ಅಂತರಂಗ
ಅರಿಮೆಯ ಅರಿವಿರಲಿ-54 : ಮನಸಿನ ಸುಳಿಯಲ್ಲಿ ಮೈ
- ಯೋಗೇಶ್ ಮಾಸ್ಟರ್
ಆಲೋಚನೆ, ಅದೇನು ಬರತ್ವೆ ಹೋಗತ್ವೆ ಚಲಿಸುವ ಮೋಡಗಳಂತೆ. ಇಷ್ಟೇ ಆಗಿದ್ದರೆ ಇಷ್ಟು ಬರೆಯುವ ಅಗತ್ಯವೇನಿರುತ್ತಿತ್ತು! ಅವುಗಳು ಸುಳಿಯುತ್ತವೆ, ಸುಳಿದಾಡುತ್ತವೆ, ಸುಳಿಯಾಗಿ ಮೈಯನ್ನೂ ಒಳಗೆಳೆದುಕೊಳ್ಳುತ್ತವೆ.
ಅಲೆಕ್ಸ್ ಪ್ರಸಂಗ
ಅದೊಂದು ಕ್ರೈಸ್ತ ಅಧ್ಯಯನ ಸಂಸ್ಥೆ. ಪಾದ್ರಿಯಾಗಲು ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ವಿದ್ಯಾರ್ಥಿಗಳಲ್ಲಿ ಅಲೆಕ್ಸ್ ಒಳ್ಳೆಯ ಕಟ್ಟುಮಸ್ತಾದ, ಹುರುಪುಗಟ್ಟಿದ ದೇಹದವನು. ಪ್ರತಿದಿನವೂ ಬೆಳಗ್ಗೆಯೇ ವ್ಯಾಯಾಮ ಮಾಡುತ್ತಿದ್ದ. ಅತ್ಯಂತ ಕಟ್ಟುನಿಟ್ಟಾಗಿ ಊಟದ ವಿಷಯದಲ್ಲಿ ಕ್ರಮವನ್ನು ಅನುಸರಿಸುತ್ತಿದ್ದ. ಎಂದಿಗೂ ಕಣ್ಣಿನ ಆಸೆಗೆ, ನಾಲಿಗೆಯ ಚಪಲಕ್ಕೆ ಮುಕ್ಕಿದವನೇ ಅಲ್ಲ. ಕಸ ತಿನ್ನುವ ಬದಲು ತುಸ ತಿನ್ನು ಎಂದು ತಿಳಿದವನು.
ಲಘನಂ ಪರಮೌಷಧಂ ಎನ್ನುವಂತೆ (ಉಪವಾಸವೇ ಉತ್ತಮ ಚಿಕಿತ್ಸೆ) ಅವರ ಉಪವಾಸ ಕಾಲವಿಲ್ಲದಿದ್ದರೂ (ಲೆಂಟ್ ಸೀಸನ್) ಕಾಲಕಾಲಕ್ಕೆ ಉಪವಾಸವನ್ನು ಮಾಡುತ್ತಿದ್ದ. ಆದರೆ ತಾನು ಎಂದಿಗೂ ಜ್ವರ ಬಂದು ಮಲಗೇ ಇಲ್ಲ, ಡಾಕ್ಟರ್ ಬಳಿಗೆ ಹೋಗುವುದೇ ಇಲ್ಲ ಎನ್ನುವ ಅವನ ಹೆಮ್ಮೆ ಅಥವಾ ನೋಡುಗರ ದೃಷ್ಟಿಯ ‘ಜಂಭ’ ಹಲವು ವಿದ್ಯಾರ್ಥಿ ಗೆಳೆಯರ ಅಣಕಿಸುತ್ತಿತ್ತು. ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದರು.
ಒಂದು ಬೆಳಗ್ಗೆ ಅಲೆಕ್ಸ್ ತನ್ನ ವ್ಯಾಯಾಮ ಶಾಲೆಯಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಒಬ್ಬ ಸೋದರ ಕೇಳಿದ, “ಯಾಕೆ ಅಲೆಕ್ಸ್? ಒಂದು ತರಾ ಇದ್ದೀಯಾ?” ಎಂದು.
ಅಲೆಕ್ಸ್ ತಾನು ಸರಿಯಿದ್ದೇನೆ ಎಂದು ಮುಂದೆ ಹೋದ. ಆದರೆ ಅವನಿಗೆ ಎದುರಾದ ಮಿತ್ರರೆಲ್ಲಾ “ರಾತ್ರಿಯೆಲ್ಲಾ ನಿದ್ದೆ ಕೆಟ್ಟಾ?”, “ಮುಖವೇಕೆ ಬಾಡಿದೆ?”, “ಮೈ ಹುಷಾರಿಲ್ಲವಾ?”, “ಆರ್ ಯೂ ಆಲ್ ರೈಟ್?” ಇತ್ಯಾದಿ ಕೇಳುತ್ತಲೇ ಇದ್ದರು. ಸಂಜೆ ಐದೂವರೆಯ ಹೊತ್ತಿಗೆ ಅಲೆಕ್ಸ್ಗೆ ಹೈ ಟೆಂಪರೇಚರಲ್ಲಿ ಜ್ವರ ಬಂದಿತ್ತು.
ಸಾರಾ ಪ್ರಸಂಗ
ಸಾರಾ ಶಾಲೆಯೊಂದರಲ್ಲಿ ಉಪಾಧ್ಯಾಯಿನಿ. ಆಕೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಚಲಿಸುವ ಜೀಪಿನಿಂದ ಸ್ಟೆಪ್ನಿ ಟಯರೊಂದು ಕೆಳಗೆ ಬಿದ್ದು ಆಕೆಗೆ ಬಡಿದು ಅವಳನ್ನು ದೊಡ್ಡ ಹಳ್ಳಕ್ಕೆ ತಳ್ಳಿತ್ತು. ಇದರಿಂದ ಮೂರ್ಚಿತಳಾಗಿ ಬಿದ್ದ ಸಾರಾಗೆ ಕಾಲಿನ ಮೂಳೆ ವಿವಿಧ ಭಾಗಗಳಲ್ಲಿ ಮುರಿದಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯೇ ಒಳರೋಗಿಯಾಗಿ ಇದ್ದು ಕೆಲವು ಶಸ್ತ್ರಚಿಕಿತ್ಸೆಗೆ ಸಾರ ಒಳಗಾದಳು. ಸುಮಾರು ಆರು ತಿಂಗಳ ನಂತರ ಅವಳು ಕ್ಲಿನಿಕಲಿ ಫಿಟ್ ಎಂದು ಹೇಳಿ ಡಾಕ್ಟರ್ ಸರ್ಟಿಫೈ ಮಾಡಿದರೂ ಅವಳು ಎದ್ದು ನಡೆದಾಡಲು ಸಾಧ್ಯವಾಗಲಿಲ್ಲ. ಅವಳಿಗೆ ಒಂದು ಹೆಜ್ಜೆಯೂ ಇಡಲಾಗುತ್ತಿರಲಿಲ್ಲ.
ಸಾವಿತ್ರಮ್ಮ ಪ್ರಸಂಗ
ಸಾವಿತ್ರಮ್ಮ ಎಂಬ ಗೃಹಿಣಿ ಗರ್ಭಿಣಿಗೆ ತಪಾಸಣೆಯ ಸಮಯದಲ್ಲಿ ಮಗುವಿನ ಹೃದಯ ದುರ್ಬಲವಾಗಿದೆಯೆಂದೂ, ಸ್ಪಂದಿಸುತ್ತಿರುವುದು ಬರುಬರುತ್ತಾ ಕ್ಷೀಣವಾಗುತ್ತಿದೆಯೆಂದೂ, ಬಹುಶಃ ಉಳಿಯಲಾರದೆಂದೂ ಡಾಕ್ಟರ್ ಹೇಳಿದ್ದರು. ಆದರೆ ಒಂದು ದಿನದ ಕಾಲಾವಕಾಶ ಕೇಳಿದ ಸಾವಿತ್ರಮ್ಮ ತನ್ನ ಗುರುಗಳೋರ್ವರ (ಈ ಲೇಖನ ಬರೆದವನು) ಹತ್ತಿರ ಹೋಗಿ ವಿಷಯವನ್ನು ತಿಳಿಸಿದಳು.
ಮಗುವು ಜೀವಂತವಾಗಿರುವುದಕ್ಕೆ ಮಾತ್ರವಲ್ಲದೇ, ಅದು ಆರೋಗ್ಯವಾಗಿರುವಂತೆ ಸಂಕಲ್ಪ ಮಾಡಿಕೊಂಡಳು. ಮರುದಿನ ಡಾಕ್ಟರ್ ಹತ್ತಿರ ಹೋದಾಗ ಮಗುವು ಸ್ಪಂದಿಸುತ್ತಿದೆಯೆಂದೂ, ಹೃದಯ ಬಡಿತವು ಸಾಮಾನ್ಯವಾಗಿದೆ ಎಂದೂ ತಿಳಿಯಿತು. ಆ ಮಗುವಿನ ಸುಖ ಪ್ರಸವವಾಯಿತು.
ಮಂಜು ಪ್ರಸಂಗ
ಮಂಜುಳಾಳ ವಿಷಯದಲ್ಲಿ ಗರ್ಭ ನಿರೋಧಕ ಔಷಧಿಯ ನಂತರ ಗರ್ಭಧಾರಣೆಯಾಗಿತ್ತು. ಕೆಲವರು ತಮ್ಮ ಅನುಭವ ಮತ್ತು ಸಾಕ್ಷೀಕರಿಸಿದ ಸಂಗತಿಗಳ ಪ್ರಕಾರ ಆ ಮಗುವಿಗೆ ಮೆದುಳಿನ ಅಥವಾ ನರಗಳ ಅಥವಾ ಯಾವುದಾದರೂ ಅಂಗಗಳ ನ್ಯೂನ್ಯತೆಗಳಿರುತ್ತವೆ ಎಂದೂ, ಅಥವಾ ಇನ್ನೇನಾದರೂ ಸಮಸ್ಯೆ ಇರುತ್ತದೆ ಎಂದೂ ಹೇಳಿದರು.
ಎಲ್ಲರೂ ಗರ್ಭಪಾತ ಮಾಡಿಸಲು ಸೂಚಿಸುತ್ತಿದ್ದರು. ತನ್ನ ಮೊದಲ ಗರ್ಭಧಾರಣೆಯಾದ ಕಾರಣದಿಂದ ಗರ್ಭಪಾತಕ್ಕೆ ಇಷ್ಟವಿಲ್ಲದ ಮಂಜು ಸಕಾರಾತ್ಮಕವಾಗಿ ಹೇಳುವ ಬೇರೊಂದು ವೈದ್ಯರಿಂದ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಳು. ಜೊತೆಗೆ ಅವಳಿಗೆ ತಂದೆ ಸಮಾನದಲ್ಲಿ ಅವಳೊಡನೆ ಬೆಂಬಲವಾಗಿದ್ದ ಗುರುಗಳ ಮೂಲಕ ಸಾವಿತ್ರಮ್ಮನ ಪ್ರಸಂಗದ ಜೀವಂತ ಉದಾಹರಣೆ ಕಣ್ಣ ಮುಂದಿತ್ತು.
ಗರ್ಭಕಟ್ಟಿದ, ಗರ್ಭನಿರೋಧಕ ಔಷಧಿಯನ್ನು ತೆಗೆದುಕೊಂಡ ಅವಧಿಗಳನ್ನೆಲ್ಲಾ ಕೂಲಂಕುಶವಾಗಿ ವಿಚಾರ ಮಾಡಿದ ಮತ್ತೊಬ್ಬ ವೈದ್ಯರು 50-50 ಎಂದರು.
ಕೆಲವೊಮ್ಮೆ ಆ ಬಗೆಯ ಸಮಸ್ಯೆಗಳಾಗಬಹುದು. ಕೆಲವೊಮ್ಮೆ ಸಮಸ್ಯೆ ಆಗದಿರಲೂಬಹುದು ಎಂದರು. ಮಂಜು ಮಗುವಾಗಲಿ ಎಂದು ಬಯಸಿದಳು. ಆದುದ್ದಾಗಲಿ ನೋಡೇಬಿಡೋಣ ಎಂದು ಕಾದಳು. ಹೆಣ್ಣುಮಗು ಜನಿಸಿತು. ಆರೋಗ್ಯವಾಗಿತ್ತು. ಈಗ ಆ ಮಗು ಶಾಲೆಗೆ ಹೋಗುತ್ತಿದೆ. ಸುಂದರ ಮತ್ತು ಆರೋಗ್ಯವಾಗಿರುವ ಆ ಮಗು ನೃತ್ಯ ಕಲಿಯುತ್ತಿದೆ. ಮನೆಯವರೆಲ್ಲರ ಕಣ್ಮಣಿಯಾಗಿ ಬೆಳೆಯುತ್ತಿದೆ.
ಭಾಗ್ಯಮ್ಮನ ಪ್ರಸಂಗ
ಅದೊಂದು ತುಂಬು ಕುಟುಂಬ. ಭಾಗ್ಯಮ್ಮ ಹಿರಿಯ ಸೊಸೆ. ಬೆಳಗ್ಗಿನಿಂದ ರಾತ್ರಿಯವರೆಗೂ ಕೆಲಸ. ಗಂಡ, ಅತ್ತೆ, ಮಾವ, ಮೈದುನಂದಿರು, ವಾರಗಿತ್ತಿಯರು, ಎಲ್ಲರ ಮಕ್ಕಳು, ಮನೆಯ ಕೆಲಸದಾಳುಗಳು, ಮನೆಯ ವ್ಯವಹಾರ, ಅಂಗಡಿಗೆ ಹೋಗಿ ಸಾಮಾನುಗಳನ್ನು ತರುವುದರಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗೂ ಅವಳದೇ ಉಸ್ತುವಾರಿ, ಅವಳದೇ ಜವಾಬ್ದಾರಿ.
ಕಬ್ಬಿಣದ ಪೆಟ್ಟಿಗೆಯಲ್ಲಿ ಇಡುವ ಹಣ ಮತ್ತು ವಡವೆಗಳಿಂದ ಹಿಡಿದು, ಕೂಲಿಯವರಿಗೆ ಕೊಡುವ ಸಂಬಳ, ಮನೆಯವರಿಗೆ ವ್ಯವಹಾರಕ್ಕೆ ಕೊಡುವ ಹಣ, ವಾರಗಿತ್ತಿಯರಿಗೆ, ಮಕ್ಕಳಿಗೆ ಕೊಡುವ ಖರ್ಚು ಎಲ್ಲವೂ ಅವಳ ಸುಪರ್ದಿನಲ್ಲೇ ಇರುವುದು.
ಕೆಲವೊಮ್ಮೆ ಅವಳಿಗೆ ಜ್ವರ ಬರುವುದು. ಭಯಂಕರವಾಗಿ ಹುಷಾರು ತಪ್ಪುವುದು. ಹಾಸಿಗೆ ಹಿಡಿಯುವಳು. ಯಾವ ಡಾಕ್ಟರು ಎಷ್ಟು ನೋಡಿದರೂ, ಏನೇ ಔಷಧಿ ಕೊಟ್ಟರೂ ವಾಸಿಯಾಗುವುದಿಲ್ಲ. ಒಂದಷ್ಟು ಕಾಲ ಹಾಸುಗೆ ಹಿಡಿದೇ ಹಿಡಿಯುವಳು. ನಂತರ ತಾನಾಗಿಯೇ ವಾಸಿಯಾಗಿ ತನ್ನ ಜವಾಬ್ದಾರಿಯ ನೊಗಕ್ಕೆ ತನ್ನ ಹೆಗಲನ್ನು ಕೊಡುವಳು.
ಪ್ರಸಂಗಗಳ ವಿಶ್ಲೇಷಣೆ
ಅಲೆಕ್ಸ್ ಪ್ರಸಂಗದಲ್ಲಿ ತನ್ನ ಭೇಟಿಯಾಗುತ್ತಿದ್ದ ಒಬ್ಬೊಬ್ಬರೂ ಕೂಡಾ ನಿನಗೇನೋ ಆಗಿದೆ, ನೀನು ಹುಷಾರು ತಪ್ಪಿದಂತೆ ಕಾಣುತ್ತಿದ್ದೀಯಾ, ನಿನ್ನಲ್ಲಿ ಸಮಸ್ಯೆ ಇದೆ ಎಂದು ಒಂದೇ ಸಮನೆ ಹೇಳುತ್ತಿದ್ದರು. ಮೊದಮೊದಲು ನಿರಾಕರಿಸಿದ ಅಲೆಕ್ಸ್ ನಂತರ ಇಷ್ಟು ಜನ ಹೇಳುತ್ತಿರುವಾಗ ಬಹುಶಃ ನಿಜವೇ ಇರಬಹುದೆಂದು ನಂಬತೊಡಗಿದ. ತನಗೆ ಹುಷಾರು ತಪ್ಪಿದೆ ಎಂದು ಅನ್ನಿಸತೊಡಗಿದಾಗ, ಅದನ್ನು ನಂಬತೊಡಗಿದಾಗ ನಿಜವಾಗಿಯೇ ಹುಷಾರು ತಪ್ಪಿದ.
ತನಗೆ ನೀಡುತ್ತಿದ್ದ ನಕಾರಾತ್ಮಕ ಸೂಚನೆಗಳನ್ನು ತೆಗೆದುಕೊಂಡದಷ್ಟೇ ಅಲ್ಲದೇ ಅದನ್ನು ನಂಬಿದರಿಂದ ಅವನಿಗೆ ಅವನು ಸ್ವೀಕರಿಸಿದ ಸೂಚನೆಯ ಸ್ಥಿತಿಯನ್ನೇ ಪಡೆದ.
ಸಾರಾ ಪ್ರಸಂಗದಲ್ಲಿ, ಅವಳು ಸ್ಟೆಪ್ನಿ ಟಯರ್ ತಗುಲಿ ಹಳ್ಳಕ್ಕೆ ಬಿದ್ದು, ಮಲ್ಟಿಪಲ್ ಫ್ರಾಕ್ಚರ್ ಆದ ಮೇಲೆ ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಸಾರಾ ಮೂರ್ಚಾವಸ್ಥೆಯಲ್ಲಿ ಇರುವಾಗ ನೆಲ ಸಾರಿಸುತ್ತಿದ್ದ ಇಬ್ಬರು ಹೆಂಗಸರು ಸಾರಾಳ ಸ್ಥಿತಿಗೆ ಮರುಗುತ್ತಾ, “ಪಾಪ, ಇಷ್ಟು ದೊಡ್ಡ ಪೆಟ್ಟಾಗಿ ಕಾಲು ಹೀಗೆ ಮುರಿದುಹೋಗಿದೆ. ಇನ್ನು ಮುಂದೆ ಎಂದಿಗೂ ಇವಳು ನಡೆಯಲಾರಳು” ಎಂಬರ್ಥದಲ್ಲಿ ಚರ್ಚಿಸಿದ್ದರು.
ಸಾರಾ ಜಾಗೃತವಾಗಿರದಿದ್ದರೂ ಅವಳ ಮನಸ್ಸಿನ ಸುಪ್ತಚೇತನ ಅದನ್ನು ಒಪ್ಪಿಬಿಟ್ಟಿತ್ತು. ಅದನ್ನು ಸತ್ಯವೆಂದು ನಂಬಿತ್ತು. ಹಾಗಾಗಿ ಅವಳು ಸಂಪೂರ್ಣ ಗುಣಮುಖಳಾಗಿದ್ದರೂ ಅವಳ ಒಳಮನಸ್ಸು ಅವಳಿಗೆ ನಡೆಯಲು ಬಿಟ್ಟಿರಲಿಲ್ಲ. ಮತ್ತೆ ಅವಳನ್ನು ಸಂಮೋಹನಕ್ಕೊಳಪಡಿಸಿ, ಸಮಾಲೋಚನೆಗಳಿಂದ ಅವಳಿಗೆ ನಡೆಯಲು ಸಾಧ್ಯವಿದೆ ಎಂದು ಮನವರಿಕೆ ಮಾಡಿಸಿದ ಮೇಲೆ ಎಂದಿನಂತೆ ನಡೆಯತೊಡಗಿದಳು.
ಸಾವಿತ್ರಮ್ಮನೋ, ಅವಳಿಗೆ ಅವಳ ಗುರುಗಳು ಹೇಳಿದ್ದರು. ತಮ್ಮ ದೇಹದ ಆರೋಗ್ಯ ಮತ್ತು ಗರ್ಭದೊಳಗಿನ ಶಿಶುವಿನ ಬೆಳವಣಿಗೆಯು ತಾಯಿಯ ಆಲೋಚನೆಯ ಮೇಲೆ ಅವಲಂಬಿಸಿರುತ್ತದೆ ಎಂದು. ಹಾಗಾಗಿ, ವೈದ್ಯರು ಮಗುವು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾಗ, ಅವಳು ದಿನ ಪೂರ್ತಿ ಸುಮಧುರ ಸಂಗೀತವನ್ನು ಕೇಳುತ್ತಾ, ಗುರುಗಳು ನೀಡುತ್ತಿದ್ದ ಸಕಾರಾತ್ಮಕ ಸಂದೇಶಗಳನ್ನು ಕೇಳುತ್ತಾ ತನ್ನ ಮಗುವು ಆರೋಗ್ಯವಾಗಿಯೂ, ಜೀವಂತವಾಗಿಯೂ ತನ್ನ ಜೊತೆಯಲ್ಲಿರಬೇಕೆಂದು ಬಯಸಿದ್ದಳು.
ಅದೊಂದು ವೈದ್ಯಕೀಯ ಪವಾಡವೆಂದು ಡಾಕ್ಟರ್ ಉದ್ಗರಿಸುವಂತೆ ಮರುದಿನದ ತಪಾಸಣೆಯ ಸಂದರ್ಭದಲ್ಲಿ ಮಗುವು ಸ್ಪಂದಿಸುತ್ತಿತ್ತು.
ಅದೇ ರೀತಿ ಮಂಜು ಕೂಡಾ, 50-50 ಎಂದು ಹೇಳಿದ ವೈದ್ಯರ ಮಾತಲ್ಲಿ ತನಗೆ ಬೇಕಾದ ಸಮಸ್ಯೆ ಇಲ್ಲದ ಮಗುವು ಹುಟ್ಟುತ್ತದೆ ಎಂಬ ಮಾತನ್ನು ಮಾತ್ರ ಸ್ವೀಕರಿಸಿದಳು. ಅದರಂತೆಯೇ ತನ್ನ ಗರ್ಭದೊಳಗಿನ ಮಗುವು ಆರೋಗ್ಯವಾಗಿ, ಚೆನ್ನಾಗಿ ಇರುವುದರ ಚಿತ್ರಣವನ್ನು ಮನಸ್ಸಿನ ಪರದೆಯ ಮೇಲೆ ರೂಪಿಸಿಕೊಂಡು ಬಸುರಿನ ದಿನಗಳನ್ನು ಕಳೆದಳು. ಆರೋಗ್ಯವಾಗಿರುವ ಮಗುವು ಹುಟ್ಟಿತು.
ಭಾಗ್ಯಮ್ಮನ ಪ್ರಸಂಗದಲ್ಲಿ, ದಿನನಿತ್ಯವೂ ಇಡೀ ಸಂಸಾರದ ನೊಗಕ್ಕೆ ಹೆಗಲುಗೊಟ್ಟು ದುಡಿವ ಅವಳಿಗೆ ಮನೆಯಲ್ಲಿ ಯಾರೊಬ್ಬರಿಗೂ ನೀನು ಹೇಗಿದ್ದೀಯಾ? ಉಂಡೆಯಾ? ಕುಡಿದೆಯಾ? ಸ್ನಾನ ಆಯಿತಾ? ಯಾವ ಬಟ್ಟೆ ಹಾಕಿಕೊಳ್ಳುತ್ತಿದ್ದೀಯಾ? ಎಂದು ಕೇಳುವವರು, ಉಪಚರಿಸುವವರು ಯಾರೂ ಇರುತ್ತಿರಲಿಲ್ಲ. ಹಾಗೆ ಉಪಚರಿಸಬಾರದೆಂದೇನೂ ಯಾರಿಗೂ ಇಲ್ಲ ಆದರೆ, ಅವಳೇ ಉಪಚಾರ ಮಾಡುವವಳಾಗಿದ್ದಳು.
ಎಲ್ಲರನ್ನೂ ನೋಡಿಕೊಳ್ಳುವ ಅವಳನ್ನು ನೋಡಿಕೊಳ್ಳಬೇಕೆಂಬ ಅಗತ್ಯ ಇದೆ ಎಂದು ಯಾರಿಗೂ ಅನ್ನಿಸಿಯೇ ಇರಲಿಲ್ಲ. ಹೀಗೆ ಯಾವುದಾದರೂ ಕಾರಣಕ್ಕೆ ಸಣ್ಣ ಜ್ವರ ಬಂದರೆ, ಪುಟ್ಟದಾಗಿ ಹುಷಾರು ತಪ್ಪಿದರೂ ಅವಳು ಗಂಭೀರವಾಗಿ ಮಲಗಿಬಿಡುತ್ತಿದ್ದಳು. ತನ್ನ ಜ್ವರವನ್ನು ವಾಸಿ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಅವಳು ಮಲಗಿದರೆ ಎಲ್ಲರೂ ಅವಳ ಉಪಚಾರಕ್ಕೆ ಮುಂದಾಗುತ್ತಿದ್ದರು.
ಹಣ್ಣು ಹಂಪಲು ಕೊಡುವುದು, ಹಣ್ಣಿನ ರಸ ಮತ್ತು ಔಷಧಿಯನ್ನು ಕುಡಿಸುವುದು, ಹೇಗಿದೆ? ಹೇಗನಿಸುತ್ತಿದೆ? ಬೇಗ ಹುಷಾರಾಗು ಎಂದು ನೋಡಿಕೊಳ್ಳುವುದೆಲ್ಲಾ ಆಗುತ್ತಿತ್ತು. ಈ ಬಗೆಯ ಪ್ರೀತಿಯ ಮತ್ತು ಕಾಳಜಿಯ ಕ್ಷಣಗಳನ್ನು ಅನುಭವಿಸಲು, ಆನಂದಿಸಲು ಭಾಗ್ಯಮ್ಮ ತನ್ನ ಜ್ವರವನ್ನು ಹೋಗಗೊಡುತ್ತಿರಲಿಲ್ಲ. ತನ್ನ ಜ್ವರದಿಂದ ಸಿಗುವಂತಹ ಸೆಕೆಂಡರಿ ಬೆನಿಫಿಟ್ ಅವಳಿಗೆ ತುಂಬಾ ಮುಖ್ಯ ಅನ್ನಿಸುತ್ತಿತ್ತು.
ಈ ಪ್ರಸಂಗಗಳನ್ನೆಲ್ಲಾ ಗಮನಿಸಿದರೆ, ಮಾಡುವ ಆಲೋಚನೆ, ಹೊಂದುವ ಚಿಂತನೆಗಳು, ರೂಪಿಸಿಕೊಳ್ಳುವ ಚಿತ್ರಣಗಳು ಜೈವಿಕವಾದಂತಹ ಪರಿಣಾಮವನ್ನು ಬೀರುತ್ತವೆ ಎಂದು ಅನಿಸುತ್ತದೆ, ಅಲ್ಲವೇ?
(ಮುಂದುವರಿಯುವುದು)
- ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ20 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


