ದಿನದ ಸುದ್ದಿ
ಕಾರಂತರು ಸಾಯಲಿ ಎಂದು ಬಯಸಿದ್ದ ಅಮಿನ್ ಮಟ್ಟು ಕೊಟ್ಟ ಸಮರ್ಥನೆ ಏನು ಗೊತ್ತಾ?
ಸುದ್ದಿದಿನ ಡೆಸ್ಕ್: ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಲ್ಲಿ ಆರೆಸ್ಸೆಸ್ ಅನ್ನು ಸಮರ್ಥಿಸಿಕೊಂಡಾಗ ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಸಾಯಲಿ ಎಂದು ಬಯಸಿದ್ದೆ ಎಂಬುದಾಗಿ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾರಂತರ ಕುರಿತು ತಮಗಿರುವ ಪ್ರೀತಿ, ಹಾಗೂ ಮನಸ್ಸಿನಲ್ಲಿದ್ದ ಅವರ ಬಿಂಬ ಒಡೆದುಹೋದಾಗ ಆದ ನೋವು ಎಲ್ಲವನ್ನೂ ಈ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರು ಬರೆದಿರುವ ಫೇಸ್ ಬುಕ್ ಪೋಸ್ಟ್ ಗೆ ಮೆಚ್ಚುಗೆಯ ಕಮೆಂಟ್ ಗಳು ವ್ಯಕ್ತವಾಗುತ್ತಿವೆ. ಆ ಪೋಸ್ಟ್ ಹೀಗಿದೆ.
ಶಿವರಾಮ ಕಾರಂತರು ನನ್ನ ಮೊದಲ ವೈಚಾರಿಕ ಗುರು. ನಾನು ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳಿಂದ ನೇರವಾಗಿ ಕಾರಂತರ ಕಾದಂಬರಿಗಳಿಗೆ ಗ್ರಾಜುವೇಟ್ ಆದವನು. ಸಾಹಿತ್ಯದ ವಿದ್ಯಾರ್ಥಿಯಲ್ಲದ ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವರ ಅಲ್ಲಿಯವರೆಗಿನ ಎಲ್ಲ ಕೃತಿಗಳನ್ನು ಓದಿಮುಗಿಸಿದವನು. ನನ್ನೊಳಗಿನ ವೈಚಾರಿಕ ಸ್ಪಷ್ಟತೆಗೆ ಮೊದಲು ಕಾರಣರಾದವರು ಕಾರಂತರು. ಅಂಬೇಡ್ಕರ್, ಲೋಹಿಯಾ, ಗಾಂಧೀಜಿ, ಕುವೆಂಪು, ಲಂಕೇಶ್ ನನಗೆ ಸಿಕ್ಕಿದ್ದು ನಂತರದ ದಿನಗಳಲ್ಲಿ. ಆದರೆ ಇವರನ್ನು ಓದಲು ಪ್ರೇರಣೆ ನೀಡಿದವರು ಕಾರಂತರು.
ಕಾರಂತರು ಘೋಷಿಸಿಕೊಳ್ಳದೆ ಇದ್ದರೂ ಅವರ ಕೃತಿಗಳಲ್ಲಿ ವೈಚಾರಿಕತೆಯ ಒಂದು ಒಳ ಹರಿವು ಇರುತ್ತಿತ್ತು. ಅದನ್ನು ಅವರು ಒಂದು Statement ರೀತಿ ಹೇಳದೆಯೇ ನಮ್ಮೊಳಗೆ ವೈಚಾರಿಕತೆಯನ್ನು ಬಿತ್ತುತ್ತಾ ಹೋದವರು. ಈ ಮೂಲಕವೇ ನನ್ನಂತಹವರಿಗೆ ಓದಿನ ಪಯಣದ ದಾರಿಯನ್ನು ತಿಳಿಸಿಕೊಟ್ಟವರು.
ಇದನ್ನು ಹಿಂದೊಮ್ಮೆ ಬರೆದಿದ್ದೆ, ನಾನು ಓದಲು ತರುತ್ತಿದ್ದ ಕಾದಂಬರಿಗಳನ್ನು ಓದತೊಡಗಿದ್ದ ನಿವೃತ್ತ ಜೀವನ ಕಳೆಯುತ್ತಿದ್ದ ನನ್ನ ತಂದೆ, ಕೊನೆಯ ದಿನಗಳಲ್ಲಿ ದೇವರು-ಧರ್ಮದ ಬಗ್ಗೆ ನನ್ನಂತೆಯೇ ಮಾತನಾಡತೊಡಗಿದ್ದರು.
ಕಾರಂತರು ನನ್ನೊಳಗೆ ವೈಚಾರಿಕತೆಯ ಕಿಡಿ ಹಚ್ಚಿದ್ದರೆ, ತಾನೇ ಬದಲಾಗುವ ಮೂಲಕ ನನ್ನ ನಿಲುವು ಸರಿ ಎಂದು endorse ಮಾಡಿದವರು ನನ್ನ ತಂದೆ.
ಆದ್ದರಿಂದ ಕಾರಂತರ ಬಗ್ಗೆ ಯಾರಾದರೂ ಬೈದರೆ ನನ್ನ ತಂದೆಗೆ ಬೈದಷ್ಟೇ ಕೋಪ ಬರ್ತಿತ್ತು. ‘ಬಾಳ್ವೆಯ ಬೆಳಕು’ ಬಗ್ಗೆ ಸ್ನೇಹಿತರ ಜತೆ _ಹಲವುಸುತ್ತಿನ ಜಗಳವಾಡಿದ್ದೆ.
ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನೊಳಗೆ ಅಚ್ಚೊತ್ತಿದ್ದ ಎರಡು ಬಿಂಬಗಳು, ಕಾರಂತರದ್ದು ಮತ್ತು ನನ್ನ ತಂದೆಯದ್ದು. ನನ್ನೊಳಗಿನ ಆ ಎರಡು ಬಿಂಬಗಳನ್ನು ನಾನು ಪ್ರೀತಿಸುತ್ತಾ ಬಂದವನು. ಆ ಬಿಂಬಗಳು ಛಿದ್ರಗೊಳ್ಳುವುದನ್ನು ನನಗೆ ಸಹಿಸಲಾಗುತ್ತಿರಲಿಲ್ಲ.
ಕಾರಂತರು ಮೊದಲಿನಿಂದಲೂ ಕಮ್ಯುನಿಷ್ಟರ ಟೀಕಾಕಾರರಾಗಿದ್ದರು. ಈ ವಿಷಯದಲ್ಲಿ ಅವರ ಕೆಲವು ಭಿನ್ನಾಭಿಪ್ರಾಯಗಳು ನನ್ನದೂ ಆಗಿದ್ದವು.
ಆದರೆ…
ಬಾಬರಿ ಮಸೀದಿ ಧ್ವಂಸದ ಘಟನೆಯನ್ನು ಅವರು ಬೆಂಬಲಿಸತೊಡಗಿದಾಗ ನನ್ನೊಳಗಿನ ಕಾರಂತರ ಬಿಂಬ ಅಲುಗಾಡತೊಡಗಿತ್ತು.
ಈದ್ಗಾ ಮೈದಾನದ ವಿವಾದದ ಸಂದರ್ಭದಲ್ಲಿ ಕಾರಂತರು ಧಾರವಾಡಕ್ಕೆ ಬಂದಿದ್ದರು. ಅವರನ್ನು ಧಾರವಾಡ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ನಲ್ಲಿ ನಾನು ಸಂದರ್ಶನ ಮಾಡಿದ್ದೆ. ಆಗ ಅವರು ಈದ್ಗಾ ಮೈದಾನ ವಿವಾದದ ಹಿಂದಿನ ಕೋಮುವಾದಿ ಅಜೆಂಂಡಾದ ಅರಿವಿಲ್ಲದಂತೆ ಸಂಘ ಪರಿವಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದು ಕೇಳಿ ಆಘಾತಕ್ಕೀಡಾಗಿದ್ದೆ. ನನ್ನೊಳಗೆ ಕಟ್ಟಿಕೊಂಡಿದ್ದ ಕಾರಂತರ ಬಿಂಬ ಛಿದ್ರಗೊಳ್ಳುತ್ತಿತ್ತು. ನನ್ನ ಕೈ ಹಿಡಿದು ಮುನ್ನಡೆಸುತ್ತಾ ಬಂದಿದ್ದ ವೈಚಾರಿಕ ಕಾರಂತರು ಇಲ್ಲವಾದರಲ್ಲಾ ಎಂಬ ನೋವು ನನ್ನನ್ನು ತಿನ್ನತೊಡಗಿತ್ತು. ವೈಚಾರಿಕ ಕಾರಂತರು ಶಾಶ್ವತವಾಗಿ ಉಳಿಯಬೇಕಾದರೆ, ಕೋಮುವಾದದ ಸಮರ್ಥಕ ಕಾರಂತರು ಅಳಿಯಬೇಕು ಎಂದು ಒಂದು ಕ್ಷಣ ನನಗನಿಸಿದ್ದು ನಿಜ. ಈ ಅಳಿವು-ಉಳಿವು ದೈಹಿಕವಾದುದಲ್ಲ, ಅದು ಬರವಣಿಗೆಯ ಅಳಿವು-ಉಳಿವಿಗೆ ಸಂಬಂಧಿಸಿದ್ದು.
ಆದರೆ ಕಾರಂತರು ನನ್ನೊಳಗಿನ ಅವರ ಬಿಂಬವನ್ನು ಶಾಶ್ವತವಾಗಿ ಛಿದ್ರಗೊಳ್ಳಲು ಬಿಡಲಿಲ್ಲ. ಯಾಕೆಂದರೆ ಅವರು ತಾನು ಬರೆದುದನ್ನೇ disown ಮಾಡುವಂತೆ ಬರೆಯಲಿಲ್ಲ. ಸಾಹಿತಿ ತನ್ನ ಕೃತಿಗಳ ಮೂಲಕ ಬದುಕುತ್ತಾನೆ. ಲೇಖಕ ಕಾಲವಾದ ನಂತರವೂ ಬರವಣಿಗೆ ಉಳಿಯುತ್ತದೆ, ಅದಕ್ಕೆ ಸಾವಿರುವುದಿಲ್ಲ.
ಶಿವರಾಮ ಕಾರಂತರು ಈಗ ಬದುಕಬೇಕಿತ್ತು. ೧೯೭೫ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ಮಾಡಿದವರು ಕಾರಂತರು. ಅವರು ಬದುಕಿದ್ದರೆ ಈಗಿನ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ದ ಅವರೇ ಮೊದಲು ದನಿ ಎತ್ತುತ್ತಿದ್ದರೇನೋ?

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ1 day agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

