ರಾಜಕೀಯ
ಪೌರತ್ವ (ತಿದ್ದುಪಡಿ) ಮಸೂದೆ : ಹೊಸ ವಿಭಜನಕಾರೀ ಅಜೆಂಡಾ
ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸುವ ದುಷ್ಟತನದಿಂದ ತುಂಬಿರುವ ಶಾಸನವಾದರೆ ಎನ್.ಆರ್.ಸಿ., ಅಂದರೆ, ರಾಷ್ಟ್ರೀಯ ಪೌರರ ನೋಂದಣಿ ಎಂಬುದು ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ.ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು.
ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ. ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.
ಬಿಜೆಪಿಯ ದುಷ್ಟತಂತ್ರಗಳನ್ನು ವಿಫಲಗೊಳಿಸಲು ಈ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕುವುದರೊಂದಿಗೇ, ಅವನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.
- ಪ್ರಕಾಶ ಕಾರಟ್
ಪೌರತ್ವ (ತಿದ್ದುಪಡಿ) ಮಸೂದೆ, 2019(ಸಿ.ಎ.ಬಿ.) ಸಂಸತ್ತಿನ ಒಳಗೂ, ಹೊರಗೂ ಬಲವಾದ ಪ್ರತಿಭಟನೆಗಳ ನಡುವೆ ಅಂಗೀಕಾರಗೊಂಡಿದೆ. ಸಿ.ಎ.ಬಿ. ಸಂವಿಧಾನದ ಮೂಲ ನೀತಿಗಳಿಗೆ ತದ್ವಿರುದ್ಧವಾಗಿರುವ ಒಂದು ಅಪಯಕಾರಿ ಶಾಸನ. ಈ ಮಸೂದೆಯಲ್ಲಿ ವಿಧಿಸಿರುವ ಅಂಶಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತವೆ.
ಸಂವಿಧಾನದ ಕಲಮು 14, ಭಾರತದ ಪ್ರದೇಶದ ಒಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಎದುರು ಸಮಾನತೆ ಅಥವ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಲಾಗದು ಎಂದು ವಿಧಿಸಿದೆ. ಸಂವಿಧಾನವು ಮತ, ಜಾತಿ, ಪಂಥ ಅಥವ ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಕೂಡ ನಿಷೇದಿಸಿದೆ.
ಸಿ.ಎ.ಬಿ. ಕೆಲವು ವಿಭಾಗಗಳ ಜನರನ್ನು ಪೌರತ್ವ ನೀಡಿಕೆಗೆ ಪರಿಶೀಲಿಸುವಾಗ ಒಂದು ಮತೀಯ ಮಾನದಂಡವನ್ನು ಸೇರಿಸಿದೆ. ಈ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014ರ ಮೊದಲು ಅಫಘಾನಿಸ್ತಾನ, ಬಾಂಗ್ಲಾದೇಶ್ ಅಥವ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು, ಔದ್ಧರು, ಜೈನರು, ಪಾರ್ಸಿಗಳು ಅಥವ ಕ್ರಿಶ್ಚಿಯನ್ನರನ್ನು ಕಾನೂನುಬಾಹಿರ ವಲಸಿಗರು ಎಂದು ಕಾಣುವುದಿಲ್ಲ.
ಅವರು ಭಾರತದಲ್ಲಿ ಕನಿಷ್ಟ ಐದು ವರ್ಷಗಳನ್ನು ಕಳೆದಿದ್ದರೆ,ಸಹಜೀಕರಣ(ನೆಚುರಲೈಸೇಶನ್)ದಿಂದ ಪೌರತ್ವಕ್ಕೆ ಅರ್ಹರಾಗಬಹುದು. ಈ ಮೊದಲು ಸಹಜೀಕರಿಸಲು ಸಮಯಮಿತಿ ಹನ್ನೊಂದು ವರ್ಷಗಳಾಗಿದ್ದವು. ಅಂದರೆ ಈ ಮಿತಿಯನ್ನು ಸಡಿಲಿಸಲಾಗುತ್ತಿದೆ.
ಅದರೆ ಇದು ಈ ಮೂರು ದೇಶಗಳಿಂದ ಬಂದಿರುವ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಅವರನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗುತ್ತದೆ. ಮತೀಯ ಆಧಾರದಲ್ಲಿ ಈ ತಾರತಮ್ಯವೇ ಪೌರತ್ವದ ಕಾಯ್ದೆಗೆ ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರಗೊಳಿಸುತ್ತದೆ.
ಬಿಜೆಪಿ ಈ ಮೊದಲೇ ಹಿಂದಿನ ಲೋಕಸಭೆಯಲ್ಲಿ ಈ ಮಸೂದೆಯನ್ನು ಪಾಸುಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ್ದರಿಂದ ಪಾಸಾಗಲಿಲ್ಲ. ಈ ಮಸೂದೆಯ ಉದ್ದೇಶ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದಿರುವ ಹಿಂದೂ ವಲಸಿಗರಿಗೆ ಪೌರತ್ವವನ್ನು ಖಾತ್ರಿಪಡಿಸುತ್ತಲೇ, ಆ ದೇಶದಿಂದ ಬರುವ ಯಾವುದೇ ಮುಸ್ಲಿಂ ವಲಸಿಗರನ್ನು ಹೊರಗಿಡುವ ಕೋಮುವಾದಿ ಅಜೆಂಡಾ. ಅಸ್ಸಾಂನಲ್ಲಿ ಎನ್.ಆರ್.ಸಿ. ಪ್ರಕ್ರಿಯೆ ಮಾರ್ಚ್ 24, 1971ರ ನಂತರ ಪ್ರವೇಶಿಸಿರುವ ಎಲ್ಲರನ್ನೂ ಹೊರಗಿಡುವುದರಿಂದಾಗಿ ಈ ಕ್ರಮ ಅಗತ್ಯವಾಗಿತ್ತು.
ಅಸ್ಸಾಂನಲ್ಲಿ ರಾಷ್ಟ್ರೀಯ ಪೌರರ ನೋಂದಣಿ(ಎನ್.ಆರ್.ಸಿ.)ಯ ಅಂತಿಮ ಪಟ್ಟಿಯನ್ನು ಈ ವರ್ಷ ಆಗಸ್ಟ್ 31ರಂದು ಸಿ.ಎ.ಬಿ.ಯನ್ನು ಜಾರಿಗೊಳಿಸುವ ಮೊದಲು ಪ್ರಕಟಿಸಲಾಯಿತು. ಇದರ ಫಲಿತಾಂಶವಾಗಿ ಬಾಂಗ್ಲಾದೇಶದಿಂದ ಬಂದು ಹಿಂದೂಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಹೊರಗಿಡಲಾಗಿದೆ. ಆದ್ದರಿಂದಲೇ ಅಸ್ಸಾಂನ ಬಿಜೆಪಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎನ್.ಆರ್.ಸಿ. ಪಟ್ಟಿಯನ್ನು ವಿರೋಧಿಸಿವೆ.
ಹೀಗೆ ಮೋದಿ ಸರಕಾರಕ್ಕೆ ಇಡೀ ದೇಶಕ್ಕೆ ಎನ್.ಆರ್.ಸಿ. ಯನ್ನು ಸಿದ್ದಪಡಿಸುವ ಕೆಲಸಕ್ಕೆ ಕೈಹಾಕುವ ಮೊದಲು ಸಿ.ಎ.ಬಿ.ಯನ್ನು ಅಂಗೀಕರಿಸುವ ತುರ್ತು ಬಂದಿತು. ಗೃಹಮಂತ್ರಿ ಅಮಿತ್ ಷಾ ಕಪಟತನದಿಂದ ಅಸ್ಸಾಂನಲ್ಲಿ ಎನ್.ಆರ್.ಸಿ. ಯನ್ನು ಇಡೀ ದೇಶದ ಜತೆಗೆ ಮತ್ತೊಮ್ಮೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಈ ಸಿ.ಎ.ಬಿ. ಗೆ ಅಸ್ಸಾಂ ಮತ್ತು ಈಶಾನ್ಯ ಭಾರತದ ಜನಗಳಿಂದ ಕೋಪಾವೇಶದ ಪ್ರತಿಕ್ರಿಯೆ ಎದುರಾಗಿದೆ. ಅಸ್ಸಾಂನ ಜನರು ಈ ಶಾಸನ ಅಸ್ಸಾಂ ಒಪ್ಪಂದದಲ್ಲಿ ನೀಡಿದ ವಚನಕ್ಕೆ ಮಾಡಿರುವ ವಿಶ್ವಾಸದ್ರೋಹ ಎಂದು ಕಾಣುತ್ತಿದ್ದಾರೆ. ಏಕೆಂದರೆ ಆ ಒಪ್ಪಂದದ ಪ್ರಕಾರ ಮಾರ್ಚ್ 1971ರ ನಂತರ ಅಸ್ಸಾಂ ಪ್ರವೇಶಿಸಿದವರಿಗೆ ಪೌರತ್ವವನ್ನು ಕೊಡಲಾಗುವುದಿಲ್ಲ.
ಸಿ.ಎ.ಬಿ. ಈ ಸಮಯಮಿತಿಯನ್ನು ಡಿಸೆಂಬರ್ 31, 2014 ರ ವರೆಗೆ ವಿಸ್ತರಿಸಿ ಕಾನೂನುಬಾಹಿರ ವಲಸಿಗರನ್ನು ಕಾನೂನುಬದ್ಧಗೊಳಿಸಿ, 1985ರಲ್ಲಿ ಅಸ್ಸಾಂ ಒಪ್ಪಂದದ ಮೂಲಕ ಏರ್ಪಟ್ಟಿರುವ ಜಾಗರೂಕತೆಯಿಂದ ಸಮತೋಲಗೊಳಿಸಿದ್ದ ಒಡಂಬಡಿಕೆಯನ್ನು ತಲೆಕೆಳಗಾಗಿಸಿದೆ.
ಈಶಾನ್ಯ ಭಾರತದ ಎಲ್ಲ ರಾಜ್ಯಗಳಲ್ಲಿ ಅಲ್ಲಿಯ ಮೂಲನಿವಾಸಿಗಳ ಅಸ್ಮಿತೆಗಳು ಹೊಸದಾಗಿ ಪೌರತ್ವ ಪಡೆಯುವ ಜನಗಳು ದೊಡ್ಡಪ್ರಮಾಣದಲ್ಲಿ ಬಂದು ಸೇರುವುದರಿಂದಾಗಿ ಮುಳುಗಿ ಹೋಗಬಹುದು ಎಂಬ ಭಯ ಮೂಡಿದೆ.
ಸಂವಿಧಾನದ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಬುಡಕಟ್ಟು ಪ್ರದೇಶಗಳಿಗೆ ಮತ್ತು ಇನ್ನರ್ ಲೈನ್(ಒಳಗಣ ರೇಖೆ) ಇರುವ ಪ್ರದೇಶಗಳಿಗೆ ಈ ಸಿ.ಎ.ಬಿ.ಯಿಂದ ವಿನಾಯ್ತಿ ಕೊಟ್ಟು ಅವರನ್ನು ಸಮಾಧಾನ ಪಡಿಸುವ ಮೋದಿ ಸರಕಾರದ ಪ್ರಯತ್ನ ವಿಫಲವಾಗಿದೆ. ಈ ಸುರಕ್ಷಿತ ಕ್ಷೇತ್ರಗಳು ಹೊರಗಿಂದ ಅಲ್ಲಿಯೇ ನೆಲೆಸಲು ಬರುವ ಜನಗಳಿಂದ ಸತತವಾಗಿ ಒತ್ತಡಗಳನ್ನು ಎದುರಿಸುತ್ತಲೇ ಇರುವುದರಿಂದಾಗಿ ಮೋದಿ ಸರಕಾರದ ಈ ಪ್ರಯತ್ನ ಫಲ ಕೊಟ್ಟಿಲ್ಲ.
ಸಿ.ಎ.ಬಿ. ಮತ್ತು ಎನ್.ಆರ್.ಸಿ. ಯನ್ನು ಒಟ್ಟಾಗಿ ಕಾಣಬೇಕು. ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ. ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು. ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ.
ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.
ಈ ಪೌರತ್ವ ತಿದ್ದುಪಡಿ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕಬೇಕು. ಹಾಗೆ ಮಾಡುತ್ತಲೇ, ಸಿ.ಎ.ಬಿ.-ಎನ್.ಆರ್.ಸಿ.ಗೆ ಸಂಬಂಧಪಟ್ಟಂತೆ ಬಿಜೆಪಿಯ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.
(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


