ಅಂತರಂಗ
ಅರಿಮೆಯ ಅರಿವಿರಲಿ-46 : ನನ್ನತನದ ಜತನ
- ಯೋಗೇಶ್ ಮಾಸ್ಟರ್
ವ್ಯಕ್ತಿ ಮತ್ತು ಸಮಾಜ; ಈ ಎರಡೂ ಪರಸ್ಪರ ಪ್ರಭಾವಗಳನ್ನು ಬೀರಿಕೊಳ್ಳುತ್ತಲೇ ಇರುತ್ತವೆ. ಹಾಗಾಗಿ ನನ್ನತನವೆಂದು ನಾವು ಏನನ್ನೇ ಕರೆದುಕೊಂಡರೂ ಅದು ಸಮಾಜದಲ್ಲಿ ಪ್ರಚಲಿತದಲ್ಲಿರುವಂತಹ ನೈತಿಕತೆ, ಸಾಂಸ್ಕೃತಿಕ ಪ್ರಭಾವ, ಧಾರ್ಮಿಕ ಹಿನ್ನೆಲೆ ಮತ್ತು ಕೌಟುಂಬಿಕ ಪರಿಸರ, ಇದೆಲ್ಲದರ ಜೊತೆಗೆ ಸಾಮಾಜಿಕ ವಾತಾವರಣದಿಂದಲೇ ರೂಪಿತವಾಗಿರುತ್ತದೆ.
ಒಂದೋ ಸಮಾಜವು ಒಪ್ಪಿಕೊಂಡಿರುವ ಮೌಲ್ಯವನ್ನು ತನ್ನದಾಗಿಸಿಕೊಂಡಿರುವ ತನ್ನತನ ರೂಪುಗೊಳ್ಳಬೇಕು ಇಲ್ಲವೇ ಅದನ್ನು ವಿರೋಧಿಸುವಂತಹ ಬಂಡಾಯದ ಆಲೋಚನೆಗಳಿಂದ ಸ್ಥಾಪಿತ ಮೌಲ್ಯಗಳನ್ನು ಪ್ರತಿಭಟಿಸುತ್ತಾ ತನ್ನತನವನ್ನು ರೂಪಿಸಿಕೊಳ್ಳಬೇಕು. ಒಟ್ಟಾರೆ ‘ಹೂ’ ಅಂದರೂ, ‘ಉಹು’ ಅಂದರೂ ಸಮಾಜವೇ ಆಧಾರ. ಮನುಷ್ಯ ಸಂಘಜೀವಿಯಾಗಿರುವುದೇ ಒಂದು ಸಹಜ ಲಕ್ಷಣ ಅಥವಾ ತಾಪತ್ರಯ; ಏನನ್ನುತ್ತೀರೋ ಅದು ಅವರವರ ಅನುಭವಗಳಿಗೆ ಅಥವಾ ಅವುಗಳಿಂದ ಮೂಡಿರುವ ಅಭಿಪ್ರಾಯಗಳಿಗೆ ಬಿಟ್ಟಿದ್ದು.
ನಾನು ಮತ್ತು ನನ್ನತನ
ನಾನು ಎಂಬುದು ತೀರಾ ವ್ಯಾಕರಣ ತಂತ್ರದಂತೆ ಸನ್ನಿವೇಶಕ್ಕೆ ಅನುಗುಣವಾಗಿ ಉಪಯೋಗಿಸುವುದರಿಂದ ಅದು ಹೆಚ್ಚು ಸಾರ್ವತ್ರಿಕವಾಗಿ ಬಳಕೆಯಾಗುತ್ತದೆ. ಈ ಸಾರ್ವಜನಿಕವಾದ ‘ನಾನು’ ಎಂಬುದನ್ನು ಬಿಟ್ಟು ಖಾಸಗಿಯಾಗಿರುವ ನಾನು ಎಂಬುವುದನ್ನು ಗುರುತಿಸಿಕೊಳ್ಳಲು ಮತ್ತು ಗಮನಿಸಿಕೊಳ್ಳಲು ಪ್ರಯತ್ನಿಸಿದರೆ ‘ನನ್ನತನ’ ಎಂಬುದನ್ನು ಒಂದು ಹಂತಕ್ಕೆ ಅಪ್ಪಿಕೊಳ್ಳಲು ಅಥವಾ ಆವಾಹಿಸಿಕೊಳ್ಳಲು ಸಾಧ್ಯ.
ಆಂತರಿಕವಾಗಿ ಕೆಲವು ಮೌಲ್ಯಗಳನ್ನು ಮತ್ತು ಗುಣಗಳನ್ನು ತನ್ನದೆಂದು ಒಲವಿನಿಂದ ಒಪ್ಪಿಕೊಂಡಿರುವ ಮತ್ತು ಅಭ್ಯಾಸ ಮಾಡುತ್ತಿರುವ ವಿಷಯಗಳ ಆಪ್ತತೆಯನ್ನು ‘ನನ್ನತನ’ ಎಂದು ಗುರುತಿಸಿಕೊಳ್ಳಬಹುದು. ನನ್ನತನವನ್ನು ಗುರುತಿಸಿಕೊಳ್ಳಲು ತಾತ್ವಿಕವಾಗಿಯೂ ಮತ್ತು ತಾಂತ್ರಿಕವಾಗಿಯೂ ಕೆಲವು ಸಾಮರ್ಥ್ಯಗಳಿರಬೇಕು.
ಅವೇನಪ್ಪಾಂದ್ರೆ, ಮೊದಲನೆಯದಾಗಿ ತನ್ನನ್ನು ತಾನು ನೋಡಿಕೊಳ್ಳುವ ಅಥವಾ ತನ್ನ ಒಲವು, ನಿಲುವು, ನಡವಳಿಗೆ, ಭಾವ, ಭಂಗಿ, ವಿಚಾರ; ಒಟ್ಟಾರೆ ವ್ಯಕ್ತಿತ್ವವನ್ನಾಗಿ ರೂಪಿಸಿರುವಂತಹ ಎಲ್ಲಾ ಅಂಶಗಳ ಪ್ರದರ್ಶಿಸುವ ವ್ಯಕ್ತಿಯನ್ನಾಗಿ ಸಾಕ್ಷೀಕರಿಸುವ ಸಾಮರ್ಥ್ಯವಿರಬೇಕು. ಆಗ ಆ ವ್ಯಕ್ತಿಗೆ ತಾನು ಹೇಗೆ, ತನ್ನಲ್ಲಿ ಏನೇನೆಲ್ಲಾ ಗುಣ-ಅವಗುಣಗಳಿವೆ, ಅವು ಹೇಗೆ ಕಾಣುತ್ತವೆ? ಚೆಂದವಾಗಿ, ಘನವಾಗಿ ಕಾಣುತ್ತದೆಯೋ, ಎದ್ವಾತದ್ವ ಕಾಣುತ್ತದೆಯೋ, ವಿದೂಷಕನಂತೆ ಕಾಣುತ್ತದೆಯೋ, ಪೆಕರನಂತೆ ಕಾಣುತ್ತದೆಯೋ; ಹೀಗೆ ಯಾವ ರೀತಿಯಲ್ಲಿ ತನಗೆ ತನ್ನ ವ್ಯಕ್ತಿತ್ವದ ಪ್ರದರ್ಶನ ಕಾಣುತ್ತಿದೆ ಎಂಬುದನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯವಿರಬೇಕು. ಅದು ಹಾಗೇ ಇರಲಿ, ಅಥವಾ ಹಾಗಿರಬಾರದು ಎಂಬ ನಿರ್ಣಯ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸ್ಪಷ್ಟವಾದ ದೃಷ್ಟಿಯನ್ನು ತನ್ನ ಕಡೆಗೆ ತಾನೇ ಬೀರಿಕೊಳ್ಳುವಂತಿರಬೇಕು.
ಸರಿ, ಇನ್ನು ಎರಡನೆಯದು ಅಂದರೆ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸಮರ್ಥನಾಗಿರಬೇಕು. ಒಟ್ಟಾರೆ ಸ್ವಮೋಹವಿರಬಾರದು ಅಥವಾ ಆತ್ಮರತಿ ಇರಬಾರದು. ಸ್ವಕುಚ ಮರ್ಧನದ ಸುಖದಲ್ಲಿ ಮೈಮರೆಯುವಂತಹ ಗೀಳು ಇದ್ದವರಿಗೆ ‘ನನ್ನತನ’ ಎನ್ನುವುದು ಆತ್ಮರತಿಯ ಅಹಂಕಾರದ ಪ್ರದರ್ಶನದ ಭಾಗವಾಗಿಬಿಡುವುದೇ ಹೊರತು, ತನ್ನ ಅಂತಃಸತ್ವದ ಅರಿವೇನಲ್ಲ. ಈ ನನ್ನತನ ಎನ್ನುವ ವ್ಯಕ್ತಿತ್ವದ ಅರಿವಿನಲ್ಲಿ ಪ್ರತಿಬಿಂಬದಂತೆ ಕಾಣುವ ವರ್ತನೆಗಳು, ಪ್ರತಿಕ್ರಿಯೆಗಳು, ಪ್ರದರ್ಶನಗಳು ಪ್ರತಿಜೀವಿಯ ಕ್ರಿಯೆಗೆ ತಕ್ಕಂತಹ ಪ್ರತಿಕ್ರಿಯೆಯಾಗಿರದೇ ತನ್ನತನದ ಅಭಿವ್ಯಕ್ತಿಯಾಗಿರುತ್ತದೆ.
ಉದಾಹರಣೆಗೆ ಹೇಳುವುದಾದರೆ, ಒಬ್ಬ ವ್ಯಕ್ತಿಯು ಸಹನೆಯ ಮತ್ತು ಸಹಾನುಭೂತಿಯ ಮೌಲ್ಯಗಳು ತನ್ನ ವ್ಯಕ್ತಿತ್ವದ ಭಾಗವಾಗಿರಬೇಕೆಂದು ಬಯಸಿ ತನ್ನತನವನ್ನು ಹಾಗೆ ರೂಪಿಸಿಕೊಂಡಿರುತ್ತಾರೆ. ಆಗ ಮತ್ತೊಬ್ಬ ವ್ಯಕ್ತಿಯು ಅವನ ಮೇಲೆ ಮಾತಿನಲ್ಲಿ ದಾಳಿ ಮಾಡುತ್ತಾನೆ. ಯಾವುದೋ ಕಾರಣಕ್ಕೆ ಕೆಟ್ಟಾಕೊಳಕು ಮಾತುಗಳ ಸಹಸ್ರ ನಾಮಾರ್ಚನೆ ಮಾಡುತ್ತಾನೆ. ಆಗ ಸಹನೆ ಮತ್ತು ಸಹಾನುಭೂತಿಯ ವ್ಯಕ್ತಿತ್ವದ ಮನುಷ್ಯ ತಾನು ಆರಾಧಿಸುವ ಗುಣಗಳನ್ನು ಬಿಟ್ಟುಕೊಡದೇ, ಆ ವ್ಯಕ್ತಿಯ ಭಾಷೆಯಲ್ಲಿ ಆತನಿಗೆ ಪ್ರತಿಕ್ರಿಯಿಸದೇ, ಉತ್ತಮವಾದ ಭಾಷೆಯಲ್ಲಿ ಮತ್ತು ಸಹಾನುಭೂತಿಯ ಧೋರಣೆಯಲ್ಲಿಯೇ ಮಾತಾಡುತ್ತಾನೆ. ಎದುರಾಳಿಯು ಅದೆಷ್ಟೇ ಪ್ರಚೋದಿಸಿದರೂ ಈ ವ್ಯಕ್ತಿಯು ತನ್ನತನವನ್ನು ಅವನ ಪ್ರಚೋದನೆಗೆ ಬಲಿಗೊಡಲು ಸಿದ್ಧವಿರುವುದಿಲ್ಲ.
ಹಾಗೆಯೇ ಪ್ರಾಮಾಣಿಕ ವ್ಯಕ್ತಿತ್ವ, ಸರಳವಾದ ಉಡುಗೆ ಮತ್ತು ನೇರವಾದ ಮಾತುಗಳನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿಯು ಯಾವುದೇ ಸಭೆ, ಸಮಾರಂಭಕ್ಕೆ ಹೋಗುವಾಗಲೂ ತನ್ನ ಉಡುಗೆ ತೊಡುಗೆಗಳನ್ನು ಸರಳವಾಗಿಯೇ ತೊಟ್ಟಿರುತ್ತಾನೆ.ಹಾಗೆಯೇ ತನಗೇನಾದರೂ ಗೊತ್ತಿರದಿದ್ದ ವಿಷಯವಾದರೆ ‘ತನ್ನ ಎಲ್ಲಿ ಅಜ್ಞಾನಿ ಎಂದು ಸಭಿಕರು ಭಾವಿಸಿಬಿಡುತ್ತಾರೋ’ ಎಂದು ಹುಸಿಪಾಂಡಿತ್ಯದ ಪ್ರದರ್ಶನ ಮಾಡದೇ, ನನಗೆ ಈ ವಿಷಯದ ಬಗ್ಗೆ ತಿಳುವಳಿಕೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇಷ್ಟು ಮಾತ್ರ ನಿಮಗೆ ಗೊತ್ತಿಲ್ಲವಾ? ಎಂದು ಯಾರಾದರೂ ವ್ಯಂಗ್ಯವಾಡಿದರೂ ಹೌದು ಗೊತ್ತಿಲ್ಲ ಎಂಬ ಒಪ್ಪಿಕೊಳ್ಳುವಿಕೆಯಿಂದ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ. ಹೀಗೆ ನನ್ನತನದಲ್ಲಿ ಎಷ್ಟೊಂದು ವಿಷಯಗಳನ್ನು ಅಡಕ ಮಾಡಬಹುದು. ತನ್ನ ಆಸೆ, ತನ್ನ ಮೌಲ್ಯ, ಅಭಿರುಚಿ, ಆಸಕ್ತಿ; ಹೀಗೆ ಮೆಚ್ಚುವ ವಿಷಯಗಳೆಲ್ಲಾ ತನ್ನತನದ ರೂಪುಗೊಳ್ಳುವಿಕೆಯಲ್ಲಿ ಭಾಗಗಳಾಗುತ್ತವೆ.
ಒಟ್ಟಾರೆ ನನ್ನತನ ಎಂಬುದು ಶುದ್ಧ ಸಕಾರಾತ್ಮಕವಾದ ಗುಣಗಳ ಮೊತ್ತವೇ ಆಗಿರುತ್ತದೆ. ಒಂದು ವೇಳೆ ವ್ಯಕ್ತಿಯು ತನ್ನಲ್ಲಿ ಯಾವುದಾದರೂ ದೌರ್ಬಲ್ಯ ಅಥವಾ ದೋಷಗಳನ್ನು ಕಂಡುಕೊಂಡಿದ್ದರೆ ಅದು ನನ್ನತನದ ಭಾಗವಾಗಿರದೇ ಅವು ಆತ್ಮಾವಲೋಕನದ ಭಾಗವಾಗಿರುವುದು. ಅಂತಹ ಆತ್ಮಾವಲೋಕನವೂ ಕೂಡಾ ಸಕಾರಾತ್ಮಕ ವ್ಯಕ್ತಿತ್ವದ ಭಾಗವಾಗಿದ್ದು ತನ್ನತನದ ನಿರ್ವಹಣೆಯೇ ಆಗಿರುತ್ತದೆ.
ಇಲ್ಲಿ ಗಮನಿಸಿ, ತನ್ನತನ ಎಂಬುದನ್ನು ಗಮನಿಸುವ ಅಥವಾ ರೂಪಿಸಿಕೊಳ್ಳುವ ನೆಪದಲ್ಲಿ ವ್ಯಕ್ತಿಗಳು ತಮ್ಮ ಅರಿಮೆಗಳನ್ನು, ಮಾನಸಿಕ ಸಮಸ್ಯೆಗಳನ್ನು ಮತ್ತು ತಮ್ಮದೇ ವರ್ತನೆಗಳ ರೀತಿ ನೀತಿಗಳನ್ನು ಗಮನಿಸಿಕೊಳ್ಳಲು ಮತ್ತು ತನ್ನ ಇಡಿಯಾದ ವ್ಯಕ್ತಿತ್ವವನ್ನು ಸಾಕ್ಷೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ನಿಜವಾಗಿಯೂ ಮಾನಸಿಕ ಆರೋಗ್ಯಕ್ಕೆ ಒಂದು ಉತ್ತಮವಾದ ಏರು ಮೆಟ್ಟಿಲೇ ಆಗಿರುತ್ತದೆ.
ನನ್ನತನದ ಆಳ ಮತ್ತು ಎತ್ತರ
ನಾನು ತಂದೆ, ನಾನು ತಾಯಿ, ನಾನು ಶಿಕ್ಷಕ, ನಾನು ಧಾರ್ಮಿಕವ್ಯಕ್ತಿ, ನಾನೊಬ್ಬ ಸ್ನೇಹಿತ, ನಾನು ಅಣ್ಣ, ನಾನೊಬ್ಬ ರಾಜಕಾರಣಿ, ನಾನೊಬ್ಬ ಕಲಾವಿದ; ಈ ಎಲ್ಲಾ ನಾನು ಎಂಬ ಪಾತ್ರಗಳ ಆಂತರಿಕ ಮೌಲ್ಯವಾಗಿ ನನ್ನತನ ಹೊಳೆಯುತ್ತದೆ. ಅಧ್ಯಾತ್ಮ ಮತ್ತು ಧಾರ್ಮಿಕತೆಯಲ್ಲೂ ಧ್ವನಿಸುವ ನಾನು ಎಂಬ ಪರಿಕಲ್ಪನೆಯು ನಾನೆಂಬ ಅಹಂಕಾರವಾಗಿದ್ದರೆ, ಇನ್ನೂ ಆಳಕ್ಕಿಳಿದರೆ ನಾನು ಎಂಬುದು ಪಾತ್ರಗಳನ್ನು, ಹುದ್ದೆ, ಅಧಿಕಾರಗಳನ್ನು, ಲೋಕವು ಆರೋಪಿಸುವ ಎಲ್ಲಾ ಗುರುತುಗಳನ್ನು, ನೀಡುವ ಬೆಲೆಗಳನ್ನು ಮೀರಿ ಆತ್ಮ ಎಂಬುದಾಗಿಯೂ ಗುರುತಿಸಲ್ಪಡುತ್ತದೆ.
ಆತ್ಮ ಎಂದರೂ ತನ್ನ ಎಂಬ ಅರ್ಥದಲ್ಲಿಯೇ ಸಾಹಿತ್ಯದ ತಂತ್ರಗಾರಿಕೆಯಲ್ಲಿ ಬಳಸಲ್ಪಟ್ಟರೂ ಅಧ್ಯಾತ್ಮದಲ್ಲಿ ಇಹದಲ್ಲಿರುವ್ ವ್ಯಕ್ತಿಯ ಚೈತನ್ಯವೆಂದು ಗುರುತಿಸಬಹುದು. ಆದರೆ ನಾನು ಎಂದು ಹೊರಪದರದಿಂದ ಗುರುತಿಸುತ್ತೀರೋ, ಆತ್ಮ ಎಂದು ಆಧ್ಯಾತ್ಮಿಕವಾಗಿ ಆಂತರಿಕ ಚೈತ್ಯನ್ಯವೆಂದು ಗುರುತಿಸುತ್ತೀರೋ; ಮನಶಾಸ್ತ್ರದಲ್ಲಿ ಪ್ರಜ್ಞಾವಸ್ಥೆಯಲ್ಲಿರುವ ಅಥವಾ ಜಾಗೃತವಾಗಿರುವಂತಹ ತನ್ನನ್ನು ತಾನು ಬುದ್ಧಿಪೂರ್ವಕವಾಗಿ ವಿವೇಚಿಸಿಕೊಳ್ಳುವಂತಹ ಒಂದು ಅರಿವು.
ಆ ತನ್ನತನದ ಅರಿವು ದೇಹಭಾವವನ್ನು, ಭಾವನೆಗಳನ್ನು, ವಿಚಾರಗಳನ್ನು, ಸಾಮಾಜೋಸಾಂಸ್ಕೃತಿಕ ಎಚ್ಚರವನ್ನು, ಆಧ್ಯಾತ್ಮವನ್ನು, ಪ್ರತಿಭೆಯನ್ನು, ಕೌಶಲ್ಯವನ್ನು, ಧೋರಣೆಗಳನ್ನು; ಹೀಗೆ ನೀವು ಯಾವ ಯಾವ ಆಯಾಮಗಳಿಂದ ಒಬ್ಬ ವ್ಯಕ್ತಿಯನ್ನು ಗುರುತಿಸಲು ಸಾಧ್ಯವೋ ಎಲ್ಲವನ್ನೂ ಒಳಗೊಂಡಿರುತ್ತದೆ.
ಈ ತನ್ನತನ ಎನ್ನುವುದು ಹುಟ್ಟಿನಿಂದ ಬರುವುದಲ್ಲ. ತಾನೇ ತನ್ನ ವಿವೇಚನೆ ಮತ್ತು ಪ್ರಜ್ಞೆಯಿಂದ ರೂಢಿಸಿಕೊಳ್ಳುವುದು ಮತ್ತು ರೂಪಿಸಿಕೊಳ್ಳುವುದು. ವ್ಯಕ್ತಿಯು ಬೆಳೆಯುತ್ತಾ ಬೆಳೆಯುತ್ತಾ ಅದು ಬಲಗೊಳ್ಳುವುದು. ಇದು ಹೇಗೆ ಸಮಗ್ರವೋ ಹಾಗೆಯೇ ಒಂದೊಂದು ಭಿನ್ನ ವಿಷಯಗಳಾಗಿಯೂ ಕೂಡ ಪ್ರಕಟಗೊಳ್ಳುವ ಸಾಧ್ಯತೆಗಳು ಇರುತ್ತವೆ. ತಾನು ಎಂದರೆ ಏನು ಎಂಬ ವಿಚಾರ ಮತ್ತು ಭಾವನೆಗಳ ಒಟ್ಟು ಮೌಲಿಕ ಮೊತ್ತದ ಪ್ರಜ್ಞೆಯೇ ತನ್ನತನ.
ನಾನೇ ದೀವಿಗೆ ನನ್ನದೇ ಬೆಳಕು
ನನ್ನತನದ ಪರಿಕಲ್ಪನೆಯ ಆಧಾರದ ಮೇಲೆ ಆತ್ಮಸ್ಥೈರ್ಯ, ಆತ್ಮಬಲ, ಆತ್ಮಾವಲೋಕನ, ಸ್ವವಿವೇಚನೆ, ಸ್ವಸಾಮರ್ಥ್ಯ, ಆತ್ಮಗೌರವ; ಹೀಗೆ ಹಲವು ಆಯಾಮಗಳು ತನ್ನತನದ ಪರಿಕಲ್ಪನೆಯ ಫಲವಾಗಿ ಮುನ್ನೆಲೆಗೆ ಬರುತ್ತವೆ. ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಪೋಷಿಸಿಕೊಳ್ಳಲು ಸಾಧ್ಯವಾಗುತ್ತದೆ. ತನ್ನ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವಂತೆ ಆತ್ಮವಿಮರ್ಶೆ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ.
ಈ ವಿಷಯದ ಬಗ್ಗೆ ಸೂಕ್ಷ್ಮ ದೃಷ್ಟಿಯನ್ನು ಹೊಂದಿದ್ದ ಅನೇಕ ಕುಶಲರು, ಪ್ರಜ್ಞಾವಂತರು ದಿನಚರಿಗಳನ್ನು ಬರೆಯುವ ರೂಢಿಯನ್ನು ಬೆಳೆಸಿಕೊಂಡಿದ್ದರು. ಆಯಾ ದಿನದ ಕೊನೆಯಲ್ಲಿ ಮಲಗುವ ಮುನ್ನ ತಾವು ದಿನವಿಡೀ ಸಂಪರ್ಕಿಸಿದ ವ್ಯಕ್ತಿಗಳನ್ನು, ಸಂವಹನಗಳನ್ನು, ಸಂಭಾಷಣೆಗಳನ್ನು, ಸಂದರ್ಭಗಳನ್ನು, ಸನ್ನಿವೇಶಗಳನ್ನು ಅವಲೋಕಿಸಿ ಅವನ್ನು ದಾಖಲು ಮಾಡುವಂತಹ ಕೆಲಸ ಮಾಡುತ್ತಿದ್ದರು. ಅದು ಬಹಳ ಆತ್ಮಾವಲೋಕನ ಅಥವಾ ತನ್ನ ತಾನು ವಿಮರ್ಶಿಸಿಕೊಳ್ಳಲು, ತನ್ನ ಕೆಲಸಗಳನ್ನು ವಿವೇಚನೆಯಿಂದ ಪುನರಾವಲೋಕನ ಮಾಡಿಕೊಳ್ಳಲು ಒಂದು ಉತ್ತಮ ಅವಕಾಶವಾಗುತ್ತಿತ್ತು.
ಇಂದು ರಾತ್ರಿ ತನ್ನ ತಾನು ನೋಡಿಕೊಂಡ ವ್ಯಕ್ತಿಯು ಮರುದಿನ ಬೆಳಗ್ಗೆ ತನ್ನ ಎಷ್ಟೋ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಹೊಸದಿನವನ್ನು ಎಚ್ಚರಿಕೆಯಿಂದ ಮತ್ತು ವಿವೇಚನೆಯಿಂದ ಮಾಡಲು ಸಾಧ್ಯವಾಗುತ್ತಿತ್ತು. ತನ್ನದೇ ಆಲೋಚನೆಗಳನ್ನು, ತನ್ನದೇ ಮನೋಭಾವಗಳನ್ನು, ತನ್ನದೇ ಧೋರಣೆಗಳನ್ನು ತಾನೇ ಸ್ವಮೋಹವಿಲ್ಲದೇ, ಆತ್ಮರತಿಯಿಂದ ಸಮರ್ಥಿಸಿಕೊಳ್ಳದೇ ನೋಡಿಕೊಳ್ಳುವುದೆಂದರೆ ಅದೊಂದು ಮಹತ್ತರವಾದ ಗುಣವಾಗುತ್ತದೆ. ಮನಶಾಸ್ತ್ರೀಯವಾಗಿ ಇದು ಎಷ್ಟು ಮಹತ್ವವೋ ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡಾ ಈ ಪ್ರಜ್ಞೆಯು ಮೌಲ್ಯವುಳ್ಳದ್ದು. ಹಾಗಾಗಿಯೇ ನನ್ನತನವೆಂಬುದನ್ನು ರೂಪಿಸಿಕೊಳ್ಳುವುದು ಮತ್ತು ಜೋಪಾನ ಮಾಡಿಕೊಳ್ಳುವುದು ಅದೆಷ್ಟು ಮುಖ್ಯ ಮತ್ತು ಅಗತ್ಯ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ6 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ4 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ20 hours agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ


