Connect with us

ಅಂತರಂಗ

ಧರ್ಮ ಮರ್ಮ – 10 : ಅಲ್ಲಿರುವುದು ನಮ್ಮನೆ

Published

on

  • ಯೋಗೇಶ್ ಮಾಸ್ಟರ್

ಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್‍ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ ಇರೋದಕ್ಕೆ ಯಾಕೆ ಅಷ್ಟೋಂದು ಮುತುವರ್ಜಿ ವಹಿಸೋದು? ಅಂತೆಲ್ಲಾ ಅಂದ್ರೆ, ವೇದಾಂತ ಆಡೋಕೆ, ತಿನ್ನೋಕೆ ಬದನೆಕಾಯಿ ಅಂತ ಪೆಕ್ರುಪೆಕ್ರಾಗಿ ನಗ್ತಾರೆ.

ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ ಅಂತ ಶುದ್ಧ ಅಧಿಕ ಪ್ರಸಂಗದ ಮಾತು ನಿಜವಾಗಿಯೂ ಸಾವಿನ ದವಡೆಯಲ್ಲಿರುವವರ ಮನಸ್ಥಿತಿಗಳಿಗೆ ಅನ್ನಿಸೀತು. ಯಾವುದೇ ಕಾರಣಕ್ಕೆ ತಮ್ಮ ಸಾವಿನ ನಿಗಧಿತ ಸಮಯವನ್ನು ಅಥವಾ ಕಾಣುತ್ತಿರುವಂತೆಯೇ ಸಮೀಪಿಸುತ್ತಿರುವ ಸಾವನ್ನು ಎದುರಿಸುತ್ತಿರುವವರು ವೈರಾಗ್ಯ ಭಾವಕ್ಕೆ ಒಳಗಾಗುವುದನ್ನು ನಾನು ಕಂಡಿದ್ದೇನೆ.

ಕ್ಯಾನ್ಸರ್ ಬಾಧೆಯಲ್ಲಿ ಜೀವನ್ಮರಣದ ತಾಕಲಾಟವನ್ನು ಎದುರಿಸಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದ ಆ ಸಮಯದಲ್ಲಿ ಡಾ. ಎಂ ವಸು ಮಳಲಿ ತಮ್ಮ ಬದುಕಿನ ಇರುವ ಒಲವಿನ ಕುರಿತೂ, ಸಾವಿನ ಬಗ್ಗೆ ಸೈದ್ಧಾಂತಿಕವಾಗಿ ಮಾತಾಡುವುದಿರಲಿ, ಆಲೋಚಿಸುವುದಕ್ಕೂ ನಿರಾಕರಿಸುತ್ತಿದ್ದರು.

ಒಂದು ಪಕ್ಷ ಅಂತಹದ್ದೊಂದು ಮಾತು ಬಂದಾಗ ನೇರವಾಗಿ ಹೇಳುತ್ತಿದ್ದರು, “ನಿಮಗೆ ಎಲ್ಲವೂ ಸರಿಯಿದ್ದು, ಸಾವಿನ ಬಗ್ಗೆ ಭಯವಿಲ್ಲದಿರುವುದಕ್ಕೆ ಬೇಕಾದ ಫಿಲಾಸಫಿಯನ್ನ ಮಾತಾಡ್ತೀರಿ. ಸಾವನ್ನೂ ರೋಮ್ಯಾಂಟಿಕ್ ಆಗಿ ಬಣ್ಣಿಸ್ತೀರಿ. ಆದರೆ ಅದನ್ನು ನನ್ನಂತವಳು ಓದಿದರೆ ಅದು ಹುಸಿ ಅಂತ ಚೆನ್ನಾಗೇ ಗೊತ್ತಾಗತ್ತೆ” ಎಂದು ಹೇಳಿದ್ದರು. ಈಗ ಅವರಿಲ್ಲ. ಆದರೆ ಅವರು ನಿಜಕ್ಕೂ ಮೃತ್ಯುವಿನ ದವಡೆಗೆ ಹೋಗಿ ನಂತರ ಮರಣಿಸುವ ನಡುವೆ ಒಂದಷ್ಟು ಕಾಲ ಚೆನ್ನಾಗಿಯೇ ತಮ್ಮ ಜೀವನದ ಘನತೆಯನ್ನು ಸ್ಪಷ್ಟವಾಗಿಯೇ ಎತ್ತಿ ಹಿಡಿಯುತ್ತಾ ಚಟುವಟಿಕೆಪೂರ್ಣವಾಗಿಯೇ ಬದುಕಿದ್ದರು.

ಆ ಸಮಯದಲ್ಲಿ ಅವರೊಡನೆ ಹತ್ತಿರದಿಂದಾದರೂ, ಹೊರಗಿನಿಂದ ಒಡನಾಡುತ್ತಿದ್ದಾಗ ಸಾವಿನ ಬಗ್ಗೆ ಅವರು ಕಾಣುವಂತಹ ಒಳದೃಷ್ಟಿಯನ್ನು ನನಗೆ ಕಾಣಲಾಗುತ್ತಿರಲಿಲ್ಲ. ಅವರೆಷ್ಟೇ ಆಳದ ದೃಷ್ಟಿಯನ್ನು ನಮಗೆ ನೀಡಿದರೂ, ನನ್ನಂತವನು ಹೆಚ್ಚೆಂದರೆ ಸಕಾರಾತ್ಮಕವಾಗಿ ಬದುಕನ್ನು ನೋಡುವುದು, ನಾವು ಹೆದರುವ ಸಾವನ್ನು ಜಾಣತನದಿಂದ ಪಕ್ಕಕ್ಕೆ ಸರಿಸಿ ಬರೀ ಜೀವಿಸುವ ಅಂಶಗಳನ್ನಷ್ಟೇ ಸರಸಮಯವಾಗಿ ಚಿತ್ರಿಸುವುದಾಗುತ್ತಿತ್ತು. ಅದೂ ಸಾವಿನ ಭಯವಿರುವವರಿಗೆ ನಾವೇನೋ ಹೆದರಿಕೆಯನ್ನು ಹೋಗಲಾಡಿಸುವಂತೆ ಅಥವಾ ಪಾಸಿಟಿವ್ ಥಿಂಕಿಂಗ್ ಹೇಳಿಕೊಡುವಂತೆ!

ನನಗೆ ಎಷ್ಟೋ ಬಾರಿ ಅನ್ನಿಸುತ್ತದೆ, ನಮ್ಮಲ್ಲಿ ಬಹುಪಾಲು ಮಂದಿ ಯಾರಾದರೂ ಸತ್ತಾಗ ಅಳುವುದು ದುಃಖದಿಂದಲ್ಲ ಭಯದಿಂದ ಎಂದು. ಯಾವುದೇ ಒಂದು ಅಪಘಾತವಾದಿರುವುದನ್ನು ನೋಡಿದರೆ, ಕೇಳಿದರೆ ಆ ಕ್ಷಣಕ್ಕೆ ಕೊಂಚ ಎಚ್ಚರಿಕೆಯಿಂದ ವರ್ತಿಸುವ ನಂತರ ಮತ್ತೆ ಮರೆತುಬಿಡುವ ಜಾಯಮಾನ ನಮ್ಮದು. ಅಂತೆಯೇ ಮರಣಿಸಿದವರು ನಮ್ಮೊಡನೆ ಒಡನಾಡಿದ್ದರೆ ಆ ನೆನಪುಗಳಿಂದ ಬಾಧಿತರಾಗುತ್ತೇವೆ.

ನಮ್ಮೊಡನೆ ಮಾತಾಡಿದವರು, ಸ್ಪಂದಿಸಿದವರು, ನಮ್ಮ ಜೊತೆ ತಮ್ಮ ಪ್ರೀತಿ, ಅಕ್ಕರೆ, ಕನಸುಗಳನ್ನು ಹಂಚಿಕೊಂಡವರು, ಬಾಳನ್ನು ಬೆಳಗಿಸಿದವರು, ಬದುಕನ್ನು ಬೆರಗಿನಿಂದ ಸವಿದವರು ಇಂದು ನಿಶ್ಚೇತನರಾಗಿ ಮಣ್ಣಿನ ಕುಪ್ಪೆಯ ಕೆಳಗೆ ಮಲಗುವರು ಅಥವಾ ಬೆಂಕಿಯಲ್ಲಿ ಸುಟ್ಟು ಬೂಧಿಯಾಗುವರು ಎಂಬ ಆಲೋಚನೆಯೇ ಒಂದು ಆಘಾತಕರ, ಅವರಿನ್ನೆಂದೂ ನಮ್ಮೊಡನೆ ಈ ಮೊದಲಿದ್ದ ಹಾಗೆ ಇರುವುದೇ ಇಲ್ಲ ಎಂದು ಬರಿದೇ ನೆನೆಸಿಕೊಳ್ಳಲೂ ಸಂಕಟಕರ.

ಏನೇ ಸಕಾರಾತ್ಮಕವಾಗಿ ಯೋಚಿಸಿದರೂ ಸಾವೆಂಬುವ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲದೇ ಇರುವ ಕಾರಣದಿಂದಲೇ ಚೇತನ, ಆತ್ಮ, ಮುಕ್ತಿ ಇತ್ಯಾದಿಗಳನ್ನು ಚಿಂತಿಸಲಾಯ್ತು. ಬೇರೆ ದಾರಿಗಳಿಲ್ಲದೇ ಸತ್ತವರ ಆತ್ಮಕ್ಕೆ ಶಾಂತಿ ಕೋರುವ, ಅವರ ಚೈತನ್ಯವು ನಮ್ಮೊಡನೆ ಇರುವಂತಹ ಅನೇಕ ಅಸಂಗತ ವಿಚಾರಗಳಿಂದ ನಮ್ಮ ಮನಸ್ಸುಗಳಿಗೆ ಸಮಾಧಾನ ತಂದುಕೊಳ್ಳುವ ರೀತಿಗಳನ್ನು ಕಂಡುಕೊಳ್ಳಲಾಯಿತು.

ಯಾರದೇ ಶವಸಂಸ್ಕಾರಕ್ಕೆ ಹೋದಾಗ “ಬದುಕು ಇಷ್ಟೇನೇ” ಎಂದು ಅನ್ನಿಸುವಂತಹ ಸ್ಮಶಾನ ವೈರಾಗ್ಯವನ್ನೇ ಗಟ್ಟಿಯಾಗಿ ಹಿಡಿದು, ಭೂಮಿಯ ವಿಸ್ತಾರ ಜೀವನದಲ್ಲಿ ನಮ್ಮ ಆಗಮನ ಮತ್ತು ನಿರ್ಗಮನದ ನಡುವಿನ ಅವಧಿಯು ಬಹಳ ಅಲ್ಪವೇ ಆದ್ದರಿಂದ, ಅಷ್ಟೂ ಸಮಯ ಸಾರ್ಥಕವಾಗಿ, ದಯೆ, ಕರುಣೆ, ಪ್ರೀತಿ, ಭಕ್ತಿಗಳಿಂದ ಬಾಳಿ ಬದುಕಿ “ಹೊರಟೆ ಸೇರೆ ನಮ್ಮ ಊರ” ಎಂದು (ತುಕಾರಾಂ ಹೇಳುವಂತೆ) ಹೋಗುತ್ತೇವೆ ಎಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಲೇ ಸಂಸಾರ ಕ್ಷಣಭಂಗುರ, ನೀರಿನ ಮೇಲೆ ಗುಳ್ಳೆ ನಿಜವಲ್ಲಾ ಹರಿಯೇ ಎಂದೆಲ್ಲಾ ದಾಸರು ಹೇಳುವುದು. ಇಂತಹ ವೈರಾಗ್ಯವೇ ಜೈನ ತೀರ್ಥಂಕರರ ಕಾರಣಿಕ ಶಕ್ತಿ, ಸಾರ.

ಈ ಅರಿವಿನಿಂದಲೇ ಭಾರತದಲ್ಲಂತೂ ಸಂತವರ್ಗದ ಸೃಷ್ಟಿ ಮತ್ತು ಬೆಳವಣಿಗೆ ಬಹಳವಾಯಿತು. ಇದೇ ತಿಳುವಳಿಕೆಯೇ ಆಧ್ಯಾತ್ಮಿಕತೆಯ ನೈತಿಕತೆಯ ಭದ್ರಬುನಾದಿಯನ್ನು ಭಕ್ತಿ ಚಳವಳಿಗೆ ನೀಡಿದ್ದು. ಈ ವಿಚಾರವೇ ಜಾತಿ, ಮತ, ಧರ್ಮಗಳು ಮತ್ತು ವರ್ಗಗಳು ಹುಟ್ಟಿ ಹಾಕಿದ ಮೇಲರಿಮೆ ಮತ್ತು ಕೀಳರಿಮೆಗಳನ್ನು ನಿರಾಕರಿಸಲು, ಸಂಪೂರ್ಣ ಧಿಕ್ಕರಿಸಲು ಸಹಕರಿಸಿದ್ದು. ಅರಿವಿಲ್ಲದಂತೆ ಆದ ಹುಟ್ಟೂ, ಅರಿತಿಲ್ಲದ್ದ ಬರುವ ಸಾವಿನ ನಡುವಿನ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಳ್ಳಲು, ಅದನ್ನು ಸಂಪೂರ್ಣವಾಗಿ ಸತ್ವಭರಿತವನ್ನಾಗಿಸಲು ಭಕ್ತಿ ಮತ್ತು ವೈರಾಗ್ಯವನ್ನು ಹೇಳಿಕೊಟ್ಟಿದ್ದು ನಮ್ಮ ಭಕ್ತಿ ಪರಂಪರೆ.

ಈ ಭಕ್ತಿಪರಂಪರೆಯು ಚಳುವಳಿಯ ರೀತಿಯಲ್ಲಿ ಸಮಾಜದಲ್ಲಿ ನೆಲೆಸಿದ್ದ ಅಸಮಾನತೆಯ ವಿರುದ್ಧ ಬಹಳ ಗಟ್ಟಿತನದಿಂದಲೂ, ಸಾತ್ವಿಕ ರೀತಿಯಿಂದಲೂ ಹೋರಾಡಿತು. ಬಹುದೊಡ್ಡ ಜನ ಸಮುದಾಯಕ್ಕೆ ವೈರಾಗ್ಯದ ಮನವರಿಕೆ ಮಾಡಿತ್ತು. ಇಂದಲ್ಲ ನಾಳೆ ನಾನು ಸಾಯುತ್ತೇನೆ. ಸಾಯುವ ಮುನ್ನ ಯಾವುದೇ ನಕಾರಾತ್ಮಕವಾಗಿರುವುದನ್ನು ಸಾಧಿಸಿ, ಇತರರನ್ನು ನೋಯಿಸಿ ಹೋಗಕೂಡದೆಂಬ ದಿವ್ಯ ಜ್ಞಾನವು ಸದಾ ಜಾಗೃತವಾಗಿರಲು ಭಕ್ತಿ ಪರಂಪರೆಯವರು ಬಳಸಿದ ಅತಿ ದೊಡ್ಡ ಅಸ್ತ್ರವೆಂದರೆ ಭಗವಂತನಲ್ಲಿ ನಿಷ್ಕಾಮ ಪ್ರೀತಿ. ಯಾವ ಪ್ರತಿಫಲವನ್ನೂ ಬಯಸದ ಭಕ್ತಿ. ಬರಿದೇ ಮುಕ್ತಿ.

ಕೋಳೂರ ಕೊಡಗೂಸು

ಮುಕ್ತಿಯನ್ನು ಪಡೆಯಲು, ನಿಜವಾದ ವೈರಾಗ್ಯ ಭಾವವನ್ನು ಹೊಂದಲು ಸಾಮಾಜಿಕ ಮತ್ತು ವೈಯಕ್ತಿಕವಾದ ಸ್ಥಾನ ಮಾನಗಳ ಅರಿಮೆಗಳನ್ನು, ಅಹಂಕಾರಗಳಿಂದ ಹುಟ್ಟಿರುವ ಭ್ರಮೆಗಳಿಂದ ಹೊರಬರುವ ಅಗತ್ಯವನ್ನು ಭಕ್ತಿ ಚಳುವಳಿಯು ಹೇಳುತ್ತಾ ಹೇಳುತ್ತಾ ಬಹು ಮುಖ್ಯವಾದ ಮತ್ತೊಂದು ವಿಷಯವನ್ನೂ ಸ್ಪಷ್ಟಗೊಳಿಸಿದ್ದರು. ಆಚರಣೆ ಮತ್ತು ಧಾರ್ಮಿಕ ನಿರ್ಬಂಧ ವಿಚಾರಗಳಿಂದ ಹೊರಗೆ ಬರಬೇಕೆಂಬುದನ್ನು ಕಾಲದಿಂದ ಕಾಲಕ್ಕೆ ತಿಳಿಸುತ್ತಲೇ ಬಂದರು.

ಭಗವಂತನೆಂಬ ಪರಿಕಲ್ಪನೆಯನ್ನು ಕಲ್ಲಿನಲ್ಲಿ ಸ್ಥಿರಗೊಳಿಸಿ, ನಮ್ಮ ಭಕ್ತಿ, ಪ್ರೀತಿಗಳನ್ನು ಮುಗ್ಧತೆಯಿಲ್ಲದೇ ಬರಿಯ ಆಚರಣೆಗಳಿಗೆ ಒಳಪಡಿಸಿ, ನೇಮದಲ್ಲಿದ್ದರೆ ಅದೂ ಕೂಡ ವ್ಯರ್ಥವೆಂದು ಸಾಧಿಸಲು ಅನೇಕ ಐತಿಹ್ಯಗಳನ್ನು ಸಮಾಜದ ಕಣ್ಣ ಮುಂದೆ ತಂದರು. ಅದರಲ್ಲಿ ಕೋಳೂರು ಕೊಡಗೂಸು ಒಂದು ಸುಂದರ ಕಥೆ.

ಧಾರವಾಡ ಜಿಲ್ಲೆಯ ಹಾವೇರಿಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮವೇ ಈ ಕೋಳೂರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನೇರ ತಮಿಳುನಾಡಿಗೆ ಒಯ್ಯುತ್ತಾರೆ. ಇದು ತಮಿಳು ಶೈವ ಭಕ್ತಿ ಪರಂಪರೆಯ ಪ್ರಮುಖವಾದ ಕಥೆಗಳಲ್ಲೊಂದು.ಏನೇ ಆಗಲಿ, ನಮ್ಮ ಭಕ್ತಿಯ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಲು ಈ ಕಥೆ ಬಹಳ ಮುಖ್ಯ.

ಕೋಳೂರಿನ ಶಿವ ದೇವಾಲಯದಲ್ಲಿ ಶಿವದೇವನೆಂಬ ಬ್ರಾಹ್ಮಣ ಅರ್ಚಕ. ಅವನಿಗೆ ಒಬ್ಬಳೇ ಮಗಳು ಈ ನಮ್ಮ ಕೊಡಗೂಸು. ಅವಳೋ ಮಗುವಾಗಿದ್ದಾಗಲೇ ತಾಯನ್ನು ಕಳೆದುಕೊಂಡವಳು ಮತ್ತು ತಂದೆಯ ಸುಪರ್ದಿನಲ್ಲಿ ಬೆಳೆಯುತ್ತಾ ಬರುವಳು. ಶಿವದೇವನು ಪ್ರತಿದಿನವೂ ಶಿವನಿಗೆ ಶಾಲ್ಯಾನ್ನದಂತಹ ಭಕ್ಷ್ಯವನ್ನು ಸಿದ್ಧಪಡಿಸಿ ನೈವೇದ್ಯವನ್ನು ನೀಡುತ್ತಿದ್ದನು. (ಕೆಲವೊಂದು ಕೃತಿಗಳಲ್ಲಿ ಕಪಿಲೆಯೆಂಬ ಹಸುವಿನ ಹಾಲು ಎಂದೂ ಇದೆ.) ಒಮ್ಮೆ ಆರೋಗ್ಯ ತಪ್ಪಿದ ತನ್ನ ಸಂಬಂಧಿಕರನ್ನು ನೋಡಿ ಬರಲು ಶಿವದೇವನು ಹೋಗಬೇಕಾಗಿತ್ತು.

ತನ್ನ ಶಿವಪೂಜೆ ಮತ್ತು ನೈವೇದ್ಯದ ನೇಮವು ತಪ್ಪ ಬಾರದೆಂದು ಮಗಳಿಗೆ ಅದನ್ನು ವಹಿಸಿ ತಂದೆ ಹೋಗುವನು. ಈ ಕೂಸು ಶಿವನಿಗೆ ಆಹಾರವನ್ನು ಅರ್ಪಿಸುವುದೆಂದರೆ ಆತನಿಗೆ ತಿನ್ನಲು ಕೊಡುವುದೆಂದೇ ಭಾವಿಸುತ್ತದೆ. ಅಂತೆಯೇ ಕೊಡಲು ಹೋದಾಗ ಲಿಂಗವು ಈಗ ಮೌನವಾಗಿಯೇ ಇರುವಂತೆ ಆಗಲೂ ನಿಶ್ಚೇತನವಾಗಿಯೇ ಇರುತ್ತದೆ. ಆದರೆ ಕೊಡಗೂಸು ತನ್ನ ತಂದೆ ಕೊಡುವಾಗ ಸೇವಿಸುವ ಶಿವ ತಾನು ಕೊಡುವಾಗ ಏಕೆ ಸ್ವೀಕರಿಸುತ್ತಿಲ್ಲ? ಎಂದು ಪರಿಪರಿಯಾಗಿ ಶಿವನನ್ನು ಕರೆಯುತ್ತಾಳೆ. ಆದರೆ ಅವನು ಬರುವುದಿಲ್ಲ. ಬರ್ತೀಯೋ ಇಲ್ಲವೋ, ಎಂದು ಕಂಬಕ್ಕೋ, ಪಾಣೀಪೀಠಕ್ಕೋ ತಲೆ ಚಚ್ಚಿಕೊಂಡು ರಕ್ತಧಾರೆ ಹರಿಸಲು ಮುಂದಾದಾಗ ಶಿವನು ಪ್ರತ್ಯಕ್ಷನಾಗಿ ಅವಳಿಂದ ಆಹಾರವನ್ನು ಸ್ವೀಕರಿಸುತ್ತಾನೆ.

ಶಿವದೇವನು ಮರಳಿ ಬರುವವರೆಗೂ ಈ ಕೂಸು ಹೀಗೇ ಜೀವಂತವಾಗಿ ಎದುರಿಗೆ ಬಂದ ಶಿವನಿಗೆ ಆಹಾರ ಅರ್ಪಿಸುತ್ತಿರುತ್ತಾಳೆ. ತಂದೆ ಬರುತ್ತಾನೆ. ಅದೇ ತಾನೇ ಕೊಡಗೂಸು ದೇವಾಲಯದಿಂದ ಬರುತ್ತಾಳೆ. ತಂದೆ ನೈವೇದ್ಯ ಮಾಡಿರುವ ಪ್ರಸಾದ ಕೇಳುತ್ತಾನೆ. ಆದರೆ ಅದು ಇರುವುದಿಲ್ಲ. ಶಿವ ತಿಂದ ಎನ್ನುವ ಮಾತನ್ನು ಅರ್ಚಕ ತಂದೆ ಒಪ್ಪುವುದಿಲ್ಲ. ತಾನೇ ತಿಂದು ಶಿವನ ಮೇಲೆ ಹೇಳುವ ಮಗಳನ್ನು ಗದರಿಸುತ್ತಾನೆ. ಅದನ್ನು ನಿರೂಪಿಸಲು ಕೂಸು ಮತ್ತೆ ಶಿವನ ಮುಂದೆ ಹೋಗಿ ತಿನ್ನಲು ಕರೆಯುತ್ತಾಳೆ. ಬರುವುದಿಲ್ಲ. ಅವಳು ಅದೇ ರೀತಿ ತಲೆ ಚಚ್ಚಿಕೊಳ್ಳುವ ಕೆಲಸಕ್ಕೆ ಮುಂದಾದಾಗ ಶಿವ ಅಲ್ಲಿ ಪ್ರತ್ಯಕ್ಷನಾಗಿ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾನೆ.

ಲಿಂಗದೊಳಕ್ಕೆ ಹೋಗುವ ಮಗುವನ್ನು ಹಿಡಿಯಲು ಹೋಗುವ ತಂದೆಗೆ ಅವಳ ಕೂದಲಷ್ಟೇ ಕೈಗೆ ಸಿಗುತ್ತದೆ. ಆ ಕೂದಲು ಲಿಂಗದಿಂದ ಈಗಲೂ ಹೊರಗಿದೆ ಎಂದು ಪ್ರತೀತಿ ಇದೆ. ಇದನ್ನು ತನ್ನ ರಗಳೆಯಲ್ಲಿ ಹರಿಹರ ಕವಿಯು ಬಹು ಸುಂದರವಾಗಿ ವರ್ಣಿಸಿದ್ದಾನೆ.

ಸಾಂಕೇತಿಕವಾಗಿ ವಿಜೃಂಭಿಸುವ ಕಥೆಯ ಒಗಟನ್ನು ಬಿಡಿಸಬೇಕು. ನೈಜ ಘಟನೆಯಂತೆ ವಾಸ್ತವವಾಗಿ ನೋಡಿ ವಿಮರ್ಶೆ ಮಾಡಬಾರದು. ಹಾಗೆ ಮಾಡಿಬಿಟ್ಟರೆ, ಇಡೀ ಕಥೆಯನ್ನೇ ಸುಳ್ಳು ಎಂದು ಹೇಳುವಂತಾಗಿಬಿಡುತ್ತದೆ. ದೇವಾಲಯವೆಂದರೆ ಬರೀ ಶಿವದೇವ ಮತ್ತು ಅವನ ಕೂಸಿಗೆ ಮಾತ್ರವಿತ್ತೇ? ತಾಯಿ ಇಲ್ಲದ ಈ ಮಗುವು ತಂದೆಗೆ ಪೂಜೆಗೆ ಪ್ರತಿನಿತ್ಯ ನೆರವಾಗುತ್ತಿದ್ದಾಗ ನೈವೇದ್ಯ ಮಾಡುವುದನ್ನು ನೋಡುತ್ತಿರಲಿಲ್ಲವೇ? ಅವನೋ ಮಗುವನ್ನು ಎಲ್ಲೋ ಹೊರಗೆ ಕಳುಹಿಸಿ ರಹಸ್ಯವಾಗಿ ಎಡೆ ಇಡುತ್ತಿದ್ದನೇ? ಶಿವ ಎಂಬ ಲಿಂಗವನ್ನು ಆರಾಧಿಸುವುದನ್ನು ನೋಡುತ್ತಿದ್ದಳೇ ಹೊರತು, ಅವನು ಎದ್ದು ಬಂದು ತಿಂದದ್ದೇನೂ ಅವಳೂ ನೋಡಿರಲಿಲ್ಲವಲ್ಲ! ಹೋಕ್ಕೊಳ್ಳಿ, ಶಿವ ಬಂದು ತಿನ್ನಲ್ಲಿಲ್ಲಾಂತ ಅಷ್ಟು ಪುಟ್ಟ ಬಾಲಕಿ ತಲೆ ಚಚ್ಚಿಕೊಂಡು ರಕ್ತಸ್ರಾವ ಮಾಡಿಕೊಂಡು ಸತ್ತು ಹೋಗುತ್ತೇನೆಂದು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳುವಷ್ಟು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲು ಎಲ್ಲಿ ಕಲಿತಳು? ಹೇಗೆ ಮಾಡುವಳು? ತಂದೆ ಮಗಳ ಸತ್ಯತೆಯನ್ನು ನಿರಾಕರಿಸಿ ಅನುಮಾನಿಸಿದಾಗ ಬರುವ ಶಿವ ‘ಅಲ್ಲಾ ಕಣಯ್ಯಾ ಅರ್ಚಕಾ, ನೀನು ಬರೀ ನೇಮ ಮಾಡಿದೆ.

ನಿನ್ನ ಮಗಳು ತನ್ನ ಮುಗ್ಧತೆಯಿಂದ ನನಗೆ ಊಟವನ್ನೇ ಮಾಡಿಸಿಬಿಟ್ಟಳು ಕಣಯ್ಯಾ. ನೇಮ ಗೀಮಾ ಅಂತಿರೋ ಸಂಪ್ರದಾಯ ಅಲ್ಲ ಮುಖ್ಯ. ಮಗುವಿಗಿರುವಂತಹ ಭಕ್ತಿ ಪ್ರೀತಿ ಮುಖ್ಯ ಕಣಯ್ಯಾ’ ಅಂತ ಬುದ್ಧಿ ಹೇಳೋದು ಬಿಟ್ಟು, ತಟಕ್ಕಂತ ಬಂದು ಪಟಕ್ಕಂತ ಹಾರಿಸಿಕೊಂಡು ಹೋಗಿಬಿಡುವುದೇ! ಪಾಪದ ಶಿವದೇವನಿಗೆ ಪುತ್ರಿಶೋಕ ನೀಡಿ, ಬರೀ ಜುಟ್ಟುಳಿಸಿ ಹೋಗುವುದೇ?

ವಿಷಯ ಅದಲ್ಲ. ಶಿವದೇವ ಬ್ರಾಹ್ಮಣ. ಬ್ರಾಹ್ಮಣರಲ್ಲಿ ಯಜ್ಞೋಪವೀತ ಧರಿಸುವ ಮತ್ತು ಉಪನಯನ ಮಾಡಿಸಿಕೊಂಡು ದೇವತಾಕಾರ್ಯವನ್ನು ಮಾಡುವ ಅಧಿಕಾರ ಪುರುಷ ಹೊಂದಿರುತ್ತಾನೆ. ತಮಾಷೆಯೆಂದರೆ ಶೂದ್ರಳೆಂದು ಕರೆಯುವ ಹೆಣ್ಣು ತನಗೆ ಹೆಂಡತಿಯಾದ ಮೇಲೆ ಅವಳ ಪರವಾಗಿ ತಾನೇ ಜನಿವಾರ ಹಾಕಿಕೊಂಡು ದೇವತಾಕಾರ್ಯ ಮಾಡುತ್ತಾನೆ.

ಇಂತಹದ್ದೊಂದು ಢಾಂಭಿಕತನವನ್ನು ಧಿಕ್ಕರಿಸುವ ಕಥೆ ಇದು. ಒಬ್ಬ ಅರ್ಚಕನು ತನ್ನ ನೇಮಾದಿಗಳನ್ನು ಯಾಂತ್ರಿಕವಾಗಿ ಮಾಡುತ್ತಾನೆಯೇ ಹೊರತು, ಅವನು ಹೊರತು ಪಡಿಸಿರುವಂತಹ ಹೆಣ್ಣು ತನ್ನ ನಿಜವಾದ ಭಕ್ತಿಯಿಂದ ಯಾವ ದೈವಿಕತೆಯ ಸೂಕ್ಷ್ಮವನ್ನು ಹೊಂದುವಳೋ ಅದನ್ನು ತನ್ನ ಸಹಜತೆ ಮತ್ತು ಮುಗ್ಧತೆಯಿಂದ ಪಡೆಯುವಳು ಎಂದು ಈ ಕಥೆ ಹೇಳುವುದು.

ಹಾಗೆಯೇ ದೇವಸ್ಥಾನದ ಅರ್ಚಕನಾಗಿ ಬರಿಯ ಸಂಪ್ರದಾಯದ ಚೌಕಟ್ಟಲ್ಲಿ ಬಂಧಿತರಾಗುವ ಮಂದಿಗೆ ದೈವತ್ವದ ಅರಿವಾಗದೆಂದೂ, ಸಹಜವಾದ ಮುಗ್ಧತೆ ಮತ್ತು ಪ್ರೀತಿಯಿಂದ ಅದರ ಅನುಭೂತಿಯನ್ನು ಪಡೆಯಬೇಕೆಂಬ ಪ್ರತಿಮಾ ರೂಪದ ಕಥೆಯಿದು.

ಯೇಸುವು ಹೇಳುವುದನ್ನು ನೆನಪಿಸಿಕೊಳ್ಳೋಣ, “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗ ಸಾಮ್ರಾಜ್ಯವು ಇಲ್ಲ.” ಅಂತೆಯೇ ಈ ಕಥೆ ಕೊಡುವ ಮತ್ತೊಂದು ಮಹತ್ತರ ಸೂಚನೆ ಎಂದರೆ, ನೇಮಾದಿಗಳ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದು ಹೋಗುವವರನ್ನು ಸಂಪ್ರದಾಯವಾದಿಗಳು ಉಳಿಗೊಳಿಸುವುದಿಲ್ಲ ಎಂದೂ ಕೂಡ. ನೋಡಿ, ಕೊಡಗೂಸು ಶಿವನ ಸೇರಿಕೊಂಡುಬಿಟ್ಟಳು.

ಅವಳ ತಂದೆ ಅರ್ಚಕ ವೃತ್ತಿ ಮಾಡಿಕೊಂಡು, ಅದೇ ನೈವೇದ್ಯವಿಟ್ಟುಕೊಂಡು ಉಳಿದುಕೊಂಡ. ಸಂಪ್ರದಾಯದ ನೇಮವನ್ನು ಮುರಿದವರು ಒಂದು ಐತಿಹ್ಯವಾಗಿ ಉಳಿಯುತ್ತಾರೆ. ರೂಪಕವಾಗಿ ವಿಜೃಂಭಿಸುತ್ತಾರೆ. ಆದರೆ ನೇಮ ಮಾಡುವವರು ಉಳಿದು ಬಾಳುತ್ತಾರೆ. ಸಂಪ್ರದಾಯವು ಮುಂದುವರಿಯುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending