Connect with us

ಅಂತರಂಗ

ಅರಿಮೆಯ ಅರಿವಿರಲಿ-9 : ಆತ್ಮರತಿ

Published

on

  • ಯೋಗೇಶ್ ಮಾಸ್ಟರ್

ವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ. ಅವಳ ಶಾಪವೋ ಅವಳಿಗೆ ತನ್ನ ಮಾತನ್ನು ತಾನು ಹೇಳಲಾಗದು. ಇತರರ ಮಾತನ್ನು ಪ್ರತಿಧ್ವನಿಸಬೇಕು. ಹಾಗಾಗಿ ಅವಳಿಗೆ ಗ್ರೀಕ್ ಬೇಟೆಗಾರನಿಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಲಾಗದು, ತನ್ನ ಪ್ರಶಂಸೆಯನ್ನೂ ತಿಳಿಸಲಾಗದು. ಅವನೋ ಇವಳ ಕಡೆ ಕಣ್ಣೆತ್ತಿಯೂ ನೋಡದೇ ಓಡಾಡುತ್ತಿರುತ್ತಾನೆ.

ಒಮ್ಮೆ ತಿಳಿಯಾದ ನೀರಿನಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾನೆ. ತನ್ನದೇ ಸೌಂದರ್ಯವನ್ನು ತಾನೇ ನೋಡಿಕೊಂಡು ಪರವಶನಾಗುತ್ತಾನೆ. ಆ ನೀಳ ಮೂಗು, ಹೊಳಪಿನ ಕಣ್ಣುಗಳು, ಗುಲಾಬಿ ದಳದಂತಹ ತುಟಿಗಳು, ನಕ್ಕರೆ ಅರಳಿದ ಹೂವಿನಂತಹ ಮುಖ; ಆಹಾ! ಅದನ್ನು ಮುದ್ದಿಸುವಷ್ಟು ಆಕರ್ಷಕ, ಮೋಹಕ. ಒಂದೇ ಕಣ್ಣೋಟಕೆ ಪ್ರೇಮಿಸಲಾಗುವಂತೆ, ಒಮ್ಮಿಂದೊಮ್ಮೆಲೇ ಮರುಳಾಗಿ ಅಪ್ಪಿ ಇನ್ನಿಲ್ಲವಾಗುವಂತಹ ಸೆಳೆತ. ಅವನು ತನ್ನ ಬಿಂಬಕ್ಕೆ ತಾನೇ ಮೋಹಿತನಾಗಿ ಮುದಪಡೆಯಲು, ಸರಸದಿಂದ ಮುಟ್ಟುತ್ತಾನೆ. ನೀರು ಕಲಕುತ್ತಿದ್ದಂತೆ ಬಿಂಬ ಚದರುತ್ತದೆ. ಇಲ್ಲವಾಗುತ್ತದೆ. ಅಯ್ಯೋ, ತನ್ನ ಮೋಹಕ, ಪ್ರೇಮಪೂರ್ಣ ತನ್ನನ್ನು ಪಡೆಯಲು ನೀರಿಗೆ ಧುಮುಕುತ್ತಾನೆ. ಆದರೆ ಸಿಗುವುದಿಲ್ಲ. ದಡದಲ್ಲೊಂದು ಅವನ ಪ್ರೇಮಕ್ಕೆ ಸಾಕ್ಷಿಯಾಗಿ ಹೂಗಿಡವೊಂದು ಮೂಡುತ್ತದೆ. ಆ ಹೂವಿಗೂ ಅವನದೇ ಹೆಸರು. ನಾರ್ಸಿಸಸ್.

ಆತ್ಮರತಿಯಲೆಗಳು

ನಾರ್ಸಿಸಸ್ ತನ್ನ ತಾನು ಮೋಹಿಸಿಕೊಳ್ಳುವ, ತನಗೆ ತಾನು ಪರವಶವಾಗುವ, ತನ್ನನ್ನು ತಾನೇ ಪ್ರೀತಿಸಿಕೊಳ್ಳುವ ಆತ್ಮರತಿಗೆ ಪ್ರತಿಮೆಯಾಗಿ ನಿಲ್ಲುತ್ತಾನೆ. ಈ ಅರಿಮೆಯೇ ಆತ್ಮರತಿ. ಅವರಿವರ ಅತಿಕ್ರಮಣ ಪ್ರವೇಶವಿರದಿದ್ದಾಗ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತುಕೊಂಡು ತನ್ನನ್ನೇ ತಾನೇ ನೋಡಿಕೊಂಡು, ಕಾಣುವ ಎಲ್ಲಾ ವಿವರಗಳನ್ನು ಗಮನಿಸುತ್ತಾ, ಪ್ರಶಂಸಿಸುತ್ತಾ, ನಸುನಗುತ್ತಾ, ಮೋಹಗೊಳ್ಳುತ್ತಾ ಪರವಶವಾಗುವ ಅನುಭವವಿರುವವರಿಗೆ ನಾರ್ಸಿಸಸ್ ನೀರಿನಲ್ಲಿ ತನ್ನ ಬಿಂಬವನ್ನು ಹೇಗೆ ನೋಡಿಕೊಂಡಿದ್ದಿರಬಹುದು ಎಂದು ಅರಿವಾಗುತ್ತದೆ.

ಫೇಸ್ಬುಕ್ ಅಥವಾ ಇನ್ಟಾಗ್ರಾಂನಲ್ಲೋ ಕಣ್ಣಾಡಿಸಿದರೆ ಆತ್ಮರತಿಯ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಮುಖಪುಟವಂತೂ ಆತ್ಮರತಿಯ ಮಹಾಸಾಗರ. ನಾರ್ಸಿಸಿಸಂ ಅಥವಾ ಆತ್ಮರತಿಯ ಅರಿಮೆಯ ಅಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ. ಅಷ್ಟು ಸಾಮಾನ್ಯ. ನಮಗೆ ಹೆಜ್ಜೆಹೆಜ್ಜೆಗೂ ಕಣ್ಣಿಗಪ್ಪಳಿಸುತ್ತಿರುತ್ತವೆ.

ಅದ್ಯಾವುದೋ ಊರ ಹಬ್ಬಕ್ಕೆ ಶುಭಾಶಯ ಕೋರುವ ರಾಜಕಾರಣಿಯ ಅಥವಾ ಮುಂದೆ ನಿಲ್ಲಬಹುದಾದ ಚುನಾವಣಾ ಅಭ್ಯರ್ಥಿಯ ಫ್ಲೆಕ್ಸ್ ನೋಡಿ. ಹೆಸರಿನ ಹಿಂದೆ ಒಂದಿಷ್ಟು ಬಿರುದು ಬಾವಲಿಗಳು, ಗ್ರಾಫಿಕ್ಸ್‍ನಲ್ಲಿ ಹುಲಿ ಸಿಂಹಗಳೂ ಅತ್ತಿತ್ತ ಇದ್ದರೆ ಆಶ್ಚರ್ಯವಿಲ್ಲ. ಈತನೆಂದು ಗುರುತಿಸಲು ಬರಿಯ ಮುಖ ಸಾಕಾದರೂ, ಅವರಿಗೆ ಆತ ತೊಟ್ಟಿರುವ ಬೂಟಿನವರೆಗೂ, ಜೊತೆಗೆ ನಡೆಯ ಭಂಗಿಯನ್ನೂ ತೋರುವ ತವಕ. ಅದನ್ನು ನೋಡಿ, ಆಹಾ, ಆ ಸುಂದರವಾದ ಹೊಳಪುಳ್ಳ ಉಂಗುರವನ್ನು ನೋಡು, ಆಹಾ, ಆ ಚೆಂದದ ಶರ್ಟಿನ ಬಣ್ಣವನ್ನು ನೋಡು.

ಇಂಥವೆಲ್ಲಾ ತೊಟ್ಟಿರುವ, ಹೀಗೆಲ್ಲಾ ಕಾಣುವ ಇವನೇ ನಮ್ಮ ನಾಯಕನಾಗಬೇಕು ಎಂದು ಅವನ ಸೌಂದರ್ಯೋಪಾಸನೆಯಿಂದ ರಸ್ತೆಯಲ್ಲಿ ಓಡಾಡುತ್ತಿರುವವರಾರಾದರೂ ಪರವಶವಾಗುತ್ತಾರೆಂದುಕೊಂಡಿದ್ದೀರಾ?
ಫೇಸ್ಬುಕ್ಕಿನಲ್ಲಿ ಕೆಲವರು ಎಡಕ್ಕೆ ತಿರುಗಿ ಒಂದು ಪಟ, ಬಲಕ್ಕೆ ತಿರುಗೊಂದು ಪಟ, ಹೀಂಗೊಂದು ಪಟ, ಹಾಗೊಂದು ಪಟ. ಮೇಲಿಂದೊಂದು, ಕೆಳಗಿಂದೊಂದು; ನಾನಾ ಭಾವಗಳಲ್ಲಿ, ಭಂಗಿಗಳಲ್ಲಿ ವಿಜೃಂಭಿಸುತ್ತಿರುತ್ತವೆ. ಕೆಲವು ಸಲ ಬರಿಯ ನೋಡುಗರಿಗೆ ಪಟ ಹಾಕಿದವರಿಗೆ ಕಂಡ ವ್ಯತ್ಯಾಸಗಳಾವುವೂ ಕಾಣುವುದೂ ಇಲ್ಲ. ಎಲ್ಲವೂ ಒಂದೇ ಎಂಬಂತೆ ಕಾಣುತ್ತಿರುತ್ತದೆ.

ಇನ್ನೂ ಮುಂದುವರಿದು ತಾವು ತೊಟ್ಟಿರುವ ಪ್ರತಿ ಬಟ್ಟೆಯ ಪಟಗಳನ್ನು ಫೇಸ್ಬುಕ್ಕಿನಲ್ಲಿ ಪೇರಿಸುವುದು ಸಾಲದೆಂದು ಅವರ ಸ್ನೇಹಿತರೆಲ್ಲಿ ನೋಡುವುದರಿಂದ ವಂಚಿತರಾಗಿಬಿಡುತ್ತಾರೋ ಎಂದು ಪ್ರಶಂಸಿಸಬಹುದಾದ ಸ್ನೇಹಿತರಿಗೆಲ್ಲಾ ತಗುಲಿ ಹಾಕಿರುತ್ತಾರೆ. ಲೈಕಿಸಲಿ, ಪ್ರೀತಿಸಲಿ, ವಾವ್ ಎಂದು ಕಣ್ಣು ಬಾಯಿ ಬಿಡಲೆಂಬ ಹೆಬ್ಬಯಕೆ. ಒಂದು ನಾರ್ಸಿಸಸ್ ಮತ್ತೊಂದು ನಾರ್ಸಿಸಸ್ಸನ್ನು ನೋಡುವುದಿಲ್ಲ.

ಆಗ ಈ ನಾರ್ಸಿಸಸ್ ಬಡಪೆಟ್ಟಿಗೆ ಬಗ್ಗದೆ ಆ ನಾರ್ಸಿಸಸ್ ಒಳಪೆಟ್ಟಿಗೆಗೆ ಸಂದೇಶ ಕಳುಹಿಸಿ ಮೆಚ್ಚಿಸಿಕೊಳ್ಳುವವರೆಗೂ ಬಿಡುವುದಿಲ್ಲ.
ಆಹಾ, ಈ ಮುಖ ಎಡಗಡೆಯಿಂದ ಎಷ್ಟು ಸುಂದರ, ಹಾ, ಹಾಗೆಯೇ ಬಲದಿಂದಲೂ ಸುಂದರ ಎಂದು ನಾನಾ ಬಗೆಗಳಿಂದಲೂ ನೋಡುತ್ತಾ ಆನಂದದಿಂದ ರಸಾನುಭೂತಿಯಲ್ಲಿ ಮಿಂದೆದ್ದು ನೋಡುಗಳು ಸುರಸವಾದ ಸಾರ್ಥಕ ಪಡೆಯುತ್ತಾರೆಂದುಕೊಂಡಿದ್ದೀರಾ?
ಬಹಳಷ್ಟು ಸೆಲ್ಫೀ ಅಥವಾ ಸ್ವಂತೀ ಪಟಗಳು ಆತ್ಮರತಿಯ ಬಿಂಬಗಳು.

ಸಾಮಾನ್ಯ ಸಮಸ್ಯೆ

ಆತ್ಮರತಿ ಎಂದರೆ ಆತ್ಮವಿಶ್ವಾಸ ಅಥವಾ ಸ್ವಕೇಂದ್ರಿತ ವ್ಯಕ್ತಿತ್ವವೇನಲ್ಲ. ಅದೊಂದು ಮಾನಸಿಕ ಸಮಸ್ಯೆ. ಕಾರಣ ಮತ್ತು ಪರಿಣಾಮಗಳಿರುವಂತಹ ಬಹಳ ಗುರುತರವಾದಂತಹ ಹಾಗೂ ಗಂಭೀರವಾದ ಸಮಸ್ಯೆಯೇ. ಈ ಆತ್ಮರತಿಯ ಅರಿಮೆಗೆ narcissistic personality disorder (NPD)
ಎಂದು ಕರೆಯುತ್ತಾರೆ. ಆಗಲೇ ಹೇಳಿದಂತೆ ಇದು ನಮ್ಮಲ್ಲಿ ಬಹು ವ್ಯಾಪಕವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಸಮಸ್ಯೆಗಳನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ಅವು ಕೊಂಚವಾದರೂ ನಿಯಂತ್ರಣಕ್ಕೆ ಬರುತ್ತವೆ. ನನ್ನಲ್ಲಿ ಆತ್ಮರತಿಯ ಅರಿಮೆ ಇದೆ ಎಂದು ಗುರುತಿಸಿಕೊಂಡರೆ ಪ್ರದರ್ಶನಗಳು ಕೊಂಚ ಕಡಿಮೆಯಾಗಬಹುದು. ಅಥವಾ ಪ್ರದರ್ಶನಗಳಿಗೊಂದು ನಿಯಂತ್ರಣ ಬರಬಹುದು.

ಒಟ್ಟಾರೆ ಆತ್ಮರತಿಯ ಅರಿಮೆಯನ್ನು ಇತರರಲ್ಲಿ ಗುರುತಿಸಲು ಮತ್ತು ತನ್ನಲ್ಲಿ ಗುರುತಿಸಿಕೊಳ್ಳಲು ಫೇಸ್ಬುಕ್ ಮತ್ತು ಫ್ಲೆಕ್ಸುಗಳು ಒಳ್ಳೆಯ ಸಾಧನವಾಗಿವೆ. ಆದರೆ ಈ ಆತ್ಮರತಿಯ ಸಮಸ್ಯೆ ಬರೀ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದರೆ ನಸುನಕ್ಕು ಸುಮ್ಮನಾಗಿಬಿಡಬಹುದಿತ್ತು. ಆದರೆ ಅದು ಗಂಭೀರವಾದ ಒಳಸುಳಿಗಳನ್ನು ಹೊಂದಿವೆ. ಮುಂದೆ ಹೇಳಲಾಗುವ ಎಲ್ಲಾ ಲಕ್ಷಣಗಳೂ ಇರಲೇ ಬೇಕೆಂದೇನಿಲ್ಲ. ಆದರೆ ಇವು ಸಾಮಾನ್ಯ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು. ಇಲ್ಲದೇ ಇರಬಹುದು. ಕೆಲವರಿಗೆ ಇವುಗಳ ಜೊತೆಗೆ ಇನ್ನೂ ಹಲವಿರಬಹುದು.
ತನಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಪಹಪಿಸುವ ಬಯಕೆ.

ತನ್ನ ಕಡೆಗೆ ಗಮನ ಸೆಳೆಯುವ ಮತ್ತು ಪ್ರಶಂಸೆ ಪಡೆಯುವ ಅದುಮಿಡಲಾಗದ ಆಳದೊಳಗಿಂದೇಳುತ್ತಲೇ ಇರುವ ಆಸೆ. ಬೇರೆಯವರ ಬಗ್ಗೆ ಸಹಾನುಭೂತಿ(empathy)ಇಲ್ಲದಿರುವುದು. ಸಂಬಂಧಗಳಲ್ಲಿ ಸಮಸ್ಯೆಗಳು, ಸ್ವಾರ್ಥ, ಇತರರ ಭಾವನೆಗಳನ್ನು ಪರಿಗಣಿಸದಿರುವುದು.
ಒಟ್ಟಾರೆ ಈ ಆತ್ಮರತಿ ಅರಿಮೆಯು ಕಪ್ಪು ಬಿಳಿಪಿನಷ್ಟು ಸ್ಪಷ್ಟವಾಗಿ ವಿಭಜಿಸಿ ಸ್ಪಷ್ಟೀಕರಿಸಲಾಗದ್ದು. ಬೆಳಕಿನ ವಕ್ರೀಭವನದಿಂದ ಅನೇಕ ಬಣ್ಣಗಳು ಮೂಡುವಂತೆ ವಿವಿಧ ರಂಗುಗಳನ್ನು ಪಡೆದುಕೊಳ್ಳುವಂತಹ ಅರಿಮೆ.
ಇನ್ನೂ ಕೆಲವರಲ್ಲಿ ನೀವು ಗಮನಿಸಬಹುದು.

ತಮ್ಮ ಬಗ್ಗೆ ಅತ್ಯಂತ ಮಹೋನ್ನತದ ಎತ್ತರದ ಭವಿಷ್ಯತ್ತಿನ ಭ್ರಮೆಯಲ್ಲಿ ಬಡಬಡಿಸುತ್ತಿರುವರು. ಅವರ ವಿಶ್ವಾಸಕ್ಕೆ, ಯಶಸ್ಸಿಗೆ, ಅಧಿಕಾರಕ್ಕೆ, ಬುದ್ಧಿಮತ್ತೆಗೆ, ಸೌಂದರ್ಯಕ್ಕೆ, ಪ್ರೇಮಕ್ಕೆ ಸಾಟಿಯೇ ಇಲ್ಲವೆಂಬಂತೆ ಹೇಳಿಕೊಳ್ಳುತ್ತಿರುವರು.

ಬರಹಗಾರನೊಬ್ಬ ತಾನು ರಚಿಸಿದ ಕವನ, ಕತೆ ಅಥವಾ ಲೇಖನವನ್ನು ಸಹಜವಾಗಿ ಪ್ರಕಟಿಸುತ್ತಾನೆ. ಬರಿದೇ ಪ್ರಸ್ತುತ ಪಡಿಸುವುದು ಅಥವಾ ಹಂಚಿಕೊಳ್ಳುವುದೇಕೆಂದರೆ ಅದು ಓರ್ವ ವ್ಯಕ್ತಿಯ ಅಥವಾ ಸಮಾಜದ ಅಭಿಪ್ರಾಯವನ್ನು ಅಥವಾ ಒಲವು ನಿಲುವುಗಳನ್ನು ಅಭಿವ್ಯಕ್ತಿಗೊಳಿಸುತ್ತಿರುತ್ತವೆ. ಹಾಗಾಗಿ ಅದನ್ನು ಅವನು ಹಂಚಿಕೊಳ್ಳುವುದು ಸಹಜ. ಈ ಹಂಚಿಕೊಳ್ಳುವಿಕೆಯಲ್ಲಿ ಪ್ರಶಂಸೆಯ ಹಸಿವಿರಲಾರದು. ಆದರೆ, ತಾವೊಂದು ಸುಂದರವಾದ ಮತ್ತು ಅಪರೂಪವಾದ ಅಥವಾ ವಿಶಿಷ್ಟವಾದ ಕತೆಯೊಂದನ್ನು ಅಥವಾ ಕವನವೊಂದನ್ನು ಬರೆದಿದ್ದೇನೆ ಎಂದು ನಿಮ್ಮ ವಾಟ್ಸಪ್ಪಿಗೋ ಅಥವಾ ಇನ್‍ಬಾಕ್ಸಿಗೋ ಯಾರಾದರೂ ಕಳುಹಿಸಿದ್ದಾರೆಂದರೆ, ಅವರು ಬರಿದೇ ಹಂಚಿಕೊಳ್ಳಲು ಕಳುಹಿಸಿಲ್ಲ. ನಿಮಗೂ ವಿಷಯ ತಿಳಿದಿರಲಿ ಎಂಬ ಸಾಧಾರಣ ಧೋರಣೆಯಲ್ಲ.

ಪ್ರಶಂಸೆಗಳನ್ನು ಉಣಬಡಿಸಿ ನನ್ನ ಆತ್ಮರತಿಯ ಹಸಿವನ್ನು ತಣಿಸಿ ಎಂದು. ಪ್ರಶಂಸೆಗಳಿಗಾಗಿ ಪರಿತಪಿಸುವುದು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಹೆಣಗಾಡಿ ಎಂತಾದರೂ ಪಡೆಯುವುದು, ಕಮಿಷನ್ ಕೊಟ್ಟಾದರೂ ಡಾಕ್ಟರೇಟ್ ಪಡೆದು ಡಾ. ಹಾಕಿಕೊಂಡು ಆನಂದಿಸುವುದು; “ಅದು ಸಾಮಾನ್ಯ” ಕೆಟಗರಿಗೆ ತಳ್ಳಬೇಡಿ. ಆತ್ಮರತಿಯ ಹಸಿವೆಯಿಂದ ಬಳಲುತ್ತಿರುವ ಅರಿಮೆ ಎಂಬ ಅರಿವಿರಲಿ. ಅರಿಮೆಗಳಿರುವುದು ಸಾಮಾನ್ಯವಲ್ಲ. ಸಾಮಾನ್ಯವಾಗಿರುವ ಸಮಸ್ಯೆಗಳು.

ನನಗೆ ಅವರು ಗೊತ್ತು

ಒಂದೆರಡು ವರ್ಷಗಳ ಹಿಂದೆ, ನಮ್ಮ ಮನೆಯ ಹತ್ತಿರವೇ ಮರವೊಂದರ ಕೆಳಗೆ ಧೂಮಪಾನ ಮತ್ತು ಮದ್ಯಪಾನದಲ್ಲಿ ನಿರತರಾಗಿದ್ದ ಯುವಕರ ತಂಡವೊಂದು ಮನೆಯೊಳಗಿದ್ದವರಿಗೆ ಕಿರಿಕಿರಿ ಮಾಡುವಷ್ಟು ಉತ್ಸಾಹದಲ್ಲಿ ಊಳಿಡುತ್ತಿದ್ದರು. ನಿದ್ರೆ ಮಾಡುತ್ತಿದ್ದ ನನಗೆ ಭಂಗವಾಗಬಾರದೆಂದು ನನ್ನ ಹೆಂಡತಿ ಅವರ ಬಳಿಗೆ ಹೋಗಿ, “ನೀವು ಹೀಗೆಲ್ಲಾ ಇಲ್ಲಿ ಗಲಾಟೆ ಮಾಡಬಾರದು. ಎದ್ದು ಬಾರ್ ಅಥವಾ ಪಬ್ ಗೆ ಹೋಗಿ” ಎಂದು ಹೇಳಿದಳು. ಅವರಲ್ಲೊಬ್ಬ ಹೇಳಿದನಂತೆ, “ರೀ ಮೇಡಂ, ನಾವ್ಯಾರು ಗೊತ್ತಾ? ರಾಮ ಲಕ್ಷ್ಮಣರ ಹುಡುಗರು” ಎಂದು. “ಯಾವ ರಾಮ ಲಕ್ಷ್ಮಣ? ರಾಮ ಲಕ್ಷ್ಮಣರ ಹುಡುಗರಾದರೆ ಭಜನೆ ಮಾಡ್ಕೊಂಡು ಕೂತ್ಕೊಳ್ಳಿ. ಇಲ್ಯಾಕೆ ಬಂದು ಹೀಗೆ ಗಲಾಟೆ ಮಾಡ್ತೀರಿ” ಎಂದವಳೇ ಮನೆಗೆ ಬಂದು ಪೋಲಿಸರಿಗೆ ಫೋನ್ ಮಾಡಿ, ಅವರು ಬಂದು ರಾಮ ಲಕ್ಷ್ಮಣರ ಹುಡುಗರಿಗೆ ಬೈದು ಬೆತ್ತದ ರುಚಿಯನ್ನೋ ತೋರಿಸಿ ಕಳುಹಿಸಿದ್ದರು.

ರಾಮ ಲಕ್ಷ್ಮಣರಿಬ್ಬರೂ ರೌಡಿಗಳು ಎಂದು ಪೋಲಿಸರು ರಾಮಾಯಣದ ರಾಮ ಲಕ್ಷ್ಮಣರಷ್ಟೇ ತಿಳಿದಿದ್ದ ನನ್ನ ಹೆಂಡತಿಗೆ ತಿಳಿಸಿದರು. ಅವಳಿಗೆ ಅರ್ಥವಾಗದೇ ಹೋಗಿದ್ದು, ಅವರಿಬ್ಬರ ಹೆಸರು ಹೇಳಿದರೆ ತಾನೇಕೆ ಸುಮ್ಮನಾಗಬೇಕೆಂದು ಅವರು ಬಯಸಿದರು ಎಂದು.

ಆತ್ಮರತಿಯ ಸ್ವಕುಚ ಮರ್ಧನದವರದು ಇದಿನ್ನೊಂದು ಲಕ್ಷಣ. ನನಗೆ ಆ ಮಿನಿಸ್ಟರ್ ಗೊತ್ತು, ಈ ಹೀರೋ ಮೊದಲು ನಮ್ಮನೇಲೇ ಬಾಡಿಗೆಗೆ ಇದ್ದ, ಆ ಹೀರೋಯಿನ್ ನನ್ನ ಫ್ರೆಂಡ್‍ಗೆ ಫ್ರೆಂಡು, ಆ ಸಾಧಕ ನಮ್ಮ ಸಂಬಂಧಿಗಳೇ ಆಗಬೇಕು; ಎಂದೆಲ್ಲಾ ಪ್ರಖ್ಯಾತ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಜೊತೆಗೆ ತಮ್ಮ ಗುರುತುಗಳನ್ನು ಅಗತ್ಯವಿಲ್ಲದಿದ್ದರೂ ಪ್ರದರ್ಶಿಸುತ್ತಿರುವುದು.

ಆತ್ಮಪೋಷಣೆ

ಗೌರಿಹಬ್ಬದ ದಿನದಂದು ಸಂಗೀತ ನಿರ್ದೆಶಕ ಹಂಸಲೇಖ ಮತ್ತವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ನಾನೆಲ್ಲೋ ಒಳಗಿದ್ದೆ. ನಮ್ಮ ತಾಯಿಯ ಜೊತೆ ಫೋನಿನಲ್ಲಷ್ಟೇ ಮಾತಾಡಿದ್ದ ಹಂಸಲೇಖರವರಿಗೆ ಅಮ್ಮನ ಮುಖ ಪರಿಚಯವಿಲ್ಲ. ವರಾಂಡದಲ್ಲಿ ನಿಂತಿದ್ದ ಅತ್ತೆಯವರ ಬಳಿಗೆ ಬಂದು “ಅಮ್ಮಾ ನಮಸ್ಕಾರ” ಎಂದರು. ಅವರನ್ನು ನಮ್ಮ ತಾಯಿ ಎಂದು ತಿಳಿದಿದ್ದರು. ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದ ಅವರು “ಆ” ಎಂದರು, ಅಂದರೆ ‘ಸರಿ’ ಅಂತ ಅರ್ಥ. “ನಾನು ಹಂಸಲೇಖ” ಎಂದರು. ಆ ಧ್ವನಿಯಲ್ಲಿ ನಿಮಗೆ ಗೊತ್ತೇ ಇರಬೇಕಾದ ಪರಿಚಯ ಎಂಬ ಧೋರಣೆ. ಆದರೆ ಅವರು ಅಂದಿದ್ದು, “ಅದಕ್ಕೆ?” ಅಂತ. ಹಂಸಲೇಖರಿಗೆ ಒಂದು ಕ್ಷಣ ಕಕ್ಕಾಬಿಕ್ಕಿ. “ನಾನು ಹಂಸಲೇಖ” ಎಂಬ ಭಾವಕ್ಕೆ ತಟ್ಟಂತ ತಡೆ.

ಒಳಗಿಂದ ಬಂದ ನನ್ನ ತಾಯಿ, “ಓ ಹಂಸಲೇಖ ಬನ್ನಿ ಬನ್ನಿ” ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಅವರ ಮುಜುಗರವನ್ನು ತಿಳಿಗೊಳಿಸಿಕೊಳ್ಳಲು ಸಾಧ್ಯವಾಯಿತು. ನಮ್ಮತ್ತೆಗೆ ಹಂಸಲೇಖ ಎಂದರೆ ಯಾರೆಂದೇ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗೊತ್ತಿರುವ ಏಕೈಕ ವ್ಯಕ್ತಿ ಎಂದರೆ ಅವರು ರಾಜ್ ಕುಮಾರ್ ಮಾತ್ರ.

“ನಾನು ಹಂಸಲೇಖ ಎಂಬ ಗರ್ವವನ್ನು ಆ ತಾಯಿ ಮುರಿದರು” ಎಂದು ಹಂಸಲೇಖ ಆಗಾಗ್ಗೆ ನೆನಪು ಬಂದಾಗ ನನ್ನ ಅತ್ತೆಯನ್ನು ನೆನೆಸಿಕೊಳ್ಳುತ್ತಿದ್ದರು. ಆತ್ಮರತಿಯ ಅಭಿವ್ಯಕ್ತಿಯನ್ನು ಪೋಷಿಸಿದಾಗ ಅದು ಉಬ್ಬುವುದು. ಪೋಷಣೆ ಸಿಗದಿದ್ದಾಗ ಅದು ಕುಗ್ಗುವುದು. ಕೆಲವು ಸಲ ಖಿನ್ನತೆಗೇ ಜಾರುವುದು.

ಜನಪ್ರಿಯ ಕಲಾವಿದರೂ ಅದೆಷ್ಟು ಎತ್ತರಕ್ಕೆ ಬೆಳೆದಿದ್ದರೂ, “ನನ್ನ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಯನ್ನು ಕೊಟ್ಟಿಲ್ಲ” ಎಂದು ಸಂದರ್ಶನಗಳಲ್ಲಿ ಅವಲತ್ತುಕೊಳ್ಳುತ್ತಿದ್ದಾಗ ನಾರ್ಸಿಸಸ್‍ನ ಪ್ರಲಾಪದಂತೆ ಕಂಡರೆ ತಪ್ಪೇನೂ ಅಲ್ಲ. ನಾರ್ಸಿಸಸ್ ಅಲ್ಲದಿದ್ದರೂ ನಾರ್ಸಿಸಸ್ ಸಂಬಂಧಿಕರೇ ಆಗಿರುತ್ತಾರೆ.

ಬಹುಪರಾಕ್

ಕೆಲವೊಂದು ಫ್ಲೆಕ್ಸ್‍ಗಳಲ್ಲಿ ಯಾವುದ್ಯಾವುದೋ ಕನ್ನಡ ಹೋರಾಟಗಾರರೆಂದು ಗುರುತಿಸಿಕೊಂಡವರ ಚಿತ್ರಗಳ ಕೆಳಗೆ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ ಎಂದೇನಾದರೂ ಹಾಕಿದ್ದರೆ ತಕ್ಷಣವೇ ನಾನು ನನ್ನ ಪಕ್ಕದವರಿಗೆ ಹೇಳುತ್ತೇನೆ. ಅದು ನನ್ನ ಹೃದಯದ ಹೊರತು ಎಂದು. ತಮ್ಮ ಹೆಸರಿನ ಹಿಂದೆ ಬಿರುದುಬಾವಲಿಗಳನ್ನು ಹಚ್ಚಿಕೊಳ್ಳುವುದು, ಸ್ವಾಮೀಜಿಗಳು ತಮ್ಮ ಆಟೋಗ್ರಾಫ್ ಹಾಕುವಾಗಲೂ ಜಗದ್ಗುರು ಶ್ರೀ ಶ್ರೀ ಶ್ರೀ ಎಂದು ಬರೆದುಕೊಂಡು ತಮ್ಮ ಹೆಸರನ್ನು ಬರೆಯುವುದು ಆತ್ಮರತಿಯ ಮತ್ತೊಂದು ಮಗ್ಗುಲೇ.

ಕೆಲವೊಂದು ಸ್ವಾಮಿಗಳ ಆತ್ಮರತಿಯ ಲಕ್ಷಣಗಳು ಅಳತೆ ಮೀರಿದ್ದಾಗಿರುತ್ತದೆ. ನಮಸ್ಕಾರಕ್ಕೆ ಪ್ರತಿನಮಸ್ಕಾರ ಹೇಳದಿರುವಷ್ಟು. ಅವರನ್ನು ನೋಡಲು ಯಾರಾದರೂ ಬಂದರೆಂದರೆ ಮುಗಿಸಿಕೊಳ್ಳಲು ಪಾದಗಳನ್ನು ಮುಂದೆ ಸರಿಸುವಷ್ಟು. ತಮ್ಮ ಕಿರೀಟಧಾರಿ ಫೋಟೋ, ತಮ್ಮ ತಲೆಯ ಹಿಂದೆ ಫೋಟೋಶಾಪಿನಲ್ಲಿ ಪ್ರಭಾವಳಿಯನ್ನು ಬಿಡಿಸಿಕೊಂಡು ನಗುನಗುತ್ತಾ ಅಭಯ ಹಸ್ತವನ್ನು ತೋರುವ ದೈವೀಪಟವನ್ನು ಮಾಡಿಸಿಕೊಳ್ಳುವಷ್ಟು.ಆತ್ಮರತಿಯರಿಮೆಯವರೋ ಬಹುಬಹು ಪರಾಕು ಪ್ರಿಯರು.

ಈ ಆತ್ಮರತಿಯರಿಮೆಯ ಮತ್ತೊಂದು ಲಕ್ಷಣವೆಂದರೆ ಇತರರದನ್ನು ಪ್ರಶಂಸಿಸಲು ಅಷ್ಟು ಮನಸೊಪ್ಪದಿರುವುದು. ತಾವು ಯಾವುದೋ ಒಂದು ಆ ಕೆಲಸವನ್ನು ಎಂದಿಗೂ ಮಾಡದಿದ್ದರೂ “ಅದೇನು ಮಹಾ. ನಾನೂ ಮಾಡುತ್ತೇನೆ” ಎನ್ನುವುದು. ಸಾಲದಕ್ಕೆ ಅಸೂಯಾಪರವಾಗಿವುದು. ಆತ್ಮರತಿಯೆಂಬ ಅರಿಮೆಗೆ ಅನೇಕಾನೇಕ ಗೀಳುಗಳು ಮತ್ತು ವ್ಯಸನಗಳು ಆಪ್ತ ಸ್ನೇಹಿತರು.

ಫೇಸ್ಬುಕ್ಕಿನಲ್ಲಿ ತಮಗೇ ಆಸಕ್ತಿ ಇರುವ ವಿಷಯವನ್ನೋ ಅಥವಾ ಸಂಗತಿಯನ್ನೋ ಇನ್ನಾರಾದರೂ ತಮಗಿಂತ ಮುಂಚೆಯೇ ಪ್ರಕಟಿಸಿಬಿಟ್ಟರೆ, ಅಥವಾ ತಾವು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬಂತಹ ಬರಹವನ್ನೋ ಅಥವಾ ವಿಷಯವನ್ನೋ ಗೋಡೆಗೆ ಅಂಟಿ ಹಾಕಿಕೊಂಡಿದ್ದರೆ, ಅದನ್ನು ನೋಡಿದರೂ ಹಾಗೆಯೇ ಮುಂದೆ ಹೋಗುತ್ತಾರೆ. ಅದು ತಮಗೂ ಇಷ್ಟವಾದ ಅಥವಾ ಆಸಕ್ತಿಯ ವಿಷಯವಾಗಿದ್ದರೂ ಲೈಕಿಸುವುದಿಲ್ಲ ಅಥವಾ ಕಮೆಂಟಿಸುವುದಿಲ್ಲ. ಅಸೂಯಾಗ್ನಿಯು ಅವರಿಗೆ ಏನನ್ನೂ ಮಾಡದಂತೆ ತಡೆಯುತ್ತದೆ. ಇನ್ನು ‘ನಾನೂ ಇದೇ ವಿಚಾರ ಮಾಡಿದ್ದೆ. ಆದರೆ ನೀವು ಮಾಡಿದ್ದೀರಿ. ಅಭಿನಂದನೆಗಳು’ ಎಂದು ತಿಳಿಸುವುದು ಬಹಳ ದುಬಾರಿಯ ವ್ಯಾಪಾರ ಅವರಿಗೆ.

ಓ, ಆತ್ಮರತಿಯ ಆಯಾಮಗಳು ಅಗಣಿತ. ಆದರೂ ಒಂದಷ್ಟು ಗುಣಿಸಿದ್ದೇನೆ ಮತ್ತು ಪರಿಗಣಿಸಿದ್ದೇನೆ ಮನೋವೈಜ್ಞಾನಿಕ ತಳಹದಿಯಿಂದ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending