Connect with us

ಅಂತರಂಗ

ಅರಿಮೆಯ ಅರಿವಿರಲಿ-9 : ಆತ್ಮರತಿ

Published

on

  • ಯೋಗೇಶ್ ಮಾಸ್ಟರ್

ವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ. ಅವಳ ಶಾಪವೋ ಅವಳಿಗೆ ತನ್ನ ಮಾತನ್ನು ತಾನು ಹೇಳಲಾಗದು. ಇತರರ ಮಾತನ್ನು ಪ್ರತಿಧ್ವನಿಸಬೇಕು. ಹಾಗಾಗಿ ಅವಳಿಗೆ ಗ್ರೀಕ್ ಬೇಟೆಗಾರನಿಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಲಾಗದು, ತನ್ನ ಪ್ರಶಂಸೆಯನ್ನೂ ತಿಳಿಸಲಾಗದು. ಅವನೋ ಇವಳ ಕಡೆ ಕಣ್ಣೆತ್ತಿಯೂ ನೋಡದೇ ಓಡಾಡುತ್ತಿರುತ್ತಾನೆ.

ಒಮ್ಮೆ ತಿಳಿಯಾದ ನೀರಿನಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾನೆ. ತನ್ನದೇ ಸೌಂದರ್ಯವನ್ನು ತಾನೇ ನೋಡಿಕೊಂಡು ಪರವಶನಾಗುತ್ತಾನೆ. ಆ ನೀಳ ಮೂಗು, ಹೊಳಪಿನ ಕಣ್ಣುಗಳು, ಗುಲಾಬಿ ದಳದಂತಹ ತುಟಿಗಳು, ನಕ್ಕರೆ ಅರಳಿದ ಹೂವಿನಂತಹ ಮುಖ; ಆಹಾ! ಅದನ್ನು ಮುದ್ದಿಸುವಷ್ಟು ಆಕರ್ಷಕ, ಮೋಹಕ. ಒಂದೇ ಕಣ್ಣೋಟಕೆ ಪ್ರೇಮಿಸಲಾಗುವಂತೆ, ಒಮ್ಮಿಂದೊಮ್ಮೆಲೇ ಮರುಳಾಗಿ ಅಪ್ಪಿ ಇನ್ನಿಲ್ಲವಾಗುವಂತಹ ಸೆಳೆತ. ಅವನು ತನ್ನ ಬಿಂಬಕ್ಕೆ ತಾನೇ ಮೋಹಿತನಾಗಿ ಮುದಪಡೆಯಲು, ಸರಸದಿಂದ ಮುಟ್ಟುತ್ತಾನೆ. ನೀರು ಕಲಕುತ್ತಿದ್ದಂತೆ ಬಿಂಬ ಚದರುತ್ತದೆ. ಇಲ್ಲವಾಗುತ್ತದೆ. ಅಯ್ಯೋ, ತನ್ನ ಮೋಹಕ, ಪ್ರೇಮಪೂರ್ಣ ತನ್ನನ್ನು ಪಡೆಯಲು ನೀರಿಗೆ ಧುಮುಕುತ್ತಾನೆ. ಆದರೆ ಸಿಗುವುದಿಲ್ಲ. ದಡದಲ್ಲೊಂದು ಅವನ ಪ್ರೇಮಕ್ಕೆ ಸಾಕ್ಷಿಯಾಗಿ ಹೂಗಿಡವೊಂದು ಮೂಡುತ್ತದೆ. ಆ ಹೂವಿಗೂ ಅವನದೇ ಹೆಸರು. ನಾರ್ಸಿಸಸ್.

ಆತ್ಮರತಿಯಲೆಗಳು

ನಾರ್ಸಿಸಸ್ ತನ್ನ ತಾನು ಮೋಹಿಸಿಕೊಳ್ಳುವ, ತನಗೆ ತಾನು ಪರವಶವಾಗುವ, ತನ್ನನ್ನು ತಾನೇ ಪ್ರೀತಿಸಿಕೊಳ್ಳುವ ಆತ್ಮರತಿಗೆ ಪ್ರತಿಮೆಯಾಗಿ ನಿಲ್ಲುತ್ತಾನೆ. ಈ ಅರಿಮೆಯೇ ಆತ್ಮರತಿ. ಅವರಿವರ ಅತಿಕ್ರಮಣ ಪ್ರವೇಶವಿರದಿದ್ದಾಗ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತುಕೊಂಡು ತನ್ನನ್ನೇ ತಾನೇ ನೋಡಿಕೊಂಡು, ಕಾಣುವ ಎಲ್ಲಾ ವಿವರಗಳನ್ನು ಗಮನಿಸುತ್ತಾ, ಪ್ರಶಂಸಿಸುತ್ತಾ, ನಸುನಗುತ್ತಾ, ಮೋಹಗೊಳ್ಳುತ್ತಾ ಪರವಶವಾಗುವ ಅನುಭವವಿರುವವರಿಗೆ ನಾರ್ಸಿಸಸ್ ನೀರಿನಲ್ಲಿ ತನ್ನ ಬಿಂಬವನ್ನು ಹೇಗೆ ನೋಡಿಕೊಂಡಿದ್ದಿರಬಹುದು ಎಂದು ಅರಿವಾಗುತ್ತದೆ.

ಫೇಸ್ಬುಕ್ ಅಥವಾ ಇನ್ಟಾಗ್ರಾಂನಲ್ಲೋ ಕಣ್ಣಾಡಿಸಿದರೆ ಆತ್ಮರತಿಯ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಮುಖಪುಟವಂತೂ ಆತ್ಮರತಿಯ ಮಹಾಸಾಗರ. ನಾರ್ಸಿಸಿಸಂ ಅಥವಾ ಆತ್ಮರತಿಯ ಅರಿಮೆಯ ಅಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ. ಅಷ್ಟು ಸಾಮಾನ್ಯ. ನಮಗೆ ಹೆಜ್ಜೆಹೆಜ್ಜೆಗೂ ಕಣ್ಣಿಗಪ್ಪಳಿಸುತ್ತಿರುತ್ತವೆ.

ಅದ್ಯಾವುದೋ ಊರ ಹಬ್ಬಕ್ಕೆ ಶುಭಾಶಯ ಕೋರುವ ರಾಜಕಾರಣಿಯ ಅಥವಾ ಮುಂದೆ ನಿಲ್ಲಬಹುದಾದ ಚುನಾವಣಾ ಅಭ್ಯರ್ಥಿಯ ಫ್ಲೆಕ್ಸ್ ನೋಡಿ. ಹೆಸರಿನ ಹಿಂದೆ ಒಂದಿಷ್ಟು ಬಿರುದು ಬಾವಲಿಗಳು, ಗ್ರಾಫಿಕ್ಸ್‍ನಲ್ಲಿ ಹುಲಿ ಸಿಂಹಗಳೂ ಅತ್ತಿತ್ತ ಇದ್ದರೆ ಆಶ್ಚರ್ಯವಿಲ್ಲ. ಈತನೆಂದು ಗುರುತಿಸಲು ಬರಿಯ ಮುಖ ಸಾಕಾದರೂ, ಅವರಿಗೆ ಆತ ತೊಟ್ಟಿರುವ ಬೂಟಿನವರೆಗೂ, ಜೊತೆಗೆ ನಡೆಯ ಭಂಗಿಯನ್ನೂ ತೋರುವ ತವಕ. ಅದನ್ನು ನೋಡಿ, ಆಹಾ, ಆ ಸುಂದರವಾದ ಹೊಳಪುಳ್ಳ ಉಂಗುರವನ್ನು ನೋಡು, ಆಹಾ, ಆ ಚೆಂದದ ಶರ್ಟಿನ ಬಣ್ಣವನ್ನು ನೋಡು.

ಇಂಥವೆಲ್ಲಾ ತೊಟ್ಟಿರುವ, ಹೀಗೆಲ್ಲಾ ಕಾಣುವ ಇವನೇ ನಮ್ಮ ನಾಯಕನಾಗಬೇಕು ಎಂದು ಅವನ ಸೌಂದರ್ಯೋಪಾಸನೆಯಿಂದ ರಸ್ತೆಯಲ್ಲಿ ಓಡಾಡುತ್ತಿರುವವರಾರಾದರೂ ಪರವಶವಾಗುತ್ತಾರೆಂದುಕೊಂಡಿದ್ದೀರಾ?
ಫೇಸ್ಬುಕ್ಕಿನಲ್ಲಿ ಕೆಲವರು ಎಡಕ್ಕೆ ತಿರುಗಿ ಒಂದು ಪಟ, ಬಲಕ್ಕೆ ತಿರುಗೊಂದು ಪಟ, ಹೀಂಗೊಂದು ಪಟ, ಹಾಗೊಂದು ಪಟ. ಮೇಲಿಂದೊಂದು, ಕೆಳಗಿಂದೊಂದು; ನಾನಾ ಭಾವಗಳಲ್ಲಿ, ಭಂಗಿಗಳಲ್ಲಿ ವಿಜೃಂಭಿಸುತ್ತಿರುತ್ತವೆ. ಕೆಲವು ಸಲ ಬರಿಯ ನೋಡುಗರಿಗೆ ಪಟ ಹಾಕಿದವರಿಗೆ ಕಂಡ ವ್ಯತ್ಯಾಸಗಳಾವುವೂ ಕಾಣುವುದೂ ಇಲ್ಲ. ಎಲ್ಲವೂ ಒಂದೇ ಎಂಬಂತೆ ಕಾಣುತ್ತಿರುತ್ತದೆ.

ಇನ್ನೂ ಮುಂದುವರಿದು ತಾವು ತೊಟ್ಟಿರುವ ಪ್ರತಿ ಬಟ್ಟೆಯ ಪಟಗಳನ್ನು ಫೇಸ್ಬುಕ್ಕಿನಲ್ಲಿ ಪೇರಿಸುವುದು ಸಾಲದೆಂದು ಅವರ ಸ್ನೇಹಿತರೆಲ್ಲಿ ನೋಡುವುದರಿಂದ ವಂಚಿತರಾಗಿಬಿಡುತ್ತಾರೋ ಎಂದು ಪ್ರಶಂಸಿಸಬಹುದಾದ ಸ್ನೇಹಿತರಿಗೆಲ್ಲಾ ತಗುಲಿ ಹಾಕಿರುತ್ತಾರೆ. ಲೈಕಿಸಲಿ, ಪ್ರೀತಿಸಲಿ, ವಾವ್ ಎಂದು ಕಣ್ಣು ಬಾಯಿ ಬಿಡಲೆಂಬ ಹೆಬ್ಬಯಕೆ. ಒಂದು ನಾರ್ಸಿಸಸ್ ಮತ್ತೊಂದು ನಾರ್ಸಿಸಸ್ಸನ್ನು ನೋಡುವುದಿಲ್ಲ.

ಆಗ ಈ ನಾರ್ಸಿಸಸ್ ಬಡಪೆಟ್ಟಿಗೆ ಬಗ್ಗದೆ ಆ ನಾರ್ಸಿಸಸ್ ಒಳಪೆಟ್ಟಿಗೆಗೆ ಸಂದೇಶ ಕಳುಹಿಸಿ ಮೆಚ್ಚಿಸಿಕೊಳ್ಳುವವರೆಗೂ ಬಿಡುವುದಿಲ್ಲ.
ಆಹಾ, ಈ ಮುಖ ಎಡಗಡೆಯಿಂದ ಎಷ್ಟು ಸುಂದರ, ಹಾ, ಹಾಗೆಯೇ ಬಲದಿಂದಲೂ ಸುಂದರ ಎಂದು ನಾನಾ ಬಗೆಗಳಿಂದಲೂ ನೋಡುತ್ತಾ ಆನಂದದಿಂದ ರಸಾನುಭೂತಿಯಲ್ಲಿ ಮಿಂದೆದ್ದು ನೋಡುಗಳು ಸುರಸವಾದ ಸಾರ್ಥಕ ಪಡೆಯುತ್ತಾರೆಂದುಕೊಂಡಿದ್ದೀರಾ?
ಬಹಳಷ್ಟು ಸೆಲ್ಫೀ ಅಥವಾ ಸ್ವಂತೀ ಪಟಗಳು ಆತ್ಮರತಿಯ ಬಿಂಬಗಳು.

ಸಾಮಾನ್ಯ ಸಮಸ್ಯೆ

ಆತ್ಮರತಿ ಎಂದರೆ ಆತ್ಮವಿಶ್ವಾಸ ಅಥವಾ ಸ್ವಕೇಂದ್ರಿತ ವ್ಯಕ್ತಿತ್ವವೇನಲ್ಲ. ಅದೊಂದು ಮಾನಸಿಕ ಸಮಸ್ಯೆ. ಕಾರಣ ಮತ್ತು ಪರಿಣಾಮಗಳಿರುವಂತಹ ಬಹಳ ಗುರುತರವಾದಂತಹ ಹಾಗೂ ಗಂಭೀರವಾದ ಸಮಸ್ಯೆಯೇ. ಈ ಆತ್ಮರತಿಯ ಅರಿಮೆಗೆ narcissistic personality disorder (NPD)
ಎಂದು ಕರೆಯುತ್ತಾರೆ. ಆಗಲೇ ಹೇಳಿದಂತೆ ಇದು ನಮ್ಮಲ್ಲಿ ಬಹು ವ್ಯಾಪಕವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಸಮಸ್ಯೆಗಳನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ಅವು ಕೊಂಚವಾದರೂ ನಿಯಂತ್ರಣಕ್ಕೆ ಬರುತ್ತವೆ. ನನ್ನಲ್ಲಿ ಆತ್ಮರತಿಯ ಅರಿಮೆ ಇದೆ ಎಂದು ಗುರುತಿಸಿಕೊಂಡರೆ ಪ್ರದರ್ಶನಗಳು ಕೊಂಚ ಕಡಿಮೆಯಾಗಬಹುದು. ಅಥವಾ ಪ್ರದರ್ಶನಗಳಿಗೊಂದು ನಿಯಂತ್ರಣ ಬರಬಹುದು.

ಒಟ್ಟಾರೆ ಆತ್ಮರತಿಯ ಅರಿಮೆಯನ್ನು ಇತರರಲ್ಲಿ ಗುರುತಿಸಲು ಮತ್ತು ತನ್ನಲ್ಲಿ ಗುರುತಿಸಿಕೊಳ್ಳಲು ಫೇಸ್ಬುಕ್ ಮತ್ತು ಫ್ಲೆಕ್ಸುಗಳು ಒಳ್ಳೆಯ ಸಾಧನವಾಗಿವೆ. ಆದರೆ ಈ ಆತ್ಮರತಿಯ ಸಮಸ್ಯೆ ಬರೀ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದರೆ ನಸುನಕ್ಕು ಸುಮ್ಮನಾಗಿಬಿಡಬಹುದಿತ್ತು. ಆದರೆ ಅದು ಗಂಭೀರವಾದ ಒಳಸುಳಿಗಳನ್ನು ಹೊಂದಿವೆ. ಮುಂದೆ ಹೇಳಲಾಗುವ ಎಲ್ಲಾ ಲಕ್ಷಣಗಳೂ ಇರಲೇ ಬೇಕೆಂದೇನಿಲ್ಲ. ಆದರೆ ಇವು ಸಾಮಾನ್ಯ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು. ಇಲ್ಲದೇ ಇರಬಹುದು. ಕೆಲವರಿಗೆ ಇವುಗಳ ಜೊತೆಗೆ ಇನ್ನೂ ಹಲವಿರಬಹುದು.
ತನಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಪಹಪಿಸುವ ಬಯಕೆ.

ತನ್ನ ಕಡೆಗೆ ಗಮನ ಸೆಳೆಯುವ ಮತ್ತು ಪ್ರಶಂಸೆ ಪಡೆಯುವ ಅದುಮಿಡಲಾಗದ ಆಳದೊಳಗಿಂದೇಳುತ್ತಲೇ ಇರುವ ಆಸೆ. ಬೇರೆಯವರ ಬಗ್ಗೆ ಸಹಾನುಭೂತಿ(empathy)ಇಲ್ಲದಿರುವುದು. ಸಂಬಂಧಗಳಲ್ಲಿ ಸಮಸ್ಯೆಗಳು, ಸ್ವಾರ್ಥ, ಇತರರ ಭಾವನೆಗಳನ್ನು ಪರಿಗಣಿಸದಿರುವುದು.
ಒಟ್ಟಾರೆ ಈ ಆತ್ಮರತಿ ಅರಿಮೆಯು ಕಪ್ಪು ಬಿಳಿಪಿನಷ್ಟು ಸ್ಪಷ್ಟವಾಗಿ ವಿಭಜಿಸಿ ಸ್ಪಷ್ಟೀಕರಿಸಲಾಗದ್ದು. ಬೆಳಕಿನ ವಕ್ರೀಭವನದಿಂದ ಅನೇಕ ಬಣ್ಣಗಳು ಮೂಡುವಂತೆ ವಿವಿಧ ರಂಗುಗಳನ್ನು ಪಡೆದುಕೊಳ್ಳುವಂತಹ ಅರಿಮೆ.
ಇನ್ನೂ ಕೆಲವರಲ್ಲಿ ನೀವು ಗಮನಿಸಬಹುದು.

ತಮ್ಮ ಬಗ್ಗೆ ಅತ್ಯಂತ ಮಹೋನ್ನತದ ಎತ್ತರದ ಭವಿಷ್ಯತ್ತಿನ ಭ್ರಮೆಯಲ್ಲಿ ಬಡಬಡಿಸುತ್ತಿರುವರು. ಅವರ ವಿಶ್ವಾಸಕ್ಕೆ, ಯಶಸ್ಸಿಗೆ, ಅಧಿಕಾರಕ್ಕೆ, ಬುದ್ಧಿಮತ್ತೆಗೆ, ಸೌಂದರ್ಯಕ್ಕೆ, ಪ್ರೇಮಕ್ಕೆ ಸಾಟಿಯೇ ಇಲ್ಲವೆಂಬಂತೆ ಹೇಳಿಕೊಳ್ಳುತ್ತಿರುವರು.

ಬರಹಗಾರನೊಬ್ಬ ತಾನು ರಚಿಸಿದ ಕವನ, ಕತೆ ಅಥವಾ ಲೇಖನವನ್ನು ಸಹಜವಾಗಿ ಪ್ರಕಟಿಸುತ್ತಾನೆ. ಬರಿದೇ ಪ್ರಸ್ತುತ ಪಡಿಸುವುದು ಅಥವಾ ಹಂಚಿಕೊಳ್ಳುವುದೇಕೆಂದರೆ ಅದು ಓರ್ವ ವ್ಯಕ್ತಿಯ ಅಥವಾ ಸಮಾಜದ ಅಭಿಪ್ರಾಯವನ್ನು ಅಥವಾ ಒಲವು ನಿಲುವುಗಳನ್ನು ಅಭಿವ್ಯಕ್ತಿಗೊಳಿಸುತ್ತಿರುತ್ತವೆ. ಹಾಗಾಗಿ ಅದನ್ನು ಅವನು ಹಂಚಿಕೊಳ್ಳುವುದು ಸಹಜ. ಈ ಹಂಚಿಕೊಳ್ಳುವಿಕೆಯಲ್ಲಿ ಪ್ರಶಂಸೆಯ ಹಸಿವಿರಲಾರದು. ಆದರೆ, ತಾವೊಂದು ಸುಂದರವಾದ ಮತ್ತು ಅಪರೂಪವಾದ ಅಥವಾ ವಿಶಿಷ್ಟವಾದ ಕತೆಯೊಂದನ್ನು ಅಥವಾ ಕವನವೊಂದನ್ನು ಬರೆದಿದ್ದೇನೆ ಎಂದು ನಿಮ್ಮ ವಾಟ್ಸಪ್ಪಿಗೋ ಅಥವಾ ಇನ್‍ಬಾಕ್ಸಿಗೋ ಯಾರಾದರೂ ಕಳುಹಿಸಿದ್ದಾರೆಂದರೆ, ಅವರು ಬರಿದೇ ಹಂಚಿಕೊಳ್ಳಲು ಕಳುಹಿಸಿಲ್ಲ. ನಿಮಗೂ ವಿಷಯ ತಿಳಿದಿರಲಿ ಎಂಬ ಸಾಧಾರಣ ಧೋರಣೆಯಲ್ಲ.

ಪ್ರಶಂಸೆಗಳನ್ನು ಉಣಬಡಿಸಿ ನನ್ನ ಆತ್ಮರತಿಯ ಹಸಿವನ್ನು ತಣಿಸಿ ಎಂದು. ಪ್ರಶಂಸೆಗಳಿಗಾಗಿ ಪರಿತಪಿಸುವುದು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಹೆಣಗಾಡಿ ಎಂತಾದರೂ ಪಡೆಯುವುದು, ಕಮಿಷನ್ ಕೊಟ್ಟಾದರೂ ಡಾಕ್ಟರೇಟ್ ಪಡೆದು ಡಾ. ಹಾಕಿಕೊಂಡು ಆನಂದಿಸುವುದು; “ಅದು ಸಾಮಾನ್ಯ” ಕೆಟಗರಿಗೆ ತಳ್ಳಬೇಡಿ. ಆತ್ಮರತಿಯ ಹಸಿವೆಯಿಂದ ಬಳಲುತ್ತಿರುವ ಅರಿಮೆ ಎಂಬ ಅರಿವಿರಲಿ. ಅರಿಮೆಗಳಿರುವುದು ಸಾಮಾನ್ಯವಲ್ಲ. ಸಾಮಾನ್ಯವಾಗಿರುವ ಸಮಸ್ಯೆಗಳು.

ನನಗೆ ಅವರು ಗೊತ್ತು

ಒಂದೆರಡು ವರ್ಷಗಳ ಹಿಂದೆ, ನಮ್ಮ ಮನೆಯ ಹತ್ತಿರವೇ ಮರವೊಂದರ ಕೆಳಗೆ ಧೂಮಪಾನ ಮತ್ತು ಮದ್ಯಪಾನದಲ್ಲಿ ನಿರತರಾಗಿದ್ದ ಯುವಕರ ತಂಡವೊಂದು ಮನೆಯೊಳಗಿದ್ದವರಿಗೆ ಕಿರಿಕಿರಿ ಮಾಡುವಷ್ಟು ಉತ್ಸಾಹದಲ್ಲಿ ಊಳಿಡುತ್ತಿದ್ದರು. ನಿದ್ರೆ ಮಾಡುತ್ತಿದ್ದ ನನಗೆ ಭಂಗವಾಗಬಾರದೆಂದು ನನ್ನ ಹೆಂಡತಿ ಅವರ ಬಳಿಗೆ ಹೋಗಿ, “ನೀವು ಹೀಗೆಲ್ಲಾ ಇಲ್ಲಿ ಗಲಾಟೆ ಮಾಡಬಾರದು. ಎದ್ದು ಬಾರ್ ಅಥವಾ ಪಬ್ ಗೆ ಹೋಗಿ” ಎಂದು ಹೇಳಿದಳು. ಅವರಲ್ಲೊಬ್ಬ ಹೇಳಿದನಂತೆ, “ರೀ ಮೇಡಂ, ನಾವ್ಯಾರು ಗೊತ್ತಾ? ರಾಮ ಲಕ್ಷ್ಮಣರ ಹುಡುಗರು” ಎಂದು. “ಯಾವ ರಾಮ ಲಕ್ಷ್ಮಣ? ರಾಮ ಲಕ್ಷ್ಮಣರ ಹುಡುಗರಾದರೆ ಭಜನೆ ಮಾಡ್ಕೊಂಡು ಕೂತ್ಕೊಳ್ಳಿ. ಇಲ್ಯಾಕೆ ಬಂದು ಹೀಗೆ ಗಲಾಟೆ ಮಾಡ್ತೀರಿ” ಎಂದವಳೇ ಮನೆಗೆ ಬಂದು ಪೋಲಿಸರಿಗೆ ಫೋನ್ ಮಾಡಿ, ಅವರು ಬಂದು ರಾಮ ಲಕ್ಷ್ಮಣರ ಹುಡುಗರಿಗೆ ಬೈದು ಬೆತ್ತದ ರುಚಿಯನ್ನೋ ತೋರಿಸಿ ಕಳುಹಿಸಿದ್ದರು.

ರಾಮ ಲಕ್ಷ್ಮಣರಿಬ್ಬರೂ ರೌಡಿಗಳು ಎಂದು ಪೋಲಿಸರು ರಾಮಾಯಣದ ರಾಮ ಲಕ್ಷ್ಮಣರಷ್ಟೇ ತಿಳಿದಿದ್ದ ನನ್ನ ಹೆಂಡತಿಗೆ ತಿಳಿಸಿದರು. ಅವಳಿಗೆ ಅರ್ಥವಾಗದೇ ಹೋಗಿದ್ದು, ಅವರಿಬ್ಬರ ಹೆಸರು ಹೇಳಿದರೆ ತಾನೇಕೆ ಸುಮ್ಮನಾಗಬೇಕೆಂದು ಅವರು ಬಯಸಿದರು ಎಂದು.

ಆತ್ಮರತಿಯ ಸ್ವಕುಚ ಮರ್ಧನದವರದು ಇದಿನ್ನೊಂದು ಲಕ್ಷಣ. ನನಗೆ ಆ ಮಿನಿಸ್ಟರ್ ಗೊತ್ತು, ಈ ಹೀರೋ ಮೊದಲು ನಮ್ಮನೇಲೇ ಬಾಡಿಗೆಗೆ ಇದ್ದ, ಆ ಹೀರೋಯಿನ್ ನನ್ನ ಫ್ರೆಂಡ್‍ಗೆ ಫ್ರೆಂಡು, ಆ ಸಾಧಕ ನಮ್ಮ ಸಂಬಂಧಿಗಳೇ ಆಗಬೇಕು; ಎಂದೆಲ್ಲಾ ಪ್ರಖ್ಯಾತ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಜೊತೆಗೆ ತಮ್ಮ ಗುರುತುಗಳನ್ನು ಅಗತ್ಯವಿಲ್ಲದಿದ್ದರೂ ಪ್ರದರ್ಶಿಸುತ್ತಿರುವುದು.

ಆತ್ಮಪೋಷಣೆ

ಗೌರಿಹಬ್ಬದ ದಿನದಂದು ಸಂಗೀತ ನಿರ್ದೆಶಕ ಹಂಸಲೇಖ ಮತ್ತವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ನಾನೆಲ್ಲೋ ಒಳಗಿದ್ದೆ. ನಮ್ಮ ತಾಯಿಯ ಜೊತೆ ಫೋನಿನಲ್ಲಷ್ಟೇ ಮಾತಾಡಿದ್ದ ಹಂಸಲೇಖರವರಿಗೆ ಅಮ್ಮನ ಮುಖ ಪರಿಚಯವಿಲ್ಲ. ವರಾಂಡದಲ್ಲಿ ನಿಂತಿದ್ದ ಅತ್ತೆಯವರ ಬಳಿಗೆ ಬಂದು “ಅಮ್ಮಾ ನಮಸ್ಕಾರ” ಎಂದರು. ಅವರನ್ನು ನಮ್ಮ ತಾಯಿ ಎಂದು ತಿಳಿದಿದ್ದರು. ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದ ಅವರು “ಆ” ಎಂದರು, ಅಂದರೆ ‘ಸರಿ’ ಅಂತ ಅರ್ಥ. “ನಾನು ಹಂಸಲೇಖ” ಎಂದರು. ಆ ಧ್ವನಿಯಲ್ಲಿ ನಿಮಗೆ ಗೊತ್ತೇ ಇರಬೇಕಾದ ಪರಿಚಯ ಎಂಬ ಧೋರಣೆ. ಆದರೆ ಅವರು ಅಂದಿದ್ದು, “ಅದಕ್ಕೆ?” ಅಂತ. ಹಂಸಲೇಖರಿಗೆ ಒಂದು ಕ್ಷಣ ಕಕ್ಕಾಬಿಕ್ಕಿ. “ನಾನು ಹಂಸಲೇಖ” ಎಂಬ ಭಾವಕ್ಕೆ ತಟ್ಟಂತ ತಡೆ.

ಒಳಗಿಂದ ಬಂದ ನನ್ನ ತಾಯಿ, “ಓ ಹಂಸಲೇಖ ಬನ್ನಿ ಬನ್ನಿ” ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಅವರ ಮುಜುಗರವನ್ನು ತಿಳಿಗೊಳಿಸಿಕೊಳ್ಳಲು ಸಾಧ್ಯವಾಯಿತು. ನಮ್ಮತ್ತೆಗೆ ಹಂಸಲೇಖ ಎಂದರೆ ಯಾರೆಂದೇ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗೊತ್ತಿರುವ ಏಕೈಕ ವ್ಯಕ್ತಿ ಎಂದರೆ ಅವರು ರಾಜ್ ಕುಮಾರ್ ಮಾತ್ರ.

“ನಾನು ಹಂಸಲೇಖ ಎಂಬ ಗರ್ವವನ್ನು ಆ ತಾಯಿ ಮುರಿದರು” ಎಂದು ಹಂಸಲೇಖ ಆಗಾಗ್ಗೆ ನೆನಪು ಬಂದಾಗ ನನ್ನ ಅತ್ತೆಯನ್ನು ನೆನೆಸಿಕೊಳ್ಳುತ್ತಿದ್ದರು. ಆತ್ಮರತಿಯ ಅಭಿವ್ಯಕ್ತಿಯನ್ನು ಪೋಷಿಸಿದಾಗ ಅದು ಉಬ್ಬುವುದು. ಪೋಷಣೆ ಸಿಗದಿದ್ದಾಗ ಅದು ಕುಗ್ಗುವುದು. ಕೆಲವು ಸಲ ಖಿನ್ನತೆಗೇ ಜಾರುವುದು.

ಜನಪ್ರಿಯ ಕಲಾವಿದರೂ ಅದೆಷ್ಟು ಎತ್ತರಕ್ಕೆ ಬೆಳೆದಿದ್ದರೂ, “ನನ್ನ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಯನ್ನು ಕೊಟ್ಟಿಲ್ಲ” ಎಂದು ಸಂದರ್ಶನಗಳಲ್ಲಿ ಅವಲತ್ತುಕೊಳ್ಳುತ್ತಿದ್ದಾಗ ನಾರ್ಸಿಸಸ್‍ನ ಪ್ರಲಾಪದಂತೆ ಕಂಡರೆ ತಪ್ಪೇನೂ ಅಲ್ಲ. ನಾರ್ಸಿಸಸ್ ಅಲ್ಲದಿದ್ದರೂ ನಾರ್ಸಿಸಸ್ ಸಂಬಂಧಿಕರೇ ಆಗಿರುತ್ತಾರೆ.

ಬಹುಪರಾಕ್

ಕೆಲವೊಂದು ಫ್ಲೆಕ್ಸ್‍ಗಳಲ್ಲಿ ಯಾವುದ್ಯಾವುದೋ ಕನ್ನಡ ಹೋರಾಟಗಾರರೆಂದು ಗುರುತಿಸಿಕೊಂಡವರ ಚಿತ್ರಗಳ ಕೆಳಗೆ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ ಎಂದೇನಾದರೂ ಹಾಕಿದ್ದರೆ ತಕ್ಷಣವೇ ನಾನು ನನ್ನ ಪಕ್ಕದವರಿಗೆ ಹೇಳುತ್ತೇನೆ. ಅದು ನನ್ನ ಹೃದಯದ ಹೊರತು ಎಂದು. ತಮ್ಮ ಹೆಸರಿನ ಹಿಂದೆ ಬಿರುದುಬಾವಲಿಗಳನ್ನು ಹಚ್ಚಿಕೊಳ್ಳುವುದು, ಸ್ವಾಮೀಜಿಗಳು ತಮ್ಮ ಆಟೋಗ್ರಾಫ್ ಹಾಕುವಾಗಲೂ ಜಗದ್ಗುರು ಶ್ರೀ ಶ್ರೀ ಶ್ರೀ ಎಂದು ಬರೆದುಕೊಂಡು ತಮ್ಮ ಹೆಸರನ್ನು ಬರೆಯುವುದು ಆತ್ಮರತಿಯ ಮತ್ತೊಂದು ಮಗ್ಗುಲೇ.

ಕೆಲವೊಂದು ಸ್ವಾಮಿಗಳ ಆತ್ಮರತಿಯ ಲಕ್ಷಣಗಳು ಅಳತೆ ಮೀರಿದ್ದಾಗಿರುತ್ತದೆ. ನಮಸ್ಕಾರಕ್ಕೆ ಪ್ರತಿನಮಸ್ಕಾರ ಹೇಳದಿರುವಷ್ಟು. ಅವರನ್ನು ನೋಡಲು ಯಾರಾದರೂ ಬಂದರೆಂದರೆ ಮುಗಿಸಿಕೊಳ್ಳಲು ಪಾದಗಳನ್ನು ಮುಂದೆ ಸರಿಸುವಷ್ಟು. ತಮ್ಮ ಕಿರೀಟಧಾರಿ ಫೋಟೋ, ತಮ್ಮ ತಲೆಯ ಹಿಂದೆ ಫೋಟೋಶಾಪಿನಲ್ಲಿ ಪ್ರಭಾವಳಿಯನ್ನು ಬಿಡಿಸಿಕೊಂಡು ನಗುನಗುತ್ತಾ ಅಭಯ ಹಸ್ತವನ್ನು ತೋರುವ ದೈವೀಪಟವನ್ನು ಮಾಡಿಸಿಕೊಳ್ಳುವಷ್ಟು.ಆತ್ಮರತಿಯರಿಮೆಯವರೋ ಬಹುಬಹು ಪರಾಕು ಪ್ರಿಯರು.

ಈ ಆತ್ಮರತಿಯರಿಮೆಯ ಮತ್ತೊಂದು ಲಕ್ಷಣವೆಂದರೆ ಇತರರದನ್ನು ಪ್ರಶಂಸಿಸಲು ಅಷ್ಟು ಮನಸೊಪ್ಪದಿರುವುದು. ತಾವು ಯಾವುದೋ ಒಂದು ಆ ಕೆಲಸವನ್ನು ಎಂದಿಗೂ ಮಾಡದಿದ್ದರೂ “ಅದೇನು ಮಹಾ. ನಾನೂ ಮಾಡುತ್ತೇನೆ” ಎನ್ನುವುದು. ಸಾಲದಕ್ಕೆ ಅಸೂಯಾಪರವಾಗಿವುದು. ಆತ್ಮರತಿಯೆಂಬ ಅರಿಮೆಗೆ ಅನೇಕಾನೇಕ ಗೀಳುಗಳು ಮತ್ತು ವ್ಯಸನಗಳು ಆಪ್ತ ಸ್ನೇಹಿತರು.

ಫೇಸ್ಬುಕ್ಕಿನಲ್ಲಿ ತಮಗೇ ಆಸಕ್ತಿ ಇರುವ ವಿಷಯವನ್ನೋ ಅಥವಾ ಸಂಗತಿಯನ್ನೋ ಇನ್ನಾರಾದರೂ ತಮಗಿಂತ ಮುಂಚೆಯೇ ಪ್ರಕಟಿಸಿಬಿಟ್ಟರೆ, ಅಥವಾ ತಾವು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬಂತಹ ಬರಹವನ್ನೋ ಅಥವಾ ವಿಷಯವನ್ನೋ ಗೋಡೆಗೆ ಅಂಟಿ ಹಾಕಿಕೊಂಡಿದ್ದರೆ, ಅದನ್ನು ನೋಡಿದರೂ ಹಾಗೆಯೇ ಮುಂದೆ ಹೋಗುತ್ತಾರೆ. ಅದು ತಮಗೂ ಇಷ್ಟವಾದ ಅಥವಾ ಆಸಕ್ತಿಯ ವಿಷಯವಾಗಿದ್ದರೂ ಲೈಕಿಸುವುದಿಲ್ಲ ಅಥವಾ ಕಮೆಂಟಿಸುವುದಿಲ್ಲ. ಅಸೂಯಾಗ್ನಿಯು ಅವರಿಗೆ ಏನನ್ನೂ ಮಾಡದಂತೆ ತಡೆಯುತ್ತದೆ. ಇನ್ನು ‘ನಾನೂ ಇದೇ ವಿಚಾರ ಮಾಡಿದ್ದೆ. ಆದರೆ ನೀವು ಮಾಡಿದ್ದೀರಿ. ಅಭಿನಂದನೆಗಳು’ ಎಂದು ತಿಳಿಸುವುದು ಬಹಳ ದುಬಾರಿಯ ವ್ಯಾಪಾರ ಅವರಿಗೆ.

ಓ, ಆತ್ಮರತಿಯ ಆಯಾಮಗಳು ಅಗಣಿತ. ಆದರೂ ಒಂದಷ್ಟು ಗುಣಿಸಿದ್ದೇನೆ ಮತ್ತು ಪರಿಗಣಿಸಿದ್ದೇನೆ ಮನೋವೈಜ್ಞಾನಿಕ ತಳಹದಿಯಿಂದ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

Published

on

  • ರುದ್ರಪ್ಪ ಹನಗವಾಡಿ 

ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ ತೋರಿಸಬೇಕೆಂದು ಯೋಚಿಸಿದ್ದೆ. ಅಪ್ಪನು ಓಡಾಡಲು ಶಕ್ತಿ ಇದ್ದ ಕಾಲದಲ್ಲಿ ಎಲೆ ವ್ಯಾಪಾರಕ್ಕಾಗಿ ಧಾರವಾಡ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಹರಿಹರ, ದಾವಣಗೆರೆ ಸಂತೆಗಳಲ್ಲಿ ಓಡಾಡುತ್ತಿದ್ದನು. ಇತ್ತೀಚೆಗೆ ಅವರಿಗೆ ಇದ್ದ ಕೆಮ್ಮು ದಮ್ಮುಗಳಿಂದ ಹೊರ ಊರುಗಳಿಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಹೆಚ್ಚಾದ ವಯಸ್ಸಿನ ಕಾರಣದಿಂದಲೇ ಹರಿಹರದಲ್ಲಿ ಹೈಸ್ಕೂಲಿಗೆ ಸೇರಿದ್ದ ಅಣ್ಣ ತಿಪ್ಪಣ್ಣನನ್ನು ಶಾಲೆ ಬಿಡಿಸಿ ತೋಟದ ಕೆಲಸಕ್ಕೆ ಹಾಕಿಕೊಂಡಿದ್ದ. ಹಾಗಾಗಿ ಈಗೆಲ್ಲ ಸಂತೆಗಳಿಗೆ ಅಣ್ಣನನ್ನೇ ಕಳಿಸುತ್ತಿದ್ದ.

ನಾನು ಮೈಸೂರಿನಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಃ ನನ್ನ ಉಪನ್ಯಾಸಕ ಹುದ್ದೆಯನ್ನು ವಿಶ್ವವಿದ್ಯಾಲಯ ಮುಂದುವರೆಸಿತು. ಈ ನಡುವೆ ಪಾಲ್ ಇ ಸೈಮನ್ಸ್ ಅವರ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಹಾಗಾಗಿ ಅವರು ವಾಪಸ್ ಅಮೇರಿಕೆಗೆ ಹೊರಟುಹೋದರು. ಹೋಗುವ ಮುನ್ನ ತಮ್ಮಲ್ಲಿದ್ದ ರ‍್ಯಾಲೀ ಬೈಸಿಕಲ್ ಮತ್ತು ಆರಾಮವಾಗಿ ಕೂರಲು ತೆಗೆದುಕೊಂಡಿದ್ದ `ಇಸೀ ಚೇರ್’ನ್ನು ನನಗೆ ಇಟ್ಟುಕೊಳ್ಳಲು ಹೇಳಿದರು. ಉಳಿದಂತೆ ತನ್ನೆಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಳ್ಳಲು ನಾನು ಸಹಕರಿಸಿದೆ.

ಈ ಸಮಯಕ್ಕಾಗಲೇ ಮಹೇಶ ರಾಜ್ಯಶಾಸ್ತçದಲ್ಲಿ ಎಂ.ಎ. ಮುಗಿಸಿದ್ದ. ಅವನು ಮುಂದೆ ಕಾನೂನು ವ್ಯಾಸಂಗ ಮಾಡಲು ಮೈಸೂರಿನಲ್ಲಿಯೇ ಇರುವ ತೀರ್ಮಾನ ಮಾಡಿದ್ದ. ಹಾಗಾಗಿ ಹಾಲಿ ಇದ್ದ ಮನೆಯನ್ನು ನಾನು ಬಿಟ್ಟು
ಕೆ.ಜಿ. ಕೊಪ್ಪಲಲ್ಲಿ ನಾನು ಅವನೂ ಸೇರಿ ಬಾಡಿಗೆ ಮನೆ ಮಾಡಿದೆವು. ನಂತರದಲ್ಲಿ ನಮ್ಮ ಊರಿನಲ್ಲಿ ಪಿಯುಸಿ ಪಾಸು ಮಾಡಿ ಊರಲ್ಲಿದ್ದ ಬಾರಿಕರ ಮಾಂತೇಶಿ, ಐನೇರ ಮುಕ್ತಾಯಕ್ಕ ಇವರುಗಳು ಕೂಡ ಮೈಸೂರಿಗೆ ಬಂದು ಓದು ಮುಂದುವರೆಸಲು ನನ್ನ ಸಹಾಯ ಕೋರಿದ್ದರು. ನಾನು ಅವರನ್ನೂ ಸಹ ನನ್ನ ಜೊತೆಗೆ ಮೈಸೂರಿಗೆ ಕರೆತಂದು, ಮುಕ್ತಾಯಕ್ಕನಿಗೆ ಸರಸ್ವತಿಪುರಂನಲ್ಲಿ ಸಣ್ಣ ಬಾಡಿಗೆ ಮನೆ ಮಾಡಿಕೊಟ್ಟು ಮಾಂತೇಶಿಗೆ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಬಿ.ಎ. ಮುಂದುವರೆಸಲು ಅವಕಾಶ ಮಾಡಿಕೊಟ್ಟೆ. ಈ ನಡುವೆ ನಾನು ಊರಿಗೆ ಹೋದಾಗ ನನ್ನ ಅವ್ವನ ತಂಗಿ ಮಗ ಸಿರಿಗೇರಿ ರಾಮಣ್ಣ ಬಿ.ಎ. ಪದವಿ ಕೋರ್ಸು ಮುಗಿಸಿ ಕೆಲವು ವಿಷಯಗಳಲ್ಲಿ ಫೇಲಾಗಿ ತನ್ನ ಊರಿನಲ್ಲಿದ್ದ. ಅವನನ್ನು ಕೂಡ ಮೈಸೂರಿಗೆ ಕರೆದುಕೊಂಡು ಬಂದು ನಾವಿದ್ದ ಮನೆಯಲ್ಲಿಟ್ಟುಕೊಂಡು, ಬಾಕಿ ಉಳಿದ ವಿಷಯಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಂತರ ಬಿ.ಎ. ಪಾಸು ಮಾಡಿಕೊಂಡು ಮುಂದೆ ಕೆ.ಇ.ಬಿ.ಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ.

ಕೆ.ಜಿ. ಕೊಪ್ಪಲ ಮನೆಯಲ್ಲಿ ನಾನು ಮಹೇಶ ಅಧಿಕೃತ ಬಾಡಿಗೆದಾರರಾದರೂ ಅನಧಿಕೃತವಾಗಿ ವಿದ್ಯಾರ್ಥಿ ಬಳಗ ಮತ್ತು ನಿರುದ್ಯೋಗಿಗಳ ಬಳಗದ ಸದಸ್ಯರು ಯಾರಾದರೊಬ್ಬರು ಇರುತ್ತಿದ್ದರು. ನಮ್ಮಿಬ್ಬರಿಗೆ ಅಡಿಗೆ ಮಾಡಿಡಲು ಒಪ್ಪಿಕೊಂಡಿದ್ದ ಶಿವಪ್ಪ ಎನ್ನುವ ಅಡಿಗೆಯವನು ನಮ್ಮಲ್ಲಿ ದಿನವೂ ಏರುಪೇರಾಗುತ್ತಿದ್ದ ಸಂಖ್ಯೆ ಮತ್ತು ಹೊಲೆ ಮಾದಿಗರೆಗೆಲ್ಲ ನಾನು ಅಡಿಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದ. ಈ ನಡುವೆ ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೆ ಮಾಂತೇಶಿ ಮತ್ತು ರಾಮಣ್ಣನೇ ತೋಚಿದಂತೆ ಅಡುಗೆ ಮಾಡುತ್ತಿದ್ದರು. ಅದನ್ನೇ ಎಲ್ಲರೂ ಹಂಚಿ ಉಣ್ಣುತ್ತಿದ್ದೆವು. ಇದನ್ನೆಲ್ಲ ನೆನಪಿಸಿಕೊಳ್ಳುವ ಸಮಯಕ್ಕೆ ರಾಮಣ್ಣ ಮತ್ತು ಮಾಂತೇಶಿ ಇಬ್ಬರೂ ತೀರಿಕೊಂಡಿದ್ದಾರೆ. ಮುಕ್ತಾಯಕ್ಕ ಹೊಳೆ ದಾಟಿದ ಮನುಷ್ಯ ಸ್ವಭಾವದಂತೆ ಗುರ್ತಿಲ್ಲದವರಂತೆ ದಾವಣಗೆರೆಯಲ್ಲಿ ಅರಾಮ ಇದ್ದಾಳೆ.

ಇದೇ ಸಮಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಬಗ್ಗೆ ಅಲಹಾಬಾದ್ ಕೈಕೋರ್ಟ್ ನೀಡಿದ ತೀರ್ಪಿನಂತೆ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದುಗೊಳಿಸಿದ ಕಾರಣ ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಿಂದಾಗಿ ಧಾರವಾಡದಲ್ಲಿದ್ದು ಪತ್ರಿಕೆ ನಡೆಸುತ್ತಿದ್ದ ರಾಜಶೇಖರ ಕೋಟಿ ಕೂಡ ಮೈಸೂರಿಗೆ ಬಂದಿದ್ದರು ಹಾಗೂ ನಮ್ಮ ಈ ಬಾಡಿಗೆ ಮನೆಯ ಗೌರವಾನ್ವಿತ ಸದಸ್ಯರಾಗಿದ್ದರು.

ನನಗೆ ಬರುತ್ತಿದ್ದ 600ರೂಗಳ ಸಂಬಳ ಮತ್ತು ಮಹೇಶನ ಊರಿನಿಂದ ಬರುತ್ತಿದ್ದ ಅಕ್ಕಿ ಮತ್ತು ಸಾಂಬಾರು ಪದಾರ್ಥಗಳು ಸೇರಿಕೊಂಡು ಎಲ್ಲರಿಗೂ ಊಟ-ತಿಂಡಿಗಳು ಸಾಧಾರಣವಾಗಿ ನಡೆಯುತ್ತಿದ್ದವು. ಬಿ.ಎ. ಮತ್ತು ಎಂ.ಎ.ಗಳಲ್ಲಿ ಹಾಸ್ಟೆಲ್‌ನಲ್ಲಿನ ಸೊಗಸಾದ ಊಟ ನಂತರ ಪಾಲ್ ಸೈಮನ್ಸ್ ಜೊತೆ ಅಡಿಗೆ ಭಟ್ಟನ ಕೈರುಚಿ ನೋಡಿದ್ದ ನನಗೆ ಇಲ್ಲಿನ ಅನಿಶ್ಚಿತವಾದ ಊಟೋಪಚಾರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೇನು? ನಮ್ಮ ಮಿತ್ರ ಬಳಗದ ಬೆಚ್ಚಗಿನ ಸೆಳೆತಗಳು ಇದನ್ನೆಲ್ಲ ಮೀರಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕಾಲ ಹಾಕುತ್ತಿದ್ದೆವು.
ದಸರಾ ರಜೆ ಬಂದು ಊರಿಗೆ ಹೋದಾಗ ಅಪ್ಪನನ್ನು ಒಮ್ಮೆ ಮೈಸೂರಿಗೆ ಕರೆತಂದು ದಸರಾ ಹಬ್ಬ ಮತ್ತು ನಮ್ಮ ಕಾಲೇಜು ತೋರಿಸಬೇಕೆಂಬ ಆಸೆಯಾಯಿತು. ಈ ಬಾರಿ ದಸರೆಯಲ್ಲಿ ಊರಿಗೆ ಹೋದಾಗ ಸೈಕಲ್ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ನಮ್ಮ ಅಜ್ಜಿ (ಅಪ್ಪನ ತಾಯಿ) ಪಕ್ಕೀರಜ್ಜಿಯ ಹೆಸರಿಗಿದ್ದ ಹಳ್ಳದಾಚೆಗಿನ ಹೊಲದಲ್ಲಿನ ಬೆಳೆ ನೋಡಲು ಹೋಗಿದ್ದೆವು. ಅಣ್ಣ ಸರಿಯಾಗಿ ಕೆಲಸ ಮಾಡದೆ ಎಲ್ಲಾ ಕಡೆ ನಿರೀಕ್ಷಿತ ಉತ್ಪಾದನೆ ಇಲ್ಲವೆಂದು ನನ್ನ ಬಳಿ ಅಪ್ಪ ಅಲವತ್ತುಕೊಂಡಿದ್ದ. ಅವನೂ ಆಗ ತಾನೆ ಓದುವುದನ್ನು ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿದ್ದರಿಂದಲೋ ಏನೋ ವ್ಯವಸಾಯದಲ್ಲಾಗಲೀ, ತೋಟ ಮಾಡುವುದರಲ್ಲಾಗಲೀ, ಅಪ್ಪನ ನಿರೀಕ್ಷಿತ ಮಟ್ಟದ ಕೆಲಸಗಾರನಾಗಿರಲಿಲ್ಲ. ಅದಕ್ಕೆ ನಮ್ಮವ್ವನ ಕಟಿಪಿಟಿಯೂ ಕಾರಣವಾಗಿತ್ತು. ನಮ್ಮ ಸೈಕಲ್ ಸವಾರಿ ಮುಗಿದು ಮನೆಗೆ ಬಂದಾಗ ಮೈಸೂರು ದಸರಾ ನೋಡಲು ಕರೆದುಕೊಂಡು ಹೋಗುವ ತೀರ್ಮಾನ ಅಪ್ಪನಿಗೆ ಹೇಳಿ ಒಪ್ಪಿಸಿದೆ. ನಂತರ ರೈಲಿನಲ್ಲಿ ಮಾರನೇ ದಿನ ಅಪ್ಪನೊಡನೆ ಮೈಸೂರಿಗೆ ಪ್ರಯಾಣ ಬೆಳೆಸಿದೆ.

ಮೈಸೂರು ನಗರ ದಸರಾ ಹಬ್ಬದ ಸಂಭ್ರಮದಲ್ಲಿ ಗಿಜುಗುಡುತ್ತಿತ್ತು. ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದರಿಂದ ಚಾಮುಂಡೇಶ್ವರಿ ಬೆಟ್ಟ, ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಮ್ಮ ಕಾಲೇಜನ್ನು ಎಲ್ಲಾ ತೋರಿಸಿದೆ. ನಾನು ಈಗ್ಗೆ 2-3 ವರ್ಷಗಳ ಹಿಂದೆ ಇಲ್ಲಿಯೇ ಓದಿ ಈಗ ಅಲ್ಲಿಯೇ ಮೇಷ್ಟರಾಗಿ ಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅಪ್ಪ ಖುಷಿಗೊಂಡಿದ್ದ. ಅರಮನೆ, ಚಾಮುಂಡಿ ಬೆಟ್ಟ, ನಮ್ಮ ಕಾಲೇಜು, ಎಲ್ಲ ನೋಡಿದ ಅಪ್ಪ `ನಾನಿನ್ನು ಸತ್ತರೂ ಚಿಂತೆಯಿಲ್ಲ, ನೀನೊಂದು ದಡ ಸೇರಿದೆ’ ಎಂದು ಹೇಳಿ ಪುಳಕಗೊಂಡಿದ್ದ. ಮಾರನೇ ದಿನ ಸಂಜೆ ಕೃಷ್ಣರಾಜ ಸಾಗರ ಅಣೆಕಟ್ಟು ವೀಕ್ಷಣೆಗೆ ಹೋಗುವ ಮಾತಾಡಿದಾಗ ಅವನು ಆಸಕ್ತಿ ತೋರಲಿಲ್ಲ. ಹಾಗಾಗಿ ಅವನನ್ನು ರಾಮನಗರದಲ್ಲಿದ್ದ ಅಕ್ಕನ ಮನೆಗೆ ಬಸ್ಸಿನಲ್ಲಿ ಹತ್ತಿಸಿ ಕಳಿಸಿದೆ.

ದೇಶಾದಾದ್ಯಂತ ತುರ್ತು ಪರಿಸ್ಥಿತಿ, ದೇವರಾಜ ಅರಸರ 20 ಅಂಶದ ಕಾರ್ಯಕ್ರಮಗಳು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜೆಪಿ ಅವರು ಸೇರಿದಂತೆ ವಿರೋಧ ಪಕ್ಷಗಳ ಧುರೀಣರನ್ನು ಬಂಧಿಸಿ ಜೈಲಿನಲ್ಲಿಡುವಂತಾದ ವಿಷಯಗಳ ಚರ್ಚೆ ನಮ್ಮ ಕೆ.ಜಿ.ಕೊಪ್ಪಲ ಮನೆಯಲ್ಲಿ ನಡೆಯುತ್ತಿತ್ತು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳಿಂದ ಆಗಾಗ ನಡೆಯುತ್ತಿದ್ದ ಮುಷ್ಕರಗಳಾಗಲಿ, ವಿದ್ಯಾರ್ಥಿ ಸಂಘದ ಚುನಾವಣೆಗಳಾಗಲೀ ನಡೆಯದೆ, ಎಲ್ಲರೂ ಬೆದರಿದಂತೆ, ಸ್ವಯಂ ನಿಯಂತ್ರಿತರಾದವರಂತೆ ಕೆಲಸ ಮಾಡುವ ವಾತಾವರಣ, ಶೈಕ್ಷಣಿಕ ಮತ್ತು ಸರ್ಕಾರಿ ಕಛೇರಿಗಳಲ್ಲಿ ಮೂಡಿದಂತೆ ತೋರುತ್ತಿತ್ತು.

ಅಪ್ಪನನ್ನು ಊರಿಗೆ ಕಳಿಸಿ, ನಂತರದ ದಿನಗಳಲ್ಲಿ ಓದು, ತರಗತಿಗಳ ಪಾಠ ಮತ್ತು ಸಮಾಜವಾದಿ ಯುವಜನ ಸಭಾ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಕಡೆ ವಾಲಿಕೊಂಡಿದ್ದೆ. ಅಪ್ಪನಿಗೆ 80-85 ವರ್ಷಗಳಾಗಿರಬಹುದು. ಆಗಿದ್ದರೂ ಎಂದೂ ಮನೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ಪರಿಪಾಟ ಅಪ್ಪನಿಗಿರಲಿಲ್ಲ. ಬೆಳಿಗ್ಗೆ ಎದ್ದು ದನಕರುಗಳ ಕೊಟ್ಟಿಗೆಯ ಕಸವನ್ನು ತಿಪ್ಪೆಗೆ ಹಾಕಿ, ಚಾ ಕುಡಿದು ತೋಟಕ್ಕೆ ಹೋದರೆ ಮತ್ತೆ ಬರುವುದು ರಾತ್ರಿಗೆ, ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿ ಊಟ ಮಾಡಿದರೆ ಅವನ ದಿನಚರಿ ಮುಗಿಯುತ್ತಿತ್ತು. ಯಾರಾದರೂ ಊರಿನಿಂದಲೋ ಇಲ್ಲ ನಮ್ಮ ಚಿಕ್ಕಪ್ಪಂದಿರಾಗಿದ್ದ ನಾಗಪ್ಪ, ಮಹಾದೇವಪ್ಪ ಮತ್ತು ಭೀಮಪ್ಪ ಇವರುಗಳು ಏನಾದರೂ ಮಾತಾಡೋ ನೆಪದಲ್ಲಿ ಸಂಜೆ ಸೇರಿಕೊಂಡರೆ ಸಾರಾಯಿ ಸಮಾರಾಧನೆ ಆಗಿ ಊಟ ಮಾಡುತ್ತಿದ್ದರು. ಇಲ್ಲ ಊರಲ್ಲಿನ ಲಿಂಗಾಯತ ಸ್ನೇಹಿತರಲ್ಲಿ ವಾರಕ್ಕೋ 15ದಿನಗಳಿಗೊಮ್ಮೆಯೋ ಗೌಪ್ಯವಾಗಿ ನಮ್ಮಲ್ಲಿನ ಕೋಣೆಯೊಂದರಲ್ಲಿ ಕೂತು ಪಾರ್ಟಿ ಮಾಡುತ್ತಿದ್ದರು. ಅವ್ವ ಲೊಟಗುಡುತ್ತಾ ಜೋಳದ ಹಪ್ಪಳವನ್ನೋ ಇಲ್ಲ ಮನೆಯಲ್ಲಿದ್ದ ಮೊಟ್ಟೆಗಳನ್ನು ಹುರಿದು ಅವರ ಪಾರ್ಟಿಗೆ ನೆಂಚಿಗೆ ಮಾಡಿ ಕೊಡುತ್ತಿದ್ದಳು.

ಅಪ್ಪನ ಅಣ್ಣ ರಂಗಪ್ಪಜ್ಜ ಇದ್ದು, ಅವನು ಮದುವೆಯಾಗಿ, ಮಕ್ಕಳು ಮನಿ ಎಂತೆಲ್ಲಾ ಆದ ಮೇಲೆ ಖಾವಿ ಧರಿಸಿ ಸಾಧುವಾಗಿದ್ದ. ಅವನು ಊರ ಹೊರಗಿನ ಗೋಮಾಳದಲ್ಲಿ ನಮ್ಮಜ್ಜಿ ಫಕ್ಕೀರಜ್ಜಿಯನ್ನು ಸಮಾಧಿ ಮಾಡಿದ್ದು. ಅಲ್ಲಿಯೇ ಒಂದು ವಿಶಾಲ ಗುಡಿಸಲು ಕಟ್ಟಿಕೊಂಡು, ದಿನವೂ ಅಜ್ಜಿಯ ಸಮಾಧಿಯನ್ನು ಪೂಜೆ ಮಾಡಿಕೊಂಡು, ನಮ್ಮ ಊರಿನ ಲಿಂಗಾಯತರ ಮನೆಯಿಂದ ಕಂತೆ ಭಿಕ್ಷೆ ಎತ್ತಿ ಅದರಲ್ಲಿಯೇ ಊಟ ಮಾಡಿಕೊಂಡಿದ್ದ. ಕ್ರಮೇಣ ಎಲ್ಲ ಜನರೂ ಸಾಧು ರಂಗಜ್ಜನ ಮಠ ಎಂದು ಗುರುತಿಸುತ್ತಿದ್ದರು. ಊರಿನ ಲಿಂಗಾಯತರು ಮತ್ತು ಇತರೆ ಜಾತಿಯ ಪ್ರಮುಖರೆಲ್ಲ ಶ್ರಾವಣಮಾಸದಲ್ಲಿ ದೇವಿಪುರಾಣವನ್ನೋ, ಭಜನೆಯನ್ನೋ ಮಾಡುತ್ತಾ ಕೊನೆಯಲ್ಲಿ ಕರಿಯ ಕೊಳವೆಯಂತಹ ವುದರಲ್ಲಿ ಸಾಂಬ್ರಾಣಿಯಂತಹದನ್ನು ನಾದಿ ಚಿಲುಮೆಯಲ್ಲಿ ತುಂಬಿ ಒಂದು ತುದಿಯಲ್ಲಿ ಬಟ್ಟೆಯನ್ನು ಸುತ್ತಿ ಎಡಗೈಯಲ್ಲಿ ಒಂದು ವಿಶೇಷ ಸ್ಟೈಲ್‌ನಲ್ಲಿ ಹಿಡಿದು ಜೋರಾಗಿ ದಮ್ಮು ಎಳೆಯುತ್ತಿದ್ದರು. ಬಲಕ್ಕೊ ಎಡಕ್ಕೊ ಕೂತವನೊಬ್ಬನು ಕಡ್ಡಿ ಗೀರಿ ಬೆಂಕಿ ಹಚ್ಚಿದರೆ ಉಸಿರು ಬಿಗಿ ಹಿಡಿದು ಎಳದಾಗ ರೈಲ್ವೆ ಉಗಿ ಬಂಡಿ ಹೊಗೆ ಉಗುಳಿದಂತೆ, ಮೂಗು ಬಾಯಿಯಿಂದ ಪುಂಖಾನುಪುಂಖವಾಗಿ ಹೊಗೆ ಹೊರಬರುತ್ತಿತ್ತು. ಹಾಗೆ ಎಳೆದವನು ಮತ್ತೊಬ್ಬನಿಗೆ ಭಯ ಮಿಶ್ರಿತ ಭಕ್ತಿಯಿಂದ ನಮಸ್ಕರಿಸಿ `ಗುರುವೇ ತಿಪ್ಪೇಶಾ’ ಎಂಬ ಉದ್ಘಾರದೊಂದಿಗೆ ಕೊಡುತ್ತಿದ್ದನು. ಆತನೂ ಸೇದಿ ಭಗವಂತನ ಕೃಪೆ, ದೇವಿಯ ಮಹಾತ್ಮೆ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದರು. ಈ ಪಾರ್ಟಿಯಲ್ಲಿ ಅಪ್ಪನೂ ಆಗಾಗ ಅಲ್ಲಿ ಸೇರಿಕೊಳ್ಳುತ್ತಿದ್ದನು. ನಾವೆಲ್ಲ ಕೆಲವು ಹುಡುಗರು ನಮ್ಮ ಕೇರಿಯಿಂದ ಪ್ರಸಾದದ ಆಸೆಗಾಗಿ ಅಲ್ಲಿಗೆ ಹೋಗುತ್ತಿದ್ದೆವು. ಏಕೆಂದರೆ ಪ್ರತಿ ಭಜನೆ ಮುಗಿದಾಕ್ಷಣ ಪೂಜೆಗಾಗಿ ಒಡೆದ ತೆಂಗಿನ ಕಾಯಿಯ ಹಸಿ ಕೊಬ್ಬರಿಯ ಚೂರುಗಳು, ಜೊತೆಗೆ ಕತ್ತರಿಸಿದ ಬಾಳೆಯ ಹಣ್ಣು ಮಂಡಕ್ಕಿ ಕಾರ ಎಲ್ಲ ಸೇರಿಸಿ ಎಲ್ಲರಿಗೂ ಹಂಚುತ್ತಿದ್ದರು.

ಮಠದ ರಂಗಪ್ಪಜ್ಜ ನಮಗೆ ಸ್ವಂತ ಅಪ್ಪನ ಅಣ್ಣ, ದೊಡ್ಡಪ್ಪನಾಗಿದ್ದವರು ಎನ್ನುವ ವಿಷಯ ನಮಗಾರಿಗೂ ನಮ್ಮ ಬಾಲ್ಯ ಕಳೆಯುವವರೆಗೂ ಗೊತ್ತೇ ಇರಲಿಲ್ಲ. ನಾನು ಮತ್ತೆ ನಮ್ಮ ಕೇರಿಯ ಕಡೆಮನೆ ತಿಪ್ಪಣ್ಣ, ಕರಿಬಸಪ್ಪ, ಕುಬೇರ ಜೋಗಪ್ಪ ತುಂಗಣ್ಣ ಸಂಜೆ 4-5 ಗಂಟೆಯ ಸಮಯಕ್ಕೆ ಮಠದ ಕಡೆಗೆ ಹೋಗಿ ಅಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ಮಠದಲ್ಲಿನ ಗಿಡಬಳ್ಳಿಗಳಿಗೆ ಹೊಯ್ಯುತ್ತಿದ್ದವು. ನೀರು ಸೇದಿ ಹಾಕಿದ ನಾಟಕ ಮುಗಿದ ಮೇಲೆ ಎಲ್ಲರಿಗೂ ಅಲ್ಲಿದ್ದ ಮಣ್ಣಿನ ಮುಚ್ಚಳಗಳಲ್ಲಿ ಊರಲ್ಲಿನ ಕಂತೆ ಭಿಕ್ಷೆಯಲ್ಲಿ ತಂದ ರೊಟ್ಟಿ ಮತ್ತು ಎಲ್ಲರ ಮನೆಯ ಸಾರನ್ನು ಒಂದೇ ಮಡಕೆಯಲ್ಲಿ ಕುದಿಸಿಟ್ಟದ್ದನ್ನು ಬಡಿಸುತ್ತಿದ್ದರು. ಅದನ್ನೆಲ್ಲ ನಾವು ತುಂಬಾ ಖುಷಿಯಿಂದ ಉಣ್ಣುತ್ತಿದ್ದೆವು. ನಂತರ ಎಲ್ಲ ಮಣ್ಣಿನ ಮುಚ್ಚಳದಂತಿದ್ದ ತಟ್ಟೆಯನ್ನು ತೊಳೆದಿಟ್ಟು ಅವರ ಕಾಲಿಗೆ ನಮಸ್ಕರಿಸಿ ಮನೆಗೆ ಹೋಗುತ್ತಿದ್ದೆವು. ನಮ್ಮಲ್ಲೆಲ್ಲ ದೊಡ್ಡವನಾಗಿದ್ದ ಕಡೆಮನೆ ತಿಪ್ಪಣ್ಣನೇ ನಮ್ಮ ಎಲ್ಲರನ್ನೂ ಕೂಡಿಸಿ ಕರೆದುಕೊಂಡು ಹೋಗುತ್ತಿದ್ದ. ಎಲ್ಲರಿಗೂ ಬೇರೆ ಬೇರೆ ನೀಡಿದ ಮೇಲೆ ಮಠದೊಳಗೆ ಅಜ್ಜ ಹೋಗುತ್ತಿದ್ದರು. ನಮಗೆ ನೀಡಿದ ರೊಟ್ಟಿಯಲ್ಲಿ ಕಡೆಮನೆ ತಿಪ್ಪಣ್ಣನಿಗೆ ಹೆಚ್ಚುವರಿಯಾಗಿ ತನಗೆ ಕೊಡುವುದರ ಬಗ್ಗೆ ಬಂದವರಿಗೆಲ್ಲ ಮೊದಲೇ ಕೊಡುವಂತೆ ತಾಕೀತು ಮಾಡಿರುತ್ತಿದ್ದ. ಕೆಲವು ಸಮಯ ತಟ್ಟೆಗಳು ಕಡಿಮೆ ಇದ್ದುದರಿಂದ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಮೂವರು ಕೂತು ಉಣ್ಣುವುದಾದರೆ, ನಮಗೆ ಸಾಕೆಂದು ಮೊದಲೇ ಎದ್ದು ಅವನಿಗೆ ಹೆಚ್ಚಿನ ರೊಟ್ಟಿ ಉಣ್ಣಲು ಅವಕಾಶ ಮಾಡಿಕೊಡಬೇಕಾಗಿತ್ತು. ಹಾಗೆ ಮಾಡದಿದ್ದರೆ ನಾಳೆ ಮತ್ತೆ ನಿಮ್ಮನ್ನು ಇಲ್ಲಿಗೆ ಕರೆತರುವುದಿಲ್ಲ ಎನ್ನೋ ಧಮಕಿ ಹಾಕುತ್ತಿದ್ದ. ಅವನು ನಮ್ಮೆಲ್ಲರಿಗಿಂತಲೂ 2-3 ವರ್ಷಕ್ಕೂ ಹಿರಿಯವನು, ನಮ್ಮ ಚಿಕ್ಕಪ್ಪ ಭೀಮಪ್ಪನ ಮಗನಾಗಿದ್ದ ಅವರಿಗೆ ಮನೆಯಲ್ಲಿ ಆರೇಳು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಾರಣ ಇವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ವಿಶೇಷವಾಗಿ ಬುಗುರಿ, ಚಿನ್ನಿ ದಾಂಡು, ಕೀಳಾಪಟ್ಟಿ ಆಟಗಳಲ್ಲಿ ನಮಗೆ ಗುರುವಾಗಿದ್ದವನು. ಆದರೆ ಊರ ಎಲ್ಲರ ದೃಷ್ಟಿಯಲ್ಲಿ ದಂಡಪಿಂಡ ಎಂಬಂತೆ ಅವನನ್ನು ಅವರ ಮನೆಯವರೂ ಸೇರಿದಂತೆ ಊರಿನಲ್ಲಿ ಜನ ಪರಿಗಣಿಸಿದ್ದರು. ಆದರೀಗ ಒಂದು ದಂಡನ್ನೇ ಕಟ್ಟುವಷ್ಟು ಮಕ್ಕಳನ್ನು, ಮೊಮ್ಮಕ್ಕಳನ್ನು ಪಡೆದು ದುಡಿಮೆ ಮಾಡಿಕೊಂಡು ಹಾಯಾಗಿದ್ದಾನೆ. ಊರಲ್ಲಿರುವಾಗಲೆಲ್ಲ ನನ್ನನ್ನು ಸೆಳೆದುಕೊಂಡಿದ್ದ ಅವನು ನಂತರದ ದಿನಗಳಲ್ಲಿ ಸಣ್ಣ ವ್ಯತ್ಯಾಸದಿಂದ ದೂರವಾಗಿದ್ದಾನೆ. ಈಗ ಮತ್ತೆ ಕರೆದು ಮಾತಾಡಿಸಬೇಕೆಂದು ನೆನಪಾದಾಗ ಅನ್ನಿಸುತ್ತಿದೆ.

ಅಜ್ಜನ ಗುಡಿಸಲು ಅರ್ಥಾತ್ ಮಠ ಸುಮಾರು ಅರ್ಧ ಎಕರೆಯಲ್ಲಿ ಸುತ್ತ ಬೇಲಿಯ ಮಧ್ಯದಲ್ಲಿನ ಅಜ್ಜಿ ಸಮಾದಿಗೆ ಮತ್ತು ಅಜ್ಜಯ್ಯ ಇರುವಿಕೆಗೆ ತೆಂಗಿನ ಗರಿ ಮತ್ತು ಭತ್ತದ ಹುಲ್ಲಿನ ಮುಚ್ಚಳಿಕೆಯಿಂದ ಗಾಳಿ ಬಿಸಿಲು ಮಳೆಗಳಿಂದ ರಕ್ಷಣೆ ಪಡೆದಿತ್ತು. ಆಗಾಗ ಅಜ್ಜಯ್ಯ ಮಠ ಕಟ್ಟುತ್ತೇನೆಂದು ಹಣ ಸಂಗ್ರಹದಲ್ಲಿ ತೊಡಗಿದ್ದರೆಂದು, ಅಪ್ಪ ಮನೆಯಲ್ಲಿ ಮಾತಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೊಡ್ಡಪ್ಪ ಮನೆಗೆ ಬಂದರೆ ಅವರಿಗೆ ವಿಶೇಷವಾಗಿ ಪಾದಪೂಜೆ ಮಾಡಿ ಆ ನೀರನ್ನೆಲ್ಲ ಮನೆಯ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸುತ್ತಿದ್ದರು. ಹಾಗೆ ನಮ್ಮಲ್ಲಿನ ಇತರೆ ನಾಲ್ಕು ಚಲವಾದಿ ಮನೆತನದವರೂ ಕರೆದು ಪಾದಪೂಜೆ ಮಾಡುತ್ತಿದ್ದರು. ನಮ್ಮೂರ ಹತ್ತಿರದ ಕಡ್ಲಬಾಳ ಊರಿನ ತೇರಿಗೆ ಮತ್ತು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಹೋಗಿ ವಾರಗಟ್ಟಲೇ ಅಲ್ಲಿದ್ದು, ಅನೇಕ ಇತರೆ ಸಾಧು ಸಂತರ ಸಂಗಡದಲ್ಲಿ ಭಜನೆ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದುದರ ಬಗ್ಗೆ ಅವರ ಜೊತೆ ಹೋಗಿ ಬಂದವರು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ಈ ರೀತಿಯಲ್ಲಿ ಇದ್ದ ದೊಡ್ಡಪ್ಪ ನಾನು ಸಾಗರದ ಹೈಸ್ಕೂಲಿನಲ್ಲಿ ಓದುವ ಸಮಯದಲ್ಲಿ ಒಂದೆರಡು ದಿನಗಳ ಅಸ್ವಸ್ಥತೆಯಿಂದ ಹರಿಹರದ ಹತ್ತಿರವಿರುವ ಗುತ್ತೂರಿನ ಗುರು ಬಸಜ್ಜನ ಮಠದಲ್ಲಿ ತೀರಿಹೋಗಿದ್ದರು. ಅಲ್ಲಿಯ ಮಠದಲ್ಲಿಯೇ ಅವರ ಸಮಾಧಿ ಮಾಡಿದ್ದಾರೆ. ಅದೇ ಮಠದಲ್ಲಿ ನನ್ನ ಗುರುಗಳಾಗಿದ್ದ
ಪ್ರೊ. ಬಿ. ಕೃಷ್ಣಪ್ಪನವರು ಮತ್ತವರ ತಂಗಿ ಹಾಲಮ್ಮ ತಮ್ಮ ಬಾಲ್ಯದ ದಿನಗಳಲ್ಲಿ ಗಿಡಗಳಿಗೆ ನೀರು ಹಾಕುವುದು, ಹೂ ಕೀಳುವ ಸೇವೆ ಮಾಡುತ್ತಿದ್ದರು ಎಂಬುದನ್ನು ಕೃಷ್ಣಪ್ಪನವರ ತಂಗಿ ಹಾಲಜ್ಜಿ ಆಗಾಗ ನಮ್ಮೂರಿಗೆ ಬಂದಾಗ ಜ್ಞಾಪಿಸಿಕೊಳ್ಳುತ್ತಿದ್ದರು. ಅಪ್ಪನ ಅಣ್ಣ ಈ ರೀತಿಯ ಜೀವನ ಸಾಗಿಸುತ್ತಾ ಕಾಲವಾದರೆ ಅಪ್ಪ ಒಂದಲ್ಲವೆಂದರೂ ಎರಡು ಮದುವೆಯಾಗಿ, ಮ್ಯಾಳ ಮಾಡುತ್ತಾ ಅವರೆಲ್ಲರಿಗೂ ನಾಯಕನಾಗಿ, ಮಾಡಿದ ಹೊಲಮನಿ ಕೆಲಸಗಳಲ್ಲಿ ಸೈ ಎನಿಸಿಕೊಂಡು, ನಾನು ಎಂ.ಎ. ಮಾಡಿ ಅಧ್ಯಾಪಕನಾಗಿರುವವರೆಗೆ ಬದುಕಿದ್ದೇ ಒಂದು ಪವಾಡ. ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಸಣ್ಣಪುಟ್ಟ ಖಾಯಿಲೆಗಳಿಗೆ ಜಗ್ಗುತ್ತಿರಲಿಲ್ಲ ಯವ್ವನದ ಕಾಲಘಟ್ಟದಲ್ಲಿ ಎಲೆ ಅಡಿಕೆ ತಂಬಾಕು ಬೀಡಿ ಸೇದುತ್ತಿದ್ದ ಅಪ್ಪ ನಂತರದ ದಿನಗಳಲ್ಲಿ ಕೆಮ್ಮು ದಮ್ಮುಗಳ ಕಾಟದಿಂದ ಅವನ್ನೆಲ್ಲ ಬಿಟ್ಟು ಬಿಟ್ಟಿದ್ದನು. ನಾನು ಕೆಲಸಕ್ಕೆ ಸೇರಿ ಊರಿಗೆ ಹೋದಾಗ ಅವ್ವನಿಗೆ, ಓಬಜ್ಜನಿಗೆ, ಅಪ್ಪನಿಗೆ ವಿಶೇಷವಾಗಿ ಸಣ್ಣ ಮೊತ್ತದ ಹಣ ಕೊಡಲು ಹೋದಾಗಲೆಲ್ಲ `ನನಗ್ಯಾಕೆ ಕೊಡುತ್ತೀ, ನಿಮ್ಮವ್ವನಿಗೇ ಕೊಡು’ ಎಂದು ಹೇಳಿ ಸುಮ್ಮನಾಗುತ್ತಿದ್ದ. ಇಂತಹ ಅಪ್ಪನನ್ನು ನಾನು ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ ಒಂದು ವರ್ಷ ತುಂಬಿದ ದಿನ (4.12.1975)ರಲ್ಲಿ ನಾನು ಎರಡನೇ ಬಿ.ಎ. ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುವಾಗ ತಂತಿ ಸಂದೇಶದಲ್ಲಿ ಅಪ್ಪ ತೀರಿದ ಸುದ್ದಿ ಹೊತ್ತು ತಂದಿತ್ತು. ಅಂದಿಗೆ ಸಂಬಳ ಬಂದು 4 ದಿನಗಳಾಗಿದ್ದರೂ ಎಲ್ಲಾ ಬಟವಾಡೆ ಮಾಡಿ ನನ್ನಲ್ಲಿ 50ರೂಗಳು ಮಾತ್ರ ಜೇಬಿನಲ್ಲಿದ್ದವು. ನೇರ ರಮಾವಿಲಾಸ್ ರಸ್ತೆಯಲ್ಲಿದ್ದ ಮಯೂರ ಪ್ರಿಂರ‍್ಸ್ನಲ್ಲಿಗೆ ಹೋಗಿ ಪಿ. ಮಲ್ಲೇಶ್ ಅವರಿಂದ 100 ರೂಗಳ ಸಾಲ ಪಡೆದು ನಾನು ಮತ್ತು ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ನಮ್ಮೂರಿನ ಹುಡುಗ ಮಾಂತೇಶಿಯನ್ನು ಕರೆದುಕೊಂಡು ರಾತ್ರಿಯ ಬಸ್ ಹತ್ತಿ ಬೆಳಗಿನ ಜಾವಕ್ಕೆ ಊರಿಗೆ ಬಂದು ಸೇರಿದೆ. ಅಪ್ಪನ ಸೋತ ಮುಖನೋಡಿ ನಾನು ತೀವ್ರ ಮೌನಕ್ಕೆ ಜಾರಿದೆ. ಎಂದೂ ಏನಲೇ ಎಂದು ಗದರಿಸದೆ ತನ್ನೆಲ್ಲ ಶಕ್ತಿ ಮೀರಿದ ದುಡಿಮೆಯಿಂದ, ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ, ಅವನ ಜೀವನದ ಹೋರಾಟಕ್ಕೆ ಅಂತ್ಯ ಹಾಡಿದ್ದ. ನಮ್ಮೆಲ್ಲರನ್ನು ತಿದ್ದಿ ಬೆಳೆಸಿ ಬದುಕಲು ನಮಗೆ ಅನುವು ಮಾಡಿ ಇಹಲೋಕದ ವ್ಯಾಪಾರ ಮುಗಿಸಿದ್ದ ಅಪ್ಪನ ನೆನಪು ನನ್ನ ಮನಸ್ಸಿನಾಳದಲ್ಲಿ ದಿನವೂ ಸ್ಫೂರ್ತಿಯಾಗಿ, ಸಾಮಾನ್ಯ ನ್ಯಾಯದ ದೊಂದಿಯಾಗಿ ಅನುರಣಿಸುತ್ತಿರುತ್ತಾನೆ.

ನಾನು ಕೆ.ಜಿ. ಕೊಪ್ಪಲಿನ ಮನೆಯಿಂದ ಮಹಾರಾಜ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬಿಡುವಿನ ವೇಳೆಯಲ್ಲಿ ನಾನು ಮಹೇಶ ಇತರೆ ಸ್ನೇಹಿತರು ಜೆಪಿ ಚಳುವಳಿ ನವನಿರ್ಮಾಣ ಕ್ರಾಂತಿ, ಜಾತಿ ವಿನಾಶ ಸಮ್ಮೇಳನ, ಬೂಸಾ ಚಳುವಳಿಗಳಲ್ಲಿ ಭಾಗವಹಿಸಿದ್ದೆವು. ಈ ಎಲ್ಲ ಸಂಘಟನೆಗಳ ಮೂಲ ಹೋರಾಟಗಾರರು ಮೈಸೂರಿನಲ್ಲಿದ್ದ ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್, ಕೆ. ರಾಮದಾಸ್, ಮಾದೇವ, ಭಕ್ತ, ರಾಜಶೇಖರ ಕೋಟಿ, ರಾಮದೇವ ರಾಕೆ, ನಂಜುಂಡೇ ಗೌಡ, ಗೋವಿಂದಯ್ಯ, ಶಂಕರಲಿಂಗಪ್ಪ, ಗೊಟ್ಟಿಗೆರೆ ಶಿವರಾಜು, ಇಂದೂಧರ ಹೊನ್ನಾಪುರ, ದೇವನೂರ ಶಿವಮಲ್ಲು, ವಿಶ್ವವಿದ್ಯಾಲಯದ ಗಂಗೋತ್ರಿಯಿಂದ ಪ್ರೊ. ರಾಮಲಿಂಗಂ, ಕೆ.ಎಂ. ಜಯರಾಮಯ್ಯ, ಹೊರೆಯಾಲ ದೊರೆಸ್ವಾಮಿ, ಚಂದ್ರಶೇಖರ ತಾಳ್ಯ, ಎಲ್ಲರೂ ಇದೇ ಪೂರ್ಣಾವಧಿ ಕೆಲಸವೆಂಬಂತೆ ತೊಡಗಿಸಿಕೊಂಡಿದ್ದರು. ಹಾಗೆಯೇ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ `ಮ್ಯಾನ್ ಕೈಂಡ್’, `ಬಂಡಾಯ’, `ಶೋಷಿತ’, `ನರ’, `ಪಂಚಮ’ ಎಂಬ ಅಕಾಲಿಕ ಪತ್ರಿಕೆಗಳನ್ನು ಅಸಾಧ್ಯ ಹಣಕಾಸಿನ ತೊಂದರೆಗಳ ನಡುವೆಯೂ ಹೊರ ತರುತ್ತಿದ್ದರು.

ಆ ದಿನಗಳಲ್ಲಿ ಇಂತಹದೇ ಪತ್ರಿಕೆಯಲ್ಲಿ ನಮ್ಮೂರಿನಲ್ಲಿ ನಡೆದ ಹಿಂದುಳಿದ ಜಾತಿಯ ಹುಡುಗಿಯೊಬ್ಬಳನ್ನು ಲಿಂಗಾಯತರ ಹುಡುಗನೊಬ್ಬ ಕೆಣಕಿದ ಬಗ್ಗೆ ನಾನು ಊರಿಗೆ ಹೋದಾಗ ತಿಳಿಯಿತು. ಈ ಕೃತ್ಯ ಎಸಗಿದವನನ್ನು ಯಾರೂ ವಿಚಾರಿಸುವಂತಿರಲಿಲ್ಲ. ಹುಡುಗಿಯ ಕಡೆಯವರು ಯಾರೂ ಅದನ್ನು ಪ್ರಶ್ನಿಸಲೂ ಇಲ್ಲ. ಇದೆಲ್ಲ ಗೊತ್ತಾದ ನಾನು ನರ ಬಂಡಾಯದ ಪತ್ರಿಕೆಗೆ ಬರೆದು ಪ್ರಕಟಿಸಿದ್ದೆ. ಆ ಪ್ರತಿಗಳನ್ನು ಮಾಂತೇಶಿ ಊರಿಗೆ ತೆಗೆದುಕೊಂಡು ಹೋಗಿ ಊರಲ್ಲೆಲ್ಲಾ ಹಂಚಿದನು. ವಿಷಯ ತಿಳಿದ ಊರಿನ ಪ್ರಮುಖರು, ಈ ರುದ್ರಪ್ಪ ಊರ ಮಾನ ಹರಾಜು ಹಾಕಿದ ಎಂದೆಲ್ಲ ಕೂಗಾಡಿದ್ದರು.

`ಅವನು ಊರಿಗೆ ಬರಲಿ ವಿಚಾರಿಸುತ್ತೇವೆ’ ಎಂದೆಲ್ಲಾ ಕೂಗಾಡಿದರು. ನಾನು ತಿಂಗಳೊಪ್ಪತ್ತಿನಲ್ಲಿ ಊರಿಗೆ ಹೋದಾಗ ಯಾರೂ ಆ ಬಗ್ಗೆ ಮಾತಾಡಲಿಲ್ಲ. ಮುಖ್ಯ ಕಾರಣ ಬರೆದುದೆಲ್ಲ ನಿಜವಾದ ಘಟನೆಯಾಗಿತ್ತು. ಮತ್ತೆ ಹೆಚ್ಚು ಕೆದಕಿದರೆ ತಮಗೆ ಇದು ಅವಮಾನದ ಘಟನೆಯ ಮರು ಪ್ರಸ್ತಾಪವಾಗಿ ವಿಪರೀತಕ್ಕೆ ಹೋಗಬಹುದೆಂದು ಸುಮ್ಮನಾಗಿದ್ದರು. ಹೀಗೆ ನಾನು ಮೈಸೂರಲ್ಲಿದ್ದಾಗ ಊರ ಘಟನೆಗಳಿಗೆ ಸ್ಪಂದಿಸುತ್ತಾ ಇರುವುದು ಮೈಸೂರಿನಲ್ಲಿದ್ದ ಪ್ರಗತಿಪರ ಸಂಘಟನೆಗಳ ಮತ್ತು ವಿಚಾರವಂತರ ಒಡನಾಟವೇ ಅದಕ್ಕೆ ಕಾರಣವಾಗಿತ್ತು ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending