Connect with us

ಅಂತರಂಗ

ಅರಿಮೆಯ ಅರಿವಿರಲಿ-52 : ಮಗುತನದಿಂದ ತನ್ನತನ

Published

on

  • ಯೋಗೇಶ್ ಮಾಸ್ಟರ್

ಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ರೂಢಿಗೊಳಿಸಿದರೆ, ಅಥವಾ ಅದರ ಬಗ್ಗೆ ಅರಿವು ಮೂಡಿಸಿದರೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಬಲ್ಲರು.

ಧೈರ್ಯ, ಹಟಮಾರಿತನ, ವಿನಯ, ಸಂಕೋಚ, ನಿಸ್ಸಂಕೋಚ, ಭಯ, ಮೌನ, ಮಾತು, ಕೆಲಸ, ನಿರ್ಗೆಲಸ; ಹೀಗೆ ಎಲ್ಲರೂ ಅಗತ್ಯವಿರುವಷ್ಟು ಹೊಂದಬಹುದು ಮತ್ತು ಉಪಯೋಗಿಸಬಹುದು.
ಇದನ್ನು ಬಹಳ ಗಂಭೀರವಾಗಿ ಗಮನಿಸೋಣ. ಯಾರೊಬ್ಬ ಎಲ್ಲದಕ್ಕೂ ಸಂಕೋಚ ಪಡುತ್ತಾನೋ ಅಥವಾ ಎಲ್ಲದಕ್ಕೂ ನಿರ್ಲಜ್ಜೆಯಿಂದ ಮುಂದಾಗುತ್ತಾನೋ, ಅವನಲ್ಲಿ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ.

ಅದೇ ಒಬ್ಬ ವ್ಯಕ್ತಿ ಕೆಲವೊಂದು ವಿಷಯಕ್ಕೆ ಸಹಜವಾಗಿ ನಾಚಿಕೆಪಟ್ಟುಕೊಳ್ಳುತ್ತಾನೆ. ಅಗತ್ಯವಿರುವ ಕೆಲವು ವಿಷಯಗಳಿಗೆ ಸಂಕೋಚವಿಲ್ಲದೇ ಮುಂದಾಗುತ್ತಾನೆ ಎಂದರೆ ಅವನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಲಕ್ಷಣವನ್ನು ತೋರುತ್ತಿದ್ದಾನೆಂದು ಅರ್ಥ.

ಆತ್ಮಗೌರವ ಅಥವಾ ಸೆಲ್ಫ್ ಎಸ್ಟೀಮ್ ಎಂಬುದು ವ್ಯಕ್ತಿತ್ವ ವಿಕಾಸ, ಸಾಮಾಜಿಕ ಮನಶಾಸ್ತ್ರ, ಚಿಕಿತ್ಸಕ (ಕ್ಲಿನಿಕಲ್) ಮನಶಾಸ್ತ್ರ, ಪುರೋಗಾಮಿತ್ವ (ಡೆವಲಪ್ ಮೆಂಟಲ್) ಮನಶಾಸ್ತ್ರ; ಹೀಗೆ ಹಲವು ಶಾಖೆಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಇದು ತನ್ನತನದ ಪರಿಕಲ್ಪನೆಯ ಮೇಲೆಯೇ ಅವಲಂಬಿತವಾಗಿದ್ದು ರೋಸೆನ್‍ಬರ್ಗ್ (1965) ಎಂಬ ಮನಶಾಸ್ತ್ರಜ್ಞ ಹೇಳುವಂತೆ, ಸ್ವಾಭಿಮಾನ ಎಂದರೆ ಒಬ್ಬ ವ್ಯಕ್ತಿಯ ಸಮಗ್ರವಾದ ತನ್ನತನದ ಸಕಾರಾತ್ಮಕ ಮೌಲ್ಯಮಾಪನ. ಜೊತೆಗೆ ತನ್ನನ್ನು ತಾನು ಗೌರವಿಸಿಕೊಳ್ಳುವುದು ಮತ್ತು ತನ್ನನ್ನು ಸತ್ವಪೂರ್ಣ ವ್ಯಕ್ತಿ ಎಂದು ಪರಿಗಣಿಸಿಕೊಳ್ಳುವುದು.

ಮಗುತನದ ಹಂತಗಳು

ಮಗುವಿನ ಬಾಲ್ಯದಲ್ಲಿಯೇ ಗೌರವಪೂರ್ಣವಾದ ತನ್ನತನದ ಭಾವವನ್ನು ರೂಪುಗೊಳಿಸುವ ಜವಾಬ್ದಾರಿಯನ್ನು ಮಗುವನ್ನು ನೋಡಿಕೊಳ್ಳುವ ಹಿರಿಯರು ಹೊರಬೇಕು.

ಸೊನ್ನೆ ವರ್ಷದಿಂದ ಎರಡು ವರ್ಷಗಳ ವರೆಗೆ

1. ಮಗುವು ಸತತವಾದ ಗಮನವನ್ನು ಪಡೆಯುತ್ತಿದ್ದರೆ, ಅದಕ್ಕೆ ಪ್ರೀತಿಯಿಂದ ಕೂಡಿರುವ ಸಂಬಂಧದ ಅನುಭವವಾಗುತ್ತಿದ್ದರೆ, ಆ ಮಗುವು ಸಕಾರಾತ್ಮಕವಾದ ತನ್ನತನದ ಭಾವವನ್ನು ಹೊಂದುತ್ತದೆ.

2. ಮಗುವು ತನಗಾಗುತ್ತಿರುವ ಅನುಭವದ ಆಧಾರದಲ್ಲಿ ಆದ್ಯತೆಗಳನ್ನು ಕಂಡುಕೊಳ್ಳುತ್ತದೆ. ಯಾವುದು ಮೊದಲು ಮುಖ್ಯ, ಬೇಕಾದದ್ದು, ಹಿತ ನೀಡುವಂತದ್ದು; ಇಂತಹ ಅನುಭವಗಳನ್ನು ಆಧರಿಸಿರುವ ಆ ಆದ್ಯತೆಗಳಿಂದ ತನ್ನತನದ ಸಹಜವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತದೆ.

3. ಅಂಬೆಗಾಲಿಡುವ ಶಿಶುವಿನ ಇತಿಮಿತಿಯನ್ನು ನಿಯಂತ್ರಿಸುವ ಕಟ್ಟಳೆ ಸುರಕ್ಷಿತ ಭಾವವನ್ನು ಒದಗಿಸುತ್ತದೆ. ಆದರೆ ಆ ಕಟ್ಟಳೆ ಮೃದುವಾಗಿಯೂ ಮತ್ತು ದೃಢವಾಗಿಯೂ ಇರಬೇಕು. ಉದಾಹರಣೆಗೆ, “ನೀನು ಗೇಟಿನ ಆಚೆ ಹೋಗಬಾರದು. ಹಾಗೆ ಹೋಗಲು ನಾನು ಬಿಡುವುದಿಲ್ಲ. ಅಲ್ಲಿ ಗಾಡಿಗಳು ಬರುತ್ತವೆ. ಅಪಾಯವಿದೆ” ಎಂಬ ನಿಯಂತ್ರಣವು ಇರಬೇಕು.

ಆದರೆ ಅದು, “ಹೋಗಬಾರದು ಎಂದರೆ ಹೋಗಬಾರದು. ಹೋದರೆ ಏಟು ಕೊಡ್ತೀನಿ. ಹೇಳಿದಷ್ಟು ಕೇಳು” ಎನ್ನುವ ಮಾತಿನ ಬಗೆಯು ಸಕಾರಾತ್ಮಕವಾದ ತನ್ನತನವನ್ನು ರೂಪಿಸುವ ಬದಲು ಅರಿಮೆಯನ್ನು ಹುಟ್ಟಿಸುವ ಅಥವಾ ದೌರ್ಬಲ್ಯಕ್ಕೆ ಎಡೆಮಾಡುವಂತಹ ನಕಾರಾತ್ಮಕ ಗುಣಗಳನ್ನು ರೂಢಿಸುತ್ತದೆ.

4. ಮಗುವು ಎರಡು ವರ್ಷದ ಹೊತ್ತಿಗೆ ಭಾವವನ್ನು ಮತ್ತು ಭಾಷೆಯನ್ನು ಗ್ರಹಿಸಲು ಆರಂಭಿಸಿದ್ದು ನಾನು ಎಂಬ ಭಾವವು ರೂಪುಗೊಳ್ಳುತ್ತಿರುತ್ತದೆ. ಅಲ್ಲಿಗೆ ತನ್ನತನದ ಸಂರಚನೆ ಪ್ರಾರಂಭವಾಯಿತೆಂದೇ ಅರ್ಥ. ಮಗುವಿನ ಗಿಲಕಿಯನ್ನೋ ಅಥವಾ ಅದು ನಿತ್ಯ ಬಳಸುವ ವಸ್ತುವನ್ನೋ ತೋರಿ, “ಇದು ಯಾರಿಗೆ ಬೇಕು?” “ಇದು ಯಾರದು?” ಎಂದರೆ, ನನಗೆ, ನನ್ನದು ಎಂಬ ಭಾವವನ್ನು ವ್ಯಕ್ತಪಡಿಸಲು ಅದಕ್ಕೆ ಸಾಧ್ಯವಾಗುತ್ತದೆ. ಅವುಗಳೆಲ್ಲಾ ತನ್ನತನದ ಆರಂಭಿಕ ಪ್ರಕಟಣೆಗಳೇ.

ಮೂರರಿಂದ ನಾಲ್ಕರವರೆಗೆ

1. ಮೂರು ಮತ್ತು ನಾಲ್ಕುವರ್ಷದ ಮಗುವು ತನ್ನನ್ನು ತಾನು ಪ್ರತ್ಯೇಕ ಮತ್ತು ಭಿನ್ನ ವ್ಯಕ್ತಿಗಳೆಂದು ನೋಡಿಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿರುವ ವಸ್ತುಗಳು, ಉಡುಪುಗಳು, ಬಂದವರು ಮಾತಾಡಿಸುವ ರೀತಿ; ಇವೆಲ್ಲವೂ ಬೇರೆ ಹಿರಿಯರದ್ದಕ್ಕಿಂತ ಭಿನ್ನ ಎಂಬುದನ್ನು ಗುರುತಿಸುತ್ತವೆ.

ತಮ್ಮದು ಯಾವುದು, ಇತರರದು ಯಾವುದು ಎಂದು ವಸ್ತುಗಳನ್ನು ಮಾತ್ರ ಗುರುತಿಸುವುದಲ್ಲ. ವ್ಯಕ್ತಿತ್ವವನ್ನೂ ಕೂಡಾ ಕಂಡುಕೊಳ್ಳುತ್ತಿರುತ್ತವೆ. ಆದರೆ ಅದಿನ್ನೂ ಬಿರಿಯುವ ಹಂತದಲ್ಲಿದ್ದರೂ ಪ್ರಕ್ರಿಯೆ ಅದಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ.

2. ತನ್ನತನದ ಬಗ್ಗೆ ಇರುವ ಅರಿವು ಬಹುಪಾಲು ಶಾಬ್ಧಿಕ ವರ್ಣನೆಯಾಗಿರುತ್ತದೆ. ತಾನು ಹೇಗೆ ಇದ್ದೇನೆ? ತಾನು ಏನು ಮಾಡುತ್ತೇನೆ? ತನಗೆ ಏನು ಬೇಕು? ಈ ರೀತಿ. ಆದರೆ ಅದು ನಾನು ಹೀಗೆ ಇರುವುದು, ನನಗೆ ಹೀಗಿರಬೇಕು; ಈ ರೀತಿಯ ಹಕ್ಕು ಅಥವಾ ಅಧಿಕಾರದ ತಳಹದಿಯದ್ದಾಗಿದ್ದು ತೀರ್ಮಾನ ತೆಗೆದುಕೊಳ್ಳುವಂತದ್ದಾಗಿರುವುದಿಲ್ಲ.

3. ಶಾಲೆಗೆ ಅಥವಾ ಬಾಲವಾಡಿಗೆ ಹೋಗ ವಯಸ್ಸಿಗೆ ಬರುವ ಮಕ್ಕಳಾಗಲೇ ಸ್ವತಂತ್ರವಾಗಿ ತಾವೇನು ಮಾಡಬಲ್ಲೆವು ಎಂಬುದರ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಅವುಗಳ ಪ್ರಯೋಗಿಸಲು ಹಾತೊರೆಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ತನ್ನತನದ ಸಾಮರ್ಥ್ಯ ಮತ್ತು ಚಿತ್ರಣವನ್ನು ಗುರುತಿಸಿಕೊಳ್ಳುವ ಆರಂಭವಾಗಿರುತ್ತದೆ.

ಬಹಳಷ್ಟು ಪೋಷಕರು ಅದನ್ನು ನಿಯಂತ್ರಿಸಲು ಹಾತೊರೆಯುತ್ತಾರೆ. ಗಮನಿಸಬೇಕು, ನಿಯಂತ್ರಣದಲ್ಲೂ ಇಡಬೇಕು. ಆದರೆ ಆ ನಿಯಂತ್ರಣವು ಸಕಾರಣವಾಗಿರಬೇಕು. ನನಗೆ ಇಷ್ಟವಿಲ್ಲ ಮಾಡಬೇಡ. ಸುಮ್ಮನೆ ಅದೆಲ್ಲಾ ಯಾಕೆ? ಈಗ ಸುಮ್ಮನೆ ಕೂತ್ಕೊಂಡಿದ್ರೆ ಸರಿ ಹೋಯ್ತು. ನನಗೆ ಮುಂಚೆನೇ ತಲೆ ಸರಿ ಇಲ್ಲ, ಇನ್ನು ನೀನು ಬೇರೆ ರೇಗಿಸಬೇಡ; ಈ ಬಗೆಯ ಹಲವು ಕಾರಣಗಳಿಂದ ಮಕ್ಕಳನ್ನು ನಿಯಂತ್ರಿಸಲು ಹೋಗಬಾರದು.

4. ಬಹಳಷ್ಟು ಪೋಷಕರು ತಮ್ಮ ದೌರ್ಬಲ್ಯದ ಕಾರಣದಿಂದ ಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ತಮಗಿರುವ ದುರ್ಬಲ ತನ್ನತನದ ಚಿತ್ರಣದಿಂದಾಗಿ ಮಕ್ಕಳು ರೂಪಿಸಿಕೊಳ್ಳಬಹುದಾದ ಬಲವಾದ ಮತ್ತು ಸುಂದರವಾದ ಮಗುತನದ ಚಿತ್ರಣವನ್ನು ಹಾಳುಗೆಡವುತ್ತಾರೆ.

ಐದರಿಂದ ಆರರವರೆಗೆ

1. ಗುತನವು ವಿಸ್ತಾರಗೊಳ್ಳುವ, ಬದಲಾಗುವ ಹಂತವಿದು. ಸ್ಥಿತ್ಯಂತರದ ಮಜಲಿದು ‘ನಾನು’ ಇಂದ ‘ನಾವು’, ‘ನನ್ನ’ ಇಂದ ‘ನಮ್ಮ’. ನಮ್ಮ ಅಗತ್ಯಗಳೇನು, ನಾವು ಎಂಬ ಗುಂಪಿಗೆ ಏನು ಬೇಕು, ಅದು ಹೇಗಿರಬೇಕು ಎಂಬ ಆಸಕ್ತಿಗಳು ಮೊಳೆಯುವುದು ಈ ವಯಸ್ಸುಗಳಲ್ಲಿ.

2. ಬಾಲವಾಡಿಯಲ್ಲಿ ಮಕ್ಕಳಿಗೆ ತಮಗೆ ಏನು ಬೇಕು, ಯಾವುದನ್ನು ಆಸೆ ಪಡುತ್ತೇವೆ, ಭಾವಿಸುವುದು ಎಂದರೇನು ಎಂದೆಲ್ಲಾ ಸಂವಹನದ ಮೂಲಕ ಮನದಟ್ಟು ಮಾಡುತ್ತಾರೆ.

3. ಐದಾರು ವರ್ಷದ ಮಕ್ಕಳು ಭಾಷೆಯಲ್ಲಿ ತಮ್ಮನ್ನೂ ಮತ್ತು ತಮ್ಮವರ ಸಂಬಂಧ ಮತ್ತು ಗುರುತುಗಳನ್ನೂ ವಿವರಿಸುವಷ್ಟರ ಮಟ್ಟಿಗೆ ಮುಂದುವರೆದಿರುತ್ತಾರೆ.

ಬಾಲ್ಯಾವಸ್ಥೆಯ ಮಧ್ಯಕಾಲ

ಬಾಲ್ಯದ ಮಧ್ಯಕಾಲ ಎನ್ನಬಹುದಾದ ಏಳರಿಂದ ಹನ್ನೊಂದು ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ತಮ್ಮನ್ನು ಮಕ್ಕಳು ಗುರುತಿಸಿಕೊಳ್ಳಲಾರಂಭಿಸುತ್ತಾರೆ. ಇತರರೊಂದಿಗೆ ಹೇಗಿರಬೇಕು, ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಸಾಮರ್ಥ್ಯವೂ ಈ ಹಂತಕ್ಕಾಗಲೇ ರೂಢಿಯಾಗತೊಡಗುತ್ತಿರುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ ಎಂದೂ ಅವರು ಗಮನಿಸುತ್ತಿರುತ್ತಾರೆ.

ಹಾಗೆಯೇ ಇತರರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮನೆಯವರಲ್ಲದ ಇತರರ ಬಗ್ಗೆ ಆಸಕ್ತಿ ತೋರುತ್ತಾರೆ. ಕೆಲವರನ್ನು ಇಷ್ಟಪಡುವುದಿಲ್ಲ. ಕೆಲವರನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ತಮ್ಮನ್ನು ಇತರರೊಂದಿಗೆ ಮತ್ತು ತಮ್ಮ ಸ್ಥಿತಿಗತಿಗಳನ್ನು ಇತರರ ಸ್ಥಿತಿಗತಿಗಳೊಂದಿಗೆ ಹೋಲಿಸಿಕೊಂಡು ನೋಡುವ ಸಾಮರ್ಥ್ಯವೂ ಈ ಮಧ್ಯಕಾಲದ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ.

ಮುಂದೆ ವಯಸ್ಕರಾಗುವ ಮಕ್ಕಳ ಗ್ರಹಿಕೆ ಮತ್ತು ಅನುಭವಗಳ ಈ ಹಂತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಹಂತದ ಮಗುತನವು ಎಚ್ಚರಿಕೆಯಿಂದ ರೂಪುಗೊಂಡರೆ ಮುಂದೆ ವ್ಯಕ್ತಿಯ ತನ್ನತನವೂ ಅದಕ್ಕೆ ಪೂರಕವಾಗಿ ರೂಪುಗೊಳ್ಳುತ್ತದೆ. ಮಗುತನವೇ ವ್ಯಕ್ತಿಯ ತನ್ನತನವಾಗಿ ರೂಪಾಂತರಗೊಳ್ಳುವುದೆಂಬ ಸ್ಪಷ್ಟ ಅರಿವು ಮಗುವನ್ನು ಪಾಲಿಸುವ ಹಿರಿಯರಿಗೆ ಇರಬೇಕು.

ಮಗುತನದ ರೂಪಾಂತರ

ಮಗುತನವು ತನ್ನತನವಾಗಿ ಸಹಜವಾಗಿ ರೂಪಾಂತರಗೊಳ್ಳುತ್ತಿದ್ದರೆ ಕೆಲವು ಲಕ್ಷಣಗಳನ್ನು ಗುರುತಿಸಬಹುದು.

1. ಹೆಚ್ಚು ಸಮತೋಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ವಿವರಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ವಿವರಿಸಿಕೊಳ್ಳಲೇ ಹೋಗುವುದಿಲ್ಲ. ಕೆಲವರು ಎಷ್ಟೋ ದೊಡ್ಡವರಾಗಿರುತ್ತಾರೆ. ದೊಡ್ಡದೊಡ್ಡ ಲೇಖಕರು, ಸಂಗೀತಗಾರರು, ಕಲಾವಿದರಾಗಿರುತ್ತಾರೆ. ಕೆಲವೊಮ್ಮೆ ಸಾಮಾನ್ಯ ಮನೆವಾರ್ತೆಯ ಮಹಿಳೆಯೋ, ಉದ್ಯೋಗಸ್ಥ ಪುರುಷನೋ ಆಗಿರುತ್ತಾರೆ.

ಆದರೆ ಅವರು ಬಾಯಿ ಬಿಟ್ಟರೇನೇ ತಮ್ಮ ಬಗ್ಗೆ ವಿವರಣೆ. ಇದು ಎಷ್ಟೋ ಬಾರಿ ಸಂದರ್ಭಾನುಸಾರವಾಗಿರುವುದೇ ಇಲ್ಲ. ವರ್ತಮಾನದ ಸಂಗತಿಗಳನ್ನು ತಮ್ಮ ಭೂತಕಾಲದ ಅನುಭವಗಳಿಗೆ ಮತ್ತು ತಮ್ಮ ಮನೆಯವರ ಕುರಿತಾದ ವಿಷಯಗಳಿಗೆ ಕೊಂಡಿ ಬೆಸೆಯುತ್ತಾರೆ.

ಹೇಳ್ತಾರೆ, ಹೇಳ್ತಾರೆ, ಹೇಳ್ತಾನೇ ಇರ್ತಾರೆ; ತಮ್ಮ ತಂದೆ ತಾಯಿ, ಅದ್ಯಾವುದೋ ಅಂಗಡಿ, ಅಲ್ಲಿ ಸಾಮಾನುಗಳನ್ನು ತರುತ್ತಿದ್ದದ್ದು, ತಮ್ಮ ಗುರುಗಳು, ತಾವು ಮದುವೆಯಾದಾಗ ಏನಾಯ್ತು; ಯಾವ ವಿಷಯವಾದರೂ ಪ್ರಸ್ತುತ ವಿಷಯಕ್ಕೆ ತಗುಲಿಕೊಳ್ಳಬಹುದು. ಕೇಳುವವರಿಗೆ ಅವುಗಳನ್ನು ಕೇಳುವ ಯಾವ ಅಗತ್ಯವೂ ಇರುವುದಿಲ್ಲ. ಆದರೂ ಕೇಳಲೇಬೇಕಾಗುತ್ತದೆ.

“ಓ, ಹಾಗಾ? ಸರಿ, ಆಮೇಲೆ?” ಇತ್ಯಾದಿ ತಾವು ಕೇಳುತ್ತಿದ್ದೇವೆಂಬ ಸೂಚನೆ ನೀಡಲು ಹುಸಿ ಆಸಕ್ತಿ ತೋರುತ್ತಿರುತ್ತಾರೆ. ಕೇಳುಗರಿಗೆ ಅವರ ಮಾತನ್ನು ಎಲ್ಲಿ ತುಂಡರಿಸಬೇಕೆಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ತೀರಾ ಅನಾಮತ್ತಾಗಿ ಮಾತಿನ ಸರಣಿಯನ್ನು ತುಂಡರಿಸಿ ಮುಂದೆ ಹೋಗಬೇಕಾಗುತ್ತದೆ.

ಒಂದು ವೇಳೆ ಹಾಗೆ ಮಾತಾಡುತ್ತಿರುವವರೊಡನೆ ಸ್ನೇಹ ಮತ್ತು ಸಲುಗೆ ಇದ್ದಲ್ಲಿ “ಮಾತು ನಿಲ್ಲಿಸು” ಎಂದು ನೇರವಾಗಿ ಹೇಳಬಹುದಾಗಿರುತ್ತದೆ. ಇಲ್ಲವಾದರೆ, ಯಾರಿಗಾದರೂ ‘ನನಗೆ ಫೋನ್ ಮಾಡು’ ಎಂದು ಮೆಸೇಜ್ ಮಾಡಿ, ಫೋನ್ ಬಂದಾದ ಮೇಲೆ, ‘ಓ, ಅರ್ಜೆಂಟ್ ಕಾಲ್. ನನಗೆ ಏನೋ ಕೆಲಸವಿದೆ. ಮತ್ತೆ ಸಿಗೋಣ. ನೀವು ಹೇಳುತ್ತಿದ್ದದ್ದು ತುಂಬಾ ಇಂಟರೆಸ್ಟಿಂಗ್’ ಅಂತ ರೀಲ್ ಬಿಟ್ಟು ಓಡುತ್ತಾರೆ.

ಅವರಿಗೆ ಅವರ ಬದುಕು, ಸಂಬಂಧಗಳು, ನೋವು ನಲಿವುಗಳು, ನೆನಪುಗಳು, ಹೆಮ್ಮೆ ಅಪಮಾನಗಳೆಲ್ಲಾ ನಿಜಕ್ಕೂ ಆಪ್ತವೂ, ಮಹತ್ತರವೂ ಆಗಿರುತ್ತದೆ. ಆದರೆ, ಸಮಯಾಸಮಯದ ಪ್ರಜ್ಞೆ ಇಲ್ಲದೇ ಹೇಳುವುದರಿಂದ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ನಿಷ್ಟುರವಾಗಿಯೇ ಗಮನಿಸಬೇಕು. ನಮಗೆ ನಮ್ಮ ಅನುಭವಗಳಾಗಲಿ, ನೆನಪುಗಳಾಗಲಿ ಮುಖ್ಯವೂ ಮಹತ್ವದ್ದೂ ಆಗಿರುತ್ತದೆ.

ಆದರೆ ನನ್ನೆದುರಿನ ವ್ಯಕ್ತಿಗೇನಾಗಬೇಕು ಅವುಗಳನ್ನು ಕಟ್ಟಿಕೊಂಡು? ಸಂದರ್ಭಾನುಸಾರವೋ ಅಥವಾ ಕೋರಿಕೆಯ ಮೇರೆಗೋ ಅಥವಾ ಉದಾಹರಣೆಯ ಸಲುವಾಗಿಯೋ ಹಂಚಿಕೊಳ್ಳಬೇಕು. ಅದೂ ಚಿಕ್ಕದಾಗಿ. ಇಲ್ಲದಿದ್ದರೆ ಆ ವ್ಯಕ್ತಿಗಳು ಫೋನ್ ಮಾಡಿದರೆ ಇತರರು ಕರೆ ಸ್ವೀಕರಿಸಲು ಹೆದರುತ್ತಾರೆ, ಏಕೆಂದರೆ, ‘ಒಂದೆರಡು ನಿಮಿಷ ಮಾತಾಡಬಹುದಾ?’ ಎಂದೂ ಕೇಳುವುದಿಲ್ಲ. ಸುಮ್ಮನೆ ಮಾತಾಡಲು ಪ್ರಾರಂಭಿಸಿ ಅದು ಗಂಟೆಗಟ್ಟಲೆ ಹೋಗುತ್ತದೆ. ಕರೆ ಸ್ವೀಕರಿಸಿದವರ ಸಮಯ ಭಯಂಕರವಾಗಿ ಹಾಳಾಗಿರುತ್ತದೆ. ಸಮಯ ವ್ಯರ್ಥವಾಯಿತೆಂದರೆ ಅಷ್ಟು ಜೀವನವೇ ವ್ಯರ್ಥವಾಯಿತೆಂದು.

ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಬದುಕು. ಹಾಗಾಗಿ ಬದುಕು ಮತ್ತು ಸಮಯ ಎರಡೂ ಸಮಾನಾರ್ಥಕ ಪದಗಳು. ಸಮಯವನ್ನು ಕೊಟ್ಟರೆಂದರೆ ಅವರ ಜೀವನದ ಒಂದು ಭಾಗವನ್ನೇ ಕೊಟ್ಟಿದ್ದಾರೆಂದು ಅರ್ಥ. ಹಾಗಾಗಿ ನಾವು ನಮ್ಮ ಸಮಯವನ್ನೂ ಮತ್ತು ಇತರರ ಸಮಯವನ್ನೂ ಗೌರವಿಸುವುದರ ಮೂಲಕ ಜೀವನಪ್ರೀತಿಯನ್ನು ಅಭಿವ್ಯಕ್ತಿಸಬೇಕು.

ಮಗುತನವು ಸ್ವಾಸ್ಥ್ಯಪೂರ್ಣವಾದ ತನ್ನತನಕ್ಕೆ ಬದಲಾಗಿರುವುದರ ಸ್ಪಷ್ಟ ಲಕ್ಷಣವೇ ತನ್ನ ಸಮಯ ಮತ್ತು ಇತರರ ಸಮಯವನ್ನು ಜೀವನದ ಮೌಲಿಕ ಕ್ಷಣಗಳನ್ನಾಗಿ ರೂಪಿಸಿಕೊಳ್ಳುವುದು.
ಮಗುವು ತನ್ನ ಬಾಲ್ಯದಲ್ಲಿಯೇನಾದರೂ ತನ್ನ ತಾನು ವಿವರಿಸಿಕೊಂಡು ಸುಧೀರ್ಘವಾಗಿ ಮಾತಾಡುತ್ತಲೇ ಇರುವ ಲಕ್ಷಣಗಳನ್ನು ತೋರಿದರೆ ಎಚ್ಚರವಹಿಸಬೇಕು. ಅವರ ಮಗುತನವು ತನ್ನತನಕ್ಕೆ ರೂಪಾಂತರಗೊಳ್ಳುವ ಅವಧಿಯಲ್ಲಿಯೇ ಅವರಿಗೆ ಅದರ ರೂಢಿ ತಪ್ಪಿಸಬೇಕು.

2. ಭ್ರಾಮಕವಾದ ಆದರ್ಶದ ತನ್ನತನದ ಪ್ರತಿಮೆಗೂ ಮತ್ತು ತನ್ನ ನಿಜವಾಗಿರುವ ತನ್ನತನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯುತ್ತಾರೆ.
ತಾನು, ತನ್ನ ಸಾಮರ್ಥ್ಯ, ದೌರ್ಬಲ್ಯ, ಸಂಪನ್ಮೂಲಗಳು, ಸಾಧ್ಯತೆಗಳು; ಇತ್ಯಾದಿಗಳನ್ನು ಅರಿತುಕೊಂಡು ಅವುಗಳ ಆಧಾರದಲ್ಲಿ ತನ್ನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಹೋಗುವುದು ತನ್ನತನದ ಸಾಕ್ಷಾತ್ಕಾರವಾಗಿರುವವರಿಗೆ ಸಾಧ್ಯ. ಇಲ್ಲವಾದರೆ ಭ್ರಾಮಕವಾದ ಆದರ್ಶದ ಅಥವಾ ಹಗಲುಗನಸಿನ ಗೋಪುರಗಳಲ್ಲಿ ತಮ್ಮನ್ನು ಕಂಡುಕೊಂಡು ವಾಸ್ತವದ ಬದುಕಿನಲ್ಲಿ ಅವರು ತಮ್ಮತನವನ್ನು ಕಾಣುವುದೇ ಇಲ್ಲ.

3. ತನ್ನ ಸಾಮರ್ಥ್ಯವನ್ನು ಮುಂದಿಡುವುದು, ತಾನು ಹೇಗಿದ್ದೇನೆಂದು ಮುಂದಿಡುವುದಲ್ಲ.
ಕೆಲವು ವ್ಯಕ್ತಿಗಳನ್ನು ಗಮನಿಸಿ. ತಾನೆಷ್ಟು ಭಾವುಕವಾದ ವ್ಯಕ್ತಿ, ತಾನೆಷ್ಟು ಮರುಗುತ್ತೇನೆ, ತನಗೆ ಖುಷಿಯಾದರೆ ಹೇಗೆ ವರ್ತಿಸುತ್ತೇನೆ, ತನಗೆ ಅಪಮಾನವಾದರೆ ಹೇಗೆ ತಡೆದುಕೊಳ್ಳಲಾರದೇ ತಳಮಳಿಸುತ್ತೇನೆ, ತಾನು ಹೇಗೆ ವ್ಯಕ್ತಿಗಳನ್ನು ಹಚ್ಚಿಕೊಳ್ಳುತ್ತೇನೆ; ಇಂತಹ ತಮ್ಮ ವರ್ತನೆಗಳ ಬಗ್ಗೆಯೇ ಮಾತಾಡುತ್ತಾರೆ.

ಅದನ್ನೇ ಹೇಳುತ್ತಿರುತ್ತಾರೆ. ಆದರೆ, ಅವರ ತನ್ನತನವು ಸರಿಯಾಗಿ ರೂಪಾಂತರವಾಗಿದ್ದ ಪಕ್ಷದಲ್ಲಿ, ‘ತಾನು ಯಾವ ಕೆಲಸ ಮಾಡಬಲ್ಲೆ? ತನ್ನ ಸಾಮರ್ಥ್ಯವೇನು? ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಕೇಳುಗರ ಯಾವ ಕೆಲಸಕ್ಕೆ ಉಪಯೋಗಕ್ಕೆ ಬರಬಲ್ಲದು? ಇತ್ಯಾದಿಗಳನ್ನು ತಮ್ಮ ಕೇಳುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.

ನಾನು ಹೇಗೆ ವರ್ತಿಸುತ್ತಿದ್ದೇನೆ, ನನ್ನ ಅಂಟಿಕೆ, ವ್ಯಾಮೋಹಗಳೇನು ಎಂದು ನನಗೆ ನನ್ನತನವನ್ನು ರೂಪಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಬೇಕಾಗಿರುವುದು. ಇತರರಿಗೆ ಅದನ್ನು ವಿವರಿಸುವ ಅಗತ್ಯವಿಲ್ಲ. ಅವರಿಗೆ ತಿಳಿಯಬೇಕಾಗಿರುವುದು ತನ್ನ ಸಾಮರ್ಥ್ಯ. ಉಳಿದದ್ದು ಅವರೇ ನೋಡುತ್ತಾರಲ್ಲಾ, ಅನುಭವಿಸುತ್ತಾರಲ್ಲಾ!

4. ತನ್ನತನದಲ್ಲಿ ಮೂಡುವ ವ್ಯಕ್ತಿಗತವಾದ ಭಾವ

ನಾನು ಎಂಬ ಭಾವವು ತನ್ನತನ ಎಂಬ ಅರಿವಿನ ಜೊತೆಗೆ ಒಂದಾಗಿ ಕೆಲಸ ಮಾಡುವುದು. ಇದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಂಬಂಧಗಳನ್ನು ಕುರಿತು ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ಹದವಾದ ಮತ್ತು ಮಧುರವಾದ ವಾತಾವರಣವನ್ನು ತಮಗೂ ಸೃಷ್ಟಿಸಿಕೊಳ್ಳಲು ಸಾಧ್ಯ, ಇತರರಿಗೂ ಆ ಅನುಭವ ನೀಡಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending