Connect with us

ಅಂತರಂಗ

ಅರಿಮೆಯ ಅರಿವಿರಲಿ-43 : ನಿನ್ನ ಸಹವಾಸ ಸಾಕು

Published

on

  • ಯೋಗೇಶ್ ಮಾಸ್ಟರ್

ನಾನು’ – ದ ಫಸ್ಟ್ ಪರ್ಸನ್ – ಏಕವಚನದ ವ್ಯಕ್ತಿಯಾದ ನಾನು ನನ್ನ ಜೊತೆಗೆ ಜೀವಿಸುತ್ತಿರುವವರನ್ನು ಅರಿಮೆಯಿಂದ ಮುಕ್ತರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ಮೊದಲು ನನ್ನ ಅರಿಮೆಯನ್ನು ಅರಿಯಬೇಕು. ಅದನ್ನು ಒಪ್ಪಿಕೊಳ್ಳಲು ನನ್ನ ಅಹಂಕಾರ ಅಡ್ಡ ಬರಬಾರದು. ಎರಡನೆಯದು ಅದರ ಬಗ್ಗೆ ಸದಾ ಜಾಗರೂಕತೆಯಿಂದ ನನ್ನ ನಾನು ಗಮನಿಸಿಕೊಳ್ಳಬೇಕು. ಎಲ್ಲೆಲ್ಲಿ ಅದು ತನ್ನ ತಲೆ ಎತ್ತುವ ಸಾಧ್ಯತೆಗಳನ್ನು ಕಂಡುಕೊಳ್ಳುತ್ತೇನೋ ಅಲ್ಲಿ ಅದನ್ನು ಮಣಿಸುವಂತೆ ವರ್ತನೆಯನ್ನು ತೋರಬೇಕು.

ಉದಾಹರಣೆಗೆ ಆತ್ಮರತಿ ಅಥವಾ ನಾರ್ಸಿಸಂ ಗಮನಕ್ಕೆ ಬಂದ ಕೂಡಲೇ ಉದ್ದೇಶಪೂರ್ವಕವಾಗಿ ವಿನಯವನ್ನು ಅಭ್ಯಾಸ ಮಾಡಬೇಕು. ನಾನು ವಿನಯದ ವರ್ತನೆಯನ್ನು ತೋರಿದರೆ ನಾನು ಸೋತಂತೆ ನನ್ನ ಎದುರಾಳಿಗೆ ಗೆಲ್ಲುವುದಕ್ಕೆ ಬಿಟ್ಟಂತೆ ಎಂಬಂತಹ ಆಲೋಚನೆ ಬರಬಾರದು. ಬಂದರೂ ಪರವಾಗಿಲ್ಲ. ನನ್ನ ದೌರ್ಬಲ್ಯವನ್ನು ನಾನು ಗೆಲ್ಲುವುದು ಅತ್ಯಂತ ಮುಖ್ಯ ಎಂಬ ಮನವರಿಕೆಯಿಂದ ವರ್ತಿಸಬೇಕು. ಸಾಮಾನ್ಯವಾಗಿ ನನ್ನ ಎದುರಾಳಿಯು ನನ್ನ ವಿನಯವನ್ನು ನನ್ನ ಹೇಡಿತನವೆಂದು, ಅಸಹಾಯಕತೆ ಎಂದು ಭಾವಿಸುತ್ತಾನೆ. ಇದರಿಂದ ನನಗೆ ಅವಮಾನವಾಗುತ್ತದೆ ಎಂಬ ಭಾವ ಪದೇ ಪದೇ ಮೂಡುತ್ತಿರುತ್ತದೆ.

ಆದರೆ ಅದು ಭ್ರಮೆ. ಅವರು ಯಾರೂ ಏನೂ ನಮ್ಮ ಬಗ್ಗೆ ಹಾಗೆ ಅಂದುಕೊಳ್ಳುವುದಿಲ್ಲ. ಸರಿ, ಒಂದು ವೇಳೆ ಅಂದುಕೊಂಡರೆ, ಅಂದುಕೊಳ್ಳಲಿ ಪರವಾಗಿಲ್ಲ. ನನಗೆ ನಾನು ನನ್ನ ಅರಿಮೆಯಿಂದ ಮುಕ್ತವಾಗಬೇಕು ಎನ್ನುವ ಆಲೋಚನೆಯನ್ನು ಉದ್ದೇಶಪೂರ್ವಕವಾಗಿ ಮಾಡಬೇಕು. ಅದೇ ಪ್ರಜ್ಞೆಯಿಂದ ಅದನ್ನು ಬಲಗೊಳಿಸಿಕೊಳ್ಳಬೇಕು.

ಇನ್ನು ಮೂರನೆಯದಾಗಿ, ಯಾರಲ್ಲೇ ಯಾವುದೇ ಬಗೆಯ ಅರಿಮೆಯನ್ನಾಗಲಿ ಅಥವಾ ಮಾನಸಿಕ ಸಮಸ್ಯೆಯಾಗಲಿ ಕಂಡರೆ ಅವರ ಬಗ್ಗೆ ಅನುಕಂಪವನ್ನು ಹೊಂದಬೇಕು.ಅವರು ವ್ಯತ್ಯಾಸವಾಗಿ ವರ್ತಿಸಿದರೂ ‘ತಿಕ್ಕಲು ತಿಕ್ಕಲಾಗಿ ಆಡಬೇಡ’ ಎಂದೋ, ‘ಯೂ ಆರ್ ವಿಯರ್ಡ್’ ಅಂದರೆ ವಿಲಕ್ಷಣವಾಗಿ ಅಥವಾ ವಿಚಿತ್ರವಾಗಿ ಆಡುತ್ತಿದ್ದೀಯ ಎಂದೋ ಅನ್ನಬಾರದು. ಹೇ, ಯಾಕೆ ಹೇಗೇಗೋ ಒಳ್ಳೆ ದೆವ್ವ ಹಿಡದಂಗೆ, ದೇವರು ಮೈ ಮೇಲೆ ಬಂದಂಗೆ ಆಡ್ತಿದ್ದೀಯಾ, ಹುಚ್ಚು ಹಿಡಿದಿದೆಯಾ? ಪಿತ್ತ ನೆತ್ತಿಗೇರಿದೆಯಾ? ಇತ್ಯಾದಿ ಮಾತುಗಳನ್ನು ರೂಢಿಯಲ್ಲಿ ಆಡುತ್ತಾರೆ. ಅದರಲ್ಲೂ “ನಿನ್ನ ಸಹವಾಸ ಸಾಕಪ್ಪಾ” ಎಂದಂತೂ ಖಂಡಿತ ಅನ್ನಬಾರದು. ಅರಿಮೆಗಳ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದವರ ಮಾತುಗಳು ಇವು.

ವೈದ್ಯನು ರೋಗಿಯನ್ನು ದ್ವೇಷಿಸುವುದು ನೈತಿಕವೇ?

ಯಾವ ವ್ಯಕ್ತಿಯೂ ತನ್ನ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಅವನಿಗೆ ಆನಂದವೇ ಬೇಕಾಗಿರುವುದು. ತಾನೂ ಮತ್ತು ತನ್ನ ಜೊತೆಗಾರರೆಲ್ಲವೂ ಆನಂದವಾಗಿರಬೇಕೆಂದೇ ಬಯಸುವವನು. ಆದರೆ ಆನಂದ ಪಡೆಯುವ ಅಥವಾ ನೀಡುವ ಬದಲು ತನ್ನ ಮತ್ತು ಇತರರ ಸಂತೋಷವನ್ನು ಹಾಳುಮಾಡುವಂತಹ ಯಾವುದೇ ವರ್ತನೆಯನ್ನು ತೋರಿದರೂ, ಅಲ್ಲಿ ತಿಳಿದುಕೊಳ್ಳಿ, ಆತನಲ್ಲಿ ಅಥವಾ ಆಕೆಯಲ್ಲಿ ಸಮಸ್ಯೆ ಇದೆ ಎಂದು ಸ್ಪಷ್ಟವಾದ ಅರ್ಥ. ಆ ಸಮಸ್ಯೆಯನ್ನು ತಂದುಕೊಂಡಿರುವುದು ಅವರ ತಪ್ಪಲ್ಲ ಅಥವಾ ಅಪರಾಧವಲ್ಲ. ಏಕೆಂದರೆ ಮಾನಸಿಕ ಸಮಸ್ಯೆಗಳು ಅವರಿಗೆ ಅರಿವಿಲ್ಲದಂತೆಯೇ ಅವರಲ್ಲಿ ಇನ್‍ಸ್ಟಾಲ್ ಆಗಿರುತ್ತದೆ.

ಹಾಗೂ ಅವರಂತೂ ಖಂಡಿತ ಕಾರಣರಲ್ಲ. ಅವರಿಗೆ ಸಮಸ್ಯೆ ಇದೆ ಎಂದೇ ಗೊತ್ತಿರುವುದಿಲ್ಲ. ಎಷ್ಟೋ ಬಾರಿ ಅವರ ಸಮಸ್ಯೆಗಳನ್ನು ಅವರ ಸಾಮರ್ಥ್ಯ ಎಂದುಕೊಂಡಿರುತ್ತಾರೆ. ಅವರ ದೌರ್ಬಲ್ಯಗಳನ್ನು ಅವರ ಬಲ ಎಂದುಕೊಂಡಿರುತ್ತಾರೆ. ಹಾಗಾಗಿಯೇ ಅವರು ತಮ್ಮ ಸಮಸ್ಯೆಗಳನ್ನು ಅರಿತುಕೊಳ್ಳದೆಯೇ ಅದರ ಪ್ರಭಾವಗಳನ್ನು ಪ್ರಕಟಗೊಳಿಸುತ್ತಲೇ ಹೋಗುತ್ತಿರುತ್ತಾರೆ. ಅವರಿಗೆ ಗೊತ್ತಾದರೂ ಅವರು ಮುಂದುವರಿಸುತ್ತಿದ್ದಾರೆಂದರೆ ಅದು ಅವರ ನಿಯಂತ್ರಣಕ್ಕೆ ಮೀರಿ ಹೋಗಿದೆ ಎಂದು ಅರ್ಥ. ಅವರಿಗೆ ಅದನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಅರ್ಥ.

ಇಡೀ ದೇಶವೇ ಸಾಂಘಿಕವಾಗಿ ತನ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಂಡು ಒಂದು ವೈರಸ್ ವಿರುದ್ಧ ಹೋರಾಡುವಾಗಲೂ ಬಹಳ ಕಷ್ಟಪಡುತ್ತದೆ. ಆಯಾಸಗೊಳ್ಳುತ್ತದೆ. ಸೋತಂತಾಗುತ್ತದೆ. ನಿಭಾಯಿಸಲು ಆಗದೇ ಕೈ ಚೆಲ್ಲುತ್ತದೆ. ವ್ಯವಸ್ಥೆಗಳಲ್ಲಿ ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆ ಇಲ್ಲಿ ತ್ಯಾಪೆ ಹಾಕಲು ಹೋದರೆ ಅಲ್ಲಿ ಹರಿಯುತ್ತದೆ. ಅಲ್ಲಿ ತ್ಯಾಪೆ ಹಾಕಲು ಹೋದರೆ ಇಲ್ಲಿ ಹರಿಯುತ್ತದೆ.ಹರಕುಗಳು ಎಲ್ಲೆಲ್ಲಿವೆ ಎಂದೇ ತಿಳಿಯದಷ್ಟು ಸೋಂಕುಗಳು ಸೋರುತ್ತಿರುತ್ತವೆ.

ಹಾಗಿರುವಾಗ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಹೊಕ್ಕಿರುವ ವೈರಸ್ಸುಗಳು ಯಾವುವು ಎಂದೇ ತಿಳಿಯಲು ಸಾಧ್ಯವಾಗದೇ ಒದ್ದಾಡುವುದು, ಯಾವ ಯಾವ ಬಗೆಯ ವೈರಸ್ಸುಗಳು ಎಂದು ಕೂಡಾ ಪತ್ತೆ ಹಚ್ಚಲಾಗದೇ ಹೋಗುವುದು ಏನೂ ಹೆಚ್ಚಲ್ಲ. ಅಪರಾಧವೂ ಅಲ್ಲ. ಆದರೆ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡದೇ ಹೋಗುವುದು ಅಮಾನವೀಯ. ತಿಳುವಳಿಕೆಯನ್ನು ಪಡೆಯುವುದಕ್ಕೂ ಮುಂದಾಗದೇ ತನ್ನ ಹಟಮಾರಿತನದಲ್ಲಿ ಅಡಗಿಕೊಳ್ಳುವುದು ಅಜ್ಞಾನ.

ವೈದ್ಯನು ರೋಗಿಯ ಮೇಲೆ ಕೋಪಗೊಂಡರಾದೀತೇ? ವೈದ್ಯನ ಕಾಯಕವೇ ರೋಗವನ್ನು ಗುಣಪಡಿಸುವುದಾಗಿದ್ದು, ರೋಗಿಷ್ಟನಾಗಿದ್ದಾನೆಂದು ರೋಗಿಯನ್ನು ದ್ವೇಷಿಸುವುದು ನೈತಿಕವೇ? ಹಾಗೆಯೇ ಮನಸ್ಸಿನ ವಿಚಾರಗಳಲ್ಲಿ, ವರ್ತನೆ ಮತ್ತು ಸಂಬಂಧಗಳ ನಿರ್ವಹಣೆಗಳಲ್ಲಿ ಎಲ್ಲರೂ ಅರಿವುಳ್ಳವರಾಗಬೇಕು ಮತ್ತು ತಮ್ಮೊಡನೆ ವ್ಯತ್ಯಾಸವಾಗಿ ವರ್ತಿಸುವವರ ಮೇಲೆ ಅನುಕಂಪದಿಂದ ಅವರಿಗೆ ಸುಧಾರಿಸಿಕೊಳ್ಳಲು ನೆರವಾಗಬೇಕು. ಅವರು ಸುಧಾರಿಸಿಕೊಳ್ಳಲಾಗಲಿಲ್ಲವೆಂದರೆ ನಮ್ಮ ನೈಪುಣ್ಯಕೆ ಸವಾಲು ಎಂದು ಮತ್ತಷ್ಟು ಮಗದಷ್ಟು ಜ್ಞಾನ, ಪ್ರಜ್ಞೆ ಮತ್ತು ತಂತ್ರಗಳಿಂದ ನಿಪುಣರಾಗಲು ಯತ್ನಿಸಬೇಕು. ನೆಗಡಿ ಬಂದಿದೆ ಎಂದು ಮೂಗು ಕುಯ್ದುಕೊಳ್ಳುವುದೇ?

ಅಪರಾಧಿಗಳ ನಿರ್ಮಾತರು

ಕೆಟ್ಟದಾಗಿ ವರ್ತಿಸುವವನು, ಕೆಟ್ಟ ಕೆಲಸ ಮಾಡುವವನು, ಕೆಟ್ಟ ಮಾತುಗಳನ್ನು ಆಡುವವನು ಕೆಟ್ಟವನಲ್ಲವೇ? ದುಷ್ಟ ಎಂಬುವನು ಯಾರೂ ಇಲ್ಲವೇ? ಹಾಗಿದ್ದ ಮೇಲೆ ಯಾರನ್ನು ನಾವು ದುಷ್ಟರೆನ್ನಬೇಕು? ಯಾರನ್ನು ಕೆಟ್ಟವರೆನ್ನಬೇಕು? ಅಪರಾಧಿಗಳು ಎನ್ನುವವರು ಯಾರು ಎಂದು ಕೇಳಿದರೆ, ನನ್ನ ಉತ್ತರ ‘ಯಾರೂ ಇಲ್ಲ.’
Criminals are not born but they are made ಎಂಬ ಮಾತು ನಮಗೆ ಗೊತ್ತು. ಎಲ್ಲಾ ತಾಯಂದಿರೂ ಏನೂ ಅರಿಯದ ಮುಗ್ಧ ಶಿಶುವಿಗೇ ಜನ್ಮ ನೀಡುವುದು. ಯಾವ ತಾಯಿಯೂ ಅಪರಾಧಿ ಶಿಶುವನ್ನು ಹೆರುವುದಿಲ್ಲ. ಆದರೆ ಆ ಮಗುವು ಅಪರಾಧಿಯಾಗಿ ಮುಂದೆ ರೂಪುಗೊಳ್ಳುವುದು.

ಹಾಗೆ ರೂಪಿಸುವುದಾದರೂ ಯಾರು? ಕುಟುಂಬ, ಪರಿಸರ, ಸಮಾಜ, ವ್ಯವಸ್ಥೆ, ಸಂಸ್ಕೃತಿ ಇತ್ಯಾದಿ ಆ ಮಗುವಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಆದರೆ ಆ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ನಾವು ಹೇಳುವುದಾದರೂ ಏನು? ನಾವು ಎಷ್ಟು ಒಳ್ಳೆ ಮಾತು ಹೇಳಿದರೂ ಅವನು ಅಥವಾ ಅವಳು ಕೇಳುವುದಿಲ್ಲ ಎಂದು ದೂರುತ್ತೇವೆ. ಇನ್ನೂ ಸುಲಭವಾಗಿ ಅವನ ಅಥವಾ ಅವಳ ಹಣೆಬರಹವೇ ಆಗಿತ್ತು ಎನ್ನುತ್ತೇವೆ.

ಹಿಂದೆ ಮಾಡಿದ ಕರ್ಮ ಹೀಗೆ ಕಾಡುತ್ತಿದೆ ಎಂದೋ, ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದೋ, ಅವರ ಹುಟ್ಟಿದ ಗಳಿಗೆಯೇ ಹಾಗಿತ್ತು, ಜಾತಕದಲ್ಲಿ ಚೆನ್ನಾಗಿಲ್ಲ, ಗ್ರಹಗತಿ ಚೆನ್ನಾಗಿಲ್ಲ; ಹೀಗೆ ಹತ್ತು ಹಲವು ನೆಪಗಳನ್ನು ತೋರುತ್ತಿರುತ್ತೇವೆ, ಇದಕ್ಕೆ ಕಾರಣ ನಾನಲ್ಲ ಎಂದು ಹೊಣೆಗಾರಿಕೆಯನ್ನು ಕೊಡವಿಕೊಳ್ಳಲು.

ಒಂದು ಮಗುವಿನ ವ್ಯಕ್ತಿತ್ವದ ರೂಪುಗೊಳ್ಳುವಿಕೆಯಲ್ಲಿ, ವರ್ತನೆಯಳನ್ನು, ಆಲೋಚನೆಗಳನ್ನು ರೂಢಿಗೊಳಿಸುವಲ್ಲಿ ಕುಟುಂಬ, ಸಮಾಜ, ವ್ಯವಸ್ಥೆ ಮತ್ತು ಶಿಕ್ಷಣ ಎಲ್ಲವೂ ವಿಫಲವಾಗಿರುವ ಸ್ಪಷ್ಟ ಕುರುಹೇ ಅಪರಾಧಗಳಿಂದ ಕೂಡಿರುವ ಸಮಾಜ. ಯಾರೂ ಯಾರನ್ನೂ ದೂರುವುದು ಬೇಕಾಗಿಲ್ಲ. ಇದು ಸಾಂಘಿಕ ವೈಫಲ್ಯ. ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊರಬೇಕು. ಎಲ್ಲರಿಗೂ ಅವರವರ ಹೊಣೆಗಾರಿಕೆಗಳಿವೆ.ಈ ಎಚ್ಚರಿಕೆಯನ್ನು ಹೊಂದಿದ್ದು, ಜಾಗೃತರಾಗಿ ಕೆಲಸ ಮಾಡುವುದಾದರೆ ಮಾತ್ರ ಒಂದಿಷ್ಟಾದರೂ ಮುಂದಿನ ಅವಘಡಗಳನ್ನು ತಪ್ಪಿಸಬಹುದು.

ಕೆಟ್ಟದ್ದು ಮತ್ತು ಒಳ್ಳೆಯದು ಎನ್ನುವುದೇ ಅವರವರ ಪರಿಕಲ್ಪನೆ. ಅವರವರ ಆಲೋಚನೆ, ಆಸಕ್ತಿ ಮತ್ತು ಇಷ್ಟಗಳ ಆಧಾರದ ಮೇಲೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಆಲೋಚಿಸುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ನಿರ್ಧರಿಸುತ್ತಾರೆ. ಅದರಂತೆಯೇ ವ್ಯಕ್ತಿಗಳನ್ನೂ, ಸಿದ್ಧಾಂತಗಳನ್ನೂ ಮತ್ತು ವ್ಯವಸ್ಥೆಗಳನ್ನೂ ದೂರುತ್ತಾರೆ ಅಥವಾ ಪ್ರಶಂಸಿಸುತ್ತಾರೆ. ಹಾಗಾಗಿಯೇ ಇಷ್ಟೊಂದು ಸಂಘರ್ಷ ಮತ್ತು ದೌರ್ಜನ್ಯಗಳು ಇರುವುದು.

ಒಬ್ಬ ಅಥವಾ ಎಲ್ಲರೂ ಮಾನಸಿಕವಾಗಿ ಉಲ್ಲಾಸದಿಂದ ಆನಂದದಿಂದ ಇರಬೇಕೆಂದರೆ ಎಂತಹ ಮನೋಭಾವವನ್ನು ಹೊಂದಿರಬೇಕೆಂದರೆ, ‘ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ನಾನು ನನ್ನವರೊಂದಿಗೆ ಚೆನ್ನಾಗಿರಬೇಕು. ಆನಂದವಾಗಿರಬೇಕು. ಹಾಗೆಯೇ ಇತರರೂ ಚೆನ್ನಾಗಿರಬೇಕು. ಆನಂದವಾಗಿರಬೇಕು. ಇಷ್ಟೇ ನಾವು ಒಳ್ಳೆಯದು ಅಥವಾ ಕೆಟ್ಟದು ಎಂಬ ಎಲ್ಲಾ ಸಿದ್ಧಾಂತಗಳನ್ನೂ ಮೀರಿ ಇರಬೇಕಾಗಿರುವ ಮೂಲ ಮನೋಭಾವ. ಇದಕ್ಕೆ ಮೀರಿ ಸಂಗತಿಗಳು ನಮ್ಮಲ್ಲಿ ಮತ್ತು ಸುತ್ತಮುತ್ತಲೂ ಘಟಿಸುತ್ತಿರುವುದರಿಂದ ಕ್ಷಮೆ, ಕರುಣೆ, ಔದಾರ್ಯ, ವಿನಯ, ಕೃತಜ್ಞತೆ ಇತ್ಯಾದಿ ಪರಿಕಲ್ಪನೆಗಳು ನಿರ್ವಹಣಾ ತಂತ್ರಗಳಾಗಿ (ಮೇನೇಜ್ಮೆಂಟ್ ಟೆಕ್ನಿಕ್ಸ್) ಬೇಕಾಗಿರುವುದು.

ಅರಿಮೆಗಳೆಲ್ಲಾ ರೋಗಗಳೇನಲ್ಲ

ನಾನು ಚೆನ್ನಾಗಿದ್ದು ನನ್ನೊಡನೆ ಇರುವವರು ಚೆನ್ನಾಗಿರಲಿಲ್ಲವೆಂದರೂ ಕೆಲವರಲ್ಲಿ ಕೀಳರಿಮೆ ಕಾಡುತ್ತದೆ. ಅದಕ್ಕೆ Successor ಅಥವಾ Survivor Guilt ಎನ್ನುತ್ತೇವೆ. ನೀವು ಜೀವನ ನಿರ್ವಹಣೆಗೆ ಅಗತ್ಯವಿರುವಂತಹ ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡಿರುತ್ತೀರಿ. ಆರ್ಥಿಕತೆಯಲ್ಲಿ ಸ್ವಾವಲಂಬಿಯಾಗಿರುತ್ತೀರಿ. ಆದರೆ ನಿಮ್ಮ ತಮ್ಮನೋ ಅಥವಾ ಅಣ್ಣನೋ ಅಥವಾ ಇನ್ನಾದರೂ ಗೆಳೆಯರೋ ನಿಮಗೆ ಆತ್ಮೀಯವಾಗಿ, ಬದುಕಿನಲ್ಲಿ ಆಪ್ತವಾಗಿರುವವರು ಪರಾವಲಂಬಿಯಾಗಿರುತ್ತಾರೆ. ಆರ್ಥಿಕವಾಗಿ ಮುನ್ನೆಲೆಗೆ ಬಂದಿರುವುದಿಲ್ಲ. ತೊಂದರೆಯಲ್ಲಿ ಬಳಲುತ್ತಿರುತ್ತಾರೆ. ಆಗ ನಿಮಗೆ ಈ ಅಪರಾಧ ಪ್ರಜ್ಞೆ ಕಾಡಬಹುದು.

ನಮ್ಮ ಆಪ್ತರ ಹೆಂಡತಿ ತೀರಿ ಹೋಗಿದ್ದು, ಅವರು ಸಂಸಾರ ನಿರ್ವಹಣೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ನಾನು ನನ್ನ ಹೆಂಡತಿಯೊಡನೆ ಸುಖವಾಗಿ ಸಂಸಾರ ನಡೆಸುವುದಕ್ಕೆ ಕಸಿವಿಸಿ ಎನ್ನಿಸುವ ಭಾವವೂ ಕೂಡಾ ಈ ಅರಿಮೆಯೇ. ಸ್ಥಾನಮಾನ, ಹೆಚ್ಚಿನ ಅಂಕ, ಉತ್ತಮವಾದ ಮನೆ; ಹೀಗೆ ಯಾವ ವಿಷಯಕ್ಕಾದರೂ ನಮ್ಮಲ್ಲಿ ನಮಗೆ ಆಪ್ತರಾಗಿರುವವರಿಗಿಂತ ಹೆಚ್ಚಾಗಿದ್ದರೆ ಈ ಅರಿಮೆಯು ಬರಬಹುದು.

ಇದಕ್ಕೆ ಮಾಡಬೇಕಾದುದೇನು? ಮುಖ್ಯವಾಗಿ ನಾವು ಯಾರ ಬಗ್ಗೆ ಹಾಗೆ ಯೋಚಿಸುತ್ತಿರುತ್ತೇವೆಯೋ ಅವರಿಗೆ ಆ ರೀತಿಯಲ್ಲಿ ನಮ್ಮ ಬಗ್ಗೆ ಭಾವನೆಗಳಿರುವುದಿಲ್ಲ ಎಂಬುದನ್ನು ಆಲೋಚಿಸಬೇಕು. ಹಾಗೆಯೇ, ನಾವು ಉದ್ದೇಶಪೂರ್ವಕವಾಗಿ ನಮ್ಮ ಏಳ್ಗೆಯನ್ನು ಕೆಳಗಿಳಿಸಿಕೊಳ್ಳದೇ ಅವರಿಗೆ ನೆರವಾಗಬೇಕು, ನಮ್ಮ ಅಹಂಕಾರವು ಎಂದಿಗೂ ಅವರಿಗೆ ನೋವನುಂಟು ಮಾಡಬಾರದು ಎಂಬ ಪ್ರಜ್ಞೆಯನ್ನು ಸದಾ ಎಚ್ಚರದಲ್ಲಿಟ್ಟುಕೊಂಡಿರಬೇಕು. ನಮ್ಮ ಏಳ್ಗೆಗೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿಕೊಂಡು ಅವರಲ್ಲಿ ಕೊರತೆಯಾಗಿರುವ ಅಂಶಗಳನ್ನು ಪೂರೈಸುವ ಅಥವಾ ನೆರವಾಗುವ ಮೂಲಕ ಈ ಬಗೆಯ ಅಪರಾಧದ ಅರಿಮೆಯನ್ನು ತೊಡೆದುಕೊಳ್ಳಬಹುದು.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೆಂದರೆ ಎಲ್ಲಾ ಅರಿಮೆಗಳೂ ಮಾನಸಿಕವಾಗಿರುವುದಾದರೂ ಅವೆಲ್ಲವೂ ಮಾನಸಿಕ ಸಮಸ್ಯೆ ಆಗಿರಲೇ ಬೇಕೆಂದಿಲ್ಲ. ಅಪರಾಧ ಪ್ರಜ್ಞೆಯಂತಹ ಅರಿಮೆಗಳು ವ್ಯಕ್ತಿಯ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿಯೂ ಪರಿಣಮಿಸಲು ಸಾಧ್ಯ. ಒಟ್ಟಾರೆ, ತನ್ನ ತಾನು ತಿಳಿಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಸಹಜವಾಗಿ ತನ್ನ ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅದರ ಮೂಲಕ ತಾನು ಯಾವ ಬಗೆಯ ಅರಿಮೆಗೆ ಒಳಗಾಗಿದ್ದೇನೆ ಮತ್ತು ಅದರಿಂದ ಹೊರಗೆ ಬರಲು ಏನು ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಸಕಾರಾತ್ಮಕವಾಗಿ ಕೆಲಸ ಮಾಡಲು ಕೂಡಾ ಸಾಧ್ಯವಾಗುತ್ತದೆ. ಅದು ವ್ಯಕ್ತಿಗೂ ಹಿತವೇ, ಸಮಾಜಕ್ಕೂ ಹಿತವೇ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending