ದಿನದ ಸುದ್ದಿ
ಮಹೇಂದ್ರ ಎಂಬ ಅಂಗುಲಿಮಾಲ
- ಯೋಗೇಶ್ ಮಾಸ್ಟರ್
ಯಾವ ಶಕ್ತಿಗಳು ರಾಷ್ಟ್ರ, ಸಂಸ್ಕೃತಿ, ಧರ್ಮ ಎಂದು ದೇಶದ ಏಕತೆ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡುತ್ತಿದ್ದವೋ, ಅದೇ ಶಕ್ತಿಗಳ ಭಾಗವಾಗಿದ್ದ ತನ್ನ ಈ ಶಕ್ತಿ ವಿಧ್ವಂಸಕವಾಗಕೂಡದು ಮತ್ತು ರಚನಾತ್ಮಕವಾಗಬೇಕು ಎಂಬ ಜ್ಞಾನೋದಯ ಪಡೆದುಕೊಂಡ ವ್ಯಕ್ತಿ ಮಹೇಂದ್ರ ಕುಮಾರ್. ಆ ಜ್ಞಾನೋದಯವನ್ನು ಮತ್ತು ತನ್ನದಂತೆಯೇ ಇತರರದೂ ಜೀವ ಎಂದು ಪ್ರಜ್ಞೆ ಪಡೆದುಕೊಂಡ ವ್ಯಕ್ತಿ ಆ ಪ್ರಜ್ಞೆಯನ್ನು ತನ್ನ ಸಹಜೀವಿಗಳಿಗೆ ಹಂಚಿಕೊಳ್ಳುತ್ತಾ ಶಕ್ತಿಯು ನಕಾರಾತ್ಮಕವಾಗುವ ಬದಲು ರಚನಾತ್ಮಕವಾಗಿ ಸಮಾಜದಲ್ಲಿ ಬಳಕೆಯಾಗಬೇಕು ಎಂದು ಬಯಸುತ್ತಾ, ಕೆಲಸ ಮಾಡುತ್ತಿದ್ದರು. ಇಂತಹ ಪ್ರಜ್ಞಾವಂತ ಜೀವಿ ಇಷ್ಟುಬೇಗ ಬದುಕಿನಿಂದ ವಿಮುಖವಾಗಿದ್ದು ನಿಜಕ್ಕೂ ಜನಪರ ಹೋರಾಟಕ್ಕೆ ಆದ ಅನ್ಯಾಯವೇ.
ಬಜರಂಗದಳದ ತಂಡದಿಂದ ತನ್ನ ಅರಿವಿನಿಂದ ಹೊರಗೆ ಬಂದ ಈ ಅಂಗುಲಿಮಾಲ ಶರಣಾಗಿದ್ದು ಮನುಷ್ಯ ಪ್ರೀತಿಗೆ. ಇಂಥಾ ಸಮಯದಲ್ಲಿ ನಮಗೆ ಪೂರಕ ಶಕ್ತಿಯಾಗುವಂತೆ ಇದ್ದ ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬುದನ್ನು ಅರಿಗಿಸಿಕೊಳ್ಳಲು ಕಷ್ಟವಾದರೂ ನಿಜ. ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬ ಆಘಾತಕರ ಸುದ್ಧಿಯನ್ನು ನಾನು ನಂಬಲಾಗದೇ ಅವರಿವರಿಗೆ ಫೋನ್ ಮಾಡಿ ನಿಜವೆಂದು ಹೇಳಿದರು. ಆದರೆ ನಂಬಲು ಈಗಲೂ ಸಿದ್ಧನಿಲ್ಲ.
ಯುವಶಕ್ತಿಯನ್ನು ಜೀವಪರವಾದ ಮತ್ತು ಸಮಾಜಮುಖಿಯಾದ ದಾರಿಯಲ್ಲಿ ನಡೆಸುತ್ತಾ ಮನುಷ್ಯಪ್ರೇಮದ ಗುರಿಗೆ ಒಯ್ಯಲು ಸಾಂಘಿಕವಾಗಿ ಶ್ರಮಿಸುತ್ತಿದ್ದ ಮಹೆಂದ್ರಕುಮಾರ್ ಗೆ ಬಹಳ ಸಂಕಟದಿಂದ ಅಂತಿಮ ವಿದಾಯಗಳನ್ನು ಹೇಳುತ್ತಿದ್ದೇನೆ. ಮಹೇಂದ್ರ ಕುಮಾರ್ ನನಗೆ ಇತ್ತೀಚೆಗೆ ತಿಮ್ಮಿಯ ಬಗ್ಗೆ ಮಾಡಿದ್ದ ಕರೆ ಕೊನೆಯದಾಗಬಹುದೆಂದು ನಾನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?
ತಿಮ್ಮಿಯ ಮೇಲಿನ ನಮ್ಮ ಪ್ರೀತಿಯನ್ನು ಮತ್ತು ನಮ್ಮ ಕುಟುಂಬದಲ್ಲಿ ಅದು ಪಡೆದುಕೊಂಡಿರುವ ಸ್ಥಾನವನ್ನು ಅದು ಬಂದ ಪ್ರಾರಂಭದ ದಿನಗಳಲ್ಲೇ ಗಮನಿಸಿದ್ದ ಮಹೇಂದ್ರ ಕುಮಾರ್ “ಒಬ್ಬರು ಒಂದು ಪ್ರಾಣಿಯನ್ನು ತಮ್ಮ ಪ್ರೀತಿಯ ಜೀವ ಎಂದು ಮನೆಯಲ್ಲಿ ಸಾಕುತ್ತಿರುವಾಗ, ಮುದ್ದಿಸುತ್ತಿರುವಾಗ ಅದನ್ನು ಕೊಯ್ಯುವ ತಿನ್ನುವ ಬಗ್ಗೆಯೇ ನಾವು ಪೋಸ್ಟ್ ಮಾಡುತ್ತಿದ್ದರೆ ಅದೆಷ್ಟು ಕ್ರೂರ.
ಅದನ್ನು ಮುದ್ದಿನ ಪ್ರಾಣಿ ಮತ್ತು ಮನೆಯ ಸದಸ್ಯರನ್ನಾಗಿ ಮಾಡಿಕೊಂಡಿರುವ ಮನಸ್ಸಿಗೆ ಅದೆಷ್ಟು ನೋವಾಗುವುದಿಲ್ಲ! ಇದು ತಮಾಷೆ ಅಲ್ಲ ಮೇಷ್ಟೇ. ತಮಾಷೆಗೆ ನಿಮ್ಮ ಮನೆ ಸದಸ್ಯನ ಕುಯ್ದುಕೊಂಡು ತಿಂತೀನಿ ಅಂತ ಹೇಳ್ತಾರಾ? ಇವರಿಗೇನು ಇಷ್ಟು ಮಾತ್ರ ಗೊತ್ತಾಗುವುದಿಲ್ಲವಾ? ಅವರ ಪ್ರೀತಿಯ ಮತ್ತು ಮನೆಯ ಸದಸ್ಯರಲ್ಲಿ ಒಂದಾಗಿರುವ ಜೀವವನ್ನು ಕೊಲ್ಲುವ, ಮಸಾಲೆ ಅರೆಯುವ, ತಿನ್ನುವ ಮಾತಾಡಿದರೆ ನಿಮ್ಮ ಮನಸಿಗೆ ಅದೆಷ್ಟು ನೋವಾಗುವುದಿಲ್ಲ?” ಎಂದು ನನಗೆ ಫೋನ್ ಮಾಡಿಯೇ ಮಾತಾಡಿದ್ದರು. ಇದೇ ನನಗೆ ಅವರು ಮಾಡಿದ್ದ ಕೊನೆಯ ಕರೆ.
ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯಿಲ್ಲದಂತೆ ವರ್ತಿಸುವ, ಪ್ರೀತಿ ಪ್ರೇಮವನ್ನು ಲವ್ ಜಿಹಾದ್ ಎಂದು ದಾಳಿ ಮಾಡುವ ಮತೋನ್ಮತ್ತ ಸಂಘಗಳ ಹಿನ್ನೆಲೆಯಿಂದಲೇ ಬಂದ ವ್ಯಕ್ತಿ ಒಂದು ಕೋಳಿಯ ಜೀವಕ್ಕೂ ಮರುಗುವಷ್ಟು, ಅದರೊಂದಿಗೆ ಸಂಬಂಧಹೊಂದಿರುವವರ ಪ್ರೀತಿಯನ್ನು ಆದರಿಸುವಷ್ಟು ಕಾಳಜಿಯನ್ನು ತೋರುತ್ತಿದ್ದರೆಂದರೆ, ಅವರು ತಮ್ಮ ಜೊತೆಗೆ ಇದ್ದ ಯುವಕರಲ್ಲಿ ಇನ್ನೆಷ್ಟರ ಮಟ್ಟಿಗೆ ಜೀವಪರ ಸಂವೇದನೆಯನ್ನು ಪ್ರೇರೇಪಿಸುತ್ತಿದ್ದರು ಎಂದು ಆಲೋಚಿಸುತ್ತಿದ್ದೆ.
ನಮ್ಮ ಧ್ವನಿ ಎಂದು ತನ್ನ ಜೀವಪರ ದನಿಗೆ ಸಾಂಸ್ಥಿಕ ರೂಪಕೊಟ್ಟು ಯುವಕರಿಗೆ ಸಮಾಜಮುಖಿಯಾಗುವಂತಹ ತರಬೇತಿಗಳನ್ನು ಕೊಡುತ್ತಿದ್ದರು. ಈ ತರಬೇತಿ ಶಿಬಿರಗಳಲ್ಲಿ ಪರಿಣಿತರಿಂದ, ಪ್ರಸಿದ್ಧರಿಂದ ಹೋರಾಟಗಾರರಿಗೆ ನೈತಿಕತೆ, ತಾತ್ವಿಕತೆ ಮತ್ತು ತಾಂತ್ರಿಕತೆಗಳ ಶಿಕ್ಷಣ ಕೊಡಿಸುವ ಕೆಲಸವಾಗುತ್ತಿತ್ತು. ನಮ್ಮ ಧ್ವನಿಯಲ್ಲಿ ಅನುಯಾಯಿಗಳನ್ನು ಬೆನ್ನಿಗಿಟ್ಟುಕೊಳ್ಳುವ ಇರಾದೆ ಇಲ್ಲದೇ ನಾಯಕರನ್ನು ತಯಾರುಮಾಡುವ, ಜನರನ್ನು ಮುನ್ನಡೆಸಲು ಮುಂದಾಳುಗಳನ್ನು ರೂಪಿಸುವ ಆಶಯವನ್ನು ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಹತ್ತಿರದಿಂದ ಬಲ್ಲೆ.
ಮತ್ತೆ ಸಿಗೋಣ ಎಂದು ಕೊಟ್ಟ ಮಾತನ್ನು ಮುರಿದಿದ್ದು ಅಕ್ಷಮ್ಯ ಮತ್ತು ಸಂಕಟ. ವಿದಾಯ ಹೇಳುವ ಮನಸ್ಸಿಲ್ಲ ಮಹೇಂದ್ರ. ನೀವು ನನ್ನ ಭರವಸೆಗಳನ್ನು ಈಡೇರಿಸದೇ, ನೀವು ಕಂಡ ಸಮಸಮಾಜದ ಕನಸನ್ನು ಸಂಘಾಂತರವಾಗಿ ಬರುವ ಮನಸುಗಳಿಗೆ ಧಾರೆಯೆರೆಯದೇ ಮತ್ತು ಈ ಯುವಸಮಾಜಕ್ಕಾಗಿ ಕೊಟ್ಟ ಹಲವು ಮಾತುಗಳನ್ನು ಪೂರೈಸದೇ ಹೋಗುವುದನ್ನು ಹೇಗೆ ಭರಿಸಲಿ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


