ಅಂತರಂಗ
ಅರಿಮೆಯ ಅರಿವಿರಲಿ-55 : ಭಯಗಳು ಭಾವಗಳಾಗೆ
- ಯೋಗೇಶ್ ಮಾಸ್ಟರ್
ಆಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು ಮೂಡುವವು. ಭಾವನೆಗಳು ಉಂಟಾಗುವವು.
ಈಗ ಹುಟ್ಟುವ ಒಂದು ಬಗೆಯ ಆಲೋಚನೆಗೆ ಅಂದೆಂದೋ ಬಿತ್ತಿರುವ ಆಲೋಚನೆಯು ಬೀಜವಾಗಿ ಮೊಳೆದಿರುತ್ತವೆ. ಇರಲಿ, ಮನುಷ್ಯನ ಮೂಲ ಪ್ರವೃತ್ತಿಗಳು ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಹಾಗೆಯೇ ಆಲೋಚನೆಗಳೂ ಆ ಪ್ರವೃತ್ತಿಗಳನ್ನು ಪ್ರೇರೇಪಿಸುತ್ತವೆ.
ಭಾವನೆಗಳು ಆಲೋಚನೆಗಳನ್ನು, ಆಲೋಚನೆಗಳು ಭಾವನೆಗಳನ್ನು, ಇವೆರಡೂ ಪ್ರವೃತ್ತಿಗಳನ್ನು, ಪ್ರವೃತ್ತಿಗಳು ಇವೆಲ್ಲವನ್ನೂ ಪ್ರೇರೇಪಿಸುತ್ತಿರುತ್ತವೆ. ಒಟ್ಟಾರೆ, ಮನಸ್ಸೆಂಬ ತರಂಗವಿದೆಯಲ್ಲಾ ಅದು ಎಲ್ಲದಕ್ಕೂ ವಾಹಕವಾಗುತ್ತದೆ, ಮಿಡಿಯುತ್ತದೆ ಮತ್ತು ಅಲೆಯಾಗುತ್ತದೆ.
ಆತಂಕಗಳ ಪ್ರಸಂಗಗಳು
ವೇದಿಕೆಯ ಮೇಲೆ ಮಾತಾಡಿ ರೂಢಿ ಇಲ್ಲದಿರುವಾಗ ಅಥವಾ ಮಾತಾಡುವ ವಿಷಯದಲ್ಲಿ ಗೊಂದಲ ಇರುವಾಗ ಅಥವಾ ಸ್ಪಷ್ಟತೆ ಇಲ್ಲದಿರುವಾಗ ಅಥವಾ ಬಹಳಷ್ಟು ಜನ ಸೇರಿರುವ ಸಭೆಯನ್ನು ಎದುರಿಸುವ ಭಯವಿರುವಾಗ ವೇದಿಕೆಗೆ ಹೋಗುವಾಗ ಅಥವಾ ಹೋಗಿ ನಿಂತಾದ ಮೇಲೆ ಹೊಟ್ಟೆಯಲ್ಲಿ ಏನೋ ಒಂದು ತರ ಆಗುತ್ತಿರುತ್ತದೆ.
ಕೆಲವೊಮ್ಮೆ ಧಾರಾಕಾರವಾಗಿ ಬೆವರು ಸುರಿಯುತ್ತಿರುತ್ತದೆ. ಮತ್ತೂ ಕೆಲವೊಮ್ಮೆ ಹೇಳಬೇಕಾದುದೆಲ್ಲಾ ಮರೆತೇ ಹೋಗತ್ತೆ. ನಾಲಿಗೆ ತೊದಲುತ್ತದೆ, ಗಂಟಲು ಒಣಗುತ್ತದೆ. ಕೈ ಕಾಲುಗಳು ನಡುಗುತ್ತಿರುತ್ತದೆ. ಹಾಗಾಗುವುದು ಏಕೆ?
ನಿಮ್ಮ ಮನೆಯವರೋ ಸ್ನೇಹಿತರೋ ಅದ್ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಿಮಗೆ ಆ ಸ್ಥಳದಲ್ಲಿ ದೊಡ್ಡ ಗಲಭೆಯಾಗಿದೆ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ, ವಾಹನಗಳಿಗೆ ಕಲ್ಲು ತೂರುತ್ತಿದ್ದಾರೆ ಎಂದೆಲ್ಲಾ ಸುದ್ಧಿ ಬರುತ್ತದೆ. ನೀವು ಸಂಪರ್ಕಿಸಲು ಯತ್ನಿಸಿದರೆ ನಿಮ್ಮವರ ಫೋನ್ ಸ್ವಿಚ್ ಆಫ್ ಆಗಿದೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಕೇಳುತ್ತಿರುತ್ತದೆ. ಆಗ ಹೊಟ್ಟೆಯಲ್ಲಿ ಸಂಕಟ ಪ್ರಾರಂಭವಾಗುತ್ತದೆ.
ಕೆಲವೊಮ್ಮೆ ಅದು ವಿಪರೀತಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಒಮ್ಮೆ ಹೋಗಿ ಬಂದರೂ ಮತ್ತೆ ಮತ್ತೆ ಹೋಗುವಂತಾಗುತ್ತದೆ. ಏಕೆ?
ತಡೆಯಲಾರದಷ್ಟು ಬೇಸರವಾಗಿದೆ. ಕೋಪ ಬಂದಿದೆ ಅಥವಾ ಆತಂಕವಾಗಿದೆ ಎಂದರೆ ಉಸಿರಾಟ ವಿಪರೀತ ಏರಿಳಿಯುತ್ತಿರುತ್ತದೆ. ಬೆವರುತ್ತಿದೆ. ಕೈ ಕಾಲುಗಳು ನಡುಗುತ್ತವೆ. ಏನು ಮಾಡಬೇಕೆಂದು ತೋಚುವುದಿಲ್ಲ. ಹೀಗೇಕಾಗುತ್ತದೆ?
ನಮಗೆ ಇಷ್ಟವಾದವರೊಬ್ಬರು ಯಾವುದೋ ಊರಿನಿಂದ ಬರುತ್ತಿದ್ದಾರೆ. ನಮ್ಮ ಪ್ರೀತಿಪಾತ್ರರು ನಮಗಾಗಿ ಬರುತ್ತಾರೆ. ಯಾವುದೋ ಹಬ್ಬ. ಕೆಲಸಕ್ಕೆ ರಜೆ ಹಾಕಿ ಎಲ್ಲರೊಟ್ಟಿಗೆ ಮನೆಯಲ್ಲಿರುತ್ತೇವೆ. ಉತ್ಸಾಹ ಮತ್ತು ಆನಂದವಿರುವಾಗ ಮೈ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಷ್ಟಪಟ್ಟಿರುವ ಹೊಸ ಬಟ್ಟೆಯೊಂದನ್ನು ಹಾಕಿಕೊಂಡಾಗ ನಮ್ಮಲ್ಲಿ ಉಂಟಾಗುವ ಹುರುಪನ್ನು ಗಮನಿಸಿ.
ಅಂದು ಹೆಚ್ಚು ಕೆಲಸ ಮಾಡಿದರೂ, ಹೆಚ್ಚು ಹೆಚ್ಚು ಓಡಾಡಿದರೂ ಆಯಾಸವಿಲ್ಲ. ಅಂದೇನೋ ಹೊಸಬಲ. ಅದೆಲ್ಲೆಂದ ಬರುವುದು?
ಕೋಪ ಬರುವುದು, ಬೇಜಾರಾಗುವುದು, ಸಂತೋಷವಾಗುವುದು, ಭಯವಾಗುವುದು, ಆತಂಕವಾಗುವುದು; ಇವೆಲ್ಲವೂ ಮನಸ್ಸಿಗೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟಿರುವುದು. ಆದರೆ ಅದರ ಪರಿಣಾಮವು ದೇಹದ ಮೇಲೂ ಆಗುತ್ತಿರುತ್ತದೆ. ಮನಸ್ಸಿನ ಅಧೀನ ದೇಹವೋ? ಅಥವಾ ದೇಹದ ಭಾಗವು ಮನಸ್ಸಿನದೋ? ಹೇಗಾದರೂ ಆಲೋಚಿಸಿ.
ಆದರೆ ಒಂದು ವಿಷಯ ನಿಜ. ಮನಸ್ಸು ಸಂತೋಷಗೊಂಡಾಗ ದೇಹದಲ್ಲಿ ಕೆಲವು ಬಗೆಯ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಖೇದಗೊಂಡಾಗ, ದುಃಖಿತರಾದಾಗ, ಆತಂಕಗೊಂಡಾಗ, ಕೋಪಗೊಂಡಾಗಲೂ ಹಾಗೆಯೇ ಕೆಲವು ಬಗೆಯ ರಸಗಳು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ರಸಗಳ ರಾಸಾಯನಿಕ ಕ್ರಿಯೆಗಳು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಸಗಳು ಹೆಚ್ಚುಹೆಚ್ಚಾಗಿ ಸ್ರವಿಸುತ್ತಿದ್ದರೆ, ರಾಸಾಯನಿಕ ಕ್ರಿಯೆಯು ತೀವ್ರವಾದರೆ ಸಹಜವಾಗಿ ದೇಹದ ಮೇಲೆಯೂ ಪರಿಣಾಮವನ್ನು ಬೀರುತ್ತದೆ.
ಆತಂಕ, ಉದ್ವೇಗ, ಉದ್ರೇಕಗಳು ಹೃದಯದ ಬಡಿತವನ್ನು ಏರಿಸುತ್ತದೆ. ಸಿಕ್ಕಾಪಟ್ಟೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ರಕ್ತದ ಒತ್ತಡ ಏರುತ್ತದೆ. ರಕ್ತ ಸಂಚಲನ ವೇಗವಾಗುತ್ತದೆ. ವಾಕರಿಕೆ ಬರುವುದು, ಕೆಲವೊಮ್ಮೆ ವಾಂತಿಯಾಗುವುದೂ ಉಂಟು. ನಡುಕ, ಬೆವರುವಿಕೆ, ಬಾಯಿ ಒಣಗುವುದು, ಎದೆಯಲ್ಲಿ ನೋವು, ತಲೆ ನೋವು, ಹೊಟ್ಟೆಯಲ್ಲಿ ಹಿಂಡಿದಂತೆ ನೋವು ಮತ್ತು ಉಸಿರಾಟದಲ್ಲಿ ವಿಪರೀತವಾಗಿ ಏರಿಳಿತ.
ಮೆದುಳು ಆತಂಕವನ್ನು ಗ್ರಹಿಸಿ ಅಥವಾ ಉದ್ವೇಗಗೊಂಡು ದೇಹದ ಇತರ ಭಾಗಗಳಿಗೆ ತನ್ನ ಆತಂಕದ ಸಂದೇಶಗಳನ್ನು ಕಳುಹಿಸುತ್ತದೆ. ಅದರಂತೆ ದೇಹದ ಇತರ ಭಾಗಗಳೂ ಕೂಡಾ ವರ್ತಿಸುತ್ತವೆ. ಈ ಮನೋದೈಹಿಕ ವ್ಯತ್ಯಾಸವು ಬಹಳಷ್ಟು ಸಲ ಸಾಂದರ್ಭಿಕವಾಗಿ ಎದುರಿಸುವ ಸನ್ನಿವೇಶಕ್ಕೆ ಅನುಗುಣವಾಗಿ ಇರುತ್ತದೆ.
ಆಗ ಬರುವ ಶಾರೀರಿಕ ಸಮಸ್ಯೆ ಸನ್ನಿವೇಶವು ಬದಲಾಗುತ್ತಿದ್ದಂತೆ, ವಾತಾವರಣವು ತಿಳಿಯಾಗುತ್ತಿದ್ದಂತೆ ಬಂದಂತೆಯೇ ಹೊರಟೂ ಹೋಗುತ್ತದೆ. ಆದರೆ, ಕೆಲವರಿಗೆ ಕೋಪಗೊಳ್ಳುವುದು ಅಥವಾ ಆತಂಕಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ನಕಾರಾತ್ಮಕವಾಗಿಯೇ ಚಿಂತಿಸುವುದು, ಏನಾಗುತ್ತದೋ, ಏನನ್ನು ಎದುರಿಸಬೇಕೋ ಎಂದು ಭಯದಲ್ಲಿಯೇ ಇರುವುದು ವ್ಯಕ್ತಿತ್ವದ ಭಾಗವಾಗಿಟ್ಟಿರುತ್ತದೆ.
ಆಗ ಅವರು ಅವರ ರಕ್ತದೊತ್ತಡವನ್ನು ಸದಾ ಹೊಂದುತ್ತಿರುತ್ತಾರೆ. ಯಾವಾಗಲೂ ಏರಿಳಿತಗಳಾಗುತ್ತಿರುತ್ತದೆ. ಇದರಿಂದ ರಕ್ತದೊತ್ತಡದಿಂದ ಉಂಟಾಗುವ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಪರಿಣಾಮಗಳಾಗಿ ನೋಡಬೇಕಾಗುತ್ತದೆ.
ಕೆಲವರು ಹೇಳುತ್ತಿರುತ್ತಾರೆ, ಅವರಿಗೆ ಬ್ಲಡ್ ಪ್ರೆಷರ್ ಇದೆ ಅದಕ್ಕೆ ಹೆಚ್ಚು ಕೋಪ ಎಂದು. ಆದರೆ ಅದು ಹೀಗೂ ಇರಬಹುದು. ಅವರಿಗೆ ಕೋಪಗೊಳ್ಳುವುದು, ಆತಂಕಗೊಳ್ಳುವುದು ಸತತವಾದ ಅಭ್ಯಾಸವಾಗಿವುದರಿಂದ ರಕ್ತದೊತ್ತಡವು ಖಾಯಿಲೆಯಾಗಿ ಪರಿಣಮಿಸಿದೆ ಎಂದು.
ಏನೇ ಆಗಲಿ, ವಂಶವಾಹಿನಿಯಿಂದ, ಬೇರೆ ಕಾರಣಗಳಿಂದ ಬರುವ ಕಾಯಿಲೆಗಳನ್ನೂ ಕೂಡಾ ಮನೋಭಾವನೆಗಳ ಮತ್ತು ವರ್ತನೆಗಳ ಸರಿಯಾದ ನಿಯಂತ್ರಣ ಮತ್ತು ತರಬೇತಿಯಿಂದ ವಾಸಿ ಮಾಡಲಾಗದಿದ್ದರೂ ಉಲ್ಬಣಗೊಳ್ಳದಿರುವಂತೆ ನೋಡಿಕೊಳ್ಳಬಹುದು.
ಮನೋದೈಹಿಕ ಸಮಸ್ಯೆಗಳು
ಕೌಟುಂಬಿಕವಾಗಿ, ವೃತ್ತಿಯಲ್ಲಿ, ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅದೆಷ್ಟೇ ಒತ್ತಡಗಳಿದ್ದರೂ, ಆತಂಕಗಳಿದ್ದರೂ ಅವುಗಳನ್ನು ನೋಡುವ ದೃಷ್ಟಿ ಮತ್ತು ಅವುಗಳೊಂದಿಗೆ ಕೆಲಸ ಮಾಡುವ ಮುಕ್ತ ಮನಸ್ಥಿತಿಯನ್ನು ಹೊಂದಬೇಕು. ಆಗ ಅವು ರೋಗಗಳಾಗಿ ತಿರುಗುವುದಿಲ್ಲ. ಹೊರಗಿನ ಕೆಲಸಗಳು ಎಷ್ಟೇ ಒತ್ತಡಗಳನ್ನು ಹೇರಿದರೂ ಮನಸ್ಸಿನ ಒತ್ತಡಕ್ಕೆ ಬಲಿಯಾಗಲೇಬಾರದು. ಇದನ್ನು ಸ್ಪಷ್ಟವಾಗಿ ತಿಳಿಯೋಣ.
ಮನಸ್ಸಿನ ಸ್ಥಿತ್ಯಂತರಗಳ ನಿರೋಧಕ ಶಕ್ತಿಯು ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದುರ್ಬಲ ಮನಸ್ಸಿನವರಿಗೆ ರೋಗ ನಿರೋಧಕ ಶಕ್ತಿಯೂ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತದೆ. ಖಿನ್ನತೆಗೊಳಗಾಗುವ ಅಥವಾ ಆತಂಕಕ್ಕೊಳಗಾಗುವ ರೂಢಿಯವರಿಗೆ ಸರಿಯಾಗಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ.
ಸರಿ, ಹೊತ್ತು ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಮತ್ತು ನಿದ್ದೆ ಮಾಡದೇ ಇರುವುದರಿಂದ ಆಗುವಂತಹ ಸಮಸ್ಯೆಗಳಿಗೆ ಅದು ಆಹ್ವಾನ ಕೊಟ್ಟಂತಾಗುತ್ತದೆ. ಈ ರೀತಿ ಮನಸ್ಸಿನ ಸ್ಥಿತ್ಯಂತರದ ಕಾರಣಗಳಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನೋದೈಹಿಕ ಸಮಸ್ಯೆಗಳು ಅಥವಾ ಸೈಕೋಸೊಮ್ಯಾಟಿಕ್ ಡಿಸಾರ್ಡರ್ ಎನ್ನುತ್ತಾರೆ.
ಈ ಮನೋದೈಹಿಕ ಸಮಸ್ಯೆಗಳು ಎಗ್ಸಿಮಾ, ಹೊಟ್ಟೆಯ ಹುಣ್ಣುಗಳಿಗೆ, ಹೈಪರ್ ಟೆಂನ್ಶನ್, ಸೋರಿಯಾಸಿಸ್ ಮತ್ತು ಹೃದಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಆತಂಕ ಮತ್ತು ಉದ್ವೇಗಗಳನ್ನು ಹೊಂದುವುದರಿಂದ, ಖಿನ್ನತೆಗೆ ಜಾರುವುದರಿಂದ ಅಡ್ರಿನಲ್ ಗ್ರಂಥಿಯಲ್ಲಿ, ಎಪಿನೆಫ್ರಿನ್ ನಲ್ಲಿ ತೀವ್ರಗತಿಯಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುವುದು.
ಆಗ ಸಹಜವಾಗಿ ಈ ಹಾರ್ಮೋನುಗಳ ವ್ಯತ್ಯಾಸದಿಂದ ಏನು ಶಾರೀರಿಕ ಸಮಸ್ಯೆ ಬರುವುದೋ ಅದನ್ನು ಎದುರಿಸಬೇಕಾಗುವುದು. ಸಾಮಾನ್ಯವಾಗಿ ಕುತ್ತಿಗೆ ನೋವು, ಆಮ್ಲತೆ (ಅಸಿಡಿಟಿ), ಬೆನ್ನು ನೋವು, ಮರೆತುಹೋಗುವುದು, ಪಿತ್ತ ಕೆರಳುವುದು, ಹಠಾತ್ ಕೋಪ ಬರುವುದು ಕೂಡಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ. ಮನೋದೈಹಿಕ ಸಮಸ್ಯೆಗಳಲ್ಲಿ ಮುಖ್ಯವಾಗಿ ಎರಡು ವಿಧವನ್ನು ಗುರುತಿಸಬಹುದು.
ಶರೀರದಲ್ಲಿ ನೋವು, ಆಯಾಸ, ಅಧಿಕವಾಗಿ ನಿದ್ರೆ, ಅಥವಾ ನಿದ್ರೆ ಇಲ್ಲದಿರುವುದು, ಹಸಿವು ಇಲ್ಲದಿರುವುದು, ಆಮ್ಲತೆ (ಅಸಿಡಿಟಿ) ಈ ಬಗೆಯ ಸಮಸ್ಯೆಗಳು ಬರುವುದು ಒಂದಾದರೆ, ನರದೌರ್ಬಲ್ಯ ಸಮಸ್ಯೆಗಳು ಎದುರಾಗುವುದು, ಹೆಂಗಸರಲ್ಲಿ ಋತುಚಕ್ರವು ವ್ಯತ್ಯಾಸಗೊಳ್ಳುವುದು, ಲೈಂಗಿಕತೆಯಲ್ಲಿ ದೌರ್ಬಲ್ಯವನ್ನು ಹೊಂದುವುದು ಇತ್ಯಾದಿಗಳು ಮತ್ತೊಂದು ಬಗೆಯ ಸಮಸ್ಯೆಗಳು.
ಗರ್ಭಿಣಿಯರಾದಾಗಲೂ ಕೂಡಾ ಆ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ವಾಕರಿಕೆ, ಹುಸಿ ಹೆರಿಗೆ ನೋವು, ದೇಹದ ಇತರ ಭಾಗಗಳಲ್ಲಿ ನೋವು; ಇತ್ಯಾದಿಗಳನ್ನು ಕಾಣಬಹುದು.
ಅದೇ ರೀತಿ ಮನೋದೈಹಿಕ ವ್ಯತ್ಯಾಸಗಳು ಇನ್ನೂ ಕೆಲವು ಲಕ್ಷಣಗಳನ್ನು ತೋರುತ್ತವೆ. ಕೆಲವೊಮ್ಮೆ ದಿಢೀರನೆ ಹಾಸಿಗೆ ಹಿಡಿದು ಮಲಗುವಂತೆ ಮಾಡಬಹುದು. ಮೂರ್ಚೆ ಹೋಗುವುದು, ನಿದ್ರೆ ಬರುತ್ತಿರುವಂತೆ ಕಣ್ಣುಗಳು ಭಾರವಾಗಿದ್ದು ಕಣ್ಣೆಳೆಯುತ್ತಿರುವುದು, ಕೆಲವೊಮ್ಮೆ ಕಣ್ಣು ಕಾಣಿಸದೇ ಹೋಗುವುದು. ದೇಹದ ಯಾವುದಾದರೂ ಒಂದೋ, ಎರಡೋ ಭಾಗವನ್ನು ಕಳೆದುಕೊಂಡಂತೆ ಭಾಸವಾಗುವ ರೀತಿಗಳಲ್ಲಿಯೂ ಕಾಣುವುದು.
ಬಯಸಿ ಬರುವ ರೋಗ
ಮನೋದೈಹಿಕ ಸಮಸ್ಯೆಯಿಂದಾಗಿ ಕೆಲವರು ತಮಗೇನೋ ಬಹುದೊಡ್ಡ ರೋಗವೊಂದಿದೆ ಎಂದು ಭಾವಿಸತೊಡಗುತ್ತಾರೆ. ಯಾರಾದರೂ ವೈದ್ಯರ ಬಳಿ ತೋರಿಸಿ ಏನಿಲ್ಲ ಎಂದು ವರದಿ ಬಂದರೂ ಅವರಿಗೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ, ಮಗದೊಬ್ಬ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತಿರುತ್ತಾರೆ. ನಿಮಗೆ ಏನೂ ಸಮಸ್ಯೆ ಇಲ್ಲವೆಂದರೂ ಅವರು ನಂಬುವುದಿಲ್ಲ.
ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕೆ ಯಾವ ಕಾರಣವೂ ಇರುವುದಿಲ್ಲ. ಅದನ್ನು ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅವರಿಗೆ ಅಲ್ಲಿ ಏನೂ ತಿಳಿಯುದಿಲ್ಲ. ಆದರೆ ಇವರಿಗೆ ಮಾತ್ರ ಬಹುಕಾಲದಿಂದ ಆ ನೋವು ಕಾಣುತ್ತಿರುತ್ತದೆ. ಇದೂ ಕೂಡಾ ಮನೋದೈಹಿಕ ನೋವಿನ ಸಮಸ್ಯೆಯೇ ಆಗಿರುತ್ತದೆ.
ಕೆಲವರು ತಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಯಾವುದೋ ನ್ಯೂನ್ಯತೆ ಇದೆ ಎನಿಸುತ್ತಿರುತ್ತದೆ. ಅದಕ್ಕಾಗಿ ಕಾಸೆಮೆಟಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವರು ಲಘು ಶಸ್ತ್ರ ಚಿಕಿತ್ಸೆಗಳನ್ನೂ ಕೂಡಾ ಕಾಲದಿಂದ ಕಾಲಕ್ಕೆ ಮಾಡಿಸಿಕೊಳ್ಳುತ್ತಿರುತ್ತಾರೆ. ಅದೆಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡರೂ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ತೆಗೆದುಕೊಂಡರೂ ಅವರಿಗೆ ತೃಪ್ತಿಯೇ ಇರದಂತೆ ಮನೋರೋಗವಾಗಿ ಪರಿಣಮಿಸಿರುತ್ತದೆ.
ಉದಾಹರಣೆಗೆ ತಮ್ಮ ಮೂಗು ಸೊಟ್ಟ ಎನಿಸುತ್ತಿರುತ್ತದೆ. ತುಟಿಯಲ್ಲೇನೋ ಸ್ವಲ್ಪ ಸಮಸ್ಯೆ ಎನಿಸುತ್ತಿರುತ್ತದೆ. ಕೆನ್ನೆಯ ಮೇಲ್ಭಾಗದಲ್ಲೇನೋ ವಿನ್ಯಾಸ ಸರಿ ಇಲ್ಲ ಎನಿಸುತ್ತಿರುತ್ತದೆ, ಹೀಗೆ ತಮ್ಮ ಶರೀರ ರಚನೆಯ ಬಗ್ಗೆ ಅವರಿಗೆ ಸದಾ ಅತೃಪ್ತಿ. ಕೆಲವು ಸಿನಿಮಾ ಕಲಾವಿದರು, ಫ್ಯಾಷನ್ ಮತ್ತು ಪಾಪ್ ತಾರೆಯರಿಗೆ ಈ ಗೀಳಿತ್ತು. ತಮ್ಮ ಶರೀರದ ಯಾವುದೋ ಒಂದು ಭಾಗವನ್ನು ಒಂದಲ್ಲಾ ಒಂದು ಕಾರಣಕ್ಕೆ ಚಿಕಿತ್ಸೆಗೆ ಒಳಪಡಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮದೇ ಶರೀರದ ಬಗ್ಗೆ ತೃಪ್ತಿಯೇ ಇರುತ್ತಿರಲಿಲ್ಲ.
ಸಾಮಾನ್ಯವಾಗಿ ಮಾನಸಿಕ ಖಿನ್ನತೆ ಮತ್ತು ಅನಿಯಂತ್ರಿತ ಭಾವೋದ್ವೇಗ ಈ ಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಒಟ್ಟಾರೆ ಮನಸ್ಥಿತಿಯು ದೇಹದ ಸ್ಥಿತಿಗತಿಗಳ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ದೇಹದಲ್ಲಿ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ, ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದಾಯಿತು.
ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ
ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ರೀತಿಯಿಂದ ರೀತಿಗೆ ಬದಲಾಗುತ್ತಿರುತ್ತದೆ. ಏನೇ ಆಗಲಿ, ಮನೋದೈಹಿಕ ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ ಮೇಲೆ ವ್ಯಕ್ತಿಯು ಪ್ರಶಾಂತತೆಯನ್ನು ಪಡೆಯುವುದರ ಕಡೆಗೆ ಮೊದಲ ಗಮನ ಹರಿಸಬೇಕು.
ವಾತಾವರಣ ಬದಲಾವಣೆ ಬಹಳ ಉತ್ತಮವಾದದ್ದು.
ಯಾಂತ್ರಿಕವಾಗಿ ಕೆಲಸ ಮಾಡಿಕೊಂಡಿರುವ ಮತ್ತು ಒಂದೇ ಸಮನೆ ಅದೇ ಸ್ಥಳದಲ್ಲಿ ಇರುವ ಮೂಲಕ ಉಂಟಾಗಿರುವ ಏಕತಾನತೆಯನ್ನು ಒಡೆಯಲು ಬೇರೆ ವಾತಾವರಣಕ್ಕೆ ಹೋಗಬೇಕು. ಸ್ಥಳ ಬದಲಾವಣೆಯಾಗಬೇಕು. ಹೆಚ್ಚಿನ ಜನ ಸಂಚಾರವಿರದ, ಗದ್ದಲವಿರದ ಸ್ಥಳಗಳಿಗೆ ಪ್ರವಾಸ ಹೋಗುವುದು, ಅಲ್ಲಿ ಇರುವುದು ಮತ್ತು ತಮ್ಮ ಓದು, ಬರಹ, ಅಥವಾ ಇನ್ನಾವುದೇ ಒಬ್ಬರೇ ಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳುವುದೆಲ್ಲವೂ ಮನೋದೈಹಿಕ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯದೇ.
ಸುಂದರ ಮತ್ತು ಗದ್ದಲವಿಲ್ಲದಂತಹ ಸುಮಧುರ ಸಂಗೀತವನ್ನು ಕೇಳಬೇಕು. ಹಿಂಸೆ, ಅತಿ ಮಾನುಷಶಕ್ತಿಯ ಪ್ರದರ್ಶನಗಳಿರದ, ತುಂಬಾ ಉತ್ಪ್ರೇಕ್ಷಿತ ವೈಭವಗಳಿರದ ಸಕಾರಾತ್ಮಕವಾದ ಸಿನಿಮಾಗಳಿಗೆ ಹೋಗಬೇಕು. ನಿತ್ಯವೂ ನಿಯಮಿತವಾಗಿ ವ್ಯಾಯಾಮ, ನೃತ್ಯ ಈ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಮತ್ತು ಹೃದಯಕ್ಕೆ ಹದ ನೀಡಬೇಕು.
ಧಾರ್ಮಿಕತೆಯ ರೂಢಿಯಿದ್ದರೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು.
ಒಳ್ಳೆಯ ಧನಾತ್ಮಕವಾದ ಕತೆಗಳನ್ನು ಕೇಳಬೇಕು ಅಥವಾ ಓದಬೇಕು.
ನಮ್ಮನ್ನು ನಾವು ಗಮನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಮ್ಮ ವರ್ತನೆಗಳಲ್ಲಿ ಉದ್ದೇಶಪೂರ್ವಕವಾದಂತಹ ಬದಲಾವಣೆಗಳನ್ನು ತಂದುಕೊಳ್ಳಬೇಕು. ಇತರರಿಗೆ ಕಷ್ಟಗಳಲ್ಲಿ ನೆರವಾಗುವುದು, ಒತ್ತಡ ಮತ್ತು ಖಿನ್ನತೆ ಇರುವಂತವರನ್ನು ಕೂರಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದರಿಂದ ಹೇಗೆ ಹೊರಗೆ ಬರಬೇಕೆಂಬ ಸಾಧ್ಯತೆಗಳನ್ನು ಅವರಿಗೆ ಅರಿವಾಗುವಂತೆ ತಿಳಿಸಬೇಕು.
ಎಷ್ಟೋ ಸಲ ಈ ರೀತಿ ಇನ್ನೊಬ್ಬರಿಗೆ ಅವರ ಕಷ್ಟದಿಂದ ಹೊರಗೆ ನೆರವಾಗಲು ಹೇಳಿಕೊಡುವಾಗ ನಮ್ಮ ಕಷ್ಟಗಳಿಂದ ನಾವು ಹೊರಗೆ ಬರಲು, ನಮ್ಮ ಒತ್ತಡಗಳಿಂದ ನಾವು ಹಗುರವಾಗಲು ನಮಗೆ ಒಳನೋಟಗಳು, ದಾರಿ ಸಿಗುವುದು. ಮಕ್ಕಳೊಂದಿಗೆ ಆಡುವುದು, ಅವರೊಂದಿಗೆ ಓದುವುದು, ಉದ್ಯಾನವನಗಳಲ್ಲಿ ಓಡಾಡುವುದು ಇವೆಲ್ಲವೂ ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸಕ ರೀತಿಯಲ್ಲಿ ಸಹಾಯಕ್ಕೆ ಬರುವುದು.
ಒಟ್ಟಾರೆ ಮನೋಭಾವ, ಏಕಪ್ರಕಾರದ ಯೋಚನೆಗಳು ಮತ್ತು ಮನಸ್ಸಿನ ವಿವಿಧ ಬಗೆಯ ಆಲೋಚನೆಗಳು ಆತಂಕಗಳನ್ನು, ಒತ್ತಡವನ್ನು ಉಂಟುಮಾಡುತ್ತವೆ. ಅವು ದೇಹದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಗಮನಕ್ಕೆ ಬರುವಂತಹ ಆಲೋಚನೆಗಳ ಮನಸ್ಸು ಒಂದಾದರೆ, ನಮ್ಮ ಗಮನಕ್ಕೆ ಬರದೇ ಇರಬಹುದಾದಂತಹ ದೇಹದ ಮನಸ್ಸೊಂದು ಇದೆ. ಅದರಲ್ಲಿಯೂ ಕೂಡಾ ವ್ಯತ್ಯಾಸಗಳಾಗುತ್ತಿರುತ್ತವೆ.
ಇದು ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಾಗಿ ಕಾಣುತ್ತವೆ. ಮನೋದೈಹಿಕ ಸಮಸ್ಯೆಗೆ ಎಷ್ಟೋ ಕಾರಣಗಳಿವೆ.
ಕೆಲವು ಜನಕ್ಕೆ ಸುಮ್ಮನೆ ದಿಗಿಲು ಬೀಳುವುದೇ ಒಂದು ಸಮಸ್ಯೆ. ಸಾಮಾಜಿಕ ಆತಂಕದ ಸಮಸ್ಯೆ, ವಿವಿಧ ರೀತಿಯ ಭಯಗಳು, ಏನೇನೋ ಕಾಣುವುದು, ಆರೋಗ್ಯದ ಬಗ್ಗೆಯೇ ಆತಂಕ, ಭಾವನೆಗಳ ವ್ಯತ್ಯಾಸಗಳು, ನಿದ್ರಾಹೀನತೆ, ಒತ್ತಡಗಳು, ಬಾಲ್ಯದ ಆತಂಕಗಳು, ಮದುವೆಯಾಗಿ ಹೊಸ ಮನೆಗೆ ಹೋಗುವ ಹೆಣ್ಣುಮಗುವಿನ ಆತಂಕ ಮತ್ತು ಒತ್ತಡಗಳು, ಸಂಬಂಧಗಳು ಮುರಿದುಹೋಗುತ್ತವೆ ಎಂಬ ಆತಂಕ, ಯಾರನ್ನಾದರೂ ಪ್ರೀತಿಪಾತ್ರರ ಕಳೆದುಕೊಂಡಿರುವ ನೋವು, ವ್ಯಾಪಾರ ವ್ಯವಹಾರ ರಾಜಕೀಯ ಅಥವಾ ಯಾವುದೇ ಉದ್ದಿಮೆಯಲ್ಲಿ ಅಪಾರವಾದ ನಷ್ಟ, ಕಿರುಕುಳ ನೀಡುವ ಸಾಲಗಾರರು, ಲೈಂಗಿಕ ಸಮಸ್ಯೆ, ಹೆಂಗಸರಲ್ಲಿ ಋತು ಸಮಸ್ಯೆ, ಸಾಮಾಜಿಕ ಅಥವಾ ಧಾರ್ಮಿಕತೆಯ ಕಾರಣದಿಂದ ಹತ್ತಿಕ್ಕಲಾಗುವ ಎಷ್ಟೋ ಮನೋಬಯಕೆಗಳು ಮತ್ತುಅವುಗಳಿಂದಾಗುವ ಒತ್ತಡಗಳು; ಹೀಗೆ ಯಾವುದ್ಯಾವುದೋ ಕಾರಣಗಳು ಮನೋದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ.
ಒಟ್ಟಾರೆ ಕಣ್ಣು, ಕಿವಿ, ಮೂಗುಗಳಿಗೆ ಏನೋ ಸಮಸ್ಯೆ ಬಂದಂತೆ ಮನಸ್ಸಿಗೂ ಸಮಸ್ಯೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಸಮಸ್ಯೆಗೆ, ಮೆದುಳಿನ ಸಮಸ್ಯೆಗೆ ಅಥವಾ ನರಗಳ ಸಮಸ್ಯೆಗೆ ಸಂಕೋಚಪಡುವುದು ಬೇಡ. ಮನಸಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ದೈಹಿಕ ಸಮಸ್ಯೆಗಳೂ ಗುಣ ಹೊಂದುತ್ತವೆ.
ಕೊನೆಯ ಎಲೆ
ವಾಸ್ತವಧಾರವಲ್ಲದೇ ಭ್ರಮಾಧೀನವಾದ ಮನಸ್ಸಿಗೂ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದು. ಅದೊಂದು ತಂತ್ರ. ದ ಲಾಸ್ಟ್ ಲೀಫ್ ಅಂದರೆ ಕೊನೆಯ ಎಲೆ ಎಂಬ ಕತೆ ಇದೆ. ಅದನ್ನು ಬರೆದವರು ಓ ಹೆನ್ರಿ ಎಂಬ ಅಮೇರಿಕೆಯ ಕತೆಗಾರ. ಅದರಲ್ಲಿ ಇಬ್ಬರು ಗೆಳತಿಯರಿರುತ್ತಾರೆ. ಅವರಿಬ್ಬರೂ ಚಿತ್ರಕಲಾವಿದೆಯರು. ಒಂದೇ ಸ್ಟುಡಿಯೋ ಮಾಡಿಕೊಂಡಿರುತ್ತಾರೆ. ಅವರಲ್ಲಿ ಒಬ್ಬಳಿಗೆ ನಿಮೋನಿಯಾ ರೋಗ ಬರುತ್ತದೆ.
ಅವಳಿಗೆ ಔಷಧೋಪಚಾರ ಆಗುತ್ತಿದ್ದರೂ, ಅವಳು ಮಲಗಿದ್ದ ಮಂಚದಿಂದ ಹೊರಗೆ ಒಂದು ಮರವನ್ನು ನೋಡುತ್ತಿರುತ್ತಾಳೆ. ಶಿಶಿರ ಕಾಲದಲ್ಲಿ ಆ ಮರದ ಎಲೆಗಳೆಲ್ಲಾ ದಿನದಿನವೂ ಉದುರುತ್ತಿರುತ್ತವೆ. ಅದನ್ನು ನೋಡುತ್ತಿದ್ದ ಅವಳಿಗೆ ಆ ಮರದ ಎಲೆಗಳೆಲ್ಲ ಉದುರುತ್ತಿರುವ ಹಾಗೆ ತನ್ನ ಬದುಕಿನ ದಿನಗಳೂ ಮುಗಿದುಹೋಗುತ್ತಿವೆ. ಆ ಮರದ ಕೊನೆಯ ಎಲೆ ಉದುರಿದ ಮೇಲೆ ತಾನೂ ಇರುವುದಿಲ್ಲ ಎಂದು ಹೇಳುತ್ತಿರುತ್ತಾಳೆ.
ದಿನವೂ ಅದನ್ನು ಕೇಳುತ್ತಿದ್ದ ಗೆಳತಿಯು ನಿಮೋನಿಯಾ ಬಂದಿರುವ ಗೆಳತಿಯ ಹುಚ್ಚು ಕಲ್ಪನೆಯನ್ನು ಒಪ್ಪದೇ ಸಕಾರಾತ್ಮಕವಾಗಿ ಅವಳಿಗೆ ಯೋಚಿಸಲು ಹಚ್ಚಲು ಯತ್ನಿಸುತ್ತಿರುತ್ತಾಳೆ. ಆದರೆ ಆಗುವುದಿಲ್ಲ. ನಿಮೋನಿಯಾದ ಹುಡುಗಿ ತನ್ನ ಕಲ್ಪನೆಯನ್ನೇ ಬಲಗೊಳಿಸಿಕೊಳ್ಳುತ್ತಿರುತ್ತಾಳೆ. ಒಂದು ದಿನ ಕಿಟಕಿ ತೆರೆದಾಗ ಮರದ ಎಲ್ಲಾ ಎಲೆಗಳು ಉದುರಿಬಿದ್ದಿದ್ದರೂ ಒಂದೇ ಒಂದು ಎಲೆ, ಕೊನೆಯ ಎಲೆ ಪಕ್ಕದ ಕಟ್ಟಡದ ಗೋಡೆಯೊಂದಕ್ಕೆ ತಗುಲಿದ್ದು, ಅದು ಉದುರಿರುವುದೇ ಇಲ್ಲ.
ಅದು ಉದುರುವ ಹೊತ್ತಿಗೆ ತಾನೂ ಸಾಯುತ್ತೇನೆ ಎಂದು ಅವಳ ನಂಬಿಕೆ. ಆದರೆ ಎಷ್ಟೇ ದಿನಗಳು ಕಳೆದರೂ ಅದು ಉದುರುವುದೇ ಇಲ್ಲ. ತಾನು ಬದುಕುತ್ತೇನೆ. ಆ ಎಲೆಯು ಅದನ್ನು ಸೂಚಿಸಲೆಂದೇ ಉದುರುತ್ತಿಲ್ಲ ಎಂದು ಅವಳಿಗೆ ಅನಿಸುತ್ತದೆ. ಅವಳು ಬದುಕುತ್ತಾಳೆ. ಆರೋಗ್ಯಕ್ಕೆ ಮರಳುತ್ತಾಳೆ.
ಆ ಎಲೆ ಉದುರುವುದೇ ಇಲ್ಲ. ಏಕೆಂದರೆ, ಈ ಹುಡುಗಿಯ ಹುಚ್ಚು ಭ್ರಮೆಯನ್ನು ಗೆಳತಿಯಿಂದ ತಿಳಿದ ಮುದುಕ ಕಲಾವಿದನೊಬ್ಬ ಮರದ ಕೊಂಬೆ ಮತ್ತು ಕಟ್ಟಡದ ಗೋಡೆ ಸಂಧಿಸುವಂತಹ ಎಡೆಯಲ್ಲಿ ಒಂದು ಎಲೆಯ ಚಿತ್ರವನ್ನು ಬಿಡಿಸಿರುತ್ತಾನೆ. ದೂರದಿಂದ ನೋಡಲು ಕೊಂಬೆಗೆ ಅಂಟಿಕೊಂಡಿರುವ, ಕಟ್ಟಡದ ಗೋಡೆಗೆ ತಗುಲಿಕೊಂಡಿರುವ ಹಳದಿ ಬಣ್ಣಕ್ಕೆ ತಿರುಗಿರುವ ಎಲೆಯಂತೆ ಕಾಣುತ್ತಿರುತ್ತದೆ. ಅದು ಅವಳ ಭ್ರಮೆಯ ಪ್ರಕಾರವೇ ಅವಳ ಜೀವವನ್ನು ಉಳಿಸಿರುತ್ತದೆ.
ಆದರೆ ದುರದೃಷ್ಟವಶಾತ್, ಆ ಕೊನೆಯ ಎಲೆಯ ಮಾಸ್ಟರ್ ಪೀಸ್ ಮಾಡಿದ್ದ ವೃದ್ಧ ಮತ್ತು ಕುಡುಕ ಕಲಾವಿದ ಮಾಗಿಯ ಚಳಿಯ ರಾತ್ರಿಯಲ್ಲಿ ಚಿತ್ರವನ್ನು ಬರೆದು ತಾನು ಚಳಿಗೆ ಸತ್ತಿರುತ್ತಾನೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243




