Connect with us

ನೆಲದನಿ

ನುಡಿಯ ಒಡಲು – 23 | ಮಾತೃಭಾಷೆ : ಹಾಗಂದರೇನು?

Published

on

  • ಡಾ‌.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

 

Why not let me speak in
Any language I like? The language Ispeak
Becomes mine, its distortions, its queernesses
All mine, mine alone. It is half-English, half
Indian, funny perhaps, but it is honest,
It is as human as I am human, don’t
You see?…

Kamala Das

Language is the key to the heart of culture. (Edwards 1985:36)

Language embodies the world view of a culture and is unique to the culture that created it. It reflects values and concepts that are deemed to be the most important by culture. A language describes the culture it comes from. (Noam Chomsky, www.anacleta.homestead.com)

Globally, language is the dynamite of thought. If you kill or render impotent a people’s language, you can as well kill the people, but if you effectively plan and develop a people’s language, you are laying treasures that affect eternity and providing the people with tools of self identity, self actualization and self promotion. (Adegbija 1993:9)

ಮಾತೃಭಾಷೆ ಅಂದರೇನು ಎಂಬುದರ ವ್ಯಾಖ್ಯೆಗಳನ್ನು ಕೊಡುವುದು ನನ್ನ ಉದ್ದೇಶವಲ್ಲ. ಬದಲಿಗೆ, ಇಂತಹ ಪದಗಳು [ಪರಿಕಲ್ಪನೆ] ಹುಟ್ಟಿಸುವ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ತಮ್ಮ ಗಮನ ಸೆಳೆಯಲು ಯತ್ನಿಸುತ್ತೇನೆ. ಜನಮಾನಸದಲ್ಲಿ ‘ತಾಯ್ನುಡಿ’ಗೆ ಬದಲಾಗಿ ‘ಮಾತೃಭಾಷೆ’ ಎಂಬ ಪದವೇ ಹೆಚ್ಚು ಬಳಕೆಗೆ ಬಂದಿದೆ. ಆದಾಗ್ಯೂ ನಾನು ಈ ಟಿಪ್ಪಣಿಯಲ್ಲಿ ಇನ್ನೂ ಮುಂದೆ ಮಾತೃಭಾಷೆಗೆ ಬದಲಾಗಿ ‘ತಾಯ್ನುಡಿ’ ಎಂಬ ಪದವನ್ನು ಬಳಸುತ್ತೇನೆ. ಕಾರಣವೇನೆಂದರೆ ಕನ್ನಡದ ನುಡಿಗಟ್ಟುಗಳನ್ನೇ ಸಹಜವಾಗಿ ಬಳಕೆಗೆ ತರುವ ಹೆಬ್ಬಯಕೆ.

ಈ ನಡೆ ಈಗಾಗಲೇ ಬಳಕೆಗೆ ಬಂದಿದೆ. ಈ ಲೇಖನವು ತನ್ನ ಚರ್ಚೆಯ ಮುಖ್ಯ ಭಿತ್ತಿಯನ್ನಾಗಿ ನಾಡು-ನುಡಿ-ಸಂಸ್ಕೃತಿಗಳ ನಡುವಣ ತಿಕ್ಕಾಟ ಹಾಗೂ ಸ್ವನುಡಿ-ಪರನುಡಿಗಳ ನಡುವಣ ಯಾಜಮಾನ್ಯ-ಅಧೀನ ಸಂಬಂಧಗಳನ್ನು ಆಯ್ದುಕೊಂಡಿದೆ. ನಾಗರಿಕತೆಯ ವಿಕಾಸ ಹಾಗೂ ಚರಿತ್ರೆಯ ಚಲನಶೀಲತೆ ಒದಗಿಸುವ ಕುರುಹಗಳ ಆಧಾರದ ಮೇಲೆ, ತಾಯ್ನುಡಿ ಎನ್ನುವುದೇ ಒಂದು ಹುಸಿಕಲ್ಪನೆ [ಮಿಸ್‍ನಾಮರ್] ಎನ್ನುವ ತಿಳುವಳಿಕೆಯೂ ಮುಂಚೂಣೆಗೆ ಬಂದಿದೆ.

ಬೇರೆ ಬೇರೆ ಸಂಸ್ಕೃತಿಗಳು ವಾಸಿಸುವ ಒಂದು ಸಮುದಾಯದಲ್ಲಿ ‘ತಾಯ್ನುಡಿ’ಯನ್ನು ಗುರುತಿಸುವ ತಾತ್ವಿಕ ನೆಲೆಗಳಾವವು? ಅಂತಹದೊಂದು ಸನ್ನಿವೇಶವನ್ನು ಖಚಿತವಾಗಿ ವ್ಯಾಖ್ಯಾನಿಸಬಹುದಾ? ಹೌದಾದರೆ ಹೇಗೆ? ಸಾಹಿತ್ಯಿಕ-ಭಾಷಿಕ ಚರಿತ್ರೆಗಳನ್ನು ಪರಿಶೀಲಿಸಿ ನೋಡಿದರೆ, ಎಲ್ಲಿಯೂ ಕೂಡ ತಾಯ್ನುಡಿಯನ್ನು ಖಚಿತ ಹಾಗೂ ನಿರ್ದಿಷ್ಟವಾಗಿ ವ್ಯಾಖ್ಯಾನಿಸಿದ್ದು ಕಂಡು ಬಂದಿಲ್ಲ. ಹಾಗಾದರೆ, ಇಂತಹ ಒಂದು ಸಾಂಸ್ಕೃತಿಕ-ಭಾಷಿಕ ಸನ್ನಿವೇಶವನ್ನು ವಿವರಿಸುವದು ಹೇಗೆ?

ಇದಕ್ಕಿರುವ ತಾತ್ವಿಕ ಸಮರ್ಥನೆಗಳೇನು? ತಾಯ್ನುಡಿಗೆ ಬದಲಾಗಿ ನಾಡುನುಡಿ, ಪರಿಸರನುಡಿ, ಮೊದಲನುಡಿ ಮುಂತಾದ ಪರಿಕಲ್ಪನೆಗಳು ಬಳಕೆಯಲ್ಲಿವೆ. ಇಂತಹ ರೂಢಿಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ, ಈ ಪರಿಕಲ್ಪನೆ ಆಕಸ್ಮಿಕವಾಗಿ ಜಾರಿಗೆ ಬಂದಿದೆ ಎಂದು ಅನ್ನಿಸುತ್ತದೆ. ಇತ್ತೀಚಿನ ರಾಷ್ಟ್ರ-ರಾಷ್ಟ್ರೀಯತೆಯ ಕಲ್ಪನೆಯೊಂದಿಗೆ ತಾಯ್ನುಡಿ ಹಾಗೂ ತಾಯ್ನಾಡು ಎನ್ನುವಂತಹ ಮೌಲ್ಯಗಳು ಪ್ರಾಮುಖ್ಯತೆಯನ್ನು ಪಡಕೊಂಡಿರುವುದು ಗಮನಾರ್ಹ.

ರಾಷ್ಟ್ರೀಯತೆಯನ್ನು ಬೆಳಸುವ ಪ್ರಕ್ರಿಯೆಯಲ್ಲಿ ಭಾಷೆಯು ತನ್ನ ಮೂಲಭೂತ ಸ್ವರೂಪಕ್ಕಿಂತ ಬೇರೆಯೇ ರೂಪವನ್ನು ಪಡಕೊಂಡಿದೆ. ಧರ್ಮ, ಜಾತಿಗಳು ಸ್ವರೂಪವನ್ನೇ ಭಾಷೆಯೂ ಪಡಕೊಂಡಿದೆ [ಆರೋಪಿಸಲಾಗಿದೆ]. ಧರ್ಮ ಹಾಗೂ ಜಾತಿಯೊಂದಗಿನ ನಂಟು ಯಾವಾಗಲೂ ಅಂಧಾನುಕರುಣೆಯಿಂದ ಕೂಡಿರುತ್ತದೆ ಎನ್ನುವ ವಾದಗಳಿವೆ. ಭಾಷೆಗೂ ಇದೇ ಸ್ಥಿತಿ ಒದಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದು ಹುಟ್ಟಿಸುವ ಸಾಂಸ್ಕೃತಿಕ ಅಪಾಯ ಯಾರನ್ನಾದರೂ ಘಾಸಿಗೊಳಿಸುತ್ತದೆ. ಹಾಗಾದರೆ ಭಾಷೆಯ ಮೂಲ ಸ್ವರೂಪವೇನು? ಅದು ಯಾಕೆ? ಧರ್ಮ, ಜಾತಿ ಹಾಗೂ ಪ್ರಾದೇಶಿಕತೆಯಂತಹ ಮೌಲ್ಯಗಳೊಂದಿಗೆ ಸಮೀಕರಣಗೊಂಡಿದೆ. ಇಂತಹ ಸನ್ನಿವೇಶದ ಹಿಂದಿನ ತಾತ್ವಿಕ ಒತ್ತಡಗಳೇನು? ಇಂತಹ ಹಲವು ಪ್ರಶ್ನೆಗಳು ಸೂಕ್ಷ್ಮಮತಿಗಳನ್ನು ಕಾಡದೆ ಇರಲಾರವು. ‘ತಾಯ್ನುಡಿ’ ಹಾಗೂ ‘ತಾಯ್ನಾಡು’ ಮುಂತಾದ ಮೌಲ್ಯಗಳ ಹೊರಚಾಚು ಏನು? ನಾಡು-ನುಡಿಗಳ ನಡುವೆ ನಂಟು ಬೆಸೆಯುವ ನೆಲೆಗಳಾವವು?

ನಾವು ಭಾರತೀಯರು ಅನ್ನುವ ಭಾವನೆ ಹಿಂದಿನ ಪ್ರೇರಣೆಗಳೇನು? ಅದೇ ನಾವು ಕನ್ನಡಿಗರು ಅನ್ನುವ ಭಾವನೆಗಳ ನೆಲೆಗಳಾವವು? ನಾಡು-ನುಡಿ ಎರಡನ್ನೂ ‘ತಾಯಿ’ಗೆ ಸಮೀಕರಸಿಕೊಂಡು ಆರಾಧಿಸುವ ಬಗೆಯೇ ಒಂದು ರಾಜಕೀಯ ಹುನ್ನಾರದಂತೆ ಕಾಣುತ್ತದೆ. ನಾವು ಭಾರತೀಯರು ಎನ್ನುವುದು ಕೇವಲ ರಾಜಕೀಯ ಒಗ್ಗಟ್ಟಿನ ನಂಬಿಕೆಯಾದರೆ, ಅದನ್ನು ‘ತಾಯ್ನಾಡು’ ಎಂದು ಕರೆಯುವ ಜರೂರು ಏನಿತ್ತು? ಇದು ಕೇವಲ ರಾಜಕೀಯ ಪ್ರೇರಿತ ಮೌಲ್ಯವಾದರೆ, ಇದಕ್ಕೆ ಜನಸಾಮಾನ್ಯರು ಇಷ್ಟೊಂದು ಗೌರವ ತೋರಿಸುವ ಅಗತ್ಯವಿರಲಿಲ್ಲ ಎಂದು ಕಾಣುತ್ತದೆ.

ನಾಡು-ನುಡಿಗಳ ನಡುವೆ ಸಾಂಸ್ಕೃತಿಕ ಹೊಂದಾಣಿಕೆಯ ಕೊರತೆ ಇದ್ದೇ ಇರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಕುತೂಹಲದ ಸಂಗತಿ ಏನೆಂದರೆ ನಾಡು ಬಹುತ್ವತೆಯ ಸಂಕೇತವಾದರೆ ನುಡಿ ಏಕತೆಯ ಸಂಕೇತವಾಗಿರುತ್ತದೆ. ವಾಸ್ತವದಲ್ಲಿ ನಾಡು-ನುಡಿಗಳ ನಡುವೆ ನಿರಂತರ ಗುದ್ದಾಟವಿರುತ್ತದೆ. ಇದು ದಿನವೂ ನಮ್ಮ ಕಣ್ಣಿಗೆ ರಾಚುವ ಸತ್ಯ ಉದಾಹರಣೆಗೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮುಂತಾದ ರಾಜ್ಯಗಳಲ್ಲಿ ನಡೆಯುವ ಬೆಳವಣೆಗೆಗಳನ್ನು ನೆನಪಿಸಿಕೊಳ್ಳಬಹುದು.

ಈ ನಾಡು-ನುಡಿಗಳ ನಡುವೆ ಏಕತೆ ಬೆಸೆಯುವ ಕ್ರಮಗಳಲ್ಲೇ ದ್ವಂದ್ವವಿದೆ ಎಂದು ತೋರುತ್ತದೆ. ಕರ್ನಾಟಕ ಅಥವಾ ಮಹಾರಾಷ್ಟ್ರಗಳು ಒಂದೊಂದು ನಾಡಾದರೆ, ಆ ನಾಡುಗಳಲ್ಲಿ ವಾಸಿಸುವ ಎಲ್ಲ ಜನಸಮೂಹದ ತಾಯ್ನುಡಿ ಕನ್ನಡ/ಮರಾಠಿ ಮಾತ್ರವೇ ಅಲ್ಲ ಅನ್ನುವುದು ಗಮನಾರ್ಹ. ಅಂದರೆ ಕನ್ನಡಿಗ-ಕರ್ನಾಟಕ ಹಾಗೂ ಮರಾಠಿಗ- ಮಹಾರಾಷ್ಟ್ರ ಇವರ ನಡುವೆ ಸಾಮರಸ್ಯಕ್ಕಿಂತ ಸಂಘರ್ಷದ ಪರ್ಸಂಟೇಜ್‍ಯೇ ಜಾಸ್ತಿ ಇದೆ.

ತಾಯ್ನುಡಿ ಕುರಿತು ಸಾಕಷ್ಟು ನಂಬಿಕೆಗಳು ಹುಟ್ಟಿಕೊಂಡಿವೆ. ಅವುಗಳೆಂದರೆ, ತಾಯ್ನುಡಿ ಅದು ಜನಾಂಗಗಳ ಸ್ಮೃತಿಕೋಶವಾಗಿದೆ. ಅವರ ಲೋಕಗ್ರಹಿಕೆಯನ್ನು ರೂಪಿಸಿಕೊಳ್ಳುವ ಹಾಗೂ ಅವರ ಸಂವೇದನಾ ಪ್ರಕ್ರಿಯೆಯನ್ನು ಕಟ್ಟಿಕೊಳ್ಳುವ ಕ್ರಮ ಆ ತಾಯ್ನುಡಿಯಿಂದಲೇ ಸಾಧ್ಯ. ಜಗತ್ತಿನ ಎಲ್ಲ ಬಗೆಯ ತಿಳುವಳಿಕೆಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ತಾಯ್ನುಡಿ ಬೆಳಕಿಂಡಿಯಾಗಿದೆ. [ಇಂಗ್ಲಿಶ್ ಹಾಗೂ ಸಂಸ್ಕೃತದಂತಹ ಅಧಿಕಾರಸ್ಥ ಭಾಷೆಗಳು ಮಾತ್ರ ಜ್ಞಾನದ ಬೆಳಕಿಂಡಿಗಳು ಎನ್ನುವ ನಂಬಿಕೆಗಳೇ ನೆಲೆಯೂರಿದ್ದವು. ಅಂತಹ ಸನ್ನಿವೇಶದಲ್ಲಿ ಕನ್ನಡದಂತಹ ದೇಶೀ ಭಾಷೆಗಳು ಗೋಡೆಯಾಗಿ ಪರಿಣಮಿಸಿದ್ದೇ ಹೆಚ್ಚು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು].

ಇದು ಸಮುದಾಯದ ಅನುಭವವನ್ನು ಚಾರಿತ್ರಿಕವಾಗಿ, ಪಾರಪಂರಿಕವಾಗಿ ತನ್ನ ಸ್ಮೃತಿಕೋಶಗಳಲ್ಲಿ ಅಂತಸ್ಥಗೊಳಿಸಿರುತ್ತದೆ. ಆಯಾ ಸಂಸ್ಕೃತಿಯ ರಚನೆಗಳು ಆಯಾ ತಾಯ್ನುಡಿಯೊಂದಿಗೆ ಬೆಸೆದುಕೊಂಡಿರುತ್ತವೆ. ಸಾಂಸ್ಕೃತಿಕ ಹಾಗೂ ಸಂವಹನ ರಚನೆಗಳು ಏಕತ್ರಗೊಂಡಿರುತ್ತವೆ. ಭಾಷೆ ಪ್ರತಿಯೊಂದು ಸಮುದಾಯದ ‘ಅನುಭವ’ವನ್ನು ಚಲನಶೀಲಗೊಳಿಸುತ್ತದೆ ಎನ್ನುವ ತಿಳುವಳಿಕೆ ಬಲವಾಗಿರುವುದೇ ಈ ಎಲ್ಲ ನಂಬಿಕೆಗಳಿಗೆ ಕಾರಣ. ಇದೊಂದು ಹುಸಿ ನಂಬಿಕೆ ಎಂದು ನನ್ನ ವಾದವಲ್ಲ. ಏನಂದರೆ ಭಾಷೆ ಹಾಗೂ ಸಂಸ್ಕೃತಿಗಳ ನಡುವಣ ನಂಟು ಆಕಸ್ಮಿಕ ಮತ್ತು ಅನಕೂಲಾತ್ಮಕವಾದದ್ದು ಎನ್ನುವುದು ಕೂಡ ಸತ್ಯ. ಪ್ರತಿಯೊಂದು ಭಾಷೆಯು ಯಾವುದೇ ಆಶಯವನ್ನು ಕಟ್ಟಿಕೊಡುವ ಶಕ್ತಿಯನ್ನು ಹೊಂದಿರುತ್ತದೆ.

ಯಾವುದು ಮನುಷ್ಯನ ಅನುಭವಕ್ಕೆ ಅಥವಾ ಗ್ರಹಿಕೆಗೆ ದಕ್ಕಲಾರದೋ ಅದು ಭಾಷೆಯಲ್ಲಿ ಪ್ರಕಟಗೊಳ್ಳಲಾರದು. ಇದು ಭಾಷೆಗಿರುವ ಮಿತಿಯಲ್ಲ. ಮನುಷ್ಯನ ಗ್ರಹಿಕೆಗಿರುವ ಮಿತಿಯೆನ್ನುವುದು ಗಮನಾರ್ಹ. ಸಾಮನ್ಯವಾಗಿ ಮನುಷ್ಯನ ಅಭಿವ್ಯಕ್ತಿಗೆ ದಕ್ಕದ ಅನುಭವವನ್ನು ಅವನಾಡುವ ಭಾಷೆಗಿರವ ಮಿತಿಯೆಂದು ಆರೋಪಿಸಲಾಗಿದೆ. ಅದೇನೆಂದರೆ ಭಾಷೆ ಮನುಷ್ಯನ ಪ್ರತಿ ಅನುಭವವನ್ನು ವ್ಯಕ್ತಪಡಿಸಲಾರದು ಎಂಬ ಸರಳ ನಂಬಿಕೆವೊಂದು ಜಾರಿಯಲ್ಲಿದೆ.

ಮನುಷ್ಯ ತಾನು ಏನನ್ನು ತನ್ನ ಅನುಭವದ ಭಾಗವನ್ನಾಗಿ ಪಡೆದುಕೊಳ್ಳುತ್ತಾನೋ, ಅದು ಭಾಷೆಯ ಮುಖಾಂತರ ಅನುವಾದಗೊಂಡು ವ್ಯಕ್ತವಾಗುತ್ತದೆ. ಅಮೂರ್ತತೆ ಹಾಗೂ ಮೂರ್ತತೆ ಅನ್ನುವುದು ಭಾಷೆಗೆ ಇರುವ ಸಹಜ ಹಾಗೂ ಅಂತಸ್ಥ ಗುಣವಲ್ಲ. ಇದೊಂದು ಆರೋಪಿತ ಗುಣಮಾತ್ರ. ಒಂದು ಸಾಮಾಜಿಕ ಸನ್ನಿವೇಶದಲ್ಲಿ ಯಾವ ಭಾಷೆಯೊಂದಿಗೆ ಮಗು/ಮನುಷ್ಯ ತನ್ನ ಅನುಭವವನ್ನು ಒಡ್ಡಿಕೊಳ್ಳುತ್ತಾನೋ ಅದು ಅವಳ/ನ ಅನುಭವದ ಪ್ರತಿ ಆಶಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಮಾಧ್ಯಮವಾಗುತ್ತದೆ.

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ತಾಯ್ನುಡಿಯು ಅವಳ/ನ ಸಾಂಸ್ಕೃತಿಕ ಹಾಗೂ ಸೃಜನಶೀಲ ಸಂವೇದನೆಯನ್ನು ಪ್ರತಿನಿಧಿಸುವ ಮಾಧ್ಯಮವೂ ಆಗಿ ದಕ್ಕುತ್ತದೆ. ಹಾಗಾಗಿ ಭಾಷೆ ಮತ್ತು ಮಾನವ ಸಮುದಾಯಗಳ ನಡುವೆ ಒಂದು ಅವಿನಾಭಾವ ನಂಟು ಏರ್ಪಡುವುದೆಂದು ಅನ್ನಿಸುತ್ತದೆ. ಈ ಅನುಭವವು ಭಾಷೆ ಮತ್ತು ಸಮುದಾಯದ ನಿರಂತರ ಸಾತತ್ಯದ ಫಲವೂ ಆಗಿದೆ ಅನ್ನುವುದು ದಿಟ. ಇಂತಹ ವಾದಗಳು ಮಂಡಿಸುವ ಚಿಂತನೆಗಳಿಂದ ಯಾವ ಪ್ರಯೋಜನವು ಇಲ್ಲವೆಂದರೆ, ಇದು ಸಾಂಸ್ಕೃತಿಕ ಗಾಭರಿತನಕ್ಕೆ ಸಾಕಷ್ಟು ಅವಕಾಶ ನೀಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಲಿಂಗಭೇದ, ವರ್ಗ-ವರ್ಣಭೇದ ಹಾಗೂ ಮುಂತಾದ ತರತಮ ಭೇದಗಳು ಸಾಮಾಜಿಕ ಕಾರಣಗಳಿಂದ ಭಾಷೆಯಲ್ಲಿ ಮಿಳಿತಗೊಂಡಿವೆ. ಭಾಷೆ ಇದೆಲ್ಲವನ್ನೂ ಪ್ರತಿನಿಧಿಸುವ ಕಾರಣ, ಭಾಷೆಗೆ ಇಂತಹದೊಂದು ಗುಣ ಇರುತ್ತದೆ ಎಂಬ ನಂಬಿಕೆ. ಈ ಕಾರಣಗಳಿಂದಲೇ ಸಪೀರ್-ವೂರ್ಫ್ ಅವರು ಮಂಡಿಸುವ “ಭಾಷೆ [ತಾಯ್ನುಡಿ] ಮತ್ತು ಸಂಸ್ಕೃತಿಗಳ ನಡುವೆ ಲೋಕಗ್ರಹಿಕೆ”ಯನ್ನು ರೂಪಿಸುವ ನಂಟಿರುತ್ತದೆ ಎನ್ನುವ ವಾದದಲ್ಲಿ ಮೀತಗಳಿವೆ ಎನ್ನುವುದು ದೃಢಪಟ್ಟಿದೆ.

ಅನುಭಾವ ರೂಪಗೊಳ್ಳುವ ನೆಲೆಗಳು ಕೇವಲ ಭಾಷಿಕ ಸಂವೇದನೆಯಿಂದ ಕೂಡಿದವುಗಳಲ್ಲ. ಅವು ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಂತಸ್ಥವಾಗಿರುತ್ತವೆ. ಅದಕ್ಕಾಗಿ ಯಾವುದೇ ಭಾಷೆಯ ಸಾಹಿತ್ಯವು ಏಕೀಕೃತ ಅನುಭವದ ಮೊತ್ತವಾಗಿರಲಾರದು. ಅದು ಯಾವಗಲೂ ಬಹುತ್ವತೆಯ ಆಗರವಾಗಿರುತ್ತದೆ. ಅದಕ್ಕಾಗಿಯೇ ಕನ್ನಡ ಸಾಹಿತ್ಯದಲ್ಲಿ ಜೈನ್, ವೈದಿಕ, ಶೂದ್ರ-ದಲಿತ, ಮುಸ್ಲಿಮ್ ಮುಂತಾದ ಬಗೆಯಲ್ಲಿ ಸಂವೇದನೆಯನ್ನು ವಿಭಜಿಸಲಾಗಿದೆ ಎಂದು ತೋರುತ್ತದೆ.

ಇದು ಕೇವಲ ಅಧ್ಯಯನದ ಅನಕೂಲಕ್ಕಾಗಿ ಮಾತ್ರವಲ್ಲ ಅದುವೇ ವಾಸ್ತವವೆಂದು ನಂಬಲಾಗಿದೆ. ಆದರೆ ಈ ಎಲ್ಲ ಬಗೆಯ ಸಂವೇದನೆಯನ್ನು ಅಭಿವ್ಯಕ್ತಿಪಡಿಸುವ ಮಾಧ್ಯಮ ಮಾತ್ರ ಕನ್ನಡವಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಬೇರೆ ಸಂಸ್ಕೃತಿಗಳ ಮೂಲದಿಂದ ಬಂದಿರುವ ಸಾಹಿತ್ಯವನ್ನು ಗಮನಿಸದರೆ ಇದು ಸ್ಪಷ್ಟವಾಗುತ್ತದೆ. ಈ ಕಾರಣಗಳ ಪರಿಣಾಮವಾಗಿ, ಪ್ರತಿಯೊಂದು ಭಾಷೆಯಲ್ಲಿ ಭಿನ್ನತೆ, ವೈವಿಧ್ಯತೆ ಹಾಗೂ ಸಾಂಸ್ಕೃತಿಕನಿಷ್ಠ ಪ್ರಜ್ಞೆ ರೂಪಗೊಂಡಿರುತ್ತದೆ. ಒಂದು ಸಮುದಾಯದ ಎಲ್ಲ ಜನ, ಜನಾಂಗ, ವರ್ಗಗಳ ನಡುವೆ ಸಂವಹನ ತೊಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ಭಾಷೆಗೆ ಒಂದು ಸಾರ್ವತ್ರಿಕತೆಯನ್ನು ರೂಪಿಸಲಾಗಿದೆ.

ಇದನ್ನೂ ಮೀರಿ ಭಾಷೆಯಲ್ಲಿ ತೊಡಕುಗಳು ಉಳಿದುಕೊಂಡಿರುತ್ತವೆ ಎನ್ನುವುದು ಕುತೂಹಲವನ್ನು ಹುಟ್ಟಿಸುತ್ತದೆ. ಭಾಷೆ ತನ್ನ ವೈವಿಧ್ಯತೆ-ಭಿನ್ನತೆಗಳ ನಡುವೆಯೂ ಸಾರ್ವತ್ರಿಕತೆಯನ್ನು ಕಾಪಾಡುವ ಹಾಗೂ ಸಮನ್ವಯಗೊಳಿಸುವ ಗುದ್ದಾಟಗಳು ನಿರಂತರವಾಗಿರುತ್ತವೆ. ಇಂತಹದೊಂದು ಬೆಳವಣೆಗೆಯೇ ವಿಚಿತ್ರವಾದದ್ದು. ಮತ-ಧರ್ಮಗಳ ಕುರಿತ ಅಂಧಾನುಕರುಣೆ ಸಮಾಜದ ಐಕ್ಯತೆಗೆ ಧಕ್ಕೆ ಉಂಟುಮಾಡಿದಂತೆ, ಭಾಷೆಯೂ ಸಮುದಾಯದ ಒಗ್ಗಟ್ಟಿಗೆ ತೊಡಕಾಗಿದೆ.

ಇದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಮನುಷ್ಯನ ಸಾಮಾಜಿಕ ಅಸ್ತಿತ್ವದ ಆಧಾರದ ಮೇಲೆ ಭಾಷೆಯ ಅಸ್ತಿತ್ವ ನಿರ್ಧಾರವಾಗುತ್ತದೆ. ಇಂತಹ ಭಾಷಿಕ-ಸಾಮಾಜಿಕ ಆಕೃತಿಗಳು ಸಮುದಾಯದ ಪ್ರಜ್ಞೆಗೆ ಇಂಬು ಕೊಡದೇ, ಸಮುದಾಯವನ್ನು ವಿಭಜಿಸುವುದಕ್ಕೆ ಪ್ರೇರಣೆಯನ್ನು ನೀಡಿವೆ. ಈ ಬೆಳವಣೆಗೆಗಳು ಕನ್ನಡದಂತಹ ಭಾಷೆಯ ಚಹರೆಗಳೂ ಕೂಡ ಅಂಚಿಗೆ ಸರಿಯುತ್ತವೆ ಎಂಬ ಆತಂಕಕ್ಕೆ ಎಡೆಮಾಡಿ ಕೊಟ್ಟಿವೆ.

ಇಂತಹ ಆತಂಕಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎನ್ನುವುದು ದಿಟ. ಆದರೆ, ಇದು ಕೇವಲ ರಾಜಕೀಯ ಪ್ರೇರಿತ ಸಂಘಟನೆಗಳು ಹುಟ್ಟು ಹಾಕುವ ಹುನ್ನಾರ ಮಾತ್ರ. ಇಂತಹ ಭಾಷಾ ರಾಜಕಾರಣದ ಹಿಂದಿನ ಒತ್ತಡ, ಪ್ರೇರಣೆಗಳನ್ನು ತಾತ್ವಿಕವಾಗಿ ವಿಶ್ಲೇಷಿಸಬೇಕಿದೆ. ಜನಸಾಮಾನ್ಯರು ಭಾಷೆಯನ್ನು ಒಂದು ಸಾಂಸ್ಕೃತಿ-ಸಾಮಾಜಿಕ ಮೌಲ್ಯವಾಗಿ ಪರಿಗಣಿಸಿದ್ದೇ ಇಂತಹ ಭಾಷಿಕ ಬಿಕ್ಕಟ್ಟುಗಳಿಗೆ ಕಾರಣ.

ಭಾಷಿಕ ಅಗತ್ಯಗಳು ಕಾಲ-ದೇಶಕ್ಕೆ ಅನುಗುಣವಾಗಿ ಬೇರೆಯಾಗಿರುವುದರಿಂದ, ಕೆಲವು ಆಸಕ್ತ ವರ್ಗಗಳು ತಮಗೆ ಪೂರಕವಾಗುವ ಆಶಯಗಳನ್ನು ತಾಯ್ನುಡಿ, ದೇವನುಡಿ, ರಾಷ್ಟ್ರನುಡಿ ಎಂಬ ಅಭೀಮಾನವನ್ನು ಮೂಡಿಸಲು ಹವಣಿಸುತ್ತವೆ. ಇಂತಹ ಪ್ರಯತ್ನಗಳಿಗೆ ಸಾಂಸ್ಥಿಕ ಬೆಂಬಲ ದೊರೆಯುವುದರಿಂದ, ನಾಡು-ನುಡಿಯ ಕುರಿತ ಅತೀರೇಕದ ಧೋರಣೆಗಳು ಕೂಡ ಸಮುದಾಯ ಹಾಗೂ ಸಂವಿಧಾನದ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಈ ಬಗೆಯ ಭಾಷಿಕ ಆಕೃತಿಗಳು ಪಟ್ಟಭದ್ರ ಹಿತಾಸಕ್ತಿ ಹಾಗೂ ಶಕ್ತಿ ರಾಜಕಾರಣದ ಗುಂಪುಗಳನ್ನು ಕೂಡ ಮೌಲ್ಯೀಕರಣಗೊಳಿಸುತ್ತವೆ.

ವಿಪರ್ಯಾಸ ಏನಂದರೆ ಇಂತಹ ರಾಜಕೀಯ ಪ್ರೇರಿತ ಧೋರಣೆಗಳು ಅನುಭಾವದ ನೆಲೆಗಳನ್ನೂ ಪಡೆದುಕೊಳ್ಳುತ್ತವೆ. ಮುಂದೊಂದು ದಿನ ಇವೇ ಚಿಂತನೆಗಳು ಭಾಷಿಕ ಕ್ರಾಂತಿ ಅಥವಾ ರಾಷ್ಟ್ರೀಯತೆಯ ಚಿಂತನೆಗಳ ಸ್ವರೂಪವನ್ನು ಪಡೆಯುತ್ತವೆ. ನಾಡು-ನುಡಿ ಕುರಿತ ಚಿಂತನೆಗಳು ತೋರಿಕೆಯ ರಾಷ್ಟ್ರೀಯತೆಯನ್ನು ನಟಿಸುತ್ತವೆ ಎಂದು ಕಾಣುತ್ತದೆ. ಈ ತೋರಿಕೆಯ ಭಾಷಾಭಿಮಾನವು ಬೇರೆ ಭಾಷೆಗಳನ್ನು ಅಸಡ್ಡೆಯಿಂದ ಹಾಗೂ ಉಪೇಕ್ಷೆಯಿಂದ ಕಾಣುತ್ತವೆ. ಇದು ಭಾಷಿಕ-ಸಾಂಸ್ಕೃತಿಕ ಅಸಹನೆಗೆ ಕಾರಣವಾಗುತ್ತದೆ. ಇದು ಎಂತಹ ಸಾಂಸ್ಕೃತಿಕ ಅಪಾಯವನ್ನು ಹುಟ್ಟು ಹಾಕಬಹುದೆಂದು ಯಾರಿಗಾದರೂ ಅಚ್ಚರಿಯಾಗುತ್ತದೆ.

ದ್ರಾವಿಡ ನುಡಿಗಳು ಒಂದೇ ನುಡಿ ಕುಲಕ್ಕೆ ಸೇರಿದವುಗಳಾದರೂ – ಈ ಕುಲದ ಬೇರೆ ಬೇರೆ ನುಡಿಗಳ ನಡುವೆ ಯಾಕೆ? ತರತಮ ಭಾವನೆಯನ್ನು ಹುಟ್ಟಿಸಿಕೊಂಡು, ದಾಯಾದಿ ಮತ್ಸರವನ್ನು ಬೆಳಸುತ್ತಾರೆ. ದಾಯಾದಿ ಮತ್ಸರ ಕೇವಲ ಆಸ್ತಿ ಹಂಚಿಕೆಯ ಕುರಿತದ್ದು ಮಾತ್ರವಲ್ಲ. ಅದು ಅಸ್ತಿತ್ವದ ಪ್ರಶ್ನೆಯೂ ಆಗಿರುತ್ತದೆ. ತಮ್ಮ ತಮ್ಮ ಗುರುತುಗಳನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸುವ ಹಂಬಲದಲ್ಲಿರುತ್ತವೆ ಎನ್ನುವುದು ವಿಶೇಷ. ಇಂತಹ ಸ್ಪರ್ಧಾತ್ಮಕ ಧೋರಣೆಯು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ.

ಈ ಬೆಳವಣೆಗೆಗಳು ತಮ್ಮ ತಮ್ಮ ಕುಲ ಸಂಬಂಧದ ನೆನಪುಗಳನ್ನು ಕೂಡ ಕಮರಿಸುತ್ತವೆ. ಈ ಬಗೆಯ ಭಾಷಿಕ ಹುನ್ನಾರ ನಿರಂತರವಾಗಿ ದ್ರಾವಿಡ ನುಡಿ ಸಮುದಾಯದಲ್ಲಿ ನಡದಿವೆ. ಇದು ಹೆಚ್ಚು ಕನ್ನಡ ಮತ್ತು ತಮಿಳು ನುಡಿಗಳ ನಡುವೆ ನಡದಿದೆ ಎಂದು ಹೇಳಬಹುದು. ಇವು ಕಲ್ಪಿತ ಗಡಿಗಳ ನಿರ್ಮಾಣಕ್ಕೂ ಕುಮ್ಮಕ್ಕು ನಿಡುತ್ತವೆ. ವಿಚಿತ್ರವೆನಂದರೆ, ಬೇರೆ ಕುಲಕ್ಕೆ ಸೇರಿದ ಭಾಷೆಯನ್ನು ಕನ್ನಡ ತನ್ನ ತಲೆಯ ಮೇಲೆ ಹೊತ್ತುಕೊಂಡು ಪೂಜಿಸಿದ ನಿದರ್ಶನಗಳಿಗೇನು ಕೊರತೆಯಿಲ್ಲ.

ಇದಕ್ಕೆ ಕುಮ್ಮಕ್ಕು ನೀಡಿದ ಶಕ್ತಿಗಳು, ತಮ್ಮ ಭಾಷೆಯನ್ನು ದೈವಭಾಷೆ, ಧರ್ಮಭಾಷೆ ಎಂಬ ಮುಂತಾದ ಭ್ರಮೆಗಳನ್ನುಟ್ಟಿಸಿ ತಮ್ಮ ಪ್ರಾಬಲ್ಯವನ್ನು ಮೆರದಿವೆ. ಹಾಗಾಗಿ ದ್ರಾವಿಡ ಕುಲದ ನುಡಿಗಳು ತಮ್ಮ ದಾಯಾದಿ ಮತ್ಸರದಿಂದ ಸಂಸ್ಕೃತದಂತಹ ಭಾಷೆಗಳನ್ನು ಪೂಜ್ಯಭಾವದಿಂದ ಕಾಣುವ ದಾಸ್ಯಕ್ಕೆ ಶರಣಾಗಿರುವುದು ಚಾರಿತ್ರಿಕ ವಿಪರ್ಯಾಸವೇ ಸರಿ.

ಮುಖ್ಯವಾಗಿ ಅಂದಿನ ಅಗತ್ಯದ ಪ್ರಶ್ನೆ ಸಂಸ್ಕೃತವನ್ನು ಜನಪ್ರಿಯಗೊಳಿಸುವದಾಗಿತ್ತು. ಸಂಸ್ಕೃತ ಅದನ್ನು ಆಡುವ ಜನಾಂಗವಿಲ್ಲದ್ದರಿಂದ, ಇದೊಂದು ‘ಮೃತ ಭಾಷೆ’ ಎಂದೆನಿಸಿಕೊಂಡಿದೆ. ಆದಾಗ್ಯೂ ಸಂಸ್ಕೃತ ಭಾಷೆಯನ್ನು ಎಂದೆಂದಿಗೂ ನಮ್ಮ ದೇಶೀ ಭಾಷೆ ಸಂಸ್ಕೃತಿಗಳಿಗೆ ಉಪಯುಕ್ತವಾದ ಉಪಕಾರಿಯಾದ ಭಾಷೆಯನ್ನಾಗಿ ಬಿಂಬಿಸುವ ಹುನ್ನಾರ ನಡೆಯುತ್ತಲೇ ಬಂದಿದೆ.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ಧಾರಕ್ಕೆ ಶ್ರಮಿಸಿದ ಕೆಲ ಧರ್ಮಗಳು ಈಗ ಚರಿತ್ರೆಯ ನೆನಪು ಮಾತ್ರ. ಸಂಸ್ಕೃತ ಭಾಷೆಯು ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಾಮರ್ಥ್ಯವನ್ನು ಸಿದ್ಧಿಸಿದೆ ಎನ್ನುವ ದೃಢ ನಂಬಿಕೆಗಳು ಬೇರು ಬಿಟ್ಟಿವೆ. ಇಂತಹ ನಂಬಿಕೆಗಳನ್ನು ಸಾಬೀತುಪಡಿಸುವ ಅಧ್ಯಯನಗಳು ಶಲ್ಡನ್ ಪೊಲಾಕ್‍ರಂತಹ ‘ಪರ’ದೇಶಿ ವಿದ್ವಾಂಸರಿಂದ ನಡದಿವೆ. ವಿಶೇಷವೇನೆಂದರೆ, ಈ ಅಧ್ಯಯನಗಳು ಸಂಸ್ಕೃತ ಭಾಷೆಯು “ಕನ್ನಡ ನುಡಿಗೆ ವಿಶ್ವಾತ್ಮಕ ಚಹರೆಯನ್ನು ತಂದು ಕೊಟ್ಟಿದೆ” ಇದಕ್ಕಾಗಿಯೇ ಸಂಸ್ಕೃತವು ಸ್ಥಳೀಕರಣಗೊಂಡಿದೆ ಎಂಬ ವಾದಗಳನ್ನು ಮಂಡಿಸುತ್ತವೆ.

ಇಂತಹ ವಿಧೇಯಕ ಮಾತುಗಳ ಹಿಂದಿನ ಮರ್ಮವೇನೆಂದರೆ ಸಂಸ್ಕೃತ ತಾನೊಂದು ಪರೊಪಕಾರಿ ಭಾಷೆಯೆಂದು ಗುರುತಿಸಿಕೊಳ್ಳುವ ಭಾಷಾ ರಾಜಕಾರಣವೆಂದೇ ಹೇಳಬೇಕು. ಜಾಗತೀಕರಣ ಸಂದರ್ಭದಲ್ಲಿ ಸಂಸ್ಕೃತವು ಹೇಗೆ ದಕ್ಷಿಣ ಏಶಿಯಾ ದೇಶಗಳಲ್ಲಿ ಹರಡಿಕೊಂಡಿತ್ತು ಅನ್ನುವುದನ್ನು ವಿವರಿಸುವುದಕ್ಕೆ ಈ ಅಧ್ಯಯನಗಳು ಬೆಳಕಿಗೆ ಬಂದಿವೆ. ಇದೊಂದು ತೋರಿಕೆಯ ನಂಬಿಕೆಯಾಗಿತ್ತು.

ಆದರೆ ಅವುಗಳ ಒಳಉದ್ದೇಶ ಮಾತ್ರ ಈ ಭಾಷೆಯು ತನ್ನ ಯಾಜಮಾನ್ಯ ಹಾಗೂ ಪ್ರಾಬಲ್ಯದ ನೆಲೆಗಳನ್ನು ಗುರುತಿಸುವ ಹುನ್ನಾರವೇ ಆಗಿತ್ತು ಅನ್ನುವುದು ಸ್ಪಷ್ಟ. ಈ ಒಳ ಉದ್ದೇಶಗಳು ಸಂಸ್ಕೃತ ಮತ್ತು ಕನ್ನಡದ ನಡುವೆ ಯಾಜಮಾನ್ಯ-ಅಧೀನ ನೆಲೆಯ ಸಂಬಂಧವಿದೆ ಎಂದು ಜಗತ್ತಿಗೆ ಸಾರಿ ಹೇಳಬೇಕಾಗಿತ್ತು. ಇದು ವೈಧಿಕ ಧರ್ಮದ ನಾಜೂಕಿನ ಸಾಂಸ್ಕೃತಿಕ ರಾಜಕಾರಣದ ಮತ್ತೊಂದು ಮುಖವೆಂದೇ ಹೇಳಬೇಕು. ಕನ್ನಡವು ಪ್ರಾಕೃತ, ಪರ್ಷಿಯನ್ ಮುಂತಾದ ಭಾಷೆಗಳ ಪದಸಂಪನ್ಮೂಲವನ್ನು ತನ್ನ ಒಡಲಲ್ಲಿಯೇ ಅಡಗಿಸಿಕೊಂಡಿದೆ.

ಇಂತಹ ಭಾಷಿಕ-ಪ್ರಕ್ರಿಯೆಯನ್ನು ಮರೆಮಾಚಿ, ಯಾವುದೇ ಒಂದು ಪ್ರತಿಷ್ಠಿತ ಧರ್ಮದ ಕಪಿಮುಷ್ಠಿಯಲ್ಲಿರುವ ಸಂಸ್ಕೃತ ಭಾಷೆ ತನ್ನ ಪ್ರಾಮುಖ್ಯತೆ ಪಡದಿದೆ. ಇದು ಭಾಷಿಕ-ಸಾಂಸ್ಕೃತಿಕ ಬಹುತ್ವತೆಯ ಚರಿತ್ರೆಗೆ ಮಾಡಿದ ಅಪಚಾರವೆಂದೇ ಹೇಳಬೇಕು. ಇಂತಹ ನಿದರ್ಶನಗಳು ಭಾರತದ ಚರಿತ್ರೆ ಏಕಪಕ್ಷವಾಗಿದೆ ಅನ್ನುವುದನ್ನು ಖಚಿತಪಡಿಸುತ್ತವೆ. ಇದರಿಂದ ಯಾರಿಗೆ ಹಾನಿಯಾಗುತ್ತದೆ ಎನ್ನುವ ಪ್ರಶ್ನೆ ಎದುರಾದಾಗ, ಉತ್ತರಿಸುವ ಮನಸ್ಸುಗಳು ಹಲವು ಮೂಲಗಳಲ್ಲಿ ಹರಡಿಕೊಳ್ಳುತ್ತವೆ. ಯಾಕೆಂದರೆ, ಚರಿತ್ರೆಯ ಹುನ್ನಾರಗಳನ್ನು ವಿವರಿಸುವ ಆಕೃತಿಗಳು ಬೇರೆ ಬೇರೆ ನೆಲೆಯಿಂದ ಕೂಡಿರುವುದೇ ಇದಕ್ಕೆ ಕಾರಣ.

ಒಂದು ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಹೊಣೆ ಅವರಾಡುವ ಭಾಷೆ ಮೇಲೆ ಇರುತ್ತದೆ ಅನ್ನುವುದು ರುಜುವಾತುಪಟ್ಟಿದೆ. ಇದಕ್ಕೆ ಅನುಕೂಲ ಮಾಡಬೇಕಾದ ಪ್ರಭುತ್ವ ಅಥವಾ ಅಧಿಕಾರ ವರ್ಗ ಎಷ್ಟರ ಮಟ್ಟಿಗೆ ಜನಪರ ಕಾಳಜಿ ವಹಿಸುತ್ತವೆ ಅನ್ನುವುದು ಮುಖ್ಯ. ಪ್ರಭುತ್ವವು ಸಂಸ್ಕೃತ ಭಾಷೆಯ ಪರವಾಗಿ ತಳೆಯುವ ನಿಲುವುಗಳನ್ನು, ಕೊಂಕಣಿ, ತುಳು, ಕೊಡವ ಹಾಗೂ ಉರ್ದುದಂತಹ ಸಾಮನ್ಯ ಜನರ ಭಾಷೆಗಳ ಪರವಾಗಿ ಯಾಕೆ ತಾಳುವುದಿಲ್ಲ ಅನ್ನುವ ಪ್ರಶ್ನೆಗಳು ಸಹಜವಾಗಿಯೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪಿಸುವ ಈ ಹೊತ್ತಲ್ಲಿ ಹುಟ್ಟುತ್ತವೆ.

ಯಾರು ಯಾವ ಭಾಷೆಯನ್ನು ಪ್ರತಿನಿಧಿಸುತ್ತಾರೆ ಅನ್ನುವುದು ಗಮನಾರ್ಹ. ಈ ಸಂಸ್ಕೃತ ಭಾಷೆ ಪ್ರತಿನಿಧಿಸುವ ಸಮುದಾಯವು, ಚರಿತ್ರೆಯ ಉದ್ದಕ್ಕೂ ಶೋಷಣೆ, ದೌರ್ಜನ್ಯ, ಸಾಮಾಜಿಕ ಅಸಮಾನತೆಯಂತಹ ಜೀವ ವಿರೋಧಿ ರೂಢಿಗಳನ್ನು ಬಲಪಡಿಸುತ್ತಾ ಬಂದಿದೆ. ಇಂತಹ ಧೋರಣೆಗಳು ಖಾಯಂ ಆಗಿ ಸಂಸ್ಕೃತ ಭಾಷೆಯಲ್ಲಿ ನೆಲೆಯೂರಿವೆ. ಈ ವಾದವನ್ನು ಯಾರು ಕೂಡ ತಳ್ಳಿ ಹಾಕಲಾರರು, ಸಂಸ್ಕೃತ ಭಾಷೆ ಸಾಹಿತ್ಯಿಕ, ಭಾಷಿಕ ಒಟ್ಟಾರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂಬಿತ್ಯಾದಿ ವಾದಗಳು ಜನಸಾಮಾನ್ಯರಲ್ಲಿ ರೂಢಿಯಲ್ಲಿವೆ.

ಇಂತಹ ವಾದಗಳಿಗೆ ಹೆಚ್ಚು ಹೆಚ್ಚು ಕಸಿ ನೀಡುವ ಅಧ್ಯಯನಗಳನ್ನು ಸಂಸ್ಕೃತ ಪರವಾಗಿರುವ ಪಂಡಿತರು ಮಂಡಿಸುತ್ತಿರುವುದು ಗಮನಾರ್ಹ. ಆದರೆ ಈ ಭಾಷೆ ಯಾರ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರತಿನೀದಿಸುತ್ತದೆ ಅನ್ನುವುದೇ ಮುಖ್ಯ. ಶೂದ್ರ ಸಮುದಾಯಗಳ ಸಂವೇದನೆ ಮತ್ತು ವಿವೇಕವನ್ನು ಹೊರಗಿಟ್ಟು ಸಂಸ್ಕೃತ ಸಾಹಿತ್ಯ ರೂಪಗೊಂಡಿದೆ. ಅಂದರೆ ಶೂದ್ರರ ಯಾವ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಅದು ಒಳಗೊಂಡಿಲ್ಲ ಎಂದರ್ಥ.

ಇವರು ಇದೇ ಧೋರಣೆಯನ್ನು ಕನ್ನಡ ಸಾಹಿತ್ಯದಲ್ಲಿಯೂ ಪಡಿಮೂಡಿಸಿರುವರು. ಇಂತಹ ಕಣ್ಣಿಗೆ ರಾಚುವ ವಾಸ್ತವಗಳನ್ನು ಮರೆಮಾಚಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರೂಪಿಸಿರುವ/ಹೊರಟಿರುವ ಸಂಸ್ಕೃತ ಮೋಹಿಗಳು ಅದನ್ನೇ ಕನ್ನಡದ ಅನನ್ಯತೆ ಎಂದು ವಾದಿಸುತ್ತಾರೆ. ಅಶೂದ್ರ [ವೈದಿಕ] ಚಿಂತಕರು ಮಂಡಿಸಿರುವ ವಾದಗಳಿಗೆ ಅತೀಯಾದ ಪ್ರಾಮುಖ್ಯತೆ ಸಿಕ್ಕಿರುವುದೇ ಇದಕ್ಕೆ ಕಾರಣ. ಈ ಬಗೆಯ ತಿಳವಳಿಕೆಯು ತಳಸಮುದಾಯ ಹಾಗೂ ಹಿಂದುಳಿದದವರ ಸಾಂಸ್ಕೃತಿಕ ಅರಿವು ಮತ್ತು ಅದರ ಹೆಚ್ಚುಗಾರಿಕೆಯನ್ನು ಅಮಾನ್ಯಗೊಳಿಸಿದೆ.

ಇಂತಹ ಒಲುಮೆಗಳೇ ಕನ್ನಡದ ಗುರುತುಗಳಾಗಿ ಮೈದಾಳಿರುವುದು ಚಾರಿತ್ರಿಕ ವಿಪರ್ಯಾಸ. ಕರ್ನಾಟಕದ ಬಹುಜನರ ಸಂಸ್ಕೃತಿ ಹಾಗೂ ಸಂವೇದನೆ ಒಳಗೊಳ್ಳದ ಕನ್ನಡ ಅದು ಹೇಗೆ ಕನ್ನಡಿಗರ ತಾಯ್ನುಡಿ ಅಥವಾ ಪರಿಸರ ನುಡಿಯಾಗಿರುವುದಕ್ಕೆ ಸಾಧ್ಯ. ಇಂತಹ ಪ್ರಶ್ನೆಗಳಿಂದಲೇ ನಿಜವಾದ ಕನ್ನಡತನ ಅಂದರೇನು ಅನ್ನುವುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಬಹುದು. ಶತ-ಶತಮಾನಗಳಿಂದಲೂ ಸಂಸ್ಕೃತವು ವೈದಿಕ-ಅವೈದಿಕ, ಶುದ್ಧ-ಅಶುದ್ಧ, ಮೇಲು-ಕೀಳು ಎಂಬೀತ್ಯಾದಿ ವೈರುಧ್ಯಗಳನ್ನು ಹುಟ್ಟುಹಾಕಿ ಕುಲಗೇಡಿಸುವ ಬೆಜವಾಬ್ದಾರಿಯನ್ನು ಮೆರದಿದ್ದೆ ಹೆಚ್ಚು.

ಯಾವುದೇ ಭಾಷೆಗೆ ವರ್ಗ, ಜಾತಿ, ಪ್ರದೇಶ ಮುಂತಾದ ಗುಣಗಳು ರಕ್ತಗತವಾಗಿ ಬಂದಿರುವುದಿಲ್ಲ. ಆದರೆ, ಸಮುದಾಯದೊಡನೆ ಭಾಷೆಗೆ ಇರುವ ನಂಟು ಇಂತಹ ಎಲ್ಲ ಗುಣಗಳನ್ನು ಒಗ್ಗಿಸಿಕೊಡುತ್ತದೆ ಅಥವಾ ಅಂತರ್ಗತಗೊಳಿಸುತ್ತೆ. ಇದಕ್ಕಾಗಿಯೇ ಮೂಲಭೂತವಾದ, ಕೋಮುವಾದದಂತಹ ಜೀವವಿರೋಧಿ ಗುಣಗಳು ಯಾಕೆ ಸಂಸ್ಕೃತ ಭಾಷೆಗೆ ಅಂಟಿಕೊಂಡಿವೆ ಅಂದರೆ, ಆ ಭಾಷೆಗಿರುವ ಅಂತಹ ಒಂದು ಸಮುದಾಯದ ನಿರಂತರ ಸಹಯೋಗವೇ ಕಾರಣವಾಗಿದೆ. ಭಾಷೆ ಹಾಗೂ ಸಮುದಾಯದ ನಡುವಣ ನಂಟಸ್ತಿಕೆ ರೂಪಗೊಳ್ಳುವ ಬಗೆನೇ ಹೀಗೆ.

ಈ ಕಾರಣಗಳಿಂದಲೇ ಸಂಸ್ಕೃತ ವೈದಿಕರ, ಉರ್ದು ಮುಸ್ಲಿಂರ, ಪಾಲಿ ಬೌದ್ಧರ ಹಾಗೂ ಪ್ರಾಕೃತ ಜೈನರ ಸೊತ್ತಾಗಿ ಬಿಂಬಿತವಾಗಿದೆ. ಯಾವಾಗ ಒಂದು ಭಾಷೆ ಯಾವುದೇ ಧರ್ಮ ಅಥವಾ ಜಾತೀಯ ಭಾಷೆಯಾಗಿ ಗುರುತಿಸಲ್ಪಡುತ್ತದೆಯೋ ಆವಾಗ ಅದಕ್ಕೆ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಹುಟ್ಟಿಸುವ ಗುಣವು ಮೈಗುಡುತ್ತದೆ. ಪರಿಣಾಮವಾಗಿ, ಸಂಸ್ಕೃತವು ವೈದಿಕ ಧರ್ಮ ಹುಟ್ಟು ಹಾಕಿದ ಎಲ್ಲ ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ, ಪ್ರಾಬಲ್ಯ, ಸಾಮಾಜಿಕ ನಿರಾಕರಣೆ, ಅಸಮಾನತೆ ಮತ್ತು ಕೀಳರಿಮೆ ಅಂತಹ ಅಪಮೌಲ್ಯಗಳನ್ನು ಅಂತರ್ಗತಮಾಡಿಕೊಂಡಿದೆ. ಅದಕ್ಕಾಗಿ ಸಂಸ್ಕೃತ ಇವತ್ತಿಗೂ ಸಾಂಸ್ಕೃತಿಕ ಅಪಾಯದ ರೂಪಕವಾಗಿಯೇ ಗೋಚರಿಸುತ್ತದೆ. ಈ ಭಾಷೆ ತನ್ನಷ್ಟಕ್ಕೆ “ಸ್ವಯಂಭೂ” ಎನ್ನುವ ಅಹಂನಲ್ಲೇ ತನ್ನ ಹೆಚ್ಚುಗಾರಿಕೆಯನ್ನು ಮೆರದಿದೆ.

ಇಂತಹ ಭಾಷೆಯ ವಾರಸುದಾರರು ಯಾವುದನ್ನು ತಮ್ಮ ತಾಯ್ನುಡಿ ಎಂದು ಹೇಳಿಕೊಳ್ಳುತಾರೆ ಅನ್ನುವುದು ಕೂಡ ವಿಶೇಷ. ಸಂಸ್ಕೃತ ಯಾವತ್ತು ಕೂಡ ವ್ಯವಹಾರಿಕ ಹಾಗೂ ಸಾರ್ವಜನಿಕ ಅಗತ್ಯಗಳಿಗೆ ಪ್ರಯೋಜನವೇ ಆಗಿ/ಗಲ್ಲ. ಆದರೂ ಈ ಭಾಷಿಕರು ಕನ್ನಡದಂತಹ ಭಾಷೆಗಳನ್ನೇ ಅಸಡ್ಡೆಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿದ್ದಾರೆ. ಪ್ರಾದೇಶಿಕ ಭಾಷೆಗಳು ತಮ್ಮ ಒಡಲಲ್ಲಿ ಕಾಫಿಟ್ಟುಕೊಂಡ ಸೃಜನಶೀಲ ಪ್ರತಿಭೆ ಹಾಗೂ ಅದರ ವೈವಿಧ್ಯತೆಯನ್ನು ನಾಶಮಾಡಿ, ಸಂಸ್ಕೃತ ತನ್ನ ಸೃಜನಶೀಲತೆಯ ಪ್ರಾಮುಖ್ಯತೆಯನ್ನು ಮೆರದಿದೆ.

ಇಷ್ಟೆಲ್ಲ ಆವಾಂತರಗಳನ್ನು ಹುಟ್ಟು ಹಾಕಿದ ಸಂಸ್ಕೃತಕ್ಕೆ ಪಾಪಪ್ರಜ್ಞೆಯೇ ಇಲ್ಲವಲ್ಲ ಅನ್ನುವುದು ಆಶ್ಚರ್ಯ. ಇಂತಹ ಕೀಳರಿಮೆಯ ನರಳಿಕೆಯಿಂದ ಪ್ರಾದೇಶಿಕ ಭಾಷೆಗಳು ಎಚ್ಚತ್ತುಕೊಳ್ಳುವ ಈ ಹೊತ್ತಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಿದೆ. ಸಂಸ್ಕೃತ ತನ್ನ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಗಟ್ಟಿಪಡಿಸಿಕೊಲ್ಳಲು ಸಾಕಷ್ಟು ಸಮೂಹ ಭಾಷೆಗಳನ್ನು ಬಲಿ ತೆಗೆದುಕೊಂಡಿದೆ. ಸಂಸ್ಕೃತ ಭಾಷೆಯ ವಾರಸುದಾರರು ಇವತ್ತು ತಾವು ವೈಜ್ಞಾನಿಕ ಹಾಗೂ ಆಧುನಿಕತೆಯ ಲಾಭವನ್ನು ಪಡೆಯಲು, ತಮ್ಮ ಸನಾತನ ಧರ್ಮದ ಅಸ್ಮಿತೆಯ ರೂಪಕ ಆಗಿದ್ದ ಸಂಸ್ಕೃತವನ್ನು ಶೂದ್ರ ಸಮುದಾಯಗಳಿಗೆ ಕಲಿಸುವ ಮೂಲಕ ಅದನ್ನು ಸಂಗೋಪಿಸುವ ಜವಾಬ್ದಾರಿಯನ್ನು ಇವರಿಗೆ ವರ್ಗಾಯಿಸಿದ್ದಾರೆ.

ಒಂದು ಕಾಲದಲ್ಲಿ ಸಂಸ್ಕೃತಕ್ಕೆ ಅಸ್ಪೃಶ್ಯರಾಗಿದ್ದ ಶೂದ್ರ ಸಮುದಾಯಗಳಿಗೆ ಸಂಸ್ಕೃತ ಕಲಿಸಬೇಕು ಎನ್ನುವ ಈ ಶಿಫ್ಟ್ ಹಿಂದಿನ ಹುನ್ನಾರ ಸ್ಪಷ್ಟವಾಗಿದೆ. ವೈದಿಕ ಧರ್ಮ ಪಾಲಿಸುತ್ತ ಬಂದ ಎಲ್ಲ ಕಂದಾಚರಗಳನ್ನು ಮರುಸ್ಥಾಪಿಸುವದೇ ಹೊರತು ಬೇರೆನೂ ಅಲ್ಲ. ಕನ್ನಡ ಹಾಗೂ ಕನ್ನಡಿಗರನ್ನೂ ಯಾವುದೇ ರೀತಿಯಲ್ಲಿ ಭಾದಿಸದ ಶಾಸ್ತ್ರೀಯ ಭಾಷಾ ಸ್ಥಾನಮಾನ ತಮಿಳುಗೆ ಸಿಕ್ಕಾಗ, ಅದನ್ನು ವಿರೋಧಿಸಿ ಕನ್ನಡಕ್ಕೂ ಬೇಕೆಂದು ಹೋರಾಟ ಮಾಡಿದ ಚಳವಳಿಗಾರರರಿಗೆ ಏನಾಗಿದೆ? ಇವರಾಕೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯನ್ನು ವಿರೋಧಿಸುತ್ತಿಲ್ಲ.

ದೂರದರ್ಶನದಲ್ಲಿ ಪ್ರಸಾರ ಆಗುವ ಉರ್ದು ಕಾರ್ಯಕ್ರಮ/ನ್ಯೂಸ್‍ನ್ನು ವಿರೋಧಿಸಿದ ಮನಸ್ಸುಗಳು ಯಾಕೆ ಈಗ ತೆಪ್ಪಗಿವೆ. ದಲಿತ-ಹಿಂದುಳಿದ ವರ್ಗಗಳ ಏಳ್ಗೆಗೆ ಅನುವಾಗಲೆಂದು ಜಾರಿಗೊಳ್ಳಿಸಿದ್ದ ಒಂದನೇ ತರಗತಯಿಂದ ಇಂಗ್ಲಿಶು ಭಾಷಾ ಕಲಿಕೆಯನ್ನು ವಿರೋಧಿಸಿದ ಅಪ್ಪಟ ಕನ್ನಡ ಅಭಿಮಾನಿಗಳಿಗೆ ಏನಾಗಿದೆ? ಇದೆಲ್ಲವುಕ್ಕಿಂತ ಹೆಚ್ಚಾಗಿ ಸಂಸ್ಕೃತವು ಭಾಷಿಕ-ಸಾಂಸ್ಕೃತಿಕ-ಸಾಮಾಜಿಕ ಅಸಹನೆಯನ್ನು ಹುಟ್ಟು ಹಾಕಿದೆ. ಈ ಎಲ್ಲ ಮನಸ್ಸುಗಳ ಹಿಂದಿನ ಶಕ್ತಿ ಯಾವುದೆಂದು ಕೇಳಿದರೆ, ಅದು ಸಂಸ್ಕೃತವೆಂದೇ ಹೇಳಬಹುದು.

ಸಂಸ್ಕೃತಕ್ಕೂ ಇಂತಹ ಜನವಿರೋಧಿ ಬೆಳವಣೆಗೆಗಳ ನಡುವೆ ಏನಾದರೂ ತಳುಕು ಇದಿಯೇ ಎಂದೂ ಕೇಳಿದರೆ, ಸಂಸ್ಕೃತವನ್ನು ಕೇವಲ ಒಂದು ಭಾಷೆಯಾಗಿ ನೋಡಿದರೆ ಅದಕ್ಕೆ ಯಾವುದೇ ಜೀವವಿರೋಧಿ ಗುಣವಿಲ್ಲ. ಆದರೆ, ಸಂಸ್ಕೃತವನ್ನು ಒಂದು ಸಮೂಹದ ಭಾಷೆಯಾಗಿ ನೋಡಿದರೆ, ಅದಕ್ಕೆ ಎಲ್ಲಾ ಬಗೆಯ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಹಾಗಾಗಿ ಸಂಸ್ಕೃತ ಭಾಷೆಯ ಕೆಳ್ಚಲನೆಯ ಮುಖ್ಯ ಉದ್ದೇಶ ವೈದಿಕಕರಣ ಅಥವಾ ಕೇಸರೀಕರಣವನ್ನು ಮತ್ತೇ ನೆಲೆಯೂರಿಸುವ ಹುನ್ನಾರ ಎಂದು ಯಾಕೆ ಕನ್ನಡಪರ ಹೋರಾಟಗಾರರಿಗೆ ಇನ್ನೂ ಅರ್ಥವಾಗಿಲ್ಲ.

ವೈದಿಕ-ಸಂಸ್ಕೃತದ ಗೀಳು ಅಂಟಿಸಿಕೊಂಡ ಭೈರಪ್ಪನಂಥವರು ಕರ್ನಾಟಕ ಸಂಸ್ಕೃತಿ ಪಾಠವನ್ನು ಹೇಳುವ ಹುಂಬತನಕ್ಕೆ ಏನನ್ನಬೇಕು? ಸಂಸ್ಕೃತ ವಿವಿ ಬೇಕು ಬೇಡ ಎನ್ನುವ ಚರ್ಚೆಯನ್ನು ವಿಜಯ ಕರ್ನಾಟಕ ಪತ್ರಿಕೆಯವರು ಆರಂಭಿಸಿದರು ಅದಕ್ಕೆ ‘ನಿಸ್ಪಕ್ಷಪಾತ ಚರ್ಚೆ’ ಎಂಬ ಹಣೆಪಟ್ಟಿಯನ್ನು ಅಂಟಿಸಿದ್ದರೂ. ಈ ಚರ್ಚೆಯ ಉದ್ಘಾಟನೆಯನ್ನು ಭೈರಪ್ಪನವರೇ ಮಾಡಿದರು. ಇದರಲ್ಲಿ ಪಾಲ್ಗೊಂಡ ಹೆಚ್ಚಿನ ವಿದ್ವಾಂಸರು ನಿಲಯದ ಕಲಾವಿದರೇ ಆಗಿದ್ದರು ಅನ್ನುವುದು ವಿಶೇಷ.

ಈ ಚರ್ಚೆಯಲ್ಲಿ ಪಾಲ್ಗೊಂಡು ಸಂಸ್ಕೃತ ವಿವಿ ಏಕೆ ಬೇಡ ಎಂದೂ ಸಮರ್ಥನೆ ನೀಡಿದ ಪ್ರೊ. ಕೆ. ವಿ. ನಾರಾಯಣ ಮತ್ತು ಪ್ರೊ. ಎಮ್. ಎಮ್. ಕಲಬುರ್ಗಿಯಂತಹ ಚಿಂತಕರನ್ನು ಭಿನ್ನಮತಿಯರೆಂದೂ ಬೀಗಿ ಅದೇ ಭೈರಪ್ಪನವರು ಆ ಚರ್ಚೆಗೆ ಮುಕ್ತಾಯ ಹಾಡಿದ್ದು ಇನ್ನೂ ವಿಶೇಷವಾಗಿತ್ತು. ರಾಜ್ಯದ ಇನ್ನಿತರ ಪತ್ರಿಕೆಗಳಾದ ‘ಸಂವಾದ’ ‘ಲಂಕೇಶ್’ [ಈ ಪತ್ರಿಕೆಯಲ್ಲಿಯೂ ಕೂಡ ಪ್ರೊ.ಲಿಂಗದೇವರು ಹಳೆಮನೆಯವರ ಹೊರತಾಗಿ ಬೇರೆ ಯಾರು ಸಂಸ್ಕೃತ ವಿವಿಗೆ ಪ್ರತಿಕ್ರಿಯಿಸಿದ್ದು ನನಗೆ ಗೊತ್ತಿಲ್ಲ] ‘ವಾರ್ತಭಾರತಿ’ ಹಾಗೂ ‘ಹೊಸತು’ ಇವುಗಳು ತಕ್ಕಮಟ್ಟಿಗೆ ಸಂಸ್ಕೃತ ವಿವಿಯನ್ನು ವಿರೋಧಿಸುವುದಕ್ಕೆ ವೇದಿಕೆ ಆಗಿದ್ದು ಗಮನಾರ್ಹ. ಕನ್ನಡ ಸಾರಸತ್ವಕ್ಕೆ ತಮ್ಮನ್ನು ಮುಡುಪಾಗಿಟ್ಟಂತಹ ಎಷ್ಟೋ ಪತ್ರಿಕೆಗಳು ಸಂಸ್ಕೃತ ವಿವಿ ಸ್ಥಾಪನೆ ಕುರಿತು ಚರ್ಚೆಗೆ ಒಂದು ವೇದಿಕೆ ಒದಗಿಸದಿರುವುದು ನೋವಿನ ಸಂಗತಿ.

ಕನ್ನಡ ಮಾತನಾಡುವ ಮತ್ತು ಕನ್ನಡ ನುಡಿಯನ್ನೇ ನೆಚ್ಚಿರುವ ಸಮುದಾಯಗಳ ಆಶೋತ್ತರಗಳನ್ನು ಕಾಪಾಡುವ ಜವಾಬ್ದಾರಿ ಈ ನಾಡಿನ ಎಲ್ಲ ಬಗೆಯ ಸಮೂಹ ಮಾಧ್ಯಮಕ್ಕೆ ಇದೆ ಎಂದು ನನ್ನ ಬಲವಾದ ನಂಬಿಕೆ. ಯಾಕೆಂದರೆ, ಕರ್ನಾಟಕದ ಹೆಚ್ಚಿನ ಸಮುದಾಯಗಳ ಭಾಷೆ ಕನ್ನಡ. ಕನ್ನಡದ ಏಳ್ಗೆಗೆ ಅಗತ್ಯವಿರುವ ಎಲ್ಲ ಬಗೆಯ ನುಡಿಹಮ್ಮುಗೆ [ಭಾಷಾಯೋಜನೆ] ಅನುಷ್ಠಾನಗೊಳ್ಳಬೇಕು. ಇಂತಹ ಭಾಷಾಯೋಜನೆಗಳು ತಾರತಮ್ಯದ ಧೋರಣೆಗಳನ್ನು ಬಿಟ್ಟು ಮುನ್ನಡೆಯಬೇಕು. ಕಾರಣ ಹಲವಾರು ಬೇರೆ ಬೇರೆ ಸಮೂಹ ಭಾಷೆಗಳು ಕರ್ನಾಟಕದಲ್ಲಿವೆ.

ಈ ಭಾಷೆಗಳಿಗೂ ಕನ್ನಡದಷ್ಟೇ ಪ್ರಾಮುಖ್ಯತೆ ಸಿಗಬೇಕು. ಇಂತಹ ಒಂದು ಔದಾರ್ಯದ ಮನುಸ್ಸು ಪ್ರಭುತ್ವ ಹಾಗೂ ಅದನ್ನು ನಿಭಾಯಿಸುವ ವರ್ಗಕ್ಕೂ ಇರಲೇಬೇಕು. ಇಲ್ಲವಾದರೆ, ಸಂಸ್ಕೃತದಿಂದ ಕನ್ನಡದ ಮೇಲೆ ನಡದಿರುವ ಭಾಷಿಕ ಯಾಜಮಾನ್ಯ ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲಿಯೂ ನಡೆಯುತ್ತದೆ. ಈಗ ಇಂತಹ ಯಾವುದೇ ಯಾಜಮಾನ್ಯ ಪ್ರಭಾವವು ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲೆ ಆಗಿಲ್ಲವೆಂದೂ ನನ್ನ ವಾದವಲ್ಲ. ಆದರೆ ಸಂಸ್ಕೃತ ಕನ್ನಡಕ್ಕೆ ಹೋಲಿಸಿ ನೋಡಿದರೆ, ಕನ್ನಡದಿಂದ ಬೇರೆ ಭಾಷೆಗಳ ಮೇಲೆ ನಡದಿರುವ ಶೋಷಣೆಯ ಪ್ರಮಾಣ ಕಮ್ಮಿಯೆಂದೇ ಹೇಳಬಹುದು.

ನೀರು ಕೆಲವರಿಗೆ ಮಾತ್ರ ತೀರ್ಥವಲ್ಲ. ನೀರು ತೀರ್ಥವಾಗಿ ಮಾರ್ಪಡುವ ದ್ರವವಾದರೇ ಅದು ಎಲ್ಲರಿಗೂ ತೀರ್ಥವೇ. ಹಾಗೆನೇ ಆಯಾ ಸಮುದಾಯದ ತಾಯ್ನುಡಿ ಅವರವರ ಅನುಭವವನ್ನು ಕಟ್ಟಿಕೊಡುವ ಮಾಧ್ಯಮವಾಗಬೇಕು. ಇದರಲ್ಲಿ ಯಾವುದೇ ಬಗೆಯ ತರತಮ ಮಾಡುವ ಹುನ್ನಾರಕ್ಕೆ ಅವಕಾಶ ಇರಕೂಡದು.

ಪ್ರಭುತ್ವ ಹಾಗೂ ನುಡಿಹಮ್ಮುಗೆ [ಭಾಷಾಯೋಜನೆ] ನುಡಿನಡೆ [ಭಾಷಾನೀತಿ] ಯನ್ನು ರೂಪಿಸುವವರು ತಾಯ್ನುಡಿಯಂತಹ ಪರಿಕಲ್ಪನೆಗೆ ಇರುವ ಮೌಲ್ಯವನ್ನು ಮನಗಾಣಬೇಕಿದೆ. ಬಹುಭಾಷಿಕ-ಸಾಂಸ್ಕೃತಿಕ ಸನ್ನಿವೇಶಗಳ ಹೆಚ್ಚುಗಾರಿಕೆ ಏನು ಹಾಗೂ ಅವುಗಳನ್ನು ಯಾಕೆ ಕಾಪಾಡಬೇಕು ಎಂಬುದನ್ನು ಇನ್ನಾದರೂ ಮನವರಿಕೆ ಮಾಡಿಕೊಳ್ಳುವ ಜರೂರು ಇದೆ.

(ಇದು ಸಂಚಯ ತ್ರೈಮಾಸಿಕ ಪತ್ರಿಕೆಯಲ್ಲಿ 2009ರಲ್ಲಿ ಪ್ರಕಟವಾಗಿತ್ತು.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

Published

on

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.

ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ

ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.

ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.

‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.

‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.

ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ

ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.

ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending