ಅಂತರಂಗ
ಅರಿಮೆಯ ಅರಿವಿರಲಿ-30 : ಬಯಕೆ ಮತ್ತು ಭಯಗಳ ಬಂಧನದಲ್ಲಿ

- ಯೋಗೇಶ್ ಮಾಸ್ಟರ್
ವ್ಯಕ್ತಿಯ ಬಯಕೆ ಮತ್ತು ಭಯಗಳೆರಡೂ ನೈಸರ್ಗಿಕ ಪ್ರವೃತ್ತಿಗಳಂತೆ. ಈ ಎರಡೂ ಅತಿಯಾಗಿ ಹೆಚ್ಚಾಗಿದ್ದರೆ, ಅತಿಯಾಗಿ ಕಡಿಮೆಯಿದ್ದರೆ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗೆಯೇ ಅವು ವ್ಯಕ್ತಪಡಿಸಲಾಗದಂತೆ ಒತ್ತಡಕ್ಕೊಳಗಾದರೂ ಮಾನಸಿಕ ಸಮಸ್ಯೆಗಳಾಗುತ್ತವೆ. ಸಾಮಾನ್ಯವಾಗಿ ಮನುಷ್ಯನ ಎಲ್ಲಾ ಮಾನಸಿಕ ಸಮಸ್ಯೆಗಳ ಮೂಲ ಈ ಎರಡು ಪ್ರವೃತ್ತಿಗಳಲ್ಲಿಯೇ.ಬಯಕೆ ಅಥವಾ ಆಸೆಯನ್ನು ಹಾಗೂ ಭಯವನ್ನು ಬೇರೆ ಬೇರೆ ಒಳ್ಳೊಳ್ಳೆಯ ಶಬ್ಧಗಳಲ್ಲಿಯೂ ಕೂಡಾ ವ್ಯಕ್ತಪಡಿಸುತ್ತೇವೆ.
ಆಸೆಪಡುವವನನ್ನು ಕ್ಷುಲ್ಲಕವಾಗಿ ಅಥವಾ ಕನಿಷ್ಟವಾಗಿ ನೋಡುವ ಒಂದು ರೀತಿಯ ಧಾರ್ಮಿಕ ಅಥವಾ ಆಧ್ಯಾತ್ಮಿಕ ಅಥವಾ ನೈತಿಕ ಸಂಪ್ರದಾಯ ನಮ್ಮ ದೇಶದ ಬಹುಜನರಲ್ಲಿ ಗುಪ್ತಗಾಮಿನಿಯಾಗಿ ಇದೆ. ಹಾಗಾಗಿ ಅದಕ್ಕೆ ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುವ ಬಗೆಗಳನ್ನು ಅನ್ವೇಷಣೆ ಮಾಡುತ್ತಿರುತ್ತಾರೆ. ನನಗೆ ಅದು ಇಷ್ಟ ಎನ್ನುವ ಮನಸ್ಥಿತಿಯಲ್ಲಿರುವಷ್ಟು ಮುಕ್ತವಾದ ಭಾವದಲ್ಲಿ ನನಗೆ ಅದನ್ನು ಕಂಡರೆ ಆಸೆ ಎಂದು ಹೇಳರು.ಧಾರ್ಮಿಕತೆಯು ಆಸೆ ಅಥವಾ ಕಾಮವನ್ನು ಖಂಡಿಸುತ್ತಾ ಬಂದಿರುವ ಪರಿಣಾಮವಿದು.
ಅದೆಷ್ಟು ಜನಕ್ಕೆ ಬೇರೆಯವರ ಮುಂದೆ ಕನ್ನಡಿಯ ಮುಂದೆ ತಮ್ಮ ತಲೆಗೂದಲನ್ನು ಸರಿಮಾಡಿಕೊಂಡು, ತಮ್ಮ ಸೌಂದರ್ಯ ನೋಡಿಕೊಂಡು ಪ್ರಶಂಸಿಸಿಕೊಂಡು ಹೋಗಲು ಸಾಧ್ಯ? ಬೇರೆಯವರ ಉಪಸ್ಥಿತಿಯಲ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಬಹಳ ಜನ ನಾಚಿಕೊಳ್ಳುತ್ತಾರೆ. ಯಾರೂ ನೋಡದಿದ್ದ ಕಡೆ ವಾಹನಗಳಲ್ಲಿರುವ ಕನ್ನಡಿಗಳಲ್ಲಿ ನೋಡಿಕೊಂಡು ತಲೆ ಸರಿಮಾಡಿಕೊಳ್ಳುತ್ತಾರೆ. ಫೇಸ್ಬುಕ್ ಎಂಬ ವೇದಿಕೆ ರೂಪುಗೊಂಡ ಮೇಲೆ ಜನರ ಅರಿಮೆಯು ಅನಾವರಣಗೊಳ್ಳಲು ಸಾಧ್ಯವಾಗಿದೆ. ಏಕೆಂದರೆ, ನಾನೊಬ್ಬನೇ ಅಲ್ಲ ನನ್ನ ಮುಖವನ್ನು ನಾನಾ ಭಂಗಿಗಳಲ್ಲಿ ಹಾಕಿಕೊಂಡು ನೋಡಿಕೊಳ್ಳುವುದು. ಇನ್ನೂ ಬೇಕಾದಷ್ಟು ಜನ ಇದ್ದಾರೆ ಎಂಬ ಧೈರ್ಯ ಮತ್ತು ಸಾಮಾನ್ಯೀಕರಿಸಿಕೊಂಡ ಭಾವದಲ್ಲಿ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ.
ಸಾಮಾನ್ಯೀಕರಿಸಿಕೊಳ್ಳುವ ಕೀಳರಿಮೆ
ತಮ್ಮ ಯಾವುದಾದರೂ ಆಸೆ, ಭಯ ಅಥವಾ ಸಾಮಾಜಿಕವಾಗಿ ಅಷ್ಟು ಮನ್ನಣೆಗೆ ಒಳಗಾಗದ ಗುಣವನ್ನು ಸಾಮಾನ್ಯೀಕರಿಸಿಕೊಳ್ಳುವುದು, ತಮ್ಮ ಆತ್ಮರತಿಯ ಅಥವಾ ಆತ್ಮಕೇಂದ್ರಿತ ವಿಷಯವನ್ನು ಎಲ್ಲರಿಗೂ ಎಂದು ಆರೋಪಿಸುವುದು ಒಂದು ಕೀಳರಿಮೆಯ ಗುಣವೇ. ತಾವು ದೊಡ್ಡ ಮನೆಗಾಗಿ, ಸುಂದರ ಸಂಗಾತಿಗಾಗಿ, ಆಡಂಬರದ ಜೀವನಕ್ಕಾಗಿ ಹಂಬಲಿಸುವುದಿದ್ದರೆ, ಅಂತಹ ಆಸೆಯನ್ನು ಹೊಂದಿರುವ ಕೀಳರಿಮೆಯನ್ನು ಮೆಟ್ಟಲು ಅವರು ಹೇಳುವುದೇನೆಂದರೆ, “ಯಾರಿಗೆ ತಾನೇ ಆಸೆ ಇರುವುದಿಲ್ಲ?”
ತಮಗೆ ನೋವು ಅಥವಾ ಸಾವಿನಂತಹ ಯಾವುದಾದರೊಂದು ವಿಷಯದಲ್ಲಿ ಭಯವಾದರೆ, “ಯಾರಿಗೆ ತಾನೇ ಭಯವಾಗುವುದಿಲ್ಲ?” ಎನ್ನುತ್ತಾರೆ. ಅದೇ ರೀತಿಯಲ್ಲಿ ತಾವು ಕೋಪಗೊಂಡು ಜಗಳವಾಡಿದಾಗ ಅದಕ್ಕೂ, “ಹೀಗೆ ಮಾಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ? ನನ್ನ ಜಾಗದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?” ಎನ್ನುತ್ತಾರೆ. ಗಂಡ ಹೆಂಡತಿಗೆ ಹೊಡೆದಾದ ಮೇಲೆ “ಒಂದು ಹೆಂಗಸು ಹೀಗೆ ಮಾಡಿದರೆ, ಯಾವ ಗಂಡಸಿಗಾಗಲಿ ಕೋಪ ಬರಲ್ಲ?” ಎಂದು ಪ್ರಶ್ನಿಸುತ್ತಾ ಕೋಪಿಸಿಕೊಂಡು ವರ್ತಿಸಿರುವ ಕೀಳರಿಮೆಯನ್ನು ಅಡಗಿಸಲು ಯತ್ನಿಸುತ್ತಾರೆ.
ಇದೇ ಸಮಸ್ಯೆ ಇರುವುದು. ಬಯಕೆ, ಭಯ, ಕೋಪಗಳೇ ಇತ್ಯಾದಿ ಹಲವು ಗುಣಗಳು ಸಹಜವಾಗಿದ್ದರೂ ಅವುಗಳ ಬಗ್ಗೆ ಹುಟ್ಟಿಹಾಕಿರುವ ಪರಿಕಲ್ಪನೆಗಳ ದೆಸೆಯಿಂದಾಗಿ ಅವುಗಳ ಹುಟ್ಟುವಿಕೆಯಲ್ಲಿಯೂ,ಪ್ರದರ್ಶಿಸುವಿಕೆಯಲ್ಲಿಯೂ ಜಗ್ಗಾಟಗಳು ನಡೆಯುತ್ತಾ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿಯೊಬ್ಬನ ಸಾಧನೆಯ ಮೇಲಿನ ಅಸೂಯೆ ಮತ್ತು ಆಸೆಗಳು ಅದನ್ನು ಆದರ್ಶವೆಂದೂ ನಾಜೂಕಾಗಿ ಹೇಳುವುದುಂಟು. ಗಮನಿಸಿ, ನಾವು ಹೊಂದಲು ಆಸೆ ಪಡುವುದನ್ನೇ ಆದರ್ಶ ಎನ್ನುತ್ತೇವೆ. ಹಾಗಾಗಿ ನಮ್ಮ ಮನದ ಆಸೆಯ ಬಗ್ಗೆ ಕನಿಷ್ಟಪಕ್ಷ ನಾವಾದರೂ ಬಹಳ ಮುಕ್ತವಾದ ಧೋರಣೆಗಳನ್ನು ಹೊಂದಿರಬೇಕು.
ಭಯದ ಬಂಧನದಲ್ಲಿ
ತಮ್ಮ ಆಲೋಚನೆಗಳನ್ನು ತಾವು ಯಾವ ಗುಣವಾಚಕಗಳಿಲ್ಲದೇ ನೋಡಿಕೊಳ್ಳಲು ಸಾಧ್ಯವಾದರೆ ಅವನು ಬಹಳಷ್ಟು ಅರಿಮೆಗಳಿಂದ ಮುಕ್ತಿ ಹೊಂದಬಹುದು. ಕೆಲವರಿಗೆ ತಾವು ಕೆಟ್ಟ ಕೆಲಸ ಮಾಡದೇ ಇದ್ದರೂ ಎಲ್ಲಿ ಮಾಡಿಬಿಡುತ್ತೇವೆಯೋ ಎಂದು ಹೆದರುತ್ತಿರುತ್ತಾರೆ.ಕೆಟ್ಟ ಕೆಲಸವನ್ನು ಮಾಡಿಬಿಡುತ್ತೇವೆ ಎಂಬ ಫೋಬಿಯಾ. ಒಂದು ಒಳ್ಳೆಯ ಸಮಾರಂಭ ನಡೆಯುತ್ತಿರುತ್ತದೆ.ಸಭ್ಯಸ್ಥರು ಮತ್ತು ಗೌರವಾನ್ವಿತ ವ್ಯಕ್ತಿಗಳೆಲ್ಲಾ ಸೇರಿದ್ದಾರೆ ಎಂದಿಟ್ಟುಕೊಳ್ಳಿ. ಅವನಿಗೆ ಒಂದು ಭಯವಾಗುತ್ತಿರುತ್ತದೆ. ಎಲ್ಲಿ ತಾನು ಇದ್ದಕ್ಕಿದ್ದಂತೇ ಕೆಟ್ಟ ಮಾತುಗಳನ್ನು ಆಡಿಬಿಡುತ್ತೇನೆಯೋ, ಕೆಟ್ಟದಾಗಿ ವರ್ತಿಸಿಬಿಡುತ್ತೇನೆಯೋ ಎಂದು ತಮ್ಮನ್ನು ತಾವೇ ಸಂದೇಹಿಸಿಕೊಳ್ಳುತ್ತಿರುತ್ತಾರೆ. ಅಥವಾ ಲೈಂಗಿಕವಾಗಿ ತನ್ನ ಕಾಮುಕತೆಯನ್ನು ಪ್ರದರ್ಶಿಸಿಬಿಡುತ್ತೇನೆಯೋ ಎಂಬ ಭಯವಾಗುತ್ತಿರುತ್ತದೆ.
ಅವರಿಗೆ ಹಾಗೆ ಕೆಟ್ಟದಾಗಿ ವರ್ತಿಸಲು ಇಷ್ಟವಿಲ್ಲ. ಆದರೆ ಅದನ್ನು ತಾವು ಮಾಡಿಬಿಡುತ್ತೇವೆ ಎಂಬ ಭಯ. ಹಾಗೆ ವರ್ತಿಸಿದಾಗ ತಮ್ಮನ್ನು ಕಡೆಗಣಿಸುತ್ತಾರೆ, ತಮ್ಮ ವ್ಯಕ್ತಿತ್ವಕ್ಕೆ, ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಭಯವಾಗುತ್ತಿರುತ್ತದೆ. ಅದರಿಂದ ತಮಗೆ ದೊರಕುವ ಪ್ರತಿಕ್ರಿಯೆ ಬಹಳ ನಕಾರಾತ್ಮಕವಾಗಿರುತ್ತದೆ ಎಂಬ ಭಯ. ಇನ್ನೂ ಕೆಲವರಲ್ಲಿ ತಮ್ಮಲ್ಲಿ ನಕಾರಾತ್ಮಕವಾದ ಆಲೋಚನೆಗಳು ಇವೆಯೆಂದೇ ಕೀಳರಿಮೆಯಲ್ಲಿ ಬಳಲುತ್ತಾರೆ. ಅವರಲ್ಲಿ ಇದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆದರೂ ಹೆದರುತ್ತಿರುತ್ತಾರೆ. ಭಯ ಮತ್ತು ಕೀಳರಿಮೆ; ಈ ಎರಡೂ ಸಾಮಾನ್ಯವಾಗಿ ಸ್ನೇಹಿತರು. ಆದರೆ ತಮಾಷೆ ಏನೆಂದರೆ ತಾವೇನೋ ಮಾಡಿಬಿಡುತ್ತೇವೆ, ಮಾಡಿಬಿಡುತ್ತೇವೆ ಎಂದು ತಮ್ಮಿಂದ ನಕಾರಾತ್ಮಕವಾದುದು ಸಂಭವಿಸಿಬಿಡುತ್ತದೆ ಎಂದು ಹೆದರುತ್ತಿರುತ್ತಾರಲ್ಲಾ, ಸಾಮಾನ್ಯವಾಗಿ ಅವರು ಅಂತವನ್ನೇನೂ ಮಾಡುವುದೇ ಇಲ್ಲ. ಬರೀ ಹೆದರಿಕೊಳ್ಳುತ್ತಿರುತ್ತಾರೆ ಅಷ್ಟೇ.
ವಿತರ್ಕಕ್ಕೆ ಪ್ರತಿಪಕ್ಷ
ಇದರಿಂದ ಹೊರಗೆ ಬರುವುದು ಹೇಗೆ? ಪತಂಜಲಿ ಯೋಗಸೂತ್ರದಲ್ಲಿ ಒಂದು ಸುಂದರವಾದ ಸೂತ್ರವಿದೆ. “ವಿತರ್ಕ ಭಾವನೇ ಪ್ರತಿಪಕ್ಷ ಭಾವನಾಂ” ಎಂದು. ಅಂದರೆ, ಬೇಡದ, ಕೆಟ್ಟದಾದ ಭಾವನೆ ಉಂಟಾದಾಗ, ಅದಕ್ಕೆ ವಿರುದ್ಧವಾದ ಭಾವನೆಯನ್ನು ತಂದುಕೊಳ್ಳುವುದು. ಮೊದಲು ತಮ್ಮಲ್ಲಿ ಬಂದಿರುವ ಭಾವನೆ ಅಥವಾ ವಿಚಾರವನ್ನು ಗಮನಿಸಬೇಕು. ಅದು ಬಂದಿರುವುದನ್ನು ಒಪ್ಪಿಕೊಳ್ಳಬೇಕು. ನಂತರ ಅದಕ್ಕೆ ವಿರುದ್ಧವಾದ ಸಕಾರಾತ್ಮಕವಾದ ಆಲೋಚನೆಯನ್ನು ಮಾಡಬೇಕು. ಇಷ್ಟು ಗಮನಿಸಿಕೊಳ್ಳೋಣ. ನಮಗೆ ಯಾವುದು ಆಗಬಾರದು ಎಂಬುದಿರುತ್ತದೆಯೋ ಆ ಆಲೋಚನೆ ಬಂದಾಗ ತಿರಸ್ಕರಿಸೋಣ. ಅದರ ಬದಲಾಗಿ ಯಾವುದು ಆಗಬೇಕು ಎಂದು ಆಸೆ ಪಡುತ್ತೇವೆಯೋ ಅದನ್ನು ಅದರ ಬದಲಾಗಿ ನೆನೆಸಿಕೊಳ್ಳೋಣ. ಉದ್ದೇಶ ಪೂರ್ವಕವಾಗಿ ನೆನೆಸಿಕೊಳ್ಳೋಣ.
ಆಸೆ ಅಗತ್ಯವೇ? ಭಯಕ್ಕೆ ಕಾರಣವಿದೆಯೇ?
ಬಯಕೆ ಮತ್ತು ಭಯ; ಈವೆರಡೂ ನಮಗೆ ಯಾವಾಗಲೇ ಆಗಲಿ ಮಾನಸಿಕ ಸಮಸ್ಯೆಗಳಾಗಿ ಕಾಡತೊಡಗಿದಾಗ ಮಾಡಬೇಕಾಗಿರುವುದೇ ಇಷ್ಟು. ಮೊದಲು ಬಯಕೆಯು ಅಗತ್ಯವೇ ಅಥವಾ ಅನಗತ್ಯವೇ ಎಂಬ ಆಲೋಚನೆ. ಅದೇ ರೀತಿಯಲ್ಲಿ ತಾನು ಭಯಪಡುವುದಕ್ಕೆ ಕಾರಣವಿದೆಯೇ? ನೋಡಿ, ಅನಗತ್ಯವಾದ ಆಸೆಯನ್ನು ಗುರುತಿಸಿದರೆ, ಅಕಾರಣವಾದ ಭಯವನ್ನು ಕಂಡುಕೊಂಡರೆ ಅರ್ಧ ಮನೋರೋಗ ಕಡಿಮೆಯಾಯಿತೆಂದೇ ಅರ್ಥ.ಅರಿವಿನ ಮೂಲಕ ಅರಿಮೆಗಳನ್ನು ತೊಡೆದು ಹಾಕುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆಂದೇ ಅರ್ಥ.
ಬಹಳಷ್ಟು ಜನ ತಮ್ಮಲ್ಲಿ ಸಮಸ್ಯೆಯು ಇಲ್ಲವೇ ಇಲ್ಲ ಎಂಬಂತೆ ತಮ್ಮ ಮಾನಸಿಕ ಸಮಸ್ಯೆಗಳನ್ನು, ಅರಿಮೆಗಳನ್ನು ಒಪ್ಪಿಕೊಳ್ಳದೇ ನಿರಾಕರಿಸುತ್ತಿರುತ್ತಾರೆ. ಈ ಬಗೆಯ ಸಮಸ್ಯೆಗಳ ಬಗ್ಗೆ, ಅರಿಮೆಗಳ ಬಗ್ಗೆ ತಿಳುವಳಿಕೆ ಬಂದಾಗ ತಮ್ಮಲ್ಲಿ ಅದನ್ನು ಗುರುತಿಸಿಕೊಳ್ಳುವ ಬದಲು ತಾವು ವ್ಯವಹರಿಸುವ ಸಂಬಂಧಗಳಲ್ಲಿ ಅವುಗಳನ್ನು ಗುರುತಿಸುತ್ತಿರುತ್ತಾರೆ. ಅಲ್ಲೂ ಒಂದು ಸಮಸ್ಯೆ ಇರುತ್ತದೆ. ಯಾವ ಸಂಬಂಧಗಳಿಂದ ತಮಗೆ ಹಿತ ಸಿಗುತ್ತಿರುತ್ತದೆಯೋ ಅವರಲ್ಲಿ ತೊಂದರೆ ಇದ್ದರೂ ಅದನ್ನು ಒಳ್ಳೆಯ ರೀತಿಯಲ್ಲಿ ನೋಡುವುದೋ ಅಥವಾ ಅನುಕಂಪದಿಂದ ನೋಡುವುದೋ ಮಾಡುತ್ತಾರೆ. ಒಂದು ವೇಳೆ ಅವರ ಸಂಬಂಧದಿಂದ ಹಿತವಿಲ್ಲದಿದ್ದ ಪಕ್ಷದಲ್ಲಿ ವ್ಯಕ್ತಿಯೇ ಒಂದು ಪೀಡೆಯಾಗಿ ಪರಿಗಣಿಸುತ್ತಾರೆ.
ಇದು ಬಹಳ ಸಾಮಾನ್ಯ. ಮಗುವಾಗಿದ್ದಾಗಿನಿಂದ ರೂಢಿಯಲ್ಲಿರುವುದು. ನಮ್ಮಲ್ಲಿ ಗಾದೆಯೊಂದಿದೆ “ಮಕ್ಕಳು ಇಕ್ಕಿದವ್ರ ಕಡೆ” ಅಂತ. ಅದು ನಿಜ.ಯಾರೋ ಹೆಂಗಸು, ಅತ್ತೆಯೋ, ಅಜ್ಜಿಯೋ, ಪಕ್ಕದ ಮನೆಯಾಕೆಯೋ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆಂದರೆ ತಾಯಿಗಿಂತ ಮಿಗಿಲಾಗಿ ನೋಡಿಕೊಂಡರು ಎನ್ನುತ್ತೀರಿ. ಜಡ್ಡು ಬಿದ್ದಾಗ ನೋಡಿಕೊಳ್ಳುವುದು, ಹಸಿವಾದಾಗ ಉಣಿಸುವುದು, ಗಲೀಜಾದಾಗ ತೊಳೆಯುವುದು; ಹೀಗೆ ಹಲವು ಕೆಲಸಗಳನ್ನು ದೂರು ದುಮ್ಮಾನಗಳಿಲ್ಲದೇ ಮಾಡಿದವರಾರೇ ಆಗಲಿ ತಾಯಿ ಎಂದು ಪರಿಗಣಿಸುವ ಪ್ರಯತ್ನ ಮಾಡುತ್ತಾರೆ. ಒಟ್ಟಾರೆ ಹಿತ ಮತ್ತು ಸುಖವಿರುವ ಸಂಬಂಧಗಳೇ ಮಾನ್ಯ. ತಾಯಿ ಹಾಗಿರಲಿ ಇಲ್ಲದಿರಲಿ, ತಾಯಿ ಎಂದರೆ ಈ ಬಗೆಯ ವ್ಯಕ್ತಿತ್ವ ಮತ್ತು ಅವಳ ಕೆಲಸಗಳು ಇಂತವು ಅಂತ.
ದುಃಖಿರಾಮಿ
ಇನ್ನೂ ಕೆಲವರಲ್ಲಿ ಹುಸಿ ಕೀಳರಿಮೆ ಇರುತ್ತದೆ. ಇವರ ಕತೆ ಏನೆಂದರೆ, ತಮ್ಮ ಬಗ್ಗೆ, ಇತರರ ಬಗ್ಗೆ, ಇಡೀ ಮನುಷ್ಯ ಕುಲದ ಬಗ್ಗೆ ‘ಸರಿ ಇಲ್ಲ’ ಎಂಬ ಆಲೋಚನೆಯೇ ಮೂಲಭೂತವಾಗಿರುತ್ತದೆ. ಇದಕ್ಕೇನೂ ಕಾರಣಬೇಡ. ಯಾರಿಗೆ ಯಾರೂ ಆಗಲ್ಲ ಎನ್ನುವುದು ಇವರ ಸಾಮಾನ್ಯ ಘೋಷವಾಕ್ಯ. ಒಳ್ಳೆಯ ಗಂಡ, ಹೆಂಡತಿ, ಮಕ್ಕಳು, ತಂದೆ ತಾಯಿಯೇ ಇರಲಿ, ಇವರ ಮಾತು ಏನೆಂದರೆ, “ಎಲ್ರೂ ಅವರವರ ಕೆಲಸ ಆಗಬೇಕೂಂದ್ರೇ ಚೆನ್ನಾಗಿರುತ್ತಾರೆ. ಯಾರಿಗೆ ಯಾರೂ ಆಗಲ್ಲ” ಎಂದು ಅಸಂತೋಷದಲ್ಲಿಯೇ ಇರುತ್ತಾರೆ. ದುಃಖಿರಾಮಿಗಳಿವರು. ತಮ್ಮಿಂದಾಗಲಿ, ತಮ್ಮೊಡನೆ ಇರುವ ಇತರರಿಂದಾಗಲಿ ಏನೂ ತೊಂದರೆಯಾಗಿರುವುದಿಲ್ಲ ಆದರೂ ಸಂತೋಷದ ಗೀತೆ ಹಾಡುವುದೇ ಇಲ್ಲ. ಸದಾ ಶೋಕಗೀತೆಯೇ. ಏನಾದರೂ ಕೇಳಿ, ಅವರು ಎತ್ತುವುದು ಅಪಸ್ವರವೇ.
ಅಲ್ಲೊಂದು ಅಜ್ಜಿ ಇತ್ತು. ಅವರ ಮುಂದೆ ಅವರ ಎರಡು ಮೊಮ್ಮಕ್ಕಳು ಆಡುತ್ತಿದ್ದರು. ಆದರೆ ಅಜ್ಜಿಯ ಮುಖದಲ್ಲಿ ಕಾರ್ಮೋಡ. “ಯಾಕಜ್ಜೀ ಬೇಜಾರಲ್ಲಿದ್ದೀರಾ? ಮೊಮ್ಮಕ್ಕಳನ್ನು ನೋಡಿ. ಎಷ್ಟು ಚೆನ್ನಾಗಿ ಆಡ್ತಿದ್ದಾರೆ. ಖುಷಿ ಪಡಿ” ಎಂದರೆ, “ಏನು ಮೊಮ್ಮಕ್ಕಳೋ ಏನೋ. ಏನು ಖುಷಿನೋ ಏನೋ. ಇವತ್ತು ಎಲ್ಲಾ ಖುಷಿಯಾಗೇ ಇದ್ದಾರೆ. ರೆಕ್ಕೆಪುಕ್ಕ ಬಂದ ಮೇಲೆ ಅವರವರ ಪಾಡು ಅವರವರು ನೋಡಿಕೊಂಡು ಹೋಗುತ್ತಾರೆ” ಇದು ಅವರ ಮಾತು. ಬೂಂದಿ ತಿನ್ನುವಾಗ ಭೇದಿಯಾಗುವ ಭಯ.
ಸಹೋದ್ಯೋಗಿಗಳೊಂದಿಗೆ ಯಾವ ತಂಟೇ ತಕರಾರು ಇಲ್ಲದಿದ್ದರೂ, ಇಬ್ಬರೂ ಕಿತ್ತಾಡಿಕೊಂಡು ಬೇರಾಗುವ ಅಥವಾ ಕೆಲಸ ಕಳೆದುಕೊಳ್ಳುವ ಭಯ. ಅದರಲ್ಲೂ ತನ್ನ ಕಾರಣದಿಂದ ಅಂತ. ಇನ್ನೂ ವಿಪರೀತಕ್ಕೆ ಹೋಗುವ ಇವರ ಮನೋಭಾವವೆಂದರೆ, ತಾವಿರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಅಥವಾ ಯಾರಿಂದಾದರೂ ಏನಾದರೂ ಘಟಿಸಿದರೆ, ಇದೆಲ್ಲಾ ತನ್ನಿಂದಲೇ ಆಗಿದ್ದು ಎಂದು ದುಃಖಿಸುವುದು. ಕೆಲವೊಮ್ಮೆ ನೇರವಾಗಿ ಹೇಳುತ್ತಾರೆ. ಕೆಲವೊಮ್ಮೆ ಹೇಳದೆಯೇ ಒಳಗೊಳಗೇ ನರಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೂ ಅಲ್ಲಿ ಘಟಿಸಿರುವ ಅಹಿತಕರ ಸಂಗತಿಗೂ ಏನೂ ಸಂಬಂಧವೇ ಇರುವುದಿಲ್ಲ.
ಈ ಮನೋಭಾವವನ್ನು ಕನ್ನಡ ಸಿನಿಮಾವೊಂದರಲ್ಲಿ ಹಾಸ್ಯನಟ ಉಮೇಶ್ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. “ಅಯ್ಯೋ, ನಾನು ಅವರ ಮನಸ್ಸಿಗೆ ನೋವು ಮಾಡಿಬಿಟ್ಟೆನೇ? ಅಯ್ಯೋ, ನನ್ನಿಂದಾಗಿ ಅವರಿಗೆ ಹೀಗೆ ತೊಂದರೆಯಾಗಿಬಿಟ್ಟಿತೇ” ಎಂದು ಎಲ್ಲರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. “ನಿನ್ನಿಂದ ನಮಗೇನೂ ತೊಂದರೆ ಆಗಲಿಲ್ಲ. ನೀನು ಹೀಗೆ ಪದೇ ಪದೇ ಅನ್ನುವುದರಿಂದ ತೊಂದರೆ, ಕಿರಿಕಿರಿಯಾಗುತ್ತಿದೆ” ಎಂದು ಅವರ ಸಹ ಕಲಾವಿದರು ಹೇಳುತ್ತಿರುತ್ತಾರೆ. ಅದು ನಿಜ. “ಅಯ್ಯೋ, ನಾನು ಹೀಗೆ ಮಾಡಿಬಿಟ್ಟೆನೇ? ನಿಮಗೆ ತೊಂದರೆ ಕೊಟ್ಟುಬಿಟ್ಟೆನೇ!” ಎನ್ನುವ ಅರಿಮೆಯಿಂದಾಗಿ ಇಲ್ಲದಿರುವ ಕಿರಿಕಿರಿ ಇತರರಲ್ಲಿ ಹುಟ್ಟುತ್ತಿರುತ್ತದೆ. ಇದರಿಂದ ಹೊರಗೆ ಬರುವುದಕ್ಕೆ ಒಂದು ಸೂಕ್ತವಾದ ಉಪಾಯವೆಂದರೆ, ತಾವು ಮಾಡಿರುವಂತಹ ತಪ್ಪುಗಳನ್ನು ಪದೇಪದೇ ಸ್ಮರಣೆಗೆ ತಂದುಕೊಳ್ಳದೇ ಇರುವುದು. ಮುಖ್ಯವಾಗಿ ಮುಕ್ತವಾಗಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಮೇಲೆ, ತಮ್ಮನ್ನು ತಾವು ಕ್ಷಮಿಸಿಕೊಳ್ಳುವುದು. ತಮ್ಮನ್ನು ತಾವು ಕ್ಷಮಿಸಿಕೊಳ್ಳದಿದ್ದರೆ, ಇತರರು ಕ್ಷಮಿಸಿದರೂ ಅಪರಾಧದ ಅರಿಮೆ ಉಳಿದೇ ಉಳಿದಿರುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಹೊಸತನದ ಹೊಸ್ತಿಲಲ್ಲಿ..!

- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕಾಮರೂಪದ ಪ್ರಭಾಕರ

- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ1 day ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ17 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ