ನೆಲದನಿ
ಹಂಪಿಯ ಚಕ್ರತೀರ್ಥದ ಕಡೆಗೆ ಕಂಪಿಲ ಸ್ವಾಮಿಯ ನಡಿಗೆ
- ಡಾ.ಸಿ.ಬಿ.ಅನ್ನಪೂರ್ಣಜೋಗೇಶ್,ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು, ಬಸವನಗುಡಿ,ಬೆಂಗಳೂರು
ಜಗತ್ತಿನ ಬೇರೆ ಬೇರೆ ಭಾಗಗಳ ನಡುವೆ ಇರುವ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭೂಗೋಳ ಒಂದೇ ಎಂದು ಸಾರುತ್ತಾ ‘ಜಾಗತೀಕರಣ’ದ ಹೆಸರಿನಲ್ಲಿ ಆಧುನಿಕ ಅವಿಷ್ಕಾರಗಳಿಗೆ ಇಡೀ ವಿಶ್ವವನ್ನೇ ಅಣಿ ಮಾಡುವ ಧಾವಂತದ ನಡುವೆ ಇಂದು ನಾವಿದ್ದೇವೆ. ಇಂತಹ ವರ್ತಮಾನದಲ್ಲಿ ನಮ್ಮ ನಮ್ಮ ದೇಸೀ ನೆಲೆಗಳ ಕಡೆ, ಅದರ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳ ಕಡೆ ನಾವು ತಿರುಗಿನೋಡುವಂತೆ ಮಾಡುವ ಅನೇಕ ಆಚರಣೆಗಳೂ ನಮ್ಮಲ್ಲಿವೆ.
ಈ ಮೂಲಕ ಇತಿಹಾಸದ ಜಾಡನ್ನು ಮತ್ತೆ ಶೋಧಿಸುವಂತೆ, ಗುರುತಿಸುವಂತೆ ಮಾಡುವ, ಈ ಕುರಿತು ಆಸಕ್ತಿ ತಳೆಯುವಂತೆ ಹಾಗೂ ಸಾಂಸ್ಕೃತಿಕ ಎಚ್ಚರವನ್ನು ಉಂಟುಮಾಡುವ ಈ ಆಚರಣೆಗಳು ನಮ್ಮ ನಡುವೆ ಸದ್ದಿಲ್ಲದಂತೆ ಜರುಗಿ ಹೋಗುತ್ತಿರುತ್ತವೆ. ಹಾಗೆಯೇ ಮತ್ತೆ ಮತ್ತೆ ಇವುಗಳ ಆವರ್ತನವೂ ಆಗುತ್ತಿರುತ್ತದೆ. ಇಂತಹ ಅನೇಕ ದೇಸೀ ಆವರ್ತನಗಳು ಬಹಳ ಮುಖ್ಯವಾಗಿ ಬುಡಕಟ್ಟಿನ ಬದುಕಿನ ಸಾಂಸ್ಕೃತಿಕ ವಿನ್ಯಾಸಗಳಾದ ಆಚರಣೆಗಳು, ನಂಬಿಕೆಗಳನ್ನು ಸ್ಪಷ್ಟಪಡಿಸುತ್ತವೆ. ಸರಿಸುಮಾರು ಜಗತ್ತಿನ ಎಲ್ಲಾ ಆದಿಮ ಸಂಸ್ಕೃತಿಗಳಲ್ಲಿ ಇಂತಹ ಚಹರೆಗಳನ್ನು ಗುರುತಿಸಬಹುದಾಗಿದೆ.
ಕನ್ನಡ ನೆಲದಲ್ಲಿ ಮಿಳಿತಗೊಂಡ ತೆಲುಗು ಭಾಷಿಕರಾಗಿರುವ ಮಧ್ಯಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವ ಮ್ಯಾಸಬೇಡ/ಮ್ಯಾಸನಾಯಕ ಬುಡಕಟ್ಟು ಇದರಿಂದ ಹೊರತಾಗಿಲ್ಲ. ಇದು ದ್ರಾವಿಡ ಮೂಲದ ಬುಡಕಟ್ಟು ಎಂಬುದನ್ನು ಇವರಲ್ಲಿರುವ ಚಹರೆಗಳ ಮೂಲಕ ಗುರುತಿಸಬಹುದಾಗಿದೆ.
ಮ್ಯಾಸ ನಾಯಕ ಬುಡಕಟ್ಟು ಸಮುದಾಯವನ್ನು ದ್ರಾವಿಡ ಮೂಲದಿಂದ ಗುರುತಿಸುವುದಾದರೆ, ಈ ದ್ರಾವಿಡ ಪರಂಪರೆಯಲ್ಲಿ ಮುಖ್ಯವಾಗಿರುವ ನಿಸರ್ಗಾರಾಧನೆ ತದನಂತರದಲ್ಲಿ ಪಶುಪತಿ ಅರ್ಥಾತ್ ಶಿವನ ಆರಾಧನೆಯನ್ನು ಮಾಡುತ್ತಿದ್ದ ಸಮುದಾಯವಿದು ಎಂಬುದನ್ನು ಇಂದಿಗೂ ಇವರಲ್ಲಿರುವ ಆರಾಧನೆಗಳು ಸ್ಪಷ್ಟಪಡಿಸುತ್ತವೆ. ಒಂಟಿಕೊAಬಿನ ಬಲ್ಲಾವಿನ ಗೊರಸಿನಲ್ಲಿ ಹುಟ್ಟಿದವನೇ, ನಮ್ಮ ಕುಲದ ಮೂಲಪುರುಷ ಎಂದು ಹೇಳಿಕೊಳ್ಳುವಲ್ಲಿ ಬುಡಕಟ್ಟು ಸಮುದಾಯದ ಶೈವಾರಾಧನೆ ಅರ್ಥಾತ್ ಪಶುಪತಿಯ ಆರಾಧಕರಿವರು ಎಂದು ಸ್ಪಷ್ಟವಾಗುತ್ತದೆ. ಬೇಟೆಯ ಮೂಲದಿಂದ ಬಂದವರಿವರು ಎಂಬುದಕ್ಕೂ ಅನೇಕ ನಿದರ್ಶನಗಳಿವೆ.
ಬಿಲ್ಲು-ಬಾಣ, ಈಟಿ-ಬರ್ಜಿಗಳನ್ನೇ ತಮ್ಮ ದೇವರು ಎಂದು ಪೂಜಿಸುವ ಗುಂಪುಗಳೂ ಸಮುದಾಯದಲ್ಲಿವೆ. ಬೇಟೆ ಮೂಲದಿಂದ ಕ್ರಮೇಣ ಪಶುಪಾಲನೆಯ ಕಡೆ ಈ ಬುಡಕಟ್ಟು ಸಮುದಾಯ ಸ್ಥಿತ್ಯಂತರಗೊಂಡಿದೆ. ಮೂಲತ: ಉತ್ತರ ಭಾರತದಲ್ಲಿದ್ದು ಕ್ರಮೇಣ ದಕ್ಷಿಣಕ್ಕೆ ಚಲಿಸಿ, ಗೋದಾವರಿ ಪ್ರಾಂತ್ಯದಲ್ಲಿ ತಮ್ಮ ದನಕರುಗಳೊಂದಿಗೆ ತಮ್ಮ ಪೆಟ್ಟಿಗೆ ದೇವರುಗಳೊಂದಿಗೆ (ಬೆತ್ತದ ಬುಟ್ಟಿಯಲ್ಲಿ ಸಾಲಿಗ್ರಾಮವನ್ನೋ, ಅಥವಾ ತಮ್ಮ ಪೂರ್ವಿಕರು ಬಳಸುತ್ತಿದ್ದ ಅಮೂಲ್ಯ ವಸ್ತುವನ್ನೋ ಇಟ್ಟು ಅವರ ಹೆಸರಿನಲ್ಲೇ ಪೂಜಿಸುವ ಕ್ರಮವಿದು) ಅಲೆಯುತ್ತಾ ನಲಮಲೈ ಅರಣ್ಯ ಪ್ರದೇಶದಲ್ಲಿ ಅಲೆದಾಡಿ ನಂತರ ಆಂಧ್ರದ ಕಾಟಮರಾಜನ ಅನುಯಾಯಿಗಳಾಗಿದ್ದಿರಬಹುದು ಎಂದು ಊಹಿಸಲು ಪೂರಕ ಆಧಾರಗಳು ದೊರೆಯುತ್ತವೆ.
ಬಹುದೊಡ್ಡ ದನಗಾಹಿ ಕಾಟಮರಾಜನ ಪತನಾನಂತರ ಇವರು ಶ್ರೀ ಶೈಲದ ನಲಮಲೈ ಗುಡ್ಡಗಾಡುಗಳಲ್ಲಿ, ತಿರುಪತಿ ಪ್ರಾಂತ್ಯದಲ್ಲಿ ಅಲೆದು ನಂತರ ಆನೆಗೊಂದಿಯ ಕಿರುಕಿಂಡಿಯ ಮೂಲಕ ಕರ್ನಾಟಕವನ್ನೇ ಪ್ರವೇಶಿಸಿದರು ಎಂದು ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಬಖೈರುಗಳು, ಹೆಳವ ಸಮುದಾಯದವರು ಮತ್ತು ಮ್ಯಾಸಬೇಡ ಸಮುದಾಯದ ಹಿರಿಯರು ಹೇಳುವ ಮೌಖಿಕ ಕಥನಗಳು ಮತ್ತು ಆಚರಣೆಗಳು ಸ್ಪಷ್ಟಪಡಿಸುತ್ತವೆ.
ಶಿವನನ್ನು ಮತ್ತು ತಾವು ಸಾಕುತ್ತಿದ್ದ, ಈ ಮೂಲಕ ತಮಗೆ ಬದುಕನ್ನು ಕಟ್ಟಿ ಕೊಟ್ಟ ದನಕರುಗಳನ್ನು ಇವರು ದೈವವೆಂದೇ ಇಂದಿಗೂ ಪೂಜಿಸುತ್ತಾರೆ. ಮತ್ತು ತಮ್ಮ ಪೂರ್ವಿಕರನ್ನು ಅಂದರೆ ಹಿರಿಯರನ್ನು ‘ಮುತ್ತಯ್ಯಗಳು’’ ಎಂದು ಕರೆದು ತಮ್ಮ ದನಗಳ ಗುಂಪಿನೊಂದಿಗೆ ಸಮೀಕರಿಸಿ ದೈವವೆಂದೇ ನಂಬಿ ಪೂಜಿಸುವ ಪರಿಪಾಠ ಇಂದಿಗೂ ಇದೆ. ದಕ್ಷಿಣ ಕರ್ನಾಟಕದಲ್ಲಿ ರಾಮಾನುಜಾಚಾರ್ಯರು ಅನೇಕ ತಳ ಸಮುದಾಯಗಳಿಗೆ ವೈಷ್ಣವ ದೀಕ್ಷೆಯನ್ನು ಕೊಟ್ಟು, ಕಾವೇರಿ ನದಿಯ ಜಾಡಿನಲ್ಲಿ ಅಲ್ಲಲ್ಲಿ ರಂಗನಾಥಸ್ವಾಮಿಯ ದೇವಾಲಯಗಳನ್ನು ಸ್ಥಾಪಿಸಿದರು.
ಈ ಎಲ್ಲಾ ದೇವಾಲಯಗಳಿಗೆ ಪ್ರವೇಶ ಪಡೆಯುವ ಅವಕಾಶವನ್ನು ವೈಷ್ಣವ ದೀಕ್ಷೆ ಅಂದರೆ ದಾಸ ದೀಕ್ಷೆ ಪಡೆದವರಿಗೆ ಒದಗಿಸಿಕೊಟ್ಟರು. ತದನಂತರ ಮತ್ತೆ ಜಾತಿ ವ್ಯವಸ್ಥೆಯೇ ಮೇಲುಗೈ ಸಾಧಿಸಿ ಈಗ ವರ್ಷದಲ್ಲಿ ಒಂದು ದಿನ ಮಾತ್ರ ಈ ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶಕೊಟ್ಟು ಉಳಿದಂತೆ ದೂರವಿಡುವ ಸಂಪ್ರದಾಯ ಮುಂದುವರಿಯುತ್ತಿರುವುದು ಜಗತ್ ಜಾಹೀರಾಗಿರುವ ಸಂಗತಿಯಾಗಿದೆ. ಇಲ್ಲಿ ರಾಮಾನುಜಾಚಾರ್ಯರು ದೀಕ್ಷೆ ಕೊಟ್ಟಂತೆ ತಿರುಪತಿ, ಶ್ರೀ ಶೈಲಂನಲ್ಲಿ ಅಹೋಬಿಲಂ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಈ ಮ್ಯಾಸ ಬೇಡರಲ್ಲಿ ಹಲವರಿಗೆ ಮುಖ್ಯವಾಗಿ ಮಂದಲ ಗೋತ್ರದವರಿಗೆ ರಾಮಾನುಜಾಚಾರ್ಯರ ಸಮಕಾಲೀನ ಮತ್ತು ಶಿಷ್ಯರಾಗಿದ್ದ ತಾತಾಚಾರ್ಯರು ದಾಸದೀಕ್ಷೆ ನೀಡುತ್ತಾರೆ.
ಹೀಗೆ ದೀಕ್ಷೆ ಪಡೆದವರು ವೈಷ್ಣವರಂತೆಯೇ ನಾಮಧಾರಣೆ ಮಾಡಿಕೊಂಡು ಶಂಖ-ಜಾಗಟೆ, ಜೋಪಾಳ ಬುಟ್ಟಿ (ಚಾನಾಸಿ), ಗರುಡಗಂಭ ಇವುಗಳನ್ನು ಪೂಜಿಸುವ ಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ. ತಮ್ಮ ಪೆಟ್ಟಿಯಲ್ಲಿ ನರಸಿಂಹ ಸಾಲಿಗ್ರಾಮಗಳನ್ನು ಇರಿಸಿ ತಮ್ಮ ಈ ದೇವರನ್ನು ಪೆದೋಬಲಯ್ಯ ಎಂದು ಕರೆದುಕೊಳ್ಳುತ್ತಾರೆ. ನಂತರ ಅಹೋಬಿಲಂನಲ್ಲಿ ಪ್ರಚಲಿತವಿರುವ ನರಸಿಂಹಸ್ವಾಮಿ ಮತ್ತು ಚಂಚಲಕ್ಷ್ಮಿಗೆ ಸಂಬಂಧಿಸಿದ ಪ್ರೇಮ ಪುರಾಣವೇ ಪೆದೋಬಳೇಶನ ಪುರಾಣವಾಗಿ ಬಳಕೆಗೊಳ್ಳುತ್ತದೆ. ನರಸಿಂಹಸ್ವಾಮಿ ಸಾಲಿಗ್ರಾಮವನ್ನು ತಾವು ಹೊತ್ತು ಕೊಂಡೊಂಯ್ಯೊತ್ತಿದ್ದ ಬಿದಿರಿನ ಬುಟ್ಟಿಯಲ್ಲಿಟ್ಟು, ಆ ಬುಟ್ಟಿಗೊಂದು ರೇಷ್ಮೆ ವಸ್ತುವನ್ನು ಸುತ್ತಿ ಅದನ್ನು ಬೆಳ್ಳಿಯ ಡಾಬು ಮತ್ತಿತರ ಆಭರಣಗಳಿಂದ ಅಲಂಕರಿಸಿ ತಾವು ವಸತಿಗೆ ನಿಂತ ಕಡೆ ಗುಡಿಸಲು ಹಾಕಿ (ಪದಿ) ಮಂದಾಸನದ ಮೇಲೆ ಇರಿಸಿ ಪೂಜಿಸುತ್ತಾ ಬಂದರು.
ಇದನ್ನು ಅಹೋಬಿಲಂ ದೇವರು ಎಂದೇ ಕರೆದರು. ಇದೇ ಕ್ರಮೇಣ ಉಚ್ಛಾರಣಾ ಸೌಕರ್ಯಕ್ಕನುಗುಣವಾಗಿ ಸರಳೀಕರಣಗೊಂಡು ಓಬಳದೇವರಾಯಿತು. ಮೊದಲು ದಾಸದೀಕ್ಷೆ ಪಡೆದು ಸ್ಥಿತ್ಯಂತರಕ್ಕೊಳಗಾದ ಕಾರಣಕ್ಕಾಗಿ ಪೆದೋಬಳಯ್ಯ ಎಂದೇ ಕರೆದರು. ಈ ಗುಂಪಿನಿAದ ಒಡೆದು ಹೋದ ಗುಂಪುಗಳು ಆಹಾರವನ್ನರಸುತ್ತಾ, ಕೆಲವೊಮ್ಮೆ ವೈಮನಸ್ಯ ಕಾರಣವಾಗಿ, ತಾವು ನೆಲೆಯನ್ನು ಕಂಡುಕೊAಡ ಸ್ಥಳಕ್ಕನುಗುಣವಾಗಿ ತಮ್ಮ ಈ ದೇವರನ್ನು ನೆಲಜರುವೋಬಳದೇವರು, ಗೆದ್ದಲಕಟ್ಟಿ ಓಬಳದೇವರು ಎಂದು ಇತ್ಯಾದಿಯಾಗಿ ಕರೆದು ಇಂದಿಗೂ ಪೂಜಿಸುತ್ತಾರೆ. ಮಧ್ಯಕರ್ನಾಟಕದಾದ್ಯಂತ ಅನೇಕ ಮ್ಯಾಸರ ಹಟ್ಟಿಗಳಲ್ಲಿ ಓಬಳದೇವರ ಗುಡಿಗಳಿವೆ. ಪೆದೋಬಳೇಶನ ಈ ಮೂಲ ಮಂದಲ ಗುಂಪು ತಮ್ಮ ದನಕರುಗಳನ್ನು ಸಾಕುವ ನಿಮಿತ್ತ ಹುಲ್ಲುಗಾವಲುಗಳನ್ನು ಅರಸುತ್ತಾ, ಅಲೆಯುತ್ತಿದ್ದು, ತಮ್ಮೊಂದಿಗೆ ತಮ್ಮ ಈ ಪೆಟ್ಟಿಗೆ ದೇವರನ್ನು ಅಂದರೆ ಈ ಪೆದೋಬಳ ಸ್ವಾಮಿಯನ್ನು ಹೊತ್ತು ತಿರುಗುತ್ತಿದ್ದರು.
ಅಹೋಬಿಲಂ ಪ್ರಾಂತ್ಯ ಅಂದರೆ ನಲಮಲೈ ಬೆಟ್ಟಕಾಡುಗಳಲ್ಲಿ ಚಲಿಸುತ್ತಾ ಬಂದು ಕುಮ್ಮಟದುರ್ಗದ ವೀರ ಕಂಪಿಲ ರಾಯನ ಪ್ರಾಂತ್ಯ ಪ್ರವೇಶಿಸುತ್ತಾರೆ. ಕುಮ್ಮಟದುರ್ಗದ ಅರಸರೂ ಕೂಡ ಬೇಡರೇ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಈತನ ಮಗನೇ ಕುಮಾರರಾಮ. ಕುಮ್ಮಟದುರ್ಗವೇ ಇವರ ರಾಜಧಾನಿಯಾಗಿತ್ತು. ಕುಮ್ಮಟದುರ್ಗದ ಅರಣ್ಯ ಪ್ರದೇಶಗಳಲ್ಲಿ ನದೀ ಬಯಲುಗಳಲ್ಲಿ ಈ ಪೆದೋಬಳೇಶನ ಕಂಪಳ ಅನೇಕ ವರ್ಷಗಳ ಕಾಲ ನೆಲೆಯೂರುತ್ತದೆ. ಕೇವಲ ದನಗಾಹಿಗಳಷ್ಟೇ ಅಲ್ಲದೆ ಮ್ಯಾಸಬೇಡರು ವೀರ ಯೋಧರೂ ಆಗಿದ್ದರು. ಅರಣ್ಯಗಳಲ್ಲಿ ಅರಸನ ಕಾಯ್ದಿಟ್ಟ ಬೇಡ ಪಡೆಯಾಗಿ ಅವಶ್ಯಕ ಸಂದರ್ಭಗಳಲ್ಲಿ ಇವರು ಯುದ್ಧಭೂಮಿಗೂ ಪ್ರವೇಶಿಸುತ್ತಿದ್ದರು. ಕಂಪಿಲರಾಯನಿಗೆ, ತದ ನಂತರ ಕುಮಾರರಾಮನಿಗೆ ನಿಷ್ಠೆಯಿಂದ ತಮ್ಮ ಸಹಕಾರ ನೀಡುತ್ತಾರೆ. ಈ ಸನ್ನ್ನದ್ಧ ಬೇಡಪಡೆಯನ್ನು ‘ಕಾಪುಕಂಪಳ’ ವೆಂದೇ (ಕಾಪು-ಕಂಪಳ ಎಂದರೆ ಸನ್ನದ್ಧ ರಕ್ಷಣಾ ಪಡೆ ಎಂದು ಅರ್ಥ) ಕರೆಯುತ್ತಿದ್ದರು.
ದೆಹಲಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗುತ್ತಿದ್ದು ಕುಮ್ಮಟದುರ್ಗವನ್ನು ಕಾಪಾಡುವುದಕ್ಕೆ ಇವರು ನೀಡಿದ ¸ಹಕಾರ ಅಪರಿಮಿತ.
“ಡೆಂಲ್ಲೇನ ಗಡ್ಡಕಿೆ ದಡ್ಡಿ ಪೆಟ್ಟಿನ ಸ್ವಾಮಿ. ಡೆಲ್ಲಿ ಸುಲ್ತಾನತ ವಂಗಲೇಪಿನ ಸ್ವಾಮಿ, ಉಂಡವನೆ ಲೇಮುರಯ್ಯ” ಎಂದು ಇಂದಿಗೂ ಪೆದೋಬಳೇಶನ ಸುತ್ತಿ ಪದ್ಯವನ್ನು ಹಾಡುತ್ತಾರೆ.
ದೆಹಲಿಯ ಸುಲ್ತಾನರ ಧಾಳಿಗೆ ಸಿಲುಕಿ ಕಂಪಿಲರಾಯ ಯುದ್ದದಲ್ಲಿ ಮಡಿಯುತ್ತಾನೆ. ತದನಂತರ ಕುಮಾರರಾಮನ ಅಂತ್ಯವೂ ಆಗುತ್ತದೆ. ಆಗ ಕಂಪಿಲರಾಜರ ಆಶ್ರಯದಲ್ಲಿದ್ದ ಈ ಮ್ಯಾಸರೂ ಅತಂತ್ರಗೊಳ್ಳುತ್ತಾರೆ. ಬದುಕಿ ಉಳಿಯಲು ತಮ್ಮ ದನಕರುಗಳೊಂದಿಗೆ ಚಲಿಸುತ್ತಾ ಬಂದು ಚಿನ್ನಹಗರಿ ನದಿಯ ದಡದ ಮೇಲೆ ನೆಲೆಯೂರುತ್ತಾರೆ. ಕುಮ್ಮಟ ದುರ್ಗದಿಂದ ಬಂದ ಇವರು ತಾವು ಉಳಿದುಕೊಂಡ ಪ್ರದೇಶವನ್ನೇ ಚಿಕ್ಕ ಕುಮ್ಮಟ ಎಂದು ಕರೆದುಕೊಳ್ಳುತ್ತಾರೆ. ಕುಮ್ಮಟವೇ, ಕುಮ್ಮತಿ, ಕುಂತಿ ಎಂದು ಸಂಕ್ಷಿಪ್ತಗೊಂಡಿದೆ.
ಕಂಪಿಲನ ರಾಜ್ಯದಲ್ಲಿದ್ದ ಕಾರಣಕ್ಕಾಗಿಯೂ ಈ ಸ್ಥಳನಾಮ ಸೇರ್ಪೆಡೆಗೊಂಡು ಮೂಲತಹ ಇದ್ದ ಪೆದೋಬಳೇಶ ಕಂಪಿಲಿಸ್ವಾಮಿ, ಕಂಪಿಲೋಬಯ್ಯ ಎಂಬ ಸಿತ್ಯಂತರಕ್ಕೆ ಒಳಗಾಯಿತು. ಇದರೊಂದಿಗೆ ಬುಡಕಟ್ಟು ಸಮುದಾಯದಲ್ಲಿರುವ ಐತಿಹ್ಯಗಳೂ, ಮೌಖಿಕ ಕಥನಗಳೂ ಹೇಳುವಂತೆ ವೀರ ಕಂಪಿಲರಾಯನ ಸೇವೆಯಲ್ಲಿ ಈ ಬುಡಕಟ್ಟು ಸಮುದಾಯದಿಂದ ಒಬ್ಬ ಮಹನೀಯ ಅಹೋಬಲ-ಅಂದರೆ ಓಬಲಯ್ಯ (ಅಹೋಬಲಿನ ಭಕ್ತರಲ್ಲಿ ಓಬಲಯ್ಯ ಹೆಸರು ಸಾಮಾನ್ಯ) ಬಹಳ ದಿಟ್ಟತನದಿಂದ ಕಾದಾಡಿದ ನೆನಪಿಗಾಗಿ ಅರಸನಿಂದ ಬಿರುದು ಬಾವಲಿಗಳನ್ನು ಪಡೆಯುತ್ತಾನೆ. ಇಂತಹ ಒಂದು ವಿಶೇಷ ಬಹುಮಾನಿತ ಆಭರಣವೇ ‘ಮುತ್ತಿನ ಕಾಲುಪೆಂಡೆಯ‘.
ಅರಸನೇ ತಮಗಾಗಿ ಹೋರಾಡಿದ ವೀರನ ಕಾಲಿಗೆ ತೊಡಿಸಿದ ಚಿನ್ನ ಮತ್ತು ಮುತ್ತುಗಳಿಂದ ಮಾಡಿದ ಪೆಂಡೆಯವಿದು. ಇದನ್ನು ವಿಶೆಷವಾಗಿ ಆಚರಿಸುವ ಹೆಡೆಕಟ್ಟಿದ ಹಬ್ಬ- ಪೆಡಗಟ್ಟು ಪಂಡುಗ-ದಲ್ಲಿ ಸಾರ್ವಜನಿಕರಿಗೆ ಪ್ರರ್ದಶಿಸಲಾಗುತ್ತದೆ. ತಮ್ಮ ಈ ಸನ್ಮಾನಿತ ಹಿರಿಯ ವೀರನನ್ನು ಈ ಕಂಪಿಲಿಸ್ವಾಮಿ ಅಂದರೆ ಪೆದೋಬಳೇಶನೊಂದಿಗೆ ಸಮೀಕರಿಸಿ ಆರಾಧಿಸಲಾಗುತ್ತದೆ. ಈ ವೀರನಿಗೆ ಇದ್ದ ಬಿರುದೇ ‘ಕಾಪುಕಂಪಳದಯ್ಯ‘ ಎಂದು. ಅಂದರೆ ಮೀಸಲಿಟ್ಟ ಪಡೆಗೆ ನಾಯಕ ಎಂದರ್ಥ.
ಮಂದಲ ಗೋತ್ರದ ಈ ಮ್ಯಾಸರು ಮೂಲತಃ ತಮ್ಮ ದೇವರನ್ನು ತೆಲುಗಿನ ಪೆದೋಬಲಯ್ಯ ಎಂದು ಕರೆದು ಸ್ಥಳ ಸ್ಥಿತ್ಯಂತರ ಕಾರಣವಾಗಿ ಕಂಪಿಲಿಸ್ವಾಮಿ, ಕಂಪಲೋಬಯ್ಯ ಎಂದು ಕರೆಯತೊಡಗಿದರು, ಇದನ್ನು ‘ಪೆದ್ದತಿರುಮಲಿ ದ್ಯಾವರಿ’ ಎಂದೂ ಕರೆಯುತ್ತಾರೆ.ಅಂದರೆ ಹಿರಿಯ ತಿರುಪತಿ ದೇವರು ಇದು ಎಂದು ಹೆಮ್ಮಯಿಂದ ಹೇಳಕೊಳ್ಳುತ್ತಾರೆ. ತಿರುಪತಿ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಮ್ಯಾಸಬೇಡ ದನಗಾಹಿಗಳ ಗುಂಪು ವೆಂಕಟರಮಣನ ಭಕ್ತರಾಗಿದ್ದರು. ಎಂದು ಥರ್ಸ್ಟನ್ರವರ ಬರಹಗಳಲ್ಲಿ ನಮೂದಿತವಾಗಿದೆ.
ತಿರುಪತಿಯ ವೆಂಕಟರಮಣ ಮತ್ತು ಪೆದೋಬಳೇಶನ ಸಮೀಕರಣವಿದು. ತಿರುಪತಿಯಿಂದ ಶಂಖ, ಜಾಗಟೆ, ಬಲಮುರಿ ಶಂಖ, ಎಡಮುರಿ ಶಂಖ ಇವುಗಳನ್ನು ತಂದ ಕಾರಣಕ್ಕಾಗಿಯೂ ಈ ಹೆಸರು ಬಂದಿರುವ ಸಾದ್ಯತೆಯಿದೆ.
ಮೂಲತಃ ಪೆದೋಬಲಯ್ಯನಾಗಿದ್ದು ನಂತರ ಸ್ಥಳೀಕರಣಕ್ಕಾನುಗುಣವಾಗಿ ತೆಲುಗಿನ ಕಂಪಲಿಸ್ವಾಮಿ, ಕಂಪಿಲೋಬಯ್ಯನಾದ. ವಿಷ್ಣು, ರಂಗನಾಥ, ನರಸಿಂಹ, ವೆಂಕಟೇಶ ಇವೆಲ್ಲವುಗಳ ಅರ್ಥ ಒಟ್ಟಾರೆ ವಿಷ್ಣು, ರಂಗನಾಥ ಒಂದೇ. ಕನ್ನಡ ನೆಲದಲ್ಲಿ ಕ್ರಮೇಣ ಕಂಪಿಲಿದೇವರು ಕಂಪಳದೇವರಾಯಿತು. ಶಿಷ್ಟೀಕರಣಗೊಳ್ಳುತ್ತಾ ಕಂಪಳ ರಂಗಸ್ವಾಮಿಯಾಯಿತು. ಅಹೋಬಲ ನರಸಿಂಹನ ಪತ್ನಿ ಚಂಚುಲಕ್ಷ್ಮಿಯ ಹೆಸರೂ ಶಿಷ್ಟೀಕರಣಗೊಂಡು ಭಾಗ್ಯದ ಲಕ್ಷ್ಮಮ್ಮ ಎಂದಾಯಿತು.
ತಾವಿರುವ ನೆಲೆಗಳಲ್ಲಿ ತಮ್ಮೊಂದಿಗೆ ತಮ್ಮ ಅಪ್ತ ಸಮುದಾಯವನ್ನು ಮುನ್ನಡೆಸಿಕೊಂಡು ಬರುವಾಗ ಅವರ ದೇವರುಗಳಾದ ಜಗಲೂರು ಪಾಪನಾಯಕ ಗಾದ್ರಿಪಾಲನಾಯಕ, ಜೋಗಿದೇವರು ಇವರನ್ನು ಜೊತೆಗೆ ಕರೆತಂದ ಕಾರಣವಾಗಿ ಇಂದಿಗೂ ಕಂಪಳದೇವರ ಹಟ್ಟಿಯಲ್ಲಿ ಈ ಎಲ್ಲಾ ದೇವರುಗಳೂ ಇದೆ. ಆದ್ದರಿಂದಲೇ ಎಲ್ಲರನ್ನು ಒಳಗೊಂಡ ಬದುಕುತ್ತಿದ್ದ ಕಂಪಳವಿದು ಎಂದು ಗುಣ ನಿರ್ದೇಶಿತ ಕಾರಣವಾಗಿಯೂ ಕಂಪಳದೇವರು ಎಂಬ ಹೆಸರೇ ಇಂದು ಬುಡಕಟ್ಟು ಸಮುದಾಯದಿಂದ ಒಪ್ಪಿತಗೊಂಡಿದೆ. ಹೀಗೆ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗುತ್ತಾ ಕಾಲದ ಅನಿವಾರ್ಯಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಿರುವ ಬುಡಕಟ್ಟು ಸಮುದಾಯವಿದು.
ಕಾಲ ಪ್ರವಾಹದಲ್ಲಿ ಎಷ್ಟೇ ಮುಂದೆ ಸಾಗಿ ಬಂದರೂ ಸಮುದಾಯದ ನಂಬಿಕೆಯೆ ಆದರೆ ತಮಗೆ ಹಿಂದೆ ಬದುಕನ್ನು ಕಟ್ಟಿಕೊಟ್ಟಿದ್ದ ಪರಿಸರಕ್ಕೆ ಮತ್ತೆ ಭೇಟಿಕೊಡುವುದು. ಇಡೀ ಮ್ಯಾಸಮಂಡಲದಲ್ಲಿ ಇಂತಹ ಯಾನಗಳು ನಡೆಯುತ್ತಿರುತ್ತವೆ. ಗಾದ್ರಿಪಾಲನಾಯಕ ಹಿಂದೆ ಮಿಂಚೇರಿ ಕಾವಲಿನಲ್ಲಿ ವಾಸಿಸಿದ್ದ ಎಂಬ ಕಾರಣಕ್ಕಾಗಿ ಈತನ ಪರಂಪರೆಯವರು ದೇವರೊಂದಿಗೆ ಮಿಂಚೇರಿ ಗುಡ್ಡಕ್ಕೆ ಹೋಗಿ ಬರುತ್ತಾರೆ.
ದಡ್ಡಿಸೂರನಾಯಕನ ಪರಂಪರೆಯವರು ಗುಡೇಕೋಟೆಯ ಶರಣರ ಗುಡ್ಡಕ್ಕೆ ಹೋಗಿಬರುತ್ತಾರೆ. ತಮ್ಮ ನಾಯಕ / ನಾಯಕಿಯರೆ ಈಗ ದೈವೀಕ ಸ್ಥಾನದಲ್ಲಿರುವಾಗ ಅವರು ಹಿಂದೆ ವಾಸಿಸಿದ್ದ ಸ್ಥಳಗಳಗೆ ಹೋಗಿ ಪೂಜೆಸಲ್ಲಿಸಿ ಬರುವುದು ತಮ್ಮ ದೈವಕ್ಕೆ ಸಲ್ಲಿಸುವ ಬಾವನಾತ್ಮಕ ಭಕ್ತಿಯಾಗಿರುತ್ತದೆ.
ಇದೇ ರೀತಿ ಹಿಂದೆ ಕುಮ್ಮಟ ದುರ್ಗದ ಪ್ರಾಂತ್ಯದಲ್ಲಿ ಹಂಪಿಯ ಪರಿಸರದಲ್ಲಿ ತಮ್ಮ ಪೂರ್ವಿಕರು ಇದ್ದ ಕಾರಣ ತಮ್ಮ ದೇವರೊಂದಿಗೆ ತಾವೆಲ್ಲರೂ ಹೋಗಿ ತುಂಗಭದ್ರೆಯ ಗಂಗೆಯಲ್ಲಿ ದೇವರಿಗೆ ಅಭಿಷೇಕ ಮತ್ತು ನದಿಗೂ ಗಂಗೆ ಪೂಜೆ ಸಲ್ಲಿಸುವ ಕ್ರಮವನ್ನು ಅಪರೂಪಕ್ಕಾದರೂ ನಡೆಸಿಕೊಂಡು ಬರಲಾಗುತ್ತದೆ.
ಇಂದಿನ ಚಿಕ್ಕ ಕುಮತಿಯ ಹೊರವಲಯದಲ್ಲಿರುವ ಕಂಪಳದೇವರ ಹಟ್ಟಿಯಿಂದ ತಮ್ಮ ದೇವರನ್ನು ದನಗಂಪಳವನ್ನು ಛತ್ರಿ, ಛಾಮರಗಳ ಗೌರವದೊಂದಿಗೆ, ಶಂಖ, ಜಾಗಟೆಗಳ ಭೋರ್ಗರೆತದೊಂದಿಗೆ ಉರುಮೆ, ಕಹಳೆ, ತಮ್ಮಟೆಗಳ ವಾದ್ಯಗಳೊಂದಿಗೆ ಒಪ್ಪತ್ತಿನ ಉಪವಾಸ ವ್ರತ ಹಿಡಿದು ನೇಮನಿಷ್ಠೆಗಳಿಂದ ಬರಿಗಾಲಲ್ಲಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರದ ಹಂಪಿಗೆ ಕಾಲ್ನಡಿಗೆಯಿಂದ ಪಯಣಿಸುತ್ತಾರೆ. ಹೀಗೆ ನಡೆಯುವುದು ಸಾಮಾನ್ಯ ಸಂಗತಿಯಲ್ಲ. ಪಯಣದ ಉಸ್ತುವಾರಿಯನ್ನು ಸಮಸಹೋದರರು ಮತ್ತು ನೆಂಟರಿಷ್ಠರೂ ವಹಿಸಿಕೊಂಡಿರುತ್ತಾರೆ.
ತಮ್ಮ ಈ ಭಕ್ತಿ ಮತ್ತು ಶಕ್ತಿಗೆ ಇಡೀ ಸಮುದಾಯವನ್ನೇ ಒಂದು ಕಡೆ ಬೆಸೆಯುವಂತಹ ಸಾಮರ್ಥ್ಯವಿದ್ದು ಈ ಆರಾಧನೆ ಬುಡಕಟ್ಟಿನ ಸಾಮುದಾಯಿಕ ಬದುಕಿಗೆ ಬಹುದೊಡ್ಡ ನಿದರ್ಶನವಾಗುತ್ತದೆ. ಕಂಪಿಲದೇವರೊಂದಿಗೆ ಇದೇ ಹಟ್ಟಿಯಲ್ಲಿಯೇ ನೆಲೆಗೊಂಡಿರುವ ಜಗಲೂರು ಪಾಪನಾಯಕ, ಗಾದ್ರಿಪಾಲನಾಯಕ, ಜೋಗಿದೇವರುಗಳನ್ನು ಹಂಪಿಗೆ ಕರೆದೊಯ್ಯಲಾಗುತ್ತಿದೆ. ಪ್ರಯಾಣದ ದಾರಿಯಲ್ಲಿ ಹಿಂದೆ ಮ್ಯಾಸರ ಹಟ್ಟಿಗಳಾಗಿದ್ದು ಇಂದು ಊರುಗಳ ಸ್ವರೂಪ ಪಡೆದಿರುವ ಸ್ಥಳಗಳಲ್ಲಿ ನೆಲೆಸಿರುವ ಈ ಸ್ವಾಮಿಯನ್ನು ಪೂಜಿಸುವ ಮಂದಲ ಗುಂಪಿನವರು ಮತ್ತು ಇವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿರುವ ‘ಎನುಮಲ’ ಗುಂಪಿನವರು ಭೇದವಿಲ್ಲದೆ ಒಟ್ಟಾಗಿ ಸೇರಿ ಸಂಭ್ರಮದಿಂದ ಈ ಪೆದೋಬಳೇಶ ಮತ್ತು ಇತರ ದೈವಗಳನ್ನು ಸ್ವಾಗತಿಸಿ ವಸತಿ ನೀಡಿ, ಜೊತೆಗೆ ನಡೆದು ಬಂದವರಿಗೆ ಊಟೋಪಚಾರ ನೀಡಿ ಸಂಭ್ರಮಿಸುವಲ್ಲಿ ಇವರಲ್ಲಿರುವ ಬಾಂಧವ್ಯದ ಬೆಸುಗೆಯನ್ನು ಗುರುತಿಸಬಹುದಾಗಿದೆ.
ಹಿಂದೆ ವಾಹನ ಸೌಕರ್ಯವಿಲ್ಲದಿದ್ದಾಗ ಹೀಗೆ ಅಪರೂಪಕ್ಕೆ ಬಂದು ಮಿತ್ರರು ಭೇಟಿಯಾಗುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಅದರೆ ಇಂದು ನಾನಾ ಬಗೆಯ ಸಂಪರ್ಕ ಸಾಧನಗಳು ಅಭ್ಯವಿದೆ. ಅದರೂ ಹೀಗೆ ತಮ್ಮ ದೇವರೊಂದಿಗೆ ಬರುವವರನ್ನು ಸಹೋದರದೆಂದೋ, ನೆಂಟರೆAದೋ ಸಂಭ್ರಮಿಸಿ ಒಟ್ಟಾಗಿ ಸೇರಿ ದೈವಾರಾಧನೆಯಲ್ಲಿ ಭಾಗಿಯಾಗುವುದು ಆದಿಮ ಸಂಸ್ಕೃತಿಯ ಸಾಮುದಾಯಿಕ ಬದುಕಿನ ಸಾಮರಸ್ಯಕ್ಕೆ ಸಂಕೇತವಾಗುತ್ತದೆ.
ಸಮಯ, ದೈಹಿಕಶ್ರಮ ಮತ್ತು ಹಣಕಾಸಿನ ಕೊರತೆ ಕಾರಣವಾಗಿ ಈ ಆಚರಣೆಯನ್ನು ಪದೇ ಪದೇ ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತು ವರ್ಷಗಳ ಹಿಂದೆ ಶ್ರೀಯುತ ಪಟೀಲ್ ಪಾಪನಾಯಕರು ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿದ್ದಾಗ ಈ ಕಾರ್ಯಕ್ರಮವನ್ನು ಮಾಡಿಸಿದ್ದರು. ಈಗ ಮತ್ತೆ ಈ ವಿಶೇಷ ಘಟಿಸುತ್ತಿದೆ. ಒಟ್ಟು ಸಮುದಾಯ ಇದರ ಹೊಣೆಯನ್ನು ಹೊತ್ತು ನಿರ್ವಹಿಸುತ್ತಿರುವುದು ಬುಡಕಟ್ಟಿನ ಸ್ವಾಭಿಮಾನ, ಸ್ವಂತಿಕೆ, ಭಕ್ತಿಗೆ ಸಾಕ್ಷೀಭೂತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ದಿನಾಂಕ ೨-೩-೨೦೨೨ರ ಬುಧವಾರ ಬೆಳಿಗ್ಗೆ ಆರಂಭಗೊಂಡ ಈ ಪಯಣ ಹಂಪಿಯ ತುಂಗ ಭದ್ರೆಯ ಚಕ್ರತೀರ್ಥದ ತೀರಕ್ಕೆ ದಿನಾಂಕ ೫-೩-೨೦೨೨ರ ಶನಿವಾರ ತಲುಪುತ್ತದೆ. ಅಲ್ಲಿ ಪೂಜೆಯ ಕೈಂಕರ್ಯವನ್ನು ನೆರವೇರಿಸಿಕೊಂಡು ವಿರೂಪಾಕ್ಷ ಗುಡಿಯ ಮುಂದೆ ದೇವರುಗಳು ಮತ್ತು ದೇವರೆತ್ತುಗಳನ್ನು ಹರಿಯಿಸಿ ಒಂದು ದಿನ ಈ ಹಂಪಿಯಲ್ಲಿಯೇ ತಂಗಿ ಮತ್ತೆ ಮರಳಿ ನಡೆದು ಹಟ್ಟಿಯನ್ನು ಸೇರುವ ಕಾರ್ಯಕ್ರಮ ನಡೆಯುತ್ತಿದೆ. ಅಪರೂಪಕ್ಕೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಲು, ಭಕ್ತಿ ಸಮರ್ಪಣೆ ಮಾಡಲು ಹರಿದು ಬರುತ್ತಿರುವ ಮ್ಯಾಸ ನಾಯಕ ಬುಡಕಟ್ಟು ಸಮುದಾಯದ ಭಾವನಾತ್ಮಕತೆ ಇಲ್ಲಿ ಗಮನಿಸುವಂತಹುದು.
ಅದಿಮ ಸಂಸ್ಕೃತಿ ತನ್ನ ವಿಶಿಷ್ಟತೆಯನ್ನು ಸಂರಕ್ಷಿಸಿಕೊಳ್ಳಲು ಹಿಂಜರಿಯದೆ ತನ್ನ ಸಾಂಸ್ಕೃತಿಕ ಜಗತ್ತನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತದೆ ಎಂಬುದಕ್ಕೆ ಈ ಬಗೆಯ ಆಚರಣೆಗಳು ಬಹು ದೊಡ್ಡ ಉದಾಹರಣೆಗಳಾಗುತ್ತವೆ. ಪುರಾಣ ಮತ್ತು ಇತಿಹಾಸ ಇವೆರಡನ್ನು ಈ ದೈವಾರಾಧನೆಗಳಲ್ಲಿ ಗುರುತಿಸುವುದು ಮತ್ತು ವರ್ತಮಾನದಲ್ಲಿ ಸಂಘಟಿತರಾಗುವುದು ಇದೆಲ್ಲವೂ ಈ ಮೂಲಕ ಸಾಧ್ಯವಾಗುವುದಾದರೆ ನಾಡಿನಲ್ಲಿ ಸಮುದಾಯಕ್ಕೆ ಇದು ಬಹಳ ಗೌರವವನ್ನು ತಂದು ಕೊಡುವುದರಲ್ಲಿ ಸಂಶಯವಿಲ್ಲ.
ಮ್ಯಾಸಬೇಡರ ಜಗತ್ತಿನಲ್ಲಿ ದೇವರು / ಸಾಂಸ್ಕೃತಿಕ ನಾಯಕ, ನಾಯಕಿಯರು ಮತ್ತು ದೇವರ ಎತ್ತುಗಳು ಬಹುದೊಡ್ಡ ಸಂಘಟಕ ಶಕ್ತಿಗಳು ಎಂಬುದನ್ನು ಮರೆಯುವಂತಿಲ್ಲ. ಈ ಮೂಲಕವಾಗಿ ಬುಡಕಟ್ಟು ಸಮುದಾಯದ ಐತಿಹಾಸ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಹಲವು ಮುಖಗಳನ್ನು ಕುರಿತು ಅರ್ಥಮಾಡಿಕೊಳ್ಳುವ ಅವಕಾಶವನ್ನು ಪಡೆಯಬಹುದಾಗಿದೆ.
ಜೈ ಮ್ಯಾಸ ಮಂಡಲ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


