Connect with us

ಅಂತರಂಗ

ಅರಿಮೆಯ ಅರಿವಿರಲಿ-56 : ಸಸಿಗವಚ ಮತ್ತು ಶಿಶುಗವಚ

Published

on

Art by David Roberts
  • ಯೋಗೇಶ್ ಮಾಸ್ಟರ್

ದೇಶಸೇವೆ ಎನ್ನುವುದಾದರೆ, ರಾಷ್ಟ್ರನಿರ್ಮಾಣ ಎನ್ನುವುದಾದರೆ, ನಾಗರಿಕ ಸಮಾಜ ಸಂರಚನೆ ಎನ್ನುವುದಾದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು. ಈ ದಿಕ್ಕಿನಲ್ಲಿ ಶಿಕ್ಷಕರಿಗೆ ಒಂದು ಅಪೂರ್ವವಾದ ಅವಕಾಶವಿದೆ. ನಾಗರಿಕ ಸಮಾಜದ, ಸದೃಢ ರಾಷ್ಟ್ರದ ನಿರ್ಮಾಣದ ಪ್ರಕ್ರಿಯೆಯು ಶಿಕ್ಷಕರಿಂದ ಪ್ರತಿದಿನವೂ ಸದಾ ಆಗುತ್ತಿರುತ್ತದೆ.

ಮಗುವೊಂದರ ಮಗುತನವನ್ನು ಜತನ ಮಾಡುವುದು ಎಂದರೆ ಸಸಿಯೊಂದು ನಾನಾ ದಾಳಿಗೆ ಸಿಕ್ಕು ನಾಶವಾಗದಂತೆ ನೋಡಿಕೊಳ್ಳಲು ಸಸಿಗವಚವನ್ನು ನಿರ್ಮಿಸಿದಂತೆ. ಬೃಹತ್ ವೃಕ್ಷವಾಗಿ ಬೆಳೆದುನಿಲ್ಲುವ ಸಾಧ್ಯತೆ ಇರುವ ಸಸಿಯನ್ನು ಯಾವುದೋ ಪಶುವು ಮೇಯದಂತೆ ನೋಡಿಕೊಳ್ಳಬೇಕು, ಗಾಳಿಗೆ, ಮಳೆಗೆ ಸಿಕ್ಕಿ ಬೀಳದಂತೆ ನೋಡಿಕೊಳ್ಳಬೇಕು, ದಾರಿಹೋಕರು, ತುಂಟ ಮಕ್ಕಳು ಎಲೆಗಳನ್ನು ತರಿಯದಂತೆ, ಚಿಗುರುಗಳನ್ನು ಚಿವುಟದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ಒಂದು ಒಳ್ಳೆಯ ಟ್ರೀ ಗಾರ್ಡ್ ಮಾಡಬೇಕು. ಈ ಟ್ರೀಗಾರ್ಡನ್ನು ಸಸಿಗವಚವೆನ್ನುತ್ತೇನೆ.

ಮರದ ಸಸಿ ರೂಪದ ಎಳೆವೆಯ ದಿನಗಳಲ್ಲಿ ಈ ಸಸಿಗವಚ ಬೇಕು. ಒಮ್ಮೆ ಬೇರುಬಿಟ್ಟ ಮೇಲೆ, ಗಟ್ಟಿಯಾಗಿ ನಿಂತ ಮೇಲೆ, ಬೃಹತ್ ವೃಕ್ಷವಾದ ಮೇಲೆ ಅದಕ್ಕೆ ಈ ಸಸಿಗವಚದ ಅಗತ್ಯವಿರುವುದಿಲ್ಲ. ಅಂತೆಯೇ ಮಗುವಿನ ಮಗುತನದ ಜೋಪಾನ ಮಾಡುವ ಹೊಣೆಗಾರಿಕೆ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಮಾಜದ ಯಾವುದೇ ಸದಸ್ಯರಿಗೆ ಇರುವುದು.

ಸಾಧಾರಣ ಮನಸ್ಥಿತಿಯ ಮಕ್ಕಳ ಜೊತೆಜೊತೆಗೆ ಶರೀರದಲ್ಲಿ ನ್ಯೂನ್ಯತೆ ಇರುವಂತಹ ಮಕ್ಕಳು, ಬುದ್ಧಿಮತ್ತೆಯಲ್ಲಿ ಕೊರತೆಯುಳ್ಳವರು, ಮೊಂಡರು, ಹಟಮಾರಿಗಳು, ಪುಕ್ಕಲರು, ಸುಳ್ಳರು, ಮಳ್ಳರು, ದೌರ್ಜನ್ಯಕ್ಕೊಳಗಾಗಿರುವವರು, ಕ್ರೂರಿಗಳು, ದುಷ್ಕರ್ಮಿಗಳು; ಹೀಗೆ ನಾನಾ ಬಗೆಯ ಮಕ್ಕಳೂ ಇರುತ್ತಾರೆ. ಇಂತಹ ಹಲವಾರು ಮನಸ್ಥಿತಿಯ ಅಥವಾ ಮಾನಸಿಕ ಸಮಸ್ಯೆ ಇರುವವರನ್ನು ಅತ್ಯುತ್ತಮ ಪ್ರಜೆಗಳನ್ನಾಗಿ ಅಥವಾ ಪ್ರಖ್ಯಾತ ವಿಜ್ಞಾನಿಯನ್ನಾಗಿ ಅಥವಾ ಜನಪ್ರಿಯ ಮಹಾತ್ಮನನ್ನಾಗಿ ಅಥವಾ ಮಹಾನ್ ಸಂತರನ್ನಾಗಿ ರೂಪಿಸುವ ಕೆಲಸವಲ್ಲ ನಾವು ಶಿಕ್ಷಕರಿಂದ ಅಪೇಕ್ಷಿಸುವುದು.

ನಮ್ಮ ಸಮಾಜವು ಮಹಾತ್ಮರ, ಪ್ರಖ್ಯಾತರ ರೇಸ್ ಟ್ರ್ಯಾಕ್ ಆಗುವುದೇನೂ ಬೇಕಾಗಿಲ್ಲ. ಸಮಾಜದಲ್ಲಿರುವವರೆಲ್ಲಾ ಇಂದು ಮತ್ತು ನಾಳೆ ನೆಮ್ಮದಿಯಿಂದ ಬಾಳಲು ಪೂರಕವಾದ ವಾತಾವರಣವು ನಿರ್ಮಾಣವಾಗಬೇಕು. ಅದಕ್ಕೆ ಎಲ್ಲರಲ್ಲಿ ಇರಬೇಕಾಗಿರುವುದು ಸಹಕಾರದ ಧೋರಣೆ. ಅಷ್ಟರಮಟ್ಟಿಗೆ ಮಾತ್ರ ಕುಟುಂಬದಲ್ಲಿ ಪೆÇೀಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಯೋಚಿಸಬೇಕಾಗಿರುವುದು ಮತ್ತು ಯೋಜಿಸಬೇಕಾಗಿರುವುದು. ಇನ್ನುಳಿದ ಕಿರೀಟಕ್ಕೆ ಗರಿಗಳನ್ನು ಏರಿಸಿಕೊಳ್ಳುವುದು ಬಿಡುವುದು ಅವರ ಬಾಳ್ದಾರಿಯಲ್ಲಿನ ಸಂಭವಗಳಿಗೆ ಬಿಟ್ಟಿದ್ದು.

ಶಿಶುಪೋಷಣೆ ಎಂಬ ತಪಸ್ಸು

ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ತಮ್ಮ ತರಗತಿಗಳಲ್ಲಿ ಕೆಲಸ ಮಾಡುವುದೆಂದರದು ತಪಸ್ಸು. ಸದಾ ಧ್ಯಾನನಿರತರಾಗಿರುವಂತೆ. ಜೊತೆಜೊತೆಗೆ ಹಲವು ಮಾದರಿಗಳ ಜೀವಗಳನ್ನು ಸಾಕ್ಷೀಕರಿಸುವಂತಹ ಸಾಕ್ಷಿಪ್ರಜ್ಞೆಯಾಗಿರಬೇಕು. ಮಕ್ಕಳಿದ್ದರೆ ವಾತಾವರಣವು ಸಹಜ ಜೀವಂತಿಕೆಯಿಂದಲೂ, ಲವಲವಿಕೆಯಿಂದಲೂ ತುಂಬಿರುತ್ತದೆ. ಅರಳುತ್ತಿರುವ ಮೊಗ್ಗುಗಳಂತಿರುವ ಆ ಮಕ್ಕಳ ಸುಗಂಧವನ್ನು ಆಘ್ರಾಣಿಸಿಕೊಂಡು, ಅವರ ಮಧುರ ಸಾಮಿಪ್ಯವನ್ನು ಆಸ್ವಾದಿಸಿಕೊಂಡು ಇರಲಾರದಂತಹ ಪರಿಸ್ಥಿತಿಯು ಶಿಕ್ಷಕರಿಗೆ ಸಾಮಾನ್ಯ.

ಮಕ್ಕಳನ್ನು ಗದರಿಸಬೇಕು, ಅವರ ಜಗಳ ಬಿಡಿಸಬೇಕು, ಕಲಿಸುವುದನ್ನು ಕಲಿಯದಿದ್ದರೆ ಬೇರೆಬೇರೆ ಮಾರ್ಗಗಳನ್ನು ಹುಡುಗಬೇಕು, ಅವರನ್ನು ಕ್ರಮದಲ್ಲಿಡಬೇಕು, ಎಚ್ಚರಿಸಬೇಕು, ಬುದ್ಧಿವಾದ ಹೇಳಬೇಕು, ನಿರ್ದೇಶನಗಳನ್ನು ನೀಡಬೇಕು; ಹೀಗೆ ಒಂದೆರಡರಲ್ಲದ ಹಲವು ಕ್ರಿಯೆಗಳನ್ನು ತಮ್ಮ ಅಧಿಕಾರವನ್ನು ಬಳಸಿಕೊಂಡು ಮಾಡುತ್ತಿರಲೇಬೇಕು. ಅವರೆಲ್ಲಾ ತುಂಟತನಗಳನ್ನು, ಚೇಷ್ಟೆಗಳನ್ನು ಶಿಶುಸಹಜವೆಂದು ಬಿಟ್ಟು ನೋಡಿಕೊಂಡಿರಲಾಗುವುದಿಲ್ಲ.

ಶಿಕ್ಷಕರಿಗೆ ಅವರ ಮೇಲಿನ ಅಧಿಕಾರಗಳಿಂದ ಒತ್ತಡವಿರುತ್ತವೆ. ಶಿಕ್ಷಕರು ಮಾಡಲೇಬೇಕಾದ ಕೆಲಸಗಳ ನಿರೀಕ್ಷೆಗಳಿರುತ್ತವೆ. ಏನೇ ಆಗಲಿ ವಿವಿಧ ರೀತಿಯಲ್ಲಿ ವರ್ತಿಸುವ ಮಕ್ಕಳನ್ನು ಕ್ರಮಕ್ಕೆ ತರಲು ಅಥವಾ ಸರಿದಾರಿಗೆ ತರಲು, ಕನಿಷ್ಟಪಕ್ಷ ಅವರ ಮಿತಿಮೀರಿದ ವರ್ತನೆಗಳನ್ನು ತಹಬಂದಿಗೆ ತರಲು ಅವರ ಸಮಸ್ಯೆಯ ಮೂಲದ ಬಗ್ಗೆ ತಿಳುವಳಿಕೆ ಶಿಕ್ಷಕರಿಗೆ ಇರಬೇಕು.

ಒಂದು ಮಗುವು ಕಲಿಕೆಯಲ್ಲಿ ಹಿಂದುಳಿದಿರಲು, ಬಳಲಿದಂತೆ ಕಾಣುತ್ತಿರಲು, ಕಣ್ಣುಗಳಲ್ಲಿ ಗುಳಿ ಬಿದ್ದಿರಲು, ಹಲಗೆಯ ಮೇಲೆ ಬರೆದಿರುವುದನ್ನು ದೂರದಿಂದ ಕಾಣದಿರಲು, ಕರೆದರೆ ಸರಿಯಾಗಿ ಸ್ಪಂದಿಸದಿರಲು, ಬೆರಳುಗಳಿಗೆ ಸೀಸದ ಕಡ್ಡಿಯನ್ನು ಸರಿಯಾಗಿ ಹಿಡಿಯಲು ಸಾಧ್ಯವಿಲ್ಲದಿರಲು, ತಲೆಗೂದಲಲ್ಲಿ ಹೇನು ಬಿದ್ದಿರಲು, ಒರಟಾಗಿ ನಡೆದುಕೊಳ್ಳಲು, ಪುಕ್ಕಲನಾಗಿರಲು, ಮುಖೇಡಿಯಾಗಿರಲು, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರಲು, ಬಿಸಿಲಲ್ಲಿ ತಲೆ ಸುತ್ತಿ ಬೀಳಲು; ಹೀಗೆ ನಾನಾ ತರಹದ ಸಮಸ್ಯೆಗಳಿಗೆಲ್ಲಾ ಮನೆಯವರ ಅರಿವಿಗೆ ಬರದಂತಹ ಹಲವು ಕಾರಣಗಳಿರುತ್ತವೆ.

ಆ ಕಾರಣಗಳು ಪೌಷ್ಟಿಕಾಂಶದ ಕೊರತೆ ಇರಬಹುದು, ಮಾನಸಿಕ ಸಮಸ್ಯೆ ಇರಬಹುದು, ನರದೌರ್ಬಲ್ಯವಿರಬಹುದು, ಕೌಟುಂಬಿಕ ಸಮಸ್ಯೆ ಇರಬಹುದು, ಮಗುವಿನ ಮನೆಯ ಆರ್ಥಿಕ ಸಮಸ್ಯೆ ಇರಬಹುದು, ಕುಟುಂಬಗಳಲ್ಲಿ ಸಂಘರ್ಷ ಅಥವಾ ಒಡಕು ಇರಬಹುದು, ತಂದೆ ಇಲ್ಲದ ಮಗುವೋ ಅಥವಾ ತಾಯಿ ಇಲ್ಲದ ಮಗುವೋ ಇರಬಹುದು, ಮನೋರೋಗವಿರಬಹುದು, ಖಾಯಿಲೆ ಇರಬಹುದು, ಅನುವಂಶೀಯವಾಗಿರುವ ಮಾನಸಿಕ ಅಥವಾ ಶಾರೀರಿಕ ಸಮಸ್ಯೆ ಸಮಸ್ಯೆ ಇರಬಹುದು, ಆಪ್ತ ಸಂಬಂಧಗಳ ಕೊರತೆ ಇರಬಹುದು; ಏನೋ ಅಂತೂ ಒಂದು ಬಗೆಯ ಕಾರಣವಂತೂ ಮಗುವಿನ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ, ವರ್ತನೆಗಳಲ್ಲಿ ಕಾಣುತ್ತಿರುತ್ತದೆ.

ಶಿಕ್ಷಕರಿಗೆ ವೈದ್ಯಕೀಯವಾಗಲಿ, ಮನೋವಿಜ್ಞಾನವಾಗಲಿ, ಸಮಾಜ ವಿಜ್ಞಾನವಾಗಲಿ; ಎಲ್ಲದರ ಮೂಲತತ್ವಗಳಂತೂ ಗೊತ್ತಿರಲೇ ಬೇಕು. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿರುವಷ್ಟು ಸಾಮಾನ್ಯ ತಿಳುವಳಿಕೆಯಂತೂ ತಿಳಿದಿರಬೇಕು. ಇದರ ಜೊತೆಗೆ ಅವರಿಗೆ ಖಂಡಿತವಾಗಿ ತಿಳಿದಿರಲೇ ಬೇಕಾದ ವಿಷಯವೆಂದರೆ ಮಕ್ಕಳ ಮಾನಸಿಕ ಸ್ಥಿತಿಯನ್ನು ವಿಶ್ಲೇಷಣೆಯನ್ನು ಮಾಡುವ ಕ್ರಮ.

ಒಂದು ವೇಳೆ ಮಗುವಿಗೆ ಶಾರೀರಿಕ ಸಮಸ್ಯೆ ಅಥವಾ ನರದೌರ್ಬಲ್ಯದಂತಹ ಸಮಸ್ಯೆಗಳಿದ್ದರೆ ಪೆÇೀಷಕರಿಗೆ ವಿಷಯ ತಿಳಿಸಿ, ಅವರು ಮತ್ತು ಶಿಕ್ಷಕರು ಒಟ್ಟಾಗಿ ಅದರ ಪರಿಹಾರಕ್ಕಾಗಿ ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಆದರೆ ಕೌಟುಂಬಿಕ ಸಮಸ್ಯೆಗಳಿದ್ದರೆ, ಒಡಕು ಕುಟುಂಬಗಳಿದ್ದರೆ, ಆರ್ಥಿಕ ಸಮಸ್ಯೆ ಅಥವಾ ಒಂಟಿ ಪೋಷಕರಾಗಿದ್ದರೆ, ಅಂತಹ ಮಕ್ಕಳ ಪೋಷಕರ ಸ್ಥಿತಿಗತಿಗಳನ್ನು ಶಿಕ್ಷಕರಿಗೆ ಸರಿ ಮಾಡಲು ಆಗುವುದಿಲ್ಲ. ಹಾಗೆ ಮಾಡಲು ಹೋಗುವುದು ಅಪ್ರಾಯೋಗಿಕ ಮತ್ತು ಅವಾಸ್ತವದ ಯೋಚನೆ.

ಆದರೆ, ಮನೆಯಲ್ಲಿ ಮಗುವು ಯಾವುದೇ ಸ್ಥಿತಿಯನ್ನು ಎದುರಿಸುತ್ತಿರಲಿ, ಮಗುವು ತನ್ನ ಸ್ವತಂತ್ರ ಅಸ್ತಿತ್ವಕ್ಕೆ ಬೇಕಾದ ಮಾನಸಿಕ ಸ್ಥೈರ್ಯ, ಸಾಮಾಜಿಕ ಧೈರ್ಯ ಮತ್ತು ಭೌದ್ಧಿಕ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಂತು ಬದುಕು ನಡೆಸಲು ಶಕ್ತನಾಗಿಸಲು ಖಂಡಿತವಾಗಿ ಸಾಧ್ಯ. ಅದಕ್ಕೆ ಬೇಕಾದ ಎಲ್ಲಾ ಮಾನಸಿಕ ಮತ್ತು ಬೌದ್ಧಿಕ ತರಬೇತಿಗಳನ್ನು ನೀಡುತ್ತಾ ಭಾವನಾತ್ಮಕವಾಗಿ ಸಶಕ್ತನಾಗಿಸಲು ಪ್ರೀತಿಯ ಅನುಭವನ್ನು ಆ ಮಗುವಿಗೆ ನೀಡಬೇಕು. ಇದು ಸಾಧ್ಯ. ಶಿಕ್ಷಕರೊಬ್ಬರು ತಮ್ಮ ಸಂಪರ್ಕಕ್ಕೆ ಬರುವ ಒಂದೊಂದು ಮಗುವಿಗೂ ತಮ್ಮ ಪ್ರೀತಿಯನ್ನು ಮತ್ತು ಬದುಕಿನ ಬಗ್ಗೆ ಆಸಕ್ತಿಯನ್ನು ಹೊಂದುವಂತಹ ಪ್ರೇರಣೆಯನ್ನು ನೀಡಲು ಸಾಧ್ಯ.

ಶಿಕ್ಷಕರೆಂಬ ಊರುಗೋಲು

ನಿಜವಾಗಿಯೂ ನಿರ್ಲಕ್ಷಿತ ಮಕ್ಕಳಿಗೆ ಶಿಕ್ಷಕರು ಅತ್ಯಂತ ಬೇಕಾಗಿರುವಂತಹ ಊರುಗೋಲು, ದಾರಿದೀಪ ಮತ್ತು ಸಸಿಗವಚ (ಟ್ರೀಗಾರ್ಡ್). ಇಂದು ಮತ್ತು ನಾಳಿನ ನೆಮ್ಮದಿಯ ಸಮಾಜವನ್ನು ಬಯಸುವವಾರೇ ಆಗಲಿ ಸಸಿಗವಚದಂತೆ ಶಿಶುಗವಚವಾಗಬೇಕು.

ನಮ್ಮ ಮನೆಯ, ನೆರೆಹೊರೆಯ, ಸಮಾಜದ, ಜಗತ್ತಿನ ಪ್ರತಿಯೊಂದು ಮಗುವಿನ ಮಗುತನ ಜತನವಾಗಿರಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವುದು ಹೇಗೆ ಒಂದು ಸಂಕಲಿತ ಹೊಣೆಗಾರಿಕೆಯೋ, ರಾಷ್ಟ್ರದ ಪ್ರಗತಿಯ ಹೊಣೆಗಾರಿಕೆ ಹೇಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆಯೋ ಅದೇ ರೀತಿ ಮಗುತನವನ್ನು ಜೋಪಾನ ಮಾಡುವುದೂ ಕೂಡಾ ಪ್ರತಿಯೊಬ್ಬನ ಅತ್ಯುನ್ನತ ಕರ್ತವ್ಯವಾಗಿರುತ್ತದೆ. ಭೂಮಿಯನ್ನು ಸಂರಕ್ಷಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯು ಒಬ್ಬರಿಗೆ ಎಷ್ಟರ ಮಟ್ಟಿಗಿನ ಜವಾಬ್ದಾರಿಯಾಗಿರುತ್ತದೆಯೋ, ಮಾನವ ಸಮಾಜದ ಬಾಳ್ವೆಗೆ ಮಗುತನದ ಜತನ ಅಷ್ಟೇ ಗಂಭೀರವಾದ ಜವಾಬ್ದಾರಿಯಾಗಿರುತ್ತದೆ.

ಮಗುತನದ ಜತನಕ್ಕೆ ಶಿಶುಗವಚ

ಮಗುತನದ ಜತನವು ಸಾಮಾನ್ಯ ಕೆಲಸವಲ್ಲ. ಅದು ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಬೇಡುವ ಸಾಹಸದ ಕಾರ್ಯ. ಏಕೆಂದರೆ ಮಗುವು ಈ ಮಗುತನದ ಜತನದ ತಪಸ್ಸಿಗೆ ಬದ್ಧವಾಗಿರುವ, ಶಿಶುಗವಚವಾಗಲು ಕಂಕಣ ತೊಟ್ಟಿರುವ ಕೆಲವರ ಕೈಗಳಲ್ಲಿ ಮಾತ್ರ ಹಾದುಹೋಗುವುದಲ್ಲ. ಮಗುವಿನ ಮೇಲೆ ನಾನಾ ರೀತಿಗಳಿಂದ ಪ್ರಭಾವ ಬೀರುವಂತವರು, ತಿಳಿದೋ, ತಿಳಿಯದೆಯೋ ಮಗುವೆಂಬ ಮೆದು ಜೇಡಿಮಣ್ಣಿನ ಮುದ್ದೆಯನ್ನು ತಮ್ಮ ಆಶಯಕ್ಕೆ ತಕ್ಕಂತೆ, ಅರಿವಿಗೆ ತಕ್ಕಂತೆ ರೂಪುಗೊಳಿಸಲು ತಮ್ಮ ಕೈಗಳನ್ನು ಬಳಕೆ ಮಾಡುತ್ತಿರುತ್ತಾರೆ. ಈ ಎಲ್ಲಾ ಪಾಶಗಳಿಂದ ಮಗುವನ್ನು ವಿಮೋಚನಗೊಳಿಸಿಕೊಂಡು ಜಾಣ್ಮೆಯಿಂದ ಮತ್ತು ಎಚ್ಚರಿಕೆಯಿಂದ ಮಗುತನವನ್ನು ಜತನಗೊಳಿಸುವ ಶಿಶುಗವಚಗಳು ನಾವಾಗಬೇಕು.

ಮಕ್ಕಳು ತಮ್ಮ ಪ್ರಭಾವ ಮತ್ತು ಸೆಳೆತಗಳಿಂದ ರೂಪುಗೊಂಡಂತೆ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುತ್ತಾರೆ. ಅವುಗಳಿಗೆಲ್ಲಾ ಶಿಕ್ಷಕರಾದವರು ಅಥವಾ ಶಿಶುಗವಚಗಳು ಪ್ರತಿಕ್ರಿಯಿಸಬಾರದು. ಮಕ್ಕಳಿಗೂ ದೊಡ್ಡವರಿಗಿದ್ದಂತೆ ಪೂರ್ವಾಗ್ರಹಗಳಿರುತ್ತವೆ. ಸಾಂಪ್ರದಾಯಕ ನಡವಳಿಕೆಗಳು ರೂಢಿಯಾಗಿರುತ್ತವೆ. ನಮ್ಮ ನಿರ್ದೇಶನಗಳನ್ನು ಒಮ್ಮಿಂದೊಮ್ಮೆಲೇ ಸ್ವೀಕರಿಸುವುದಿಲ್ಲ. ನಮ್ಮನ್ನು ಅನುಮಾನಿಸುತ್ತಾರೆ. ಅವರ ವಿಕರ್ಷಣ ವರ್ತನೆಗಳು ನಮ್ಮನ್ನು ಅಪಮಾನಿಸುತ್ತವೆ. ಆದರೆ ತಮ್ಮ ಶಿಶುಗವಚದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಯಾವುದೇ ಹಿರಿಯರು ತಮ್ಮ ಸಾಮರ್ಥ್ಯವು ಮಗುವಿನ ವಿಕರ್ಷಣದಿಂದ ವಿಚಲಿತವಾಗದಂತೆ ಕಾಯ್ದುಕೊಳ್ಳುತ್ತಾರೆ.

ಅದೇ ಬಹಳ ಮುಖ್ಯ. ಬಹಳಷ್ಟು ಜನ ಪೋಷಕರು, ಶಿಕ್ಷಕರು ಮತ್ತು ಶಿಶುಸಂಬಂಧಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಫಲರಾಗುವುದು ಇಲ್ಲಿಯೇ. ತಮ್ಮ ಮಾತು ಕೃತಿಗಳಿಗೆ ಆಕರ್ಷಕವಾಗುವ ಮಕ್ಕಳನ್ನು ಆನಂದದಿಂದ ಅಪ್ಪಿಕೊಳ್ಳುತ್ತಾರೆ. ಆದರೆ ತಮ್ಮಿಂದ ವಿಕರ್ಷಣವಾಗುವ ಮಕ್ಕಳನ್ನು ಬಿಟ್ಟುಬಿಡುತ್ತಾರೆ. ಅವರು ನಮ್ಮ ಮಾತು ಕೇಳುವುದಿಲ್ಲ. ಅವರಿಗೆ ಎಷ್ಟು ಹೇಳಿದರೂ ಅಷ್ಟೇ. ಅವರಿಗೆ ಏನು ಮಾಡಿದರೇನು ಲಾಭ? ಇತ್ಯಾದಿ ಜಿಗುಪ್ಸೆಯ ಆಲೋಚನೆಗಳೊಂದಿಗೆ ಅಂತಹ ಮಕ್ಕಳಿಂದ ವಿಮುಖರಾಗಿಬಿಡುತ್ತಾರೆ.

ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ಮತ್ತು ಸಂಸ್ಥೆಯ ಕೀರ್ತಿ ಮಾತ್ರ ನಿರೀಕ್ಷೆಯ ವಸ್ತುಗಳಾಗಿರಬಹುದು. ಆದರೆ, ಶಿಕ್ಷಕರು ನಿರೀಕ್ಷಿಸಬೇಕಾಗಿರುವುದು ಅಭೌತಿಕವಾದ ವಿಷಯಗಳನ್ನು. ಜೀವಂತಿಕೆಯ ವಿಷಯಗಳನ್ನು. ತಾತ್ವಿಕ ಮತ್ತು ಭಾವನಾತ್ಮಕವಾಗಿರುವ ವಿಷಯಗಳನ್ನು. ತತ್ವ ಮತ್ತು ಭಾವುಕತೆಗಳಿಂದ ಶಿಕ್ಷಕರು ಹೊರತಾದ ಕ್ಷಣದಲ್ಲಿಯೇ ಅವನು ಅಥವಾ ಅವಳು ಶಿಕ್ಷಣವೃತ್ತಿಯ ನೈತಿಕ ಮೌಲ್ಯವನ್ನು ಕಳೆದುಕೊಂಡರೆಂದೇ ಅರ್ಥ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending