ಸಿನಿ ಸುದ್ದಿ
ಕಟ್ಟ ಕಡೆಯ ಬಿಂದು-ಇದ್ದೆಡೆಯೇ ಕಂಡಾಗ
- ನಾ ದಿವಾಕರ
ಬುಧವಾರ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದು ತಿಳಿದಾಗ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಇತ್ತೀಚೆಗೆ ಕಂಬನಿ ಬತ್ತಿ ಹೋಗಿದೆ ಇಲ್ಲದಿದ್ದರೆ ಸುರಿದುಹೋಗುತ್ತಿತ್ತೇನೋ ! ಆದರೂ ಕಣ್ಣಾವೆಗಳು ವದ್ದೆಯಾದ ಅನುಭವ. ನೂರಾರು ಚಿತ್ರಗಳಲ್ಲಿ ನಟಿಸಿದವರಲ್ಲ, ಗಗನದೆತ್ತರದ ಕಟೌಟ್ ನೋಡಿರುವ ಆರಾಧ್ಯ ದೈವ ಎನಿಸಿಕೊಂಡವರಲ್ಲ. ಅಭಿಮಾನಿ ಸಂಘಗಳಿಗೆ ಪಾತ್ರರಾದವರಲ್ಲ. ಬಹುಶಃ 35 ವರ್ಷಗಳ ಪಯಣದಲ್ಲಿ ತಮಗೆ ಲಭಿಸಿದ ಅವಕಾಶವನ್ನು ಕೊಂಚವೂ ರಾಜಿ ಮಾಡಿಕೊಳ್ಳದೆ ನ್ಯಾಯಸಲ್ಲಿಸಿದ ಕೆಲವೇ ನಟರಲ್ಲಿ ಇರ್ಫಾನ್ ಒಬ್ಬರು.
ಅವರು ಇಷ್ಟವಾಗುವುದೂ ಈ ಕಾರಣಕ್ಕೇ. ಸಂಭಾಷಣೆಯ ವೈಖರಿ, ಕಂಗಳಲ್ಲೇ ಭಾವ ಸ್ಫುರಿಸುವ ಅದ್ಭುತ ಕಲಾಭಿವ್ಯಕ್ತಿ, ಪಾತ್ರದೊಳಗೆ ಪರಕಾಯ ಪ್ರವೇಶ, ಅಭಿನಯದಲ್ಲಿ ತಲ್ಲೀನತೆ ಮತ್ತು ತಾವು ನಿರ್ವಹಿಸುವ ಪಾತ್ರವನ್ನು ಪರದೆಯ ಹೊರ ತಂದು ನೋಡುವವರ ಮಧ್ಯೆ ನಿಲ್ಲಿಸುವಂತಹ ಕಲಾತ್ಮಕತೆ ಇವೆಲ್ಲವೂ ಇರ್ಫಾನ್ ಅವರನ್ನು ಅದ್ಭುತ ನಟನನ್ನಾಗಿ ಮಾಡಿತ್ತು.
ಅವರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ, ಯಾವುದೇ ಅನುಕರಣೆ ಇರಲಿಲ್ಲ. ಅವರಿಗೆ ಗಾಡ್ ಫಾದರ್ ಸಹ ಇರಲಿಲ್ಲವೆನ್ನಿ. ತಮ್ಮ ಕಲಾ ಸಾಮರ್ಥ್ಯದ ಮೇಲೆ ತಾವೇ ನಿರ್ಮಿಸಿಕೊಂಡ ಕಲಾ ಪ್ರಪಂಚದಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದ ನಟ. ಕೆಲವೊಮ್ಮೆ ಸೈಯೀದ್ ಜಾಫ್ರಿ ನೆನಪಾಗುತ್ತಾರೆ. ಪಾತ್ರಗಳಲ್ಲಿ ಜೀವಂತಿಕೆಯನ್ನು ತುಂಬಲು ತಮ್ಮ ಕಣ್ಣುಗಳೇ ಸಾಕು ಎನ್ನುವ ಕೆಲವೇ ಸಮಕಾಲೀನ ನಟರು ನಮ್ಮ ನಡುವೆ ಇದ್ದಾರೆ/ಇದ್ದರು. ಸೈಯಿದ್ ಜಾಫ್ರಿ, ನಾಸಿರುದ್ದಿನ್ ಶಾ, ಕಮಲ ಹಾಸನ್, ಅನುಪಮ್ ಖೇರ್, ಫರೂಕ್ ಶೇಖ್, ನಾನಾ ಪಾಟೇಕರ್ ಮತ್ತು ಇರ್ಫಾನ್ ಖಾನ್.
ಇರ್ಫಾನ್ ಈಗ ಇದ್ದರು ಎನ್ನುವ ಸಾಲಿಗೆ ಸೇರಿದ್ದಾರೆ. ಒಬ್ಬ ನಟ ಪರದೆಯ ಮೇಲೆ ಬಿಂಬಿಸುವ ಮೌಲ್ಯಗಳೇ ಬೇರೆ, ನಿತ್ಯ ಜೀವನದಲ್ಲಿ ಅನುಸರಿಸುವ ಮೌಲ್ಯಗಳೇ ಬೇರೆ ಎನ್ನುವುದು ದಿಟ. ಆದರೆ ಜನಮಾನಸದಲ್ಲಿ ತಮ್ಮ ಅಭಿನಯ ಕಲೆಯಿಂದ ಮನೆ ಮಾಡಿದ ಕಲಾವಿದ ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸಿದರೆ ಎಷ್ಟು ಆಪ್ತರಾಗಬಹುದು ? ಈ ಪ್ರಶ್ನೆಗೆ ಇರ್ಫಾನ್ ಅಂಥವರು ಮಾತ್ರ ಉತ್ತರ ನೀಡಲು ಸಾಧ್ಯ. ಅದಕ್ಕೇ ಇರ್ಫಾನ್ ಭಾಯಿ ಇಷ್ಟವಾಗುತ್ತಾರೆ.
53, ಸಾಯುವ ವಯಸ್ಸಲ್ಲ. ಆದರೆ ಅವರು ಎದುರಿಸಿದ ಖಾಯಿಲೆಗೆ ಒಂದರಿಂದ ನೂರು ಲೆಕ್ಕವೇ ಗೊತ್ತಿಲ್ಲ. ಕರೆದುಕೊಂಡು ಹೋಗಲೆಂದೇ ಬಂದ ಖಾಯಿಲೆಯೊಡನೆ ಎರಡು ವರ್ಷಗಳ ಕಾಲ ಸೆಣಸಿ ಇರ್ಫಾನ್ ವಿದಾಯ ಹೇಳಿದ್ದಾರೆ. 2018ರಲ್ಲಿ ಅವರು ಲಂಡನ್ನಿನ ಆಸ್ಪತ್ರೆಗೆ ದಾಖಲೆಯಾಗಿದ್ದಾಗ ಬರೆದ ಪುಟ್ಟ ಬರಹ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅದರ ಕೆಲವು ಸಾಲುಗಳು ಹೀಗಿವೆ :- ನಾನು ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಗುರಿಗಳು ಎಲ್ಲವುಗಳಲ್ಲಿ ಎಂಗೇಜ್ ಆಗಿದ್ದೆ. ಥಟ್ಟನೆ ಯಾರೋ ಭುಜ ತಟ್ಟಿದಂತಾಯಿತು, ತಿರುಗಿ ನೋಡಿದರೆ ಟಿ ಸಿ ನಿಂತಿದ್ದರು “ ನೀವು ತಲುಪಬೇಕಾದ ಸ್ಥಳ ಬಂದಿದೆ, ಪ್ಲೀಸ್ ಇಳಿದುಬಿಡಿ ಎಂದರು, ಇಲ್ಲ ಇಲ್ಲ ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ ಎಂದೆ, ಇಲ್ಲ ಇದೇ ಅದು ಕೆಲವೊಮ್ಮೆ ಹಾಗೆಯೇ ಆಗುತ್ತೆ ”. ಓಹ್ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ವ್ಯಕ್ತಿ ಈ ರೀತಿಯ ರೂಪಕವನ್ನು ಬರೆಯುವುದೆಂದರೆ ಅಚ್ಚರಿಯಾಗುವುದಲ್ಲವೇ ?
ಇರ್ಫಾನ್ ಹೀಗೆ ಬರೆದಿದ್ದನ್ನು ಅನುವಾದಿಸಿದ ವೇಣುಗೋಪಾಲ್ ಶೆಟ್ಟಿಯವರಿಗೆ ಸಾವಿರ ವಂದನೆಗಳು. ಹಂಚಿಕೊಂಡ ವಿನುತಾ ವಿಶ್ವನಾಥ್ ಮತ್ತು ಪುರುಷೋತ್ತಮ್ ಬಿಳಿಮಲೆಯವರಿಗೂ. ಜೀವನ ದರ್ಶನ ಮಾಡಿಸುವ ಇಂತಹ ಮಾತುಗಳು ಕೆಲವೊಮ್ಮೆ ಐಡಿಯಲಿಸ್ಟಿಕ್ ಎನಿಸಬಹುದು ಅಥವಾ ಭಾವನಾತ್ಮಕವೋ, ಅಧ್ಯಾತ್ಮವೋ ಎನಿಸಬಹುದು. ಆದರೆ ಈ ರೀತಿ ಸಾವಿನ ನಿರೀಕ್ಷೆಯಲ್ಲಿರುವವರೊಡನೆ ಬದುಕಿದವರಿಗೆ ಇದು ಹೆಚ್ಚು ಆಪ್ತ ಎನಿಸುತ್ತದೆ. ಇರ್ಫಾನ್ ಎರಡು ವರ್ಷಗಳ ಕಾಲ ಹೀಗೆ ಅಂತ್ಯದ ನಿರೀಕ್ಷೆಯಲ್ಲೇ ಬದುಕಿ ಮರ್ತ್ಯ ಮೀರಿ ನಿಲ್ಲಲು ಯತ್ನಿಸಿದ್ದಾರೆ.
ಅವರೇ ತಮ್ಮ ಪತ್ರದಲ್ಲಿ ಹೇಳಿರುವಂತೆ “ ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲೂ ಅಸಾಧ್ಯವಾಗುತ್ತದೆ, ಅವುಗಳನ್ನು ನಿಯಂತ್ರಿಸಲು ನೀರು ಹತಾಶರಾಗಿ ಪ್ರಯತ್ನಿಸುತ್ತೀರಿ ” ಮತ್ತೊಂದು ರೂಪಕ. ಬದುಕುವ ಛಲ ಮತ್ತು ಸಾವಿನ ನಿರೀಕ್ಷೆಯ ನಡುವೆ ಸಂಘರ್ಷ ಎಂದರೆ ಇದೇ ಅಲ್ಲವೇ ? ಎಂತಹ ಬರಹ ಬಿಟ್ಟುಹೋಗಿದ್ದೀರಿ ಇರ್ಫಾನ್. ಒಂದೇ ಪುಟ ಇದ್ದರೂ ಬೃಹತ್ ಕಾವ್ಯದಂತೆ ಭಾವ ಸ್ಫುರಿಸಿದೆ. ನೀವು ನಿಜಕ್ಕೂ ಧನ್ಯ ಇರ್ಫಾನ್ ಭಾಯ್.
ಇರ್ಫಾನ್ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು
ಮಧ್ಯಾಹ್ನ ಕೊರೋನಾ ಇಲ್ಲದ ಸುದ್ದಿಯನ್ನು (ಕನ್ನಡ ಸುದ್ದಿಮನೆಯಲ್ಲ) ನೋಡಲು ಅವಕಾಶ ಸಿಕ್ಕಿತೆಂಬ ಸಣ್ಣ ಖುಷಿ ಒಂದೆಡೆಯಾದರೆ ಇರ್ಫಾನ್ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು. ನೆನ್ನೆ ರಾತ್ರಿ ಏನೋ ನೆನಪಾಯಿತು. ರಾಜೇಶ್ ಖನ್ನಾ-ಅಮಿತಾಬ್ ನಟನೆಯ, ಹೃಷಿಕೇಶ್ ಮುಖರ್ಜಿಯ ಆನಂದ್ ಚಿತ್ರ ನೆನಪಾಯಿತು. ನೋಡಿದಾಗಲೆಲ್ಲಾ ಕಣ್ಣು ವದ್ದೆ ಮಾಡುವ ಚಿತ್ರ ಅದು. ಹಾಗೆಯೇ ಸಾವು ಬದುಕಿನ ಸಂಘರ್ಷವನ್ನು, ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಸರಳ ವ್ಯಕ್ತಿಯ ಕಣ್ಣುಗಳ ಮೂಲಕ ತೋರಿಸುವ ಚಿತ್ರವೂ ಹೌದು. ರಾಜೇಶ್ ಖನ್ನನ ಬದುಕಿನ ಮೈಲಿಗಲ್ಲು ಈ ಚಿತ್ರ. ಈ ಚಿತ್ರದ ಕೆಲವು ಸಂಭಾಷಣೆಗಳು ಸಾರ್ವಕಾಲಿಕವಾದವು, ಸಾರ್ವತ್ರಿಕವಾದವೂ ಹೌದು. ಕ್ಯಾನ್ಸರ್ ಇರುವ ಒಬ್ಬ ಕವಿ ಹೃದಯದ ವ್ಯಕ್ತಿ ಇನ್ನು ಆರು ತಿಂಗಳಲ್ಲಿ ತಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರೂ , ಜೀವನವನ್ನು ನೋಡುವ ಬಗೆ, ಅದ್ಭುತ. ಚಿತ್ರ ನೋಡಿಯೇ ಆಸ್ವಾದಿಸಬೇಕು.
ಈ ಚಿತ್ರದಲ್ಲಿ ಕಾಕಾನ (ರಾಜೇಶ್ ಖನ್ನನ ಅಡ್ಡಹೆಸರು) ಕೆಲವು ಸಂಭಾಷಣೆಗಳಿವೆ. ಆನಂದ್ಗೆ ಕ್ಯಾನ್ಸರ್ ಗಡ್ಡೆ ಇದೆ ಎಂದು ತಿಳಿದಾಗ “ ನಾನು ಇನ್ನು ಆರು ತಿಂಗಳಿಗಿಂತಲೂ ಹೆಚ್ಚು ಬದುಕುವುದಿಲ್ಲ. 70 ವರ್ಷಕ್ಕೂ ಆರು ತಿಂಗಳಿಗೂ ಏನು ವ್ಯತ್ಯಾಸವಿದೆ , ಮುಂದಿನ ಆರು ತಿಂಗಳಲ್ಲಿ ಲಕ್ಷಾಂತರ ಕ್ಷಣಗಳನ್ನು ಬದುಕುವವರ ಪಾಡೇನು ? ಬದುಕು ದೀರ್ಘವಾಗಿರಬೇಕಿಲ್ಲ ಉತ್ತಮವಾಗಿರಬೇಕು, ನಾನು ಬದುಕಿರುವವರೆಗೂ ಸತ್ತಿರುವುದಿಲ್ಲ ಸತ್ತ ನಂತರ ನಾನೇ ಇರುವುದಿಲ್ಲ ” ಇದು ಆನಂದ್ ಒಬ್ಬ ವೈದ್ಯನಿಗೆ, ಅಮಿತಾಬ್ಗೆ ಹೇಳುವ ಮಾತುಗಳು. ಮತ್ತೊಂದು ದೃಶ್ಯದಲ್ಲಿ “ ಪ್ರತಿಯೊಂದು ನಗುವಿನ ಹಿಂದೆಯೂ ಖುಷಿಯೇ ಇರಬೇಕೆಂದಿಲ್ಲ ಬಾಬುಮೊಷಾಯ್ ಕೆಲವೊಮ್ಮೆ ದುಃಖವೂ ಇರುತ್ತದೆ ” ಎನ್ನುತ್ತಾನೆ. ಒಮ್ಮೆ ಆನಂದನ ಗೆಳೆಯನ ಮಡದಿ ತನ್ನ ಹುಟ್ಟುಹಬ್ಬದ ದಿನ ಅವನ ಆಶೀರ್ವಾದ ಬಯಸುತ್ತಾಳೆ ಆಗ ಆನಂದ್ “ ನಿನಗೆ ಏನೆಂದು ಹಾರೈಸಲಿ ತಂಗಿ, ನನ್ನ ಆಯಸ್ಸನ್ನು ನಿನಗೆ ಕೊಡು ಎಂದು ದೇವರಲ್ಲಿ ಕೇಳಲೂ ಆಗುವುದಿಲ್ಲ ” ಎಂದು ಮನದಲ್ಲೇ ಪರಿತಪಿಸುತ್ತಾನೆ.
ಮತ್ತೊಂದು ಮನಮಿಡಿಯುದ ದೃಶ್ಯದಲ್ಲಿ ಅಮಿತಾಬ್ ಒಬ್ಬ ವೈದ್ಯನಾಗಿ ಆನಂದ್ಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಹೇಳುತ್ತಾನೆ . ಆಗ ಆನಂದ್ “ ಇನ್ನೆಷ್ಟು ದಿನ ನನಗೆ, ನಿನ್ನ ದಿನಗಳು ಮುಗಿಯುತ್ತಿವೆ ಎಂದು ನೆನಪುಮಾಡುತ್ತೀಯ ಬಾಬುಮೊಷಾಯ್, ಈವರೆಗೂ ಯಾರೂ ತನ್ನ ಸಾವನ್ನು ಕಂಡಿಲ್ಲ ಆದರೆ ನಾನು ದುರ್ಭಾಗ್ಯನು, ಪ್ರತಿಕ್ಷಣವೂ ನನ್ನ ಸಾವನ್ನು ಕಾಣುತ್ತಿದ್ದೇನೆ , ನಿನ್ನ ನೋವು ತುಂಬಿದ ಕಣ್ಣುಗಳಲ್ಲಿ ” ಎಂದು ಹೇಳುತ್ತಾನೆ. ಅಂತ್ಯದ ನಿರೀಕ್ಷೆಯಲ್ಲಿರುವ ಒಂದು ಜೀವ ಮತ್ತೊಂದು ಜೀವದ ಕಣ್ಣುಗಳಲ್ಲಿ ಜೀವಂತಿಕೆ ಬಯಸುತ್ತದೆ. ಇಂತಹ ದೃಶ್ಯ ರೂಪಕಗಳು ಬಹುಶಃ ಈಗಿನ ಚಿತ್ರಗಳಲ್ಲಿ ಕನಸಿನ ಮಾತೆನ್ನಿ.
ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ
ಈ ಆನಂದ್ ಚಿತ್ರ ನನಗೆ ಬಹಳ ಆಪ್ತವಾದದ್ದು. ಇದಕ್ಕೆ ಕಾರಣವೂ ಇದೆ. ತನ್ನ ಬದುಕಿನ ಪಯಣ ಇನ್ನು ಕೆಲವೇ ದಿನಗಳಲ್ಲಿ, ವರ್ಷಗಳಲ್ಲಿ ಅಂತ್ಯವಾಗುತ್ತದೆ ಎಂದು ತಿಳಿದಿದ್ದೂ ಸದಾ ಹರ್ಷಚಿತ್ತನಾಗಿರುವ ಆನಂದ್ ಬಹಳ ಆಪ್ತ ಎನಿಸುತ್ತಾನೆ. ಏಕೆಂದರೆ ಅವನು ಬದುಕು ಮತ್ತು ಸಾವು ಎರಡನ್ನೂ ಗೆಲ್ಲಲು ಯತ್ನಿಸುತ್ತಾನೆ. ಬಹುಶಃ ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ.
ನನ್ನೊಡನೆ ನಾಲ್ಕು ದಶಕಗಳ ಕಾಲ ಬದುಕಿ ತನ್ನ ಪಯಣ ಮುಗಿಸಿದ ನನ್ನ ಸೋದರ ನಾಗರಾಜ್ ಇದೇ ಸನ್ನಿವೇಶದಲ್ಲೇ ಬದುಕಿದ್ದನ್ನು ಕಂಡಿದ್ದೇನೆ. ಅವನಿಗೆ ವಿ ಎಸ್ ಡಿ (ventricular septal defect)ತೊಂದರೆ ಇತ್ತು. ಅಂದರೆ ಹೃದಯದ ಹೃತ್ಕುಕ್ಷಿಗಳನ್ನು ಬೇರ್ಪಡಿಸುವ ಗೋಡೆ (ಸೆಪ್ಟಮ್)ಯಲ್ಲಿ ಒಂದು ರಂಧ್ರ ಇತ್ತು. ರಕ್ತ ಎಡದಿಂದ ಬಲಕ್ಕೆ ಹರಿಯುತ್ತಿದ್ದುದರಿಂದ, ಆಮ್ಲಜನಕದ ಅಂಶ ಹೆಚ್ಚಾಗಿರುವ ರಕ್ತ ಶ್ವಾಸಕೋಶದೊಳಗೆ ಹೋಗುತ್ತಿತ್ತು. ಆಗ ಹೃದಯ ಬಡಿತದ ವೇಗ ಹೆಚ್ಚಾಗುತ್ತಿತ್ತು. ಶ್ರಮವಹಿಸುವ ಯಾವುದೇ ಕೆಲಸ ಮಾಡಲಾಗುತ್ತಿರಲಿಲ್ಲ. ಹುಟ್ಟಿನಿಂದಲೇ ಬಂದ ಸಮಸ್ಯೆ, ಚಿಕಿತ್ಸೆ ನೀಡಲಿಲ್ಲವೆನ್ನಿ.
ನಮಗಿಬ್ಬರಿಗೂ ಕೆನರಾ ಬ್ಯಾಂಕಿನಲ್ಲಿ ಒಮ್ಮೆಲೆ ನೌಕರಿ ದೊರೆತಾಗ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇವನಿಗೆ ಇದ್ದ ಸಮಸ್ಯೆಯನ್ನು ನೋಡಿ ವೈದ್ಯರು ನಿರಾಕರಿಸಿಬಿಟ್ಟರು. ನೌಕರಿ ಇಲ್ಲದಿದ್ದರೆ ನಮ್ಮ ಬದುಕೂ ಇಲ್ಲ ಎನ್ನುವ ಪರಿಸ್ಥಿತಿ. ಹೇಗೋ ವೈದ್ಯರ ಕಾಲು ಹಿಡಿದು ಪ್ರಮಾಣಪತ್ರ ಗಿಟ್ಟಿಸಿಕೊಂಡೆವು. ಆಗ ನಮಗೆ ಮತ್ತು ಅವನಿಗೆ ತಿಳಿದ ವಿಷಯ, ಅವನ ಆಯಸ್ಸು 40 ವರ್ಷ ಮಾತ್ರ ಎನ್ನುವುದು. ನಮ್ಮ ಕಣ್ಣೀರು ಕೋಡಿ ಹರಿಯಿತು, ಅವನು ವಿಚಲಿತನಾಗಲಿಲ್ಲ. ಐದು ಮೆಟ್ಟಿಲುಗಳಿಗಿಂತಲೂ ಹೆಚ್ಚು ಹತ್ತಲಾಗುತ್ತಿರಲಿಲ್ಲ. ಓಡುವುದು ಸಾಧ್ಯವೇ ಇರಲಿಲ್ಲ. ಭಾರ ಎತ್ತುವುದು ಅಸಾಧ್ಯವಾಗಿತ್ತು. ಬ್ಯಾಂಕಿನಲ್ಲಿ (ಆಗ ಲೆಡ್ಜರ್ ಇದ್ದ ಕಾಲ 1984) ಲೆಡ್ಜರ್ ಎತ್ತಿಕೊಡಲು ಯಾರಾದರೂ ಬರಬೇಕಿತ್ತು. ಮೊದಲ ಅಂತಸ್ತಿನಲ್ಲಿದ್ದ ವಿಭಾಗ ಅವನಿಗೆ ನಿಷಿದ್ಧ ಏಕೆಂದರೆ ಮೆಟ್ಟಿಲು ಹತ್ತಲಾಗುತ್ತಿರಲಿಲ್ಲ. ಮನೆಯಲ್ಲಿ ನನ್ನ ರಕ್ಷಣೆ ಮತ್ತು ನೆರವು ಇತ್ತೆನ್ನಿ.
ಇರ್ಫಾನ್ ಖಾನ್ ಬದುಕು ಮತ್ತು ಆನಂದ್ ಚಿತ್ರವನ್ನು ನೋಡುವಾಗ ಅವನ ನೆನಪಾಗುತ್ತದೆ. “ ಈ ಆ್ಯಮ್ ಎ ಹೋಲ್ ಹಾರ್ಟೆಡ್ ಮ್ಯಾನ್ ” ಎನ್ನುತ್ತಿದ್ದ. ಯಾರಾದರೂ ಏಕೆ ಎಂದು ಕೇಳಿದರೆ ಹಾರ್ಟ್ನಲ್ಲಿ ಹೋಲ್ ಇದೆ ಅದಕ್ಕೇ ಎನ್ನುತ್ತಿದ್ದ. ಹೀಗೆ ಅವನ ಹಾಸ್ಯ ಮಿಶ್ರಿತ ಮಾತುಗಳು. ಹತ್ತು ನಿಮಿಷ ನಡೆದರೆ ಅವನ ಹೃದಯ ಬಡಿತ ಐದು ಆಡಿ ದೂರಕ್ಕೆ ಕೇಳುತ್ತಿತ್ತು. ಸುಸ್ತಾಗಿ ಕುಳಿತುಬಿಡುತ್ತಿದ್ದ. ಎಷ್ಟೋ ಬಾರಿ ಅವನ ಇಡೀ ಭಾರವನ್ನು ನನ್ನ ಹೆಗಲ ಮೇಲೆ ಹೊತ್ತು ನಡೆಸಿದ್ದೆ. ಹೈದರಾಬಾದ್ ನೋಡಲು ಹೋದಾಗ ಅವನಿಗೆ ಮೇಲೆ ಹತ್ತಲಾಗುವುದಿಲ್ಲ ಎಂದು ನಾನೂ ಸಹ ಗೋಲ್ಕೊಂಡಾ, ಚಾರ್ ಮಿನಾರ್ ಒಳಗೆ ಹೋಗದೆ ಬಂದಿದ್ದೆ. ಅವನ ಜೀವನ ಬೇಗನೆ ಕೊನೆಯಾಗುತ್ತದೆ ಎಂದು ತಿಳಿದಿದ್ದೂ ಸದಾ ಎಲ್ಲರನ್ನೂ ನಗಿಸುತ್ತಲೇ ಬದುಕು ಸವೆಸಿದ ಸೋದರ ಅಗಲಿ 19 ವರ್ಷ ಕಳೆದಿದೆ. ಈಗಲೂ ಅವನ ಕೆಲವು ಜೋಕ್ಸ್ ನೆನಪಾಗುತ್ತವೆ. ಒಂದೆರಡು ತುಣುಕುಗಳು :
1. “ ಮೇನೇಜರ್ : ನಾಗರಾಜ್ ಇಲ್ಲಿ ಬನ್ನಿ ದುಬೈನಿಂದ ಬೇಗ್ ಬಂದಿದ್ದಾರೆ
ಇವನು : ಯಾಕ್ಸಾರ್ ನಿಧಾನವಾಗೇ ಬರಬಹುದಿತ್ತಲ್ಲವೇ ? ”
2. “ ಗೆಳೆಯ (ಮುಸ್ಲಿಂ) : ನಾಗರಾಜ್ ಜೀ ನನಗೆ ಗಂಡು ಮಗು ಹುಟ್ಟಿದೆ
ಇವನು : ಈದ್ ಮುಬಾರಕ್ ಜೀ !!
ಗೆಳೆಯ : ಏನ್ ದಿವಾಕರ್ ಮಗು ಹುಟ್ಟಿದ್ರೆ ಇವ್ನು ಈದ್ ಮುಬಾರಕ್ ಅಂತಾನೆ
ಇವನು : ಸಾರಿ, ಈದಿದ್ದಕ್ಕೆ ಮುಬಾರಕ್ !!!! ”
3. “ ನನ್ನ ಮದುವೆಯ ಸಂದರ್ಭ. ನನ್ನ ಭಾವಿ ಮಾವನರು ಕುಟುಂಬದವರೊಡನೆ ಮನೆಗೆ ಬಂದಿದ್ದರು.
ನನ್ನ ಸೋದರಿ : ಸರ್ ನಿಮಗೆ ಎಷ್ಟು ಮಕ್ಕಳು ?
ಭಾವಿ ಮಾವನವರು : ಹನ್ನೆರಡು ಜನ ಆರು ಗಂಡು ಆರು ಹೆಣ್ಣು
ನನ್ನ ಸೋದರಿ : ನೀವು ಏನು ಕೆಲಸ ಮಾಡ್ತಿದ್ರೀ ?
ಇವನು : ಅದೇ ಕೆಲ್ಸ !!!!!! ”
ಹೀಗೆ ತನ್ನ ಸಾವು ನಿಶ್ಚಿತ ಎಂದು ತಿಳಿದಿದ್ದೂ ಮಾತು ಮಾತಿಗೂ ಎಲ್ಲರನ್ನೂ ನಗಿಸುತ್ತಲೇ 17 ವರ್ಷಗಳ ಕಾಲ ಬದುಕು ಸವೆಸಿದ. ಮದುವೆ ಬೇಡ ಎಂದು ಹೇಳಿದ್ದರೂ ಮದುವೆಯಾದ. ಕೆಲವು ವರ್ಷ ಸಂಸಾರವೂ ನಡೆಯಿತು. ಆದರೆ ವೈದ್ಯರ ಮಾತು ಸುಳ್ಳಾಗಲಿಲ್ಲ. ನಲವತ್ತು ತುಂಬಿದ ನಾಲ್ಕು ತಿಂಗಳಲ್ಲೇ ಇಲ್ಲವಾದ, 2001.
ಇದೇ ಜೀವನ ಇದುವೇ ಜೀವನ ಎನ್ನಬಹುದೇ ?
ಇರ್ಫಾನ್ ಖಾನ್ ಇಲ್ಲವಾದ ಸಂದರ್ಭದಲ್ಲಿ ಮತ್ತು ಅವರ ಅದ್ಭುತ ಬರಹ ಓದಿದ ನಂತರ ಏಕೋ ನೆನಪು ಜಾರಿತು. ಆನಂದ್ ನನಗೆ ಆಪ್ತವಾಗುವುದು ಈ ಕಾರಣಕ್ಕೆ. ಈಗ ಇರ್ಫಾನ್ ಹೆಚ್ಚು ಆಪ್ತವಾಗುವುದೂ ಇದೇ ಕಾರಣಕ್ಕೆ. ಸಾವು ಬದುಕಿನ ನಡುವೆ ಅಂತರ ಬಹಳ ಕಡಿಮೆ ಎನ್ನುವ ವಾಸ್ತವವನ್ನು ಅರಿಯಲು ಇಂತಹ ಕೆಲವು ದೃಷ್ಟಾಂತಗಳೂ ನೆರವಾಗುತ್ತವೆ. ಇರ್ಫಾನ್ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಪರದೆಯ ಮೇಲೆ ಮತ್ತು ನಮ್ಮ ನಡುವೆ ಅದ್ಭುತ ನೆನಪುಗಳನ್ನೂ ಬಿಟ್ಟುಹೋಗಿದ್ದಾರೆ. ಇಂತಹ ಜೀವಗಳ ಜೀವಂತಿಕೆ ಸಾವಿನಲ್ಲೂ ಕಾಣುತ್ತದೆಯಲ್ಲವೇ ? ಇದೇ ಜೀವನ ಇದುವೇ ಜೀವನ ಎನ್ನಬಹುದೇ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ3 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ



