಲೂ ನಡೆಯುವ ಚಟುವಟಿಕೆಗಳ ಮೂಲಕ. ಯಾವುದಪ್ಪಾ ಆ ಚಟುವಟಿಕೆಗಳು ಅಂದರೆ, ಯಾವುದೇ ಒಂದು ಕ್ರಿಯೆಯ ಕಾರಣ ಮತ್ತು ಪರಿಣಾಮಗಳನ್ನು ಆಲೋಚಿಸುವುದು, ಎದುರಿಗೆ ಇರುವ ಯಾವುದೇ ವಿಷಯವನ್ನು, ಸಂಗತಿಯನ್ನು ಗ್ರಹಿಸುವುದು, ಯಾವುದೇ ಒಂದು ತನ್ನ ಕಡೆಯಿಂದ ಆಗುವಾಗ ತೀರ್ಮಾನಗಳನ್ನು ತೆಗೆದುಕೊಳ್ಳುವುದು, ಕೇಳಿಸಿಕೊಳ್ಳುವುದು, ಗಮಸಿಸುವುದು ಅಥವಾ ಸಾಕ್ಷೀಕರಿಸುವುದು; ಇವೆಲ್ಲವೂ ಕೂಡಾ ಮನಸ್ಸಿನ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ. ಸಕಾರಾತ್ಮಕವಾಗಿದ್ದರೆ, ವಿವೇಚನೆಯಿಂದ ಕೂಡಿದ್ದರೆ ಧನಾತ್ಮಕ ಪರಿಣಾಮಗಳಾದರೆ, ನಕಾರಾತ್ಮಕವಾಗಿದ್ದರೆ, ವಿವೇಚನೆಯಿಂದ ಕೂಡಿರದೇ ಇದ್ದರೆ ಋಣಾತ್ಮಕ ಪರಿಣಾಮಗಳಾಗುತ್ತವೆ.
ನೈತಿಕ ನಿಯಮಗಳು ಮತ್ತು ಸಹಜ ಕ್ರಿಯೆಗಳು
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಆಲೋಚನೆ, ಕ್ರಿಯೆ ಬಗ್ಗೆ ಹೊಂದಿರುವ ತಪ್ಪಾದ ಮನೋಭಾವದ ಕಾರಣಗಳಿಂದಲೇ ಅಪರಾಧದ ಅರಿಮೆ ಉಂಟಾಗುವುದು. ಇನ್ನೂ ಸರಿಯಾದ ಉದಾಹರಣೆಯೆಂದರೆ ನಮ್ಮ ದೇಶದಲ್ಲಿ ಈಗಲೂ ಬಹಳಷ್ಟು ಯುವ ಪೀಳಿಗೆಯು ಹಸ್ತ ಮೈಥುನದ ಬಗ್ಗೆ ಅಪರಾಧ ಪ್ರಜ್ಞೆಯನ್ನು ಹೊಂದಿವೆ. ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹ ಆಲೋಚನೆಗಳಿಂದಾಗಿ ಶೀಲ ಅಶ್ಲೀಲಗಳ ಪರಿಕಲ್ಪನೆಯನ್ನು ಹೊಂದಿವೆ.
ಹಸ್ತಮೈಥುನದಿಂದ ಕ್ರಮೇಣ ತಮ್ಮ ಲೈಂಗಿಕ ಸಾಮರ್ಥ್ಯ ಕುಗ್ಗುವುದೆಂದು, ಶಾರೀರಿಕ ಸದೃಢತೆ ಕ್ಷೀಣಿಸುವುದೆಂದು ತಿಳಿದಿರುವ ಕಾರಣದಿಂದ ಉದ್ರಿಕ್ತರಾದಾಗ ಸಹಜವಾಗಿ ಹಸ್ತಮೈಥುನ ಮಾಡಿಕೊಂಡಾದ ಮೇಲೆ ತಪ್ಪು ಮಾಡಿರುವ ಭಾವದಲ್ಲಿ ಆಲೋಚನೆಗಳನ್ನು ಹೊಂದುವುದು. ಅಥವಾ ತಾನು ಈ ಕೆಲಸ ಮಾಡಬಾರದು, ಮಾಡಬಾರದು ಎಂದು ಅಳುಕುತ್ತಲೇ ಮಾಡಿಕೊಳ್ಳುವುದು.
ಇನ್ನೂ ಕೆಲವರು ಹದಿಹರೆಯದಲ್ಲಿ ಸತತವಾದ ಹಸ್ತಮೈಥುನದಲ್ಲಿ ತೊಡಗಿದ್ದು ನಂತರ ಮದುವೆಯ ಸಮಯ ಬಂದಾಗ ಆ ತಮ್ಮ ಕೃತ್ಯದಿಂದಾಗಿ ತಮಗೆ ಮಕ್ಕಳಾಗುವುದಿಲ್ಲ, ಅಥವಾ ಸಂಗಾತಿಯನ್ನು ತೃಪ್ತಿಪಡಿಸಲಾಗುವುದಿಲ್ಲ ಎಂಬ ಭಯದಿಂದ ಮದುವೆಯಾಗಲು ಹಿಂಜರಿಯುವುದು. ಈ ವಿಷಯದಲ್ಲಿ ನೀವು ಗಮನಿಸಬೇಕಾಗಿರುವುದೇನೆಂದರೆ ವಾಸ್ತವವಾಗಿ ಒಬ್ಬ ಯುವಕ ಹಸ್ತಮೈಥುನವನ್ನು ಮಾಡಿಕೊಳ್ಳುವುದು ಸಹಜ ಹಾಗೂ ಅದರಿಂದ ಅವನ ಸಂಗಾತಿಯೊಡನೆ ನಡೆಸುವ ಲೈಂಗಿಕ ಕ್ರಿಯೆಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.
ಆದರೆ ಅವನಲ್ಲಿ ಬಿತ್ತಲಾಗಿರುವಂತಹ ವಿಚಾರಗಳಿಂದಾಗಿ ತಾನು ಹಸ್ತಮೈಥುನ ಮಾಡಿಕೊಳ್ಳುವಾಗ ಅವನಲ್ಲಿ ಅಪರಾಧಿ ಮನೋಭಾವ ಕಾಡುವುದು.
ಹೀಗೆ ಉಂಟಾಗುವ ನಕಾರಾತ್ಮಕ ಭಾವನೆಗಳು ತಪ್ಪು ವಿವರಣೆಗಳನ್ನು ಕೊಡುತ್ತಿರುತ್ತವೆ, ಅತಿಯಾಗಿ ಚಿಂತಿಸುವಂತೆ ಮಾಡುತ್ತವೆ, ಯಾರದೋ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ಇದರೊಂದಿಗೆ ತಳುಕು ಹಾಕಿ ಸಾಮಾನ್ಯೀಕರಿಸುವಂತೆ ಮಾಡುತ್ತದೆ. ತನ್ನ ಬೇರೆ ಯಾವುದಾದರೂ ದೌರ್ಬಲ್ಯವನ್ನು ಇದರೊಂದಿಗೆ ಬೆಸೆಯುವಂತೆ ಮಾಡುತ್ತದೆ; ಇವೆಲ್ಲವೂ ಅಪರಾಧದ ಅರಿಮೆಯ ಕೆಲಸಗಳೇ.
ವಿವೇಚನೆ ಮತ್ತು ಪ್ರಜ್ಞೆ
ಯಾರಿಗಾದರೂ ಕೊಟ್ಟ ಮಾತನ್ನು ಮುರಿಯುವುದು, ಯಾರಿಗೋ ತಿಳಿಯದಂತೆ ಏನನ್ನೋ ತೆಗೆದುಕೊಂಡು ಬಿಡುವುದು, ಸುಳ್ಳು ಹೇಳುವುದು; ಹೀಗೆ ಯಾವುದನ್ನೇ ಮಾಡಿದರೂ ಒಂದು ವೇಳೆ ಇತರರಿಗೆ ಗೊತ್ತಾಗದಿದ್ದರೂ ‘ಯಾರಿಗೂ ಗೊತ್ತಾಗಿಲ್ಲ’ ಎಂಬ ಸಮಾಧಾನವೇನೂ ಶಾಶ್ವತವಾಗಿ ಇರುವುದೇನಲ್ಲ. ಸಮಾಜದ ನೈತಿಕತೆಯ ಉಲ್ಲಂಘನೆಯ ಅರಿವು ಇರುವುದರಿಂದ ತಾನು ತಪ್ಪು ಮಾಡಿರುವುದಾಗಿ ವ್ಯಕ್ತಿಗೆ ಅನ್ನಿಸುತ್ತಿದ್ದರೆ, ಅದನ್ನೇ ನಾನು ಗಿಲ್ಟ್ ಕಾನ್ಶಸ್ ಅಥವಾ ಅಪರಾಧ ಪ್ರಜ್ಞೆ ಎನ್ನುವುದು. ಅದು ಕಾಡಬಹುದು, ಅಥವಾ ಕ್ರಮೇಣ ಮರೆತು ಹೋಗಬಹುದು. ಆದರೆ ಅದು ಕಾಡಿರುವಷ್ಟು ಗಾಢತೆಯಿಂದ ಮನಸ್ಸಿನಲ್ಲಿ ಅರಿಮೆಯು ಉಂಟಾಗಲು ಕಾರಣವಾಗಿರುತ್ತದೆ.
ಹಾಗೆಯೇ, ಮತ್ತೆ ಕೆಲವು ತಪ್ಪು ಕೆಲಸಗಳನ್ನು ಅವಕಾಶವಿದ್ದರೂ ಮಾಡಲು ಮನಸ್ಸು ಸಮ್ಮತಿಸುವುದಿಲ್ಲ. ಅಲ್ಲಿ ನಮ್ಮನ್ನು ಕಾವಲು ಕಾಯಲು ಯಾರೂ ಇಲ್ಲದಿರಬಹುದು. ತಪ್ಪು ಮಾಡಿದ ಮೇಲೆ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರಬಹುದು. ನಿಂದನೆ ದಂಡನೆಗಳೇನೂ ಇಲ್ಲದಿರಬಹುದು. ಆದರೆ ಈ ತಪ್ಪನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ. ಅದು ತಪ್ಪು ಎಂದು ತಿಳಿದಿದೆ. ಅಪರಾಧಿ ಎಂದು ಯಾರೂ ಗುರುತಿಸದಿದ್ದರೂ ತನ್ನನ್ನೇ ಅಪರಾಧಿ ಎಂದು ತಾನೇ ಅಂದುಕೊಳ್ಳಲು ತಯಾರಾಗಿರುವುದಿಲ್ಲ. ಇದು ವಿವೇಚನೆ ಅಥವಾ ಆತ್ಮಸಾಕ್ಷಿಯ ಪರಿಣಾಮ. ಇದನ್ನು ಗಿಲ್ಟ್ ಕಾನ್ಶನ್ಸ್ ಎನ್ನುವುದು.
ಸಾಮಾನ್ಯವಾಗಿ ಗಿಲ್ಟ್ ಕಾನ್ಶನ್ಸ್ ಇರುವವರು ಅಪರಾಧಗಳನ್ನು ಮಾಡುವುದಿಲ್ಲ. ಹಾಗೆಯೇ ಒಂದು ಏನಾದರೂ ಮಾಡಿದರೂ ಅದನ್ನು ಒಪ್ಪಿಕೊಂಡು ಬಿಡುತ್ತಾರೆ. ಪಡೆಯುವ ಶಿಕ್ಷೆಯು ಅವರನ್ನು ಅಪರಾಧ ಮುಕ್ತರನ್ನಾಗಿಸುವ ಭಾವವೂ ಬರಬಹುದು. ಆದರೆ, ಅಪರಾಧವನ್ನು ನಿರಾಕರಿಸಿ ಗಿಲ್ಟ್ ಕಾನ್ಶಸ್ ಅಥವಾ ಅಪರಾಧ ಪ್ರಜ್ಞೆಯಲ್ಲಿ ನರಳುತ್ತಿರುವುದಕ್ಕೆ ಅವರು ಸಾಮಾನ್ಯವಾಗಿ ಸಿದ್ಧವಿರುವುದಿಲ್ಲ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


