Connect with us

ನೆಲದನಿ

ನುಡಿಯ ಒಡಲು 13 | ಒಳನುಡಿ : ನುಡಿಯೊಳಗಿನ ನುಡಿ ಉಪನುಡಿಯಲ್ಲ

Published

on

 

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು ಶಿವಮೊಗ್ಗ

ಭಾಗ-01

ನುಡಿಯರಿಮೆಯ ಯಾವುದೇ ತರಬೇತಿ ಇಲ್ಲದೆಯೂ ಎಷ್ಟೋ ಮಂದಿ ‘ಒಳನುಡಿ’ (ಉಪಭಾಷೆ)ಗಳನ್ನು ಗುರುತಿಸಬಲ್ಲರು. ಪ್ರತಿ ನುಡಿಸಮುದಾಯದ ಜನರಾಡುವ ಮಾತುಗಳಲ್ಲಿಯೇ ಆಯಾ ನುಡಿಯೊಳಗಿನ ವ್ಯತ್ಯಾಸಗಳು ಎಂತಹವು ಎಂಬುದು ಎದ್ದುಕಾಣುವುದಕ್ಕೆ ಮುಖ್ಯ ಕಾರಣವೇ ಇದು.

ಆದರೆ ಈ ವ್ಯತ್ಯಾಸಗಳು ಯಾವ ಬಗೆಯವು? ಅವುಗಳ ರಾಚನಿಕ ಸ್ವರೂಪ ಎಂತಹದು? ನುಡಿಯ ಯಾವ ಯಾವ ನೆಲೆಯಲ್ಲಿ ಇಂತಹ ವ್ಯತ್ಯಾಸಗಳನ್ನು ಗುರುತಿಸಬಹುದು? ಈ ಎಲ್ಲ ವ್ಯತ್ಯಾಸಗಳನ್ನು ಬಿಡಿಸಿ ನೋಡುವ ಮಾನದಂಡಗಳಾವವು? ಎಂಬೆಲ್ಲ ಕೇಳ್ವಿಗಳಿಗೆ ಉತ್ತರಿಸಲು ಒಂದು ಮಟ್ಟದ ನುಡಿಯರಿಮೆಯ ತರಬೇತಿ ಅತ್ಯಂತ ಜರೂರಿನದು ಎಂಬ ಸಂಗತಿಯನ್ನು ನಾವು ಮನಗಾಣಬೇಕಿದೆ.

ದಿಟ ತಮ್ಮ ಮಾತುಗಳಿಗೆ ಹೊರತಾದ ಬೇರೊಂದು ಬಗೆಯ ಉಚ್ಚಾರಣೆಯನ್ನು ಕೇಳಿದೊಡನೆ, ಸಾಮನ್ಯ ನುಡಿಯಿಗರಲ್ಲಿ ಪ್ರಚೋದನೆ ಉಂಟಾಗುತ್ತದೆ. ಈ ಪ್ರಚೋದನೆ ಇಂತಹ ಬೇರೆ ಬಗೆಯ ಮಾತುಗಳ ಗುಣಗಳನ್ನು ಗುರುತಿಸುವಂತೆ ಒತ್ತಾಯಿಸುತ್ತದೆ. ಇಂತಹ ಒತ್ತಾಯಕ್ಕೆ ರಾಜಕೀಯ ಕಾರಣಗಳು ಇರುತ್ತವೆ. ಪರಿಣಾಮವಾಗಿ ಆಡುನುಡಿ ಮತ್ತು ಬರಹನುಡಿಗಳು ಎಂಬಿತ್ಯಾದಿ ತಪ್ಪಿರಿವಿನ ಬಗೆಗಳು ಹುಟ್ಟಿಕೊಳ್ಳುತ್ತವೆ.

ನುಡಿಯರಿಮೆಯ ನಿಲುವುಗಳಿಗೆ ಹೊರತಾದ, ಸಾಮಾಜಿಕ, ಸಾಂಸ್ಕೃತಿಕ ನಿಲುವುಗಳೇ ಇಂತಹ ವಿಂಗಡನೆಗೆ ಕಾರಣವಾಗುತ್ತವೆ. ಹಾಗೂ ಇದರ ಪರಿಣಾಮಗಳು ಮೇಲು-ಕೀಳು ಎಂಬ ಡೈಕಾಟಮಿಗಳ ಹುಟ್ಟಿಗೆ ಕಾರಣವಾಗುತ್ತವೆ. ಹಾಗಾಗಿ ನುಡಿ ಮತ್ತು ಒಳನುಡಿಗಳು ಎಂಬ ಬಗೆಗಳು ನೆಲೆಗೊಳ್ಳುತ್ತವೆ. ಅಷ್ಟೆಯಲ್ಲದೇ ಅವುಗಳ ನಡುವೆ ಸಾಮಾಜಿಕ ಅಸಮಾನ ನೆಲೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಅಸಮಾನ ನೆಲೆಗಳು ನಿರಂತರವಾಗಿ ನೆಲೆನಿಲ್ಲಲು ಅಧಿಕಾರ ಸಂಬಂಧಗಳೂ ಕೈ ಜೋಡಿಸುತ್ತವೆ ಎಂಬುದನ್ನು ಗಮನಿಸಲೆಬೇಕಾದ ಸಂಗತಿ. ಪರಿಣಾಮವಾಗಿ ಕೆಲವು ಪ್ರತಿಷ್ಠಿತ ಒಳನುಡಿಗಳಾಗಿ ಮತ್ತೆ ಕೆಲವು ಅಪ್ರತಿಷ್ಠಿತ ಒಳನುಡಿಗಳಾಗಿ ರೂಪುಗೊಳ್ಳುತ್ತವೆ.

ಒಳನುಡಿಗಳನ್ನು ನುಡಿಯರಿಮೆಯ ನೆರವಿನಿಂದ ಓದುವುದರಿಂದ ಕೊನೆಪಕ್ಷ ಎರಡು ಬಗೆಯ ತಿಳುವಳಿಕೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆ ಎರಡೂ ತಿಳಿವುಗಳಾವವು ಎಂದರೆ;

1. ಕಾಲದಿಂದ ಕಾಲಕ್ಕೆ ನುಡಿ ಬದಲಾವಣೆ ಹೇಗೆ ಆಗುತ್ತದೆ ಹಾಗೂ ಅಂತಹ ಬದಲಾವಣೆಗಳು ಹೇಗಿರುತ್ತವೆ ಎಂಬ ಸಂಗತಿಗಳು ಪರಿಚಯವಾಗುತ್ತವೆ.

2. ನುಡಿ ಬಳೆಕೆಗೂ ಮತ್ತು ಸಾಮಾಜಿಕ ಅನನ್ಯತೆಗಳ ನಡುವೆ ಯಾವ ಬಗೆಯ ಅಂತರ್ಸಂಬಂಧವಿರುತ್ತದೆ ಎಂಬ ದಿಟದ ನೆಲೆಗಳು ಇಂತಹ ಓದಿನಿಂದ ತಿಳಿಯುತ್ತವೆ.

ಈ ಎರಡೇ ಸಂಗತಿಗಳು ಮಾತ್ರವಲ್ಲ ಇನ್ನೂ ಹಲವು ಬಗೆಯ ತಿಳಿವಳಿಕೆಗಳು ಈ ಒಳನುಡಿ ಓದಿನಿಂದ ಸಿಗುತ್ತವೆ; ಒಳನುಡಿಗಳ ಸುತ್ತ ಸುತ್ತಿಕೊಂಡಿರುವ ತಿಳಿವಳಿಕೆಗಳು ಹೇಗೆ ತಪ್ಪರಿವಿನಿಂದ ಕೂಡಿರುತ್ತವೆ, ಮತ್ತು ಇಂತಹ ನುಡಿಬಗೆಗಳು ಸಾಮಾಜಿಕ ಅಸಹನೆಯ ರೂಪಕಗಳಾಗಿ ಹೇಗೆ ನೆಲೆನಿಲ್ಲುತ್ತವೆ ಮುಂತಾದ ಸಂಗತಿಗಳು ಇಲ್ಲಿ ನಿಚ್ಚಳಗೊಳ್ಳುತ್ತವೆ. ನುಡಿ ಬಗೆಗಳು ಇಲ್ಲವೇ ಸಾಮಾಜಿಕ ವೈವಿಧ್ಯತೆ ಎನ್ನುವುದು ಅಸಮಾನತೆಯನ್ನು ಹುಟ್ಟಿಸುವ ನೆಲೆಗಳಲ್ಲ.

ಬದಲಾಗಿ ಸಮುದಾಯಗಳಲ್ಲಿ ಹುದುಗಿರುವ ಗುರುತಿನ ಬಗೆಗಳಾಗಿರುತ್ತವೆ. ಸಾಂಸ್ಕ್ರುತಿಕ ರಾಜಕಾರಣದ ಮಸಲತ್ತಿನಿಂದ ಸಮುದಾಯ ಹಾಗೂ ಸದಸ್ಯರ ನಡುವಿನ ಇಂತಹ ಅಸಮಾನ ನೆಲೆಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತಲೆಯಿವೆ. ಈ ವ್ಯತ್ಯಾಸ ಇಲ್ಲವೇ ಬೇರೆತನಗಳು ವ್ಯಕ್ತಿ ಮತ್ತು ಸಮುದಾಯಗಳ ಸ್ವಾಯತ್ತತೆಯ ಗುರುತು (ಅಟಾನಮಿ ಆಫ್ ಐಡೆಂಟಿಟಿ) ಗಳಾಗಿ ರೂಪುಗೊಳ್ಳಬೇಕು, ಹೊರತು ಅಸಮಾನ ನೆಲೆಗಳಾಗಿಯಲ್ಲ. ಹಾಗಾಗಿ ಲೋಕ ಹೆಸರುವಾಸಿ ನುಡಿಯರಿಗ ಫರ್ಡಿನಾಂಡ್ ಡಿ. ಸಸ್ಯೂರ್ ಪರಿಚಯಿಸಿದ ‘ಡಿಫರನ್ಸ್’ ಎಂಬ ಅರಿಮೆಪದಕ್ಕೆ ನುಡಿ ಹಾಗೂ ಸಂಸ್ಕೃತಿ ಓದುಗಳಲ್ಲಿ ಅಷ್ಟೊಂದು ಮಹತ್ವ ಸಿಕ್ಕಿರುವುದಕ್ಕೇನು ಕಾರಣ ಹಾಗಾದರೆ? ಆದ್ದರಿಂದ ಇಂತಹ ಸ್ವಾಯತ್ತತೆಯ ನೆಲೆಗಳು ವ್ಯಕ್ತಿ ಇಲ್ಲವೇ ಸಮುದಾಯದ ಗುರುತಿನ ರೂಪಕವಾಗಬೇಕಾದ ಅಗತ್ಯವಿದೆ.

ಬದಲಾಗಿ ಅವುಗಳ್ಳನ್ನೂ ಕೂಡ ಅಧಿಕಾರ ಸಂಬಂಧದ ರಚನೆಯಾಗಿ ರೂಪುಗೊಳ್ಳಿಸುವುದಲ್ಲ. ಎತ್ತುಗೆಗಾಗಿ ನೋಡಿ, ಕನ್ನಡದ ಬೇರೆ ಬೇರೆ ಒಳನುಡಿ ಇಲ್ಲವೇ ನುಡಿಬಗೆಗಳಿಗೆ ಇರುವ ಸ್ವಾಯತ್ತತೆ ಹಾಗೂ ವೈವಿಧ್ಯತೆಯನ್ನು ನಿರಾಕರಿಸಿ, ಅವುಗಳೆಲ್ಲವನ್ನೂ ಪ್ರಮಾಣ ಕನ್ನಡದ ವಿರೂಪಗಳೆಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಸ್ವಾಯತ್ತತೆ ಮತ್ತು ವೈವಿಧ್ಯತೆಗಳು ನುಡಿ ಸಮುದಾಯದ ಪರಸ್ಪರ ನಂಟಿನ ನೆಲೆಗಳಾಗದೇ, ಅವೆರಡೂ ನುಡಿ ಸಮುದಾಯದ ವಿನ್ಯಾಸವನ್ನೇ ವಿರೋಧಾತ್ಮಕ ನೆಲೆಯಲ್ಲಿ ಗುರುತಿಸುವ ಮಾನದಂಡಗಳಾಗಿವೆ.

ಯಾವುದೇ ಪ್ರದೇಶ, ಜಾತಿ, ವರ್ಗ, ಧರ್ಮ ಎಂಬಿತ್ಯಾದಿ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳು ಎಂತಹದೇ ಪ್ರಾಬಲ್ಯವನ್ನು ಹೊಂದಿದ್ದರೂ, ಅವುಗಳು ಮಾತನಾಡುವ ನುಡಿಯೂ ಒಂದು ಒಳನುಡಿಯೇ ಆಗಿರುತ್ತದೆ. ಹಾಗಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನೇ ಮುಂದಿಟ್ಟುಕೊಂಡು ಒಳನುಡಿಗಳಲ್ಲಿ ಒಂದು ಮೇಲು ಮತ್ತೊಂದನ್ನು ಕೀಳಾಗಿ ಕಾಣುವ ಬಗೆಗಳು ಏಕೆ? ಮತ್ತು ಹೇಗೆ ಮುಂಚೂಣೆಗೆ ಬಂದಿವೇ? ಈ ಕೇಳ್ವಿಗಳು ಅತ್ಯಂತ ತೊಡಕಿನವಾದರೂ, ಅವುಗಳನ್ನು ಅರಿಯಲು ಬೇಕಾಗುವ ಒಂದಿಷ್ಟು ವಿವರಗಳನ್ನು ಈ ಮುಂದಿನ ಚರ್ಚೆಗಳಲ್ಲಿ ಕಾಣುತ್ತೇವೆ.

ನುಡಿ ಮತ್ತು ಒಳನುಡಿ: ಇವುಗಳ ದಿಟ ಚಹರೆಗಳೆಂತಹವು?

ಇಂಗ್ಲಿಶಿನ ಡಯಲೆಕ್ಟ್ ಎಂಬ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ‘ಉಪಭಾಷೆ’ ಅನ್ನುವ ಅರಿಮೆಪದವನ್ನು ಬಳಸುತ್ತಾರೆ. ಡಯಲೆಕ್ಟ್ ಎಂಬುದು ಗ್ರೀಕಿನ ಡಯಲೆಕ್ಟೋಸ್ (dialektos) ಎಂಬ ಪದದಿಂದ ಹುಟ್ಟಿದೆ. ನುಡಿಯರಿಗರು ಇದನ್ನು ಎರಡು ಬಗೆಯಲ್ಲಿ ನಿರ್ವಚಿಸಿರುವುದನ್ನು ನೋಡಬಹುದು. ನುಡಿಯೊಳಗೆಯೇ ಇರುವ ಆಯಾ ನುಡಿಯ ಬೇರೆ ಬೇರೆ ಬಗೆಗಳನ್ನೇ ಉಪಭಾಷೆ ಎಂದು ಕರೆಯುತ್ತಾರೆ. ಈ ವಾದದ ಪ್ರಕಾರ ಈ ನುಡಿ ಬಗೆಗಳ ಲಕ್ಷಣಗಳು ಆ ನುಡಿ ಸಮುದಾಯದ ಯಾವುದೇ ಒಂದು ನಿರ್ದಿಷ್ಟ ಗುಂಪನ್ನು ಪ್ರತಿನಿಧಿಸುತ್ತವೆ.

ಅಂದರೆ ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಇನ್ನೂ ಮುಂತಾಗಿ ಅವುಗಳನ್ನು ಹೆಸರಿಸುವುದೇ ಮೊದಲ ಬಗೆಯ ನಿರ್ವಚನೆಯಾಗಿದೆ. ಸಾಮಾಜಿಕ, ಪ್ರಾದೇಶಿಕ ನಂಟನ್ನು ಹೊಂದಿರುವ ಇಂತಹ ಯಾವುದೇ ನುಡಿ ಬಗೆಗಗಳು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಒಂದು ಪ್ರಮಾಣ ನುಡಿಯಾಗಿ ಗುರುತಿಸಿಕೊಳ್ಳುತ್ತವೆ. ಹಾಗೂ ಅಂತಹ ನುಡಿಗಳ ಅಧೀನ ರೂಪಗಳೇ ಈ ಉಪಭಾಷೆಗಳೆಂದು ಮತ್ತೊಂದು ಬಗೆಯ ನಿರ್ವಚನೆ ಹೇಳುತ್ತದೆ.

ಈ ಎರಡೂ ಪ್ರಕಾರದ ನುಡಿಯರಿಗರು ತಮ್ಮ ಉಪಭಾಷೆಯ ಬಗೆಗಿನ ನಿರ್ವಚನೆಗೆ ಬಳಸಿಕೊಳ್ಳುವ ಮಾನದಂಡಗಳು ಮಾತ್ರ ಒಂದೇ ಬಗೆಯ ಮಾನದಂಡಗಳಾಗಿವೆ ಎಂಬುದು ಮಾತ್ರ ಗಮನಾರ್ಹ. ಆ ಮಾನದಂಡಗಳನ್ನು ಉಲಿ, ಪದ, ಸೊಲ್ಲರಿಮೆ ಎಂಬಿತ್ಯಾದಿಯಾಗಿ ಗುರುತಿಸಬಹುದು. ದಿಟ ಇದೇ ನೆಲೆಗಳ ಮೂಲಕ ನುಡಿ ಬಗೆಗಳ ಕುರುಹುಗಳನ್ನು ಗುರುತಿಸುತ್ತಾರೆ. ಆದರೆ ಇದೇ ಕುರುಹುಗಳು ನುಡಿಯ ರಾಚನಿಕ ವಿಕಲ್ಪಗಳನ್ನೂ ಗುರುತಿಸುವ ಇಲ್ಲವೇ ನೋಡುವ ಕ್ರಮಗಳೂ ಆಗಿರುತ್ತವೆ ಎಂಬುದು ಅತ್ಯಂತ ಮಹತ್ವದ ಸಂಗತಿ ಎಂಬುದು ಈ ನಿರ್ವಚನಕಾರರಿಗೆ ಯಾಕೆ ಹೊಳೆಯಲಿಲ್ಲ.?

ನುಡಿಯರಿಮೆಯನ್ನು ಕೂಡ ಸಾಮಾಜಿಕ ಅಸಮಾನತೆಯನ್ನು ಹುಟ್ಟುಹಾಕಲು ಒಂದು ಮಾನದಂಡವನ್ನಾಗಿ ಬಳಸಿಕೊಂಡರೆ, ಅದನ್ನು ಓದುವ ಅಗತ್ಯವಾದರು ಯಾಕೆ? ಎಂಬ ಕೇಳ್ವಿಗಳು ಸಹಜವಾಗಿಯೇ ಎದುರಾಗುತ್ತವೆ. ನುಡಿಯರಿಮೆ ಇಲ್ಲವೇ ಇನ್ನ್ಯಾವುದೇ ಓದಿನ ವಲಯವಾದರೂ ಅವುಗಳ ಗುರಿಗಳು ಸಮುದಾಯದ ಅರಿವಿನ ನೆಲೆಗಳನ್ನು ಹಿಗ್ಗಿಸುವ ಮಾನದಂಡಗಳಾಗಬೇಕಾದ ಜರೂರಿದೆ. ಇಂತಹ ಅರಿವಿನ ವಲಯಗಳನ್ನೇ ಬಳಸಿಕೊಂಡು ಸಮುದಾಯಗಳನ್ನು ನರಕದ ಕೂಪಕ್ಕೆ ತಳ್ಳುವುದಕ್ಕಲ್ಲ ಎಂಬ ದಿಟವನ್ನು ನಾವು ಮನಗಾಣಬೇಕಿದೆ.

ಇದುವರೆಗೂ ಬಳಕೆಯಲ್ಲಿದ್ದ ಉಪಭಾಷೆ ಎಂಬ ಪದಕ್ಕೆ ಬದಲಾಗಿ ‘ಒಳನುಡಿ’ ಎನ್ನುವ ಅರಿಮೆಪದವನ್ನು ಬಳಸಲಾಗುತ್ತಿದೆ. ಈ ಹೊಸ ಅರಿಮೆಪದವನ್ನು ಮೊದಲು ಪರಿಚಯಿಸಿದವರು ಡಿ.ಎನ್.ಶಂಕರ ಭಟ್ಟ ಅವರು. ಒಳನುಡಿ ಎಂಬುದು ನುಡಿಯ ನೆಲೆಯಿಂದಲೂ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ. ಆದರೆ ಉಪಭಾಷೆ ಎಂಬ ಪದದಲ್ಲೇ ಅಧೀನ ನೆಲೆಯನ್ನು ಸೂಚಿಸುವ ತಿರುಳಿದೆ. ಈ ತಿರುಳೇ ಸಾಮಾಜಿಕ ಅಸಮಾನತೆಯನ್ನು ಸೂಚಿಸುತ್ತದೆ.

ಹಾಗಾಗಿ ಇದು ಕೇವಲ ಪದಗಳಲ್ಲಾದ ಬದಲಾವಣೆ ಮಾತ್ರವೆಂದು ತಿಳಿಯಬಾರದು. ಲೋಕವನ್ನು ನೋಡುವ ಬಗೆಯಲ್ಲಿಯೇ ಹುದಿಗಿರುವ ಅಸಮಾನ ನೆಲೆಗಳನ್ನು ಅರಿಯುವ ಬಗೆಯೂ ಇದಾಗಿದೆ. ಏಕೆಂದರೆ ಉಪಭಾಷೆ ಇಲ್ಲವೇ ಒಳನುಡಿ ಎಂಬುದು ಅಧೀನ ಇಲ್ಲವೇ ಇನ್ನೊಂದರ ವಿರೂಪವೆಂದಲ್ಲ. ಬದಲಾಗಿ ನುಡಿಯ ವೈವಿಧ್ಯತೆಯನ್ನು ಹಾಗೂ ಸಾಂಸ್ಕøತಿಕ ಬಹುಳತೆಯನ್ನೂ ತೋರಿಸುವ ಮಾನದಂಡಗಳಾಗಿವೆ.

ಒಂದೇ ನುಡಿಯನ್ನು ಈರ್ವ ನುಡಿಯಿಗರು ಒಂದೇ ಬಗೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಅಷ್ಟೇಯಲ್ಲ ಒಂದೇ ವ್ಯಕ್ತಿ ಅದೇ ನುಡಿಯನ್ನು ಎಲ್ಲ ಸನ್ನಿವೇಶದಲ್ಲೂ ಒಂದೇ ರೀತಿಯಲ್ಲಿ ಮಾತನಾಡಲಾರ ಹಾಗಾಗಿ ನುಡಿಬಗೆಗಳನ್ನು ಸನ್ನಿವೇಶ, ಕಾಲ, ಪ್ರದೇಶ ಹಾಗೂ ಸಾಮಾಜಿಕ ನೆಲಯಿಂದ ಬೇರ್ಪಡಿಸುತ್ತಾರೆಂದು ಕಾಣುತ್ತದೆ. ಉಪಭಾಷೆ ಇಲ್ಲವೇ ಒಳನುಡಿ ಎಂಬ ನೆಲೆಗಳು ಕೇವಲ ನುಡಿಬಗೆಗಳು ಮಾತ್ರವೇ (ಲ್ಯಾಂಗ್ವೇಜ್ ವೆರೈಟಿ) ಹೊರತು ಬೇರೆನೂ ಅಲ್ಲ. ನುಡಿಯೊಂದು ಬೆಳೆದುಬಂದ ಬಗೆ, ಅದು ಸಮಾಜದಲ್ಲಿ ವ್ಯವರಿಸುವ ರೀತಿ, ವ್ಯಕ್ತಿ ವಿಶಿಷ್ಟತೆಯನ್ನು ತೋರಿಸುವ ಕ್ರಮಗಳು, ಗ್ರಹಿಕೆಗಳು ಹಾಗೂ ಸಾಂಸ್ಕøತಿಕ ನಿಲುವುಗಳನ್ನು ಅರಿಯಲು ಈ ನುಡಿಬಗೆಗಳು ನೆರವಾಗುತ್ತಿವೆ.

ಒಂದು ಗುಂಪಿನ ಇಲ್ಲವೇ ಒಂದು ಪ್ರದೇಶದ ಇಲ್ಲವೇ ಒಂದು ಕಾಲಕ್ಕೆ ಸೇರಿದ ಜನರಾಡುವ ಯಾವುದೇ ನುಡಿ ಬಗೆಯನ್ನು ಒಳನುಡಿಯೆಂದು ಕರೆಯುತ್ತಾರೆ. ಉಲಿ, ಪದ, ಸೊಲ್ಲರಿಮೆಗಳನ್ನು ಆಧರಿಸಿಕೊಂಡು ಒಳನುಡಿಗಳ ಗುಣಗಳನ್ನು ಗುರುತಿಸುತ್ತಾರೆ. ಹಾಗೂ ಇದೇ ಗುಣಗಳು ಅದೇ ನುಡಿಯ ಇನ್ನೊಂದು ಬಗೆಯ ಒಳನುಡಿಯನ್ನು ಹುಟ್ಟುಹಾಕಲು ಕಾರಣವಾಗುತ್ತವೆ ಎಂಬುದು ಗಮನಾರ್ಹ. ಅಂದರೆ ನುಡಿ ಇಲ್ಲವೇ ಒಳನುಡಿ ಎಂದು ಗುರುತಿಸಲು ಇವರು ಮಾನದಂಡಗಳು ಬೇರೆ ಬೇರೆಯಲ್ಲ ಎಂಬುದನ್ನು ಇದು ಒತ್ತಿ ಹೇಳುತ್ತದೆ. ಹಾಗೇನೆ ಪ್ರತೀ ನುಡಿಸಮುದಾಯದ ಪ್ರತೀ ವ್ಯಕ್ತಿಯು ಮಾತನಾಡುವ ನುಡಿಯ ವಿವರಗಳು ಒಂದಿಲ್ಲ ಒಂದು ರೀತಿಯಲ್ಲಿ ಭಿನ್ನವಾಗಿಯೇ ಇರುತ್ತವೆ.

ಅಂದರೇನಾಯ್ತು ಯಾವುದೇ ಒಂದು ಪ್ರದೇಶದ ಇಲ್ಲವೇ ಗುಂಪಿನ ಜನರಾಡುವ ಮಾತಿಗೆ ಒಂದು ನಿರ್ದಿಷ್ಟ ಸ್ವರೂಪವಿರುತ್ತೆ ಎಂದು ಹೇಳುವುದಾದರೂ ಹೇಗೆ? ಇದೊಂದು ವಿತಂಡವಾದದಂತೆ ಕಂಡರೂ ಈ ನಿಲುವುಗಳನ್ನು ಅಲ್ಲಗಳಿಯುವುದಕ್ಕೆ ಸಾಧ್ಯವಿಲ್ಲ. ಒಂದುವೇಳೆ ಈ ನಿಲುವುಗಳನ್ನು ಅಲ್ಲಗಳಿಯಬೇಕೆಂದರೆ, ನುಡಿ ಹಾಗೂ ಒಳನುಡಿಗಳ ನಡುವೆ ದಿಟವಾಗಿಯೂ ಅಂತರಗಳಿವೆ ಎಂಬುದನ್ನು ಸಾಬೀತಪಡಿಸಲು, ಆ ನುಡಿ ಮತ್ತು ಅದರ ಒಳನುಡಿಯನ್ನು ನಿರ್ವಹಿಸುವ ಅಂತರ್ನಿಹಿತ ರಾಚನಿಕ ನಿಯಮಗಳ ಸ್ವರೂಪವನ್ನು ಬಿಡಿಸಿ ನೋಡಬೇಕಾಗುತ್ತದೆ. ಆವಾಗ ನುಡಿಯೊಂದರ ಅಖಂಡತೆ ಎಂಬುದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬಹುದು. ಈ ಕೆಳಗಿನ ಚಿತ್ರಗಳ ಮೂಲಕ ಈ ವಾದ ಸರಣಿಯನ್ನು ಇನ್ನಷ್ಟು ನಿಚ್ಚಳಗೊಳಿಸಬಹುದು;

ನುಡಿ = ಒಳನುಡಿಗಳ ಅಖಂಡತೆ ಹಾಗೂ ಒಳನುಡಿ = ವ್ಯಕ್ತಿನುಡಿಗಳ ಅಖಂಡತೆ


ನುಡಿ
|              |                      |

ಒಳನುಡಿ ಒಳನುಡಿ ಒಳನುಡಿ
|                 | ‌‌‌‌‌‌‌                    |
ವ್ಯಕ್ತಿನುಡಿ   ವ್ಯಕ್ತಿನುಡಿ       ವ್ಯಕ್ತಿನುಡಿ

  • ಚಿತ್ರ – 1

ಪ್ರತಿಯೊಬ್ಬರೂ ಮಾತನಾಡುವುದು ಒಳನುಡಿಯನ್ನೇ ಎಂಬ ವಾಸ್ತವ ಸಂಗತಿ ಈ ವಿವರಣೆಗಳಿಂದ ತಿಳಿಯುತ್ತದೆ. ಹಾಗಾಗಿ ಒಳನುಡಿ ಎಂದರೆ ಗ್ರಾಮ್ಯ, ವಿರೂಪಗೊಂಡ ರೂಪ ಹಾಗೂ ಕೆಳದರ್ಜೆಯದು ಎಂಬ ನಿಲುವುಗಳು ಎಂತಹ ತಪ್ಪು ಗ್ರಹಿಕೆಗಳು ಅನ್ನುವುದು ಇದರಿಂದ ಮನದಟ್ಟವಾಗುತ್ತದೆ.

ಒಳನುಡಿಗಳು: ಕೆಲವು ತಪ್ಪುಗ್ರಹಿಕೆಗಳು

ಲೋಕದ ಜನರಾಡುವ ಯಾವುದೇ ನುಡಿಯನ್ನು ನೋಡಿದರೂ, ಅದು ಹಲವು ಬಗೆಗಳಲ್ಲಿ ನೆಲೆಗೊಂಡಿರುತ್ತದೆ. ಸಾಮಾಜಿಕ, ಪ್ರಾದೇಶಿಕ, ಚಾರಿತ್ರಿಕ, ಸಾಹಿತ್ಯಕ ಎಂಬಿತ್ಯಾದಿಯಾಗಿ ಆ ಬಗೆಗಳನ್ನು ಗುರಿತಿಸಬಹುದು. ಅಂದರೇನಾಯ್ತು ಪ್ರತಿಯೊಂದು ನುಡಿಯು ಏಕರೂಪಿಯಲ್ಲ ಅದು ಬಹುರೂಪಿಯಾಗಿರುತ್ತದೆ ಎಂದಾಯ್ತು. ಹಾಗಾಗಿ ಬಹುಳತೆಯೇ ನುಡಿಯ ಬಹುಮುಖ್ಯ ಲಕ್ಷಣಗಳಲ್ಲೊಂದು ಎಂಬ ಸಂಗತಿ ಇದರಿಂದ ನಿಚ್ಚಳವಾಗಿ ಕಾಣುತ್ತದೆ.

ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಕವಾಗಿ ಈಗಾಗಲೇ ಸಮುದಾಯದೊಳಗೆ ನೆಲೆನಿಂತಿರುವ ಅಸಮಾನ ನಿಲುವುಗಳು ನುಡಿಯೊಳಗೆಯೂ ಒಂದು ಶ್ರೇಣೀಕರಣವನ್ನು ಹುಟ್ಟು ಹಾಕುತ್ತವೆ. ಇಂತಹ ನಿಲುವುಗಳೇ ಒಳನುಡಿಗಳ ನಡುವಿನ ಭಿನ್ನತೆಯನ್ನು ಚಹರೆಗಳನ್ನಾಗಿ ಗುರುತಿಸದೇ, ಕೇವಲ ಸಾಮಾಜಿಕ ಭೇದಗಳನ್ನಾಗಿ ಗುರುತಿಸುತ್ತವೆ.

ಭಿನ್ನತೆ ಎಂಬುದು ಯಾವುದೇ ವಸ್ತು, ವಿಷಯ, ಮನೋಧರ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತೋರಿಸುವುದಾಗಿದೆ ಹೊರತಾಗಿ ತರತಮ ನೆಲೆಗಳನ್ನು ಹುಟ್ಟು ಹಾಕುವುದಲ್ಲ. ಇಂತಹ ಭಿನ್ನತೆಯ ತತ್ವವನ್ನು ಸಸ್ಯೂರ್ ಹುಟ್ಟು ಹಾಕಿದನು. ಇದೊಂದು ಸಾಂಸ್ಕೃತಿಕವಾಗಿ ಕ್ರಾಂತಿಕಾರಿ ಬೆಳವಣಿಗೆಯೆಂದೇ ಹೇಳಬೇಕು. ಏಕೆಂದರೆ, ಅದುವರೆಗೂ ಸಂಸ್ಕೃತಿ ಓದಿನಲ್ಲಿ ಭಿನ್ನತೆಯನ್ನು ತರತಮದ ನೆಲೆಯನ್ನಾಗಿ ನಿರ್ವಚಿಸುತ್ತಿದ್ದರು.

ಆದರೆ ಸಸ್ಯೂರ್‍ನ ಪ್ರಕಾರ ಎರಡು ವಸ್ತು, ವಿಷಯ, ಪದಗಳ ನಡುವಣ ಭಿನ್ನತೆಯೇ ಅವುಗಳ ಅಸ್ತಿತ್ವ ಹಾಗೂ ಸ್ವಾಯತ್ತತೆಯನ್ನು ಗುರುತಿಸುವ ನೆಲೆಗಳಾಗಿರುತ್ತದೆ. ಹಾಗಾಗಿ ನುಡಿಯಲ್ಲಿ ನೆಲೆನಿಂತಿರುವ ಇಂತಹ ನುಡಿಯ ಭಿನ್ನತೆಗಳು ಸಾಂಸ್ಕತಿಕ ಕೀಳರಿಮೆಯ ಸೂಚಕಗಳಾಗದೇ, ಸಾಮಾಜಿಕ-ಸಾಂಸ್ಕೃತಿಕ ಬಹುಳತೆಯ ರೂಪಕಗಳೆಂಬುದು ನಿಚ್ಚಳವಾಗಿ ಕಾಣುತ್ತದೆ.

ಇದನ್ನೇ ಅಮೇರಿಕದ ಹೆಸರುವಾಸಿ ನುಡಿಯರಿಗ ವಿಲಿಯಂ ಲೆಬೋ, “ರೂಲ್ಸ್ ಫಾರ್ ರಿಚ್ಯುವೆಲ್ ಇನ್‍ಸಲ್ಟ್ಸ್” ಎಂದು ಕರೆದಿರಬಹುದು. ನುಡಿಯರಿಮೆಯ ಪ್ರಕಾರ ಒಳನುಡಿಯೆಂದರೆ ಅದೊಂದು ನುಡಿಬಗೆ ಮಾತ್ರ. ಆದರೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯಗಳು, ತಮ್ಮ ನುಡಿಬಗೆಗಳಿಗೆ ಹೊರತಾದ ನುಡಿಬಗೆಗಳನ್ನು ಈ ಕೆಳ್ಕಂಡಂತೆ ಗುರುತಿಸಿದ್ದಾರೆ.

  1. ವಿರೂಪಗೊಂಡ ಭಾಷಿಕ ರೂಪಗಳು
  2. ಸಾಮಾಜಿಕ ಅಂಚಿನಲ್ಲಿರುವ ಹಾಗೂ ಅಲಕ್ಷಿತ ಸಮುದಾಯಗಳ ಭಾಷೆ
  3. ಗ್ರಾಮ್ಯ ನುಡಿಗಳು
  4. ಒಳನುಡಿ ಎನ್ನುವುದೇ ಒಂದು ಸಾಮಾಜಿಕ ಕಳಂಕ
  5. ಪಾರಂಪರಿಕವಾಗಿ ಹೀನ ಸ್ಥಿತಿಯಲ್ಲಿರುವ ಭಾಷೆಗಳು
  6. ಯಾವುದೇ ಪ್ರದೇಶ / ಜನಾಂಗದವರ ಭಾಷೆಗೆ ಅಧೀನವಾಗಿರುವ ಭಾಷೆ

ಒಳನುಡಿ ಹಾಗೂ ಒಳನುಡಿಗಳ ಬಗೆಗಳನ್ನು ಕುರಿತು ಓದುವ ವಲಯವೇ ಒಳನುಡಿ ಓದು (ಡಯಲೆಕ್ಟಾಲಜಿ). ಹಾಗಾದರೆ ಒಳನುಡಿ ಹಾಗೆಂದರೇನು ಎಂಬ ಕೇಳ್ವಿ ಇಲ್ಲಿ ಎದುರಾಗುತ್ತದೆ. ಸಾಮಾನ್ಯ ಜನರ ಪ್ರಕಾರ, ಒಳನುಡಿಯೆಂದರೆ ಅದೊಂದು ಕೆಳಮಟ್ಟದ, ಕೆಳದರ್ಜೆಯ, ಗಾಂಪ [ಗ್ರಾಮ್ಯ] ರೂಪವೆಂದೇ ಪರಿಗಣಿಸಲಾಗುತ್ತದೆ. ಇಂತಹ ನುಡಿ ಬಗೆಗಳು ಕೂಲಿ, ವ್ಯವಸಾಯ, ಕಾರ್ಮಿಕ, ಹಿಂದೂಳಿದ ಹಾಗೂ ತಳಸಮುದಾಯಗಳೊಂದಿಗೆ ನಂಟನ್ನು ಹೊಂದಿರುತ್ತವೆ. ಮತ್ತು ಈ ನುಡಿ ಬಗೆಗಳು ಪ್ರತಿಷ್ಠೆಯ ಕೊರತೆಯಿಂದಲೂ ಬಳಲುತ್ತವೆ. ಇದು ಆರೋಪವಲ್ಲ ಇದು ವಾಸ್ತವ ಸಂಗತಿ.

1. ಯಾವುದೇ ಸಾಮಾಜಿಕ ಅಂತಸ್ತನ್ನು ಹೊಂದಿರದ, ಬರಹದ ಸವಲತ್ತನ್ನು ಪಡೆದುಕೊಳ್ಳದ ಅಂದರೆ ಲಿಪಿ ವ್ಯವಸ್ಥೆಯಿಂದ ವಂಚಿತವಾಗಿರುವ ಹಾಗೂ ಅಂಚಿಗೆ ತಳ್ಳಲ್ಪಟ್ಟಂತಹ ಜನರಾಡುವ ನುಡಿಬಗೆಗಳನ್ನು ಒಳನುಡಿಯೆಂದು ಕರೆಯುತ್ತಾರೆ.

2. ಪ್ರಮಾಣ ನುಡಿಯ ನಿಯಮಗಳನ್ನು ಉಲ್ಲಂಘಿಸಿ (ಹೊರಪದರ ರಚನೆಗಳಕ್ಕಿಂತ ಬೇರೆಯಾದ ರಾಚನಿಕ ವ್ಯವಸ್ಥೆಯನ್ನು ಹೊಂದಿದಂತೆ ಕಾಣುವ) ಬೌದ್ಧಿಕ ಕಸುವಿಲ್ಲದ ಇಲ್ಲವೇ ಬುದ್ಧಿಭ್ರಮಣೀತ ರೂಪಗಳನ್ನು ಒಳಗೊಂಡಿರುವ ನುಡಿಯೇ ಒಳನುಡಿ.

ಪ್ರತಿಯೊಬ್ಬರು ಕೂಡ ಒಂದಲ್ಲೊಂದು ಒಳನುಡಿಯಲ್ಲಿಯೇ ಮಾತಾಡುತ್ತಾರೆ. ಹಾಗಾಗಿ ಇವುಗಳಲ್ಲಿಯೇ ಯಾವುದೇ ಒಂದನ್ನು ಮೇಲು ಎಂದು ಮತ್ತು ಇನ್ನೂಳಿದ ಎಲ್ಲ ಒಳನುಡಿಗಳನ್ನು ಕೀಳು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಧಿಕಾರ ಸಂಬಂಧ ಹಾಗೂ ಸಾಮಾಜಿಕ ಪ್ರಾಬಲ್ಯದ ನಂಟನ್ನು ಹೊಂದಿರುವ ಯಾವುದೇ ಗುಂಪು, ಪ್ರದೇಶ, ಜಾತಿಗಳು ಮಾತುನಾಡುವ ನುಡಿಬಗೆಯೊಂದನ್ನು ಮಾತ್ರ ಮೇಲು ಎಂದು ಪರಿಗಣಿಸಲಾಗುತ್ತದೆ.

ಉಳಿದವುಗಳನ್ನು ಕೆಳಮಟ್ಟದವು ಎಂದು ಒಪ್ಪಿಸಲಾಗಿರುತ್ತದೆ. ನುಡಿಯರಿಮೆಯ ಪ್ರಕಾರ ಯಾವ ನುಡಿಯೂ ಮೇಲುವಲ್ಲ ಕೀಳುವಲ್ಲ ಎಂಬುದು ಮಾತ್ರ ದಿಟ. ಈಗಾಗಲೇ ಚರ್ಚಿಸಿದಂತೆ, ಒಳನುಡಿ ಎಂಬುದು ಯಾವುದೇ ಒಂದು ನುಡಿಯ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪಂಗಡಗಳು ಮಾತ್ರ.

ಅಂದರೆ ಮೈಸೂರು ಕನ್ನಡ, ಬಾಗಲಕೋಟೆ ಕನ್ನಡ, ಗುಲಬರ್ಗಾ ಕನ್ನಡ, ಬೀದರ ಕನ್ನಡ, ಕುಂದಾಪುರ ಕನ್ನಡ ಮುಂತಾದವುಗಳನ್ನು ಪ್ರಾದೇಶಿಕವಾಗಿ, ಹರಿಜನ ಕನ್ನಡ, ಗೌಡ ಕನ್ನಡ, ಲಿಂಗಾಯತ ಕನ್ನಡ, ಹವ್ಯಕ ಎಂಬಿತ್ಯಾದಿಗಳನ್ನು ಜಾತಿ ಇಲ್ಲವೇ ಜಾಮಾಜಿಕ ಒಳನುಡಿಗಳೆಂದು ಗುರುತಿಸುತ್ತಾರೆ. ಈ ಬಗೆಯ ವಿಂಗಡಣೆಗಳು ಸಾಕಷ್ಟು ಸವಾಲುಗಳನ್ನು ಒಡ್ಡುತ್ತವೆ.

ಮುಖ್ಯವಾಗಿ ನುಡಿ ಹಾಗೂ ಒಳನುಡಿಗಳ ನಡುವಿನ ಗಡಿಗೆರೆಗಳನ್ನು ಗುತುತಿಸುವ ಬಗೆಯಲ್ಲಿಯೇ ಈ ಸವಾಲುಗಳು ಎದುರಾಗುತ್ತವೆ. ಹಾಗೆ ನೋಡಿದರೆ, ನುಡಿಯೆಂದರೇನು ಎಂಬುದೇ ಅತ್ಯಂತ ಸವಾಲಿನ ಕೇಳ್ವಿಯಾಗಿದೆ. ದಿಟ ನುಡಿಯೆನ್ನುವುದೇ ನುಡಿಯ ಹಲವು ಬಗೆಗಳ ನಡುವಣ ಪರಸ್ಪರ ಅರ್ಥಗ್ರಾಹ್ಯತೆಯ ಮೊತ್ತ.

ಆದರೆ ನುಡಿಯೊಂದನ್ನು ಬಿಡಿ ಭಾಗಗಳನ್ನಾಗಿಸಿ, ಅವುಗಳನ್ನೇ ಒಳನುಡಿಗಳೆಂದು ನಿರ್ವಚಿಸುವುದರಿಂದ ಆಗುವ ಪ್ರಯೋಜನ ಏನೆಂದರೆ ನುಡಿ ಹಾಗೂ ಒಳನುಡಿ ಎಂದು ಗುಣಾರೋಪಣೆ ಮಾಡವುದಕ್ಕೆ ಮಾನದಂಡಗಳು ಸಿಗುತ್ತವೆ ಅಷ್ಟೇ. ಸಾಂಸ್ಕೃತಿಕ ಇಲ್ಲವೇ ನುಡಿಯ (ಭಾಷಿಕ) ಕಣ್ನೋಟದಲ್ಲಿ ಇಂತಹ ಗುಣಾರೋಪಣೆಗಳೇನು ದೊಡ್ಡ ಸಾಧನೆಗಳಲ್ಲ. ಇವುಗಳು ಕೇವಲ ಸಾಮಾಜಿಕ-ರಾಜಕೀಯ ರಚನೆಗಳು ಮಾತ್ರ.

ಎರಡು ಬೇರೆ ಬೇರೆ ಎತ್ತುಗೆಗಳಿಂದ ಈ ನಿಲುವನ್ನು ಇನ್ನಷ್ಟು ವಿವರವಾಗಿ ನೋಡಬಹುದು. ಸ್ಕ್ಯಾಂಡಿನವಿಯನ್ ನುಡಿಗಳಾದ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್‍ಗಳ ನಡುವೆ ಪರಸ್ಪರ ಅರ್ಥಗ್ರಾಹ್ಯತೆ ಇದ್ದಾಗಲೂ, ಅವುಗಳನ್ನು ಬೇರೆ ಬೇರೆ ನುಡಿಗಳೆಂದು ಗುರುತಿಸಲಾಗಿದೆ. ಒಳನುಡಿ ಓದಿನಲ್ಲಿ ನೆಲೆನಿಂತಿರುವ ನುಡಿ ಹಾಗೂ ಒಳನುಡಿಗಳ ಕುರಿತ ನಮ್ಮ ಈಗಿನ ವ್ಯಾಖ್ಯಾನಕ್ಕೆ ಇದು ತಕ್ಕುದಾದ ನಿಲುವಲ್ಲ ಎಂದು ಕಾಣುತ್ತದೆ.

ಏಕೆಂದರೆ ಒಂದೇ ನುಡಿಯ ಬೇರೆ ಬೇರೆ ನುಡಿಬಗೆಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾದರೆ, ಅವುಗಳನ್ನು ಬೇರೆ ನುಡಿಗಳೆಂದು ಪರಿಗಣಿಸುವುದಿಲ್ಲ. ಬದಲಾಗಿ ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಗುರುತಿಸುತ್ತಾರೆ. ಇಂತಹ ಸಂವಹನ ಸಾಧ್ಯತೆ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್‍ಗಳ ನಡುವೆ ಇರುವಾಗಲೂ ಅವುಗಳನ್ನು ಬೇರೆ ನುಡಿಗಳನ್ನಾಗಿ ಗುರುತಿಸಲಾಗಿದೆ.

ಇದಕ್ಕೆ ಎದುರಾಗಿ ಜರ್ಮನ್ನಿನ ಕೆಲವು ಒಳನುಡಿಗಳು ಮತ್ತೆ ಕೆಲವು ಒಳನುಡಿಯ ಆಡುಗರಿಗೆ ಅರ್ಥವಾಗುವುದಿಲ್ಲ. ಅಂದರೆ ಪರಸ್ಪರ ಸಂವಹನದಲ್ಲಿ ತೊಡಕಾಗುತ್ತದೆ. ಆದಾಗ್ಯೂ ಜರ್ಮನ್ ನುಡಿಗಳನ್ನು ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಪರಿಗಣಿಸಲಾಗಿದೆ.

ಇಂದರಿಂದ ಜರ್ಮನ್ ನುಡಿಗೆ ಒಂದು ಸ್ವತಂತ್ರ ನುಡಿಯಾಗುವ ಹೆಚ್ಚಿನ ಅರ್ಹತೆಯಿದ್ದು, ಡೆನಿಶ್ ನುಡಿಗೆ ಸ್ವತಂತ್ರ ನುಡಿಯಾಗುವ ಅರ್ಹತೆ ಕಡಿಮೆ ಇದೆಯೆಂದು ವಾದಿಸಿದಂತೆ ಅಲ್ಲ. ಆದರೆ ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು, ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸಲಾಗುತ್ತದೆ. ಹಾಗಾದರೆ ಈ ತತ್ವದ ಪ್ರಸ್ತುತೆಯಾದರೂ ಏನು? ಎಂಬ ಕೇಳ್ವಿ ಈಗ ಎದುರಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

Published

on

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.

ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ

ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.

ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.

‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.

‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.

ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ

ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.

ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending