Connect with us

ನೆಲದನಿ

ನುಡಿಯ ಒಡಲು – 02 : ಕನ್ನಡವೇ ಸತ್ಯ ಕನ್ನಡವೇ ನಿತ್ಯ..?

Published

on

  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬೀ ಕವಿಯ ಮಾತುಗಳು ಬಹುದಿನದಿಂದ ನನ್ನನ್ನು ಕಾಡುತ್ತಿರುವ ಮತ್ತು ಮತ್ತೆ ಮತ್ತೆ ಕೆದಕುತ್ತಿರುವ ಮಾತುಗಳಾಗಿವೆ. ಕನ್ನಡ ನುಡಿ, ಸಂಸ್ಕøತಿ ಕುರಿತು ಕುವೆಂಪು ಅವರಿಗೆ ಇರುವ ನಂಬಿಕೆಯ ಬಗೆಗೆ ನನಗೆ ಯಾವುದೇ ಅನುಮಾನವಿಲ್ಲ.

ಇಪ್ಪತ್ತನೇ ಶತಮಾನದಲ್ಲಿ ಕರ್ನಾಟಕದ ಸಮೂಹಗಳಲ್ಲಿ ಒಂದು ವೈಚಾರಿಕ ತಿರುವನ್ನು ಕಾಣುವುದಾದರೆ, ಅದು ಮೊದಲು ನೆಲೆ ಪಡೆದುಕೊಂಡಿದ್ದು ಕುವೆಂಪು ಅವರ ಬರಹಗಳಲ್ಲಿ ಮಾತ್ರ. ಆದರೆ ಅವರು ತಮ್ಮೀ ಹಾಡಿನಲ್ಲಿ ಬಳಸಿಕೊಂಡಿರುವ ಸತ್ಯ ಮತ್ತು ನಿತ್ಯ ಎಂಬೆರಡೂ ಪದಗಳು ನುಡಿಯರಿಮೆಯ ವಿದ್ಯಾರ್ಥಿಯೊಬ್ಬನನ್ನು ಏಕೆ ಕೆಣಕುತ್ತಿವೆ ಹಾಗೂ ಅಣಕಿಸುತ್ತವೆ ಎಂಬುದನ್ನು ಚರ್ಚಿಸಬೇಕಿದೆ.

ಹೌದು, ಈ ಪದಗಳ ಮೂಲಕ ಕನ್ನಡ ನುಡಿ ಮತ್ತು ಕನ್ನಡ ಮಾತ್ನಾಡುವ ಸಮೂಹಗಳ ನಡುವಣ ನಂಟಸ್ತಿಕೆಯ ದಿಟ ಚಹರೆಗಳನ್ನು ಕಂಡರಿಸುವ ಉದ್ದೇಶವನ್ನು ಕುವೆಂಪು ಅವರಲ್ಲಿ ಕಾಣುತ್ತೇವೆ. ಆದಾಗ್ಯೂ ಈ ಎರಡೂ ಪದಗಳ ಬಗೆಗಿರುವ ನನ್ನ ಅನುಮಾನದಲ್ಲಿ ಯಾವುದೇ ವ್ಯತ್ಯಾಸವನ್ನು ಇಲ್ಲಿ ಗುರುತಿಸಲು ಆಗುವುದಿಲ್ಲ.

ಏಕೆಂದರೆ ಸತ್ಯ ಮತ್ತು ನಿತ್ಯ ಎಂಬೀ ಪದಗಳು ಕನ್ನಡವನ್ನೇ ನಂಬಿ ಬದುಕಿತ್ತಿರುವ ಜನಸಮೂಹಗಳ ಪದಕೋಶದಲ್ಲಿ ನೆಲೆನಿಂತು, ಅವರ ಬದುಕಿನ ವಿನ್ಯಾಸಗಳನ್ನು ವಿವರಿಸುವ ಪರಿಕರಗಳಾಗಿ ಈ ಪದಗಳು ಯಾವ ಕಾಲಕ್ಕೂ ಬಳಕೆಯಾಗಿರುವುದನ್ನು ನೋಡಲು ಆಗುವುದಿಲ್ಲ. ಇರಲಿ ಕುವೆಂಪು ಅವರ ನುಡಿ ಬಗೆಗಿನ ನಿಲುವುಗಳನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು ಬೆಳೆಸಿ, ನಂತರ ಸತ್ಯ ಮತ್ತು ನಿತ್ಯ ಪದಗಳ ಬಗೆಗಿನ ನನ್ನ ತಕರಾರುಗಳನ್ನು ಕುರಿತು ಮಾತ್ನಾಡುತ್ತೇನೆ.

ಜನ ಬದುಕಲೆಂದೆ ಹಾಡು..!

“ಜನ ಬದುಕಲೆಂದೆ ಹಾಡು…..” ಎಂಬ ತತ್ವವನ್ನು ನಂಬಿ ಬರೆದ ಕುವೆಂಪು ಅವರು, ಈ ಎರಡೂ ಪದಗಳನ್ನು ಜನರ ಬದುಕಿನ ಸೂಚಕಗಳನ್ನಾಗಿ ಕಾಣಿಸುವ ಇರಾದೆಯಿಂದಲೇ ಬಳಸಿರುತ್ತಾರೆ. ಆದರೆ ಈ ಪದಗಳಿಗೆ ಅಂಟಿದ ಪರಂಪರೆಯ ಸೋಂಕಿನಿಂದ ಇವುಗಳಿಗೆ ಇವತ್ತಿಗೂ ಪಾರಾಗಲು ಸಾಧ್ಯವಾಗಿಲ್ಲ. ಅಂದರೆ ಈ ಪದಗಳ ಸೂಚಿತ ನೆಲೆಗಳು ಈ ಹೊತ್ತಿಗೂ ಸಾಮಾಜಿಕ ಬೇರೆತನವನ್ನೇ [ಸೋಶಿಯಲ್ ಏಲಿನೇಶನ್] ನೆಲೆಗೊಳಿಸುವ ಹುನ್ನಾರವನ್ನು ಮಾಡುತ್ತಿವೆ.

ಪದಗಳಲ್ಲಿ ಹೀಗೆ ಅಂತರ್ನಿತವಾಗಿರುವ ಆಯಾ ಪರಂಪರೆಯ ಸಾಮಾಜಿಕ ನಿಲುವುಗಳು ಸಮೂಹಗಳ ಸಾಂಸ್ಕøತಿಕ ಸೀಳುಗಳಿಗೆ ಕಾರಣವಾಗುತ್ತವೆ. ಅನಾದಿ ಕಾಲದಿಂದಲೂ ಸಮುದಾಯಗಳ ಒಳಗೆ ಹುದುಗಿರುವ ಇಂತಹ ಹುನ್ನಾರಗಳ ವಿನ್ಯಾಸವನ್ನು ಅತ್ಯಂತ ನಿಚ್ಚಳವಾಗಿ ತಮ್ಮ ಒಟ್ಟು ಬರಹಗಳಲ್ಲಿ ಕುವೆಂಪು ಅವರು ತೋರಿಸಿಕೊಟ್ಟಿರುವವರು. ಹಾಗಾಗಿ ನಿತ್ಯ ಮತ್ತು ಸತ್ಯ ಪದಗಳು ಪ್ರತಿನಿಧಿಸುವ ಯಾವುದೇ ಬಗೆಯ ಸಾಮಾಜಿಕ ಯಜಮಾನಿಕೆ ಮತ್ತು ಸಾಂಸ್ಕøತಿಕ ರಾಜಕೀಯ ಹುನ್ನಾರಕ್ಕೆ ಕುವೆಂಪು ಅವರು ಕಾರಣವಲ್ಲ.

ಇಂತಹ ವಿನ್ಯಾಸಗಳನ್ನು ನಿರಚನಗೊಳಿಸುವ ಬಗೆಯೇ ಕುವೆಂಪು ಅವರ ಸಾಹಿತ್ಯದ ಗುರಿಯಾಗಿದೆ. ಆದರೆ ಕನ್ನಡ ನುಡಿಯು ರೂಪಿಸಿಕೊಂಡ ಪದಕೋಶ ಹಾಗೂ ತಿರುಳಿನ ಸಾಮಾಜಿಕ ಚೌಕಟ್ಟುಗಳು ಮಾತ್ರ ಜನಪರವಾದ ನಿಲುವುಗಳನ್ನು ಯಾವತ್ತಿಗೂ ಪಡೆದುಕೊಳ್ಳಲಿಲ್ಲ. ಸಮೂಹಗಳ ಬಗೆಗೆ ಕಾಳಜಿಯನ್ನು ಹೊಂದಿರುವವರು, ಜನಪರವಾದ ತುಡಿತವನ್ನು ಮಾತ್ರ ನಟಿಸುವ ಹುನ್ನಾರವನ್ನು ಮಾಡಿದರೇ ಹೊರತು, ಕನ್ನಡದ ಅಸ್ತಿತ್ವದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವುದು ಇವರಾರಿಗೂ ಮುಖ್ಯವಾಗಲಿಲ್ಲ.

ಅದಕ್ಕಾಗಿಯೇ, ಕನ್ನಡ ನುಡಿಯ ಪದಕೋಶ ಮತ್ತು ಸಮುದಾಯಗಳ ನಡುವಣ ಬಿಕ್ಕಟ್ಟುಗಳನ್ನು ಬಗೆಹರಿಸುವ ತುಡಿತದಿಂದ ಕುವೆಂಪು ಅವರು ಭಾಷಿಕ ಎಲ್ಲೆಗಳನ್ನು ಮೀರಿ ಹೊಸಗನ್ನಡದ ಪದಕೋಶವನ್ನು ರೂಪಿಸಿರುವುದನ್ನು ನೋಡಬಹುದು. ಇಂತಹ ಭಾಷಿಕ ಪ್ರಕ್ರಿಯೆಯಲ್ಲಿ ಕುವೆಂಪು ಅವರ ನಿಗಾಯಿರುವುದು ಕೇವಲ ಕನ್ನಡನುಡಿ ಚಹರೆಗಳನ್ನು ನೆಲೆಗೊಳ್ಳಿಸುವುದು ಮಾತ್ರವಲ್ಲ.

ಬದಲಾಗಿ ಕನ್ನಡ ನುಡಿ ಸಮೂಹಗಳಿಗೆ ಬೇಕಿರುವ ಜ್ಞಾನಶಿಸ್ತೀಯ [ಎಪಿಸ್ಟಿಮಾಲಜಿ] ನೆಲೆಗಳನ್ನು ಕನ್ನಡದ ಮೂಲಕವೇ ಸಜ್ಜುಗೊಳಿಸುವ ಬಗೆಗಳನ್ನು ಹುಟ್ಟು ಹಾಕುವುದಾಗಿತ್ತು. ಹಾಗಾಗಿಯೇ ಇವರು ತಮ್ಮ ಸಾಹಿತ್ಯದ ನಿರೂಪಣೆಯಲ್ಲಿ ಹಲವು ಬಗೆಯ ಪರಿಭಾಷೆಗಳನ್ನು [ರೆಜಿಸ್ಟರ್ಸ್] ರೂಪಿಸಿಕೊಂಡು ಬಳಸಿದರು. ಕಾಲ ದೇಶಗಳ ಹಂಗು ಮೀರಿದ ಕನ್ನಡದ ಪದಕೋಶ ಮತ್ತು ಪದಕಟ್ಟೋಣವನ್ನು ಕುವೆಂಪು ಅವರಲ್ಲಿ ಕಾಣಬಹುದು.

ಹಾಗಾಗಿ ಹಳಗನ್ನಡ, ಒಳನುಡಿ, ಕನ್ನಡ ರಚನೆಯೊಳಗೆ ಸಂಸ್ಕøತ ರೂಪಗಳನ್ನು ಬಳಸಿಕೊಂಡದ್ದು [ಇಂತಹ ಪ್ರಯೋಗಗಳನ್ನು ಸಂಸ್ಕ್ರುತಭೂವಿಷ್ಠವೆಂದೂ ಆರೋಪಿಸಲಾಗುತ್ತದೆ] ಮುಂತಾದ ಬಗೆಗಳಲ್ಲಿ ಇವರ ನುಡಿ ನಿರೂಪಣೆಗಳಲ್ಲಿ ನೋಡಬಹುದು. ಇದು ಕೇವಲ ಸಾಹಿತ್ಯ ಸೃಷ್ಟಿಯಲ್ಲಿ ನಡೆದ ಪ್ರಾಯೋಗಿಕ ನೆಲೆ ಮಾತ್ರವಲ್ಲ. ನುಡಿಯೊಂದರ ದಿಟ ಕಸುವನ್ನು ಬಳಸಿಕೊಂಡು ಜ್ಞಾನಶಿಸ್ತುಗಳನ್ನು ಕಟ್ಟುವ ಬಗೆಗಳನ್ನು ರುಜುಪಡಿಸುವ ರೀತಿಯಾಗಿದೆ.

ಕುವೆಂಪು ಅವರಿಗೆ ಪದಗಳು ಕೇವಲ ಪದಗಳಲ್ಲ, ಅವುಗಳನ್ನು ಪರಿಕಲ್ಪನೆಗಳನ್ನಾಗಿ ಹಾಗೂ ಸಾಂಸ್ಕøತಿಕ ವಿದ್ಯಮಾನದ ಸೂಚಕಗಳನ್ನಾಗಿ ಬಳಸುತ್ತಾರೆ. ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂಬ ಕುವೆಂಪು ಅವರ ಭಾಷಿಕ ಪರಿಕಲ್ಪನೆಗಳೇ ಇದಕ್ಕೆ ಸಾಕ್ಷಿಯಾಗಿವೆ.

ಕುವೆಂಪು ಅವರ ಕನ್ನಡತನ

ಕುವೆಂಪು ಅವರ ಕಣ್ನೋಟದಲ್ಲಿ ಕನ್ನಡತನ ಎಂಬುದು ಕೇವಲ ನುಡಿ ಬಗೆಗಿನ ಒಲವು ಮಾತ್ರವಲ್ಲ. ದೇಶ ಕಾಲಗಳ ಹಂಗು ಮೀರಿ ಕರ್ನಾಟಕದ ಸಮೂಹಗಳ ಬದುಕಿನ ಒಟ್ಟು ವಿನ್ಯಾಸವನ್ನು ನಿರಂತರಗೊಳಿಸುವ ಬಗೆಯೇ ಕನ್ನಡತನವಾಗಿದೆ. ಬದುಕಿನ ಎಲ್ಲಾ ವಲಯಗಳಲ್ಲಿ ನಡೆಯುವ ಕ್ರಿಯೆ ಮತ್ತು ಪ್ರಕ್ರಿಯೆಗಳು ಕನ್ನಡದ ಮೂಲಕ ನೆಲೆಪಡೆಯುವ ಬಗೆಯೂ ಇದಾಗಿರುತ್ತದೆ.

ಅಂದರೆ ಸಾಮಾಜಿಕ-ಮಾನಸಿಕ ಗ್ರಹಿಕೆಯ ಮಾದರಿಗಳು ರೂಪುಗೊಳ್ಳುವುದು ನುಡಿಯ ಮೂಲಕ. ಕನ್ನಡವನ್ನೆ ನೆಮ್ಮಿ ಬದುಕುವ ಕರ್ನಾಟಕದ ಸಮೂಹಗಳ ಈ ಮಾದರಿಗಳು ಕನ್ನಡದ ಮೂಲಕವೇ ಅಸ್ತಿತ್ವಕ್ಕೆ ಬರುತ್ತವೆ. ಬದುಕು ಮತ್ತು ನುಡಿಯ ನಡುವಣ ಹೊಂದಾಣಿಕೆಯ ಈ ವಿನ್ಯಾಸಗಳನ್ನೇ ಕನ್ನಡತನ ಎಂದು ಹೇಳಬಹುದು. ಈ ಬಗೆಯ ಕನ್ನಡತನದ ಚಹರೆಗಳು ನೆಲೆನಿಲ್ಲುವ ಸ್ವರೂಪವನ್ನು ಕುವೆಂಪು ಅವರು ಸತ್ಯ ಮತ್ತು ನಿತ್ಯ ಎಂಬ ಪರಿಕಲ್ಪನೆಗಳ ಮೂಲಕ ನಿಚ್ಚಳಗೊಳಿಸಿದ್ದಾರೆ.

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡವನ್ನು ಒಂದು ಸಾಂಸ್ಕøತಿಕ ವಿದ್ಯಮಾನವನ್ನಾಗಿ ರೂಪಿಸುವಲ್ಲಿ ಕುವೆಂಪು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಕನ್ನಡ ಜಗತ್ತನ್ನು ಮುನ್ನೆಡೆಸುವ ಹೊಣೆಯನ್ನು ಹೊತ್ತವರು, ಕುವೆಂಪು ಅವರು ನಿಲುವುಗಳನ್ನು ಪರಿಗಣಿಸಲೆಯಿಲ್ಲ. ನುಡಿ ಬಗೆಗಿನ ಕುವೆಂಪು ಅವರ ನಿಲುವುಗಳನ್ನು ಕೇವಲ ಸಾಹಿತ್ಯಕ ಪ್ರಯೋಗಗಳನ್ನಾಗಿ ಗುರುತಿಸಲಾಗಿದೆ. ಇಂತಹ ಪ್ರಯೋಗಗಳನ್ನು ಬಹುತೇಕವಾಗಿ ನೆಗಟಿವ್ ನಿಲುವುಗಳನ್ನಾಗಿಯೇ ಆ ಹೊತ್ತಿನ ಕನ್ನಡ ತಿಳಿವಿನ ಲೋಕ ಪರಿಗಣಿಸಿರುವುದನ್ನು ಇಲ್ಲಿ ಗಮನಿಸಬಹುದು.

ಕನ್ನಡದ ಬೆಳವಣಿಗೆ ಇಲ್ಲವೇ ಏಳ್ಗೆ ಎಂಬುದನ್ನು ಒಂದು ಭಾವನಾತ್ಮಕ ನೆಲೆಯನ್ನಾಗಿಸುವುದೇ ಕನ್ನಡತನದ ನಿಲುವಾಗಿತ್ತು. ಕನ್ನಡತನವೆನ್ನುವುದು ಭಾವನೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ ಅದು ಬದುಕಿಗೆ ಸಂಬಂಧಿಸಿದ ವಿದ್ಯಮಾನವಾಗಿದೆ. ಅಂದರೆ ಬದುಕನ್ನು ನಿರ್ವಹಿಸುವ ಬಗೆಗಗಳು ಆಯಾ ಸಮುದಾಯದ ಒಡಲಲ್ಲಿ ಹುದುಗಿರುತ್ತವೆ. ಇಂತಹ ರಾಚನಿಕ ಸಂಗತಿಗಳನ್ನು ಅಯಾ ಸಮೂಹಗಳ ನುಡಿಯು ಜೋಪಾನ ಮಾಡಿಕೊಂಡು ಬಂದಿರುತ್ತದೆ. ಆಯಾ ಸಮುದಾಯಗಳ ನುಡಿ ಬೆಳವಣಿಗೆಯೇ, ಅವರವರ ಬದುಕಿನ ಏಳ್ಗೆಯನ್ನು ಸೂಚಿಸುವ ಸೂಚಕವಾಗಿರುತ್ತದೆ.

ಕನ್ನಡ ನುಡಿಯು ಹಲವು ಶತಮಾನಗಳಿಂದ ಎಷ್ಟೊಂದು ತಲೆಮಾರುಗಳ ಬದುಕುಗಳನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನೆನಪಿಸಿಕೊಂಡರೆ, ಕನ್ನಡ ಜಗತ್ತಿನ ವಿವೇಕದ ಹರವು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ವಿವೇಕದ ನಿರಂತರತೆ, ಬೆಳವಣಿಗೆ ಮತ್ತು ಬದುಕಿನ ಬಹುಳತೆಯ ಮಾದರಿಗಳನ್ನು ಮುನ್ನೆಡೆಸಿಕೊಂಡು, ಆಯಾ ಹೊತ್ತಿನ ಬಾಳಿಗೆ ಬೇಕಾಗುವ ಎಲ್ಲ ರೀತಿಯ ಅಗತ್ಯಗಳನ್ನು ಪೊರೈಸಿಕೊಳ್ಳುವುದೆ ಕನ್ನಡತನವಾಗಿದೆ.

ಜನರ ಇಂತಹ ನಿಲುವುಗಳನ್ನೆ ಸಾಕಾರಗೊಳಿಸುವ ನುಡಿಯಾಗಿರುವ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂದು ಕುವೆಂಪು ಅವರು ಹೇಳಿರುವರು. ಇದನ್ನು ಕೇವಲ ಒಂದು ರಾಜಕೀಯ ಸ್ಲೋಗನ್ನಿನ ನೆಲೆಗೆ ತಂದಿರಿಸಲಾಗಿದೆ. ಇದೊಂದು ಚಾರಿತ್ರಿಕ ವಿಪರ್ಯಾಸವೇ ಸರಿ. ಕುವೆಂಪು ಮಂಡಿಸುವ ಕನ್ನಡತನದ ಈ ನಿಲುವುಗಳನ್ನು ಬರೀ ಹುಸಿಕಲ್ಪನೆಗಳನ್ನಾಗಿ ಬಿಂಬಿಸಲಾಗಿದೆ. ಹಾಗಾಗಿಯೇ ಇಂಗ್ಲಿಶು ಮತ್ತು ಸಂಸ್ಕøತ ನುಡಿಗಳು ಕನ್ನಡ ನುಡಿ ಸಮುದಾಯದೊಳಗೆ ಹೆಚ್ಚು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ.

ಈ ನುಡಿಗಳ ಎದುರಿಗೆ ಕನ್ನಡದ ಕಸುವು ಮತ್ತು ಚಲನಶೀಲತೆಯನ್ನು ಕುಂದಿಸುವ ಹುನ್ನಾರವು ಇದಾಗಿದೆ. ಕನ್ನಡವೆಂದರೆ ಅದೊಂದು ಪಾಳುಬಿದ್ದ ನೆಲ ಎನ್ನುವ ಧೋರಣೆಗೂ ಈ ಹುನ್ನಾರವು ಕಾರಣವಾಗುತ್ತದೆ. ಕನ್ನಡವನ್ನೇ ನೆಮ್ಮಿದ ಸಮೂಹಗಳು ಒಂದು ಬಗೆಯ ಅತಂತ್ರ ನೆಲೆಗೆ ಸಿಕ್ಕುಬಿದ್ದು ನರಳುತ್ತವೆ. ಶಿಕ್ಷಣ ಮಾಧ್ಯಮ ಕುರಿತಾದ ನಿಲುವುಗಳನ್ನು ನಿಗಾಯಿಟ್ಟು ಪತ್ತೆಹಚ್ಚಿದರೆ ಇಂತಹವೇ ಕಾರಣಗಳು ಅಲ್ಲಿ ಮುಂಚೂಣೆಯಲ್ಲಿರುತ್ತವೆ. ಏಕೆಂದರೆ ಕನ್ನಡದ ಬಗೆಗಿನ ಅಪನಂಬಿಕೆಯನ್ನು ಈ ನಿಲುವುಗಳು ಮತ್ತಷ್ಟು ತೀವ್ರಗೊಳಿಸುತ್ತವೆ.

ಆದ್ದರಿಂದ ಕನ್ನಡಿಗರಿಗೆ ಮಾಧ್ಯಮದ ಪ್ರಶ್ನೆ ಎದುರಾದಗೆಲ್ಲ, ಕನ್ನಡ ಮತ್ತು ಇಂಗ್ಲಿಶು ನುಡಿಗಳ ನಡುವೆ ಹೋಲಿಕೆ ಇರುತ್ತದೆ. ಈ ಹೋಲಿಕೆಯಲ್ಲಿ ಇಂಗ್ಲಿಶು ಯಾವತ್ತಿಗೂ ಗೆಲ್ಲುವ ಕುದುರೆಯಾಗಿಯೇ ಕಾಣುತ್ತದೆ. ಸಹಜವಾಗಿ ಕನ್ನಡವೆಂದರೆ ಅದೊಂದು ಊನಗೊಂಡ ಕುದುರೆಯಾಗಿ ತೋರುತ್ತದೆ. ಈ ಕಾರಣಗಳಿಗಾಗಿಯೇ ಕನ್ನಡವೆನ್ನುವುದು ನಮ್ಮ ಸಮೂಹಗಳ ಬದುಕಿಗೆ ಹೊರೆಯಾಗಿ ಪರಿಣಮಿಸುತ್ತದೆ.

ತನ್ನ ಮತ್ತು ಬೇರೆತನದ ಡೈಕಾಟಮಿ

ಮತ್ತೊಂದು ಬಗೆಯ ಹುನ್ನಾರದ ಮಾದರಿ ಯಾವುದೆಂದರೆ, ಕನ್ನಡದ ಗುರುತು ಇಲ್ಲವೇ ಅಸ್ಮಿತೆಯನ್ನು ನೆಲೆಗೊಳಿಸಲು, ಅಧಿಕಾರ ಮತ್ತು ನೈತಿಕತೆಯ ಸವಾಲುಗಳನ್ನು ಎದುರಿಗೆ ಇಡಲಾಗುತ್ತದೆ. ಕನ್ನಡ ತನಗಿರುವ ಅಧಿಕಾರದ ನೆಲೆಗಳನ್ನು ತನ್ನ [ಸೆಲ್ಫ್] ಮತ್ತು ಬೇರೆ [ಅದರ್] ಎಂಬ ವಿಂಗಡನೆಯ ಮೂಲಕ ತನ್ನ ನುಡಿ ಸಮುದಾಯವನ್ನು ನಿರೂಪಿಸುತ್ತದೆ.

ಈ ಅಧಿಕಾರವನ್ನು ಮರುಸಂಪಾದಿಸಲು ಗಡಿಗಳು ಮತ್ತು ಸಮುದಾಯಗಳ ಗಾತ್ರವನ್ನು ವ್ಯಾಖ್ಯಾನಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಆಯಿಕಟ್ಟಿನ ಜಾಗಗಳನ್ನು [ಸ್ಟ್ರ್ಯಾಟಜಿಕ್ ಲೋಕೇಶನ್ಸ್] ಗೊತ್ತುಪಡಿಸಿಕೊಂಡು, ಅವುಗಳನ್ನೇ ಕನ್ನಡದ ಗುರುತುಗಳನ್ನಾಗಿ ರೂಪಿಸಲಾಗುತ್ತದೆ. ಆಯಾ ನುಡಿ ಸಮುದಾಯದೊಳಗಿರುವ ಕೆಲವು ಪ್ರಬಲ ಸಮೂಹಗಳು ಕನ್ನಡದ ನೈತಿಕತೆಯ ಸವಾಲುಗಳನ್ನು ಹುಟ್ಟುಹಾಕುತ್ತವೆ. ಕಾರಣವೇನೆಂದರೆ ಇಂತಹ ನಿಲುವುಗಳ ಮೂಲಕ ಕನ್ನಡದ ಬಗೆಗಿನ ತಮ್ಮ ಹುಸಿ ಅಭಿಮಾನವನ್ನು ಗಟ್ಟಿಗೊಳಿಸುವ ಹುನ್ನಾವಾಗಿರುತ್ತದೆ.

ಹಾಗಾಗಿ ಈ ಸವಾಲುಗಳನ್ನು ಹೊರ ಮತ್ತು ಒಳ ನುಡಿಗುಂಪುಗಳಿಂದ ನೈತಿಕ ಅನುಕಂಪ [ಮಾರಲ್ ಸಿಂಪಥಿ]ವನ್ನು ಪ್ರಚುರಪಡಿಸುವ ಮೂಲಕ ತಮ್ಮೀ ಹುನ್ನಾರವನ್ನು ಮುಂಚೂಣೆಗೆ ತರುತ್ತವೆ. ಇಂತಹ ಹುನ್ನಾರದ ತುಡಿತವೇನೆಂದರೆ, ನುಡಿಯೊಂದಕ್ಕೆ ಹುಸಿಮನ್ನಣೆಯನ್ನು ರೂಪಿಸುವುದಾಗಿರುತ್ತದೆ. ಇದನ್ನು ಸಾಕಾರಗೊಳಿಸಲು ಮಾನವ ಹಕ್ಕಿನ ಪ್ರಶ್ನೆಯನ್ನು ಮುಂದಿಡಲಾಗುತ್ತದೆ. ಈ ಮಾನವ ಹಕ್ಕುಗಳ ಸವಾಲು ಇಲ್ಲಿ ಎದುರಾಗುವುದು ಬದುಕಿನ ಆಶೋತ್ತರಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಬದಲಾಗಿ ಹುಸಿಕನ್ನಡತನದ ಸ್ಥಿತಿಯನ್ನು ಎಚ್ಚರಿಸುವ ನೆಪ ಮಾತ್ರವಾಗಿರುತ್ತದೆ.

ಈ ಹಕ್ಕುಗಳ ಸ್ವರೂಪವನ್ನು ಮನಗಾಣುವ ಯಾವುದೇ ಉದ್ದೇಶ ಇಲ್ಲವೇ ಗುರಿಯನ್ನೂ ಇಲ್ಲಿ ಕಾಣಲು ಸಾಧ್ಯವಿಲ್ಲ. ಅಂದರೆ ಹಕ್ಕುವೆಂಬುದು ನಮ್ಮೊಳಗೆಯೇ ಅಂತರ್ಗತ [ಇನ್‍ಹೆರೆಂಟ್ ರೈಟ್ಸ್]ವಾಗಿದೋ? ಇಲ್ಲವೇ ಅದನ್ನು ಹೊರಗಿನ ಮೂಲಗಳಿಂದ ಪಡೆಯ [ಅರ್ನೆಡ್ ರೈಟ್ಸ್]ಬಹುದಾಗಿದೋ? ಎಂಬುದು ಕೂಡ ನುಡಿ ಬಗೆಗಿನ ತೀರ್ಮಾನಗಳಲ್ಲಿ ಗೊಂದಲವನ್ನುಂಟು ಮಾಡುತ್ತದೆ.

ಹಾಗಾಗಿ ಕನ್ನಡ ನುಡಿ ಕುರಿತಾದ ಯಾವುದೇ ನಿಲುವು ರಾಜಕೀಯೇತರವಾದದ್ದಲ್ಲ. ಆದ್ದರಿಂದ ಕುವೆಂಪು ಅವರ ನಿಲುವುಗಳು ಇಂತಹ ರಾಜಕೀಯ ಪ್ರೇರಿತವಾದ ನಂಬಿಕೆಗಳನ್ನು ಹುಸಿಗೊಳಿಸಿ, ದಿಟ ಕನ್ನಡತನವನ್ನು ನೆಲೆಗೊಳಿಸುವ ಕಾರಣ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂಬ ಮೂಲತತ್ವವನ್ನು ಇವರು ಹುಟ್ಟುಹಾಕಿರುತ್ತಾರೆ.

ಸಾಮಾಜಿಕ ಒಡಕಿನ ಬಗೆಗಳು

ಸಮೂಹಗಳ ಬದುಕಿನ ನಂಟಿನ ನೆಲೆಗಳನ್ನು ಹಾಗೂ ನಂಬಿಕೆಯ ನಿಲುವುಗಳನ್ನು ಗಟ್ಟಿಗೊಳಿಸುವ ಬದಲಾಗಿ, ಅವುಗಳನ್ನು ಹುಸಿಗೊಳಿಸುವ ಬಗೆಯಾಗಿ ಪದವೊಂದು ಅಂತಸ್ಥಗೊಂಡರೆ, ಅದರಿಂದ ಸಾಮಾಜಿಕ ಒಡಕು ಇನ್ನಷ್ಟು ಬಿಗಡಾಯಿಸುತ್ತದೆ ಎಂಬುದನ್ನು ಈ ಮೇಲಿನ ಚರ್ಚೆಗಳು ತಿಳಿಸುತ್ತವೆ. ಕನ್ನಡ ಜನಪರ ನಂಬಿಕೆಯ ಲೋಕದೊಳಗೆ ಸತ್ಯ ಮತ್ತು ನಿತ್ಯ ಪದಗಳು ನೆಲೆ ಪಡೆಯಲಿಲ್ಲ.

ಹೊಸಗಾಲದ ಕನ್ನಡವನ್ನು ಮುನ್ನೆಡೆಸುವ ಮುಂದಾಳುಗಳು ಕನ್ನಡದ್ದೇ ಜನಪರ ನಂಬಿಕೆಯ ಲೋಕವನ್ನು ಬೆಳೆಸುವ ಇಲ್ಲವೇ ಈಗಾಗಲೇ ನೆಲೆನಿಂತ ಕನ್ನಡೇತರ ಪರಂಪರೆಗೆ ಪರ್ಯಾಯ ಪರಂಪರೆಯೊಂದನ್ನು ಕಟ್ಟುವ ನಿಟ್ಟಿನಲ್ಲಿ ಇವರು ನಿಗಾವಹಿಸಲಿಲ್ಲ. ಹಾಗಾಗಿ ಕನ್ನಡ ನುಡಿಯ ಸಾಮಾಜಿಕ ನೆಲೆಗಳನ್ನು ಅನ್ಯಗೊಳಿಸುವ ತುಡಿತವೇ ಇಲ್ಲಿ ಮೇಲುಗೈ ಪಡೆದಿರುವುದನ್ನು ನೋಡಬಹುದು.

ಕುವೆಂಪು ಅವರು ಪರನುಡಿಗಳಿಂದ ಪದಗಳನ್ನು ಕಡ ತಂದರೂ, ಕನ್ನಡ ನುಡಿ ಸಮುದಾಯಗಳ ಏಳ್ಗೆಗೆ ಬೇಕಾಗುವ ದಾರಿಗಳನ್ನು ಕಟ್ಟುವ ಬಗೆಯಾಗಿರುತ್ತದೆ. ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯ ಎಂಬುದು ಕೇವಲ ಮಂತ್ರಪಠಣವಾಗದೇ, ಬದುಕಿನ ನಂಬಿಕೆಯಾಗಬೇಕಿದೆ. ಕನ್ನಡದ ಮುಂದಾಳುತನವನ್ನು ವಹಿಸುವವರು ಕುವೆಂಪು ಅವರು ರೂಪಿಸಿದ ನುಡಿತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯವನ್ನು ಅರಿಯಬೇಕಿದೆ. ಕನ್ನಡತನ ಎನ್ನುವುದು ಅದು ಬರೀ ಹಕ್ಕಲ್ಲ, ಮಂತ್ರವು ಅಲ್ಲ, ತಂತ್ರವೂ ಅಲ್ಲ. ಅದು ಬದುಕು ಹಾಗೂ ಬದುಕಿಗೆ ಬೇಕಾಗುವ ಅಪ್ಪಟ ನಂಬಿಕೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending