ಅಂತರಂಗ
ಅರಿಮೆಯ ಅರಿವಿರಲಿ-31 : ಸೇಡೆಂಬ ಸೋಂಕು
- ಯೋಗೇಶ್ ಮಾಸ್ಟರ್
ಕೆಲವೊಮ್ಮೆ ಕೆಲವರು ತಾವು ತೊಂದರೆಯಲ್ಲಿದ್ದಾಗ ಸಹಾಯ ಕೇಳುತ್ತಾರೆ. ನಮಗೆ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಆ ಸಮಯಕ್ಕೆ ನಿರ್ಲಕ್ಷಿಸಿಬಿಡುತ್ತೇವೆ. ಯಾವುದೋ ಕಾರಣದಿಂದ ಮುಂದೂಡಿರುತ್ತೇವೆ. ಅವರಿಗೆ ಮಾಡುವ ಕೆಲಸಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದಿಲ್ಲ. ಆಮೇಲೆ ಅವರಿಗೆ ಆ ಸಹಾಯದ ಅವಶ್ಯಕತೆಯೇ ಇರುವುದಿಲ್ಲ ಅಥವಾ ನಮ್ಮ ಸಹಾಯ ಪಡೆದುಕೊಳ್ಳಲಾಗದೇ ಇನ್ನೇನಾದರೂ ತೊಂದರೆ ಆಗಿಬಿಟ್ಟಿರುತ್ತದೆ. ಆಗಲೂ ಕೂಡಾ ನಮಗೆ ಅಪರಾಧ ಪ್ರಜ್ಞೆ ಕಾಡುತ್ತದೆ.ಇಂತಹ ಹತ್ತು ಹಲವು ಅನುಭವಗಳು ಅರಿಮೆಗಳಾಗಿ ಬೇರೂರಿದರೂ ಆಶ್ಚರ್ಯವಿಲ್ಲ.
ನೀವೆಲ್ಲೋ ಹೊರಡುತ್ತಿರುತ್ತೀರಿ. ನಿಮ್ಮ ಮನೆಯಲ್ಲಿರುವ ವಯಸ್ಸಾದವರೋ ಅಥವಾ ಸಣ್ಣ ಮಕ್ಕಳೋ ನಿಮಗೆ ಏನನ್ನೋ ಹೇಳಲು ಅಥವಾ ಕೇಳಲು ಪ್ರಯತ್ನಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುವಷ್ಟೂ ವ್ಯವಧಾನವಿರದ ನೀವು ಅಲ್ಲಿಂದ ಹೊರಟುಬಿಡುತ್ತೀರಿ. ಸ್ವಲ್ಪ ದೂರ ಸಾಗಿದ ಮೇಲೆ ಆ ವೃದ್ಧರ ಅಥವಾ ಮಗುವಿನ ಕೇಳುತ್ತಿದ್ದ ಅಥವಾ ಮಾತಾಡುತ್ತಿದ್ದ ಮುಖ ನೆನಪಿಗೆ ಬರುತ್ತದೆ. ಆಗ ನಿಮಗೆ ಪಿಚ್ಚೆನಿಸುತ್ತದೆ. ಹಾಗೆ ಬರಬಾರದಿತ್ತು ಎಂದು ಪದೇ ಪದೇ ಅನ್ನಿಸುತ್ತದೆ. ಅದನ್ನು ಹೇಗೆ ಸರಿಮಾಡುವುದು ಎಂದು ಆಲೋಚಿಸುತ್ತೀರಿ. ಈ ಬಗೆಯ ಅಪರಾಧದ ಅರಿಮೆಗೆ ಕಂಪಾಶನ್ ಗಿಲ್ಟ್ ಅಥವಾ ಅನುಕಂಪದ ಅಪರಾಧದ ಅರಿಮೆಯೆಂದೇ ಕರೆಯುತ್ತಾರೆ.
ಅನುಕಂಪಿತ ಅಪರಾಧ
ಕೆಲವೊಮ್ಮೆ ನಮ್ಮದೇ ಸಮಸ್ಯೆ ಇರುವಾಗ ಗಮನಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸಾಂದರ್ಭಿಕವಾಗಿ ಮೂಡುವ ಉಪೇಕ್ಷೆಯ ಭಾವದಿಂದ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಕೆಲವೊಮ್ಮೆ, ಸಹಾಯ ಮಾಡಬೇಕು ಎಂದು ಬಹಳ ಗಂಭೀರವಾಗಿ ಒಲವನ್ನು ಹೊಂದಿದ್ದರೂ ಸಂಪನ್ಮೂಲಗಳ ಕೊರತೆ ಅಥವಾ ಸಮಯದ ಅಭಾವದಿಂದ ಸಹಾಯ ಮಾಡಿರುವುದಿಲ್ಲ. ಕಾರಣ ಯಾವುದೇ ಆದರೂ ಅಪರಾಧದ ಭಾವ ಕಾಡುತ್ತದೆ.
ಹೀಗೊಮ್ಮೆ ಯಾರಾದರೂ ಸಹಾಯ ಕೇಳಿದಾಗ “ಅವರು ನನ್ನ ವಿಷಯದಲ್ಲಿ ಇಂತಹ ತಪ್ಪು ಮಾಡಿದ್ದರು. ಆದ ಕಾರಣದಿಂದ ನಾನು ಅವರಿಗೆ ಸಹಾಯ ಮಾಡುವುದಿಲ್ಲ” ಎಂದು ಆಲೋಚಿಸಿದರೆ, ಅಂದೆಂದೋ ನನಗೆ ಸಹಾಯ ಬೇಕಿತ್ತು. ಆದರೆ ಅವರು ಮಾಡಿರಲಿಲ್ಲ. ಹಾಗಾಗಿ ಈಗ ನಾನು ಮಾಡುವುದಿಲ್ಲ ಎಂದರೆ ಅವರಲ್ಲಿ ಸೇಡಿನ ಭಾವ ಇದೆ ಎಂದು ಅರ್ಥ. ಸೇಡಿನ ಭಾವವೂ ಕೂಡಾ ಗಂಭೀರವಾದಂತಹ ಮನೋರೋಗವೇ ಹೌದು.
ಸೇಡಿನ ರೋಗ
ನಾರ್ಸಿಸಂನ ಅಥವಾ ಆತ್ಮರತಿಯ ಒಂದು ಭಾಗವೂ ಆಗಿರುವ ಈ ಸೇಡು ತೀರಿಸಿಕೊಳ್ಳುವ ಸಮಸ್ಯೆಯನ್ನು posttraumatic stress disorder (PTSD)ಅಥವಾ ಸೇಡಿನೊತ್ತಡದ ಸಮಸ್ಯೆ ಎಂದು ಕರೆಯಬಹುದು. ತಮ್ಮ ಜೀವನದಲ್ಲಿ ನಡೆದಂತಹ ನಷ್ಟ, ಸಾವು, ನೋವು, ಅವಮಾನ, ನಿರಾಸೆ ಇತ್ಯಾದಿ ಕಹಿ ಘಟನೆಗಳಿಂದ, ನೊಂದಿದ್ದು, ಅದಕ್ಕೆ ಕಾರಣರಾದವರ ಮೇಲೆ ತಮ್ಮ ಕೋಪವನ್ನು ತೋರಿಸಿಕೊಳ್ಳುವಂತಹ ಮನೋಭಾವ ಇದು. ನಮಗೆ ಯಾರಿಂದ ಬೇಸರವಾಗಿರುತ್ತದೆಯೋ, ನಷ್ಟವಾಗಿರುತ್ತದೆಯೋ ಅವರ ಕೋಪವಿರುವುದು ಸಹಜವೇ, ಹೇಗಾದರೂ ಸರಿ ತೀರಿಕೊಂಡೇ ತೀರುತ್ತೇವೆ ಎನ್ನಬೇಡಿ.
ಇದೊಂದು ಬಹಳ ಗಂಭೀರವಾದಂತಹ ಮತ್ತು ಕೇಡಿನ ಪರಿಣಾಮಗಳನ್ನು ಬೀರುವಂತಹ ಮಾನಸಿಕ ಸಮಸ್ಯೆ. ಇಂತಹ ಅನೇಕಾನೇಕ ಮಾನಸಿಕ ಸಮಸ್ಯೆಗಳನ್ನೆಲ್ಲಾ ಸಹಜ ಎಂದು ಪದೇಪದೇ ಹೇಳುತ್ತಲೇ ನಮ್ಮ ಸಮಾಜದಲ್ಲಿ ಅಪರಾಧಗಳು ತೀವ್ರತರದಲ್ಲಿ ಹೆಚ್ಚಿರುವುದು. ಅಪರಾಧಿಗಳು ಹೆಚ್ಚಿದ್ದು ಜೀವಗಳಿಗೆ ಭದ್ರತೆ ಇಲ್ಲದೇ ಹೋಗಿರುವುದು. ಈ ಮಾನಸಿಕ ಸಮಸ್ಯೆಯಿಂದಾಗಿ ಸೇಡಿನ ಭಾವದ ಒತ್ತಡದಿಂದ ಬಳಲುತ್ತಿರುವವರು ತಾವೂ ನೆಮ್ಮದಿಯಾಗಿರುವುದಿಲ್ಲ. ತಮ್ಮ ಜೊತೆಗೆ ಇರುವ ಇತರ ವ್ಯಕ್ತಿಗಳೂ, ಸಂಬಂಧಗಳೂ ನೆಮ್ಮದಿಯಾಗಿರುವುದಿಲ್ಲ ಮತ್ತು ಯಾರನ್ನು ದ್ವೇಷಿಸುತ್ತಾರೆಯೋ ಅವರನ್ನೂ ನೆಮ್ಮದಿಯಾಗಿರಿಸಬಾರದೆಂದು ಪ್ರಯತ್ನಿಸುತ್ತಿರುತ್ತಾರೆ.
ತಮ್ಮ ನೋವಿಗೆ, ನಷ್ಟಕ್ಕೆ, ಅವಮಾನಕ್ಕೆ ಕಾರಣರಾದವರನ್ನು ನಷ್ಟಕ್ಕೆ, ಅವಮಾನಕ್ಕೆ ಮತ್ತು ನೋವಿಗೆ ತಳ್ಳುವ ಈ ಮನೋರೋಗವಿರುವವರು “ನಾವು ಅವರಿಗೆ ಬುದ್ಧಿ ಕಲಿಸುತ್ತೇವೆ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ. ಈ ರೋಗವು ಸಾಂಕ್ರಮಿಕದಂತೆ ವರ್ತಿಸುತ್ತದೆ. ಅದರಿಂದ ಒಬ್ಬ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳಲು ಹಲವಾರು ಜನರೂ ಒಂದಾಗುವುದರಿಂದ ಗುಂಪು ಘರ್ಷಣೆಗಳು ನಡೆಯುವುದು, ಸಾಮೂಹಿಕ ರಕ್ತಪಾತಗಳಾಗುವುದೂ ನಡೆಯುವುದುಂಟು. ಹೊಂಚು ಹಾಕಿ ಕೊಲ್ಲುವುದು, ಎಷ್ಟೋ ಕಾಲಗಳಿಂದ ಕೊಲೆ ಮಾಡಲೆಂದೇ ಸಂಚು ಹೂಡುವುದು, ಅದಕ್ಕೆ ಅವರಿವರನ್ನು ಸಹಾಯಕ್ಕೆ ತೆಗೆದುಕೊಳ್ಳುವುದು; ಇತ್ಯಾದಿಗಳೆಲ್ಲವೂ ಕೂಡಾ ಈ ರೋಗದ ಪ್ರತಿಫಲವೇ. ಸಣ್ಣದೋ ದೊಡ್ಡದೋ ರೋಗ ರೋಗವೇ.
ಕೆಲವರು ತಾವಾಗಿ ಕೊಲೆ ಮಾಡಲು, ಅಥವಾ ಸೇಡು ತೀರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅವರಿಗೆ ತೊಂದರೆ ಆಗಲೆಂದು ಕಾಯುತ್ತಿರುತ್ತಾರೆ. ಇದೊಂದು ಪುಟ್ಟ ಮಾನದಂಡವನ್ನು ಇಟ್ಟುಕೊಳ್ಳೋಣ. ನಮಗೆ ತೊಂದರೆ ಮಾಡಿದ್ದಾರೆಂದು ಅಥವಾ ನಷ್ಟ ಮಾಡಿದ್ದಾರೆಂದು ಆ ವ್ಯಕ್ತಿಗಳಿಗೂ ಕೂಡಾ ತೊಂದರೆ ನಷ್ಟವಾಗಲೆಂದು ಬಯಸುವ ಮನಸ್ಸಾದರೆ, ಅಥವಾ ಆದಾಗ ಸಂತೋಷವಾದರೆ, ಅವನಿಗೆ ಹಾಗೆ ಆಗಬೇಕಿತ್ತು ಎಂದು ಯಾರಿಗಾದರೂ ಅನ್ನಿಸಿದರೆ ಅವರಿಗೆ ಈ ಸಮಸ್ಯೆ ಇದೆ ಎಂದೇ ಅರ್ಥ.
ಅದಕ್ಕೆ ಶಬ್ಧಗಳಲ್ಲಿ ಬೇರೆ ಬೇರೆ ರೂಪಗಳನ್ನು ಕೊಡುತ್ತೇವೆ. “ಒಬ್ಬರಿಗೆ ಕೆಟ್ಟದು ಮಾಡಿದರೆ ಒಳ್ಳೆಯದಾಗತ್ತಾ? ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ?” ಎಂದೋ, “ನನ್ನ ಹೊಟ್ಟೆ ಉರಿ ಅವನನ್ನು ಸುಮ್ಮನೆ ಬಿಡುತ್ತದಾ?” ಎಂದೋ, “ದೇವರು ಸರಿಯಾಗಿ ತೋರಿಸದೇ ಇರುತ್ತಾನಾ?”; ಇವೆಲ್ಲವೂ ಪಿ ಟಿ ಎಸ್ ಡಿ ಅಥವಾ ಸೇಡಿನೊತ್ತಡದ ಸಮಸ್ಯೆಯ ಲಕ್ಷಣಗಳೇ.
ಈ ಸೇಡಿನ ಆಗ್ರಹದ ಮನೋಭಾವವು ಸಾಮಾನ್ಯವಾಗಿ ಸಹಜವಾಗಿಯೇ ಬರುವುದು. ಆದರೆ ಅದನ್ನು ಮುಂದುವರಿಸಿಕೊಂಡು ಪ್ರಜ್ಞಾಪೂರ್ವಕವಾಗಿ, ಅರಿವಿನಿಂದ ಕೂಡಿದವರಾಗಿ ಸರಿಪಡಿಸಿಕೊಳ್ಳದಿದ್ದರೆ ಅದು ಬಹಳ ಗಂಭೀರವಾದ ಮಾನಸಿಕ ಸಮಸ್ಯೆಯಾಗಿ ಪರಿಣಮಿಸಿ, ಗಂಭೀರವಾದ, ಭೀಕರವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ.ಸೇಡು ತೀರಿಸಿಕೊಳ್ಳುವ ರೋಗವು ನಿಜಕ್ಕೂ ಬಾಲ್ಯದಲ್ಲಿಯೇ ತುಟಿಗಳಲ್ಲಿ ಹಾಲು ಆರುವ ಮುನ್ನವೇ ಹುಟ್ಟುತ್ತದೆ ಮತ್ತು ಬೆಳೆಯುತ್ತದೆ.
ಮಗುವು ನೆಲದ ಮೇಲೆ ಎಡವಿ ಬಿದ್ದಾಗ, ಅಳುತ್ತಿರುವ ಮಗುವನ್ನು ಸಮಾಧಾನಿಸಲು ಎಂದು, “ನೋವಾಯ್ತಾ? ಯಾರು ನಿನ್ನ ಬೀಳಿಸಿದ್ದು, ಹೊಡಿ, ಹೊಡಿ” ಎಂದು ನೆಲಕ್ಕೆ ‘ಅತ್ತ’ ಮಾಡಿಸುವಾಗಲೇ ಸೇಡಿನ ಭಾವದ ಬೀಜ ಬಿತ್ತಿದ್ದಾಯ್ತು. ಇನ್ನು ಚೌಕಾಬಾರದಲ್ಲಿ, ಪಗಡೆಯ ಆಟದಲ್ಲಿ ತನ್ನ ಕಾಯನ್ನು ಹೊಡೆದ ಅವನ ಕಾಯನ್ನು ಹೇಗಾದರೂ ಹೊಡೆಯಲೇ ಬೇಕೆಂದು ಹಟ ಹಿಡಿಯುವಲ್ಲಿ ಸೇಡಿನ ಭಾವ ಬಿತ್ತುವುದಿಲ್ಲ ಎಂದುಕೊಂಡಿರಾ? ಯಾರಾದರೂ ಮಗುವು ಕೇಳಿದ್ದನ್ನು ಕೊಡದೇ ಹೋದಾಗ ಅಥವಾ ತರದೇ ಇದ್ದಾಗ, ಆ ಕೋಪಕ್ಕೆ ಅಳಲು ಪ್ರಾರಂಭಿಸಿದಾಗ, “ಅವರು ನಿನಗೆ ಕೊಡಲಿಲ್ಲವಾ? ಅತ್ತ ಮಾಡು, ಅತ್ತ ಮಾಡು” ಎಂದು ನೀವು ಮಗುವಿನಿಂದ ಅವರಿಗೆ ಹೊಡೆಸುತ್ತಿದ್ದಾಗ ಸೇಡಿನ ಭಾವ ಬಲಿಯುವುದಿಲ್ಲ ಎಂದುಕೊಂಡಿರುವಿರಾ? ನನಗೆ ನಿರಾಸೆ ಉಂಟು ಮಾಡಿರುವವರನ್ನು, ನನಗೆ ಕೋಪ ತರಿಸಿದವರನ್ನು, ನನಗೆ ಹಿತ ಕೊಡದಿರುವವರನ್ನು ದಂಡಿಸಬೇಕು, ಶಿಕ್ಷಿಸಬೇಕು ಎಂದು ಬೆಳೆಸಿಕೊಳ್ಳುವ ಅರಿಮೆ ಮುಂದೆ ಎಷ್ಟರಮಟ್ಟಿಗೆ ಅರಳಿ ಬೆಳೆದು ವಿಸ್ತಾರವಾಗುವುದು ಗೊತ್ತೇ?
ಇನ್ನೊಂದು ವಿಷಯವೂ ನೆನಪಿನಲ್ಲಿಡಬೇಕು. ಅವರ್ಯಾರನ್ನೋ ತೋರಿಸಿ ಅತ್ತ ಮಾಡಿಸುವ ನಾವು ಎಷ್ಟೋ ವಿಷಯಗಳಲ್ಲಿ ನಾವೂ ಮಗುವಿನ ಅಥವಾ ವ್ಯಕ್ತಿಯ ನಿರೀಕ್ಷೆಗೆ ತಕ್ಕುದಾಗಿ ನಡೆದುಕೊಳ್ಳಲಾಗುವುದಿಲ್ಲ. ಅದು ಸಕಾರಣವೂ ಆಗಿರುವುದಿಲ್ಲ. ಆಗ ನಾವೂ ಅದರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಮತ್ತು ಅದರ ಮನಸ್ಸಿನಲ್ಲಿ ನಿರಾಸೆ, ಕೋಪ ಮತ್ತು ಬೇಸರವನ್ನು ಮೂಡಿಸಿರುತ್ತೇವೆ. ಆಗ ಈಗಾಗಲೇ ರೂಢಿಯಾಗಿರುವ ಸೇಡಿನ ಆಗ್ರಹದಂತೆ ಆ ಮನಸ್ಸು ನಮ್ಮನ್ನೂ ದ್ವೇಷಿಸಲು ಆರಂಭಿಸುತ್ತದೆ. ಎಷ್ಟೋ ಮಕ್ಕಳು ತಾವು ದೊಡ್ಡವರಾದ ಮೇಲೆ ತಮ್ಮ ತಂದೆ, ತಾಯಿ ಅಥವಾ ಇತರ ಕುಟುಂಬದ ಸದಸ್ಯರ ಮೇಲೆ ನಾನಾ ರೀತಿಯಲ್ಲಿ ಸೇಡುತೀರಿಸಿಕೊಳ್ಳುತ್ತಿರುತ್ತಾರೆ.
ಆದರೆ ಅದನ್ನು ಸೇಡು ಎಂದು ಅವರು ಭಾವಿಸಿರುವುದಿಲ್ಲ. ನಮ್ಮ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳಿಂದ ಹಿಡಿದು, ಅನೇಕಾನೇಕ ಚಾರಿತ್ರಿಕ ದಾಖಲೆಗಳೂ ಸೇಡಿನ ರಾಜಕಾರಣ ಮತ್ತು ಸಂಘರ್ಷವನ್ನು ಬಹಳ ಸ್ಪಷ್ಟವಾಗಿ ಮತ್ತು ಹಟಮಾರಿತನದಿಂದ ಸಾಧಿಸಿವೆ. ಇನ್ನು ಸಿನಿಮಾಗಳಲ್ಲಂತೂ ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ಸಹೋದರರ ಸವಾಲ್ ಎನ್ನುತ್ತಾ ಹಲವಾರು ಚಲನಚಿತ್ರಗಳು ಸೇಡನ್ನು ತೀರಿಸಿಕೊಳ್ಳುವುದೇ ಒಂದು ಮೌಲ್ಯವೆಂಬಂತೆ ಪ್ರತಿಪಾದಿಸಿಕೊಂಡು ಬಂದಿವೆ.ವಿಶ್ವದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಸೇಡು ತೀರಿಸಿಕೊಳ್ಳುವುದು ಅಥವಾ ಪ್ರತಿಕಾರ ತೆಗೆದುಕೊಳ್ಳುವುದು ಒಂದು ವೀರತೆಯ ಲಕ್ಷಣವೆಂದು ಪ್ರದರ್ಶಿಸಿದ್ದಾರೆ. ಸೇಡು ಮನಸ್ಸಿನ ವಿಕೃತಿಯ ಲಕ್ಷಣ. ಈ ರೋಗ ಬರೀ ವ್ಯಕ್ತಿಗಳಲ್ಲಿ ಮಾತ್ರವಲ್ಲ ಸಾಮುದಾಯಿಕವಾಗಿಯೂ ಕೂಡಾ ಸೋಂಕನ್ನು ಹರಡಿಸುತ್ತದೆ.
ಸಾಮುದಾಯಿಕ ಸೋಂಕು
ಈ ಮುಸ್ಲೀಂ ಉಗ್ರರಿದ್ದಾರೆ ಎಂದು ಇಲ್ಲಿರುವ ಮುಸ್ಲೀಮರನ್ನು ಅನುಮಾನಿಸುವುದು, ಅಪಮಾನಿಸುವುದು, ಅವರ ಮೇಲೆ ಸೇಡು ತೀರಿಸಿಕೊಳ್ಳುವಂತೆ ವರ್ತಿಸುವುದು ಕೂಡಾ ಸಾಮುದಾಯಿಕವಾದ ಪಿ ಟಿ ಎಸ್ ಡಿ. ಹಾಗೆಯೇ ಬ್ರಾಹ್ಮಣರು ಮತ್ತು ಇತರ ಸವರ್ಣೀಯವೆಂದು ಗುರುತಿಸಿಕೊಂಡಿರುವ ಸಮುದಾಯಗಳು ತಮ್ಮ ಮಡಿವಂತಿಕೆಯಿಂದ ಇತರ ತಳವರ್ಗದವರಿಗೆ ಅಪಮಾನ ಮಾಡಿದ್ದವು ಎಂದು ಇಂದು ಅವರನ್ನು ಅಪಮಾನಿಸುವುದು, ಅನುಮಾನಿಸುವುದು, ಹೆಜ್ಜೆ ಹೆಜ್ಜೆಗೂ ಅವರನ್ನು ನಿಂದಿಸುವುದು, ಎಲ್ಲರನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗುವುದು ಕೂಡಾ ಇದೇ ಮನೋರೋಗದ ಲಕ್ಷಣವೇ.
ಸೇಡಿನ ಮನೋಭಾವಕ್ಕೆ ಯಾವುದಾದರೂ ಒಂದು ಲಾಂಛನ ಬೇಕಾಗಿರುತ್ತದೆ. ಅದು ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳಲು ಯತ್ನಿಸುತ್ತಿರುತ್ತದೆ. ಯಾವ ನೆಪವಾದರೂ ಸರಿಯೇ. ಯಾವುದೇ ಪ್ರತಿಕ್ರಿಯೆ, ಪ್ರತಿಭಟನೆಯು ಸಾಂದರ್ಭಿಕವಾದ ಕ್ರಿಯೆಗೆ ಮತ್ತು ಪೂರ್ವಾಗ್ರಹವಿಲ್ಲದೆಯೇ ಇದೆಯೇ ಎಂಬುವುದನ್ನು ನಾವೇ ಗಮನಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಯಿಂದ ಆದ ನಕಾರಾತ್ಮಕವಾದ ಅನುಭವದಿಂದ ತಾವೂ ನಕಾರಾತ್ಮಕವಾಗಿ ಅವರಿಗೆ ಚುರುಕು ಮುಟ್ಟಿಸಬೇಕು ಎಂಬ ಸೇಡಿನ ಭಾವ ಹೇಗೆ ವ್ಯಕ್ತಿಯಲ್ಲಿನ ಮಾನಸಿಕ ಸಮಸ್ಯೆಯೋ ಹಾಗೆಯೇ ಸಾಮುದಾಯಿಕವಾಗಿಯೂ ಕೂಡಾ ಇಂತಹ ಸಂಕಲಿತ ಮಾನಸಿಕ ಸಮಸ್ಯೆಗಳು ಇರುತ್ತವೆ.
ಹಿಂದೆಂದೋ ಅಥವ ಈಗೆಲ್ಲೋ ಆದ ಮತಾಂತರವನ್ನು ವಿರೋಧಿಸಲು ಅದಕ್ಕೆ ಸಂಬಂಧವೇ ಇಲ್ಲದ ಇತರ ಮುಸ್ಲೀಂ ಮತ್ತು ಕ್ರೈಸ್ತರ ಮೇಲೆ ದಾಳಿ ಮಾಡುವುದು, ಯಾರೋ ಕರ್ಮಠ ಬ್ರಾಹ್ಮಣರ ಮಡಿವಂತಿಕೆಯ ಮತ್ತು ಸಂಕುಚಿತ ಮನಸ್ಥಿತಿಯನ್ನು ವಿರೋಧಿಸಲು ಎಲ್ಲಾ ಬ್ರಾಹ್ಮಣರೂ ಹೀಗೆ ಎಂದು ನಿರ್ಧಾರಕ್ಕೆ ಬರುವುದು, ಅವಹೇಳನ ಮಾಡುವುದು; ಸಾಮುದಾಯಿಕ ಮಾನಸಿಕ ಸಮಸ್ಯೆಗಳೇ ಆಗಿವೆ.ಇದರ ಜೊತೆಗೆ ಸೇಡಿನ ಭಾವವು ಸೇರಿಕೊಂಡರೆ ನಾಗರಿಕ ಸಮಾಜದಲ್ಲಿ ಸಾಮರಸ್ಯ ಕದಡುವುದು. ಪ್ರತಿಯೊಬ್ಬರ ಬದುಕಿಗೆ ಅಗತ್ಯವಿರುವುದನ್ನು ಗಮನಿಸದೇ ಸೇಡು ತೀರಿಸಿಕೊಳ್ಳುವ ಉನ್ಮತ್ತತೆಯಲ್ಲಿ ಕತ್ತಿ ಝಳಪಿಸುತ್ತಿರುತ್ತಾರೆ.
ಹೌದು, ವ್ಯಕ್ತಿಗತವಾಗಿ ನಮಗೆ ನಿರಾಸೆಯಾಗಿದೆ. ಸಾಮುದಾಯಿಕವಾಗಿ ನಮಗೆ ನೋವಾಗಿದೆ. ಹಾಗಾದರೆ ಏನು ಮಾಡಬೇಕು? ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಮಾನಸಿಕ ಸಮಸ್ಯೆ ಎಂದಾದರೆ ಅದನ್ನು ನಿವಾರಿಕೊಳ್ಳಲು ಏನು ಮಾಡಬೇಕು? ಆ ಬಾಧೆಯನ್ನು ಶಮನ ಮಾಡಿಕೊಳ್ಳಲು ಏನು ಮಾಡಬೇಕು? ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


