ನೆಲದನಿ
ನುಡಿಯ ಒಡಲು 13 | ಒಳನುಡಿ : ನುಡಿಯೊಳಗಿನ ನುಡಿ ಉಪನುಡಿಯಲ್ಲ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು ಶಿವಮೊಗ್ಗ
ಭಾಗ-01
ನುಡಿಯರಿಮೆಯ ಯಾವುದೇ ತರಬೇತಿ ಇಲ್ಲದೆಯೂ ಎಷ್ಟೋ ಮಂದಿ ‘ಒಳನುಡಿ’ (ಉಪಭಾಷೆ)ಗಳನ್ನು ಗುರುತಿಸಬಲ್ಲರು. ಪ್ರತಿ ನುಡಿಸಮುದಾಯದ ಜನರಾಡುವ ಮಾತುಗಳಲ್ಲಿಯೇ ಆಯಾ ನುಡಿಯೊಳಗಿನ ವ್ಯತ್ಯಾಸಗಳು ಎಂತಹವು ಎಂಬುದು ಎದ್ದುಕಾಣುವುದಕ್ಕೆ ಮುಖ್ಯ ಕಾರಣವೇ ಇದು.
ಆದರೆ ಈ ವ್ಯತ್ಯಾಸಗಳು ಯಾವ ಬಗೆಯವು? ಅವುಗಳ ರಾಚನಿಕ ಸ್ವರೂಪ ಎಂತಹದು? ನುಡಿಯ ಯಾವ ಯಾವ ನೆಲೆಯಲ್ಲಿ ಇಂತಹ ವ್ಯತ್ಯಾಸಗಳನ್ನು ಗುರುತಿಸಬಹುದು? ಈ ಎಲ್ಲ ವ್ಯತ್ಯಾಸಗಳನ್ನು ಬಿಡಿಸಿ ನೋಡುವ ಮಾನದಂಡಗಳಾವವು? ಎಂಬೆಲ್ಲ ಕೇಳ್ವಿಗಳಿಗೆ ಉತ್ತರಿಸಲು ಒಂದು ಮಟ್ಟದ ನುಡಿಯರಿಮೆಯ ತರಬೇತಿ ಅತ್ಯಂತ ಜರೂರಿನದು ಎಂಬ ಸಂಗತಿಯನ್ನು ನಾವು ಮನಗಾಣಬೇಕಿದೆ.
ದಿಟ ತಮ್ಮ ಮಾತುಗಳಿಗೆ ಹೊರತಾದ ಬೇರೊಂದು ಬಗೆಯ ಉಚ್ಚಾರಣೆಯನ್ನು ಕೇಳಿದೊಡನೆ, ಸಾಮನ್ಯ ನುಡಿಯಿಗರಲ್ಲಿ ಪ್ರಚೋದನೆ ಉಂಟಾಗುತ್ತದೆ. ಈ ಪ್ರಚೋದನೆ ಇಂತಹ ಬೇರೆ ಬಗೆಯ ಮಾತುಗಳ ಗುಣಗಳನ್ನು ಗುರುತಿಸುವಂತೆ ಒತ್ತಾಯಿಸುತ್ತದೆ. ಇಂತಹ ಒತ್ತಾಯಕ್ಕೆ ರಾಜಕೀಯ ಕಾರಣಗಳು ಇರುತ್ತವೆ. ಪರಿಣಾಮವಾಗಿ ಆಡುನುಡಿ ಮತ್ತು ಬರಹನುಡಿಗಳು ಎಂಬಿತ್ಯಾದಿ ತಪ್ಪಿರಿವಿನ ಬಗೆಗಳು ಹುಟ್ಟಿಕೊಳ್ಳುತ್ತವೆ.
ನುಡಿಯರಿಮೆಯ ನಿಲುವುಗಳಿಗೆ ಹೊರತಾದ, ಸಾಮಾಜಿಕ, ಸಾಂಸ್ಕೃತಿಕ ನಿಲುವುಗಳೇ ಇಂತಹ ವಿಂಗಡನೆಗೆ ಕಾರಣವಾಗುತ್ತವೆ. ಹಾಗೂ ಇದರ ಪರಿಣಾಮಗಳು ಮೇಲು-ಕೀಳು ಎಂಬ ಡೈಕಾಟಮಿಗಳ ಹುಟ್ಟಿಗೆ ಕಾರಣವಾಗುತ್ತವೆ. ಹಾಗಾಗಿ ನುಡಿ ಮತ್ತು ಒಳನುಡಿಗಳು ಎಂಬ ಬಗೆಗಳು ನೆಲೆಗೊಳ್ಳುತ್ತವೆ. ಅಷ್ಟೆಯಲ್ಲದೇ ಅವುಗಳ ನಡುವೆ ಸಾಮಾಜಿಕ ಅಸಮಾನ ನೆಲೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಅಸಮಾನ ನೆಲೆಗಳು ನಿರಂತರವಾಗಿ ನೆಲೆನಿಲ್ಲಲು ಅಧಿಕಾರ ಸಂಬಂಧಗಳೂ ಕೈ ಜೋಡಿಸುತ್ತವೆ ಎಂಬುದನ್ನು ಗಮನಿಸಲೆಬೇಕಾದ ಸಂಗತಿ. ಪರಿಣಾಮವಾಗಿ ಕೆಲವು ಪ್ರತಿಷ್ಠಿತ ಒಳನುಡಿಗಳಾಗಿ ಮತ್ತೆ ಕೆಲವು ಅಪ್ರತಿಷ್ಠಿತ ಒಳನುಡಿಗಳಾಗಿ ರೂಪುಗೊಳ್ಳುತ್ತವೆ.
ಒಳನುಡಿಗಳನ್ನು ನುಡಿಯರಿಮೆಯ ನೆರವಿನಿಂದ ಓದುವುದರಿಂದ ಕೊನೆಪಕ್ಷ ಎರಡು ಬಗೆಯ ತಿಳುವಳಿಕೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆ ಎರಡೂ ತಿಳಿವುಗಳಾವವು ಎಂದರೆ;
1. ಕಾಲದಿಂದ ಕಾಲಕ್ಕೆ ನುಡಿ ಬದಲಾವಣೆ ಹೇಗೆ ಆಗುತ್ತದೆ ಹಾಗೂ ಅಂತಹ ಬದಲಾವಣೆಗಳು ಹೇಗಿರುತ್ತವೆ ಎಂಬ ಸಂಗತಿಗಳು ಪರಿಚಯವಾಗುತ್ತವೆ.
2. ನುಡಿ ಬಳೆಕೆಗೂ ಮತ್ತು ಸಾಮಾಜಿಕ ಅನನ್ಯತೆಗಳ ನಡುವೆ ಯಾವ ಬಗೆಯ ಅಂತರ್ಸಂಬಂಧವಿರುತ್ತದೆ ಎಂಬ ದಿಟದ ನೆಲೆಗಳು ಇಂತಹ ಓದಿನಿಂದ ತಿಳಿಯುತ್ತವೆ.
ಈ ಎರಡೇ ಸಂಗತಿಗಳು ಮಾತ್ರವಲ್ಲ ಇನ್ನೂ ಹಲವು ಬಗೆಯ ತಿಳಿವಳಿಕೆಗಳು ಈ ಒಳನುಡಿ ಓದಿನಿಂದ ಸಿಗುತ್ತವೆ; ಒಳನುಡಿಗಳ ಸುತ್ತ ಸುತ್ತಿಕೊಂಡಿರುವ ತಿಳಿವಳಿಕೆಗಳು ಹೇಗೆ ತಪ್ಪರಿವಿನಿಂದ ಕೂಡಿರುತ್ತವೆ, ಮತ್ತು ಇಂತಹ ನುಡಿಬಗೆಗಳು ಸಾಮಾಜಿಕ ಅಸಹನೆಯ ರೂಪಕಗಳಾಗಿ ಹೇಗೆ ನೆಲೆನಿಲ್ಲುತ್ತವೆ ಮುಂತಾದ ಸಂಗತಿಗಳು ಇಲ್ಲಿ ನಿಚ್ಚಳಗೊಳ್ಳುತ್ತವೆ. ನುಡಿ ಬಗೆಗಳು ಇಲ್ಲವೇ ಸಾಮಾಜಿಕ ವೈವಿಧ್ಯತೆ ಎನ್ನುವುದು ಅಸಮಾನತೆಯನ್ನು ಹುಟ್ಟಿಸುವ ನೆಲೆಗಳಲ್ಲ.
ಬದಲಾಗಿ ಸಮುದಾಯಗಳಲ್ಲಿ ಹುದುಗಿರುವ ಗುರುತಿನ ಬಗೆಗಳಾಗಿರುತ್ತವೆ. ಸಾಂಸ್ಕ್ರುತಿಕ ರಾಜಕಾರಣದ ಮಸಲತ್ತಿನಿಂದ ಸಮುದಾಯ ಹಾಗೂ ಸದಸ್ಯರ ನಡುವಿನ ಇಂತಹ ಅಸಮಾನ ನೆಲೆಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತಲೆಯಿವೆ. ಈ ವ್ಯತ್ಯಾಸ ಇಲ್ಲವೇ ಬೇರೆತನಗಳು ವ್ಯಕ್ತಿ ಮತ್ತು ಸಮುದಾಯಗಳ ಸ್ವಾಯತ್ತತೆಯ ಗುರುತು (ಅಟಾನಮಿ ಆಫ್ ಐಡೆಂಟಿಟಿ) ಗಳಾಗಿ ರೂಪುಗೊಳ್ಳಬೇಕು, ಹೊರತು ಅಸಮಾನ ನೆಲೆಗಳಾಗಿಯಲ್ಲ. ಹಾಗಾಗಿ ಲೋಕ ಹೆಸರುವಾಸಿ ನುಡಿಯರಿಗ ಫರ್ಡಿನಾಂಡ್ ಡಿ. ಸಸ್ಯೂರ್ ಪರಿಚಯಿಸಿದ ‘ಡಿಫರನ್ಸ್’ ಎಂಬ ಅರಿಮೆಪದಕ್ಕೆ ನುಡಿ ಹಾಗೂ ಸಂಸ್ಕೃತಿ ಓದುಗಳಲ್ಲಿ ಅಷ್ಟೊಂದು ಮಹತ್ವ ಸಿಕ್ಕಿರುವುದಕ್ಕೇನು ಕಾರಣ ಹಾಗಾದರೆ? ಆದ್ದರಿಂದ ಇಂತಹ ಸ್ವಾಯತ್ತತೆಯ ನೆಲೆಗಳು ವ್ಯಕ್ತಿ ಇಲ್ಲವೇ ಸಮುದಾಯದ ಗುರುತಿನ ರೂಪಕವಾಗಬೇಕಾದ ಅಗತ್ಯವಿದೆ.
ಬದಲಾಗಿ ಅವುಗಳ್ಳನ್ನೂ ಕೂಡ ಅಧಿಕಾರ ಸಂಬಂಧದ ರಚನೆಯಾಗಿ ರೂಪುಗೊಳ್ಳಿಸುವುದಲ್ಲ. ಎತ್ತುಗೆಗಾಗಿ ನೋಡಿ, ಕನ್ನಡದ ಬೇರೆ ಬೇರೆ ಒಳನುಡಿ ಇಲ್ಲವೇ ನುಡಿಬಗೆಗಳಿಗೆ ಇರುವ ಸ್ವಾಯತ್ತತೆ ಹಾಗೂ ವೈವಿಧ್ಯತೆಯನ್ನು ನಿರಾಕರಿಸಿ, ಅವುಗಳೆಲ್ಲವನ್ನೂ ಪ್ರಮಾಣ ಕನ್ನಡದ ವಿರೂಪಗಳೆಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಸ್ವಾಯತ್ತತೆ ಮತ್ತು ವೈವಿಧ್ಯತೆಗಳು ನುಡಿ ಸಮುದಾಯದ ಪರಸ್ಪರ ನಂಟಿನ ನೆಲೆಗಳಾಗದೇ, ಅವೆರಡೂ ನುಡಿ ಸಮುದಾಯದ ವಿನ್ಯಾಸವನ್ನೇ ವಿರೋಧಾತ್ಮಕ ನೆಲೆಯಲ್ಲಿ ಗುರುತಿಸುವ ಮಾನದಂಡಗಳಾಗಿವೆ.
ಯಾವುದೇ ಪ್ರದೇಶ, ಜಾತಿ, ವರ್ಗ, ಧರ್ಮ ಎಂಬಿತ್ಯಾದಿ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳು ಎಂತಹದೇ ಪ್ರಾಬಲ್ಯವನ್ನು ಹೊಂದಿದ್ದರೂ, ಅವುಗಳು ಮಾತನಾಡುವ ನುಡಿಯೂ ಒಂದು ಒಳನುಡಿಯೇ ಆಗಿರುತ್ತದೆ. ಹಾಗಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನೇ ಮುಂದಿಟ್ಟುಕೊಂಡು ಒಳನುಡಿಗಳಲ್ಲಿ ಒಂದು ಮೇಲು ಮತ್ತೊಂದನ್ನು ಕೀಳಾಗಿ ಕಾಣುವ ಬಗೆಗಳು ಏಕೆ? ಮತ್ತು ಹೇಗೆ ಮುಂಚೂಣೆಗೆ ಬಂದಿವೇ? ಈ ಕೇಳ್ವಿಗಳು ಅತ್ಯಂತ ತೊಡಕಿನವಾದರೂ, ಅವುಗಳನ್ನು ಅರಿಯಲು ಬೇಕಾಗುವ ಒಂದಿಷ್ಟು ವಿವರಗಳನ್ನು ಈ ಮುಂದಿನ ಚರ್ಚೆಗಳಲ್ಲಿ ಕಾಣುತ್ತೇವೆ.
ನುಡಿ ಮತ್ತು ಒಳನುಡಿ: ಇವುಗಳ ದಿಟ ಚಹರೆಗಳೆಂತಹವು?
ಇಂಗ್ಲಿಶಿನ ಡಯಲೆಕ್ಟ್ ಎಂಬ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ‘ಉಪಭಾಷೆ’ ಅನ್ನುವ ಅರಿಮೆಪದವನ್ನು ಬಳಸುತ್ತಾರೆ. ಡಯಲೆಕ್ಟ್ ಎಂಬುದು ಗ್ರೀಕಿನ ಡಯಲೆಕ್ಟೋಸ್ (dialektos) ಎಂಬ ಪದದಿಂದ ಹುಟ್ಟಿದೆ. ನುಡಿಯರಿಗರು ಇದನ್ನು ಎರಡು ಬಗೆಯಲ್ಲಿ ನಿರ್ವಚಿಸಿರುವುದನ್ನು ನೋಡಬಹುದು. ನುಡಿಯೊಳಗೆಯೇ ಇರುವ ಆಯಾ ನುಡಿಯ ಬೇರೆ ಬೇರೆ ಬಗೆಗಳನ್ನೇ ಉಪಭಾಷೆ ಎಂದು ಕರೆಯುತ್ತಾರೆ. ಈ ವಾದದ ಪ್ರಕಾರ ಈ ನುಡಿ ಬಗೆಗಳ ಲಕ್ಷಣಗಳು ಆ ನುಡಿ ಸಮುದಾಯದ ಯಾವುದೇ ಒಂದು ನಿರ್ದಿಷ್ಟ ಗುಂಪನ್ನು ಪ್ರತಿನಿಧಿಸುತ್ತವೆ.
ಅಂದರೆ ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಇನ್ನೂ ಮುಂತಾಗಿ ಅವುಗಳನ್ನು ಹೆಸರಿಸುವುದೇ ಮೊದಲ ಬಗೆಯ ನಿರ್ವಚನೆಯಾಗಿದೆ. ಸಾಮಾಜಿಕ, ಪ್ರಾದೇಶಿಕ ನಂಟನ್ನು ಹೊಂದಿರುವ ಇಂತಹ ಯಾವುದೇ ನುಡಿ ಬಗೆಗಗಳು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಒಂದು ಪ್ರಮಾಣ ನುಡಿಯಾಗಿ ಗುರುತಿಸಿಕೊಳ್ಳುತ್ತವೆ. ಹಾಗೂ ಅಂತಹ ನುಡಿಗಳ ಅಧೀನ ರೂಪಗಳೇ ಈ ಉಪಭಾಷೆಗಳೆಂದು ಮತ್ತೊಂದು ಬಗೆಯ ನಿರ್ವಚನೆ ಹೇಳುತ್ತದೆ.
ಈ ಎರಡೂ ಪ್ರಕಾರದ ನುಡಿಯರಿಗರು ತಮ್ಮ ಉಪಭಾಷೆಯ ಬಗೆಗಿನ ನಿರ್ವಚನೆಗೆ ಬಳಸಿಕೊಳ್ಳುವ ಮಾನದಂಡಗಳು ಮಾತ್ರ ಒಂದೇ ಬಗೆಯ ಮಾನದಂಡಗಳಾಗಿವೆ ಎಂಬುದು ಮಾತ್ರ ಗಮನಾರ್ಹ. ಆ ಮಾನದಂಡಗಳನ್ನು ಉಲಿ, ಪದ, ಸೊಲ್ಲರಿಮೆ ಎಂಬಿತ್ಯಾದಿಯಾಗಿ ಗುರುತಿಸಬಹುದು. ದಿಟ ಇದೇ ನೆಲೆಗಳ ಮೂಲಕ ನುಡಿ ಬಗೆಗಳ ಕುರುಹುಗಳನ್ನು ಗುರುತಿಸುತ್ತಾರೆ. ಆದರೆ ಇದೇ ಕುರುಹುಗಳು ನುಡಿಯ ರಾಚನಿಕ ವಿಕಲ್ಪಗಳನ್ನೂ ಗುರುತಿಸುವ ಇಲ್ಲವೇ ನೋಡುವ ಕ್ರಮಗಳೂ ಆಗಿರುತ್ತವೆ ಎಂಬುದು ಅತ್ಯಂತ ಮಹತ್ವದ ಸಂಗತಿ ಎಂಬುದು ಈ ನಿರ್ವಚನಕಾರರಿಗೆ ಯಾಕೆ ಹೊಳೆಯಲಿಲ್ಲ.?
ನುಡಿಯರಿಮೆಯನ್ನು ಕೂಡ ಸಾಮಾಜಿಕ ಅಸಮಾನತೆಯನ್ನು ಹುಟ್ಟುಹಾಕಲು ಒಂದು ಮಾನದಂಡವನ್ನಾಗಿ ಬಳಸಿಕೊಂಡರೆ, ಅದನ್ನು ಓದುವ ಅಗತ್ಯವಾದರು ಯಾಕೆ? ಎಂಬ ಕೇಳ್ವಿಗಳು ಸಹಜವಾಗಿಯೇ ಎದುರಾಗುತ್ತವೆ. ನುಡಿಯರಿಮೆ ಇಲ್ಲವೇ ಇನ್ನ್ಯಾವುದೇ ಓದಿನ ವಲಯವಾದರೂ ಅವುಗಳ ಗುರಿಗಳು ಸಮುದಾಯದ ಅರಿವಿನ ನೆಲೆಗಳನ್ನು ಹಿಗ್ಗಿಸುವ ಮಾನದಂಡಗಳಾಗಬೇಕಾದ ಜರೂರಿದೆ. ಇಂತಹ ಅರಿವಿನ ವಲಯಗಳನ್ನೇ ಬಳಸಿಕೊಂಡು ಸಮುದಾಯಗಳನ್ನು ನರಕದ ಕೂಪಕ್ಕೆ ತಳ್ಳುವುದಕ್ಕಲ್ಲ ಎಂಬ ದಿಟವನ್ನು ನಾವು ಮನಗಾಣಬೇಕಿದೆ.
ಇದುವರೆಗೂ ಬಳಕೆಯಲ್ಲಿದ್ದ ಉಪಭಾಷೆ ಎಂಬ ಪದಕ್ಕೆ ಬದಲಾಗಿ ‘ಒಳನುಡಿ’ ಎನ್ನುವ ಅರಿಮೆಪದವನ್ನು ಬಳಸಲಾಗುತ್ತಿದೆ. ಈ ಹೊಸ ಅರಿಮೆಪದವನ್ನು ಮೊದಲು ಪರಿಚಯಿಸಿದವರು ಡಿ.ಎನ್.ಶಂಕರ ಭಟ್ಟ ಅವರು. ಒಳನುಡಿ ಎಂಬುದು ನುಡಿಯ ನೆಲೆಯಿಂದಲೂ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ. ಆದರೆ ಉಪಭಾಷೆ ಎಂಬ ಪದದಲ್ಲೇ ಅಧೀನ ನೆಲೆಯನ್ನು ಸೂಚಿಸುವ ತಿರುಳಿದೆ. ಈ ತಿರುಳೇ ಸಾಮಾಜಿಕ ಅಸಮಾನತೆಯನ್ನು ಸೂಚಿಸುತ್ತದೆ.
ಹಾಗಾಗಿ ಇದು ಕೇವಲ ಪದಗಳಲ್ಲಾದ ಬದಲಾವಣೆ ಮಾತ್ರವೆಂದು ತಿಳಿಯಬಾರದು. ಲೋಕವನ್ನು ನೋಡುವ ಬಗೆಯಲ್ಲಿಯೇ ಹುದಿಗಿರುವ ಅಸಮಾನ ನೆಲೆಗಳನ್ನು ಅರಿಯುವ ಬಗೆಯೂ ಇದಾಗಿದೆ. ಏಕೆಂದರೆ ಉಪಭಾಷೆ ಇಲ್ಲವೇ ಒಳನುಡಿ ಎಂಬುದು ಅಧೀನ ಇಲ್ಲವೇ ಇನ್ನೊಂದರ ವಿರೂಪವೆಂದಲ್ಲ. ಬದಲಾಗಿ ನುಡಿಯ ವೈವಿಧ್ಯತೆಯನ್ನು ಹಾಗೂ ಸಾಂಸ್ಕøತಿಕ ಬಹುಳತೆಯನ್ನೂ ತೋರಿಸುವ ಮಾನದಂಡಗಳಾಗಿವೆ.
ಒಂದೇ ನುಡಿಯನ್ನು ಈರ್ವ ನುಡಿಯಿಗರು ಒಂದೇ ಬಗೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಅಷ್ಟೇಯಲ್ಲ ಒಂದೇ ವ್ಯಕ್ತಿ ಅದೇ ನುಡಿಯನ್ನು ಎಲ್ಲ ಸನ್ನಿವೇಶದಲ್ಲೂ ಒಂದೇ ರೀತಿಯಲ್ಲಿ ಮಾತನಾಡಲಾರ ಹಾಗಾಗಿ ನುಡಿಬಗೆಗಳನ್ನು ಸನ್ನಿವೇಶ, ಕಾಲ, ಪ್ರದೇಶ ಹಾಗೂ ಸಾಮಾಜಿಕ ನೆಲಯಿಂದ ಬೇರ್ಪಡಿಸುತ್ತಾರೆಂದು ಕಾಣುತ್ತದೆ. ಉಪಭಾಷೆ ಇಲ್ಲವೇ ಒಳನುಡಿ ಎಂಬ ನೆಲೆಗಳು ಕೇವಲ ನುಡಿಬಗೆಗಳು ಮಾತ್ರವೇ (ಲ್ಯಾಂಗ್ವೇಜ್ ವೆರೈಟಿ) ಹೊರತು ಬೇರೆನೂ ಅಲ್ಲ. ನುಡಿಯೊಂದು ಬೆಳೆದುಬಂದ ಬಗೆ, ಅದು ಸಮಾಜದಲ್ಲಿ ವ್ಯವರಿಸುವ ರೀತಿ, ವ್ಯಕ್ತಿ ವಿಶಿಷ್ಟತೆಯನ್ನು ತೋರಿಸುವ ಕ್ರಮಗಳು, ಗ್ರಹಿಕೆಗಳು ಹಾಗೂ ಸಾಂಸ್ಕøತಿಕ ನಿಲುವುಗಳನ್ನು ಅರಿಯಲು ಈ ನುಡಿಬಗೆಗಳು ನೆರವಾಗುತ್ತಿವೆ.
ಒಂದು ಗುಂಪಿನ ಇಲ್ಲವೇ ಒಂದು ಪ್ರದೇಶದ ಇಲ್ಲವೇ ಒಂದು ಕಾಲಕ್ಕೆ ಸೇರಿದ ಜನರಾಡುವ ಯಾವುದೇ ನುಡಿ ಬಗೆಯನ್ನು ಒಳನುಡಿಯೆಂದು ಕರೆಯುತ್ತಾರೆ. ಉಲಿ, ಪದ, ಸೊಲ್ಲರಿಮೆಗಳನ್ನು ಆಧರಿಸಿಕೊಂಡು ಒಳನುಡಿಗಳ ಗುಣಗಳನ್ನು ಗುರುತಿಸುತ್ತಾರೆ. ಹಾಗೂ ಇದೇ ಗುಣಗಳು ಅದೇ ನುಡಿಯ ಇನ್ನೊಂದು ಬಗೆಯ ಒಳನುಡಿಯನ್ನು ಹುಟ್ಟುಹಾಕಲು ಕಾರಣವಾಗುತ್ತವೆ ಎಂಬುದು ಗಮನಾರ್ಹ. ಅಂದರೆ ನುಡಿ ಇಲ್ಲವೇ ಒಳನುಡಿ ಎಂದು ಗುರುತಿಸಲು ಇವರು ಮಾನದಂಡಗಳು ಬೇರೆ ಬೇರೆಯಲ್ಲ ಎಂಬುದನ್ನು ಇದು ಒತ್ತಿ ಹೇಳುತ್ತದೆ. ಹಾಗೇನೆ ಪ್ರತೀ ನುಡಿಸಮುದಾಯದ ಪ್ರತೀ ವ್ಯಕ್ತಿಯು ಮಾತನಾಡುವ ನುಡಿಯ ವಿವರಗಳು ಒಂದಿಲ್ಲ ಒಂದು ರೀತಿಯಲ್ಲಿ ಭಿನ್ನವಾಗಿಯೇ ಇರುತ್ತವೆ.
ಅಂದರೇನಾಯ್ತು ಯಾವುದೇ ಒಂದು ಪ್ರದೇಶದ ಇಲ್ಲವೇ ಗುಂಪಿನ ಜನರಾಡುವ ಮಾತಿಗೆ ಒಂದು ನಿರ್ದಿಷ್ಟ ಸ್ವರೂಪವಿರುತ್ತೆ ಎಂದು ಹೇಳುವುದಾದರೂ ಹೇಗೆ? ಇದೊಂದು ವಿತಂಡವಾದದಂತೆ ಕಂಡರೂ ಈ ನಿಲುವುಗಳನ್ನು ಅಲ್ಲಗಳಿಯುವುದಕ್ಕೆ ಸಾಧ್ಯವಿಲ್ಲ. ಒಂದುವೇಳೆ ಈ ನಿಲುವುಗಳನ್ನು ಅಲ್ಲಗಳಿಯಬೇಕೆಂದರೆ, ನುಡಿ ಹಾಗೂ ಒಳನುಡಿಗಳ ನಡುವೆ ದಿಟವಾಗಿಯೂ ಅಂತರಗಳಿವೆ ಎಂಬುದನ್ನು ಸಾಬೀತಪಡಿಸಲು, ಆ ನುಡಿ ಮತ್ತು ಅದರ ಒಳನುಡಿಯನ್ನು ನಿರ್ವಹಿಸುವ ಅಂತರ್ನಿಹಿತ ರಾಚನಿಕ ನಿಯಮಗಳ ಸ್ವರೂಪವನ್ನು ಬಿಡಿಸಿ ನೋಡಬೇಕಾಗುತ್ತದೆ. ಆವಾಗ ನುಡಿಯೊಂದರ ಅಖಂಡತೆ ಎಂಬುದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬಹುದು. ಈ ಕೆಳಗಿನ ಚಿತ್ರಗಳ ಮೂಲಕ ಈ ವಾದ ಸರಣಿಯನ್ನು ಇನ್ನಷ್ಟು ನಿಚ್ಚಳಗೊಳಿಸಬಹುದು;
ನುಡಿ = ಒಳನುಡಿಗಳ ಅಖಂಡತೆ ಹಾಗೂ ಒಳನುಡಿ = ವ್ಯಕ್ತಿನುಡಿಗಳ ಅಖಂಡತೆ
ನುಡಿ
| | |
ಒಳನುಡಿ ಒಳನುಡಿ ಒಳನುಡಿ
| | |
ವ್ಯಕ್ತಿನುಡಿ ವ್ಯಕ್ತಿನುಡಿ ವ್ಯಕ್ತಿನುಡಿ
- ಚಿತ್ರ – 1
ಪ್ರತಿಯೊಬ್ಬರೂ ಮಾತನಾಡುವುದು ಒಳನುಡಿಯನ್ನೇ ಎಂಬ ವಾಸ್ತವ ಸಂಗತಿ ಈ ವಿವರಣೆಗಳಿಂದ ತಿಳಿಯುತ್ತದೆ. ಹಾಗಾಗಿ ಒಳನುಡಿ ಎಂದರೆ ಗ್ರಾಮ್ಯ, ವಿರೂಪಗೊಂಡ ರೂಪ ಹಾಗೂ ಕೆಳದರ್ಜೆಯದು ಎಂಬ ನಿಲುವುಗಳು ಎಂತಹ ತಪ್ಪು ಗ್ರಹಿಕೆಗಳು ಅನ್ನುವುದು ಇದರಿಂದ ಮನದಟ್ಟವಾಗುತ್ತದೆ.
ಒಳನುಡಿಗಳು: ಕೆಲವು ತಪ್ಪುಗ್ರಹಿಕೆಗಳು
ಲೋಕದ ಜನರಾಡುವ ಯಾವುದೇ ನುಡಿಯನ್ನು ನೋಡಿದರೂ, ಅದು ಹಲವು ಬಗೆಗಳಲ್ಲಿ ನೆಲೆಗೊಂಡಿರುತ್ತದೆ. ಸಾಮಾಜಿಕ, ಪ್ರಾದೇಶಿಕ, ಚಾರಿತ್ರಿಕ, ಸಾಹಿತ್ಯಕ ಎಂಬಿತ್ಯಾದಿಯಾಗಿ ಆ ಬಗೆಗಳನ್ನು ಗುರಿತಿಸಬಹುದು. ಅಂದರೇನಾಯ್ತು ಪ್ರತಿಯೊಂದು ನುಡಿಯು ಏಕರೂಪಿಯಲ್ಲ ಅದು ಬಹುರೂಪಿಯಾಗಿರುತ್ತದೆ ಎಂದಾಯ್ತು. ಹಾಗಾಗಿ ಬಹುಳತೆಯೇ ನುಡಿಯ ಬಹುಮುಖ್ಯ ಲಕ್ಷಣಗಳಲ್ಲೊಂದು ಎಂಬ ಸಂಗತಿ ಇದರಿಂದ ನಿಚ್ಚಳವಾಗಿ ಕಾಣುತ್ತದೆ.
ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಕವಾಗಿ ಈಗಾಗಲೇ ಸಮುದಾಯದೊಳಗೆ ನೆಲೆನಿಂತಿರುವ ಅಸಮಾನ ನಿಲುವುಗಳು ನುಡಿಯೊಳಗೆಯೂ ಒಂದು ಶ್ರೇಣೀಕರಣವನ್ನು ಹುಟ್ಟು ಹಾಕುತ್ತವೆ. ಇಂತಹ ನಿಲುವುಗಳೇ ಒಳನುಡಿಗಳ ನಡುವಿನ ಭಿನ್ನತೆಯನ್ನು ಚಹರೆಗಳನ್ನಾಗಿ ಗುರುತಿಸದೇ, ಕೇವಲ ಸಾಮಾಜಿಕ ಭೇದಗಳನ್ನಾಗಿ ಗುರುತಿಸುತ್ತವೆ.
ಭಿನ್ನತೆ ಎಂಬುದು ಯಾವುದೇ ವಸ್ತು, ವಿಷಯ, ಮನೋಧರ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತೋರಿಸುವುದಾಗಿದೆ ಹೊರತಾಗಿ ತರತಮ ನೆಲೆಗಳನ್ನು ಹುಟ್ಟು ಹಾಕುವುದಲ್ಲ. ಇಂತಹ ಭಿನ್ನತೆಯ ತತ್ವವನ್ನು ಸಸ್ಯೂರ್ ಹುಟ್ಟು ಹಾಕಿದನು. ಇದೊಂದು ಸಾಂಸ್ಕೃತಿಕವಾಗಿ ಕ್ರಾಂತಿಕಾರಿ ಬೆಳವಣಿಗೆಯೆಂದೇ ಹೇಳಬೇಕು. ಏಕೆಂದರೆ, ಅದುವರೆಗೂ ಸಂಸ್ಕೃತಿ ಓದಿನಲ್ಲಿ ಭಿನ್ನತೆಯನ್ನು ತರತಮದ ನೆಲೆಯನ್ನಾಗಿ ನಿರ್ವಚಿಸುತ್ತಿದ್ದರು.
ಆದರೆ ಸಸ್ಯೂರ್ನ ಪ್ರಕಾರ ಎರಡು ವಸ್ತು, ವಿಷಯ, ಪದಗಳ ನಡುವಣ ಭಿನ್ನತೆಯೇ ಅವುಗಳ ಅಸ್ತಿತ್ವ ಹಾಗೂ ಸ್ವಾಯತ್ತತೆಯನ್ನು ಗುರುತಿಸುವ ನೆಲೆಗಳಾಗಿರುತ್ತದೆ. ಹಾಗಾಗಿ ನುಡಿಯಲ್ಲಿ ನೆಲೆನಿಂತಿರುವ ಇಂತಹ ನುಡಿಯ ಭಿನ್ನತೆಗಳು ಸಾಂಸ್ಕತಿಕ ಕೀಳರಿಮೆಯ ಸೂಚಕಗಳಾಗದೇ, ಸಾಮಾಜಿಕ-ಸಾಂಸ್ಕೃತಿಕ ಬಹುಳತೆಯ ರೂಪಕಗಳೆಂಬುದು ನಿಚ್ಚಳವಾಗಿ ಕಾಣುತ್ತದೆ.
ಇದನ್ನೇ ಅಮೇರಿಕದ ಹೆಸರುವಾಸಿ ನುಡಿಯರಿಗ ವಿಲಿಯಂ ಲೆಬೋ, “ರೂಲ್ಸ್ ಫಾರ್ ರಿಚ್ಯುವೆಲ್ ಇನ್ಸಲ್ಟ್ಸ್” ಎಂದು ಕರೆದಿರಬಹುದು. ನುಡಿಯರಿಮೆಯ ಪ್ರಕಾರ ಒಳನುಡಿಯೆಂದರೆ ಅದೊಂದು ನುಡಿಬಗೆ ಮಾತ್ರ. ಆದರೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯಗಳು, ತಮ್ಮ ನುಡಿಬಗೆಗಳಿಗೆ ಹೊರತಾದ ನುಡಿಬಗೆಗಳನ್ನು ಈ ಕೆಳ್ಕಂಡಂತೆ ಗುರುತಿಸಿದ್ದಾರೆ.
- ವಿರೂಪಗೊಂಡ ಭಾಷಿಕ ರೂಪಗಳು
- ಸಾಮಾಜಿಕ ಅಂಚಿನಲ್ಲಿರುವ ಹಾಗೂ ಅಲಕ್ಷಿತ ಸಮುದಾಯಗಳ ಭಾಷೆ
- ಗ್ರಾಮ್ಯ ನುಡಿಗಳು
- ಒಳನುಡಿ ಎನ್ನುವುದೇ ಒಂದು ಸಾಮಾಜಿಕ ಕಳಂಕ
- ಪಾರಂಪರಿಕವಾಗಿ ಹೀನ ಸ್ಥಿತಿಯಲ್ಲಿರುವ ಭಾಷೆಗಳು
- ಯಾವುದೇ ಪ್ರದೇಶ / ಜನಾಂಗದವರ ಭಾಷೆಗೆ ಅಧೀನವಾಗಿರುವ ಭಾಷೆ
ಒಳನುಡಿ ಹಾಗೂ ಒಳನುಡಿಗಳ ಬಗೆಗಳನ್ನು ಕುರಿತು ಓದುವ ವಲಯವೇ ಒಳನುಡಿ ಓದು (ಡಯಲೆಕ್ಟಾಲಜಿ). ಹಾಗಾದರೆ ಒಳನುಡಿ ಹಾಗೆಂದರೇನು ಎಂಬ ಕೇಳ್ವಿ ಇಲ್ಲಿ ಎದುರಾಗುತ್ತದೆ. ಸಾಮಾನ್ಯ ಜನರ ಪ್ರಕಾರ, ಒಳನುಡಿಯೆಂದರೆ ಅದೊಂದು ಕೆಳಮಟ್ಟದ, ಕೆಳದರ್ಜೆಯ, ಗಾಂಪ [ಗ್ರಾಮ್ಯ] ರೂಪವೆಂದೇ ಪರಿಗಣಿಸಲಾಗುತ್ತದೆ. ಇಂತಹ ನುಡಿ ಬಗೆಗಳು ಕೂಲಿ, ವ್ಯವಸಾಯ, ಕಾರ್ಮಿಕ, ಹಿಂದೂಳಿದ ಹಾಗೂ ತಳಸಮುದಾಯಗಳೊಂದಿಗೆ ನಂಟನ್ನು ಹೊಂದಿರುತ್ತವೆ. ಮತ್ತು ಈ ನುಡಿ ಬಗೆಗಳು ಪ್ರತಿಷ್ಠೆಯ ಕೊರತೆಯಿಂದಲೂ ಬಳಲುತ್ತವೆ. ಇದು ಆರೋಪವಲ್ಲ ಇದು ವಾಸ್ತವ ಸಂಗತಿ.
1. ಯಾವುದೇ ಸಾಮಾಜಿಕ ಅಂತಸ್ತನ್ನು ಹೊಂದಿರದ, ಬರಹದ ಸವಲತ್ತನ್ನು ಪಡೆದುಕೊಳ್ಳದ ಅಂದರೆ ಲಿಪಿ ವ್ಯವಸ್ಥೆಯಿಂದ ವಂಚಿತವಾಗಿರುವ ಹಾಗೂ ಅಂಚಿಗೆ ತಳ್ಳಲ್ಪಟ್ಟಂತಹ ಜನರಾಡುವ ನುಡಿಬಗೆಗಳನ್ನು ಒಳನುಡಿಯೆಂದು ಕರೆಯುತ್ತಾರೆ.
2. ಪ್ರಮಾಣ ನುಡಿಯ ನಿಯಮಗಳನ್ನು ಉಲ್ಲಂಘಿಸಿ (ಹೊರಪದರ ರಚನೆಗಳಕ್ಕಿಂತ ಬೇರೆಯಾದ ರಾಚನಿಕ ವ್ಯವಸ್ಥೆಯನ್ನು ಹೊಂದಿದಂತೆ ಕಾಣುವ) ಬೌದ್ಧಿಕ ಕಸುವಿಲ್ಲದ ಇಲ್ಲವೇ ಬುದ್ಧಿಭ್ರಮಣೀತ ರೂಪಗಳನ್ನು ಒಳಗೊಂಡಿರುವ ನುಡಿಯೇ ಒಳನುಡಿ.
ಪ್ರತಿಯೊಬ್ಬರು ಕೂಡ ಒಂದಲ್ಲೊಂದು ಒಳನುಡಿಯಲ್ಲಿಯೇ ಮಾತಾಡುತ್ತಾರೆ. ಹಾಗಾಗಿ ಇವುಗಳಲ್ಲಿಯೇ ಯಾವುದೇ ಒಂದನ್ನು ಮೇಲು ಎಂದು ಮತ್ತು ಇನ್ನೂಳಿದ ಎಲ್ಲ ಒಳನುಡಿಗಳನ್ನು ಕೀಳು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಧಿಕಾರ ಸಂಬಂಧ ಹಾಗೂ ಸಾಮಾಜಿಕ ಪ್ರಾಬಲ್ಯದ ನಂಟನ್ನು ಹೊಂದಿರುವ ಯಾವುದೇ ಗುಂಪು, ಪ್ರದೇಶ, ಜಾತಿಗಳು ಮಾತುನಾಡುವ ನುಡಿಬಗೆಯೊಂದನ್ನು ಮಾತ್ರ ಮೇಲು ಎಂದು ಪರಿಗಣಿಸಲಾಗುತ್ತದೆ.
ಉಳಿದವುಗಳನ್ನು ಕೆಳಮಟ್ಟದವು ಎಂದು ಒಪ್ಪಿಸಲಾಗಿರುತ್ತದೆ. ನುಡಿಯರಿಮೆಯ ಪ್ರಕಾರ ಯಾವ ನುಡಿಯೂ ಮೇಲುವಲ್ಲ ಕೀಳುವಲ್ಲ ಎಂಬುದು ಮಾತ್ರ ದಿಟ. ಈಗಾಗಲೇ ಚರ್ಚಿಸಿದಂತೆ, ಒಳನುಡಿ ಎಂಬುದು ಯಾವುದೇ ಒಂದು ನುಡಿಯ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪಂಗಡಗಳು ಮಾತ್ರ.
ಅಂದರೆ ಮೈಸೂರು ಕನ್ನಡ, ಬಾಗಲಕೋಟೆ ಕನ್ನಡ, ಗುಲಬರ್ಗಾ ಕನ್ನಡ, ಬೀದರ ಕನ್ನಡ, ಕುಂದಾಪುರ ಕನ್ನಡ ಮುಂತಾದವುಗಳನ್ನು ಪ್ರಾದೇಶಿಕವಾಗಿ, ಹರಿಜನ ಕನ್ನಡ, ಗೌಡ ಕನ್ನಡ, ಲಿಂಗಾಯತ ಕನ್ನಡ, ಹವ್ಯಕ ಎಂಬಿತ್ಯಾದಿಗಳನ್ನು ಜಾತಿ ಇಲ್ಲವೇ ಜಾಮಾಜಿಕ ಒಳನುಡಿಗಳೆಂದು ಗುರುತಿಸುತ್ತಾರೆ. ಈ ಬಗೆಯ ವಿಂಗಡಣೆಗಳು ಸಾಕಷ್ಟು ಸವಾಲುಗಳನ್ನು ಒಡ್ಡುತ್ತವೆ.
ಮುಖ್ಯವಾಗಿ ನುಡಿ ಹಾಗೂ ಒಳನುಡಿಗಳ ನಡುವಿನ ಗಡಿಗೆರೆಗಳನ್ನು ಗುತುತಿಸುವ ಬಗೆಯಲ್ಲಿಯೇ ಈ ಸವಾಲುಗಳು ಎದುರಾಗುತ್ತವೆ. ಹಾಗೆ ನೋಡಿದರೆ, ನುಡಿಯೆಂದರೇನು ಎಂಬುದೇ ಅತ್ಯಂತ ಸವಾಲಿನ ಕೇಳ್ವಿಯಾಗಿದೆ. ದಿಟ ನುಡಿಯೆನ್ನುವುದೇ ನುಡಿಯ ಹಲವು ಬಗೆಗಳ ನಡುವಣ ಪರಸ್ಪರ ಅರ್ಥಗ್ರಾಹ್ಯತೆಯ ಮೊತ್ತ.
ಆದರೆ ನುಡಿಯೊಂದನ್ನು ಬಿಡಿ ಭಾಗಗಳನ್ನಾಗಿಸಿ, ಅವುಗಳನ್ನೇ ಒಳನುಡಿಗಳೆಂದು ನಿರ್ವಚಿಸುವುದರಿಂದ ಆಗುವ ಪ್ರಯೋಜನ ಏನೆಂದರೆ ನುಡಿ ಹಾಗೂ ಒಳನುಡಿ ಎಂದು ಗುಣಾರೋಪಣೆ ಮಾಡವುದಕ್ಕೆ ಮಾನದಂಡಗಳು ಸಿಗುತ್ತವೆ ಅಷ್ಟೇ. ಸಾಂಸ್ಕೃತಿಕ ಇಲ್ಲವೇ ನುಡಿಯ (ಭಾಷಿಕ) ಕಣ್ನೋಟದಲ್ಲಿ ಇಂತಹ ಗುಣಾರೋಪಣೆಗಳೇನು ದೊಡ್ಡ ಸಾಧನೆಗಳಲ್ಲ. ಇವುಗಳು ಕೇವಲ ಸಾಮಾಜಿಕ-ರಾಜಕೀಯ ರಚನೆಗಳು ಮಾತ್ರ.
ಎರಡು ಬೇರೆ ಬೇರೆ ಎತ್ತುಗೆಗಳಿಂದ ಈ ನಿಲುವನ್ನು ಇನ್ನಷ್ಟು ವಿವರವಾಗಿ ನೋಡಬಹುದು. ಸ್ಕ್ಯಾಂಡಿನವಿಯನ್ ನುಡಿಗಳಾದ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್ಗಳ ನಡುವೆ ಪರಸ್ಪರ ಅರ್ಥಗ್ರಾಹ್ಯತೆ ಇದ್ದಾಗಲೂ, ಅವುಗಳನ್ನು ಬೇರೆ ಬೇರೆ ನುಡಿಗಳೆಂದು ಗುರುತಿಸಲಾಗಿದೆ. ಒಳನುಡಿ ಓದಿನಲ್ಲಿ ನೆಲೆನಿಂತಿರುವ ನುಡಿ ಹಾಗೂ ಒಳನುಡಿಗಳ ಕುರಿತ ನಮ್ಮ ಈಗಿನ ವ್ಯಾಖ್ಯಾನಕ್ಕೆ ಇದು ತಕ್ಕುದಾದ ನಿಲುವಲ್ಲ ಎಂದು ಕಾಣುತ್ತದೆ.
ಏಕೆಂದರೆ ಒಂದೇ ನುಡಿಯ ಬೇರೆ ಬೇರೆ ನುಡಿಬಗೆಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾದರೆ, ಅವುಗಳನ್ನು ಬೇರೆ ನುಡಿಗಳೆಂದು ಪರಿಗಣಿಸುವುದಿಲ್ಲ. ಬದಲಾಗಿ ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಗುರುತಿಸುತ್ತಾರೆ. ಇಂತಹ ಸಂವಹನ ಸಾಧ್ಯತೆ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್ಗಳ ನಡುವೆ ಇರುವಾಗಲೂ ಅವುಗಳನ್ನು ಬೇರೆ ನುಡಿಗಳನ್ನಾಗಿ ಗುರುತಿಸಲಾಗಿದೆ.
ಇದಕ್ಕೆ ಎದುರಾಗಿ ಜರ್ಮನ್ನಿನ ಕೆಲವು ಒಳನುಡಿಗಳು ಮತ್ತೆ ಕೆಲವು ಒಳನುಡಿಯ ಆಡುಗರಿಗೆ ಅರ್ಥವಾಗುವುದಿಲ್ಲ. ಅಂದರೆ ಪರಸ್ಪರ ಸಂವಹನದಲ್ಲಿ ತೊಡಕಾಗುತ್ತದೆ. ಆದಾಗ್ಯೂ ಜರ್ಮನ್ ನುಡಿಗಳನ್ನು ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಪರಿಗಣಿಸಲಾಗಿದೆ.
ಇಂದರಿಂದ ಜರ್ಮನ್ ನುಡಿಗೆ ಒಂದು ಸ್ವತಂತ್ರ ನುಡಿಯಾಗುವ ಹೆಚ್ಚಿನ ಅರ್ಹತೆಯಿದ್ದು, ಡೆನಿಶ್ ನುಡಿಗೆ ಸ್ವತಂತ್ರ ನುಡಿಯಾಗುವ ಅರ್ಹತೆ ಕಡಿಮೆ ಇದೆಯೆಂದು ವಾದಿಸಿದಂತೆ ಅಲ್ಲ. ಆದರೆ ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು, ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸಲಾಗುತ್ತದೆ. ಹಾಗಾದರೆ ಈ ತತ್ವದ ಪ್ರಸ್ತುತೆಯಾದರೂ ಏನು? ಎಂಬ ಕೇಳ್ವಿ ಈಗ ಎದುರಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243


