Connect with us

ಅಂತರಂಗ

ಅರಿಮೆಯ ಅರಿವಿರಲಿ-52 : ಮಗುತನದಿಂದ ತನ್ನತನ

Published

on

  • ಯೋಗೇಶ್ ಮಾಸ್ಟರ್

ಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ರೂಢಿಗೊಳಿಸಿದರೆ, ಅಥವಾ ಅದರ ಬಗ್ಗೆ ಅರಿವು ಮೂಡಿಸಿದರೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಬಲ್ಲರು.

ಧೈರ್ಯ, ಹಟಮಾರಿತನ, ವಿನಯ, ಸಂಕೋಚ, ನಿಸ್ಸಂಕೋಚ, ಭಯ, ಮೌನ, ಮಾತು, ಕೆಲಸ, ನಿರ್ಗೆಲಸ; ಹೀಗೆ ಎಲ್ಲರೂ ಅಗತ್ಯವಿರುವಷ್ಟು ಹೊಂದಬಹುದು ಮತ್ತು ಉಪಯೋಗಿಸಬಹುದು.
ಇದನ್ನು ಬಹಳ ಗಂಭೀರವಾಗಿ ಗಮನಿಸೋಣ. ಯಾರೊಬ್ಬ ಎಲ್ಲದಕ್ಕೂ ಸಂಕೋಚ ಪಡುತ್ತಾನೋ ಅಥವಾ ಎಲ್ಲದಕ್ಕೂ ನಿರ್ಲಜ್ಜೆಯಿಂದ ಮುಂದಾಗುತ್ತಾನೋ, ಅವನಲ್ಲಿ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ.

ಅದೇ ಒಬ್ಬ ವ್ಯಕ್ತಿ ಕೆಲವೊಂದು ವಿಷಯಕ್ಕೆ ಸಹಜವಾಗಿ ನಾಚಿಕೆಪಟ್ಟುಕೊಳ್ಳುತ್ತಾನೆ. ಅಗತ್ಯವಿರುವ ಕೆಲವು ವಿಷಯಗಳಿಗೆ ಸಂಕೋಚವಿಲ್ಲದೇ ಮುಂದಾಗುತ್ತಾನೆ ಎಂದರೆ ಅವನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಲಕ್ಷಣವನ್ನು ತೋರುತ್ತಿದ್ದಾನೆಂದು ಅರ್ಥ.

ಆತ್ಮಗೌರವ ಅಥವಾ ಸೆಲ್ಫ್ ಎಸ್ಟೀಮ್ ಎಂಬುದು ವ್ಯಕ್ತಿತ್ವ ವಿಕಾಸ, ಸಾಮಾಜಿಕ ಮನಶಾಸ್ತ್ರ, ಚಿಕಿತ್ಸಕ (ಕ್ಲಿನಿಕಲ್) ಮನಶಾಸ್ತ್ರ, ಪುರೋಗಾಮಿತ್ವ (ಡೆವಲಪ್ ಮೆಂಟಲ್) ಮನಶಾಸ್ತ್ರ; ಹೀಗೆ ಹಲವು ಶಾಖೆಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಇದು ತನ್ನತನದ ಪರಿಕಲ್ಪನೆಯ ಮೇಲೆಯೇ ಅವಲಂಬಿತವಾಗಿದ್ದು ರೋಸೆನ್‍ಬರ್ಗ್ (1965) ಎಂಬ ಮನಶಾಸ್ತ್ರಜ್ಞ ಹೇಳುವಂತೆ, ಸ್ವಾಭಿಮಾನ ಎಂದರೆ ಒಬ್ಬ ವ್ಯಕ್ತಿಯ ಸಮಗ್ರವಾದ ತನ್ನತನದ ಸಕಾರಾತ್ಮಕ ಮೌಲ್ಯಮಾಪನ. ಜೊತೆಗೆ ತನ್ನನ್ನು ತಾನು ಗೌರವಿಸಿಕೊಳ್ಳುವುದು ಮತ್ತು ತನ್ನನ್ನು ಸತ್ವಪೂರ್ಣ ವ್ಯಕ್ತಿ ಎಂದು ಪರಿಗಣಿಸಿಕೊಳ್ಳುವುದು.

ಮಗುತನದ ಹಂತಗಳು

ಮಗುವಿನ ಬಾಲ್ಯದಲ್ಲಿಯೇ ಗೌರವಪೂರ್ಣವಾದ ತನ್ನತನದ ಭಾವವನ್ನು ರೂಪುಗೊಳಿಸುವ ಜವಾಬ್ದಾರಿಯನ್ನು ಮಗುವನ್ನು ನೋಡಿಕೊಳ್ಳುವ ಹಿರಿಯರು ಹೊರಬೇಕು.

ಸೊನ್ನೆ ವರ್ಷದಿಂದ ಎರಡು ವರ್ಷಗಳ ವರೆಗೆ

1. ಮಗುವು ಸತತವಾದ ಗಮನವನ್ನು ಪಡೆಯುತ್ತಿದ್ದರೆ, ಅದಕ್ಕೆ ಪ್ರೀತಿಯಿಂದ ಕೂಡಿರುವ ಸಂಬಂಧದ ಅನುಭವವಾಗುತ್ತಿದ್ದರೆ, ಆ ಮಗುವು ಸಕಾರಾತ್ಮಕವಾದ ತನ್ನತನದ ಭಾವವನ್ನು ಹೊಂದುತ್ತದೆ.

2. ಮಗುವು ತನಗಾಗುತ್ತಿರುವ ಅನುಭವದ ಆಧಾರದಲ್ಲಿ ಆದ್ಯತೆಗಳನ್ನು ಕಂಡುಕೊಳ್ಳುತ್ತದೆ. ಯಾವುದು ಮೊದಲು ಮುಖ್ಯ, ಬೇಕಾದದ್ದು, ಹಿತ ನೀಡುವಂತದ್ದು; ಇಂತಹ ಅನುಭವಗಳನ್ನು ಆಧರಿಸಿರುವ ಆ ಆದ್ಯತೆಗಳಿಂದ ತನ್ನತನದ ಸಹಜವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತದೆ.

3. ಅಂಬೆಗಾಲಿಡುವ ಶಿಶುವಿನ ಇತಿಮಿತಿಯನ್ನು ನಿಯಂತ್ರಿಸುವ ಕಟ್ಟಳೆ ಸುರಕ್ಷಿತ ಭಾವವನ್ನು ಒದಗಿಸುತ್ತದೆ. ಆದರೆ ಆ ಕಟ್ಟಳೆ ಮೃದುವಾಗಿಯೂ ಮತ್ತು ದೃಢವಾಗಿಯೂ ಇರಬೇಕು. ಉದಾಹರಣೆಗೆ, “ನೀನು ಗೇಟಿನ ಆಚೆ ಹೋಗಬಾರದು. ಹಾಗೆ ಹೋಗಲು ನಾನು ಬಿಡುವುದಿಲ್ಲ. ಅಲ್ಲಿ ಗಾಡಿಗಳು ಬರುತ್ತವೆ. ಅಪಾಯವಿದೆ” ಎಂಬ ನಿಯಂತ್ರಣವು ಇರಬೇಕು.

ಆದರೆ ಅದು, “ಹೋಗಬಾರದು ಎಂದರೆ ಹೋಗಬಾರದು. ಹೋದರೆ ಏಟು ಕೊಡ್ತೀನಿ. ಹೇಳಿದಷ್ಟು ಕೇಳು” ಎನ್ನುವ ಮಾತಿನ ಬಗೆಯು ಸಕಾರಾತ್ಮಕವಾದ ತನ್ನತನವನ್ನು ರೂಪಿಸುವ ಬದಲು ಅರಿಮೆಯನ್ನು ಹುಟ್ಟಿಸುವ ಅಥವಾ ದೌರ್ಬಲ್ಯಕ್ಕೆ ಎಡೆಮಾಡುವಂತಹ ನಕಾರಾತ್ಮಕ ಗುಣಗಳನ್ನು ರೂಢಿಸುತ್ತದೆ.

4. ಮಗುವು ಎರಡು ವರ್ಷದ ಹೊತ್ತಿಗೆ ಭಾವವನ್ನು ಮತ್ತು ಭಾಷೆಯನ್ನು ಗ್ರಹಿಸಲು ಆರಂಭಿಸಿದ್ದು ನಾನು ಎಂಬ ಭಾವವು ರೂಪುಗೊಳ್ಳುತ್ತಿರುತ್ತದೆ. ಅಲ್ಲಿಗೆ ತನ್ನತನದ ಸಂರಚನೆ ಪ್ರಾರಂಭವಾಯಿತೆಂದೇ ಅರ್ಥ. ಮಗುವಿನ ಗಿಲಕಿಯನ್ನೋ ಅಥವಾ ಅದು ನಿತ್ಯ ಬಳಸುವ ವಸ್ತುವನ್ನೋ ತೋರಿ, “ಇದು ಯಾರಿಗೆ ಬೇಕು?” “ಇದು ಯಾರದು?” ಎಂದರೆ, ನನಗೆ, ನನ್ನದು ಎಂಬ ಭಾವವನ್ನು ವ್ಯಕ್ತಪಡಿಸಲು ಅದಕ್ಕೆ ಸಾಧ್ಯವಾಗುತ್ತದೆ. ಅವುಗಳೆಲ್ಲಾ ತನ್ನತನದ ಆರಂಭಿಕ ಪ್ರಕಟಣೆಗಳೇ.

ಮೂರರಿಂದ ನಾಲ್ಕರವರೆಗೆ

1. ಮೂರು ಮತ್ತು ನಾಲ್ಕುವರ್ಷದ ಮಗುವು ತನ್ನನ್ನು ತಾನು ಪ್ರತ್ಯೇಕ ಮತ್ತು ಭಿನ್ನ ವ್ಯಕ್ತಿಗಳೆಂದು ನೋಡಿಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿರುವ ವಸ್ತುಗಳು, ಉಡುಪುಗಳು, ಬಂದವರು ಮಾತಾಡಿಸುವ ರೀತಿ; ಇವೆಲ್ಲವೂ ಬೇರೆ ಹಿರಿಯರದ್ದಕ್ಕಿಂತ ಭಿನ್ನ ಎಂಬುದನ್ನು ಗುರುತಿಸುತ್ತವೆ.

ತಮ್ಮದು ಯಾವುದು, ಇತರರದು ಯಾವುದು ಎಂದು ವಸ್ತುಗಳನ್ನು ಮಾತ್ರ ಗುರುತಿಸುವುದಲ್ಲ. ವ್ಯಕ್ತಿತ್ವವನ್ನೂ ಕೂಡಾ ಕಂಡುಕೊಳ್ಳುತ್ತಿರುತ್ತವೆ. ಆದರೆ ಅದಿನ್ನೂ ಬಿರಿಯುವ ಹಂತದಲ್ಲಿದ್ದರೂ ಪ್ರಕ್ರಿಯೆ ಅದಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ.

2. ತನ್ನತನದ ಬಗ್ಗೆ ಇರುವ ಅರಿವು ಬಹುಪಾಲು ಶಾಬ್ಧಿಕ ವರ್ಣನೆಯಾಗಿರುತ್ತದೆ. ತಾನು ಹೇಗೆ ಇದ್ದೇನೆ? ತಾನು ಏನು ಮಾಡುತ್ತೇನೆ? ತನಗೆ ಏನು ಬೇಕು? ಈ ರೀತಿ. ಆದರೆ ಅದು ನಾನು ಹೀಗೆ ಇರುವುದು, ನನಗೆ ಹೀಗಿರಬೇಕು; ಈ ರೀತಿಯ ಹಕ್ಕು ಅಥವಾ ಅಧಿಕಾರದ ತಳಹದಿಯದ್ದಾಗಿದ್ದು ತೀರ್ಮಾನ ತೆಗೆದುಕೊಳ್ಳುವಂತದ್ದಾಗಿರುವುದಿಲ್ಲ.

3. ಶಾಲೆಗೆ ಅಥವಾ ಬಾಲವಾಡಿಗೆ ಹೋಗ ವಯಸ್ಸಿಗೆ ಬರುವ ಮಕ್ಕಳಾಗಲೇ ಸ್ವತಂತ್ರವಾಗಿ ತಾವೇನು ಮಾಡಬಲ್ಲೆವು ಎಂಬುದರ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಅವುಗಳ ಪ್ರಯೋಗಿಸಲು ಹಾತೊರೆಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ತನ್ನತನದ ಸಾಮರ್ಥ್ಯ ಮತ್ತು ಚಿತ್ರಣವನ್ನು ಗುರುತಿಸಿಕೊಳ್ಳುವ ಆರಂಭವಾಗಿರುತ್ತದೆ.

ಬಹಳಷ್ಟು ಪೋಷಕರು ಅದನ್ನು ನಿಯಂತ್ರಿಸಲು ಹಾತೊರೆಯುತ್ತಾರೆ. ಗಮನಿಸಬೇಕು, ನಿಯಂತ್ರಣದಲ್ಲೂ ಇಡಬೇಕು. ಆದರೆ ಆ ನಿಯಂತ್ರಣವು ಸಕಾರಣವಾಗಿರಬೇಕು. ನನಗೆ ಇಷ್ಟವಿಲ್ಲ ಮಾಡಬೇಡ. ಸುಮ್ಮನೆ ಅದೆಲ್ಲಾ ಯಾಕೆ? ಈಗ ಸುಮ್ಮನೆ ಕೂತ್ಕೊಂಡಿದ್ರೆ ಸರಿ ಹೋಯ್ತು. ನನಗೆ ಮುಂಚೆನೇ ತಲೆ ಸರಿ ಇಲ್ಲ, ಇನ್ನು ನೀನು ಬೇರೆ ರೇಗಿಸಬೇಡ; ಈ ಬಗೆಯ ಹಲವು ಕಾರಣಗಳಿಂದ ಮಕ್ಕಳನ್ನು ನಿಯಂತ್ರಿಸಲು ಹೋಗಬಾರದು.

4. ಬಹಳಷ್ಟು ಪೋಷಕರು ತಮ್ಮ ದೌರ್ಬಲ್ಯದ ಕಾರಣದಿಂದ ಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ತಮಗಿರುವ ದುರ್ಬಲ ತನ್ನತನದ ಚಿತ್ರಣದಿಂದಾಗಿ ಮಕ್ಕಳು ರೂಪಿಸಿಕೊಳ್ಳಬಹುದಾದ ಬಲವಾದ ಮತ್ತು ಸುಂದರವಾದ ಮಗುತನದ ಚಿತ್ರಣವನ್ನು ಹಾಳುಗೆಡವುತ್ತಾರೆ.

ಐದರಿಂದ ಆರರವರೆಗೆ

1. ಗುತನವು ವಿಸ್ತಾರಗೊಳ್ಳುವ, ಬದಲಾಗುವ ಹಂತವಿದು. ಸ್ಥಿತ್ಯಂತರದ ಮಜಲಿದು ‘ನಾನು’ ಇಂದ ‘ನಾವು’, ‘ನನ್ನ’ ಇಂದ ‘ನಮ್ಮ’. ನಮ್ಮ ಅಗತ್ಯಗಳೇನು, ನಾವು ಎಂಬ ಗುಂಪಿಗೆ ಏನು ಬೇಕು, ಅದು ಹೇಗಿರಬೇಕು ಎಂಬ ಆಸಕ್ತಿಗಳು ಮೊಳೆಯುವುದು ಈ ವಯಸ್ಸುಗಳಲ್ಲಿ.

2. ಬಾಲವಾಡಿಯಲ್ಲಿ ಮಕ್ಕಳಿಗೆ ತಮಗೆ ಏನು ಬೇಕು, ಯಾವುದನ್ನು ಆಸೆ ಪಡುತ್ತೇವೆ, ಭಾವಿಸುವುದು ಎಂದರೇನು ಎಂದೆಲ್ಲಾ ಸಂವಹನದ ಮೂಲಕ ಮನದಟ್ಟು ಮಾಡುತ್ತಾರೆ.

3. ಐದಾರು ವರ್ಷದ ಮಕ್ಕಳು ಭಾಷೆಯಲ್ಲಿ ತಮ್ಮನ್ನೂ ಮತ್ತು ತಮ್ಮವರ ಸಂಬಂಧ ಮತ್ತು ಗುರುತುಗಳನ್ನೂ ವಿವರಿಸುವಷ್ಟರ ಮಟ್ಟಿಗೆ ಮುಂದುವರೆದಿರುತ್ತಾರೆ.

ಬಾಲ್ಯಾವಸ್ಥೆಯ ಮಧ್ಯಕಾಲ

ಬಾಲ್ಯದ ಮಧ್ಯಕಾಲ ಎನ್ನಬಹುದಾದ ಏಳರಿಂದ ಹನ್ನೊಂದು ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ತಮ್ಮನ್ನು ಮಕ್ಕಳು ಗುರುತಿಸಿಕೊಳ್ಳಲಾರಂಭಿಸುತ್ತಾರೆ. ಇತರರೊಂದಿಗೆ ಹೇಗಿರಬೇಕು, ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಸಾಮರ್ಥ್ಯವೂ ಈ ಹಂತಕ್ಕಾಗಲೇ ರೂಢಿಯಾಗತೊಡಗುತ್ತಿರುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ ಎಂದೂ ಅವರು ಗಮನಿಸುತ್ತಿರುತ್ತಾರೆ.

ಹಾಗೆಯೇ ಇತರರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮನೆಯವರಲ್ಲದ ಇತರರ ಬಗ್ಗೆ ಆಸಕ್ತಿ ತೋರುತ್ತಾರೆ. ಕೆಲವರನ್ನು ಇಷ್ಟಪಡುವುದಿಲ್ಲ. ಕೆಲವರನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ತಮ್ಮನ್ನು ಇತರರೊಂದಿಗೆ ಮತ್ತು ತಮ್ಮ ಸ್ಥಿತಿಗತಿಗಳನ್ನು ಇತರರ ಸ್ಥಿತಿಗತಿಗಳೊಂದಿಗೆ ಹೋಲಿಸಿಕೊಂಡು ನೋಡುವ ಸಾಮರ್ಥ್ಯವೂ ಈ ಮಧ್ಯಕಾಲದ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ.

ಮುಂದೆ ವಯಸ್ಕರಾಗುವ ಮಕ್ಕಳ ಗ್ರಹಿಕೆ ಮತ್ತು ಅನುಭವಗಳ ಈ ಹಂತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಹಂತದ ಮಗುತನವು ಎಚ್ಚರಿಕೆಯಿಂದ ರೂಪುಗೊಂಡರೆ ಮುಂದೆ ವ್ಯಕ್ತಿಯ ತನ್ನತನವೂ ಅದಕ್ಕೆ ಪೂರಕವಾಗಿ ರೂಪುಗೊಳ್ಳುತ್ತದೆ. ಮಗುತನವೇ ವ್ಯಕ್ತಿಯ ತನ್ನತನವಾಗಿ ರೂಪಾಂತರಗೊಳ್ಳುವುದೆಂಬ ಸ್ಪಷ್ಟ ಅರಿವು ಮಗುವನ್ನು ಪಾಲಿಸುವ ಹಿರಿಯರಿಗೆ ಇರಬೇಕು.

ಮಗುತನದ ರೂಪಾಂತರ

ಮಗುತನವು ತನ್ನತನವಾಗಿ ಸಹಜವಾಗಿ ರೂಪಾಂತರಗೊಳ್ಳುತ್ತಿದ್ದರೆ ಕೆಲವು ಲಕ್ಷಣಗಳನ್ನು ಗುರುತಿಸಬಹುದು.

1. ಹೆಚ್ಚು ಸಮತೋಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ವಿವರಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ವಿವರಿಸಿಕೊಳ್ಳಲೇ ಹೋಗುವುದಿಲ್ಲ. ಕೆಲವರು ಎಷ್ಟೋ ದೊಡ್ಡವರಾಗಿರುತ್ತಾರೆ. ದೊಡ್ಡದೊಡ್ಡ ಲೇಖಕರು, ಸಂಗೀತಗಾರರು, ಕಲಾವಿದರಾಗಿರುತ್ತಾರೆ. ಕೆಲವೊಮ್ಮೆ ಸಾಮಾನ್ಯ ಮನೆವಾರ್ತೆಯ ಮಹಿಳೆಯೋ, ಉದ್ಯೋಗಸ್ಥ ಪುರುಷನೋ ಆಗಿರುತ್ತಾರೆ.

ಆದರೆ ಅವರು ಬಾಯಿ ಬಿಟ್ಟರೇನೇ ತಮ್ಮ ಬಗ್ಗೆ ವಿವರಣೆ. ಇದು ಎಷ್ಟೋ ಬಾರಿ ಸಂದರ್ಭಾನುಸಾರವಾಗಿರುವುದೇ ಇಲ್ಲ. ವರ್ತಮಾನದ ಸಂಗತಿಗಳನ್ನು ತಮ್ಮ ಭೂತಕಾಲದ ಅನುಭವಗಳಿಗೆ ಮತ್ತು ತಮ್ಮ ಮನೆಯವರ ಕುರಿತಾದ ವಿಷಯಗಳಿಗೆ ಕೊಂಡಿ ಬೆಸೆಯುತ್ತಾರೆ.

ಹೇಳ್ತಾರೆ, ಹೇಳ್ತಾರೆ, ಹೇಳ್ತಾನೇ ಇರ್ತಾರೆ; ತಮ್ಮ ತಂದೆ ತಾಯಿ, ಅದ್ಯಾವುದೋ ಅಂಗಡಿ, ಅಲ್ಲಿ ಸಾಮಾನುಗಳನ್ನು ತರುತ್ತಿದ್ದದ್ದು, ತಮ್ಮ ಗುರುಗಳು, ತಾವು ಮದುವೆಯಾದಾಗ ಏನಾಯ್ತು; ಯಾವ ವಿಷಯವಾದರೂ ಪ್ರಸ್ತುತ ವಿಷಯಕ್ಕೆ ತಗುಲಿಕೊಳ್ಳಬಹುದು. ಕೇಳುವವರಿಗೆ ಅವುಗಳನ್ನು ಕೇಳುವ ಯಾವ ಅಗತ್ಯವೂ ಇರುವುದಿಲ್ಲ. ಆದರೂ ಕೇಳಲೇಬೇಕಾಗುತ್ತದೆ.

“ಓ, ಹಾಗಾ? ಸರಿ, ಆಮೇಲೆ?” ಇತ್ಯಾದಿ ತಾವು ಕೇಳುತ್ತಿದ್ದೇವೆಂಬ ಸೂಚನೆ ನೀಡಲು ಹುಸಿ ಆಸಕ್ತಿ ತೋರುತ್ತಿರುತ್ತಾರೆ. ಕೇಳುಗರಿಗೆ ಅವರ ಮಾತನ್ನು ಎಲ್ಲಿ ತುಂಡರಿಸಬೇಕೆಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ತೀರಾ ಅನಾಮತ್ತಾಗಿ ಮಾತಿನ ಸರಣಿಯನ್ನು ತುಂಡರಿಸಿ ಮುಂದೆ ಹೋಗಬೇಕಾಗುತ್ತದೆ.

ಒಂದು ವೇಳೆ ಹಾಗೆ ಮಾತಾಡುತ್ತಿರುವವರೊಡನೆ ಸ್ನೇಹ ಮತ್ತು ಸಲುಗೆ ಇದ್ದಲ್ಲಿ “ಮಾತು ನಿಲ್ಲಿಸು” ಎಂದು ನೇರವಾಗಿ ಹೇಳಬಹುದಾಗಿರುತ್ತದೆ. ಇಲ್ಲವಾದರೆ, ಯಾರಿಗಾದರೂ ‘ನನಗೆ ಫೋನ್ ಮಾಡು’ ಎಂದು ಮೆಸೇಜ್ ಮಾಡಿ, ಫೋನ್ ಬಂದಾದ ಮೇಲೆ, ‘ಓ, ಅರ್ಜೆಂಟ್ ಕಾಲ್. ನನಗೆ ಏನೋ ಕೆಲಸವಿದೆ. ಮತ್ತೆ ಸಿಗೋಣ. ನೀವು ಹೇಳುತ್ತಿದ್ದದ್ದು ತುಂಬಾ ಇಂಟರೆಸ್ಟಿಂಗ್’ ಅಂತ ರೀಲ್ ಬಿಟ್ಟು ಓಡುತ್ತಾರೆ.

ಅವರಿಗೆ ಅವರ ಬದುಕು, ಸಂಬಂಧಗಳು, ನೋವು ನಲಿವುಗಳು, ನೆನಪುಗಳು, ಹೆಮ್ಮೆ ಅಪಮಾನಗಳೆಲ್ಲಾ ನಿಜಕ್ಕೂ ಆಪ್ತವೂ, ಮಹತ್ತರವೂ ಆಗಿರುತ್ತದೆ. ಆದರೆ, ಸಮಯಾಸಮಯದ ಪ್ರಜ್ಞೆ ಇಲ್ಲದೇ ಹೇಳುವುದರಿಂದ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ನಿಷ್ಟುರವಾಗಿಯೇ ಗಮನಿಸಬೇಕು. ನಮಗೆ ನಮ್ಮ ಅನುಭವಗಳಾಗಲಿ, ನೆನಪುಗಳಾಗಲಿ ಮುಖ್ಯವೂ ಮಹತ್ವದ್ದೂ ಆಗಿರುತ್ತದೆ.

ಆದರೆ ನನ್ನೆದುರಿನ ವ್ಯಕ್ತಿಗೇನಾಗಬೇಕು ಅವುಗಳನ್ನು ಕಟ್ಟಿಕೊಂಡು? ಸಂದರ್ಭಾನುಸಾರವೋ ಅಥವಾ ಕೋರಿಕೆಯ ಮೇರೆಗೋ ಅಥವಾ ಉದಾಹರಣೆಯ ಸಲುವಾಗಿಯೋ ಹಂಚಿಕೊಳ್ಳಬೇಕು. ಅದೂ ಚಿಕ್ಕದಾಗಿ. ಇಲ್ಲದಿದ್ದರೆ ಆ ವ್ಯಕ್ತಿಗಳು ಫೋನ್ ಮಾಡಿದರೆ ಇತರರು ಕರೆ ಸ್ವೀಕರಿಸಲು ಹೆದರುತ್ತಾರೆ, ಏಕೆಂದರೆ, ‘ಒಂದೆರಡು ನಿಮಿಷ ಮಾತಾಡಬಹುದಾ?’ ಎಂದೂ ಕೇಳುವುದಿಲ್ಲ. ಸುಮ್ಮನೆ ಮಾತಾಡಲು ಪ್ರಾರಂಭಿಸಿ ಅದು ಗಂಟೆಗಟ್ಟಲೆ ಹೋಗುತ್ತದೆ. ಕರೆ ಸ್ವೀಕರಿಸಿದವರ ಸಮಯ ಭಯಂಕರವಾಗಿ ಹಾಳಾಗಿರುತ್ತದೆ. ಸಮಯ ವ್ಯರ್ಥವಾಯಿತೆಂದರೆ ಅಷ್ಟು ಜೀವನವೇ ವ್ಯರ್ಥವಾಯಿತೆಂದು.

ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಬದುಕು. ಹಾಗಾಗಿ ಬದುಕು ಮತ್ತು ಸಮಯ ಎರಡೂ ಸಮಾನಾರ್ಥಕ ಪದಗಳು. ಸಮಯವನ್ನು ಕೊಟ್ಟರೆಂದರೆ ಅವರ ಜೀವನದ ಒಂದು ಭಾಗವನ್ನೇ ಕೊಟ್ಟಿದ್ದಾರೆಂದು ಅರ್ಥ. ಹಾಗಾಗಿ ನಾವು ನಮ್ಮ ಸಮಯವನ್ನೂ ಮತ್ತು ಇತರರ ಸಮಯವನ್ನೂ ಗೌರವಿಸುವುದರ ಮೂಲಕ ಜೀವನಪ್ರೀತಿಯನ್ನು ಅಭಿವ್ಯಕ್ತಿಸಬೇಕು.

ಮಗುತನವು ಸ್ವಾಸ್ಥ್ಯಪೂರ್ಣವಾದ ತನ್ನತನಕ್ಕೆ ಬದಲಾಗಿರುವುದರ ಸ್ಪಷ್ಟ ಲಕ್ಷಣವೇ ತನ್ನ ಸಮಯ ಮತ್ತು ಇತರರ ಸಮಯವನ್ನು ಜೀವನದ ಮೌಲಿಕ ಕ್ಷಣಗಳನ್ನಾಗಿ ರೂಪಿಸಿಕೊಳ್ಳುವುದು.
ಮಗುವು ತನ್ನ ಬಾಲ್ಯದಲ್ಲಿಯೇನಾದರೂ ತನ್ನ ತಾನು ವಿವರಿಸಿಕೊಂಡು ಸುಧೀರ್ಘವಾಗಿ ಮಾತಾಡುತ್ತಲೇ ಇರುವ ಲಕ್ಷಣಗಳನ್ನು ತೋರಿದರೆ ಎಚ್ಚರವಹಿಸಬೇಕು. ಅವರ ಮಗುತನವು ತನ್ನತನಕ್ಕೆ ರೂಪಾಂತರಗೊಳ್ಳುವ ಅವಧಿಯಲ್ಲಿಯೇ ಅವರಿಗೆ ಅದರ ರೂಢಿ ತಪ್ಪಿಸಬೇಕು.

2. ಭ್ರಾಮಕವಾದ ಆದರ್ಶದ ತನ್ನತನದ ಪ್ರತಿಮೆಗೂ ಮತ್ತು ತನ್ನ ನಿಜವಾಗಿರುವ ತನ್ನತನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯುತ್ತಾರೆ.
ತಾನು, ತನ್ನ ಸಾಮರ್ಥ್ಯ, ದೌರ್ಬಲ್ಯ, ಸಂಪನ್ಮೂಲಗಳು, ಸಾಧ್ಯತೆಗಳು; ಇತ್ಯಾದಿಗಳನ್ನು ಅರಿತುಕೊಂಡು ಅವುಗಳ ಆಧಾರದಲ್ಲಿ ತನ್ನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಹೋಗುವುದು ತನ್ನತನದ ಸಾಕ್ಷಾತ್ಕಾರವಾಗಿರುವವರಿಗೆ ಸಾಧ್ಯ. ಇಲ್ಲವಾದರೆ ಭ್ರಾಮಕವಾದ ಆದರ್ಶದ ಅಥವಾ ಹಗಲುಗನಸಿನ ಗೋಪುರಗಳಲ್ಲಿ ತಮ್ಮನ್ನು ಕಂಡುಕೊಂಡು ವಾಸ್ತವದ ಬದುಕಿನಲ್ಲಿ ಅವರು ತಮ್ಮತನವನ್ನು ಕಾಣುವುದೇ ಇಲ್ಲ.

3. ತನ್ನ ಸಾಮರ್ಥ್ಯವನ್ನು ಮುಂದಿಡುವುದು, ತಾನು ಹೇಗಿದ್ದೇನೆಂದು ಮುಂದಿಡುವುದಲ್ಲ.
ಕೆಲವು ವ್ಯಕ್ತಿಗಳನ್ನು ಗಮನಿಸಿ. ತಾನೆಷ್ಟು ಭಾವುಕವಾದ ವ್ಯಕ್ತಿ, ತಾನೆಷ್ಟು ಮರುಗುತ್ತೇನೆ, ತನಗೆ ಖುಷಿಯಾದರೆ ಹೇಗೆ ವರ್ತಿಸುತ್ತೇನೆ, ತನಗೆ ಅಪಮಾನವಾದರೆ ಹೇಗೆ ತಡೆದುಕೊಳ್ಳಲಾರದೇ ತಳಮಳಿಸುತ್ತೇನೆ, ತಾನು ಹೇಗೆ ವ್ಯಕ್ತಿಗಳನ್ನು ಹಚ್ಚಿಕೊಳ್ಳುತ್ತೇನೆ; ಇಂತಹ ತಮ್ಮ ವರ್ತನೆಗಳ ಬಗ್ಗೆಯೇ ಮಾತಾಡುತ್ತಾರೆ.

ಅದನ್ನೇ ಹೇಳುತ್ತಿರುತ್ತಾರೆ. ಆದರೆ, ಅವರ ತನ್ನತನವು ಸರಿಯಾಗಿ ರೂಪಾಂತರವಾಗಿದ್ದ ಪಕ್ಷದಲ್ಲಿ, ‘ತಾನು ಯಾವ ಕೆಲಸ ಮಾಡಬಲ್ಲೆ? ತನ್ನ ಸಾಮರ್ಥ್ಯವೇನು? ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಕೇಳುಗರ ಯಾವ ಕೆಲಸಕ್ಕೆ ಉಪಯೋಗಕ್ಕೆ ಬರಬಲ್ಲದು? ಇತ್ಯಾದಿಗಳನ್ನು ತಮ್ಮ ಕೇಳುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.

ನಾನು ಹೇಗೆ ವರ್ತಿಸುತ್ತಿದ್ದೇನೆ, ನನ್ನ ಅಂಟಿಕೆ, ವ್ಯಾಮೋಹಗಳೇನು ಎಂದು ನನಗೆ ನನ್ನತನವನ್ನು ರೂಪಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಬೇಕಾಗಿರುವುದು. ಇತರರಿಗೆ ಅದನ್ನು ವಿವರಿಸುವ ಅಗತ್ಯವಿಲ್ಲ. ಅವರಿಗೆ ತಿಳಿಯಬೇಕಾಗಿರುವುದು ತನ್ನ ಸಾಮರ್ಥ್ಯ. ಉಳಿದದ್ದು ಅವರೇ ನೋಡುತ್ತಾರಲ್ಲಾ, ಅನುಭವಿಸುತ್ತಾರಲ್ಲಾ!

4. ತನ್ನತನದಲ್ಲಿ ಮೂಡುವ ವ್ಯಕ್ತಿಗತವಾದ ಭಾವ

ನಾನು ಎಂಬ ಭಾವವು ತನ್ನತನ ಎಂಬ ಅರಿವಿನ ಜೊತೆಗೆ ಒಂದಾಗಿ ಕೆಲಸ ಮಾಡುವುದು. ಇದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಂಬಂಧಗಳನ್ನು ಕುರಿತು ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ಹದವಾದ ಮತ್ತು ಮಧುರವಾದ ವಾತಾವರಣವನ್ನು ತಮಗೂ ಸೃಷ್ಟಿಸಿಕೊಳ್ಳಲು ಸಾಧ್ಯ, ಇತರರಿಗೂ ಆ ಅನುಭವ ನೀಡಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಿದ್ಧಾಂತ ಮತ್ತು ಪತ್ರಿಕೋದ್ಯಮ

Published

on

  • ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್

ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.

ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.

ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.

ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.

ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.

ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,

ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.

ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.

ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.

ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?

ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.

ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.

ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?

‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು

Published

on

ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.

ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ.‌ ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.

ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.

ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.

ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.

ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ‌ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್‌ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending