Connect with us

ಅಂತರಂಗ

ಅರಿಮೆಯ ಅರಿವಿರಲಿ-15 : ಅಹಂ ಬ್ರಹ್ಮಾಸ್ಮಿ

Published

on

  • ಯೋಗೇಶ್ ಮಾಸ್ಟರ್

“ತನಗೇ ಎಲ್ಲಾ ಗೊತ್ತು. ನಾನು ಹೇಳುವುದೆಲ್ಲಾ ಸರಿಯೇ ಇರುತ್ತದೆ. ನನಗೆ ಯಾರ ನಿರ್ದೇಶನವೂ ಬೇಡ. ನನ್ನ ನಿರ್ದೇಶನದಲ್ಲಿ ಎಲ್ಲವೂ ಆಗಬೇಕು. ನಾನು ಹೇಳಿದಷ್ಟು ಮಾತ್ರ ಕೇಳಿ. ನನಗೇನೂ ಹೇಳಲು ಬರಬೇಡಿ” ಎಂದು ತಾನೊಬ್ಬ ಸರ್ವಶಕ್ತ ಭಗವಂತನಂತೆ ವರ್ತಿಸುವವರನ್ನು ನಿಮ್ಮ ಬದುಕಿನ ಎಲ್ಲಾ ರಂಗಗಳಲ್ಲೂ ಒಂದಲ್ಲಾ ಒಂದು ಕಡೆ ನೋಡಿ ಇರುತ್ತೀರಿ. ಇದೂ ಆತ್ಮರತಿಯದೇ ಅರಿಮೆ. ಆದರೆ ಅದಕ್ಕಿಂತ ಒಂದು ಕೈ ಮೇಲು. ಇದಕ್ಕೆ God Complex ಅಥವಾ ದೈವಿಕ ಅರಿಮೆ ಎಂದು ಗುರುತಿಸುತ್ತಾರೆ.

ಈ ಅರಿಮೆಯಲ್ಲಿ ವ್ಯಕ್ತಿ ತಾನೊಬ್ಬ ದೈವೀಪುರುಷನೆಂದು ಭಾವಿಸುವುದಷ್ಟೇ ಅಲ್ಲದೇ ದೇವರಿಗಿದ್ದಂತೆ ತನಗೆ ಶಕ್ತಿಸಾಮರ್ಥ್ಯಗಳೂ ಇವೆ ಎಂದು ಭ್ರಮಿಸುವುದು ಎಂದೇನೂ ಇಲ್ಲ. ತಾನು ಯಾರಿಗೂ ಉತ್ತರಿಸಬೇಕಾಗಿಲ್ಲ ಎಂಬ ಧೋರಣೆಯನ್ನು ಹೊಂದಿರುವನು. ಆದರೆ ನಮ್ಮ ದೇಶದಲ್ಲಿ ನಾನೇ ಭಗವಂತ ಎಂದು ನೇರವಾಗಿ ಸಾರಿಕೊಳ್ಳುವ ದೇವ ಮಾನವರನ್ನು ಕಂಡಿದ್ದೇವೆ.

ತಾವು ದೈವೀ ಪುರುಷರೆಂದು ಹೇಳಿಕೊಂಡು ಆಧ್ಯಾತ್ಮ ಪುರುಷರು ತೋರುವ ವರ್ತನೆಗಳಿಂದ ಆಸ್ತಿಕರಿಗೆ ಭಕ್ತಿ ಬರಬಹುದು, ಆದರೆ ನಾಸ್ತಿಕರಿಗೆ ನಗು ಬರುತ್ತದೆ. ಆದರೆ ಇವುಗಳನ್ನು ಮೀರಿ ಮನೋವೈದ್ಯರಿಗೆ ಇವರ ದೈವಿಕ ಅರಿಮೆ ಒಂದು ಅಧ್ಯಯನದ ವಿಷಯ. ಇದಿರುವವರು ಒಬ್ಬ ಮನೋರೋಗಿ ಅಷ್ಟೇ.

ದೇವರಾಗಲು ನೂರು ದಾರಿ

ಧಾರ್ಮಿಕ ಮತ್ತು ಅಧ್ಯಾತ್ಮಿಕ ವ್ಯಕ್ತಿಗಳು ಮಾತ್ರ ಈ ಬಗೆಯ ದೈವಿಕ ಅರಿಮೆಯನ್ನು ಹೊಂದಿರುತ್ತಾರೆಂದುಕೊಳ್ಳಬೇಡಿ. ಈ ಅರಿಮೆ ನಾನಾ ರೀತಿಗಳಿಂದ ಬೆಳೆಯುತ್ತಾ ಹೋಗುತ್ತದೆ.ಯಾವುದೋ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವವರು ಬಹು ಬೇಗ ಇಂಥಾ ಭ್ರಮೆಗೆ ಒಳಗಾಗಿರುವುದರ ಉದಾಹರಣೆ ಸಾಕಷ್ಟು ನಮ್ಮ ಕಣ್ಣ ಮುಂದಿವೆ.

ಸಂಗೀತದಲ್ಲಾಗಿರಬಹುದು, ವೈದ್ಯಕೀಯ ಕ್ಷೇತ್ರದಲ್ಲಾಗಿರಬಹುದು, ರಾಜಕೀಯದಲ್ಲಾಗಿರಬಹುದು, ಸಾಹಿತ್ಯದಲ್ಲಾಗಿರಬಹುದು; ಅತ್ಯುನ್ನತ ಗೌರವಗಳನ್ನು ಪಡೆಯುತ್ತಿದ್ದು, ಅವರ ಕೀರ್ತಿ ಮತ್ತು ಸಾಮಾಜಿಕ ಸ್ಥಾನಮಾನದ ದೆಸೆಯಿಂದ ಅವರನ್ನು ಕಂಡವರಾರು ಸಹಜವಾಗಿ ಕಡೆಗಣಿಸುವುದಿಲ್ಲ. ಅವರು ಯಾರಿಗಾದರೂ ನಿರ್ದೇಶನಗಳನ್ನು ನೀಡಿದರೆ “ಇಂಥಾ ದೊಡ್ಡ ಮನುಷ್ಯರು ಕೇಳಿದ್ದಾರೆ” ಎಂದು ಗೌರವದಿಂದ ಅನುಸರಿಸುತ್ತಾರೆ.

ಆದರೆ ಮೇಲಿಂದ ಮೇಲೆ ಆಗುವ ಇಂತಹ ಅನುಭವಗಳಿಂದ ಅಥವಾ ತಾವೇ ತಮ್ಮ ಬಗ್ಗೆ ಹೊಂದುವ ಚಿತ್ರಣದಿಂದ ದೈವಿಕ ಅರಿಮೆಗೆ ಒಳಗಾಗುತ್ತಾರೆ. ಅವರಿಗಿಂತ ಮೇಲಾಗಿ ಯಾರಾದರೂ ವರ್ತಿಸಿದರೆ ಅವರಿಗೆ ಆಗುವುದಿಲ್ಲ. ಜೀಯಾ, ಸ್ವಾಮಿ ಎಂದು ಯಾರೇ ಅಂಗಲಾಚಿದರೂ ಅವರಿಗೆ ಅಭಯ ಹಸ್ತವನ್ನು ತೋರುತ್ತಾರೆ. ನಾನು ನಿನ್ನ ಕಾಪಾಡುತ್ತೇನೆ ಎಂಬ ವರದಾನದ ಭರವಸೆ ನೀಡುತ್ತಾರೆ.

ಎಷ್ಟರ ಮಟ್ಟಿಗೆ ಅವರನ್ನು ಅದು ಕಾಡುತ್ತದೆ ಎಂದರೆ ಎಷ್ಟೋ ಬಾರಿ ಅವರು ಪರಸ್ಪರ ಗೌರವ ಸೂಚಕ ನಮಸ್ಕಾರ ಕೂಡಾ ಅವರು ಮಾಡುವುದಿಲ್ಲ. ಇತರರ ನಮಸ್ಕಾರವನ್ನು ಮಾತ್ರ ಸ್ವೀಕರಿಸುತ್ತಾರೆ. ನಮ್ಮ ಭಾರತದಲ್ಲಿ ಇಂತಹ ದೈವಿಕ ಅರಿಮೆಯನ್ನು ಹೊಂದಿರುವಂತಹ ಹಲವಾರು ಗಣ್ಯರು ನಮಗೆ ಕಾಣಬರುತ್ತಾರೆ.

ನಾನೇ ಭಗವಂತ

ಈಗ್ಗೆ ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಧ್ಯಾನ, ಆಧ್ಯಾತ್ಮಿಕ ಸಾಧನೆ ಇತ್ಯಾದಿಗಳನ್ನು ಬಹಳ ಗಂಭೀರವಾಗಿ ಮಾಡುತ್ತಿದ್ದರು. ಅಹಂ ಬ್ರಹ್ಮಾಸ್ಮಿಯ ಅರಿಮೆಯು ಅದೆಷ್ಟರ ಮಟ್ಟಿಗೆ ಮನಸ್ಸಿನ ಆಳಕ್ಕಿಳಿದಿತೆಂದರೆ, ನೆಲದ ಜೊತೆಗೆ ಸಂಪರ್ಕ ನಿಲ್ಲಿಸಿದರು. ಅಂದರೆ ಬರಿಗಾಲಿನಲ್ಲಿ ನೆಲದ ಮೇಲೆ ನಡೆಯುತ್ತಿರಲಿಲ್ಲ. ಅವರು ಹೊರಗಿನ ಜನರನ್ನು ಸಂದರ್ಶಿಸುವುದನ್ನು ನಿಲ್ಲಿಸಿದರು. ಯಾರಿಗೂ ಕೈ ಕುಲುಕುತ್ತಿರಲಿಲ್ಲ. ತಮ್ಮ ಶಕ್ತಿಯ ಪತನವಾಗುತ್ತದೆ ಎಂದು ಭಾವಿಸಿ ಬಹುತೇಕ ಮಾನಸಿಕ ರೋಗಿಯಂತಾಗಿದ್ದರು. ನಂತರ ಅವರ ಆಪ್ತರ ಸಮಾಲೋಚನೆ ಮತ್ತು ಮುನ್ನೆಚ್ಚರಿಕೆಯಿಂದ ಅವರ ಅರಿವಿಗೂ ತಮ್ಮ ವಿಷಯ ನಿಲುಕಿತು ಮತ್ತು ಮುಂದೆ ಗುಣಮುಖರೂ ಆಗಿ ತಮ್ಮ ಸಂಗೀತ ಸಾಧನೆ ಮುಂದುವರಿಸಿದರು.

ಗಣ್ಯರಿರಲಿ, ಕೆಲವರು ಸಾಮಾಜಿಕ ಜೀವನದಲ್ಲಿ ಅದೆಷ್ಟೇ ನಗಣ್ಯರಾಗಿದ್ದರೂ, ಈ ಬಗೆಯ ಅರಿಮೆಯನ್ನು ಹೊಂದಿದ್ದು ಕಂಡವರ ಪಾಲಿಗೆ ನಗೆಪಾಟಲಾಗುತ್ತಾರೆ. ಜನಸಾಮಾನ್ಯರಿಗೆಂದು ಇರುವ ಸಾಮಾನ್ಯ ನಿಯಮಗಳು ಅಥವಾ ರೀತಿನೀತಿಗಳು ತಮಗೆ ಅನ್ವಯವಾಗುವುದಿಲ್ಲ ಎಂದು ಭಾವಿಸುತ್ತಾರೆ. “ಇದು ಒನ್ ವೇ. ಹೋಗುವುದು ಬೇಡ” ಎಂದರೆ, “ನನಗ್ಯಾವ ಒನ್ ವೇ?” ಎಂದು ಎದೆಯುಬ್ಬಿಸಿ ನಗುತ್ತಾರೆ. ಮೇಲರಿಮೆಯ ತುತ್ತತುದಿಯ ಭಾಗವಿದು. ಅವರು ತಮಗೊಂದು ವರ್ಚಸ್ಸಿದೆ ಎಂದು ಭಾವಿಸುತ್ತಾರೆ.

ಗಾಢ ಮತ್ತು ಆಳವಾದ ಪ್ರಭಾವವನ್ನು ಬೀರುವಂತಹ ಧ್ವನಿ ಇದೆ ಎಂದುಕೊಂಡು ಅದೇ ರೀತಿ ಘನ ಗಂಭೀರದಿಂದ ಮಾತಾಡುತ್ತಾರೆ. ತಮ್ಮಿಂದ ಆಗದೇ ಇರುವಂತಹ ಕೆಲಸವೇ ಇಲ್ಲ ಎಂಬಂತೆ ಆಶ್ವಾಸನೆಗಳನ್ನು ನೀಡುತ್ತಾರೆ. ತಮಗಿಂತ ವಯಸ್ಸಿನಲ್ಲಿ, ಸಾಧನೆಯಲ್ಲಿ ದೊಡ್ಡವರನ್ನು ಕಂಡರೂ ತಮಗಿರುವ ವಿಶೇಷ ದೈವಿಕ ಸಾಮರ್ಥ್ಯ ಮತ್ತು ಅಸ್ತಿತ್ವದ ಮುಂದೆ ಅದೆಲ್ಲವೂ ಕ್ಷುಲ್ಲಕವೆಂದೇ ಅವರ ಭಾವನೆಯಾಗಿರುತ್ತದೆ.

ಅವರನ್ನು ಇತರರು ಸರಿಪಡಿಸುವುದು ಬಹಳ ಕಷ್ಟ. ಅವರಿಗೇ ತಮಗೆ ಈ ಬಗೆಯ ಅರಿಮೆ ಇದೆ ಎಂದು ಅರ್ಥವಾಗಬೇಕು. ತಾನು ವರ್ತಿಸುವ ಸಮಯದಲ್ಲೆಲ್ಲಾ ಎಚ್ಚರಗೊಳ್ಳಬೇಕು. ಹಾಗೆ ವರ್ತಿಸದೇ ಸಹಜವಾಗಿ ವರ್ತಿಸುವಂತಹ ಅಭ್ಯಾಸವನ್ನು ಮಾಡಬೇಕು. ಸತತವಾದ ಅಭ್ಯಾಸ ಮಾಡುತ್ತಿದ್ದರೆ ದೈವಿಕ ಅರಿಮೆಯಿಂದ ಹೊರಬರಲು ಸಾಧ್ಯ.

ಸೃಷ್ಟಿಕರ್ತ

ಸಾಮಾನ್ಯವಾಗಿ ಈ ದೈವಿಕ ಅರಿಮೆಯು ಬದುಕಿನ ಎಲ್ಲಾ ರಂಗಗಳಲ್ಲಿದ್ದರೂ ಸೃಜನಶೀಲ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಇದಕ್ಕೆ ಬಹುಶಃ ದೇವರು ಎಂಬ ಸೃಷ್ಟಿಕರ್ತನ ಪರಿಕಲ್ಪನೆ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದು, ತಾವೂ ಕಲೆ, ಸಾಹಿತ್ಯ ಇತ್ಯಾದಿಗಳಲ್ಲಿ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿರುವುದರಿಂದ ಈ ಅರಿಮೆ ನಿಧಾನವಾಗಿ ತಲೆದೋರಬಹುದು.

ಮಗುವೊಂದು ಅದೂ ಇದೂ ಜೋಡಿಸಿಕೊಂಡು ಆಟವಾಡುವುದನ್ನು ಗಮನಿಸಿ. ಅದಕ್ಕೆ ಹೊರಗಿನ ಲೋಕದ ಪರಿವೆಯೇ ಇರುವುದಿಲ್ಲ. ಅದಕ್ಕೆ ನಿರ್ಧಿಷ್ಟವಾಗಿ ಏನು ರಚಿಸುತ್ತಿದ್ದೇನೆ ಎಂದು ಸರಿಯಾಗಿ ತಿಳಿಯದಿದ್ದರೂ ಏನನ್ನೋ ಸೃಷ್ಟಿಸುವ ಕ್ರಿಯೆಯಲ್ಲಿ ಮೈಮರೆತಿರುತ್ತದೆ. ಅದೇ ರೀತಿ ಸೃಜನಶೀಲ ವ್ಯಕ್ತಿಗಳೂ ಕೂಡಾ ಸೃಷ್ಟಿಯಕಾರ್ಯದಲ್ಲಿ ನಿರತರಾಗಿರುವಾಗ ಹೊರ ಜಗತ್ತಿನ ಪರಿವೆಯನ್ನು ಹೊಂದಿರುವುದಿಲ್ಲ. ಹಾಗಾಗಿ ಕೆಲವು ಕಲಾವಿದರ ವರ್ತನೆಯು ವಿಲಕ್ಷಣ ಎಂದೂ ಅನ್ನಿಸಬಹುದು. ಅವರಿಗೆ ಯಾರೂ ಸರಿಪಡಿಸಲು ಹೋಗಲಾಗದು.

ಏಕೆಂದರೆ ಅವರು ಕುಟುಂಬದ ಬಂಧವನ್ನು, ಸಂಬಂಧಗಳನ್ನೂ ಕೂಡಾ ಕಳೆದುಕೊಳ್ಳಲು ಸಿದ್ಧರಾಗಿರುವರು. ವಾಸ್ತವವಾಗಿ ಅವರಿಗೆ ಅವೆಲ್ಲವೂ ಅವರ ಸೃಷ್ಟಿಕಾರ್ಯದಲ್ಲಿ ಅಡಚಣೆಗಳೆಂದೇ ಅನ್ನಿಸುವುದು. ಅವರ ಸಂಬಂಧ ಮತ್ತು ಅದರ ಸುತ್ತಲಿನ ಚಟುವಟಿಕೆಗಳು ಕಲಾವಿದರಿಗೆ ಬಂಧನ ಎನ್ನಿಸುವುದು. ಬಹಳಷ್ಟು ಕಲಾವಿದರ ವೈವಾಹಿಕ ಸಂಬಂಧಗಳೂ ಕೂಡಾ ಮುರಿದುಬೀಳುವುದು ಏನೂ ಆಶ್ಚರ್ಯವಿಲ್ಲ. ದೈವಿಕದರಿಮೆಯ ವ್ಯಕ್ತಿಗಳಿಗೆ ದಾಂಪತ್ಯ ಜೀವನ ಕಷ್ಟಸಾಧ್ಯ.

ತಾವು ಇಂತಹುದ್ದೊಂದರ ಅರಿಮೆಯಲ್ಲಿ ಇದ್ದೇವೆ ಎಂದು ತಿಳಿದರೆ ಅವರು ಇದರಿಂದ ಹೊರಗೆ ಬರುವ ಪ್ರಯತ್ನ ಮಾಡಬಲ್ಲರು. ವಿಶ್ವದ ವಿರಾಟ್ ಸ್ವರೂಪದ ಮುಂದೆ ತಾವೊಂದು ಅಣುವಿನಲ್ಲಿ ಅಣುವೆಂಬ ಕುಬ್ಜತೆಯ ಅರಿವಾದರೆ ತನ್ನ ವಿರಾಟ್ ರೂಪವನ್ನು ಸಂಕುಚಿತಗೊಳಿಸಿಕೊಳ್ಳಬಹುದು.
ಎಂದರೋ ಮಹಾನುಭಾವುಲು ಆಗಿರು ಹೋಗಿರುವ ಚರಿತ್ರೆಯ ಪ್ರಜ್ಞೆ ಮತ್ತು ತಾವೆಷ್ಟು ಸಂಕುಚಿತ ವ್ಯಕ್ತಿ ಎಂಬ ಭಾವ ದೈವಿಕ ಅರಿಮೆಯನ್ನು ಕ್ರಮೇಣ ಇಲ್ಲವಾಗಿಸಬಹುದು.

ರೋಗ ಲಕ್ಷಣಗಳು

ದೈವಿಕ ಅರಿಮೆಯವರ ಇನ್ನೊಂದು ರೋಗಲಕ್ಷಣವೆಂದರೆ “ತನ್ನ ತೀರ್ಮಾನ ಮತ್ತು ಕಾರ್ಯವೈಖರಿಯೇ ಉಳಿದವರಿಗಿಂತ ಸರಿಯಾದದ್ದು ಮತ್ತು ಉತ್ತಮವಾದದ್ದು” ಎಂದು ಭಾವಿಸುವುದು. ಯಾವಾಗ ಇದೇ ಭಾವನೆಯು ಸತತವಾಗಿ ಬರುತ್ತಿದೆ ಎಂದೆನಿಸಿದಾಗ ಈ ಅರಿಮೆಯ ಲಕ್ಷಣಗಳು ನನ್ನಲ್ಲೂ ಇವೆ ಎಂಬ ಎಚ್ಚರಿಕೆ ಬರಬೇಕು. ಹಾಗೆಯೇ ಮುಕ್ತ ಮನಸ್ಸಿನಿಂದ, ತೆರೆದ ಹೃದಯದಿಂದ ಇತರರ ಸಲಹೆ, ಸೂಚನೆ ಮತ್ತು ನಿರ್ದೇಶನಗಳಿಗೆ ಕಿವಿಗೊಡಬೇಕು. ಉದ್ದೇಶಪೂರ್ವಕವಾಗಿ ತನ್ನದನ್ನು ಬದಿಗಿರಿಸಿ, ಇತರರದನ್ನು ಪರಿಗಣಿಸುವ ರೂಢಿಯನ್ನು ಮಾಡಿಕೊಂಡು ತನ್ನ ಅರಿಮೆಯ ಹುಟ್ಟಡಗಿಸಬೇಕು.

ಈ ದೈವಿಕ ಅರಿಮೆಯವರ ಮತ್ತೊಂದು ಢಾಳಾದ ಲಕ್ಷಣವೆಂದರೆ, “ನನ್ನ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ” ಎಂದು ಗೊಣಗುತ್ತಿರುವುದು. ಸಮಸ್ಯೆ ಏನೆಂದರೆ ಇತರರನ್ನು ಅರ್ಥ ಮಾಡಿಕೊಳ್ಳುವ ಆಲೋಚನೆಯೇ ಇವರಿಗೆ ಹೊಳೆಯದಿರುವುದು. ಹೌದು, ನಾನು ಹೇಳುವುದು ಇವರಿಗೆ ಯಾಕೆ ಅರ್ಥವಾಗುತ್ತಿಲ್ಲ? ನಾನು ಸರಿಯಾಗಿ ಹೇಳುತ್ತಿಲ್ಲವೇ? ಎಂದು ತಮ್ಮನ್ನು ಪ್ರಶ್ನಿಸಿಕೊಳ್ಳುವುದಿಲ್ಲ. ಬದಲಾಗಿ ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಲ್ಲಿ ಇಲ್ಲ ಅಥವಾ ಇವರು ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರು ಎಂದುಕೊಳ್ಳುತ್ತಾರೆ.

ಇವೆರಡೂ ಅನ್ನಿಸದಿದ್ದರೆ, ನಾನು ಹೇಳುವುದನ್ನು ಕೇಳದೇ ಇರುವಷ್ಟು ಉದ್ಧಟತನ ತೋರುತ್ತಿದ್ದಾರೆ ಇವರಿನ್ನು ಇಲ್ಲಿ ಇರಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ಅವರ ಆಗಿನ ಮಾತೆಂದರೆ, “ಒಂದೋ ನೀನು ಇಲ್ಲಿರಬೇಕು ಅಥವಾ ನಾನಿಲ್ಲಿ ಇರಬೇಕು.” ಈ ಮಾತಿನ ಅರ್ಥ ನಾನು ಹೋಗುತ್ತೇನೆ ಎಂದಲ್ಲ. ಇದು ನನ್ನ ಸ್ಥಳ ನೀನು ಇಲ್ಲಿಂದ ಹೋಗಬೇಕು ಎಂದರ್ಥ. ಅಂದರೆ ಒಂದೋ ನೀನು ನನ್ನ ಆಜ್ಞಾನುವರ್ತಿಯಾಗಿ ಇರಬೇಕು. ಇಲ್ಲವೆಂದರೆ ಹೋಗುತ್ತಿರಬೇಕು. ಇದು ಅವರ ಅರಿಮೆಯ ಸ್ಪಷ್ಟತೆ.

ದೈವಿಕ ಅರಿಮೆಯವರು ಎಲ್ಲಾ ವಿಷಯಗಳಲ್ಲೂ ಮಾತಾಡಲು, ತಮ್ಮ ಅಭಿಪ್ರಾಯ ನೀಡಲು, ತಮಗೆ ಆ ವಿಷಯ ಗೊತ್ತಿದೆ ಎಂದು ತೋರ್ಪಡಿಸುತ್ತಿರುತ್ತಾರೆ. ದೇವರು ಸರ್ವಜ್ಞನಲ್ಲವೇ? ಅವರು ಸಾಮಾನ್ಯವಾಗಿ ಎಲ್ಲದರ ಬಗ್ಗೆ ತಿಳಿದುಕೊಳ್ಳಲೂ ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಿರುವ ಪರಿಹಾರ ಒಂದೇ. ತನ್ನ ಸಾಮರ್ಥ್ಯ ಮತ್ತು ಮಿತಿಯನ್ನು ಅರಿತುಕೊಳ್ಳುವುದು. ತನಗೆ ಸಾಮರ್ಥ್ಯವಿರುವುದರಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡುವುದು. ತನಗೆ ಮಿತಿಯಿರುವ ವಿಷಯದಲ್ಲಿ ವಿನಯವಾಗಿ ತಿಳಿಯುವ ಪ್ರಯತ್ನ ಮಾಡುವುದು. ಬಲ್ಲವರ ಬಳಿ ಅಹಂಕಾರ ತೋರದೇ, ಹುಸಿ ಜ್ಞಾನದ ಪ್ರದರ್ಶನ ಮಾಡದೇ ಗೊತ್ತಿಲ್ಲ, ನನಗೇನೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸುವ ರೂಢಿಯನ್ನು ಮಾಡಿಕೊಳ್ಳುವುದು.

ಯಾವಾಗಲೂ ಸ್ಪರ್ಧಾತ್ಮಕವಾಗಿಯೇ ಪ್ರತಿಯೊಂದು ವಿಷಯಗಳನ್ನೊ ತೆಗೆದುಕೊಳ್ಳುವುದು. ಸವಾಲುಗಳನ್ನು ಎಸೆಯುವುದು. ಇತರ ಸಾಧನೆಗಳನ್ನು ಸವಾಲುಗಳಂತೆ ಸ್ವೀಕರಿಸುವುದು. ನಾನು ಅತ್ಯುತ್ತಮವಾದ ಪ್ರದರ್ಶನವನ್ನು ಕೊಡಬೇಕು ಎಂದು ಆಲೋಚಿಸುವುದು ಆರೋಗ್ಯಕರ ಧೋರಣೆಯ ಲಕ್ಷಣ. ಆದರೆ, ನಾನೇ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವುದು. ಇನ್ನಾರೂ ಕೊಡುವುದಿಲ್ಲ ಅಥವಾ ಕೊಡಕೂಡದು ಎನ್ನುವುದು ಮನೋರೋಗದ ಲಕ್ಷಣ. ಇಂತಹ ಮನಸ್ಥಿತಿಯವರು ತಮ್ಮ ಎದುರಾಳಿಗಳನ್ನು ಬಗ್ಗುಬಡಿಯಲು ಏನೆಲ್ಲಾ ಮಾಡುತ್ತಾರೆ ಎಂಬ ಸಾಕಷ್ಟು ಉದಾಹರಣೆಗಳನ್ನು ನಮ್ಮ ಸಾಮಾನ್ಯ ಜೀವಿತಾವಧಿಯಲ್ಲೇ ಕಾಣುತ್ತಿರುತ್ತೇವೆ.

ಇತರರನ್ನು ಕಡೆಗಣಿಸುವುದು ಮತ್ತು ಅವರದೇನೂ ಅಂತಹ ಸತ್ವವಿಲ್ಲ ಎನ್ನುವುದು ಈ ಅರಿಮೆಯುಳ್ಳವರ ತೀರಾ ಸಾಮಾನ್ಯ ಲಕ್ಷಣ. ತಮ್ಮನ್ನು ಇತರರೊಂದಿಗೆ ಸದಾ ಹೋಲಿಸಿಕೊಳ್ಳುತ್ತಿರುತ್ತಾರೆ. ಅದನ್ನು ಹೊರಗೆ ತೋರ್ಪಡಿಸದಿದ್ದರೂ ತಮ್ಮೊಳಗೇ ಆ ಹೋಲಿಕೆಯ ಕೆಲಸ ಭರದಿಂದ ಸಾಗುತ್ತಲೇ ಇರುತ್ತದೆ. ತಾವು ಮಾಡಿದ ಕೆಲಸವನ್ನು ಯಾರೂ ವಿಮರ್ಶೆ ಮಾಡಬಾರದು ಮತ್ತು ಅದನ್ನು ಸರ್ವಶ್ರೇಷ್ಟವೆಂದು ಅವರು ಭಾವಿಸಿರುತ್ತಾರೆ. ಅವರು ಆ ವಿಷಯದಲ್ಲಿ ಎಡವಟ್ಟುಗಳನ್ನೇ ಮಾಡಿರಲಿ. ಅದನ್ನು ಅವರು ತೋರಿಸಿಕೊಳ್ಳುವುದಿಲ್ಲ.

ಇತರರ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ.ಎದುರು ಇರುವವರ ಮಾತುಗಳನ್ನು ಕೇಳುವುದಕ್ಕಿಂತ ತಮ್ಮ ಮಾತುಗಳನ್ನು ಹೇಳುವ ಆತುರವೇ ಅವರಲ್ಲಿ ಹೆಚ್ಚಾಗಿದ್ದು, ಎಷ್ಟೋ ಬಾರಿ ಇತರರು ಹೇಳುವ ಮಾತುಗಳಲ್ಲಿ ವಾಕ್ಯವೊಂದು ಪೂರ್ಣವಾಗುವುದಕ್ಕೂ ಬಿಡದೇ ತಾವು ತಮ್ಮದನ್ನು ಹೇಳುತ್ತಿರುತ್ತಾರೆ. ತಾವು ತಮ್ಮ ಕತೆ, ಅನುಭವ, ವಿಚಾರ ಇತ್ಯಾದಿಗಳನ್ನೆಲ್ಲಾ ಇತರರಿಗೆ ಹೇಳುವಂತೆ ತಾವೂ ಇತರರದನ್ನು ಕೇಳುವ ಸಹನೆಯನ್ನೂ, ಔದಾರ್ಯವನ್ನೂ, ಹೋಗಲಿ ಕರುಣೆಯನ್ನೂ ತೋರುವುದಿಲ್ಲ.
ಇಂತಹ ಲಕ್ಷಣವು ಇದ್ದರೆ ಮೊದಲು ನಾವು ಅಭ್ಯಾಸ ಮಾಡಬೇಕಾಗಿರುವುದು ಮೌನ.

ನನ್ನ ಎದುರು ಇರುವವರು ಮಾತನಾಡಿದ ಮೇಲೆ ನಾನು ಮಾತಾಡುತ್ತೇನೆ ಎಂಬ ಸ್ಪಷ್ಟವಾದ ಸಂಕಲ್ಪದಿಂದ ಸಂವಹನಕ್ಕೆ ತೊಡಗಬೇಕು. ಒಂದು ವೇಳೆ ಎದುರಿಗೆ ಇರುವವರೂ ದೇವರೇ ಆಗಿದ್ದರೆ, ಸರಿ, ಹಾಳಾಗಿ ಹೋಗಲಿ ದೇವರು ದೇವರುಗಳ ನಡುವೆ ಯುದ್ಧವೇಕೆ ಎಂದು ಸುಮ್ಮನಾಗುವುದು ಅತ್ಯಂತ ಶ್ರೇಯಸ್ಕರ. ಎಂತೂ ಆ ದೇವರು ಈ ದೇವರ ಮಾತು ಕೇಳುವುದಿಲ್ಲ ಎಂಬ ಅರಿವಾಯಿತಲ್ಲಾ. ಈ ದೇವರು ಬಾಯಿಮುಚ್ಚಿಕೊಂಡು ತನ್ನ ಶಕ್ತಿವ್ಯಯ ಮಾಡದಿರುವಷ್ಟು ಜಾಣ ದೇವರಾಗಬೇಕು.

ಈ ದೇವರುಗಳಿಗೆ ಸಾಮಾನ್ಯವಾಗಿ ಒಳಗೊಳಗೆ ತಮ್ಮನ್ನು ಪ್ರಶಂಸಿಸುವುದಿಲ್ಲ, ತಮ್ಮನ್ನು ಪುರಸ್ಕರಿಸುವುದಿಲ್ಲ ಎಂಬ ಖೇದವು ಯಾವಾಗಲೂ ಕೊರೆಯುತ್ತಿರುವ ಕಾರಣದಿಂದ ಉಗ್ರವಾಗಿಯಾದರೂ ಪ್ರಶಂಸೆಯನ್ನು ಪಡೆಯಬೇಕೆಂದು ಎದುರಿರುವವರನ್ನು ಮಣಿಸುವ ಯತ್ನ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮಿಂದ ಯಾವುದೇ ಲೋಪದೋಷವಾದರೂ ಅದನ್ನು ತಾವೇ ಸಮರ್ಥಿಸಿಕೊಂಡು ಅಥವಾ ಸಮಜಾಯಿಷಿ ನೀಡಿಕೊಂಡು ಅದೇನೂ ಅಂತಹ ಘನವಾದ ಲೋಪವೇನಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಸರಿ, ಈ ಅರಿಮೆ ಇದೆ ಎಂದು ಅರಿವಾಯಿತು. ಮುಂದೆ? ಅರಿಮೆ ಅಮಲೇರಿಸುವುದಾದರೆ ಅರಿವು ಅಮಲಿಳಿಸುವ ಸಾಧನವಷ್ಟೇ. ಅಮಲಿಲ್ಲದೇ ಅವಧಾನದಲ್ಲಿ ಅಡಿಗಳನ್ನಿಟ್ಟರಾಯಿತು.
ಇಂತೀ ದೈವಿಕ ಅರಿಮೆಯ ಪುರಾಣವು ಮುಕ್ತಾಯವಾದುದು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending