ಅಂತರಂಗ
ಅರಿಮೆಯ ಅರಿವಿರಲಿ-45 : ನನ್ನತನ ಎಂದರೇನು..?
- ಯೋಗೇಶ್ ಮಾಸ್ಟರ್
ನನ್ನತನದ ಗುರುತು ಏನು? ಈ ಪ್ರಶ್ನೆ ಅರಿಮೆಯ ಅರಿವಿನಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾನು ಯಾರು ಎಂಬುದೂ, ನನ್ನತನ ಎಂಬುದೂ; ಎರಡೂ ಬೇರೆ ಬೇರೆ ಗ್ರಹಿಕೆಗಳು. ಇವೆರಡರ ಸಂಬಂಧ ಮತ್ತು ವ್ಯತ್ಯಾಸದ ಅರಿವು ಮನಸ್ಸಿಗೆ ಬಲ ಕೊಡುವುದಕ್ಕೂ, ಮನಸ್ಸಿನ ಬಾಧೆಗಳನ್ನು ನಿವಾರಿಸಿಕೊಳ್ಳುವುದಕ್ಕೂ ಬಹಳ ಸಹಾಯ ಮಾಡುತ್ತದೆ.
ಬಹಳಷ್ಟು ಮಂದಿ ನಾನು ಮತ್ತು ನನ್ನತನ ಎರಡನ್ನೂ ಅಹಂಕಾರದ ಭಾಗವಾಗಿ ಗ್ರಹಿಸಿರುತ್ತಾರೆ. ಹಾಗೂ ತಾತ್ವಿಕವಾಗಿ ನಾನು ಎಂಬ ನಾನತ್ವವನ್ನು ಅಹಂಕಾರವೆಂದು ನಕಾರಾತ್ಮಕವಾಗಿಯೇ ಅರ್ಥೈಸುತ್ತಾರೆ. ಅದನ್ನು ಹೀನವೆಂದು ತುಚ್ಚೀಕರಿಸುವುದೂ ಮತ್ತು ಅನಿವಾರ್ಯವಾಗಿ ಅದಕ್ಕೇ ಗಂಟುಬೀಳುವುದೆರಡೂ ಒಟ್ಟೊಟ್ಟಿಗೇ ನಡೆಯುವುದರಿಂದ ನಾನು ಎಂಬ ನಾನತ್ವದ ಬಗ್ಗೆ ಬಹಳ ಗೊಂದಲವಾದ ಮನಸ್ಥಿತಿಯು ಸಾಮಾನ್ಯವಾಗಿರುತ್ತದೆ.
ಇಷ್ಟು ತಿಳಿದುಕೊಳ್ಳೋಣ. ‘ನಾನು’ ಎನ್ನುವುದು ವ್ಯಾಕರಣದಲ್ಲಿ ಒಂದು ಸಾಧಾರಣವಾದ ನಾಮಪದ. ತನ್ನನ್ನು ತಾನು ಪ್ರಥಮವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಇರುವ ಒಂದು ಸಾಂಕೇತಿಕ ಹೆಸರು. ಮೊದಲನೆಯದಾಗಿ ತಾತ್ವಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅದರ ಬಗ್ಗೆ ಇರುವ ಅಪರಾಧಿ ಮನೋಭಾವದಿಂದ ಹೊರತಾಗೋಣ. ನಾನು ಎಂಬ ವ್ಯಾಕರಣದ ತಾಂತ್ರಿಕವಾದ ಬಳಕೆ ನಿಜಕ್ಕೂ ಅನಿವಾರ್ಯ.
ನಾನು ಎಂಬ ನಾಮಪದ
ನಾನು ಯಾರಿಗೋ ದೂರವಾಣಿ ಕರೆ ಮಾಡಿ ಮೂಗು ಮೂತಿ ಹೃದಯ ಇತ್ಯಾದಿಗಳಿರುವ, ಮನಸ್ಸು ಎಲ್ಲಾ ಇರುವಂತಹ ಒಬ್ಬ ವ್ಯಕ್ತಿಯು ಕರೆಮಾಡುತ್ತಿದ್ದಾನೆ. ಅವನ ಹೆಸರು ಯೋಗೇಶ್ ಎಂದು ಸಂಕೀರ್ಣಗೊಳಿಸಿಕೊಳ್ಳಲಾರೆ. ನಾನು ಯೋಗೀಶ ಮಾತಾಡ್ತಿದ್ದೀನಿ ಅಂದರೆ ಸಾಕು. ನನಗೆ ಮೂಗು ಮೂತಿ ರಕ್ತನಾಳಗಳೆಲ್ಲಾ ಇರುವಂತ ದೇಹವಿರುವುದು ಯಾರಿಗಾದರೂ ಇರುವ ಸಾಮಾನ್ಯವಾದ ಗ್ರಹಿಕೆ.
ಯಾವ ಯೋಗೀಶ ಎಂದರೆ, ಲೇಖಕ, ನಿರ್ದೇಶಕ ಎಂದೇನೋ ಹೊರಗಿನ ಜಗತ್ತಿಗೆ ಪರಿಚಿತವಾಗಿರುವ ವೃತ್ತಿಯ ಗುರುತನ್ನು ಹೇಳಿ ಅವರಿಗೆ ಪರಿಚಯ ಹೇಳಿಕೊಳ್ಳುತ್ತೇನೆ. ಅದು ನಾನು. ನನ್ನ ಹೆಂಡತಿಯ ನೆಂಟರಿಗೆ ಫೋನ್ ಮಾಡಿದರೆ, ನಾನು ಗಂಗಾ ಗಂಡ ಮಾತಾಡುತ್ತಿರುವುದು ಎಂದೋ, ಮಗಳ ಸ್ನೇಹಿತರಿಗೆ ಫೋನ್ ಮಾಡಿದರೆ ನಾನು ಕೈವಲ್ಯಾ ತಂದೆ ಎಂದೋ ನನ್ನ ಗುರುತನ್ನು ಹೇಳುತ್ತೇನೆ.
ಅಂದರೆ ನಾನು ಎಂದು ಕರೆದುಕೊಳ್ಳುವ ಗುರುತು ಪಾತ್ರಗಳ ಆಧಾರದ ಮೇಲೆ, ವೃತ್ತಿಯ ಆಧಾರದ ಮೇಲೆ, ಹುದ್ದೆ, ಅಧಿಕಾರ; ಹೀಗೆ ಹಲವು ಬಗೆಯ ಗುರುತುಗಳ ವಿವಿಧತೆಗಳ ಮೇಲೆ ಆಧರಿಸಿರುತ್ತದೆ. ಆದರೆ ಇವು ಯಾವುವೂ ನನ್ನತನವಲ್ಲ. ಶಿಕ್ಷಕನಾಗಿದ್ದರೆ, ನಾನಲ್ಲದೇ ಯಾವುದಾದರೂ ಶಿಕ್ಷಕನು ಸಾಹಸ ಪ್ರದರ್ಶಿಸಿದರೆ, ಗೌರವಕ್ಕೆ ಪಾತ್ರವಾದರೆ ಮನಸ್ಸಿನ ಮೂಲೆಯಲ್ಲಿ ನಾನೂ ಶಿಕ್ಷಕನಾಗಿದ್ದರೆ ಮನಸ್ಸು ಸೆಳೆಯುತ್ತದೆ, ಎದೆ ಉಬ್ಬುತ್ತದೆ. ಅದೇ ಒಬ್ಬ ಶಿಕ್ಷಕನು ಮನೆಹಾಳು ಕೆಲಸವನ್ನೋ ಅಥವಾ ನಕಾರಾತ್ಮಕವಾದ ಕೆಲಸ ಮಾಡಿದ್ದರೆ ಛೇ ಎಂಬ ಒಂದು ಭಾವ ಮೂಡಿಬರುತ್ತದೆ. ವೃತ್ತಿಪರತೆಯ ಬಗ್ಗೆ, ನಾಡು, ನುಡಿ, ದೇಶ, ಸಂಸ್ಕೃತಿಗಳ ಬಗ್ಗೆ ಹಚ್ಚಿಕೊಂಡಿರುವ ಛಾಪುಗಳೂ ಕೂಡ ನಮ್ಮ ಮಾನಸಿಕ ಗುರುತನ್ನು ಸ್ಪರ್ಷಿಸುತ್ತದೆ.
ಆದರೆ ಅದು ಸಾಮುದಾಯಿಕವಾಗಿರುವುದೇ ಹೊರತು ನನ್ನತನ ಎನ್ನುವುದೇನಲ್ಲ. ಅಂದರೆ ನಾನು ಎಂಬುವ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ತನ್ನತನವನ್ನಾಗಿ ಪ್ರದರ್ಶಿಸಿಕೊಳ್ಳುವಲ್ಲಿ ವೃತ್ತಿ, ದೇಶ, ಭಾಷೆ, ಸಂಸ್ಕೃತಿ ಮತ್ತು ಪಾತ್ರಗಳನ್ನು ಆಧರಿಸಿಲ್ಲ ಎಂದಾಯಿತು. ಇವನ್ನೆಲ್ಲಾ ಸಾಮುದಾಯಿಕವಾಗಿ ಬಹಳಷ್ಟು ಜನರು ಸಾಮಾನ್ಯವಾಗಿ ಗುರುತಾಗಿ ಹೊಂದಿರುತ್ತಾರೆ. ಅವನ್ನೂ ಕೂಡ ನಾವು ಸಾಂದರ್ಭಿಕವಾಗಿ ನಾನು ಕನ್ನಡಿಗ, ನಾನು ಭಾರತೀಯ, ನಾನು ಒಬ್ಬ ಜಿಜ್ಞಾಸು ಎಂದೇನೇ ಹೇಳಿಕೊಂಡರೂ ಅವು ಯಾವುವೂ ನನ್ನತನವಲ್ಲ. ಅವು ಸಾಂದರ್ಭಿಕ ಲೇಪಗಳೇ.
ಸಾಮಾನ್ಯ ಮತ್ತು ಸಾಮಾಜಿಕ ಚಹರೆಗಳು
ಇನ್ನು ವ್ಯಕ್ತಿಯ ದೇಹದ ಆಕಾರ, ಗಾತ್ರ, ಬಣ್ಣ ಇವುಗಳೂ ಕೂಡಾ ನನ್ನತನವಲ್ಲ. ಅವುಗಳ ಬಗ್ಗೆ ಇರುವಂತಹ ದೇಹಪ್ರಜ್ಞೆಯಾಗಲಿ, ಅರಿಮೆಯಾಗಲಿ ನನ್ನತನವಲ್ಲ. ಹೊರಗಿನ ಚಹರೆಗಳು ಬದಲಾಗುತ್ತಲೂ ಇರುತ್ತದೆ. ಈ ಶಾರೀರಿಕ ಚಹರೆಗಳ ಅರಿವು ನಮ್ಮ ಅರಿಮೆಗೆ ಕಾರಣಗಳಾಗಬಹುದು. ಸುಂದರವಾಗಿದ್ದೇನೆ, ದಷ್ಟಪುಷ್ಟವಾಗಿದ್ದೇನೆ, ಆಕರ್ಷಕವಾಗಿದ್ದೇನೆ ಎಂದು ಮೇಲರಿಮೆಯನ್ನೋ ಅಥವಾ ಆತ್ಮರತಿಯುಳ್ಳವನಾಗಿರಬಹುದು.
ಅಥವಾ ಸಣ್ಣಗಿದ್ದೇನೆ, ದಢೂತಿ ದೇಹ ಹೊಂದಿದ್ದೇನೆ, ಆಕರ್ಷಕವಾಗಿಲ್ಲ ಎಂದೇನೇನೋ ನಮ್ಮ ಅಥವಾ ನಮ್ಮ ಸಹಜೀವಿಗಳ ಮಾನದಂಡದ ಪ್ರಕಾರ ಕನಿಷ್ಟ ಅಂಕಗಳನ್ನು ಕೊಟ್ಟುಕೊಂಡು ಕೀಳರಿಮೆಯನ್ನು ಹೊಂದಿರಬಹುದು. ಒಟ್ಟಾರೆ ನಾನು ಗಂಡು ಅಥವಾ ಹೆಣ್ಣು ಎಂಬ ಲಿಂಗಭಾವ ಅಥವಾ ನಮ್ಮ ದೇಹ ಇರುವ ರೀತಿಯ ಬಗ್ಗೆ ಇರುವಂತಹ ಆಲೋಚನೆಗಳು ಮತ್ತು ಯಾವುದೇ ಅರಿವು ಅರಿಮೆಗೆ ಕಾರಣವಾಗಬಹುದೇ ಹೊರತು ನನ್ನತನ ಎಂಬುದೇನೂ ಅಲ್ಲ. ಸರಿ, ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ ಈ ನನ್ನತನ ಎನ್ನುವುದು ಸಾಮಾಜಿಕ, ಸಾಂಸ್ಥಿಕ ಮತ್ತು ಶಾರೀರಿಕ ಗುರುತುಗಳನ್ನು ಮೀರಿರುವುದು ಎಂದಾದರೆ ಮಾನಸಿಕವೇ?
ಮಾನಸೋಲ್ಲಾಸದ ಗುಪ್ತಗಾಮಿನಿ
ಒಬ್ಬ ವ್ಯಕ್ತಿಗೆ ಮಾನಸಿಕವಾದ ಗುಣಲಕ್ಷಣಗಳಿರುತ್ತವೆ. ಅವನ ಗ್ರಹಿಕೆಗಳು, ಸ್ಮರಣೆಗಳು, ಆದ್ಯತೆಗಳು, ವ್ಯಕ್ತಿತ್ವ, ನಡವಳಿಕೆಗಳು; ಹೀಗೆ ಹಲವು ಭಿನ್ನ ಆಯಾಮಗಳು ಮತ್ತು ಪ್ರದರ್ಶನಗಳು ಒಬ್ಬ ವ್ಯಕ್ತಿಯ ಮನಸ್ಸಿನ ಕಾರಣದಿಂದ ಅಸ್ತಿತ್ವದಲ್ಲಿರುತ್ತವೆ. ಇದರ ಜೊತೆಗೆ ಬಹಳ ಮುಖ್ಯವಾದ ಮತ್ತು ನೈತಿಕ ಸ್ಥೈರ್ಯ ಮತ್ತು ಸಾಮರ್ಥ್ಯವು ಕೂಡಾ ಬಹಳ ಬಲಶಾಲಿಯಾಗಿರುತ್ತದೆ. ವ್ಯಕ್ತಿಯು ಯಾವುದೇ ಧರ್ಮ, ವರ್ಗ, ನಾಡು, ನುಡಿಗಳಲ್ಲಿ ಗುರುತಿಸಿಕೊಂಡಿದ್ದರೂ ಮಾನಸಿಕವಾದ ಮತ್ತು ನೈತಿಕವಾದ ಗುಣಲಕ್ಷಣಗಳು ಸಂಕಲಿತವಾಗಿ ಮತ್ತು ಸತತವಾಗಿ ಗುಪ್ತಗಾಮಿನಿಯಾಗಿ ಜೀವಂತವಾಗಿರುತ್ತದೆ.
ವ್ಯಕ್ತಿಯ ಪ್ರವೃತ್ತಿ, ವರ್ತನೆ, ನಂಬಿಕೆ ಅಥವಾ ಶ್ರದ್ಧೆಗಳೂ ಕೂಡಾ ಆತನಲ್ಲಿ ಬೇರೂರಿರುವ ಮಾನಸಿಕವಾದ ಮತ್ತು ನೈತಿಕವಾದ ಗುಪ್ತಗಾಮಿನಿಯ ಗುರುತನ್ನು ಮಂದಗೊಳಿಸಲಾರದು. ಮರೆವಿನ ರೋಗ (Alzheimer) ಬಂದಿರುವವರೂ ಕೂಡಾ ತಮ್ಮ ಈಜುವುದೋ, ನಡೆಯುವುದೋ, ನುಡಿಯನ್ನೋ ಮರೆತಿರುವುದಿಲ್ಲ. ಹಾಗೆಯೇ ಅವರಲ್ಲಿನ ತಮ್ಮತನವೂ ಕೂಡಾ ಮರೆತಿರುವುದಿಲ್ಲ.
ನನ್ನತನಕ್ಕೆ ಆಧಾರವಾಗಿ ಅಧ್ಯಾತ್ಮವಾಗಲಿ, ಧಾರ್ಮಿಕತೆಯಾಗಲಿ ನೈತಿಕತೆಯನ್ನೇ ಒದಗಿಸಲು ಯತ್ನಿಸುವುದರಿಂದ ಹಲವು ಬಾರಿ, ನಮ್ಮೊಳಗೆ ಇರುವ ಮನೋಭಾವವು ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯ ಮಾನದಂಡದ ವ್ಯಾಪ್ತಿಗೆ ಸಿಗದೇ ಹೋದರೆ ಅಥವಾ ಖಂಡನೆಗೆ ಒಳಗಾಗಿದ್ದರೆ ದೌರ್ಬಲ್ಯವೆಂದು ಭಾವಿಸುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಒಲವು ಮತ್ತು ಬಯಕೆಗಳೂ ಕೂಡಾ ಅದುಮಿಡಲಾಗುತ್ತದೆ.
ಸಲಿಂಗ ಕಾಮವೇ ಮೊದಲಾದ ಲೈಂಗಿಕ ಬಯಕೆಗಳ ಆಸಕ್ತಿಗಳು ಮತ್ತು ಅವುಗಳ ಬಗ್ಗೆ ಇರುವ ಒಲವುಗಳು ಸಾಮಾಜಿಕ ಅಪಖ್ಯಾತಿಯ ಭೀತಿಯಿಂದ ಬಹುಜನರಲ್ಲಿ ಅಡಗಿಕೊಂಡುಬಿಡುತ್ತವೆ. ಇರಲಿ, ಸಾಮಾನ್ಯವಾಗಿ ಆತುಕೊಂಡಿರುವ ನೈತಿಕತೆಗೆ ಮನೋಬಲವು ಸದಾ ಜಾಗೃತಿಯಿಂದ ಅದನ್ನು ನೋಡಿಕೊಳ್ಳುವ ಮೂಲಕ ಪುಷ್ಟಿ ನೀಡುತ್ತಿರುತ್ತದೆ. ಹಾಗೆ ಅದನ್ನು ಸದಾ ಜೀವಂತವಾಗಿಯೂ ಮತ್ತು ಬಲಯುತವಾಗಿಯೂ ನೋಡಿಕೊಳ್ಳುವುದರಲ್ಲಿ ಸಂತೋಷವನ್ನು ಕಾಣುತ್ತದೆ.
ಹೊರಗಿನ ಯಾವುದೇ ಪ್ರಭಾವವು ಅದನ್ನು ಅಲುಗಾಡಿಸಲು ಯತ್ನಿಸಿದರೂ ಅದನ್ನು ಬಲಿಗೊಡದಂತೆ ಎಚ್ಚರಿಕೆಯಿಂದ ಕಾಯ್ದುಕೊಳ್ಳುವ ಪ್ರಜ್ಞೆಯು ಸಂಘರ್ಷದಲ್ಲಿಯೂ ಮತ್ತು ಒತ್ತಡಗಳಲ್ಲಿಯೂ ಖುಷಿಯಾಗಿರುತ್ತದೆ. ಉಲ್ಲಾಸವಾಗಿರುತ್ತದೆ. ಈ ಮಾನಸೋಲ್ಲಾಸಕ್ಕೆ ಕಾರಣವಾಗಿರುವ ನನ್ನತನ ಎನ್ನುವುದನ್ನು ಉದಾಹರಣೆಗಳ ಸಮೇತ ತಿಳಿದುಕೊಂಡರೆ ಬಹುಶಃ ನಾನು ಎಂಬುದರ ಬಗ್ಗೆ ಹೊಂದಿರುವ ಹಲವು ಬಗೆಯ ಭ್ರಮೆಗಳು ಹರಿದು ಹೋಗಬಹುದು. ಜೊತೆಗೆ ನಮ್ಮದೇ ಕುಟುಂಬದಲ್ಲಿ, ಕೆಲಸ ಮಾಡುವ ಪರಿಸರದಲ್ಲಿ, ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭಾವಗಳಲ್ಲಿ ತನ್ನತನವನ್ನು ಉಳಿಸಿಕೊಂಡು, ಬಾಳಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ. ಅವೇನೆಂದು ಮತ್ತು ಹೇಗೆಂದು ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ20 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


