ನೆಲದನಿ
ನುಡಿಯ ಒಡಲು – 21 | ಮಾತು ಮತ್ತು ನೋಟಗಳ ವಿಭಜನೆ: ಸಂಕಥನಾ ವಿಶ್ಲೇಷಣೆ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮಾತು ಮತ್ತು ನೋಟಗಳ ನಡುವಣ ನಂಟನ್ನು ಕುರಿತು ಸಾಕಷ್ಟು ಚಿಂತನೆ, ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇವತ್ತಿಗೂ ಈ ಚರ್ಚೆಗಳು ಅತ್ಯಂತ ಪ್ರಸ್ತುತವಾಗಿಯೇ ಇರುತ್ತವೆ. ಕಾರಣವೇನಂದರೆ, ಮಾತನ್ನು ಕುರಿತು ನಡೆಯುತ್ತಿರುವ ಓದುಗಳು ಇವತ್ತಿಗೂ ನಿರಂತರವಾಗಿದ್ದರೂ, ಮಾತಿನ ಇಡೀ ಸ್ವರೂಪವನ್ನು ಅರಿಯಲು ನಮಗೆ ಸಾಧ್ಯವಾಗಿಲ್ಲ.
ಅದೇ ರೀತಿಯಾಗಿ ಮಾತು ಮತ್ತು ಲೋಕನೋಟಗಳ ನಡುವಣ ಸಂಬಂಧವನ್ನು ಕುರಿತು ಈಗಲೂ ನಡೆಯುತ್ತಿರುವ ಚರ್ಚೆಗಳಿಗೆ ಇನ್ನೂ ಯಾವುದೇ ಬಗೆಯ ನಿಚ್ಚಳವಾದ ತಾತ್ವಿಕ ವಿನ್ಯಾಸಗಳು ರೂಪುಗೊಂಡಿಲ್ಲ. ಹಾಗಾಗಿ ನುಡಿ, ಕಾಲ, ದೇಶ, ವ್ಯಕ್ತಿ ಮತ್ತು ಸಮೂಹಗಳ ನಡುವಿನ ಅಂತರ್ಸಂಬಂಧ ಗತಿತಾರ್ಕಿಕವಾದದ್ದು ಎಂದು ಕೆಲವು ಆಲೋಚನಾ ಕ್ರಮಗಳು ಹೇಳುತ್ತವೆ.
ಮತ್ತೆ ಇನ್ನೂ ಕೆಲವು ಮಾದರಿಗಳು ವಾದಿಸುವಂತೆ, ಈ ಸಂಬಂಧವು ಕೇವಲ ಭಾಷಿಕ ಕೇಂದ್ರಿತವಾದದ್ದು ಎಂದು ನಂಬುತ್ತವೆ. ಈ ಎರಡೂ ವಿನ್ಯಾಸಕ್ಕೆ ಹೊರತಾದ ಮಾದರಿಯೊಂದು ಇವತ್ತು ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈ ಮಾದರಿಯ ಪ್ರಕಾರ ನುಡಿಯೆಂಬುದು ಮೂಲಭೂತವಾಗಿ ಗ್ರಹಿಕೆಗೆ ಸಂಬಂಧಿಸಿದ ವಿದ್ಯಮಾನ (ಕಾಗ್ನಿಟಿವ್ ಫಿನಾಮಿನಾನ್) ಆಗಿರುತ್ತದೆ. ಈ ತಿಳಿವಿನ ಪ್ರಕಾರ ನುಡಿ ಮತ್ತು ನೋಟಗಳ ನಡುವಣ ನಂಟಸ್ತಿಕೆ ವಿಶ್ವಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತದೆ ಎಂದಾಗುತ್ತದೆ.
ಅಂದರೇನಾಯ್ತು, ಕಾಲ, ದೇಶ ಹಾಗೂ ವ್ಯಕ್ತಿ ನೆಲೆಗಳಲ್ಲಿ ನುಡಿಯ ಮೂಲಕ ರೂಪುಗೊಳ್ಳುವ ಯಾವುದೇ ನೋಟಕ್ರಮವು ಕೂಡ ವಿಶ್ವಾತ್ಮಕ ಆಗಿರುತ್ತದೆ ಎಂದಾಯ್ತು. ಒಂದು ಪಕ್ಷ ಈ ನಿಲವೇ ದಿಟವಾಗಿದ್ದರೆ, ಮಾತು ಮತ್ತು ನೋಟಕ್ರಮಗಳ ನಡುವಿನ ವಿಭಜನೆ ಅತ್ಯಂತ ಸರಳವಾಗಿ ಕಾಣುತ್ತದೆ. ಅಂದರೆ ಮನುಷ್ಯನ ಗ್ರಹಿಕೆಯೆಂಬುದು ಜಗತ್ತಿನಾದ್ಯಂತ ಒಂದೇ ಬಗೆಯಲ್ಲಿ ನೆಲೆಪಡೆಯುತ್ತದೆ ಎಂದಾಗುತ್ತದೆ.
ಇಲ್ಲ ಈ ವಿಭಜನೆ ಇಷ್ಟೊಂದು ಸರಳವಾಗಿರಲು ಸಾಧ್ಯವಿಲ್ಲ ಎನ್ನುವುದನ್ನೂ ಇದೇ ಆಲೋಚನಾ ಕ್ರಮವೇ ತಿಳಿಸುತ್ತದೆ. ಅದೇನೆಂದರೆ, ವಿಶ್ವಾತ್ಮಕತೆ ಎಂಬುದು ಕೇವಲ ತತ್ವಗಳ (ಪ್ರಿನ್ಸಿಪಲ್ಸ್) ನೆಲೆಗೆ ಮಾತ್ರ ಸಂಬಂಧಿಸಿರುತ್ತದೆ ಹೊರತು ಅದು ವಿಕಲ್ಪಗಳಿಗೂ (ಪ್ಯಾರಮೀಟರ್ಸ್) ಸಂಬಂಧಿಸಲಾರದು ಎನ್ನುವ ತಿಳುವಳಿಕೆಯೂ ಕೂಡ ಈ ವಿನ್ಯಾಸದೊಳಗೆಯೇ ನಮಗೆ ದೊರೆಯುತ್ತದೆ.
ಅಂದರೆ ಮನುಷ್ಯ ಸಹಜವಾಗಿರುವ ಎಲ್ಲ ವಿದ್ಯಮಾನಗಳಲ್ಲಿಯೂ ಕೆಲವು ಸಮಾನವಾದ ರಚನೆಗಳು ಇರುವುದನ್ನು ಈ ತತ್ವಗಳು ತಿಳಿಸುತ್ತವೆ. ಆದರೆ ನುಡಿ, ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವೇ ಪ್ರತ್ಯೇಕವಾದ, ವಿಶಿಷ್ಟವಾದ ಇಲ್ಲವೇ ದೇಶೀಯವಾದ ರಾಚನಿಕ ವಿನ್ಯಾಸಗಳು ಹೇಗೆ ಕಾರಣವಾಗುತ್ತವೆ ಎಂಬ ತಿಳುವಳಿಕೆಯನ್ನು ಈ ವಿಕಲ್ಪಗಳು ಮನವರಿಕೆ ಮಾಡುತ್ತವೆ. ಹಾಗಾಗಿ ನುಡಿ, ಆಲೋಚನೆ, ಸಂಸ್ಕೃತಿ, ವ್ಯಕ್ತಿ, ದೇಶ ಹಾಗೂ ಸಮಾಜಗಳ ನಡುವಣ ವಿಭಜನೆಯನ್ನು ಅರಿಯುವುದಕ್ಕೆ ನಮಗೆ ಮುಖ್ಯವಾಗಿ ಇಂತಹ ವಿಕಲ್ಪಗಳು ಸಹಾಯಕ್ಕೆ ಬರುತ್ತವೆ.
ನುಡಿ, ಮನಸ್ಸು ಹಾಗೂ ಸಮಾಜಗಳ ನಡುವಣ ನಂಟಸ್ತಿಕೆ ಎಷ್ಟೊಂದು ಸಂಕೀರ್ಣವಾದ ಸಂಗತಿ ಎಂಬುದನ್ನು ಈ ನಿಲುವುಗಳು ಸೂಚಿಸುತ್ತವೆ. ಮಾತು ಮತ್ತು ನೋಟಗಳ ನಡುವಣ ನಂಟಸ್ತಿಕೆ ಇವತ್ತು ಕೇವಲ ಸಾಮಾಜಿಕ ವರ್ತನೆಗೆ ಹಾಗೂ ಭಾಷಿಕ ರಚನೆಗೆ ಮಾತ್ರ ಸೀಮಿತಗೊಂಡಿಲ್ಲ. ಇದು ಮಾನಸಿಕ ವಿಕಾಸ ಹಾಗೂ ವ್ಯಕ್ತಿಯ ಮನಸ್ಸಿನಲ್ಲಿ ಜೈವಿಕವಾಗಿ ಹಾಗೂ ಸಹಜವಾಗಿಯೇ ಅಂತಸ್ಥವಾಗಿರುವ ಭಾಷಿಕ ವಿನ್ಯಾಸಕ್ಕೂ ಪೂರಕವಾಗಿ ಈ ನಂಟಸ್ತಿಕೆ ಹರಡಿಕೊಂಡಿರುತ್ತದೆ.
ಇದು ಬಹುತೇಕವಾಗಿ ರೂಪಕ ಇಲ್ಲವೇ ರೂಪಕಾತ್ಮಕ ನೆಲೆಯನ್ನು ಹೊಂದಿರುತ್ತದೆ. ಎಲ್ಲ ಸಮುದಾಯದ ಸದಸ್ಯರು ನೋಟಕ್ರಮಗಳಲ್ಲಿ ಬದುಕುವುದಷ್ಟೆಯಲ್ಲ, ಬದಲಾಗಿ ಈ ನೋಟಕ್ರಮಗಳ ರಚನೆಗಳನ್ನು ಕರಗತ ಮಾಡಿಕೊಳ್ಳುವ ಕೌಶಲಗಳನ್ನೂ ಹೊಂದಿರುತ್ತಾರೆ. ಆದ್ದರಿಂದ ಈ ವಸ್ತುವಿನ್ಯಾಸವು ಆಯಾ ನುಡಿಗಳಲ್ಲಿಯೇ ಪ್ರತಿಫಲನವಾಗುತ್ತದೆ. ನುಡಿಯೊಳಗೆಯೇ ಇಂತಹವೊಂದು ಹದಬೆರಕೆಯ ಆಯಾಮವಿರುತ್ತದೆ.
ನುಡಿಯಲ್ಲಿ ನಡೆಯುವ ಇಂತಹ ಹದಬೆರಕೆಯ ನೆಲೆಯನ್ನು ಕುರಿತು ಮಾತ್ನಾಡುವಾಗ, ನಮಗೆ ತೋರುವ ಪ್ರಮುಖ ಸಂಗತಿಯೇನಂದರೆ, ನುಡಿಯ ಕಾರಣದಿಂದಲೇ, ಮನುಷ್ಯರಿಗೆ ಇಂತಹವೊಂದು ಹದಬೆರಕೆಯ ಕಸುವು ನಮ್ಮ ಜೈವಿಕ ವಿನ್ಯಾಸದಲ್ಲಿಯೇ ನೆಲೆಗೊಂಡಿರುವುದು ಗೊತ್ತಾಗುತ್ತದೆ. ಇದೇ ಸನ್ನಿವೇಶದಲ್ಲಿಯೇ ಗೋಚರಿಸುವ ಮತ್ತೊಂದು ಸುಳಿವು ಏನೆಂದರೆ, ಬಹು ಬಗೆಯ ನೋಟಕ್ರಮಗಳನ್ನು ಪಡೆಯುವ ಅವಕಾಶವೂ ನಮಗೆ ಸಹಜವಾಗಿಯೇ ನಮ್ಮ ನಮ್ಮ ನುಡಿ ಪರಿಸರಗಳಲ್ಲಿ ಸಿಗುತ್ತವೆ.
ಹಾಗೇನೆ ನಮಗೆ ಬೇಕಾಗಿರುವ ನೋಟಕ್ರಮಗಳ ಇಲ್ಲವೇ ಪರಿಕಲ್ಪನೆಗಳ ಪ್ರಮಾಣದಲ್ಲಿ ನಮ್ಮದೆಯಾದ ಆಯ್ಕೆಗಳಿರುವುದು ಕೂಡ ವಿಶೇಷ. ಅಂದರೆ ಆಯಾ ನುಡಿ ಪರಿಸರದಲ್ಲಿ ಬದುಕುವ ಪ್ರತಿಯೊಬ್ಬರು ಕೂಡ ಸಮ ಪ್ರಮಾಣದ ಗ್ರಹಿಕೆಗಳನ್ನು ಪಡೆಯಲೇ ಬೇಕೆಂಬ ಯಾವುದೇ ಒತ್ತಾಯವಿರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಅತ್ಯಂತ ಅಗತ್ಯವೆನಿಸುವ ನೋಟಕ್ರಮಗಳನ್ನು ಮಾತ್ರ ಪಡೆಯುವ ಈ ವಿನ್ಯಾಸವೇ ಮಾತು ಮತ್ತು ನೋಟಗಳ ನಡುವಣ ವಿಭಜನೆಗೆ ಕಾರಣವಾಗುತ್ತದೆ.
ಸಾಮಾಜಿಕ ಸಂವಹನವು ಲೀಲಾಜಾಲವಾಗಿ ಹಾಗೂ ಸಲೀಸಾಗಿ ನಡೆಯುವುದಕ್ಕೆ ಈ ನಿಲುವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರೊಟ್ಟಿಗೆ, ನೋಟಕ್ರಮಗಳನ್ನು ಭಾಷಿಕವಾಗಿ ವರ್ಗೀಕರಣಗೊಳಿಸುವ, ಆ ಇಡೀ ರಾಚನಿಕ ಪ್ರಕ್ರಿಯೆಯಲ್ಲಿಯೇ ಕ್ರಾಸ್ಲಿಂಗ್ವಿಸ್ಟಿಕ್ ವ್ಯತ್ಯಾಸಗಳು ಹೆಚ್ಚು ಪ್ರಬಲವಾಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ಹಾಗೂ ನೋಟಕ್ರಮಗಳ ಪ್ರತಿನಿಧಿಕರಣದಲ್ಲಿಯೂ ಈ ಕ್ರಾಸ್ಲಿಂಗ್ವಿಸ್ಟಿಕ್ ಮಾದರಿಗಳು ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ ಅನ್ನುವುದನ್ನೂ ಕೂಡ ಇಲ್ಲಿ ಮರೆಯಲು ಸಾಧ್ಯವಿಲ್ಲ.
ದಿಟ, ಈ ಕ್ರಾಸ್ಲಿಂಗ್ವಿಸ್ಟಿಕ್ ಮಾದರಿಗಳೇನು ನಮ್ಮಲ್ಲಿ ಯಾವುದೇ ಬಗೆಯ ಬೆರಗನ್ನುಂಟು ಮಾಡಲಾರವು. ಆದರೆ, ನೋಟಕ್ರಮಗಳಿಗೆ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಕಣ್ನೋಟಗಳ ವಿಧಾನಗಳ ಮೇಲೆ ಮನುಷ್ಯನ ನರತಂತು ವಿನ್ಯಾಸವು ಒಂದು ಬಗೆಯ ಒತ್ತಾಯವನ್ನುಂಟು ಮಾಡುತ್ತದೆ ಎಂಬ ದಿಟವನ್ನು ಅರಿಯಲು ಇವುಗಳು ಪೂರಕವಾಗಿರುತ್ತವೆ.
ನಮ್ಮ ಲೋಕಗ್ರಹಿಕೆಗಳನ್ನು ಕರಗತಗೊಳಿಸುವ ಸಂಕೀರ್ಣ ಭಾಷಿಕ ಸೂಚಿಗಳು, ವ್ಯವಸ್ಥೆಗಳು ಮತ್ತು ಉನ್ನತ ಮಟ್ಟದ ಸಾಹಿತ್ಯಕ ಹಾಗೂ ಕಲಾತ್ಮಕ ಚಳಕಗಳು ಮುಖ್ಯವಾಗಿ ಪ್ರಾಥಮಿಕ ನೋಟಗಳು ಹಾಗೂ ಮೂಲ ಅನುಭವವನ್ನು ನೆಲೆಯಾಗಿಸಿಕೊಂಡು ಮೈಪಡೆಯುತ್ತವೆ.
ನಾವು ಸಾಮೂಹಿಕವಾಗಿ ಬದುಕು ನಡೆಸುವ ಸನ್ನಿವೇಶದಲ್ಲಿ, ಯಾವುದೇ ದೇಶ ಇಲ್ಲವೇ ಗ್ರಹಿಕೆಯ ರಚನೆಗೆ ಸಂಬಂಧಿಸಿದ ಒಂದು ನಿರ್ಧಿಷ್ಟವಾದ ಹಾಗೂ ಏಕೈಕವಾದ ಇಲ್ಲವೇ ನಮ್ಮದೆಯಾದ ಒಂದು ನೋಟಕ್ರಮವನ್ನು ನಾವು ಹೊಂದಲಾರವು. ಏಕೆಂದರೆ, ಬಹುಜನರು ಬದುಕು ನಡೆಸುವ ಸನ್ನಿವೇಶದಲ್ಲಿ ಸಹಜವಾಗಿ ನೋಟಕ್ರಮಗಳು ಬಹುಸಂಕೀರ್ಣವಾದ ಲೋಕನೋಟಗಳಿಂದ ರೂಪುಗೊಂಡಿರುತ್ತವೆ. ಹಾಗಂತ ಅವುಗಳ ನಡುವೆ ಯಾವುದೇ ವ್ಯತ್ಯಾಸಗಳು ಇರಲಾರವು ಎಂದು ಮಾತ್ರ ಹೇಳಲು ಸಾಧ್ಯವಿಲ್ಲ.
ನುಡಿ ಬಳಕೆ ಸಾಮಾಜಿಕ ಬದುಕನ್ನು ಪಸರಿಸುವಂತೆ, ಆ ನುಡಿ ಬಳಸುವ ವಿಧಾನದಲ್ಲಿಯೇ ಈ ಸಾಮಾಜಿಕ ಬದುಕಿನ ವಿನ್ಯಾಸಗಳು ಕೂಡ ಅಂತಸ್ಥವಾಗಿರುತ್ತವೆ. ಬಹುತೇಕ ನುಡಿಯರಿಗರು ನುಡಿಯನ್ನು ಅದೊಂದು ಅಮೂರ್ತ ರಚನೆಯನ್ನಾಗಿ ಮಾತ್ರ ಪರಿಗಣಿಸಿರುತ್ತಾರೆ. ಅಂದರೆ ನುಡಿಯು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ನೆಲೆಗೊಂಡು ನಿರ್ಧಿಷ್ಟ ನುಡಿ ಬಳಕೆಯ ಸನ್ನಿವೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಉದಾ.ಗೆ ಗಣಿತದ ಯಾವುದೇ ತಾರ್ಕಿಕ ರಚನೆಯು ನೇರವಾಗಿ ಸಮೂಹಗಳ ನಿರ್ಧಿಷ್ಟ ಸಮಸ್ಯೆಗಳಿಗೆ ಮಾತ್ರ ಅನ್ವಯವಾಗದೇ ಅದೊಂದು ಸ್ವತಂತ್ರ ಸೂತ್ರವಾಗಿ ರೂಪುಗೊಳ್ಳುತ್ತದೆ. ಆದರೆ ನುಡಿ ಬಳಕೆಯ ಒಂದೊಂದು ಅನುಭವ ಮತ್ತು ಪ್ರಯೋಗವು ಆಯಾ ನುಡಿ ಬಳಕೆಗೆ ಒಳಪಡುವ ವಲಯ ಹಾಗೂ ನಿಯೋಗಗಳಿಗೆ ಮಾತ್ರ ಸಂಬಂಧಿಸಿರುತ್ತವೆ.
ಹಾಗಾಗಿ ಪ್ರತಿಯೊಂದು ಸಂವಹನ ಕ್ರಿಯೆಯು ಕೂಡ ಒಂದೊಂದು ಸಾಮಾಜಿಕ ಸನ್ನಿವೇಶದಲ್ಲಿ ನೆಲೆಗೊಳ್ಳುತ್ತದೆ. ಹಾಗೂ ಭಾಷಿಕರು ಬಳಸು ಆಯಾ ಭಾಷಾ ರೂಪಗಳ ಮೇಲೆ ಈ ಸನ್ನಿವೇಶವು ತನ್ನ ಒತ್ತಾಯವನ್ನು ಹೇರುತ್ತದೆ. ಈ ಭಾಷಿಕರು ಸಾಮಾಜಿಕ ಸನ್ನಿವೇಶವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ? ಇವರ ಗ್ರಹಿಕೆಗಳ ಬಗೆಗೆ ಬೇರೆಯವರಿಗೆ ಏನು ಗೊತ್ತಿರುತ್ತದೆ? ಅವರು ಹೇಗೆ ಇವುಗಳನ್ನು ಕುರಿತು ಯೋಚಿಸಬಲ್ಲರು? ಅವರು ಇವರ ಬಗೆಗೆ ಏನನ್ನು ಚಿಂತಿಸಬಲ್ಲರು ಮತ್ತು ನಂಬಬಲ್ಲರು? ಹಾಗೂ ತಮ್ಮ ಮತ್ತು ಬೇರೆಯವರ ಅಸ್ಮಿತೆಗಳ ಬಗೆಗೆ ಇವರು ಏನನ್ನು ಬಯಸುತ್ತಾರೆ ಎಂಬಿತ್ಯಾದಿ ಸಂಗತಿಗಳು, ಮಾತಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರೂಪ ಮತ್ತು ಅರ್ಥಗಳ ಮೇಲೆ ಇವುಗಳು ಪರಿಣಾಮವನ್ನು ಬೀರುತ್ತವೆ.
ಆಯಾ ಸಾಮಾಜಿಕ ಮತ್ತು ಭಾಷಿಕ ಸನ್ನಿವೇಶಗಳನ್ನು ನೆಲೆಯಾಗಿಸಿಕೊಂಡು, ನೋಟಕ್ರಮಗಳ ತಿರುಳು (ಅರ್ಥ) ಪ್ರಸ್ತುತಗೊಳ್ಳುತ್ತದೆ. ಹಾಗೂ ಆಯಾ ಸನ್ನಿವೇಶಗಳಿಗೆ ಅನುಗುಣವಾಗಿ ನುಡಿಯಲ್ಲಿ ಮೈಪಡೆಯುವ ಈ ಎಲ್ಲ ನೋಟಕ್ರಮಗಳನ್ನು ವ್ಯಾಖ್ಯಾನಿಸಲಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗರು ಜೊತೆಗೂಡಿ ತಾವು ಏನನ್ನು ಭಾವಿಸುತ್ತಾರೆ, ಏನನ್ನು ಗ್ರಹಿಸುತ್ತಾರೆ, ಏನನ್ನು ನೋಡುತ್ತಾರೆ ಹಾಗೂ ಸಂವಹನದ ಯಾವ ಹಂತವನ್ನು ಇವರು ತಲಪುತ್ತಾರೆ ಎಂಬೆಲ್ಲ ಸಂಗತಿಗಳು ಒಂದು ಪ್ರದೇಶದಲ್ಲಿ ಪ್ರಮುಖವಾಗುತ್ತವೆ. ಇಲ್ಲಿ, ಅಲ್ಲಿ, ಎಲ್ಲಿ, ಯಾವಾಗ, ಇದು, ಅದು ಮುಂತಾದ ಭಾಷಿಕ ಸೂಚಿಗಳು ಒಂದು ನಿರ್ಧಿಷ್ಟ ಕಾಲ ಮತ್ತು ದೇಶದ ವಿನ್ಯಾಸವನ್ನು ರೂಪಿಸುತ್ತವೆ.
ಮತ್ತು ಅಂತವೊಂದು ಸನ್ನಿವೇಶವನ್ನು ರೂಪಿಸುವ ಮುಕ್ತ ಅವಕಾಶವೂ ಈ ಭಾಷಿಕ ಸೂಚಿಗಳಲ್ಲಿ ಅಂತಸ್ಥವಾಗಿರುತ್ತದೆ. ಯಾವಾಗ ಹೇಳುಗ ಮತ್ತು ಕೇಳುಗರು ಒಂದು ದಿಟ ಪ್ರದೇಶವನ್ನು (ರಿಯಲ್ ಸ್ಪೇಸ್) ಪರಿಭಾವಿಸಲು, ಈಗ, ನಾಳೆ ಮತ್ತು ಕಳೆದ ವರುಷ ಮೊದಲಾದವುಗಳನ್ನು ಬಳಸುವುದನ್ನು ನೋಡಬಹುದು. ಉದಾ.ಗೆ ಬೇಂದ್ರೆಯವರ ಕವನವೊಂದರಲ್ಲಿ ಬಳಸಿರುವ ಇದಕ್ಕು, ಅದಕ್ಕು ಎದಕ್ಕು ಎಂಬೆಲ್ಲ ಸೂಚಕಗಳು ಕೇವಲ ಯಾವುದೇ ಒಂದು ಕಾಲ ಮತ್ತು ದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ.
ಬದಲಾಗಿ ಆಯಾ ಕಾಲ ಮತ್ತು ದೇಶದ ಸನ್ನಿವೇಶಗಳಿಗೆ ಅನ್ವಯವಾಗುವ ಮುಕ್ತತೆ ಈ ಸೂಚಕಗಳಲ್ಲಿ ಇರುವುದನ್ನು ನೋಡಬಹುದು. ಹಾಗೂ ಪಂಪನ ಕಾವ್ಯದಲ್ಲಿ ಬಳಸಿರುವ ಎಷ್ಟೊಂದು ಅಭಿವ್ಯಕ್ತಿಗಳನ್ನು ನಮ್ಮ ಇವತ್ತಿನ ಸನ್ನಿವೇಶಕ್ಕೆ ಅನ್ವಯಿಸಿಕೊಂಡು ಮಾತ್ನಾಡುವಾಗ, ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೇ, ಆಯಾ ವ್ಯಕ್ತಿಗಳು ಪ್ರತಿನಿಧಿಸುವ ಸಾಮಾಜಿಕ ನೆಲೆ ಇಲ್ಲವೇ ಅಂತಸ್ತನ್ನು ಪರಿಗಣಿಸುತ್ತೇವೆ. ಯಾವುದೋ ಒಂದು ಕಾಲ್ಪನಿಕ ಪ್ರದೇಶದ (ಇಮ್ಯಾಜಿನ್ಡ್ ಸ್ಪೇಸ್) ಕಾಲ್ಪನಿಕ ನೆಲೆಯಿಂದ (ಇಮ್ಯಾಜಿನ್ಡ್ ಲೊಕೇಶನ್) ಬದುಕಿನ ನೋಟಗಳನ್ನು ಯಾವುದೇ ಒಬ್ಬ ಕಾಲ್ಪನಿಕ ಪಾಲುದಾರನಿಗೆ ಕಾಣಲು ಇಲ್ಲವೇ ತಲುಪಲು ಹೇಗೆ ಸಾಧ್ಯವಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗ ಇವರಿಬ್ಬರೂ ಏನೆಲ್ಲವನ್ನೂ ಅರಿಯಲು, ಯೋಚಿಸಲು, ಗ್ರಹಿಸಲು ಹಾಗೂ ಪರಿಭಾವಿಸಲು ಸಾಧ್ಯವೋ, ಅದೆಲ್ಲವನ್ನೂ ಕಾಲ್ಪನಿಕವಾಗಿಯೇ ಪರಿಭಾವಿಸಲಾಗುತ್ತದೆ. ಏನೆಂದರೆ, ಮಾನಸಿಕ ನೆಲೆವೊಂದು (ಮೆಂಟಲ್ ಸ್ಪೇಸ್) ಏನೆಲ್ಲವನ್ನು ಒಳ್ಗೊಂಡಿರುತ್ತದೆ ಎನ್ನುವುದನ್ನು ಅರಿಯಲು ನಮಗೆಲ್ಲ ಸಾಧ್ಯವಾಗುವುದೇ ಮಾನಸಿಕವಾಗಿ ನೆಲೆಗೊಳ್ಳುವ ಇಂತಹ ಲೆಕ್ಕಾಚಾರಗಳಿಂದ ಮಾತ್ರ. ಹಾಗಾದರೆ, ಪ್ರತೀ ವ್ಯಕ್ತಿಯ ಮಾನಸಿಕ ನೆಲೆಯು ಪರಿಭಾವಿಸುವ ಯಾವುದೇ ವಿಚಾರ ಇಲ್ಲವೇ ನೋಟಕ್ರಮಗಳು, ಆಯಾ ವ್ಯಕ್ತಿಗೆ ಮಾತ್ರ ನಿರ್ಧಿಷ್ಟವಾಗಿರುತ್ತವೋ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.
ವಿಚಾರ ಇಲ್ಲವೇ ನೋಟಕ್ರಮಗಳು ವ್ಯಕ್ತಿ ವಿಶಷ್ಟತೆಯಿಂದ ಕೂಡಿರಲಾರವು. ಬದಲಾಗಿ ವ್ಯಕ್ತಿಗಳು ಈ ವಿಚಾರಗಳನ್ನು ಪರಿಭಾವಿಸುವ ಇಲ್ಲವೇ ನಿರ್ವಚಿಸುವ ವಿನ್ಯಾಸಗಳು ಮಾತ್ರ ಬೇರೆಯಾಗಿರುತ್ತವೆ. ಕಾಲ್ಪನಿಕ ಇಲ್ಲವೇ ದಿಟವಾದ ವ್ಯಕ್ತಿ, ಕಾಲ ಮತ್ತು ದೇಶಗಳನ್ನು ಪರಿಭಾವಿಸಲು ನಮಗೆ ಮುಖ್ಯವಾಗಿ ಡೈಯಕ್ಸಿಸ್ಗಳು (Deixis) ಒತ್ತಾಸೆಯಾಗಿರುತ್ತವೆ. ಡೈಯಕ್ಸಿಸ್ಗಳು ಮೂಲಕವೇ ನಾವು ಯಾವುದೇ ನುಡಿ ಪಠ್ಯಗಳಲ್ಲಿ ಸಂದರ್ಭಗಳನ್ನು ರೂಪಿಸಿಕೊಳ್ಳುತ್ತೇವೆ. ಈ ಸಂದರ್ಭಗಳೇ ನಮಗೆ ಕಾಲ, ದೇಶಗಳನ್ನು ಪರಿಭಾವಿಸಲು ಸೂಚಕಗಳಾಗಿರುತ್ತವೆ.
ಉದಾ.ಗೆ ನೀವು ದಯವಿಟ್ಟು ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ. ಈ ಉದಾಹರಣೆಯಲ್ಲಿರುವ ‘ನಮ್ಮ ಮನೆಗೆ’ ಎಂಬ ಉಲ್ಲೇಖವನ್ನು ಹೇಳುಗನು ಉಲ್ಲೇಖಿಸುವಾಗ, ಅವನು ಕಡ್ಡಾಯವಾಗಿ ತನ್ನ ಮನೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲ. ಮತ್ತು ಕೇಳುಗನಿಗೆ ಈ ಆಮಂತ್ರಣವನ್ನು ತನ್ನ ಮನೆಯಿಂದಲೇ ನೀಡುವ ಅಗತ್ಯವೂ ಕೂಡ ಇರುವುದಿಲ್ಲ. ಹಾಗೂ ಕೇಳುಗನು ಕೂಡ ಪ್ರತಿಯಾಗಿ, ಹ್ಞಾ! ಖಂಡಿತವಾಗಿ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಎಂದು ಹೇಳುವಾಗಲೂ ಕೂಡ ಅವನು ಈ ಹೇಳುಗನ ಮನೆಗೆ ಬಂದು ಹೇಳುವ ಅವಶ್ಯಕತೆ ಇರವುದಿಲ್ಲ. ಅಂದರೆ ನುಡಿ ಸಾಮಗ್ರಿಗಳನ್ನು ಬಳಸುವಾಗ, ತಿರುಳುಗಳನ್ನು ಹೊರಡಿಸಲು ಬೇಕಾಗುವ ಅಂತರ್ಗತ ಸಾಮಗ್ರಿಗಳು ಅವುಗಳಲ್ಲಿ ಅಡಕವಾಗಿರುತ್ತವೆ.
ರಚನೆ ಹಾಗೂ ತಿರುಳು, ಈ ಎರಡೂ ನೆಲೆಗಳಿಂದಲೂ ನುಡಿ/ಮಾತು ಸಂದರ್ಭ ಮುಕ್ತವಾಗಿರುತ್ತದೆ. ಈ ಸಂದರ್ಭ ಮುಕ್ತತೆ ಕಾಲ-ದೇಶ-ವ್ಯಕ್ತಿಗಳನ್ನು ಮೀರಿ ನಿಲ್ಲುತ್ತದೆ. ಉದಾ.ಗೆ ಕುವೆಂಪು ಅವರು ತಮ್ಮ ಶ್ರೀ ರಾಮಯಣ ದರ್ಶನಂ, ಕೃತಿಯಲ್ಲಿ ಊರ್ಮಿಳೆಯಿಂದ, “ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ” ಎಂಬ ಮಾತನ್ನು ಆಡಿಸುತ್ತಾರೆ. ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಈ ಮಾತು ಸಾಂದರ್ಭಿಕವಾಗಿದ್ದರೂ, ಇದು ಸಂದರ್ಭ ಮುಕ್ತತೆಯನ್ನೂ ಪಡೆದಿರುತ್ತದೆ ಎಂಬುದು ಮಾತ್ರ ದಿಟ. ಯಾವುದೇ ಗುರಿರಹಿತ ಬದುಕಿನ ಯಾವುದೇ ಒಂದು ಕ್ರಿಯೆಯ ತಾತ್ಪರ್ಯವನ್ನು ಸೂಚಿಸಲು ಈ ಮಾತನ್ನು ಬಳಸಲು ಸಾಧ್ಯವಿದೆ.
ಕೇವಲ ಆಡಂಬರಕ್ಕಾಗಿ ಇಲ್ಲವೇ ಪ್ರದರ್ಶನಕ್ಕಾಗಿ ನಡೆಯುವ ಕ್ರಿಯೆಗಳನ್ನು ಟೀಕಿಸಲೂ ಕೂಡ ಈ ಮಾತನ್ನು ಬಳಸಬಹುದಾಗಿದೆ. ಪ್ರಾಥಮಿಕವಾಗಿ ನುಡಿಯೊಂದು ರಾಚನಿಕ ವ್ಯವಸ್ಥೆಯಾಗಿದ್ದರೂ ಕೂಡ, ಅದಕ್ಕೊಂದು ಅನಕೂಲಾತ್ಮಕ ನೆಲೆ ಇದ್ದೇ ಇರುತ್ತದೆ. ನುಡಿಯೊಂದಕ್ಕೆ ಈ ನೆಲೆಯೂ ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ. ಅಂದರೆ, ಉಲಿ (ಧ್ವನಿ) ಮತ್ತು ತಿರುಳುಗಳ (ಅರ್ಥ) ನಡುವೆ ಯಾವುದೇ ಬಗೆಯ ತಾರ್ಕಿಕ ನಂಟಸ್ತಿಕೆ ಇರುವುದಿಲ್ಲ. ಉದಾ.ಗೆ ‘ಮರ’ ಎಂಬ ಪದದ ಉಲಿಗಳ ಮೊತ್ತಕ್ಕೂ ಅದು ನಿರೂಪಿಸುವ ತಿರುಳಿಗೂ ಯವುದೇ ಬಗೆಯ ನಂಟಿರುವುದಿಲ್ಲ. ಪ್ರತೀ ನುಡಿಯೊಳಗೆಯೇ ನಡೆಯುವ ಇಂತಹವೊಂದು ಹೊಂದಾಣಿಕೆಯ ನೆಲೆಯನ್ನೇ ನಾವು ಇಲ್ಲಿ ಅನಕೂಲಾತ್ಮಕವೆಂದು ಬಣ್ಣಿಸುತ್ತೇವೆ.
ನುಡಿ ತನ್ನಲ್ಲಿರುವ ಈ ಅನಕೂಲಾತ್ಮಕ ರಾಚನಿಕ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಆಯಾ ಕಾಲ, ದೇಶ ಹಾಗೂ ವ್ಯಕ್ತಿಗಳಿಗೆ ಪೂರಕವಾಗುವ ಇಲ್ಲವೇ ಅಗತ್ಯವಾಗುವ ಸಂಕಥನಗಳನ್ನು ಕಟ್ಟುತ್ತಿರುತ್ತದೆ. ‘ಈ ಸಂಕಥನಗಳ ನಿರೂಪಣೆಯ ನುಡಿಯು ಕೂಡ ಕಣ್ಣಿನ ಓದಿಗೆ ಅನಕೂಲವಾಗುವಂತೆ ಇರುವ ಬದಲಾಗಿ ಕಿವಿಯ ಓದಿಗೆ ತಕ್ಕಂತೆ ಇರುತ್ತದೆ.
ಕಣ್ಣಿಗೆ ಕಾಣುವಂತೆ ಹೇಳುವುದಕ್ಕಿಂತ ಕಣ್ಣಿಗೆ ಕಟ್ಟುವಂತೆ ಹೇಳುವುದು ಈ ಸಂಕಥನಗಳ ದಾಟಿಯಾಗಿರುತ್ತದೆ’ (ಕೆವಿಎನ್:2010). ಮಾತು ಮತ್ತು ಮಾತಿನ ಮೂಲಕ ದೊರೆಯುವ ಒಂದೊಂದು ತಿರುಳು, ತಿಳಿವು ಹಾಗೂ ಹೊಳವುಗಳೆಲ್ಲವೂ ಅನುಭವದ ನೆಲೆಯನ್ನು ಪಡೆಯುತ್ತವೆ. ಮಾತು ಅನುಭವದ ಆಯಾಮವನ್ನು ಪಡೆದಕೂಡಲೇ, ಅದಕ್ಕೊಂದು ಸಂದರ್ಭ ಮುಕ್ತತೆಯು ಪ್ರಾಪ್ತವಾಗುತ್ತದೆ. ಇಂತಹ ವಿನ್ಯಾಸಗಳ ಕಾರಣವಾಗಿಯೇ ಮಾತು, ವ್ಯಕ್ತಿ, ಕಾಲ ಹಾಗೂ ದೇಶಗಳ ನಡುವೆ ವಿಭಜನೆಯೂ ಏರ್ಪಡುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ.
ಆದರೆ ಸಾಮಾಜಿಕ ವಾಸ್ತವಗಳ ಮೂಲನೆಲೆಗಳು ಮೈಪಡೆಯುವುದು ಅಯಾ ನುಡಿಯಿಗರು (ಭಾಷಿಕರು) ತಾವಾಡುವ ನುಡಿಯ ತಿಳಿವಿನ ಮೂಲಕವೇ ಎಂಬುದು ಗಮನಾರ್ಹ. ಈ ವಿನ್ಯಾಸವು ಅತ್ಯಂತ ವ್ಯಾಪಕವಾಗಿರುತ್ತದೆ. ಮಾನಸಿಕ ಜಗತ್ತು ಮತ್ತು ಭೌತಿಕ ಜಗತ್ತಿನಲ್ಲಿರುವ ವಸ್ತುಗಳ-ವಿದ್ಯಮಾನಗಳ ತಿಳಿವನ್ನು ಈ ವಿನ್ಯಾಸವು ಒಳ್ಗೊಂಡಿರುತ್ತದೆ. ಈ ತಿಳಿವಿಗೆ ಎರಡು ಆಯಾಮಗಳು ಇರುತ್ತವೆ.
ಅಂದರೆ ಆಯಾ ತಿಳಿವು ಏನನ್ನು (ನಾಲೇಡ್ಜ್ ವ್ಹಾಟ್) ಸೂಚಿಸುತ್ತದೆ. ಹಾಗೂ ಆಯಾ ತಿಳಿವು ಹೇಗೆ (ನಾಲೇಡ್ಜ್ ಹೌ) ಸಮೂಹಗಳ ಒಡಲಲ್ಲಿ ನೆಲೆಗೊಳ್ಳುತ್ತದೆ ಎಂಬುದಾಗಿವೆ. ಆದರೆ ಈ ಎರಡೂ ತಿಳಿವಿನ ಆಯಾಮಗಳಲ್ಲಿ ಹಲವು ಬಗೆಯ ಸಾಮನ್ಯೀಕರಣದ (ಜನರ್ಯಾಲಿಟಿ) ನೆಲೆಗಳು ಹುದುಗಿರುತ್ತವೆ. ಹಾಗಾಗಿ ಒಂದೊಂದು ಪರಿಕಲ್ಪನಾತ್ಮಕ ತಿಳಿವು ಹಲವು ಆಯಾಮಗಳಿಂದ ಕೂಡಿರುತ್ತದೆ.
ಹಾಗೂ ಇಡಿತನದ ಮಾದರಿಗಳನ್ನು ಈ ಆಯಾಮಗಳು ನಿರಂತರವಾಗಿ ರೂಪಿಸುತ್ತವೆ. ಅಂದರೆ ಹಲವು ವಿಭಿನ್ನ ವಸ್ತುಗಳು ಹಾಗೂ ವಿದ್ಯಮಾನಗಳ ನಡುವಣ ಅಂತರ್ಸಂಬಂಧವನ್ನು ಗುರುತಿಸುವುದಾಗಿದೆ. ನುಡಿಯ ಮೂಲಕ ಮೈಪಡೆಯುವ ಪ್ರತಿಯೊಂದು ತಿಳಿವಿನ ಅವಿಭಾಜ್ಯ ಅಂಗವಾಗಿ ಇಂತಹ ಅಂತರ್ಸಂಬಂಧವು ನೆಲೆಗೊಳ್ಳುತ್ತದೆ.
ನುಡಿ ಸಾಮಗ್ರಿಗಳು ಕೇವಲ ಇಡಿತನವನ್ನು ಮಾತ್ರ ರೂಪಿಸದೇ ಬಿಡಿತನದ ಮೂಲಕ ಸಾಮಾಜಿಕ ಹಾಗೂ ಮಾನಸಿಕ ಪ್ರತ್ಯೇಕತೆಯನ್ನೂ ಸಂಘಟಿಸುತ್ತವೆ. ಅಸ್ಪೃಶ್ಯತೆಯಂತಹ ಅನುಭವವು ಶತಮಾನಗಳಿಂದ ಆಚರಣೆಯಲ್ಲಿದೆ. ಆದರೆ ಈ ಆಚರಣೆಯ ಸಾಮಾಜಿಕ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯವೇ ಹೊರತು ಮಾನಸಿಕ ವಿನ್ಯಾಸದಲ್ಲಿ ಯಾವುದೇ ಬಗೆಯ ಪಲ್ಲಟವು ಇದುವರೆಗೂ ಏರ್ಪಟ್ಟಿರುವುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
ತಿರುಳಿನ ಇಲ್ಲವೇ ತಿಳಿವಿನ ಇಡಿತನದ ಸ್ವರೂಪದಲ್ಲಿಯೇ ಸಾಮಾಜಿಕ ಮತ್ತು ಮಾನಸಿಕ ಪ್ರತ್ಯೇಕತೆಯ ಚಹರೆಗಳು ಬಿಂಬಿತವಾಗುತ್ತವೆ. ತಿರುಳಿನ ಇಡಿತನದಲ್ಲಿರುವ ಅಂತರ್ಸಂಬಂಧದ ಆಯಾಮಗಳು ಇಂತಹ ಪ್ರತ್ಯೇಕತೆಯ ಕಾರಣದಿಂದ ಬಿಡಿಬಿಡಿಯಾಗಿ ನೆಲೆಗೊಳ್ಳುತ್ತವೆ. ಅಂದರೆ ಅಭಾದಿತ ಅನುಭವವು ಸಾಮಾಜಿಕ ಹಾಗೂ ಮಾನಸಿಕ ಇಡಿತವನ್ನಷ್ಟೆಯಲ್ಲದೇ ತಿರುಳಿನ ಐಕ್ಯತೆಯನ್ನೂ ಸೂಚಿಸುತ್ತದೆ.
ಆದರೆ ಸಮೂಹಗಳನ್ನು ಭಾದಿಸುವ ಯಾವುದೇ ಬಗೆಯ ಅನುಭವವೊಂದು ಐಕ್ಯತೆಯ ಸೂಚಕವಾಗಿರಲು ಸಾಧ್ಯವಿಲ್ಲ. ಈ ನಿಲುವು ಅತ್ಯಂತ ನಿಚ್ಚಳವಾಗಿ ನುಡಿ ಸಾಮಗ್ರಿಗಳ ಮೂಲಕ ಪ್ರಕಟವಾಗುತ್ತದೆ. ಅಂದರೆ ಮಾತಿನಲ್ಲಿ ಸಾಮಾಜಿಕ–ಮಾನಸಿಕ ಬಿರುಕುಗಳು ತಾವಾಗಿಯೇ ಏರ್ಪಡಲಾರವು ಎಂಬುದನ್ನು ಈ ಬಿಡಿತನದ ಆಯಾಮವು ಸೂಚಿಸುತ್ತದೆ. ಹಾಗಾಗಿ ಜಾತಿ ಮತ್ತು ಅಸ್ಪೃಶ್ಯತೆಯಂತಹ ಅನುಭವಗಳು ಇವತ್ತಿಗೂ ಸಹ ಪ್ರತ್ಯೇಕತೆಯ ಸೂಚಕಗಳಾಗಿ ನೆಲೆನಿಂತಿವೆ. ಪ್ರಜಾಸತ್ತಾತ್ಮಕ ನಿಲುವುಗಳು ಮಾತಿನ ಅವಿಭಾಜ್ಯ ಅಂಗವಾಗದೇ ಕೇವಲ ಉಲಿ ಮತ್ತು ತಿರುಳಿನ ನಡುವಣ ಸೂಚಿತ ಹಾಗೂ ಸೂಚಕ ನಂಟನ್ನು ವಿವರಿಸುವುದಕಷ್ಟೆ ಸೀಮಿತವಾಗಿವೆ.
ಇಂತಹ ಪ್ರತ್ಯೇಕತೆಯ ಕಾರಣಕ್ಕಾಗಿಯೇ ನುಡಿಯು ಎಲ್ಲ ಕಾಲದಲ್ಲಿಯೂ ಅತ್ಯಂತ ಪ್ರಬಲವಾದ ಅಸ್ಮಿತೆಯ ಸೂಚಕವಾಗಿ ನೆಲೆನಿಂತಿದೆ. ನುಡಿಯ ಮೂಲಕ ರೂಪುಗೊಳ್ಳುವ ಈ ಅಸ್ಮಿತೆಯೂ ಧರ್ಮದ ಮೂಲಕ ಪಡೆಯುವ ಅಸ್ಮಿತೆಗಿಂತಲೂ ಅತ್ಯಂತ ಪ್ರಬಲವಾಗಿರುತ್ತದೆ ಎಂಬುದು ಗಮನಾರ್ಹ. ಧರ್ಮವೂ ಕೂಡ ಸಮೂಹಗಳಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುವ ಬಹು ದೊಡ್ಡ ಅಸ್ತ್ರವಾಗಿದೆ ಎಂಬುದನ್ನೂ ಇಲ್ಲಿ ಯಾರು ಮರೆಯುವಂತಿಲ್ಲ.
ನುಡಿಯ ಸಂಘಟಿತ ಹಂತದಲ್ಲಿಯೇ ಪರಿಕಲ್ಪನಾತ್ಮಕತೆಯ ನೆಲೆಗಳು ಪರಸ್ಪರ ಸಂಬಂಧಿತ ಪರಿಕಲ್ಪನೆಗಳನ್ನು ಒಳಗೊಳ್ಳಬೇಕಾಗುತ್ತದೆ. ಆದರೆ ಇದೇ ಹಂತದಲ್ಲಿ ಮಾನಸಿಕ-ಸಾಮಾಜಿಕ ಬಿಡಿತನದದ ಇಲ್ಲವೇ ಪ್ರತ್ಯೇಕತೆಯ ಆಯಾಮಗಳು ಕೂಡ ಏರ್ಪಡುತ್ತವೆ. ಅಂದರೆ ಪರಸ್ಪರ ಸಂಬಂಧಿತ ಪರಿಕಲ್ಪನೆಗಳಲ್ಲಿ ಅಡಕವಾಗಿರುವ ಸಂಕೀರ್ಣತೆಯನ್ನು ಗ್ರಹಿಸುವ ಮೂಲಕ ಈ ಬಿಡಿತನದ ವಿನ್ಯಾಸಗಳನ್ನು ಅರಿಯುವ ಅಗತ್ಯವಿರುತ್ತದೆ.
ಏಕೆಂದರೆ ಮಾಹಿತಿಯೊಂದಕ್ಕಿಂತ ಹೆಚ್ಚು ಸಂಕೀರ್ಣವಾಗಿರುವ ವಸ್ತುಸ್ಥಿತಿಯೊಂದು ನುಡಿಯ ಅಭಿವ್ಯಕ್ತಿಗಳ ಮೂಲಕ ಸಹಜವಾಗಿ ಪ್ರತಿನಿಧಿಕರಣಗೊಳ್ಳುತ್ತದೆ. ಈ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದೆಂದರೆ, ಆಯಾ ಮಾತುಗಳಲ್ಲಿ ಅತ್ಯಂತ ವ್ಯಾಪಕವಾಗಿ ಅಂತಸ್ಥವಾಗಿರುವ ಮಾಹಿತಿಗಳನ್ನು ಮಾತ್ರ ಅರಿಯುವುದಲ್ಲ. ಬದಲಾಗಿ ಅವುಗಳು ಸೂಚಿಸುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವಿನ್ಯಾಸಗಳನ್ನೂ ತಿಳಿಯುವುದಾಗಿದೆ.
ಹಾಗಾಗಿ ಅಭಿವ್ಯಕ್ತಿಯೊಂದು ರೂಪುಗೊಳ್ಳುವುದೆಂದರೆ, ವಿಸ್ತಾರವದ ಮಾಹಿತಿಯೊಂದನ್ನು ಅಮೂರ್ತಗೊಳಿಸಿ ನೋಡುವ ಬಗೆಯಾಗಿರುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ವಿಸ್ತಾರದಲ್ಲಿ ಹರಡಿಕೊಂಡಿರುವ ಒಟ್ಟು ನುಡಿಮೊತ್ತವೇ ಹಾಗೂ ಆಯಾ ಸನ್ನಿವೇಶಕ್ಕೆ ಅಗತ್ಯವಿರುವ ಮಾಹಿತಿಗಳ ಸಂಚಯವೇ ಸಂಕಥನಗಳಾಗಿ ರೂಪುಗೊಳ್ಳುತ್ತವೆ. ಇಂತಹ ಸಂಕಥನಗಳು ಬಹುತೇಕವಾಗಿ ಪ್ರತಿನಿಧಿಕರಣದ ಮಾದರಿಗಳಾಗಿ ರೂಢಿಯಲ್ಲಿರುತ್ತವೆ.
ಯಾವುದೇ ತಿಳುವಿನ ನಿರ್ವಚನೆಯ ವಿನ್ಯಾಸಗಳು ಕೂಡ ಇಂತಹ ಸಂಕಥನಗಳ ಸನ್ನಿವೇಶಗಳಲ್ಲಿಯೇ ಬೇರೂರಿತ್ತವೆ. ಹಾಗಾಗಿ ಕಾಲ, ದೇಶ ಮತ್ತು ವ್ಯಕ್ತಿಗಳಿಗೆ ಅನುಗುಣವಾದ ಸಂಕಥನಗಳು-ಸನ್ನಿವೇಶಗಳು ನಿರಂತರವಾಗಿ ವಿಕಾಸಗೊಳ್ಳುತ್ತವೆ. ಪರಿಣಾಮವಾಗಿ ಮಾತು ಮತ್ತು ಈ ಎಲ್ಲ ಸಂಕಥನ-ಸನ್ನಿವೇಶಗಳ ನಡುವೆ ಸಹಜವಾಗಿ ವಿಭಜನೆಗಳು ಕೂಡ ಏರ್ಪಡುತ್ತವೆ. ಆದ್ದರಿಂದ ಪ್ರಾದೇಶಿಕ (ಸ್ಪೇಶಿಯಲ್) ಕೇಂದ್ರಿತ ನೋಟಕ್ರಮಗಳು, ಪರಿಕಲ್ಪನಾತ್ಮಕ ಕೇಂದ್ರಿತ ನೋಟಕ್ರಮಗಳಕ್ಕಿಂತ ಭಿನ್ನವಾಗಿರುತ್ತವೆ.
ಏಕೆಂದರೆ, ಕೇಳುಗನ ತಿಳಿವು, ನಂಬಿಕೆ, ಭಾವನೆಗಳು, ಪ್ರೇರಣೆಗಳು ಮೊದಲಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಹೇಳುಗನು ತನ್ನ ಸಂದೇಶಗಳನ್ನು ರೂಪಿಸುತ್ತಾನೆ. ಈ ಪ್ರಕ್ರಿಯೆಯೂ ಕಾಲ, ದೇಶ ಹಾಗೂ ವ್ಯಕ್ತಿಗಳ ನೆಲೆಯಲ್ಲಿ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಮಹತ್ವವನ್ನು ಪಡೆದುಕೊಳ್ಳುವುದು ಕೂಡ ಇದೇ ಕಾರಣಗಳಿಂದ.
ಅದಕ್ಕಾಗಿ ಡೆರಿಡಾ ಹೇಳುವ ಸೂಚಕ-ಸೂಚಿತಗಳ ನಡುವಣ ಅಪರಿಮಿತವಾದ ಅರ್ಥದ ನಂಟಸ್ತಿಕೆಯನ್ನು ಗುರುತಿಸಲೂ ಕೂಡ ಈ ಕಾಲ-ದೇಶ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ವಿನ್ಯಾಸಗಳೇ ಕಾರಣವಾಗುತ್ತವೆ. ಅಂದರೆ, ಅರ್ಥದಲ್ಲಿ ಉಂಟಾಗುವ ಭೇದಗಳಿಗೆ ಪ್ರಾದೇಶಿಕತೆ (ಸ್ಪೇಶಿಯಲ್) ಕಾರಣವಾದರೆ, ಅರ್ಥಗಳ ಪಲ್ಲಟ ಇಲ್ಲವೇ ಮುಂದೂಡಿಕೆಗೆ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಕಾರಣವಾಗುತ್ತವೆ ಎಂಬ ಹೊಳವು ಡೆರಿಡಾನ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ.
ಒಟ್ಟಿನಲ್ಲಿ ಮಾತು ಮತ್ತು ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವಣ ವಿಭಜನೆಗೆ ಏನೆಲ್ಲ ಸಂಗತಿಗಳು ಕಾರಣವಾಗುತ್ತವೆ. ಈ ಸಂಗತಿಗಳಿಗೆ ನುಡಿ ಮತ್ತು ನುಡಿ ಸಾಮಗ್ರಿಗಳು ಮಾತ್ರ ಕಾರಣವಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವ್ಯಾಪಾರಗಳೂ ಕೂಡ ಕಾರಣವಾಗುತ್ತವೆ ಎನ್ನುವ ದಿಟವನ್ನು ಇಲ್ಲಿ ಅರಿಯಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ