ಅಂತರಂಗ
ಅರಿಮೆಯ ಅರಿವಿರಲಿ-9 : ಆತ್ಮರತಿ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/04/Narcissism_suddidina.jpg&description=ಅರಿಮೆಯ ಅರಿವಿರಲಿ-9 : ಆತ್ಮರತಿ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/04/Narcissism_suddidina.jpg&description=ಅರಿಮೆಯ ಅರಿವಿರಲಿ-9 : ಆತ್ಮರತಿ', 'pinterestShare', 'width=750,height=350'); return false;" title="Pin This Post">
- ಯೋಗೇಶ್ ಮಾಸ್ಟರ್
ಅವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ. ಅವಳ ಶಾಪವೋ ಅವಳಿಗೆ ತನ್ನ ಮಾತನ್ನು ತಾನು ಹೇಳಲಾಗದು. ಇತರರ ಮಾತನ್ನು ಪ್ರತಿಧ್ವನಿಸಬೇಕು. ಹಾಗಾಗಿ ಅವಳಿಗೆ ಗ್ರೀಕ್ ಬೇಟೆಗಾರನಿಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಲಾಗದು, ತನ್ನ ಪ್ರಶಂಸೆಯನ್ನೂ ತಿಳಿಸಲಾಗದು. ಅವನೋ ಇವಳ ಕಡೆ ಕಣ್ಣೆತ್ತಿಯೂ ನೋಡದೇ ಓಡಾಡುತ್ತಿರುತ್ತಾನೆ.
ಒಮ್ಮೆ ತಿಳಿಯಾದ ನೀರಿನಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾನೆ. ತನ್ನದೇ ಸೌಂದರ್ಯವನ್ನು ತಾನೇ ನೋಡಿಕೊಂಡು ಪರವಶನಾಗುತ್ತಾನೆ. ಆ ನೀಳ ಮೂಗು, ಹೊಳಪಿನ ಕಣ್ಣುಗಳು, ಗುಲಾಬಿ ದಳದಂತಹ ತುಟಿಗಳು, ನಕ್ಕರೆ ಅರಳಿದ ಹೂವಿನಂತಹ ಮುಖ; ಆಹಾ! ಅದನ್ನು ಮುದ್ದಿಸುವಷ್ಟು ಆಕರ್ಷಕ, ಮೋಹಕ. ಒಂದೇ ಕಣ್ಣೋಟಕೆ ಪ್ರೇಮಿಸಲಾಗುವಂತೆ, ಒಮ್ಮಿಂದೊಮ್ಮೆಲೇ ಮರುಳಾಗಿ ಅಪ್ಪಿ ಇನ್ನಿಲ್ಲವಾಗುವಂತಹ ಸೆಳೆತ. ಅವನು ತನ್ನ ಬಿಂಬಕ್ಕೆ ತಾನೇ ಮೋಹಿತನಾಗಿ ಮುದಪಡೆಯಲು, ಸರಸದಿಂದ ಮುಟ್ಟುತ್ತಾನೆ. ನೀರು ಕಲಕುತ್ತಿದ್ದಂತೆ ಬಿಂಬ ಚದರುತ್ತದೆ. ಇಲ್ಲವಾಗುತ್ತದೆ. ಅಯ್ಯೋ, ತನ್ನ ಮೋಹಕ, ಪ್ರೇಮಪೂರ್ಣ ತನ್ನನ್ನು ಪಡೆಯಲು ನೀರಿಗೆ ಧುಮುಕುತ್ತಾನೆ. ಆದರೆ ಸಿಗುವುದಿಲ್ಲ. ದಡದಲ್ಲೊಂದು ಅವನ ಪ್ರೇಮಕ್ಕೆ ಸಾಕ್ಷಿಯಾಗಿ ಹೂಗಿಡವೊಂದು ಮೂಡುತ್ತದೆ. ಆ ಹೂವಿಗೂ ಅವನದೇ ಹೆಸರು. ನಾರ್ಸಿಸಸ್.
ಆತ್ಮರತಿಯಲೆಗಳು
ನಾರ್ಸಿಸಸ್ ತನ್ನ ತಾನು ಮೋಹಿಸಿಕೊಳ್ಳುವ, ತನಗೆ ತಾನು ಪರವಶವಾಗುವ, ತನ್ನನ್ನು ತಾನೇ ಪ್ರೀತಿಸಿಕೊಳ್ಳುವ ಆತ್ಮರತಿಗೆ ಪ್ರತಿಮೆಯಾಗಿ ನಿಲ್ಲುತ್ತಾನೆ. ಈ ಅರಿಮೆಯೇ ಆತ್ಮರತಿ. ಅವರಿವರ ಅತಿಕ್ರಮಣ ಪ್ರವೇಶವಿರದಿದ್ದಾಗ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತುಕೊಂಡು ತನ್ನನ್ನೇ ತಾನೇ ನೋಡಿಕೊಂಡು, ಕಾಣುವ ಎಲ್ಲಾ ವಿವರಗಳನ್ನು ಗಮನಿಸುತ್ತಾ, ಪ್ರಶಂಸಿಸುತ್ತಾ, ನಸುನಗುತ್ತಾ, ಮೋಹಗೊಳ್ಳುತ್ತಾ ಪರವಶವಾಗುವ ಅನುಭವವಿರುವವರಿಗೆ ನಾರ್ಸಿಸಸ್ ನೀರಿನಲ್ಲಿ ತನ್ನ ಬಿಂಬವನ್ನು ಹೇಗೆ ನೋಡಿಕೊಂಡಿದ್ದಿರಬಹುದು ಎಂದು ಅರಿವಾಗುತ್ತದೆ.
ಫೇಸ್ಬುಕ್ ಅಥವಾ ಇನ್ಟಾಗ್ರಾಂನಲ್ಲೋ ಕಣ್ಣಾಡಿಸಿದರೆ ಆತ್ಮರತಿಯ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಮುಖಪುಟವಂತೂ ಆತ್ಮರತಿಯ ಮಹಾಸಾಗರ. ನಾರ್ಸಿಸಿಸಂ ಅಥವಾ ಆತ್ಮರತಿಯ ಅರಿಮೆಯ ಅಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ. ಅಷ್ಟು ಸಾಮಾನ್ಯ. ನಮಗೆ ಹೆಜ್ಜೆಹೆಜ್ಜೆಗೂ ಕಣ್ಣಿಗಪ್ಪಳಿಸುತ್ತಿರುತ್ತವೆ.
ಅದ್ಯಾವುದೋ ಊರ ಹಬ್ಬಕ್ಕೆ ಶುಭಾಶಯ ಕೋರುವ ರಾಜಕಾರಣಿಯ ಅಥವಾ ಮುಂದೆ ನಿಲ್ಲಬಹುದಾದ ಚುನಾವಣಾ ಅಭ್ಯರ್ಥಿಯ ಫ್ಲೆಕ್ಸ್ ನೋಡಿ. ಹೆಸರಿನ ಹಿಂದೆ ಒಂದಿಷ್ಟು ಬಿರುದು ಬಾವಲಿಗಳು, ಗ್ರಾಫಿಕ್ಸ್ನಲ್ಲಿ ಹುಲಿ ಸಿಂಹಗಳೂ ಅತ್ತಿತ್ತ ಇದ್ದರೆ ಆಶ್ಚರ್ಯವಿಲ್ಲ. ಈತನೆಂದು ಗುರುತಿಸಲು ಬರಿಯ ಮುಖ ಸಾಕಾದರೂ, ಅವರಿಗೆ ಆತ ತೊಟ್ಟಿರುವ ಬೂಟಿನವರೆಗೂ, ಜೊತೆಗೆ ನಡೆಯ ಭಂಗಿಯನ್ನೂ ತೋರುವ ತವಕ. ಅದನ್ನು ನೋಡಿ, ಆಹಾ, ಆ ಸುಂದರವಾದ ಹೊಳಪುಳ್ಳ ಉಂಗುರವನ್ನು ನೋಡು, ಆಹಾ, ಆ ಚೆಂದದ ಶರ್ಟಿನ ಬಣ್ಣವನ್ನು ನೋಡು.
ಇಂಥವೆಲ್ಲಾ ತೊಟ್ಟಿರುವ, ಹೀಗೆಲ್ಲಾ ಕಾಣುವ ಇವನೇ ನಮ್ಮ ನಾಯಕನಾಗಬೇಕು ಎಂದು ಅವನ ಸೌಂದರ್ಯೋಪಾಸನೆಯಿಂದ ರಸ್ತೆಯಲ್ಲಿ ಓಡಾಡುತ್ತಿರುವವರಾರಾದರೂ ಪರವಶವಾಗುತ್ತಾರೆಂದುಕೊಂಡಿದ್ದೀರಾ?
ಫೇಸ್ಬುಕ್ಕಿನಲ್ಲಿ ಕೆಲವರು ಎಡಕ್ಕೆ ತಿರುಗಿ ಒಂದು ಪಟ, ಬಲಕ್ಕೆ ತಿರುಗೊಂದು ಪಟ, ಹೀಂಗೊಂದು ಪಟ, ಹಾಗೊಂದು ಪಟ. ಮೇಲಿಂದೊಂದು, ಕೆಳಗಿಂದೊಂದು; ನಾನಾ ಭಾವಗಳಲ್ಲಿ, ಭಂಗಿಗಳಲ್ಲಿ ವಿಜೃಂಭಿಸುತ್ತಿರುತ್ತವೆ. ಕೆಲವು ಸಲ ಬರಿಯ ನೋಡುಗರಿಗೆ ಪಟ ಹಾಕಿದವರಿಗೆ ಕಂಡ ವ್ಯತ್ಯಾಸಗಳಾವುವೂ ಕಾಣುವುದೂ ಇಲ್ಲ. ಎಲ್ಲವೂ ಒಂದೇ ಎಂಬಂತೆ ಕಾಣುತ್ತಿರುತ್ತದೆ.
ಇನ್ನೂ ಮುಂದುವರಿದು ತಾವು ತೊಟ್ಟಿರುವ ಪ್ರತಿ ಬಟ್ಟೆಯ ಪಟಗಳನ್ನು ಫೇಸ್ಬುಕ್ಕಿನಲ್ಲಿ ಪೇರಿಸುವುದು ಸಾಲದೆಂದು ಅವರ ಸ್ನೇಹಿತರೆಲ್ಲಿ ನೋಡುವುದರಿಂದ ವಂಚಿತರಾಗಿಬಿಡುತ್ತಾರೋ ಎಂದು ಪ್ರಶಂಸಿಸಬಹುದಾದ ಸ್ನೇಹಿತರಿಗೆಲ್ಲಾ ತಗುಲಿ ಹಾಕಿರುತ್ತಾರೆ. ಲೈಕಿಸಲಿ, ಪ್ರೀತಿಸಲಿ, ವಾವ್ ಎಂದು ಕಣ್ಣು ಬಾಯಿ ಬಿಡಲೆಂಬ ಹೆಬ್ಬಯಕೆ. ಒಂದು ನಾರ್ಸಿಸಸ್ ಮತ್ತೊಂದು ನಾರ್ಸಿಸಸ್ಸನ್ನು ನೋಡುವುದಿಲ್ಲ.
ಆಗ ಈ ನಾರ್ಸಿಸಸ್ ಬಡಪೆಟ್ಟಿಗೆ ಬಗ್ಗದೆ ಆ ನಾರ್ಸಿಸಸ್ ಒಳಪೆಟ್ಟಿಗೆಗೆ ಸಂದೇಶ ಕಳುಹಿಸಿ ಮೆಚ್ಚಿಸಿಕೊಳ್ಳುವವರೆಗೂ ಬಿಡುವುದಿಲ್ಲ.
ಆಹಾ, ಈ ಮುಖ ಎಡಗಡೆಯಿಂದ ಎಷ್ಟು ಸುಂದರ, ಹಾ, ಹಾಗೆಯೇ ಬಲದಿಂದಲೂ ಸುಂದರ ಎಂದು ನಾನಾ ಬಗೆಗಳಿಂದಲೂ ನೋಡುತ್ತಾ ಆನಂದದಿಂದ ರಸಾನುಭೂತಿಯಲ್ಲಿ ಮಿಂದೆದ್ದು ನೋಡುಗಳು ಸುರಸವಾದ ಸಾರ್ಥಕ ಪಡೆಯುತ್ತಾರೆಂದುಕೊಂಡಿದ್ದೀರಾ?
ಬಹಳಷ್ಟು ಸೆಲ್ಫೀ ಅಥವಾ ಸ್ವಂತೀ ಪಟಗಳು ಆತ್ಮರತಿಯ ಬಿಂಬಗಳು.
ಸಾಮಾನ್ಯ ಸಮಸ್ಯೆ
ಆತ್ಮರತಿ ಎಂದರೆ ಆತ್ಮವಿಶ್ವಾಸ ಅಥವಾ ಸ್ವಕೇಂದ್ರಿತ ವ್ಯಕ್ತಿತ್ವವೇನಲ್ಲ. ಅದೊಂದು ಮಾನಸಿಕ ಸಮಸ್ಯೆ. ಕಾರಣ ಮತ್ತು ಪರಿಣಾಮಗಳಿರುವಂತಹ ಬಹಳ ಗುರುತರವಾದಂತಹ ಹಾಗೂ ಗಂಭೀರವಾದ ಸಮಸ್ಯೆಯೇ. ಈ ಆತ್ಮರತಿಯ ಅರಿಮೆಗೆ narcissistic personality disorder (NPD)
ಎಂದು ಕರೆಯುತ್ತಾರೆ. ಆಗಲೇ ಹೇಳಿದಂತೆ ಇದು ನಮ್ಮಲ್ಲಿ ಬಹು ವ್ಯಾಪಕವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಸಮಸ್ಯೆಗಳನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ಅವು ಕೊಂಚವಾದರೂ ನಿಯಂತ್ರಣಕ್ಕೆ ಬರುತ್ತವೆ. ನನ್ನಲ್ಲಿ ಆತ್ಮರತಿಯ ಅರಿಮೆ ಇದೆ ಎಂದು ಗುರುತಿಸಿಕೊಂಡರೆ ಪ್ರದರ್ಶನಗಳು ಕೊಂಚ ಕಡಿಮೆಯಾಗಬಹುದು. ಅಥವಾ ಪ್ರದರ್ಶನಗಳಿಗೊಂದು ನಿಯಂತ್ರಣ ಬರಬಹುದು.
ಒಟ್ಟಾರೆ ಆತ್ಮರತಿಯ ಅರಿಮೆಯನ್ನು ಇತರರಲ್ಲಿ ಗುರುತಿಸಲು ಮತ್ತು ತನ್ನಲ್ಲಿ ಗುರುತಿಸಿಕೊಳ್ಳಲು ಫೇಸ್ಬುಕ್ ಮತ್ತು ಫ್ಲೆಕ್ಸುಗಳು ಒಳ್ಳೆಯ ಸಾಧನವಾಗಿವೆ. ಆದರೆ ಈ ಆತ್ಮರತಿಯ ಸಮಸ್ಯೆ ಬರೀ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದರೆ ನಸುನಕ್ಕು ಸುಮ್ಮನಾಗಿಬಿಡಬಹುದಿತ್ತು. ಆದರೆ ಅದು ಗಂಭೀರವಾದ ಒಳಸುಳಿಗಳನ್ನು ಹೊಂದಿವೆ. ಮುಂದೆ ಹೇಳಲಾಗುವ ಎಲ್ಲಾ ಲಕ್ಷಣಗಳೂ ಇರಲೇ ಬೇಕೆಂದೇನಿಲ್ಲ. ಆದರೆ ಇವು ಸಾಮಾನ್ಯ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು. ಇಲ್ಲದೇ ಇರಬಹುದು. ಕೆಲವರಿಗೆ ಇವುಗಳ ಜೊತೆಗೆ ಇನ್ನೂ ಹಲವಿರಬಹುದು.
ತನಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಪಹಪಿಸುವ ಬಯಕೆ.
ತನ್ನ ಕಡೆಗೆ ಗಮನ ಸೆಳೆಯುವ ಮತ್ತು ಪ್ರಶಂಸೆ ಪಡೆಯುವ ಅದುಮಿಡಲಾಗದ ಆಳದೊಳಗಿಂದೇಳುತ್ತಲೇ ಇರುವ ಆಸೆ. ಬೇರೆಯವರ ಬಗ್ಗೆ ಸಹಾನುಭೂತಿ(empathy)ಇಲ್ಲದಿರುವುದು. ಸಂಬಂಧಗಳಲ್ಲಿ ಸಮಸ್ಯೆಗಳು, ಸ್ವಾರ್ಥ, ಇತರರ ಭಾವನೆಗಳನ್ನು ಪರಿಗಣಿಸದಿರುವುದು.
ಒಟ್ಟಾರೆ ಈ ಆತ್ಮರತಿ ಅರಿಮೆಯು ಕಪ್ಪು ಬಿಳಿಪಿನಷ್ಟು ಸ್ಪಷ್ಟವಾಗಿ ವಿಭಜಿಸಿ ಸ್ಪಷ್ಟೀಕರಿಸಲಾಗದ್ದು. ಬೆಳಕಿನ ವಕ್ರೀಭವನದಿಂದ ಅನೇಕ ಬಣ್ಣಗಳು ಮೂಡುವಂತೆ ವಿವಿಧ ರಂಗುಗಳನ್ನು ಪಡೆದುಕೊಳ್ಳುವಂತಹ ಅರಿಮೆ.
ಇನ್ನೂ ಕೆಲವರಲ್ಲಿ ನೀವು ಗಮನಿಸಬಹುದು.
ತಮ್ಮ ಬಗ್ಗೆ ಅತ್ಯಂತ ಮಹೋನ್ನತದ ಎತ್ತರದ ಭವಿಷ್ಯತ್ತಿನ ಭ್ರಮೆಯಲ್ಲಿ ಬಡಬಡಿಸುತ್ತಿರುವರು. ಅವರ ವಿಶ್ವಾಸಕ್ಕೆ, ಯಶಸ್ಸಿಗೆ, ಅಧಿಕಾರಕ್ಕೆ, ಬುದ್ಧಿಮತ್ತೆಗೆ, ಸೌಂದರ್ಯಕ್ಕೆ, ಪ್ರೇಮಕ್ಕೆ ಸಾಟಿಯೇ ಇಲ್ಲವೆಂಬಂತೆ ಹೇಳಿಕೊಳ್ಳುತ್ತಿರುವರು.
ಬರಹಗಾರನೊಬ್ಬ ತಾನು ರಚಿಸಿದ ಕವನ, ಕತೆ ಅಥವಾ ಲೇಖನವನ್ನು ಸಹಜವಾಗಿ ಪ್ರಕಟಿಸುತ್ತಾನೆ. ಬರಿದೇ ಪ್ರಸ್ತುತ ಪಡಿಸುವುದು ಅಥವಾ ಹಂಚಿಕೊಳ್ಳುವುದೇಕೆಂದರೆ ಅದು ಓರ್ವ ವ್ಯಕ್ತಿಯ ಅಥವಾ ಸಮಾಜದ ಅಭಿಪ್ರಾಯವನ್ನು ಅಥವಾ ಒಲವು ನಿಲುವುಗಳನ್ನು ಅಭಿವ್ಯಕ್ತಿಗೊಳಿಸುತ್ತಿರುತ್ತವೆ. ಹಾಗಾಗಿ ಅದನ್ನು ಅವನು ಹಂಚಿಕೊಳ್ಳುವುದು ಸಹಜ. ಈ ಹಂಚಿಕೊಳ್ಳುವಿಕೆಯಲ್ಲಿ ಪ್ರಶಂಸೆಯ ಹಸಿವಿರಲಾರದು. ಆದರೆ, ತಾವೊಂದು ಸುಂದರವಾದ ಮತ್ತು ಅಪರೂಪವಾದ ಅಥವಾ ವಿಶಿಷ್ಟವಾದ ಕತೆಯೊಂದನ್ನು ಅಥವಾ ಕವನವೊಂದನ್ನು ಬರೆದಿದ್ದೇನೆ ಎಂದು ನಿಮ್ಮ ವಾಟ್ಸಪ್ಪಿಗೋ ಅಥವಾ ಇನ್ಬಾಕ್ಸಿಗೋ ಯಾರಾದರೂ ಕಳುಹಿಸಿದ್ದಾರೆಂದರೆ, ಅವರು ಬರಿದೇ ಹಂಚಿಕೊಳ್ಳಲು ಕಳುಹಿಸಿಲ್ಲ. ನಿಮಗೂ ವಿಷಯ ತಿಳಿದಿರಲಿ ಎಂಬ ಸಾಧಾರಣ ಧೋರಣೆಯಲ್ಲ.
ಪ್ರಶಂಸೆಗಳನ್ನು ಉಣಬಡಿಸಿ ನನ್ನ ಆತ್ಮರತಿಯ ಹಸಿವನ್ನು ತಣಿಸಿ ಎಂದು. ಪ್ರಶಂಸೆಗಳಿಗಾಗಿ ಪರಿತಪಿಸುವುದು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಹೆಣಗಾಡಿ ಎಂತಾದರೂ ಪಡೆಯುವುದು, ಕಮಿಷನ್ ಕೊಟ್ಟಾದರೂ ಡಾಕ್ಟರೇಟ್ ಪಡೆದು ಡಾ. ಹಾಕಿಕೊಂಡು ಆನಂದಿಸುವುದು; “ಅದು ಸಾಮಾನ್ಯ” ಕೆಟಗರಿಗೆ ತಳ್ಳಬೇಡಿ. ಆತ್ಮರತಿಯ ಹಸಿವೆಯಿಂದ ಬಳಲುತ್ತಿರುವ ಅರಿಮೆ ಎಂಬ ಅರಿವಿರಲಿ. ಅರಿಮೆಗಳಿರುವುದು ಸಾಮಾನ್ಯವಲ್ಲ. ಸಾಮಾನ್ಯವಾಗಿರುವ ಸಮಸ್ಯೆಗಳು.
ನನಗೆ ಅವರು ಗೊತ್ತು
ಒಂದೆರಡು ವರ್ಷಗಳ ಹಿಂದೆ, ನಮ್ಮ ಮನೆಯ ಹತ್ತಿರವೇ ಮರವೊಂದರ ಕೆಳಗೆ ಧೂಮಪಾನ ಮತ್ತು ಮದ್ಯಪಾನದಲ್ಲಿ ನಿರತರಾಗಿದ್ದ ಯುವಕರ ತಂಡವೊಂದು ಮನೆಯೊಳಗಿದ್ದವರಿಗೆ ಕಿರಿಕಿರಿ ಮಾಡುವಷ್ಟು ಉತ್ಸಾಹದಲ್ಲಿ ಊಳಿಡುತ್ತಿದ್ದರು. ನಿದ್ರೆ ಮಾಡುತ್ತಿದ್ದ ನನಗೆ ಭಂಗವಾಗಬಾರದೆಂದು ನನ್ನ ಹೆಂಡತಿ ಅವರ ಬಳಿಗೆ ಹೋಗಿ, “ನೀವು ಹೀಗೆಲ್ಲಾ ಇಲ್ಲಿ ಗಲಾಟೆ ಮಾಡಬಾರದು. ಎದ್ದು ಬಾರ್ ಅಥವಾ ಪಬ್ ಗೆ ಹೋಗಿ” ಎಂದು ಹೇಳಿದಳು. ಅವರಲ್ಲೊಬ್ಬ ಹೇಳಿದನಂತೆ, “ರೀ ಮೇಡಂ, ನಾವ್ಯಾರು ಗೊತ್ತಾ? ರಾಮ ಲಕ್ಷ್ಮಣರ ಹುಡುಗರು” ಎಂದು. “ಯಾವ ರಾಮ ಲಕ್ಷ್ಮಣ? ರಾಮ ಲಕ್ಷ್ಮಣರ ಹುಡುಗರಾದರೆ ಭಜನೆ ಮಾಡ್ಕೊಂಡು ಕೂತ್ಕೊಳ್ಳಿ. ಇಲ್ಯಾಕೆ ಬಂದು ಹೀಗೆ ಗಲಾಟೆ ಮಾಡ್ತೀರಿ” ಎಂದವಳೇ ಮನೆಗೆ ಬಂದು ಪೋಲಿಸರಿಗೆ ಫೋನ್ ಮಾಡಿ, ಅವರು ಬಂದು ರಾಮ ಲಕ್ಷ್ಮಣರ ಹುಡುಗರಿಗೆ ಬೈದು ಬೆತ್ತದ ರುಚಿಯನ್ನೋ ತೋರಿಸಿ ಕಳುಹಿಸಿದ್ದರು.
ರಾಮ ಲಕ್ಷ್ಮಣರಿಬ್ಬರೂ ರೌಡಿಗಳು ಎಂದು ಪೋಲಿಸರು ರಾಮಾಯಣದ ರಾಮ ಲಕ್ಷ್ಮಣರಷ್ಟೇ ತಿಳಿದಿದ್ದ ನನ್ನ ಹೆಂಡತಿಗೆ ತಿಳಿಸಿದರು. ಅವಳಿಗೆ ಅರ್ಥವಾಗದೇ ಹೋಗಿದ್ದು, ಅವರಿಬ್ಬರ ಹೆಸರು ಹೇಳಿದರೆ ತಾನೇಕೆ ಸುಮ್ಮನಾಗಬೇಕೆಂದು ಅವರು ಬಯಸಿದರು ಎಂದು.
ಆತ್ಮರತಿಯ ಸ್ವಕುಚ ಮರ್ಧನದವರದು ಇದಿನ್ನೊಂದು ಲಕ್ಷಣ. ನನಗೆ ಆ ಮಿನಿಸ್ಟರ್ ಗೊತ್ತು, ಈ ಹೀರೋ ಮೊದಲು ನಮ್ಮನೇಲೇ ಬಾಡಿಗೆಗೆ ಇದ್ದ, ಆ ಹೀರೋಯಿನ್ ನನ್ನ ಫ್ರೆಂಡ್ಗೆ ಫ್ರೆಂಡು, ಆ ಸಾಧಕ ನಮ್ಮ ಸಂಬಂಧಿಗಳೇ ಆಗಬೇಕು; ಎಂದೆಲ್ಲಾ ಪ್ರಖ್ಯಾತ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಜೊತೆಗೆ ತಮ್ಮ ಗುರುತುಗಳನ್ನು ಅಗತ್ಯವಿಲ್ಲದಿದ್ದರೂ ಪ್ರದರ್ಶಿಸುತ್ತಿರುವುದು.
ಆತ್ಮಪೋಷಣೆ
ಗೌರಿಹಬ್ಬದ ದಿನದಂದು ಸಂಗೀತ ನಿರ್ದೆಶಕ ಹಂಸಲೇಖ ಮತ್ತವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ನಾನೆಲ್ಲೋ ಒಳಗಿದ್ದೆ. ನಮ್ಮ ತಾಯಿಯ ಜೊತೆ ಫೋನಿನಲ್ಲಷ್ಟೇ ಮಾತಾಡಿದ್ದ ಹಂಸಲೇಖರವರಿಗೆ ಅಮ್ಮನ ಮುಖ ಪರಿಚಯವಿಲ್ಲ. ವರಾಂಡದಲ್ಲಿ ನಿಂತಿದ್ದ ಅತ್ತೆಯವರ ಬಳಿಗೆ ಬಂದು “ಅಮ್ಮಾ ನಮಸ್ಕಾರ” ಎಂದರು. ಅವರನ್ನು ನಮ್ಮ ತಾಯಿ ಎಂದು ತಿಳಿದಿದ್ದರು. ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದ ಅವರು “ಆ” ಎಂದರು, ಅಂದರೆ ‘ಸರಿ’ ಅಂತ ಅರ್ಥ. “ನಾನು ಹಂಸಲೇಖ” ಎಂದರು. ಆ ಧ್ವನಿಯಲ್ಲಿ ನಿಮಗೆ ಗೊತ್ತೇ ಇರಬೇಕಾದ ಪರಿಚಯ ಎಂಬ ಧೋರಣೆ. ಆದರೆ ಅವರು ಅಂದಿದ್ದು, “ಅದಕ್ಕೆ?” ಅಂತ. ಹಂಸಲೇಖರಿಗೆ ಒಂದು ಕ್ಷಣ ಕಕ್ಕಾಬಿಕ್ಕಿ. “ನಾನು ಹಂಸಲೇಖ” ಎಂಬ ಭಾವಕ್ಕೆ ತಟ್ಟಂತ ತಡೆ.
ಒಳಗಿಂದ ಬಂದ ನನ್ನ ತಾಯಿ, “ಓ ಹಂಸಲೇಖ ಬನ್ನಿ ಬನ್ನಿ” ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಅವರ ಮುಜುಗರವನ್ನು ತಿಳಿಗೊಳಿಸಿಕೊಳ್ಳಲು ಸಾಧ್ಯವಾಯಿತು. ನಮ್ಮತ್ತೆಗೆ ಹಂಸಲೇಖ ಎಂದರೆ ಯಾರೆಂದೇ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗೊತ್ತಿರುವ ಏಕೈಕ ವ್ಯಕ್ತಿ ಎಂದರೆ ಅವರು ರಾಜ್ ಕುಮಾರ್ ಮಾತ್ರ.
“ನಾನು ಹಂಸಲೇಖ ಎಂಬ ಗರ್ವವನ್ನು ಆ ತಾಯಿ ಮುರಿದರು” ಎಂದು ಹಂಸಲೇಖ ಆಗಾಗ್ಗೆ ನೆನಪು ಬಂದಾಗ ನನ್ನ ಅತ್ತೆಯನ್ನು ನೆನೆಸಿಕೊಳ್ಳುತ್ತಿದ್ದರು. ಆತ್ಮರತಿಯ ಅಭಿವ್ಯಕ್ತಿಯನ್ನು ಪೋಷಿಸಿದಾಗ ಅದು ಉಬ್ಬುವುದು. ಪೋಷಣೆ ಸಿಗದಿದ್ದಾಗ ಅದು ಕುಗ್ಗುವುದು. ಕೆಲವು ಸಲ ಖಿನ್ನತೆಗೇ ಜಾರುವುದು.
ಜನಪ್ರಿಯ ಕಲಾವಿದರೂ ಅದೆಷ್ಟು ಎತ್ತರಕ್ಕೆ ಬೆಳೆದಿದ್ದರೂ, “ನನ್ನ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಯನ್ನು ಕೊಟ್ಟಿಲ್ಲ” ಎಂದು ಸಂದರ್ಶನಗಳಲ್ಲಿ ಅವಲತ್ತುಕೊಳ್ಳುತ್ತಿದ್ದಾಗ ನಾರ್ಸಿಸಸ್ನ ಪ್ರಲಾಪದಂತೆ ಕಂಡರೆ ತಪ್ಪೇನೂ ಅಲ್ಲ. ನಾರ್ಸಿಸಸ್ ಅಲ್ಲದಿದ್ದರೂ ನಾರ್ಸಿಸಸ್ ಸಂಬಂಧಿಕರೇ ಆಗಿರುತ್ತಾರೆ.
ಬಹುಪರಾಕ್
ಕೆಲವೊಂದು ಫ್ಲೆಕ್ಸ್ಗಳಲ್ಲಿ ಯಾವುದ್ಯಾವುದೋ ಕನ್ನಡ ಹೋರಾಟಗಾರರೆಂದು ಗುರುತಿಸಿಕೊಂಡವರ ಚಿತ್ರಗಳ ಕೆಳಗೆ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ ಎಂದೇನಾದರೂ ಹಾಕಿದ್ದರೆ ತಕ್ಷಣವೇ ನಾನು ನನ್ನ ಪಕ್ಕದವರಿಗೆ ಹೇಳುತ್ತೇನೆ. ಅದು ನನ್ನ ಹೃದಯದ ಹೊರತು ಎಂದು. ತಮ್ಮ ಹೆಸರಿನ ಹಿಂದೆ ಬಿರುದುಬಾವಲಿಗಳನ್ನು ಹಚ್ಚಿಕೊಳ್ಳುವುದು, ಸ್ವಾಮೀಜಿಗಳು ತಮ್ಮ ಆಟೋಗ್ರಾಫ್ ಹಾಕುವಾಗಲೂ ಜಗದ್ಗುರು ಶ್ರೀ ಶ್ರೀ ಶ್ರೀ ಎಂದು ಬರೆದುಕೊಂಡು ತಮ್ಮ ಹೆಸರನ್ನು ಬರೆಯುವುದು ಆತ್ಮರತಿಯ ಮತ್ತೊಂದು ಮಗ್ಗುಲೇ.
ಕೆಲವೊಂದು ಸ್ವಾಮಿಗಳ ಆತ್ಮರತಿಯ ಲಕ್ಷಣಗಳು ಅಳತೆ ಮೀರಿದ್ದಾಗಿರುತ್ತದೆ. ನಮಸ್ಕಾರಕ್ಕೆ ಪ್ರತಿನಮಸ್ಕಾರ ಹೇಳದಿರುವಷ್ಟು. ಅವರನ್ನು ನೋಡಲು ಯಾರಾದರೂ ಬಂದರೆಂದರೆ ಮುಗಿಸಿಕೊಳ್ಳಲು ಪಾದಗಳನ್ನು ಮುಂದೆ ಸರಿಸುವಷ್ಟು. ತಮ್ಮ ಕಿರೀಟಧಾರಿ ಫೋಟೋ, ತಮ್ಮ ತಲೆಯ ಹಿಂದೆ ಫೋಟೋಶಾಪಿನಲ್ಲಿ ಪ್ರಭಾವಳಿಯನ್ನು ಬಿಡಿಸಿಕೊಂಡು ನಗುನಗುತ್ತಾ ಅಭಯ ಹಸ್ತವನ್ನು ತೋರುವ ದೈವೀಪಟವನ್ನು ಮಾಡಿಸಿಕೊಳ್ಳುವಷ್ಟು.ಆತ್ಮರತಿಯರಿಮೆಯವರೋ ಬಹುಬಹು ಪರಾಕು ಪ್ರಿಯರು.
ಈ ಆತ್ಮರತಿಯರಿಮೆಯ ಮತ್ತೊಂದು ಲಕ್ಷಣವೆಂದರೆ ಇತರರದನ್ನು ಪ್ರಶಂಸಿಸಲು ಅಷ್ಟು ಮನಸೊಪ್ಪದಿರುವುದು. ತಾವು ಯಾವುದೋ ಒಂದು ಆ ಕೆಲಸವನ್ನು ಎಂದಿಗೂ ಮಾಡದಿದ್ದರೂ “ಅದೇನು ಮಹಾ. ನಾನೂ ಮಾಡುತ್ತೇನೆ” ಎನ್ನುವುದು. ಸಾಲದಕ್ಕೆ ಅಸೂಯಾಪರವಾಗಿವುದು. ಆತ್ಮರತಿಯೆಂಬ ಅರಿಮೆಗೆ ಅನೇಕಾನೇಕ ಗೀಳುಗಳು ಮತ್ತು ವ್ಯಸನಗಳು ಆಪ್ತ ಸ್ನೇಹಿತರು.
ಫೇಸ್ಬುಕ್ಕಿನಲ್ಲಿ ತಮಗೇ ಆಸಕ್ತಿ ಇರುವ ವಿಷಯವನ್ನೋ ಅಥವಾ ಸಂಗತಿಯನ್ನೋ ಇನ್ನಾರಾದರೂ ತಮಗಿಂತ ಮುಂಚೆಯೇ ಪ್ರಕಟಿಸಿಬಿಟ್ಟರೆ, ಅಥವಾ ತಾವು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬಂತಹ ಬರಹವನ್ನೋ ಅಥವಾ ವಿಷಯವನ್ನೋ ಗೋಡೆಗೆ ಅಂಟಿ ಹಾಕಿಕೊಂಡಿದ್ದರೆ, ಅದನ್ನು ನೋಡಿದರೂ ಹಾಗೆಯೇ ಮುಂದೆ ಹೋಗುತ್ತಾರೆ. ಅದು ತಮಗೂ ಇಷ್ಟವಾದ ಅಥವಾ ಆಸಕ್ತಿಯ ವಿಷಯವಾಗಿದ್ದರೂ ಲೈಕಿಸುವುದಿಲ್ಲ ಅಥವಾ ಕಮೆಂಟಿಸುವುದಿಲ್ಲ. ಅಸೂಯಾಗ್ನಿಯು ಅವರಿಗೆ ಏನನ್ನೂ ಮಾಡದಂತೆ ತಡೆಯುತ್ತದೆ. ಇನ್ನು ‘ನಾನೂ ಇದೇ ವಿಚಾರ ಮಾಡಿದ್ದೆ. ಆದರೆ ನೀವು ಮಾಡಿದ್ದೀರಿ. ಅಭಿನಂದನೆಗಳು’ ಎಂದು ತಿಳಿಸುವುದು ಬಹಳ ದುಬಾರಿಯ ವ್ಯಾಪಾರ ಅವರಿಗೆ.
ಓ, ಆತ್ಮರತಿಯ ಆಯಾಮಗಳು ಅಗಣಿತ. ಆದರೂ ಒಂದಷ್ಟು ಗುಣಿಸಿದ್ದೇನೆ ಮತ್ತು ಪರಿಗಣಿಸಿದ್ದೇನೆ ಮನೋವೈಜ್ಞಾನಿಕ ತಳಹದಿಯಿಂದ. ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ6 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ5 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ5 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ4 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ1 day agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ2 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ2 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ2 days agoಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ



