Connect with us

ಅಂತರಂಗ

ಅರಿಮೆಯ ಅರಿವಿರಲಿ-27 : ಮನೆಯೊಳಗಣ ಕಿಚ್ಚು

Published

on

  • ಯೋಗೇಶ್ ಮಾಸ್ಟರ್

ಬ್ಬರಿಗೆ ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಕಿರುಕುಳಗಳನ್ನು ಕೊಟ್ಟಾಗ, ಅವುಗಳು ಬೆಳಕಿಗೆ ಬಂದು ನಮಗೆ ಅರಿವಿಗೆ ಬಂದಾಗ ತಪ್ಪಿತಸ್ಥ ಭಾವನೆ ಬರುತ್ತದೆ.ನೈತಿಕತೆಯನ್ನು ಮೀರಿದಾಗಲೂ ಇದಾಗುವುದೇ. ಕೆಲವೊಮ್ಮೆ ಆ ಹೊತ್ತಿನ ನಮ್ಮ ಮಾನಸಿಕ ಉನ್ಮತ್ತತೆಯಲ್ಲಿ ಅಥವಾ ಭಾವೋದ್ರೇಕದಲ್ಲಿ ಅರಿವು ಕಣ್ತೆರೆಯದ ಹೊತ್ತಿನಲ್ಲಿ ಯಾವುದೋ ಒಂದು ರೀತಿಯಲ್ಲಿ ವರ್ತಿಸಿಬಿಡುತ್ತೇವೆ.

ಆದರೆ ಸ್ವಲ್ಪ ಹೊತ್ತಿನ ನಂತರ ನಮ್ಮ ಭಾವೋದ್ರೇಕವು ತನ್ನ ಬಿರುಸನ್ನು ಕಳೆದುಕೊಂಡಾದ ಮೇಲೆ, ಮನಸ್ಸಿನ ಉನ್ಮತ್ತತೆ ತನ್ನ ಅಮಲನ್ನು ಇಳಿಸಿಕೊಂಡ ಮೇಲೆ ನಾವು ವರ್ತಿಸಿದ ರೀತಿ ಮತ್ತು ನಮ್ಮ ವರ್ತನೆಗೆ ಬಲಿಯಾದವರನ್ನು ನೆನೆಸಿಕೊಳ್ಳುತ್ತೇವೆ. ಹಾಗೆ ಮಾಡಬಾರದಿತ್ತು ಎಂದೂ ಅನ್ನಿಸುತ್ತದೆ. ಅದೇ ತಪ್ಪಿತಸ್ಥ ಭಾವನೆ ಬರುತ್ತದೆ. ನಮ್ಮಿಂದ ನೊಂದವರ ಬಗ್ಗೆ ಅನುಕಂಪವೂ ಉಂಟಾಗುತ್ತದೆ.

ಸಾಮಾನ್ಯವಾಗಿ ತಾಯಿಯೋ, ತಂದೆಯೋ ಮಗುವಿನ ಯಾವುದೋ ಒಲ್ಲದ ವರ್ತನೆಯ ಅಥವಾ ಒಪ್ಪದ ಕೆಲಸದ ಕಾರಣದಿಂದ ಕೋಪಗೊಂಡು ಚೆನ್ನಾಗಿ ಹೊಡೆದುಬಿಡುತ್ತಾರೆಂದಿಟ್ಟುಕೊಳ್ಳಿ. ನಂತರ ‘ಅಯ್ಯೋ ನಾನು ಮಗುವಿಗೆ ಹೊಡೆದುಬಿಟ್ಟೆ’ ಎಂದು ಅವರು ನೋಯುತ್ತಾರೆ. ತಾವು ಅಳುತ್ತಾರೆ. ಅಳುತ್ತಿರುವ ಮಗುವನ್ನು ರಮಿಸುತ್ತಾರೆ. ಯಾರಿಗೆ ತಾವು ಯಾರಿಗಾದರೂ ಹೊಡೆದ ಮೇಲೂ, ಅವರು ನೋವು ತಿಂದುದನ್ನು ನೋಡಿದ ಮೇಲೂ ತಾವು ಹೊಡೆದಿದ್ದು ಸರಿ ಎಂದು ಎನಿಸಿದರೆ, ಇನ್ನೂ ಚೆನ್ನಾಗಿ ಬಾರಿಸಬೇಕಿತ್ತು. ಹೊಡೆಯೋದಲ್ಲ ಕೈ ಕಾಲು ಮುರಿಯಬೇಕಿತ್ತು. ಬರೀ ಕೈ ಕಾಲು ಮುರಿಯುವುದಲ್ಲ ಸಾಯಿಸಿಬಿಡಬೇಕಿತ್ತು ಎಂದು ಹೇಳುತ್ತಿರುತ್ತಾರೋ ಅವರಲ್ಲಿ ಸಮಸ್ಯೆ ಇದೆ ಎಂದು ಅರ್ಥ.

ಅದ್ಯಾವುದಾದರೂ ಕಾರಣಕ್ಕೆ ಹುಟ್ಟಿದ ಕೋಪ, ಮನಸ್ಸಿನಲ್ಲಿಯೂ ಇರಕೂಡದು. ಹಿಟ್ಟಿನ ಹುಂಜದ ರೂಪಕವನ್ನೇ ನೆನಪಿಸಿಕೊಳ್ಳೋಣ. ದೈಹಿಕವಾಗಿ ಹಲ್ಲೆ ಮಾಡಿದರೆ ಮಾತ್ರವಲ್ಲ ದೋಷ. ಮನಸ್ಸಿನಲ್ಲಿ ಇದ್ದರೂ ಅದು ದೋಷವೇ. ಹಿಟ್ಟಿನ ಹುಂಜವನ್ನು ಯಶೋಧರ ಕತ್ತರಿಸಿದನೆಂದರೆ ಅವನ ಮನಸ್ಸಿನಲ್ಲಿ ಸಾಂಕೇತಿಕವಾಗಿ ಮಾಡುವ ಕೊಲೆಯೂ ಕೂಡಾ ವಾಸ್ತವದಲ್ಲಿ ಕೊಲೆಯೇ.

ಬಸವಣ್ಣ ‘ತನಗೆ ಮುನಿವವಗೆ ತಾ ಮುನಿಯಲೇಕಯ್ಯ’ ಎನ್ನುತ್ತಾ ‘ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನರಿವಿನ ಕೇಡು’ ಎನ್ನುತ್ತಾರೆ. ಹೊರಗೆ ತೋರಿಸಿಕೊಳ್ಳುವ ಕೋಪವು ನಮ್ಮ ದೌರ್ಬಲ್ಯದ ವ್ಯಕ್ತಿತ್ವವನ್ನು ತೋರಿ ಗೌರವವನ್ನು ಕುಗ್ಗಿಸಿದರೆ, ಮನಸ್ಸಿನ ಒಳಗೆ ಮಾಡಿಕೊಳ್ಳುವ ಕೋಪ ತಿಳುವಳಿಕೆಯನ್ನು ನಾಶ ಮಾಡುತ್ತದೆ.

ಇದನ್ನೇ ಮುಂದುವರಿಸಿ ಮನೆಯೊಳಗಣ ಕಿಚ್ಚು ಮನೆಯ ಸುಡುವುದು ಎಂದು ಗಂಭೀರವಾಗಿ ಎಚ್ಚರಿಸುತ್ತಾರೆ. ಹೌದು, ಈ ಬಗ್ಗೆ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಅಂದುಕೊಂಡೆ ಅಷ್ಟೇ. ನಿಜವಾಗಿ ನಾನು ಏನೂ ಮಾಡಲಿಲ್ಲ ಎಂದುಕೊಳ್ಳಬೇಡಿ. ಮನಸ್ಸಿನಲ್ಲಿ ದ್ವೇಷ ಸಾಧಿಸುವುದು, ಕೋಪಿಸಿಕೊಳ್ಳುವುದು, ಮತ್ಸರವನ್ನು ಹೊಂದಿರುವುದು, ದುರಾಸೆ ಪಡುವುದು; ಇವುಗಳೂ ಕೂಡಾ ಮನಸ್ಸಿನ ಶುದ್ಧತೆಯನ್ನು ಕದಡಿ ಮಲಿನಗೊಳಿಸುವವೇ ಆಗಿವೆ.

ದ್ವೇಷ ಸಾಧನೆ ಹಳೆಯ ರೋಗ

ಕೆಲವರು ಹೇಳುತ್ತಿರುತ್ತಾರೆ, ‘ನಮ್ಮಿಬ್ಬರಿಗೆ ಜಗಳವಾಗಿ ಅಷ್ಟು ವರ್ಷಗಳಾದವು. ಇನ್ನೂ ಮಾತಾಡಲ್ಲ’ ಇದು ಹೆಮ್ಮೆಯ ವಿಷಯವಲ್ಲ. ಒಂದು ರೀತಿಯಲ್ಲಿ ನಾಚಿಕೆಗೇಡಿನ ವಿಷಯ. ಆದರೆ ಎಷ್ಟೋ ಸಲ ಒಬ್ಬರು ತಮ್ಮ ಸ್ವಾಸ್ಥ್ಯ ಮನಸ್ಸಿನ ಪ್ರತಿಫಲವಾಗಿ ರಾಜಿಗೆ ಮುಂದಾದರೂ ಮತ್ತೊಬ್ಬರ ಕಡೆಯಿಂದ ಅದು ಪ್ರತಿಕ್ರಿಯೆ ಸಕಾರಾತ್ಮಕವಾಗಿ ಸಿಗದೇ ಸಂಬಂಧಗಳು ವಿಫಲವಾಗುತ್ತಿರುತ್ತವೆ. ಗಂಡ ಹೆಂಡರ ನಡುವಿನ ಸಂಬಂಧ, ತಂದೆ ತಾಯಿ ಮತ್ತು ಮಕ್ಕಳು, ಒಡಹುಟ್ಟಿದವರು, ಇತರೇ ಸಂಬಂಧಿಕರು ಅಥವಾ ಸ್ನೇಹಿತರ ಸಂಬಂಧಗಳು ಛಿದ್ರವಾಗಲು ಕಾರಣವೇ ಒಡಕಿನ ಮನಸ್ಸನ್ನು ಮುಂದುವರಿಸುವುದಕ್ಕೆ. ಹಿಂದಿನ ಒಡಕನ್ನು ಇಂದಿಗೂ ನೆನಪಿಸಿಕೊಂಡು ಅದರ ಪ್ರತಿಫಲನದಂತೆ ವರ್ತಿಸಿದಾಗ, ಅದೊಂದು ರೀತಿಯಲ್ಲಿ ಪುನರಾವರ್ತನೆಯಾಗುತ್ತದೆ.

ಅದೇ ಕಂದಕದ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ಮಾತುಗಳಲ್ಲಿ, ಬೇರೆ ಬೇರೆ ಕ್ರಿಯೆಗಳಲ್ಲಿ ಅಭಿವ್ಯಕ್ತವಾಗುತ್ತವೆ. ಜೊತೆಗೆ ಇನ್ನೂ ಪ್ರಗತಿಯನ್ನು ಹೊಂದುತ್ತಿರುತ್ತವೆ. ನಿನ್ನೆ ನಾಲ್ಕು ಮಾತುಗಳು ಬೈದವರು ಇಂದು ಎಂಟು, ನಾಳೆ ಹದಿನಾರು ಮತ್ತು ಎರಡು ಹೊಡೆತ; ಹೀಗೆ ಅದರ ಪ್ರಭಾವವು ದಟ್ಟವಾಗುತ್ತಾ ಕ್ರಿಯಾತ್ಮಕವಾಗಿಯೂ ಮುಂದುವರಿಯುತ್ತಿರುತ್ತವೆ. ತಮ್ಮಲ್ಲಿರುವ ತಪ್ಪಿತಸ್ಥ ಭಾವವನ್ನು ಅಥವಾ ಅಪರಾಧದ ಅರಿಮೆಯನ್ನು ಅಡಗಿಸಿಡಲು ತನ್ನ ಎದುರಾಳಿಯನ್ನು ಇನ್ನಿಲ್ಲದಂತೆ ಮಣಿಸಲು ಯತ್ನಿಸುತ್ತಿರುತ್ತಾರೆ.

ಗಂಡ ಹೆಂಡತಿಯ ನಡುವೆ ಜಗಳವಾಯ್ತು. ಗಂಡನ ಯಾವುದೋ ಒಂದು ಅರಿಮೆಯ ಕಾರಣದಿಂದ ಅವಳನ್ನು ಬೈದ. ಅವಳು ಕೋಪಗೊಂಡಳು. ನೀನು ನನಗೆ ಅನಗತ್ಯವಾಗಿ ಬೈದೆ ಮತ್ತು ವಿನಾಕಾರಣ ದೂಷಿಸಿದೆ ಎಂದು ಅವಳು ಸ್ಪಷ್ಟವಾಗಿ ಅವನಿಗೆ ತಿಳಿಸುವಳು. ಅದು ಅವನಿಗೆ ಗೊತ್ತಿದೆ. ಅವನಲ್ಲಿಯೂ ತಪ್ಪಿತಸ್ಥ ಭಾವನೆ ಇದೆ. ಆದರೆ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅದಕ್ಕೆ ಅವಳ ಮಾತನ್ನು ಖಂಡಿಸಲು ಮತ್ತೊಂದು ವರಾತ ತೆಗೆಯುತ್ತಾನೆ. ಅದೊಂದು ರೀತಿಯ ಮತ್ತಿನಂತೆ ಮತ್ತಷ್ಟು ಮಗದಷ್ಟು ಉನ್ಮತ್ತನಾಗುತ್ತಾ ಅತಾರ್ಕಿಕವಾಗಿ, ಅಸಂಬದ್ಧವಾಗಿ ಮಾತಾಡುತ್ತಾನೆ. ಅವಳ ಮನೆಯವರನ್ನೆಲ್ಲಾ ಬೈಯುತ್ತಾನೆ. ಅವಳಿಂದ ಮತ್ತಷ್ಟು ಮಾತುಗಳನ್ನು ಹೊರಡಿಸುತ್ತಾನೆ. ನಂತರ ಹೊಡೆಯುತ್ತಾನೆ. ಅನ್ನ ಚೆಲ್ಲುತ್ತಾನೆ, ಸಾರು ಸುರಿಯುತ್ತಾನೆ, ಟಿ ವಿ ಮುರಿಯುತ್ತಾನೆ, ಅವಳನ್ನು ಮಣಿಸಲು ಇನ್ನಿಲ್ಲದಂತೆ ಹೋರಾಡುತ್ತಾನೆ.

ಅಪರಾಧದ ಅರಿಮೆಯು ಬೇರೆ ಬೇರೆ ಮಾನಸಿಕ ಸಮಸ್ಯೆಗಳನ್ನು ಅನಾವರಣ ಮಾಡುತ್ತಾ ಹೋಗುತ್ತವೆ. ಅವಳನ್ನು ಅದೆಷ್ಟು ಬೈದರೂ ತೃಪ್ತಿಯಿಲ್ಲ. ಅದೆಷ್ಟು ಹೊಡೆದರೂ ತೃಪ್ತಿಯಿಲ್ಲ. ಹೊಡೆದು ಬಂದು ಕುಳಿತಿರುತ್ತಾನೆ. ಮತ್ತೆ ಮಾತಾಡುತ್ತಾ ಮಾತಾಡುತ್ತಾ ಮತ್ತೆ ಮತ್ತೆ ಹೋಗಿ ಹೊಡೆಯುತ್ತಾನೆ. ಇಷ್ಟೆಲ್ಲಾ ಆಗಿದ್ದು ಏಕೆಂದರೆ, ಅವನು ತಪ್ಪು ಮಾಡಿದ್ದೇ ನಿಜವಾಗಿದ್ದು, ಅವನಿಗೂ ಅಪರಾಧದ ಅರಿಮೆಯಿದ್ದು, ನೀನು ಅಪರಾಧಿ ಎಂದು ಹೇಳಿದ್ದಕ್ಕೆ. ಅದನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯು ಸೇಡನ್ನು ತೀರಿಸಿಕೊಳ್ಳುತ್ತದೆ.

ಹಾಗಾದಾಗಲೇ ವ್ಯಕ್ತಿಯು ಮಾಧುರ್ಯ ತರದ ಸಂಬಂಧವನ್ನು ಕಡಿದುಕೊಳ್ಳಲು ಬಯಸುವುದು. ‘ಋಣಾನುಬಂಧೇನ ರೂಪೇಣ’ ಅಂತ ಎಲ್ಲಾ ಸಂಬಂಧಗಳ ಜೊತೆಗೆ ತಮ್ಮ ಜೀವನವನ್ನು ಬಲಿಗೊಡಲಾಗದು. ಸಂಬಂಧಗಳಿಗಾಗಿ ತಮ್ಮ ಹಿತವನ್ನು, ಬದುಕಿನ ಅಂತರಾತ್ಮವನ್ನು ಬಲಿಗೊಟ್ಟು ಭರವಸೆಯೇ ಇಲ್ಲದೇ ಅವರೊಂದಿಗೇ ಜೀವಿಸಬೇಕೆನ್ನುವುದು ದೌರ್ಬಲ್ಯವೂ ಹೌದು, ಆತ್ಮವಂಚನೆಯೂ ಹೌದು.

ಅರಿಮೆಗಳ ಸಂಕೀರ್ಣ

ಆತ್ಮರತಿ ಅಥವಾ ನಾರ್ಸಿಸಂ, ಅದರ ಮುಂದುವರಿದ ಭಾಗದಂತೆ ಗಾಡ್ ಕಾಂಪ್ಲೆಕ್ಸ್, ಅದರೊಟ್ಟಿಗೆ ಕೀಳರಿಮೆ, ಅದನ್ನು ಮೆಟ್ಟಲು ಮಾಡುವ ಎಡವಟ್ಟಿನ ಪ್ರತಿಫಲವಾಗಿ ಗಿಲ್ಟ್ ಕಾಂಪ್ಲೆಕ್ಸ್ ಇವುಗಳೆಲ್ಲದರ ಕಾಂಪ್ಲೆಕ್ಸ್ (ಸಂಕೀರ್ಣ) ಆಗಿರುವ ಮನುಷ್ಯನ ಬಲಿಪಶು ಅವನ ಸಂಬಂಧದಲ್ಲಿ ಯಾರು ಬೇಕಾದರೂ ಆಗಿರಬಹುದು. ಅವನಿಗೆ ಸಂಬಂಧವೇ ಇಲ್ಲದವರೂ ಆಗಬಹುದು.

ನಮ್ಮಿಂದ ನಮಗೆ ಅಥವಾ ಯಾರಿಗಾದರೂ ತೊಂದರೆಯಾದಾಗ ಅಪರಾಧಿ ಮನೋಭಾವ ಬಂದರೆ ಅದು ಖಂಡಿತ ಸಾಮಾನ್ಯವಾದ ಸಂಗತಿ. ಆದರೆ, ನಮ್ಮ ವಿಚಾರದಿಂದ, ಕ್ರಿಯೆಯಿಂದ ಅಥವಾ ವರ್ತನೆಯಿಂದ ಸಮಸ್ಯೆಯಾದಾಗ ಅಥವಾ ಘಾಸಿಯಾದಾಗ ಅಪರಾಧಿ ಮನೋಭಾವ ಉಂಟಾಗಲೇ ಇಲ್ಲ ಎಂದರೆ ಅದು ಬಹಳ ಗಂಭೀರವಾದ ಮಾನಸಿಕ ಸಮಸ್ಯೆ ಎಂದು ಪರಿಗಣಿಸಬೇಕು.

ಮೊಟ್ಟ ಮೊದಲು ಯಾವುದೇ ತಪ್ಪು ನಮ್ಮಿಂದ ಆದಾಗ ಅದನ್ನು ಒಪ್ಪಿಕೊಂಡುಬಿಡುವುದು ಒಂದು ಘನವಾದ ಮೌಲ್ಯವೇ ಸರಿ. ಆದರೆ ಅದು ನಮ್ಮಿಂದ ಮತ್ತಾಗದಂತೆ
ನೋಡಿಕೊಳ್ಳುವುದು ಜಾಣತನದ ಲಕ್ಷಣ.
ಕೆಲವೊಮ್ಮೆ ತಮ್ಮ ಅಂಕೆಯನ್ನು ಮೀರಿ ಮಾತಾಡಿಬಿಡುತ್ತೇವೆ. ಎಲ್ಲೆಯನ್ನು ದಾಟಿ ವರ್ತಿಸಿಬಿಡುತ್ತೇವೆ. ಸ್ವಾತಂತ್ರ್ಯವನ್ನು ಅತಿಯಾಗಿ ಪರಿಗ್ರಹಿಸಿ ಅದನ್ನು ಸ್ವಚ್ಚಂದ ಮಾಡಿಕೊಂಡುಬಿಡುತ್ತೇವೆ.

ನೈತಿಕತೆ ಅಥವಾ ಸನ್ನಡತೆಯನ್ನು ಮೀರುವುದು, ಅಸೂಯೆ, ದುರಾಸೆ ಹೊಂದಿರುವುದು, ಅತಿಕಾಮದ ಸೆಳೆತಕ್ಕೆ ಒಳಗಾಗುವುದು, ಅನಗತ್ಯವಾದ ಕೋಪ ಮಾಡಿಕೊಳ್ಳುವುದು, ಮಾತು ಮುರಿಯುವುದು, ಮಾದಕ ವಸ್ತು, ಧೂಮಪಾನ, ಮದ್ಯಪಾನಗಳಂತಹ ಚಟಗಳಿಗೆ ಬಿಡಲಾಗದಂತೆ ಅತಿಯಾಗಿ ಅಂಟಿಕೊಳ್ಳುವುದು; ಇತ್ಯಾದಿ ಏನು ಮಾಡಿದರೂ ಸರಿಯೇ ತಪ್ಪಿತಸ್ಥ ಭಾವವನ್ನು ಹುಟ್ಟಿ ಹಾಕದಿದ್ದರೆ ಗಂಭೀರ ಮನೋರೋಗಕ್ಕೆ ಜಾರುತ್ತಿರುವ ಸೂಚನೆ ಅದು.

ಸಾಧ್ಯವಾದರೆ ವೃತ್ತಿಪರ ಮನೋವೈದ್ಯರ ನೆರವು ತೆಗೆದುಕೊಳ್ಳಬೇಕು. ಇಲ್ಲವೇ, ಮಿತ್ರರಿಂದ, ಕುಟುಂಬದ ಸದಸ್ಯರ ಸಹಾಯವನ್ನು ಪಡೆದುಕೊಳ್ಳಬೇಕು. ತಾವೇ ಒಪ್ಪದ ತಮ್ಮ ತಪ್ಪುಗಳಿಗೆ ಕ್ಷಮೆ ಕೇಳುವುದು, ಅದನ್ನು ಮರುಕಳಿಸದಂತೆ ನೋಡಿಕೊಳ್ಳುವುದು, ಹಾಗೂ ಚಟಗಳಾಗಿದ್ದ ಪಕ್ಷದಲ್ಲಿ ಅದರ ನಿವಾರಣೆಗೆ ಮನಸ್ಸು ಮಾಡಿ ಕಾರ್ಯತತ್ಪರರಾಗುವುದು ಆರೋಗ್ಯವಂತ ಮನಸ್ಸಿನ ಲಕ್ಷಣ.

ಕ್ಷಮೆ ಕೇಳುವುದಂತೂ ಅತ್ಯಂತ ಮಧುರವಾದ ಮೌಲ್ಯ. ಧೈರ್ಯವಂತರೇ ಕ್ಷಮೆ ಕೇಳುವುದು. ಹೃದಯವಂತರೇ ಕ್ಷಮಿಸುವುದು. ಮೊಂಡುತನವನ್ನೇ ಧೈರ್ಯವೆಂದು ಭ್ರಮಿಸುವ ನಾರ್ಸಿಸ್ಟ್ ಅಥವಾ ಆತ್ಮರತಿಯುಳ್ಳವರು. ಅಂತಹ ಅಹಂಕಾರಿಗಳು ಮಾತ್ರವೇ ಕ್ಷಮೆ ಕೇಳುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. ಅರಿಮೆಗಳನ್ನು ಉಳ್ಳವರೇ ಇತರರ ವಿಷಯಗಳಲ್ಲಿ ವ್ಯತ್ಯಾಸದಿಂದ ನಡೆದುಕೊಳ್ಳುವುದು.

ಅರಿಮೆಗಳನ್ನು ಹೊಂದಿರುವ ಕಾರಣದಿಂದಲೇ ಅವರು ಕೆಲವು ಗುಣಗಳಿಂದ ಆವರಿಸಿಕೊಂಡಿರಲ್ಪಟ್ಟು, ವಿಲಕ್ಷಣ ಎನಿಸುವ ಧೋರಣೆಗಳಿಗೆ ಅಧೀನರಾಗಿರುತ್ತಾರೆ. ಅದು ಅವರಿಗೇ ಗೊತ್ತಿರುವುದಿಲ್ಲ. ಅಂತವರನ್ನೂ ಕ್ಷಮಿಸಬೇಕೆನ್ನುವುದು ಯೇಸು. ತಾನು ಯಾವ ತಪ್ಪನ್ನೂ ಮಾಡದೆಯೇ ಮರಣದಂಡನೆಗೆ ಒಳಗಾಗಿ ಶಿಲುಬೆಯೇರಿ ಸಾಯುವಾಗ, “ತಂದೆಯೇ ಅವರನ್ನು ಕ್ಷಮಿಸು. ತಾವೇನು ಮಾಡುತ್ತಿದ್ದೇವೆಂದು ಅವರು ಅರಿಯರು” ಎಂದು ಹೇಳುವ ಪ್ರಸಂಗದಲ್ಲಿ ನಾನು ಗ್ರಹಿಸುವುದು, ಈ ಅರಿಮೆಯುಳ್ಳವರ ತಪ್ಪುಗಳನ್ನು ಕ್ಷಮಿಸಬೇಕು ಮತ್ತು ಸರಿಪಡಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending