Connect with us

ಅಂತರಂಗ

ಅರಿಮೆಯ ಅರಿವಿರಲಿ-33 : ಭೂತಬಾಧೆ

Published

on

  • ಯೋಗೇಶ್ ಮಾಸ್ಟರ್

ಒಬ್ಬ ವ್ಯಕ್ತಿ ಮತ್ತು ಹಲವು ವ್ಯಕ್ತಿಗಳಿಂದ ರಚಿತವಾಗಿರುವ ಸಮಾಜ; ಈ ಎರಡೂ ಸಂತೋಷವಾಗಿರಲು ಸಹಕರಿಸಲಾಗದ ಯಾವುದೇ ಪರಿಕಲ್ಪನೆಗಳಾದರೂ ಏಕೆ ಬೇಕು? ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ರಾಜಕೀಯ, ಸಾಹಿತ್ಯ, ಕಲೆ; ಹೀಗೆ ಯಾವುದನ್ನೇ ತೆಗೆದುಕೊಳ್ಳಿ. ವ್ಯಕ್ತಿ ಮತ್ತು ಸಮಾಜವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. ಬೌದ್ಧಿಕವಾಗಿ ಪ್ರಬುದ್ಧವಾಗಿರಬೇಕು. ಆಗ ಸಹಜವಾಗಿ ತನ್ನ ಜೀವನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯ. ಮನಶಾಸ್ತ್ರ, ಇತರೇ ವಿಜ್ಞಾನ, ಧರ್ಮ, ಸಂಸ್ಕೃತಿ, ರಾಜಕಾರಣ; ಈ ಎಲ್ಲವೂ ಪರಸ್ಪರ ಪೂರಕವೂ ಆಗಿರುವುದಲ್ಲದೇ ಒಂದರಲ್ಲೊಂದು ಹೆಣೆದುಕೊಂಡಿವೆ.

ಕಾರಣ ಎಲ್ಲದರ ಕೇಂದ್ರ ಮನುಷ್ಯ. ಎಲ್ಲವೂ ಅವನ ಒಳಿತಿಗೆ, ಅವನ ಶೇಯಸ್ಸಿಗೆ, ಅವನ ಆನಂದಕ್ಕೆ ಮತ್ತು ಅವನ ಉಳಿವಿಗೆ. ಹೀಗಿರುವಾಗ ಅವನಿಗಾಗಿ ಮತ್ತು ಅವನಿಂದ ಗಮನಿಸಲ್ಪಡುವ ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಮತ್ತು ಪೂರಕವಾಗಿಯೇ ನೋಡುವಂತ ಮತ್ತು ಪರಿಗಣಿಸುವಂತಹ ಕೆಲಸವಾಗಬೇಕು.
ವಿಷಯಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ ಮತ್ತು ಹೆಣೆದುಕೊಂಡಿವೆ ಎಂಬುದನ್ನು ಬಿಟ್ಟು ಎಲ್ಲವನ್ನೂ ಪ್ರತ್ಯೇಕವಾಗಿಯೇ ಉಪಚರಿಸುವ ರೀತಿ ಬಹಳಷ್ಟು ತೊಂದರೆಗಳನ್ನು ಒಡ್ಡಿವೆ.

ಹೆಣಿಗೆ ಬಿಟ್ಟ ನಡಿಗೆ

ಮಕ್ಕಳು ಶಾಲೆಯಲ್ಲಿ ಪಡೆಯುವ ಶಿಕ್ಷಣ ಮತ್ತು ಅನೌಪಚಾರಿಕವಾಗಿ ಸಮಾಜದಲ್ಲಿ ಪಡೆಯುವ ಶಿಕ್ಷಣವು ಅವರಲ್ಲಿ ದ್ವಂದ್ವಗಳನ್ನು ಹುಟ್ಟಿಹಾಕುತ್ತವೆ. ಹಾಗೆಯೇ ವ್ಯಕ್ತಿಗಳ ಸಂಬಂಧಗಳಲ್ಲಿಯೂ ಕೂಡಾ ಭಿನ್ನ ನಿಲುವುಗಳು ಮತ್ತು ಭಿನ್ನ ರೂಢಿಗಳು ತಲೆದೋರುವುದರಿಂದ ಮಾನಸಿಕವಾದ ಒತ್ತಡಗಳು ಉಂಟಾಗುತ್ತವೆ. ಪರಸ್ಪರ ಬೆಸೆದುಕೊಂಡಿರುವ ವಿಷಯಗಳನ್ನು ಗಮನಿಸದೇ ಅವುಗಳ ಜಾಡುಗಳನ್ನು ಪ್ರತ್ಯೇಕವಾಗಿ ನೋಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ವ್ಯಕ್ತಿಯೊಬ್ಬನು ತಾನು ಅಪಮಾನಕ್ಕೆ ಒಳಗಾಗುವಂತೆ ಭಾವಿಸುವುದು, ಅಸಹಾಯಕ ಸ್ಥಿತಿಯನ್ನು ಎದುರಿಸುವುದು, ಭಾವೋದ್ರೇಕಕ್ಕೆ ಒಳಗಾಗುವುದು, ಒಳಗೊಳಗೇ ಉದ್ಭವಿಸುವ ವಿಚಾರಗಳು, ಕಾರ್ಯರೂಪಕ್ಕೆ ತರಲಾಗದ ಇದ್ದಕ್ಕಿದ್ದಂತೆ ಮೂಡುವ ಆಲೋಚನೆಗಳು, ತಿರಸ್ಕಾರಕ್ಕೆ ಒಳಗಾದ ಭಾವ, ಕೆಲವು ವಸ್ತುಗಳ, ಸ್ಥಳಗಳ ಮತ್ತು ವ್ಯಕ್ತಿಗಳ ಬಗ್ಗೆ ಇರುವಂತಹ ಭಯಗಳು, ಕೆಲವು ವ್ಯಕ್ತಿಗಳ ಬಗ್ಗೆ ತಳೆದಿರುವ ನಕಾರಾತ್ಮಕ ಭಾವನೆಗಳು, ಆತ್ಮಹತ್ಯೆಯ ಆಲೋಚನೆಗಳು, ಹತ್ಯೆ ಮಾಡುವಂತಹ ಬಯಕೆ ಮತ್ತು ಮಾಡಿಬಿಡುತ್ತೇನೆ ಎಂಬ ವಿಚಾರಗಳು; ಇಂತವೆಲ್ಲಾ posttraumatic disorders (PTED)ಸಾಲಿಗೇ ಬಂದು ಸೇರಿಬಿಡುತ್ತವೆ.

ಸಾಮಾನ್ಯವಾಗಿ ಈ ಸಮಸ್ಯೆ ಇರುವವರು ತಮಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ನಿರಾಕರಿಸುತ್ತಾರೆ. ಚಿಕಿತ್ಸೆಯ ನಿರಾಕರಣೆಯ ಮುಖ್ಯ ಕಾರಣವೆಂದರೆ, ಸಮಸ್ಯೆಯ ಮೂಲ ಹೊರಗಿನ ವ್ಯಕ್ತಿ, ಸನ್ನಿವೇಶ, ಸ್ಥಳ ಅಥವಾ ಘಟನೆಯಿಂದ ಆಗಿರುವುದೆಂದೂ, ಅದು ಸರಿ ಹೋದರೆ ತನ್ನಲ್ಲಿ ಸಮಸ್ಯೆ ಇರುವುದಿಲ್ಲವೆಂದು ನಂಬುತ್ತಾರೆ. ಇದರಿಂದ ಸಮಸ್ಯೆಯ ಮೂಲ ತಾವು ಎಂಬುದನ್ನು ಅವರು ಒಪ್ಪುವುದಿಲ್ಲ.

ಗಂಡ ಹೆಂಡತಿಯರ ನಡುವೆ ಜಗಳವಾಗಿದೆ ಎಂದಿಟ್ಟುಕೊಳ್ಳಿ. ಗಂಡನ ಒರಟು ವರ್ತನೆ ಮತ್ತು ದಾಳಿಯಿಂದ ಹೆಂಡತಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವಾಗಿದೆ. ಭಾವನಾತ್ಮಕವಾಗಿ ಕುಸಿದಿದ್ದು, ಜರ್ಜರಿತಳಾಗಿದ್ದಾಳೆ. ಅವಳಿಗೆ ‘ಈಗ ನಿನಗೆ posttraumatic disorders (PTED)ಇದೆ. ನಿನಗೆ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕು” ಎಂದು ಹೇಳಿದರೆ ಆಕೆ ಅದನ್ನು ಕೇಳಲು ತಯಾರಿರುವುದಿಲ್ಲ. ಅವಳ ಪ್ರಕಾರ ಗಂಡನ ಒರಟುತನ ಮತ್ತು ಹಲ್ಲೆ ಮಾಡುವ ಗುಣದಿಂದಾಗಿ ನನ್ನ ದೇಹ ಮತ್ತು ಮನಸ್ಸಿಗೆ ನೋವಾಗಿದೆ. ಅವನು ಒರಟುತನ ಬಿಟ್ಟರೆ ಮತ್ತು ಉತ್ತಮ ರೀತಿಯಲ್ಲಿ ನಡೆದುಕೊಂಡರೆ ತಾನೂ ಸರಿ ಹೋಗುತ್ತೇನೆ ಎಂದು ನಂಬುತ್ತಾಳೆ. ಆದರೆ, ಅವನ ದಾಳಿಗೆ ಸಿಕ್ಕಿರುವ ಕಾರಣದಿಂದಲೇ ಅವಳಿಗೂ ಸಮಸ್ಯೆ ಇದೆ ಎನ್ನುವುದು ಅವಳಿಗೆ ಗೊತ್ತಾಗುವುದಿಲ್ಲ.

ಟ್ರೊಮಾ ಎಂದರೇನು?

ಗಂಡ ಹೊಡೆದ. ಹೆಂಡತಿಯ ಕೈಗೆ ಗಾಯವಾಯಿತು ಎಂದಿಟ್ಟುಕೊಳ್ಳಿ. ಈಗ ಹೊಡೆತಕ್ಕೆ ಸಿಕ್ಕು ಘಾಸಿತವಾಗಿರುವ ಕೈಗೆ ಉಪಚರಿಸಬೇಕು. ರಕ್ತಸ್ರಾವ ನಿಲ್ಲಿಸಬೇಕು. ಗಾಯ ಆಳವಾಗಿದ್ದರೆ ಹೊಲಿಗೆ ಹಾಕಿಸಬೇಕು. ಬ್ಯಾಂಡೇಜ್ ಕಟ್ಟಬೇಕು, ಇತ್ಯಾದಿ ಚಿಕಿತ್ಸೆ ನೀಡಬೇಕು. ಹೊಡೆಯುವ ಗಂಡ ತನ್ನ ತಪ್ಪನ್ನು ತಿಳಿದು ಮರುಗಿದರೆ, ಕ್ಷಮೆ ಕೇಳಿದರೆ ಗಾಯಗೊಂಡ ಕೈ ಸರಿ ಹೋಗುವುದಿಲ್ಲ. ಅದೇ ರೀತಿ ಮನಸ್ಸಿಗೆ ಆಗುವ ಗಾಯವೂ ಸಹ. ಒಮ್ಮೆ ಮನಸ್ಸು ಗಾಯಗೊಂಡರೆ ಅದಕ್ಕೊಂದು ಸಮಸ್ಯೆ ವಕ್ಕರಿಸಿತು ಎಂದೇ ಅರ್ಥ. ಅದು ಯಾವುದೋ ಒಂದು ರೀತಿಯಲ್ಲಿ ತನ್ನ ಪ್ರಭಾವವನ್ನು ಬೀರಿರಬಹುದು. ಸಂಬಂಧಗಳಲ್ಲಿ ಜಗಳ ಮುಗಿದು ಸರಿಹೋಗಿದ್ದರೂ, ನ್ಯಾಯ ಪಂಚಾಯತಿ ಮಾಡಿ ರಾಜಿಯಾಗಿದ್ದರೂ, ಪರಿಹಾರ ಸಿಕ್ಕಿದ್ದರೂ ಅಲ್ಲಿಗೆ ಮನಸ್ಸು ಸರಿ ಹೋಗಿದೆ ಎಂದಲ್ಲ.

ಟ್ರೋಮಾ ಎಂದರೇನೇ ಉಳಿದಿರುವ ನೋವು ಅಥವಾ ಅಡಗಿರುವ ಬಾಧೆ. ಅದು ದೈಹಿಕವಾಗಿಯಾದರೂ ಸರಿಯೇ, ಮಾನಸಿಕವಾಗಿಯಾದರೂ ಸರಿಯೇ.ಸಮಾಲೋಚನೆಗಳ ಮೂಲಕ, ಆತ್ಮಾವಲೋಕನದ ಮೂಲಕ, ತನ್ನ ಬದಲಾಗಿರುವ ವರ್ತನೆ, ಆಲೋಚನೆ ಮತ್ತು ಧೋರಣೆಗಳನ್ನು ಗಮನಿಸಿಕೊಳ್ಳುವ ಮೂಲಕ ತಮ್ಮಲ್ಲಿ ತಲೆದೋರಿರುವ ಸಮಸ್ಯೆಯನ್ನು ಗುರುತಿಸಿಕೊಳ್ಳಬೇಕು. ಮನಶಾಸ್ತ್ರಜ್ಞರು ಸಮಾಲೋಚನೆಗಳಾ ಮೂಲಕ ಇದನ್ನು ಗುರುತಿಸಿಕೊಳ್ಳಲು ಮತ್ತು ಅದರಿಂದ ಹೊರಗೆ ಬರಲು ಸಹಾಯ ಮಾಡುತ್ತಾರೆ.

ಮಗುವೊಂದು ಏನೋ ಬೇಕೆಂದು ಗಲಾಟೆ ಮಾಡಿ ಅಳುತ್ತದೆ. ನೀವು ಕೊಡಿಸುವುದಿಲ್ಲ. ಬೈಯುತ್ತೀರಿ. ಹಟ ಅತಿರೇಕಕ್ಕೆ ಹೋಗಿದೆ ಎಂದು ನಾಲ್ಕು ಬಿಗಿಯುತ್ತೀರಿ. ಆಮೇಲೆ ನಿಮಗೇ ಅಯ್ಯೋ ಪಾಪ ಎನಿಸುತ್ತದೆ. ನಂತರ ಕೊಡಿಸುತ್ತೀರಿ. ಮಗು ಅಳು ನಿಲ್ಲಿಸುತ್ತದೆ. ನಗುತ್ತದೆ. ನಿಮ್ಮ ಜೊತೆಗೆ ಎಂದಿನಂತೆ ಇರುತ್ತದೆ. ಇಷ್ಟಕ್ಕೆ ಮಗುವು ಸರಿ ಹೋಯಿತೆಂದು ತಿಳಿಯಬೇಡಿ. ನಿಮ್ಮ ಮತ್ತು ಮಗುವಿನ ಸಂಘರ್ಷದ ಸಮಯದಲ್ಲಿ ಮಗುವಿನ ಮನಸ್ಸಿನಲ್ಲಿ ಉಂಟಾದ ಏರುಪೇರು ಅಲ್ಲಿಗೆ ಸರಿ ಹೋಗಿದೆ ಎಂದು ಖಂಡಿತ ಅಲ್ಲ. ಹೊರಗಿನ ಸಂಘರ್ಷ ಕೊನೆಗೊಂಡಿತು ಅಷ್ಟೇ. ಒಳಗೆ ಅದರ ಪ್ರಭಾವ ಜೀವಂತವಾಗಿರುತ್ತದೆ. ಭೂತಕಾಲದ ಅಂತಹ ಪಳೆಯುಳಿಕೆಗಳೆಲ್ಲಾ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿಯೂ ಕಾಡುತ್ತದೆ ಅದನ್ನು ಗುರುತಿಸಿ ಚಿಕಿತ್ಸೆ ನೀಡದಿದ್ದ ಪಕ್ಷದಲ್ಲಿ. ಇದನ್ನೇ ಭೂತಬಾಧೆ ಎಂದು ಹೇಳಬಹುದು.

ನೋವಿನ ಪಳೆಯುಳಿಕೆಗಳು

ಅಪಘಾತವಾದ ಮೇಲೆ, ಯಾವುದೋ ಶಸ್ತ್ರಕ್ರಿಯೆ ನಡೆದ ಮೇಲೆ, ಮಾನಸಿಕವಾಗಿ ದಾಳಿಯಾದ ಮೇಲೆ, ಭಾವನಾತ್ಮಕವಾಗಿ ಕ್ಷೋಭೆಗೊಂಡಿದ್ದ ಮೇಲೆ, ಯಾವುದೋ ಅಹಿತಕರ ಘಟನೆಗಳು ನಡೆದ ಮೇಲೆ, ಸಂಘರ್ಷ, ನಿರಾಸೆ, ನಷ್ಟ, ನೋವು, ಸಾವು, ವಂಚನೆ, ಆಕ್ರಮಣ, ಅತ್ಯಾಚಾರದಂತಹ ಘಟನೆಗಳು ಸಂಭವಿಸಿದ ಮೇಲೆ; ಹೊರ ನೋಟಕ್ಕೆ ಸರಿಹೋದಂತೆ ಕಂಡರೂ ನೋವಿನ ಪಳೆಯುಳಿಕೆಗಳು ಜೀವಂತವಾಗಿರುತ್ತವೆ. ಅವುಗಳೇ ಟ್ರೋಮಾ. ಅವುಗಳನ್ನು ಬುಡಸಹಿತ ಇಲ್ಲವಾಗಿಸುವುದು ಕಷ್ಟವಾದರೂ ಸೂಕ್ತವಾದ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕೇಬೇಕು.

ಒಂದು ಮನೆಯಲ್ಲಿ ಸಾವಾದರೂ ಬೇಕು, ವ್ಯಾಪಾರದಲ್ಲಿ ನಷ್ಟವಾದರೂ ಬೇಕು, ಪ್ರೇಮಿಗಳು ಬ್ರೇಕ್ ಅಪ್ ಆದರೂ ಬೇಕು, ಒಂದು ಮಗುವಿನ ಗೊಂಬೆ ಮುರಿದು ಹೋದರೂ ಬೇಕು. ಅವುಗಳ ಗಂಭೀರ ಪರಿಣಾಮದ ಅನುಗುಣವಾಗಿ ಸಮಯ ಮತ್ತು ವಿಧಾನಗಳನ್ನು ಕೂಡಾ ಪರಿಗಣಿಸಬೇಕು. ನಮ್ಮ ಭಾರತದಲ್ಲಂತೂ, “ಹೋಗಲಿ ಬಿಡು” ಎಂಬ ದಿವ್ಯಮಂತ್ರವನ್ನು ಸಾಂತ್ವಾನವಾಗಿ ನೀಡಿ ಸುಮ್ಮನಾಗಿರುತ್ತಾರೆ. ಎರಡನೆಯ ಮತ್ತು ಮೂರನೆಯ ವ್ಯಕ್ತಿಗೆ “ಹೋಗಲಿ ಬಿಡು” ಎನ್ನುವುದು ಸುಲಭ.

ತಾಯಿ ಸತ್ತ ಮಗನಿಗೆ, ಗಂಡನಿಂದ ಹೊಡೆಸಿಕೊಂಡಿರುವ ಹೆಂಡತಿಗೆ, ಹೆಂಡತಿಯಿಂದ ನೋವುಂಡ ಗಂಡನಿಗೆ, ಗೊಂಬೆಯನ್ನು ಕಳೆದುಕೊಂಡಿರುವ ಮಗುವಿಗೆ, ಪರೀಕ್ಷೆಯಲ್ಲಿ ನಪಾಸಾದ ವಿದ್ಯಾರ್ಥಿಗೆ; ಸಮಾಧಾನಿಸಲು “ಹೋಗಲಿ ಬಿಡು” ಎಂದು ಮೂರನೆಯ ವ್ಯಕ್ತಿ ಎನ್ನಬಹುದು. ಆದರೆ ನಷ್ಟವನ್ನು ಹೊಂದಿರುವ, ನೋವಿನಲ್ಲಿರುವ ಅವರಿಗೆ ಈ ಪದ ಏನೂ ಸಾಂತ್ವಾನ ನೀಡದು. ತಮ್ಮದಲ್ಲದ ನಷ್ಟಕ್ಕೆ ಯಾರಾದರೂ ಹೋಗಲಿಬಿಡು ಮಂತ್ರ ಧಾರಾಳವಾಗಿ ಹೇಳಬಹುದಲ್ಲವೇ? ವಾಸ್ತವವಾಗಿ ಅವರಿಗೆ ಬೇರೆ ಏನು ಹೇಳುವುದು ಎಂದು ತಿಳಿಯದೇ ಇದನ್ನು ಹೇಳುವುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಇರಲಿ, ಗಂಡನ ಜೊತೆಗೆ ರಾಜಿಯಾಗಿರುವ ಹೆಂಡತಿ, ತಾಯಿಯೊಂದಿಗೆ ಮತ್ತೆ ಮೊದಲಿನಂತೆ ಇರುವ ಮಗು; ಇವರ ಮನಸ್ಸಿನಲ್ಲಿ ಪಟ್ಟ ನೋವಿನ ಪಳೆಯುಳಿಕೆಗಳು ಆಲೋಚನೆಗಳಾಗಿಯೋ, ಅಭಿಪ್ರಾಯವಾಗಿಯೋ, ನಿರ್ಣಯವಾಗಿಯೋ, ಒಟ್ಟು ಸೂಕ್ಷ್ಮಸ್ತರದಲ್ಲಿ ರೂಪುಗೊಂಡಿರುತ್ತದೆ. ಅದು ವರ್ತನೆಗಳಲ್ಲಿ, ಧೋರಣೆಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ವ್ಯಕ್ತಗೊಳ್ಳುತ್ತಿರುತ್ತವೆ. ಹುಲ್ಲುಮಾಳದಲ್ಲಿ ಒಣಗಿದ ಹುಲ್ಲು ಸುಟ್ಟು ಹೋಗಿ ಅಲ್ಲಿ ಹುಲ್ಲೇನೂ ಕಾಣದಿದ್ದರೂ, ಮಳೆ ಬಂದಾಗ ಸುಟ್ಟ ಬೂದಿಯಿಂದ ಬೀಜಗಳು ಮೊಳೆತು ಬಂದಂತೆ.

ಭರವಸೆ ಹುಟ್ಟಿಸುವಂತಹ ಚಿಕಿತ್ಸೆ ಎಂದರೆ ಅವು ಆಪ್ತ ಸಮಾಲೋಚನೆಗಳು. ಈ ಆಪ್ತ ಸಮಾಲೋಚನೆಯಲ್ಲಿ ವ್ಯಕ್ತಿಯು ತನ್ನ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಅವಲೋಕಿಸುವುದು, ಅದರಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗ್ರಹಿಸುವುದು, ತನ್ನಲ್ಲಿ ಉಂಟಾಗಿರುವ ಭಾವನೆಗಳ ಸಾಂದ್ರತೆಯನ್ನು ಗುರುತಿಸುವುದು, ಅವುಗಳನ್ನು ವಿವೇಚಿಸುವುದು, ಅವುಗಳು ಉಂಟು ಮಾಡುತ್ತಿರುವ ಪರಿಣಾಮಗಳನ್ನು ಗುರುತಿಸುವುದು, ಅವುಗಳು ಎಷ್ಟರಮಟ್ಟಿಗೆ ಮೌಲ್ಯವನ್ನು ಹೊಂದಿವೆ ಎಂದು ವಿಚಾರ ಮಾಡುವುದು, ಬಹುಕಾಲಕ್ಕೆ ಬೇಕಾದ ಅಥವಾ ತಾಳಿಕೆ ಮತ್ತು ಬಾಳಿಕೆ ಬರುವಂತಹ ವಿಚಾರಗಳನ್ನು ಮಾಡುವುದು; ಇವೆಲ್ಲಾ ಆಗಬಹುದು, ಆಗಬೇಕು. ಆಗ ವ್ಯಕ್ತಿಯು ತನ್ನ ನೋವು ಮತ್ತು ಸಂಕಟಗಳ ಭೂತಬಾಧೆಯಿಂದ ಮುಕ್ತವಾಗಿ ಸೇಡಿನ ಮನೋಭಾವನ್ನು ಹೊಂದದೇ ಇರಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending