ನೆಲದನಿ
ನುಡಿಯ ಒಡಲು – 21 | ಮಾತು ಮತ್ತು ನೋಟಗಳ ವಿಭಜನೆ: ಸಂಕಥನಾ ವಿಶ್ಲೇಷಣೆ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮಾತು ಮತ್ತು ನೋಟಗಳ ನಡುವಣ ನಂಟನ್ನು ಕುರಿತು ಸಾಕಷ್ಟು ಚಿಂತನೆ, ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇವತ್ತಿಗೂ ಈ ಚರ್ಚೆಗಳು ಅತ್ಯಂತ ಪ್ರಸ್ತುತವಾಗಿಯೇ ಇರುತ್ತವೆ. ಕಾರಣವೇನಂದರೆ, ಮಾತನ್ನು ಕುರಿತು ನಡೆಯುತ್ತಿರುವ ಓದುಗಳು ಇವತ್ತಿಗೂ ನಿರಂತರವಾಗಿದ್ದರೂ, ಮಾತಿನ ಇಡೀ ಸ್ವರೂಪವನ್ನು ಅರಿಯಲು ನಮಗೆ ಸಾಧ್ಯವಾಗಿಲ್ಲ.
ಅದೇ ರೀತಿಯಾಗಿ ಮಾತು ಮತ್ತು ಲೋಕನೋಟಗಳ ನಡುವಣ ಸಂಬಂಧವನ್ನು ಕುರಿತು ಈಗಲೂ ನಡೆಯುತ್ತಿರುವ ಚರ್ಚೆಗಳಿಗೆ ಇನ್ನೂ ಯಾವುದೇ ಬಗೆಯ ನಿಚ್ಚಳವಾದ ತಾತ್ವಿಕ ವಿನ್ಯಾಸಗಳು ರೂಪುಗೊಂಡಿಲ್ಲ. ಹಾಗಾಗಿ ನುಡಿ, ಕಾಲ, ದೇಶ, ವ್ಯಕ್ತಿ ಮತ್ತು ಸಮೂಹಗಳ ನಡುವಿನ ಅಂತರ್ಸಂಬಂಧ ಗತಿತಾರ್ಕಿಕವಾದದ್ದು ಎಂದು ಕೆಲವು ಆಲೋಚನಾ ಕ್ರಮಗಳು ಹೇಳುತ್ತವೆ.
ಮತ್ತೆ ಇನ್ನೂ ಕೆಲವು ಮಾದರಿಗಳು ವಾದಿಸುವಂತೆ, ಈ ಸಂಬಂಧವು ಕೇವಲ ಭಾಷಿಕ ಕೇಂದ್ರಿತವಾದದ್ದು ಎಂದು ನಂಬುತ್ತವೆ. ಈ ಎರಡೂ ವಿನ್ಯಾಸಕ್ಕೆ ಹೊರತಾದ ಮಾದರಿಯೊಂದು ಇವತ್ತು ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈ ಮಾದರಿಯ ಪ್ರಕಾರ ನುಡಿಯೆಂಬುದು ಮೂಲಭೂತವಾಗಿ ಗ್ರಹಿಕೆಗೆ ಸಂಬಂಧಿಸಿದ ವಿದ್ಯಮಾನ (ಕಾಗ್ನಿಟಿವ್ ಫಿನಾಮಿನಾನ್) ಆಗಿರುತ್ತದೆ. ಈ ತಿಳಿವಿನ ಪ್ರಕಾರ ನುಡಿ ಮತ್ತು ನೋಟಗಳ ನಡುವಣ ನಂಟಸ್ತಿಕೆ ವಿಶ್ವಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತದೆ ಎಂದಾಗುತ್ತದೆ.
ಅಂದರೇನಾಯ್ತು, ಕಾಲ, ದೇಶ ಹಾಗೂ ವ್ಯಕ್ತಿ ನೆಲೆಗಳಲ್ಲಿ ನುಡಿಯ ಮೂಲಕ ರೂಪುಗೊಳ್ಳುವ ಯಾವುದೇ ನೋಟಕ್ರಮವು ಕೂಡ ವಿಶ್ವಾತ್ಮಕ ಆಗಿರುತ್ತದೆ ಎಂದಾಯ್ತು. ಒಂದು ಪಕ್ಷ ಈ ನಿಲವೇ ದಿಟವಾಗಿದ್ದರೆ, ಮಾತು ಮತ್ತು ನೋಟಕ್ರಮಗಳ ನಡುವಿನ ವಿಭಜನೆ ಅತ್ಯಂತ ಸರಳವಾಗಿ ಕಾಣುತ್ತದೆ. ಅಂದರೆ ಮನುಷ್ಯನ ಗ್ರಹಿಕೆಯೆಂಬುದು ಜಗತ್ತಿನಾದ್ಯಂತ ಒಂದೇ ಬಗೆಯಲ್ಲಿ ನೆಲೆಪಡೆಯುತ್ತದೆ ಎಂದಾಗುತ್ತದೆ.
ಇಲ್ಲ ಈ ವಿಭಜನೆ ಇಷ್ಟೊಂದು ಸರಳವಾಗಿರಲು ಸಾಧ್ಯವಿಲ್ಲ ಎನ್ನುವುದನ್ನೂ ಇದೇ ಆಲೋಚನಾ ಕ್ರಮವೇ ತಿಳಿಸುತ್ತದೆ. ಅದೇನೆಂದರೆ, ವಿಶ್ವಾತ್ಮಕತೆ ಎಂಬುದು ಕೇವಲ ತತ್ವಗಳ (ಪ್ರಿನ್ಸಿಪಲ್ಸ್) ನೆಲೆಗೆ ಮಾತ್ರ ಸಂಬಂಧಿಸಿರುತ್ತದೆ ಹೊರತು ಅದು ವಿಕಲ್ಪಗಳಿಗೂ (ಪ್ಯಾರಮೀಟರ್ಸ್) ಸಂಬಂಧಿಸಲಾರದು ಎನ್ನುವ ತಿಳುವಳಿಕೆಯೂ ಕೂಡ ಈ ವಿನ್ಯಾಸದೊಳಗೆಯೇ ನಮಗೆ ದೊರೆಯುತ್ತದೆ.
ಅಂದರೆ ಮನುಷ್ಯ ಸಹಜವಾಗಿರುವ ಎಲ್ಲ ವಿದ್ಯಮಾನಗಳಲ್ಲಿಯೂ ಕೆಲವು ಸಮಾನವಾದ ರಚನೆಗಳು ಇರುವುದನ್ನು ಈ ತತ್ವಗಳು ತಿಳಿಸುತ್ತವೆ. ಆದರೆ ನುಡಿ, ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವೇ ಪ್ರತ್ಯೇಕವಾದ, ವಿಶಿಷ್ಟವಾದ ಇಲ್ಲವೇ ದೇಶೀಯವಾದ ರಾಚನಿಕ ವಿನ್ಯಾಸಗಳು ಹೇಗೆ ಕಾರಣವಾಗುತ್ತವೆ ಎಂಬ ತಿಳುವಳಿಕೆಯನ್ನು ಈ ವಿಕಲ್ಪಗಳು ಮನವರಿಕೆ ಮಾಡುತ್ತವೆ. ಹಾಗಾಗಿ ನುಡಿ, ಆಲೋಚನೆ, ಸಂಸ್ಕೃತಿ, ವ್ಯಕ್ತಿ, ದೇಶ ಹಾಗೂ ಸಮಾಜಗಳ ನಡುವಣ ವಿಭಜನೆಯನ್ನು ಅರಿಯುವುದಕ್ಕೆ ನಮಗೆ ಮುಖ್ಯವಾಗಿ ಇಂತಹ ವಿಕಲ್ಪಗಳು ಸಹಾಯಕ್ಕೆ ಬರುತ್ತವೆ.
ನುಡಿ, ಮನಸ್ಸು ಹಾಗೂ ಸಮಾಜಗಳ ನಡುವಣ ನಂಟಸ್ತಿಕೆ ಎಷ್ಟೊಂದು ಸಂಕೀರ್ಣವಾದ ಸಂಗತಿ ಎಂಬುದನ್ನು ಈ ನಿಲುವುಗಳು ಸೂಚಿಸುತ್ತವೆ. ಮಾತು ಮತ್ತು ನೋಟಗಳ ನಡುವಣ ನಂಟಸ್ತಿಕೆ ಇವತ್ತು ಕೇವಲ ಸಾಮಾಜಿಕ ವರ್ತನೆಗೆ ಹಾಗೂ ಭಾಷಿಕ ರಚನೆಗೆ ಮಾತ್ರ ಸೀಮಿತಗೊಂಡಿಲ್ಲ. ಇದು ಮಾನಸಿಕ ವಿಕಾಸ ಹಾಗೂ ವ್ಯಕ್ತಿಯ ಮನಸ್ಸಿನಲ್ಲಿ ಜೈವಿಕವಾಗಿ ಹಾಗೂ ಸಹಜವಾಗಿಯೇ ಅಂತಸ್ಥವಾಗಿರುವ ಭಾಷಿಕ ವಿನ್ಯಾಸಕ್ಕೂ ಪೂರಕವಾಗಿ ಈ ನಂಟಸ್ತಿಕೆ ಹರಡಿಕೊಂಡಿರುತ್ತದೆ.
ಇದು ಬಹುತೇಕವಾಗಿ ರೂಪಕ ಇಲ್ಲವೇ ರೂಪಕಾತ್ಮಕ ನೆಲೆಯನ್ನು ಹೊಂದಿರುತ್ತದೆ. ಎಲ್ಲ ಸಮುದಾಯದ ಸದಸ್ಯರು ನೋಟಕ್ರಮಗಳಲ್ಲಿ ಬದುಕುವುದಷ್ಟೆಯಲ್ಲ, ಬದಲಾಗಿ ಈ ನೋಟಕ್ರಮಗಳ ರಚನೆಗಳನ್ನು ಕರಗತ ಮಾಡಿಕೊಳ್ಳುವ ಕೌಶಲಗಳನ್ನೂ ಹೊಂದಿರುತ್ತಾರೆ. ಆದ್ದರಿಂದ ಈ ವಸ್ತುವಿನ್ಯಾಸವು ಆಯಾ ನುಡಿಗಳಲ್ಲಿಯೇ ಪ್ರತಿಫಲನವಾಗುತ್ತದೆ. ನುಡಿಯೊಳಗೆಯೇ ಇಂತಹವೊಂದು ಹದಬೆರಕೆಯ ಆಯಾಮವಿರುತ್ತದೆ.
ನುಡಿಯಲ್ಲಿ ನಡೆಯುವ ಇಂತಹ ಹದಬೆರಕೆಯ ನೆಲೆಯನ್ನು ಕುರಿತು ಮಾತ್ನಾಡುವಾಗ, ನಮಗೆ ತೋರುವ ಪ್ರಮುಖ ಸಂಗತಿಯೇನಂದರೆ, ನುಡಿಯ ಕಾರಣದಿಂದಲೇ, ಮನುಷ್ಯರಿಗೆ ಇಂತಹವೊಂದು ಹದಬೆರಕೆಯ ಕಸುವು ನಮ್ಮ ಜೈವಿಕ ವಿನ್ಯಾಸದಲ್ಲಿಯೇ ನೆಲೆಗೊಂಡಿರುವುದು ಗೊತ್ತಾಗುತ್ತದೆ. ಇದೇ ಸನ್ನಿವೇಶದಲ್ಲಿಯೇ ಗೋಚರಿಸುವ ಮತ್ತೊಂದು ಸುಳಿವು ಏನೆಂದರೆ, ಬಹು ಬಗೆಯ ನೋಟಕ್ರಮಗಳನ್ನು ಪಡೆಯುವ ಅವಕಾಶವೂ ನಮಗೆ ಸಹಜವಾಗಿಯೇ ನಮ್ಮ ನಮ್ಮ ನುಡಿ ಪರಿಸರಗಳಲ್ಲಿ ಸಿಗುತ್ತವೆ.
ಹಾಗೇನೆ ನಮಗೆ ಬೇಕಾಗಿರುವ ನೋಟಕ್ರಮಗಳ ಇಲ್ಲವೇ ಪರಿಕಲ್ಪನೆಗಳ ಪ್ರಮಾಣದಲ್ಲಿ ನಮ್ಮದೆಯಾದ ಆಯ್ಕೆಗಳಿರುವುದು ಕೂಡ ವಿಶೇಷ. ಅಂದರೆ ಆಯಾ ನುಡಿ ಪರಿಸರದಲ್ಲಿ ಬದುಕುವ ಪ್ರತಿಯೊಬ್ಬರು ಕೂಡ ಸಮ ಪ್ರಮಾಣದ ಗ್ರಹಿಕೆಗಳನ್ನು ಪಡೆಯಲೇ ಬೇಕೆಂಬ ಯಾವುದೇ ಒತ್ತಾಯವಿರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಅತ್ಯಂತ ಅಗತ್ಯವೆನಿಸುವ ನೋಟಕ್ರಮಗಳನ್ನು ಮಾತ್ರ ಪಡೆಯುವ ಈ ವಿನ್ಯಾಸವೇ ಮಾತು ಮತ್ತು ನೋಟಗಳ ನಡುವಣ ವಿಭಜನೆಗೆ ಕಾರಣವಾಗುತ್ತದೆ.
ಸಾಮಾಜಿಕ ಸಂವಹನವು ಲೀಲಾಜಾಲವಾಗಿ ಹಾಗೂ ಸಲೀಸಾಗಿ ನಡೆಯುವುದಕ್ಕೆ ಈ ನಿಲುವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರೊಟ್ಟಿಗೆ, ನೋಟಕ್ರಮಗಳನ್ನು ಭಾಷಿಕವಾಗಿ ವರ್ಗೀಕರಣಗೊಳಿಸುವ, ಆ ಇಡೀ ರಾಚನಿಕ ಪ್ರಕ್ರಿಯೆಯಲ್ಲಿಯೇ ಕ್ರಾಸ್ಲಿಂಗ್ವಿಸ್ಟಿಕ್ ವ್ಯತ್ಯಾಸಗಳು ಹೆಚ್ಚು ಪ್ರಬಲವಾಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ಹಾಗೂ ನೋಟಕ್ರಮಗಳ ಪ್ರತಿನಿಧಿಕರಣದಲ್ಲಿಯೂ ಈ ಕ್ರಾಸ್ಲಿಂಗ್ವಿಸ್ಟಿಕ್ ಮಾದರಿಗಳು ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ ಅನ್ನುವುದನ್ನೂ ಕೂಡ ಇಲ್ಲಿ ಮರೆಯಲು ಸಾಧ್ಯವಿಲ್ಲ.
ದಿಟ, ಈ ಕ್ರಾಸ್ಲಿಂಗ್ವಿಸ್ಟಿಕ್ ಮಾದರಿಗಳೇನು ನಮ್ಮಲ್ಲಿ ಯಾವುದೇ ಬಗೆಯ ಬೆರಗನ್ನುಂಟು ಮಾಡಲಾರವು. ಆದರೆ, ನೋಟಕ್ರಮಗಳಿಗೆ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಕಣ್ನೋಟಗಳ ವಿಧಾನಗಳ ಮೇಲೆ ಮನುಷ್ಯನ ನರತಂತು ವಿನ್ಯಾಸವು ಒಂದು ಬಗೆಯ ಒತ್ತಾಯವನ್ನುಂಟು ಮಾಡುತ್ತದೆ ಎಂಬ ದಿಟವನ್ನು ಅರಿಯಲು ಇವುಗಳು ಪೂರಕವಾಗಿರುತ್ತವೆ.
ನಮ್ಮ ಲೋಕಗ್ರಹಿಕೆಗಳನ್ನು ಕರಗತಗೊಳಿಸುವ ಸಂಕೀರ್ಣ ಭಾಷಿಕ ಸೂಚಿಗಳು, ವ್ಯವಸ್ಥೆಗಳು ಮತ್ತು ಉನ್ನತ ಮಟ್ಟದ ಸಾಹಿತ್ಯಕ ಹಾಗೂ ಕಲಾತ್ಮಕ ಚಳಕಗಳು ಮುಖ್ಯವಾಗಿ ಪ್ರಾಥಮಿಕ ನೋಟಗಳು ಹಾಗೂ ಮೂಲ ಅನುಭವವನ್ನು ನೆಲೆಯಾಗಿಸಿಕೊಂಡು ಮೈಪಡೆಯುತ್ತವೆ.
ನಾವು ಸಾಮೂಹಿಕವಾಗಿ ಬದುಕು ನಡೆಸುವ ಸನ್ನಿವೇಶದಲ್ಲಿ, ಯಾವುದೇ ದೇಶ ಇಲ್ಲವೇ ಗ್ರಹಿಕೆಯ ರಚನೆಗೆ ಸಂಬಂಧಿಸಿದ ಒಂದು ನಿರ್ಧಿಷ್ಟವಾದ ಹಾಗೂ ಏಕೈಕವಾದ ಇಲ್ಲವೇ ನಮ್ಮದೆಯಾದ ಒಂದು ನೋಟಕ್ರಮವನ್ನು ನಾವು ಹೊಂದಲಾರವು. ಏಕೆಂದರೆ, ಬಹುಜನರು ಬದುಕು ನಡೆಸುವ ಸನ್ನಿವೇಶದಲ್ಲಿ ಸಹಜವಾಗಿ ನೋಟಕ್ರಮಗಳು ಬಹುಸಂಕೀರ್ಣವಾದ ಲೋಕನೋಟಗಳಿಂದ ರೂಪುಗೊಂಡಿರುತ್ತವೆ. ಹಾಗಂತ ಅವುಗಳ ನಡುವೆ ಯಾವುದೇ ವ್ಯತ್ಯಾಸಗಳು ಇರಲಾರವು ಎಂದು ಮಾತ್ರ ಹೇಳಲು ಸಾಧ್ಯವಿಲ್ಲ.
ನುಡಿ ಬಳಕೆ ಸಾಮಾಜಿಕ ಬದುಕನ್ನು ಪಸರಿಸುವಂತೆ, ಆ ನುಡಿ ಬಳಸುವ ವಿಧಾನದಲ್ಲಿಯೇ ಈ ಸಾಮಾಜಿಕ ಬದುಕಿನ ವಿನ್ಯಾಸಗಳು ಕೂಡ ಅಂತಸ್ಥವಾಗಿರುತ್ತವೆ. ಬಹುತೇಕ ನುಡಿಯರಿಗರು ನುಡಿಯನ್ನು ಅದೊಂದು ಅಮೂರ್ತ ರಚನೆಯನ್ನಾಗಿ ಮಾತ್ರ ಪರಿಗಣಿಸಿರುತ್ತಾರೆ. ಅಂದರೆ ನುಡಿಯು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ನೆಲೆಗೊಂಡು ನಿರ್ಧಿಷ್ಟ ನುಡಿ ಬಳಕೆಯ ಸನ್ನಿವೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಉದಾ.ಗೆ ಗಣಿತದ ಯಾವುದೇ ತಾರ್ಕಿಕ ರಚನೆಯು ನೇರವಾಗಿ ಸಮೂಹಗಳ ನಿರ್ಧಿಷ್ಟ ಸಮಸ್ಯೆಗಳಿಗೆ ಮಾತ್ರ ಅನ್ವಯವಾಗದೇ ಅದೊಂದು ಸ್ವತಂತ್ರ ಸೂತ್ರವಾಗಿ ರೂಪುಗೊಳ್ಳುತ್ತದೆ. ಆದರೆ ನುಡಿ ಬಳಕೆಯ ಒಂದೊಂದು ಅನುಭವ ಮತ್ತು ಪ್ರಯೋಗವು ಆಯಾ ನುಡಿ ಬಳಕೆಗೆ ಒಳಪಡುವ ವಲಯ ಹಾಗೂ ನಿಯೋಗಗಳಿಗೆ ಮಾತ್ರ ಸಂಬಂಧಿಸಿರುತ್ತವೆ.
ಹಾಗಾಗಿ ಪ್ರತಿಯೊಂದು ಸಂವಹನ ಕ್ರಿಯೆಯು ಕೂಡ ಒಂದೊಂದು ಸಾಮಾಜಿಕ ಸನ್ನಿವೇಶದಲ್ಲಿ ನೆಲೆಗೊಳ್ಳುತ್ತದೆ. ಹಾಗೂ ಭಾಷಿಕರು ಬಳಸು ಆಯಾ ಭಾಷಾ ರೂಪಗಳ ಮೇಲೆ ಈ ಸನ್ನಿವೇಶವು ತನ್ನ ಒತ್ತಾಯವನ್ನು ಹೇರುತ್ತದೆ. ಈ ಭಾಷಿಕರು ಸಾಮಾಜಿಕ ಸನ್ನಿವೇಶವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ? ಇವರ ಗ್ರಹಿಕೆಗಳ ಬಗೆಗೆ ಬೇರೆಯವರಿಗೆ ಏನು ಗೊತ್ತಿರುತ್ತದೆ? ಅವರು ಹೇಗೆ ಇವುಗಳನ್ನು ಕುರಿತು ಯೋಚಿಸಬಲ್ಲರು? ಅವರು ಇವರ ಬಗೆಗೆ ಏನನ್ನು ಚಿಂತಿಸಬಲ್ಲರು ಮತ್ತು ನಂಬಬಲ್ಲರು? ಹಾಗೂ ತಮ್ಮ ಮತ್ತು ಬೇರೆಯವರ ಅಸ್ಮಿತೆಗಳ ಬಗೆಗೆ ಇವರು ಏನನ್ನು ಬಯಸುತ್ತಾರೆ ಎಂಬಿತ್ಯಾದಿ ಸಂಗತಿಗಳು, ಮಾತಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರೂಪ ಮತ್ತು ಅರ್ಥಗಳ ಮೇಲೆ ಇವುಗಳು ಪರಿಣಾಮವನ್ನು ಬೀರುತ್ತವೆ.
ಆಯಾ ಸಾಮಾಜಿಕ ಮತ್ತು ಭಾಷಿಕ ಸನ್ನಿವೇಶಗಳನ್ನು ನೆಲೆಯಾಗಿಸಿಕೊಂಡು, ನೋಟಕ್ರಮಗಳ ತಿರುಳು (ಅರ್ಥ) ಪ್ರಸ್ತುತಗೊಳ್ಳುತ್ತದೆ. ಹಾಗೂ ಆಯಾ ಸನ್ನಿವೇಶಗಳಿಗೆ ಅನುಗುಣವಾಗಿ ನುಡಿಯಲ್ಲಿ ಮೈಪಡೆಯುವ ಈ ಎಲ್ಲ ನೋಟಕ್ರಮಗಳನ್ನು ವ್ಯಾಖ್ಯಾನಿಸಲಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗರು ಜೊತೆಗೂಡಿ ತಾವು ಏನನ್ನು ಭಾವಿಸುತ್ತಾರೆ, ಏನನ್ನು ಗ್ರಹಿಸುತ್ತಾರೆ, ಏನನ್ನು ನೋಡುತ್ತಾರೆ ಹಾಗೂ ಸಂವಹನದ ಯಾವ ಹಂತವನ್ನು ಇವರು ತಲಪುತ್ತಾರೆ ಎಂಬೆಲ್ಲ ಸಂಗತಿಗಳು ಒಂದು ಪ್ರದೇಶದಲ್ಲಿ ಪ್ರಮುಖವಾಗುತ್ತವೆ. ಇಲ್ಲಿ, ಅಲ್ಲಿ, ಎಲ್ಲಿ, ಯಾವಾಗ, ಇದು, ಅದು ಮುಂತಾದ ಭಾಷಿಕ ಸೂಚಿಗಳು ಒಂದು ನಿರ್ಧಿಷ್ಟ ಕಾಲ ಮತ್ತು ದೇಶದ ವಿನ್ಯಾಸವನ್ನು ರೂಪಿಸುತ್ತವೆ.
ಮತ್ತು ಅಂತವೊಂದು ಸನ್ನಿವೇಶವನ್ನು ರೂಪಿಸುವ ಮುಕ್ತ ಅವಕಾಶವೂ ಈ ಭಾಷಿಕ ಸೂಚಿಗಳಲ್ಲಿ ಅಂತಸ್ಥವಾಗಿರುತ್ತದೆ. ಯಾವಾಗ ಹೇಳುಗ ಮತ್ತು ಕೇಳುಗರು ಒಂದು ದಿಟ ಪ್ರದೇಶವನ್ನು (ರಿಯಲ್ ಸ್ಪೇಸ್) ಪರಿಭಾವಿಸಲು, ಈಗ, ನಾಳೆ ಮತ್ತು ಕಳೆದ ವರುಷ ಮೊದಲಾದವುಗಳನ್ನು ಬಳಸುವುದನ್ನು ನೋಡಬಹುದು. ಉದಾ.ಗೆ ಬೇಂದ್ರೆಯವರ ಕವನವೊಂದರಲ್ಲಿ ಬಳಸಿರುವ ಇದಕ್ಕು, ಅದಕ್ಕು ಎದಕ್ಕು ಎಂಬೆಲ್ಲ ಸೂಚಕಗಳು ಕೇವಲ ಯಾವುದೇ ಒಂದು ಕಾಲ ಮತ್ತು ದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ.
ಬದಲಾಗಿ ಆಯಾ ಕಾಲ ಮತ್ತು ದೇಶದ ಸನ್ನಿವೇಶಗಳಿಗೆ ಅನ್ವಯವಾಗುವ ಮುಕ್ತತೆ ಈ ಸೂಚಕಗಳಲ್ಲಿ ಇರುವುದನ್ನು ನೋಡಬಹುದು. ಹಾಗೂ ಪಂಪನ ಕಾವ್ಯದಲ್ಲಿ ಬಳಸಿರುವ ಎಷ್ಟೊಂದು ಅಭಿವ್ಯಕ್ತಿಗಳನ್ನು ನಮ್ಮ ಇವತ್ತಿನ ಸನ್ನಿವೇಶಕ್ಕೆ ಅನ್ವಯಿಸಿಕೊಂಡು ಮಾತ್ನಾಡುವಾಗ, ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೇ, ಆಯಾ ವ್ಯಕ್ತಿಗಳು ಪ್ರತಿನಿಧಿಸುವ ಸಾಮಾಜಿಕ ನೆಲೆ ಇಲ್ಲವೇ ಅಂತಸ್ತನ್ನು ಪರಿಗಣಿಸುತ್ತೇವೆ. ಯಾವುದೋ ಒಂದು ಕಾಲ್ಪನಿಕ ಪ್ರದೇಶದ (ಇಮ್ಯಾಜಿನ್ಡ್ ಸ್ಪೇಸ್) ಕಾಲ್ಪನಿಕ ನೆಲೆಯಿಂದ (ಇಮ್ಯಾಜಿನ್ಡ್ ಲೊಕೇಶನ್) ಬದುಕಿನ ನೋಟಗಳನ್ನು ಯಾವುದೇ ಒಬ್ಬ ಕಾಲ್ಪನಿಕ ಪಾಲುದಾರನಿಗೆ ಕಾಣಲು ಇಲ್ಲವೇ ತಲುಪಲು ಹೇಗೆ ಸಾಧ್ಯವಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗ ಇವರಿಬ್ಬರೂ ಏನೆಲ್ಲವನ್ನೂ ಅರಿಯಲು, ಯೋಚಿಸಲು, ಗ್ರಹಿಸಲು ಹಾಗೂ ಪರಿಭಾವಿಸಲು ಸಾಧ್ಯವೋ, ಅದೆಲ್ಲವನ್ನೂ ಕಾಲ್ಪನಿಕವಾಗಿಯೇ ಪರಿಭಾವಿಸಲಾಗುತ್ತದೆ. ಏನೆಂದರೆ, ಮಾನಸಿಕ ನೆಲೆವೊಂದು (ಮೆಂಟಲ್ ಸ್ಪೇಸ್) ಏನೆಲ್ಲವನ್ನು ಒಳ್ಗೊಂಡಿರುತ್ತದೆ ಎನ್ನುವುದನ್ನು ಅರಿಯಲು ನಮಗೆಲ್ಲ ಸಾಧ್ಯವಾಗುವುದೇ ಮಾನಸಿಕವಾಗಿ ನೆಲೆಗೊಳ್ಳುವ ಇಂತಹ ಲೆಕ್ಕಾಚಾರಗಳಿಂದ ಮಾತ್ರ. ಹಾಗಾದರೆ, ಪ್ರತೀ ವ್ಯಕ್ತಿಯ ಮಾನಸಿಕ ನೆಲೆಯು ಪರಿಭಾವಿಸುವ ಯಾವುದೇ ವಿಚಾರ ಇಲ್ಲವೇ ನೋಟಕ್ರಮಗಳು, ಆಯಾ ವ್ಯಕ್ತಿಗೆ ಮಾತ್ರ ನಿರ್ಧಿಷ್ಟವಾಗಿರುತ್ತವೋ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.
ವಿಚಾರ ಇಲ್ಲವೇ ನೋಟಕ್ರಮಗಳು ವ್ಯಕ್ತಿ ವಿಶಷ್ಟತೆಯಿಂದ ಕೂಡಿರಲಾರವು. ಬದಲಾಗಿ ವ್ಯಕ್ತಿಗಳು ಈ ವಿಚಾರಗಳನ್ನು ಪರಿಭಾವಿಸುವ ಇಲ್ಲವೇ ನಿರ್ವಚಿಸುವ ವಿನ್ಯಾಸಗಳು ಮಾತ್ರ ಬೇರೆಯಾಗಿರುತ್ತವೆ. ಕಾಲ್ಪನಿಕ ಇಲ್ಲವೇ ದಿಟವಾದ ವ್ಯಕ್ತಿ, ಕಾಲ ಮತ್ತು ದೇಶಗಳನ್ನು ಪರಿಭಾವಿಸಲು ನಮಗೆ ಮುಖ್ಯವಾಗಿ ಡೈಯಕ್ಸಿಸ್ಗಳು (Deixis) ಒತ್ತಾಸೆಯಾಗಿರುತ್ತವೆ. ಡೈಯಕ್ಸಿಸ್ಗಳು ಮೂಲಕವೇ ನಾವು ಯಾವುದೇ ನುಡಿ ಪಠ್ಯಗಳಲ್ಲಿ ಸಂದರ್ಭಗಳನ್ನು ರೂಪಿಸಿಕೊಳ್ಳುತ್ತೇವೆ. ಈ ಸಂದರ್ಭಗಳೇ ನಮಗೆ ಕಾಲ, ದೇಶಗಳನ್ನು ಪರಿಭಾವಿಸಲು ಸೂಚಕಗಳಾಗಿರುತ್ತವೆ.
ಉದಾ.ಗೆ ನೀವು ದಯವಿಟ್ಟು ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ. ಈ ಉದಾಹರಣೆಯಲ್ಲಿರುವ ‘ನಮ್ಮ ಮನೆಗೆ’ ಎಂಬ ಉಲ್ಲೇಖವನ್ನು ಹೇಳುಗನು ಉಲ್ಲೇಖಿಸುವಾಗ, ಅವನು ಕಡ್ಡಾಯವಾಗಿ ತನ್ನ ಮನೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲ. ಮತ್ತು ಕೇಳುಗನಿಗೆ ಈ ಆಮಂತ್ರಣವನ್ನು ತನ್ನ ಮನೆಯಿಂದಲೇ ನೀಡುವ ಅಗತ್ಯವೂ ಕೂಡ ಇರುವುದಿಲ್ಲ. ಹಾಗೂ ಕೇಳುಗನು ಕೂಡ ಪ್ರತಿಯಾಗಿ, ಹ್ಞಾ! ಖಂಡಿತವಾಗಿ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಎಂದು ಹೇಳುವಾಗಲೂ ಕೂಡ ಅವನು ಈ ಹೇಳುಗನ ಮನೆಗೆ ಬಂದು ಹೇಳುವ ಅವಶ್ಯಕತೆ ಇರವುದಿಲ್ಲ. ಅಂದರೆ ನುಡಿ ಸಾಮಗ್ರಿಗಳನ್ನು ಬಳಸುವಾಗ, ತಿರುಳುಗಳನ್ನು ಹೊರಡಿಸಲು ಬೇಕಾಗುವ ಅಂತರ್ಗತ ಸಾಮಗ್ರಿಗಳು ಅವುಗಳಲ್ಲಿ ಅಡಕವಾಗಿರುತ್ತವೆ.
ರಚನೆ ಹಾಗೂ ತಿರುಳು, ಈ ಎರಡೂ ನೆಲೆಗಳಿಂದಲೂ ನುಡಿ/ಮಾತು ಸಂದರ್ಭ ಮುಕ್ತವಾಗಿರುತ್ತದೆ. ಈ ಸಂದರ್ಭ ಮುಕ್ತತೆ ಕಾಲ-ದೇಶ-ವ್ಯಕ್ತಿಗಳನ್ನು ಮೀರಿ ನಿಲ್ಲುತ್ತದೆ. ಉದಾ.ಗೆ ಕುವೆಂಪು ಅವರು ತಮ್ಮ ಶ್ರೀ ರಾಮಯಣ ದರ್ಶನಂ, ಕೃತಿಯಲ್ಲಿ ಊರ್ಮಿಳೆಯಿಂದ, “ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ” ಎಂಬ ಮಾತನ್ನು ಆಡಿಸುತ್ತಾರೆ. ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಈ ಮಾತು ಸಾಂದರ್ಭಿಕವಾಗಿದ್ದರೂ, ಇದು ಸಂದರ್ಭ ಮುಕ್ತತೆಯನ್ನೂ ಪಡೆದಿರುತ್ತದೆ ಎಂಬುದು ಮಾತ್ರ ದಿಟ. ಯಾವುದೇ ಗುರಿರಹಿತ ಬದುಕಿನ ಯಾವುದೇ ಒಂದು ಕ್ರಿಯೆಯ ತಾತ್ಪರ್ಯವನ್ನು ಸೂಚಿಸಲು ಈ ಮಾತನ್ನು ಬಳಸಲು ಸಾಧ್ಯವಿದೆ.
ಕೇವಲ ಆಡಂಬರಕ್ಕಾಗಿ ಇಲ್ಲವೇ ಪ್ರದರ್ಶನಕ್ಕಾಗಿ ನಡೆಯುವ ಕ್ರಿಯೆಗಳನ್ನು ಟೀಕಿಸಲೂ ಕೂಡ ಈ ಮಾತನ್ನು ಬಳಸಬಹುದಾಗಿದೆ. ಪ್ರಾಥಮಿಕವಾಗಿ ನುಡಿಯೊಂದು ರಾಚನಿಕ ವ್ಯವಸ್ಥೆಯಾಗಿದ್ದರೂ ಕೂಡ, ಅದಕ್ಕೊಂದು ಅನಕೂಲಾತ್ಮಕ ನೆಲೆ ಇದ್ದೇ ಇರುತ್ತದೆ. ನುಡಿಯೊಂದಕ್ಕೆ ಈ ನೆಲೆಯೂ ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ. ಅಂದರೆ, ಉಲಿ (ಧ್ವನಿ) ಮತ್ತು ತಿರುಳುಗಳ (ಅರ್ಥ) ನಡುವೆ ಯಾವುದೇ ಬಗೆಯ ತಾರ್ಕಿಕ ನಂಟಸ್ತಿಕೆ ಇರುವುದಿಲ್ಲ. ಉದಾ.ಗೆ ‘ಮರ’ ಎಂಬ ಪದದ ಉಲಿಗಳ ಮೊತ್ತಕ್ಕೂ ಅದು ನಿರೂಪಿಸುವ ತಿರುಳಿಗೂ ಯವುದೇ ಬಗೆಯ ನಂಟಿರುವುದಿಲ್ಲ. ಪ್ರತೀ ನುಡಿಯೊಳಗೆಯೇ ನಡೆಯುವ ಇಂತಹವೊಂದು ಹೊಂದಾಣಿಕೆಯ ನೆಲೆಯನ್ನೇ ನಾವು ಇಲ್ಲಿ ಅನಕೂಲಾತ್ಮಕವೆಂದು ಬಣ್ಣಿಸುತ್ತೇವೆ.
ನುಡಿ ತನ್ನಲ್ಲಿರುವ ಈ ಅನಕೂಲಾತ್ಮಕ ರಾಚನಿಕ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಆಯಾ ಕಾಲ, ದೇಶ ಹಾಗೂ ವ್ಯಕ್ತಿಗಳಿಗೆ ಪೂರಕವಾಗುವ ಇಲ್ಲವೇ ಅಗತ್ಯವಾಗುವ ಸಂಕಥನಗಳನ್ನು ಕಟ್ಟುತ್ತಿರುತ್ತದೆ. ‘ಈ ಸಂಕಥನಗಳ ನಿರೂಪಣೆಯ ನುಡಿಯು ಕೂಡ ಕಣ್ಣಿನ ಓದಿಗೆ ಅನಕೂಲವಾಗುವಂತೆ ಇರುವ ಬದಲಾಗಿ ಕಿವಿಯ ಓದಿಗೆ ತಕ್ಕಂತೆ ಇರುತ್ತದೆ.
ಕಣ್ಣಿಗೆ ಕಾಣುವಂತೆ ಹೇಳುವುದಕ್ಕಿಂತ ಕಣ್ಣಿಗೆ ಕಟ್ಟುವಂತೆ ಹೇಳುವುದು ಈ ಸಂಕಥನಗಳ ದಾಟಿಯಾಗಿರುತ್ತದೆ’ (ಕೆವಿಎನ್:2010). ಮಾತು ಮತ್ತು ಮಾತಿನ ಮೂಲಕ ದೊರೆಯುವ ಒಂದೊಂದು ತಿರುಳು, ತಿಳಿವು ಹಾಗೂ ಹೊಳವುಗಳೆಲ್ಲವೂ ಅನುಭವದ ನೆಲೆಯನ್ನು ಪಡೆಯುತ್ತವೆ. ಮಾತು ಅನುಭವದ ಆಯಾಮವನ್ನು ಪಡೆದಕೂಡಲೇ, ಅದಕ್ಕೊಂದು ಸಂದರ್ಭ ಮುಕ್ತತೆಯು ಪ್ರಾಪ್ತವಾಗುತ್ತದೆ. ಇಂತಹ ವಿನ್ಯಾಸಗಳ ಕಾರಣವಾಗಿಯೇ ಮಾತು, ವ್ಯಕ್ತಿ, ಕಾಲ ಹಾಗೂ ದೇಶಗಳ ನಡುವೆ ವಿಭಜನೆಯೂ ಏರ್ಪಡುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ.
ಆದರೆ ಸಾಮಾಜಿಕ ವಾಸ್ತವಗಳ ಮೂಲನೆಲೆಗಳು ಮೈಪಡೆಯುವುದು ಅಯಾ ನುಡಿಯಿಗರು (ಭಾಷಿಕರು) ತಾವಾಡುವ ನುಡಿಯ ತಿಳಿವಿನ ಮೂಲಕವೇ ಎಂಬುದು ಗಮನಾರ್ಹ. ಈ ವಿನ್ಯಾಸವು ಅತ್ಯಂತ ವ್ಯಾಪಕವಾಗಿರುತ್ತದೆ. ಮಾನಸಿಕ ಜಗತ್ತು ಮತ್ತು ಭೌತಿಕ ಜಗತ್ತಿನಲ್ಲಿರುವ ವಸ್ತುಗಳ-ವಿದ್ಯಮಾನಗಳ ತಿಳಿವನ್ನು ಈ ವಿನ್ಯಾಸವು ಒಳ್ಗೊಂಡಿರುತ್ತದೆ. ಈ ತಿಳಿವಿಗೆ ಎರಡು ಆಯಾಮಗಳು ಇರುತ್ತವೆ.
ಅಂದರೆ ಆಯಾ ತಿಳಿವು ಏನನ್ನು (ನಾಲೇಡ್ಜ್ ವ್ಹಾಟ್) ಸೂಚಿಸುತ್ತದೆ. ಹಾಗೂ ಆಯಾ ತಿಳಿವು ಹೇಗೆ (ನಾಲೇಡ್ಜ್ ಹೌ) ಸಮೂಹಗಳ ಒಡಲಲ್ಲಿ ನೆಲೆಗೊಳ್ಳುತ್ತದೆ ಎಂಬುದಾಗಿವೆ. ಆದರೆ ಈ ಎರಡೂ ತಿಳಿವಿನ ಆಯಾಮಗಳಲ್ಲಿ ಹಲವು ಬಗೆಯ ಸಾಮನ್ಯೀಕರಣದ (ಜನರ್ಯಾಲಿಟಿ) ನೆಲೆಗಳು ಹುದುಗಿರುತ್ತವೆ. ಹಾಗಾಗಿ ಒಂದೊಂದು ಪರಿಕಲ್ಪನಾತ್ಮಕ ತಿಳಿವು ಹಲವು ಆಯಾಮಗಳಿಂದ ಕೂಡಿರುತ್ತದೆ.
ಹಾಗೂ ಇಡಿತನದ ಮಾದರಿಗಳನ್ನು ಈ ಆಯಾಮಗಳು ನಿರಂತರವಾಗಿ ರೂಪಿಸುತ್ತವೆ. ಅಂದರೆ ಹಲವು ವಿಭಿನ್ನ ವಸ್ತುಗಳು ಹಾಗೂ ವಿದ್ಯಮಾನಗಳ ನಡುವಣ ಅಂತರ್ಸಂಬಂಧವನ್ನು ಗುರುತಿಸುವುದಾಗಿದೆ. ನುಡಿಯ ಮೂಲಕ ಮೈಪಡೆಯುವ ಪ್ರತಿಯೊಂದು ತಿಳಿವಿನ ಅವಿಭಾಜ್ಯ ಅಂಗವಾಗಿ ಇಂತಹ ಅಂತರ್ಸಂಬಂಧವು ನೆಲೆಗೊಳ್ಳುತ್ತದೆ.
ನುಡಿ ಸಾಮಗ್ರಿಗಳು ಕೇವಲ ಇಡಿತನವನ್ನು ಮಾತ್ರ ರೂಪಿಸದೇ ಬಿಡಿತನದ ಮೂಲಕ ಸಾಮಾಜಿಕ ಹಾಗೂ ಮಾನಸಿಕ ಪ್ರತ್ಯೇಕತೆಯನ್ನೂ ಸಂಘಟಿಸುತ್ತವೆ. ಅಸ್ಪೃಶ್ಯತೆಯಂತಹ ಅನುಭವವು ಶತಮಾನಗಳಿಂದ ಆಚರಣೆಯಲ್ಲಿದೆ. ಆದರೆ ಈ ಆಚರಣೆಯ ಸಾಮಾಜಿಕ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯವೇ ಹೊರತು ಮಾನಸಿಕ ವಿನ್ಯಾಸದಲ್ಲಿ ಯಾವುದೇ ಬಗೆಯ ಪಲ್ಲಟವು ಇದುವರೆಗೂ ಏರ್ಪಟ್ಟಿರುವುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
ತಿರುಳಿನ ಇಲ್ಲವೇ ತಿಳಿವಿನ ಇಡಿತನದ ಸ್ವರೂಪದಲ್ಲಿಯೇ ಸಾಮಾಜಿಕ ಮತ್ತು ಮಾನಸಿಕ ಪ್ರತ್ಯೇಕತೆಯ ಚಹರೆಗಳು ಬಿಂಬಿತವಾಗುತ್ತವೆ. ತಿರುಳಿನ ಇಡಿತನದಲ್ಲಿರುವ ಅಂತರ್ಸಂಬಂಧದ ಆಯಾಮಗಳು ಇಂತಹ ಪ್ರತ್ಯೇಕತೆಯ ಕಾರಣದಿಂದ ಬಿಡಿಬಿಡಿಯಾಗಿ ನೆಲೆಗೊಳ್ಳುತ್ತವೆ. ಅಂದರೆ ಅಭಾದಿತ ಅನುಭವವು ಸಾಮಾಜಿಕ ಹಾಗೂ ಮಾನಸಿಕ ಇಡಿತವನ್ನಷ್ಟೆಯಲ್ಲದೇ ತಿರುಳಿನ ಐಕ್ಯತೆಯನ್ನೂ ಸೂಚಿಸುತ್ತದೆ.
ಆದರೆ ಸಮೂಹಗಳನ್ನು ಭಾದಿಸುವ ಯಾವುದೇ ಬಗೆಯ ಅನುಭವವೊಂದು ಐಕ್ಯತೆಯ ಸೂಚಕವಾಗಿರಲು ಸಾಧ್ಯವಿಲ್ಲ. ಈ ನಿಲುವು ಅತ್ಯಂತ ನಿಚ್ಚಳವಾಗಿ ನುಡಿ ಸಾಮಗ್ರಿಗಳ ಮೂಲಕ ಪ್ರಕಟವಾಗುತ್ತದೆ. ಅಂದರೆ ಮಾತಿನಲ್ಲಿ ಸಾಮಾಜಿಕ–ಮಾನಸಿಕ ಬಿರುಕುಗಳು ತಾವಾಗಿಯೇ ಏರ್ಪಡಲಾರವು ಎಂಬುದನ್ನು ಈ ಬಿಡಿತನದ ಆಯಾಮವು ಸೂಚಿಸುತ್ತದೆ. ಹಾಗಾಗಿ ಜಾತಿ ಮತ್ತು ಅಸ್ಪೃಶ್ಯತೆಯಂತಹ ಅನುಭವಗಳು ಇವತ್ತಿಗೂ ಸಹ ಪ್ರತ್ಯೇಕತೆಯ ಸೂಚಕಗಳಾಗಿ ನೆಲೆನಿಂತಿವೆ. ಪ್ರಜಾಸತ್ತಾತ್ಮಕ ನಿಲುವುಗಳು ಮಾತಿನ ಅವಿಭಾಜ್ಯ ಅಂಗವಾಗದೇ ಕೇವಲ ಉಲಿ ಮತ್ತು ತಿರುಳಿನ ನಡುವಣ ಸೂಚಿತ ಹಾಗೂ ಸೂಚಕ ನಂಟನ್ನು ವಿವರಿಸುವುದಕಷ್ಟೆ ಸೀಮಿತವಾಗಿವೆ.
ಇಂತಹ ಪ್ರತ್ಯೇಕತೆಯ ಕಾರಣಕ್ಕಾಗಿಯೇ ನುಡಿಯು ಎಲ್ಲ ಕಾಲದಲ್ಲಿಯೂ ಅತ್ಯಂತ ಪ್ರಬಲವಾದ ಅಸ್ಮಿತೆಯ ಸೂಚಕವಾಗಿ ನೆಲೆನಿಂತಿದೆ. ನುಡಿಯ ಮೂಲಕ ರೂಪುಗೊಳ್ಳುವ ಈ ಅಸ್ಮಿತೆಯೂ ಧರ್ಮದ ಮೂಲಕ ಪಡೆಯುವ ಅಸ್ಮಿತೆಗಿಂತಲೂ ಅತ್ಯಂತ ಪ್ರಬಲವಾಗಿರುತ್ತದೆ ಎಂಬುದು ಗಮನಾರ್ಹ. ಧರ್ಮವೂ ಕೂಡ ಸಮೂಹಗಳಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುವ ಬಹು ದೊಡ್ಡ ಅಸ್ತ್ರವಾಗಿದೆ ಎಂಬುದನ್ನೂ ಇಲ್ಲಿ ಯಾರು ಮರೆಯುವಂತಿಲ್ಲ.
ನುಡಿಯ ಸಂಘಟಿತ ಹಂತದಲ್ಲಿಯೇ ಪರಿಕಲ್ಪನಾತ್ಮಕತೆಯ ನೆಲೆಗಳು ಪರಸ್ಪರ ಸಂಬಂಧಿತ ಪರಿಕಲ್ಪನೆಗಳನ್ನು ಒಳಗೊಳ್ಳಬೇಕಾಗುತ್ತದೆ. ಆದರೆ ಇದೇ ಹಂತದಲ್ಲಿ ಮಾನಸಿಕ-ಸಾಮಾಜಿಕ ಬಿಡಿತನದದ ಇಲ್ಲವೇ ಪ್ರತ್ಯೇಕತೆಯ ಆಯಾಮಗಳು ಕೂಡ ಏರ್ಪಡುತ್ತವೆ. ಅಂದರೆ ಪರಸ್ಪರ ಸಂಬಂಧಿತ ಪರಿಕಲ್ಪನೆಗಳಲ್ಲಿ ಅಡಕವಾಗಿರುವ ಸಂಕೀರ್ಣತೆಯನ್ನು ಗ್ರಹಿಸುವ ಮೂಲಕ ಈ ಬಿಡಿತನದ ವಿನ್ಯಾಸಗಳನ್ನು ಅರಿಯುವ ಅಗತ್ಯವಿರುತ್ತದೆ.
ಏಕೆಂದರೆ ಮಾಹಿತಿಯೊಂದಕ್ಕಿಂತ ಹೆಚ್ಚು ಸಂಕೀರ್ಣವಾಗಿರುವ ವಸ್ತುಸ್ಥಿತಿಯೊಂದು ನುಡಿಯ ಅಭಿವ್ಯಕ್ತಿಗಳ ಮೂಲಕ ಸಹಜವಾಗಿ ಪ್ರತಿನಿಧಿಕರಣಗೊಳ್ಳುತ್ತದೆ. ಈ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದೆಂದರೆ, ಆಯಾ ಮಾತುಗಳಲ್ಲಿ ಅತ್ಯಂತ ವ್ಯಾಪಕವಾಗಿ ಅಂತಸ್ಥವಾಗಿರುವ ಮಾಹಿತಿಗಳನ್ನು ಮಾತ್ರ ಅರಿಯುವುದಲ್ಲ. ಬದಲಾಗಿ ಅವುಗಳು ಸೂಚಿಸುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವಿನ್ಯಾಸಗಳನ್ನೂ ತಿಳಿಯುವುದಾಗಿದೆ.
ಹಾಗಾಗಿ ಅಭಿವ್ಯಕ್ತಿಯೊಂದು ರೂಪುಗೊಳ್ಳುವುದೆಂದರೆ, ವಿಸ್ತಾರವದ ಮಾಹಿತಿಯೊಂದನ್ನು ಅಮೂರ್ತಗೊಳಿಸಿ ನೋಡುವ ಬಗೆಯಾಗಿರುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ವಿಸ್ತಾರದಲ್ಲಿ ಹರಡಿಕೊಂಡಿರುವ ಒಟ್ಟು ನುಡಿಮೊತ್ತವೇ ಹಾಗೂ ಆಯಾ ಸನ್ನಿವೇಶಕ್ಕೆ ಅಗತ್ಯವಿರುವ ಮಾಹಿತಿಗಳ ಸಂಚಯವೇ ಸಂಕಥನಗಳಾಗಿ ರೂಪುಗೊಳ್ಳುತ್ತವೆ. ಇಂತಹ ಸಂಕಥನಗಳು ಬಹುತೇಕವಾಗಿ ಪ್ರತಿನಿಧಿಕರಣದ ಮಾದರಿಗಳಾಗಿ ರೂಢಿಯಲ್ಲಿರುತ್ತವೆ.
ಯಾವುದೇ ತಿಳುವಿನ ನಿರ್ವಚನೆಯ ವಿನ್ಯಾಸಗಳು ಕೂಡ ಇಂತಹ ಸಂಕಥನಗಳ ಸನ್ನಿವೇಶಗಳಲ್ಲಿಯೇ ಬೇರೂರಿತ್ತವೆ. ಹಾಗಾಗಿ ಕಾಲ, ದೇಶ ಮತ್ತು ವ್ಯಕ್ತಿಗಳಿಗೆ ಅನುಗುಣವಾದ ಸಂಕಥನಗಳು-ಸನ್ನಿವೇಶಗಳು ನಿರಂತರವಾಗಿ ವಿಕಾಸಗೊಳ್ಳುತ್ತವೆ. ಪರಿಣಾಮವಾಗಿ ಮಾತು ಮತ್ತು ಈ ಎಲ್ಲ ಸಂಕಥನ-ಸನ್ನಿವೇಶಗಳ ನಡುವೆ ಸಹಜವಾಗಿ ವಿಭಜನೆಗಳು ಕೂಡ ಏರ್ಪಡುತ್ತವೆ. ಆದ್ದರಿಂದ ಪ್ರಾದೇಶಿಕ (ಸ್ಪೇಶಿಯಲ್) ಕೇಂದ್ರಿತ ನೋಟಕ್ರಮಗಳು, ಪರಿಕಲ್ಪನಾತ್ಮಕ ಕೇಂದ್ರಿತ ನೋಟಕ್ರಮಗಳಕ್ಕಿಂತ ಭಿನ್ನವಾಗಿರುತ್ತವೆ.
ಏಕೆಂದರೆ, ಕೇಳುಗನ ತಿಳಿವು, ನಂಬಿಕೆ, ಭಾವನೆಗಳು, ಪ್ರೇರಣೆಗಳು ಮೊದಲಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಹೇಳುಗನು ತನ್ನ ಸಂದೇಶಗಳನ್ನು ರೂಪಿಸುತ್ತಾನೆ. ಈ ಪ್ರಕ್ರಿಯೆಯೂ ಕಾಲ, ದೇಶ ಹಾಗೂ ವ್ಯಕ್ತಿಗಳ ನೆಲೆಯಲ್ಲಿ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಮಹತ್ವವನ್ನು ಪಡೆದುಕೊಳ್ಳುವುದು ಕೂಡ ಇದೇ ಕಾರಣಗಳಿಂದ.
ಅದಕ್ಕಾಗಿ ಡೆರಿಡಾ ಹೇಳುವ ಸೂಚಕ-ಸೂಚಿತಗಳ ನಡುವಣ ಅಪರಿಮಿತವಾದ ಅರ್ಥದ ನಂಟಸ್ತಿಕೆಯನ್ನು ಗುರುತಿಸಲೂ ಕೂಡ ಈ ಕಾಲ-ದೇಶ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ವಿನ್ಯಾಸಗಳೇ ಕಾರಣವಾಗುತ್ತವೆ. ಅಂದರೆ, ಅರ್ಥದಲ್ಲಿ ಉಂಟಾಗುವ ಭೇದಗಳಿಗೆ ಪ್ರಾದೇಶಿಕತೆ (ಸ್ಪೇಶಿಯಲ್) ಕಾರಣವಾದರೆ, ಅರ್ಥಗಳ ಪಲ್ಲಟ ಇಲ್ಲವೇ ಮುಂದೂಡಿಕೆಗೆ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಕಾರಣವಾಗುತ್ತವೆ ಎಂಬ ಹೊಳವು ಡೆರಿಡಾನ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ.
ಒಟ್ಟಿನಲ್ಲಿ ಮಾತು ಮತ್ತು ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವಣ ವಿಭಜನೆಗೆ ಏನೆಲ್ಲ ಸಂಗತಿಗಳು ಕಾರಣವಾಗುತ್ತವೆ. ಈ ಸಂಗತಿಗಳಿಗೆ ನುಡಿ ಮತ್ತು ನುಡಿ ಸಾಮಗ್ರಿಗಳು ಮಾತ್ರ ಕಾರಣವಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವ್ಯಾಪಾರಗಳೂ ಕೂಡ ಕಾರಣವಾಗುತ್ತವೆ ಎನ್ನುವ ದಿಟವನ್ನು ಇಲ್ಲಿ ಅರಿಯಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243


