Connect with us

ಅಂತರಂಗ

ಅರಿಮೆಯ ಅರಿವಿರಲಿ-44 : ಭಾವನೆ ಮತ್ತು ಮನೋಭಾವ ವ್ಯತ್ಯಾಸವೇನು?

Published

on

  • ಯೋಗೇಶ್ ಮಾಸ್ಟರ್

ಯಾವುದೇ ಮಾನಸಿಕ ಸಮಸ್ಯೆಯಿಂದ ಮತ್ತು ಅರಿಮೆಗಳಿಂದ ಬಿಡುಗಡೆ ಪಡೆಯಲು ಯತ್ನಿಸುವ ವ್ಯಕ್ತಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ತಮ್ಮ ಧೋರಣೆ, ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ಗಮನಿಸಿಕೊಳ್ಳುವುದು. ನಂತರ ತನ್ನ ಪ್ರತಿಕ್ರಿಯೆ ಅಥವಾ ಪ್ರತಿವರ್ತನೆಗಳು ಉಚಿತವಾಗಿದ್ದವೇ ಅಥವಾ ಆಗ್ರಹ ಪೂರ್ವಕವಾಗಿದ್ದವೇ ಎಂಬುದನ್ನು ಗಮನಿಸಿಕೊಳ್ಳುವಷ್ಟು ಸಂಯಮದ ಆಲೋಚನೆ ಮಾಡುವುದು.

ಅದರ ಬಗ್ಗೆ ಆಲೋಚನೆಯನ್ನು ಮಾಡಿದ ಮೇಲೆ ಇದರಿಂದ ತನ್ನ ಮನಸ್ಥಿತಿಯ ಮೇಲೆ ಮತ್ತು ಇತರರ ಮನಸ್ಸಿಗೆ ಮತ್ತು ಭಾವನೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎಂಬುದನ್ನು ಗಮನಿಸಬೇಕು. ಆಮೇಲೆ ಅದರ ಪರಿಣಾಮವಾಗಿ ತಮ್ಮಲ್ಲಿ ಮತ್ತು ಇತರರಲ್ಲಿ ಮೂಡಿದ ಮನಸ್ಸಿನ ಭಾವನೆಗಳು ಹಿತವಾಗಿದ್ದವೋ ಅಥವಾ ಅಹಿತಕರವಾಗಿದ್ದವೋ ಎಂಬುದನ್ನು ಗ್ರಹಿಸಬೇಕು. ಇಷ್ಟಾದ ಮೇಲೆ ಆ ವ್ಯಕ್ತಿಗೆ ತನ್ನ ಅರಿಮೆಯ ಬಗ್ಗೆ ಒಂದು ಅರಿವು ಬಂದಿರುತ್ತದೆ.

ಬದಲಾಗಲಿ ಕ್ರಮಗಳು

ನನಗೆ ಹೇಯ್ಟಸ್ ಹರ್ನಿಯಾ ಸಮಸ್ಯೆ ಬಂತು. ಗ್ಯಾಸ್ಟ್ರೋಸ್ಕೊಪಿ ಮಾಡಿದರು. ಓಸೋಫೇಗಸ್ ಹೇಯ್ಟಸ್ ಹರ್ನಿಯಾ 2 ಸೆಂಟಿ ಮೀಟರ್ ಇದೆ ಎಂದರು. ಏನೂ ಅಪಾಯವೇನಿಲ್ಲ ಎಂದ ವೈದ್ಯರು ತತ್ಕಾಲಕ್ಕೆ ಔಷಧಿ ಸೂಚಿಸಿ, ಇದು ಹೆಚ್ಚಾಗದಿರಲು ಮತ್ತು ಶಮನವಾಗಲು ಜೀವನ ಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸಿದರು. ಈ ಸಮಸ್ಯೆಯು ಬರಲು ಕಾರಣವಾಗಬಹುದಾದಂತಹ ಅಭ್ಯಾಸಗಳನ್ನು ಪ್ರಯತ್ನ ಪೂರ್ವಕವಾಗಿ ತ್ಯಜಿಸಿ, ಅದರ ಬದಲಿಗೆ ಕೆಲವು ಸೂಚಿತ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಹೇಳಿದರು.

ಶಾರೀರಿಕ ಸಮಸ್ಯೆಗಳಿಗೆ ಹೇಗೆ ಉಣ್ಣುವ, ಕುಡಿಯುವ, ಮಲಗುವ, ವ್ಯಾಯಾಮ ಮಾಡುವಂತಹ ಹಲವು ಅಂಶಗಳನ್ನು ಬದಲಿಸಿಕೊಳ್ಳುತ್ತಾ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆಯೋ ಹಾಗೇ ಅರಿಮೆಯೇ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಪತ್ತೆಹಚ್ಚಿದ ಮೇಲೆ ಆಲೋಚನಾಕ್ರಮಗಳನ್ನು ಬದಲಾಯಿಸಿಕೊಳ್ಳಬೇಕು.

ಎಂತಹ ಆಲೋಚನಾ ಕ್ರಮಗಳಿಂದ ತಮಗೆ ಸಮಸ್ಯೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಿದ ಮೇಲೆ ಅದನ್ನು ನಿವಾರಿಸಿಕೊಳ್ಳಲು ಎಂತಹ ಆಲೋಚನಾ ಕ್ರಮಗಳು ಬೇಕು ಎಂಬುದನ್ನು ಮಾನಸಿಕ ತಜ್ಞರ ನೆರವಿನಿಂದ ಅಥವಾ ಸಮಾಲೋಚಕರ ಸಹಾಯದಿಂದ ತಿಳಿದುಕೊಳ್ಳಬೇಕು. ಅದರಂತೆ ತಾನು ಹೇಗೆ ವರ್ತಿಸುತ್ತಿದ್ದೇನೆ, ಹೇಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೇನೆ ಎಂಬುದನ್ನು ಮೂರನೆಯ ವ್ಯಕ್ತಿಯದನ್ನು ಗಮನಿಸಿದಂತೆಯೇ ಗಮನಿಸಬೇಕು.

ಮೊಟ್ಟ ಮೊದಲನೆಯದಾಗಿ ತಮ್ಮ ದೌರ್ಬಲ್ಯ ಅಥವಾ ಸಮಸ್ಯೆಯನ್ನು ಸಾಮಾನ್ಯೀಕರಿಸುವುದನ್ನು ನಿಲ್ಲಿಸಬೇಕು. ಉದಾಹರಣೆಗೆ ನಿಮ್ಮ ಸಂಗಾತಿಯೊಡನೆ ಜಗಳವಾಡಿದಿರಿ. ನೀವು ಕೋಪದಿಂದ ಬಹಳ ಒರಟಾಗಿ ನಡೆದುಕೊಂಡಿದ್ದೀರಿ. ಅವರು ಹಾಗೆ ವರ್ತಿಸಿದ್ದರಿಂದ ನಾನು ಹೀಗೆ ವರ್ತಿಸಿದೆ, ಅವರ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನನ್ನದಾಗಿತ್ತು ಎಂದು ತಮ್ಮದನ್ನು ಸಮರ್ಥಿಸಿಕೊಂಡು, ನನ್ನ ಜಾಗದಲ್ಲಿ ಯಾರೇ ಇದ್ದರೂ ಅವರೂ ಹೀಗೆ ಮಾಡುತ್ತಿದ್ದರು. ಇದು ಸಾಮಾನ್ಯ ಎನ್ನುವುದು. ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗುವ ಇರಾದೆ ಇದ್ದಲ್ಲಿ ತಮ್ಮ ಆಗ್ರಹ, ಆವೇಶ ಮತ್ತು ಆಕ್ರೋಶಗಳನ್ನು ಸಮರ್ಥಿಸುವ ಮತ್ತು ಸಾಮಾನ್ಯೀಕರಿಸುವ ಕೆಲಸವನ್ನು ಮೊದಲು ನಿಲ್ಲಿಸಬೇಕು.

ಅಸ್ವಾಸ್ಥ್ಯದ ಕೂಪ

ಯಾವುದೇ ಒಂದು ಸಂಘರ್ಷ ಅಥವಾ ಅಹಿತಕರವಾದ ಸಂಗತಿ ನಡೆದಾಗ ಪದೇ ಪದೇ ಅದನ್ನೇ ಯೋಚಿಸುತ್ತಾ, ಒಬ್ಬರೇ ಇರುವಾಗಲೂ ಇದರಿಂದ ತನಗೆ ಅಪಮಾನವಾಯ್ತು, ಇದು ನನ್ನನ್ನು ಕೆಳಕ್ಕೆ ತಳ್ಳಿಬಿಟ್ಟಿತು, ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಯಾವಾಗ ನಾನು ಏನು ಮಾಡಿದರೆ, ಯಾರಿಂದ ಏನು ಮಾಡಿಸಿದರೆ ಅವರಿಗೂ ನನ್ನ ಹಾಗೆ ನೋವಾಗುವುದು, ಅಥವಾ ನನ್ನ ನೋವು ಶಮನವಾಗುವುದು; ಹೀಗೆಲ್ಲಾ ಆಲೋಚನೆಗಳು ಪದೇ ಪದೇ ಬರುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಅಸ್ವಾಸ್ಥ್ಯದ ಕೂಪದಲ್ಲಿ ಜಾರುತ್ತಿದ್ದೀರಿ ಎಂದು ಅರ್ಥ.

ಯಾರೋ ಒಬ್ಬರೊಡನೆ ಸಂಘರ್ಷವಾದ ಮೇಲೆ ಮತ್ತೆ ಅವರನ್ನು ಮುಖಾಮುಖಿಯಾಗುವ ಸಂದರ್ಭ ಬಂದಾಗ ಹಿಂದಿನದೆಲ್ಲಾ ನೆನಪು ಬಂದು, ನಿಮ್ಮ ಮುಖ ಬಾಡುತ್ತಿದೆ, ಒಣಗುತ್ತಿದೆ. ಅವರ ಮುಂದೆ ನಿಮಗೆ ನಡೆಯಲು, ಕೂರಲು ಆಗುತ್ತಿಲ್ಲ. ಆ ಜಾಗ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಾಗಲೂ ನೀವು ಎಚ್ಚರಗೊಳ್ಳಬೇಕು. ಯಾವುದೋ ಒಂದು ಸಮಾರಂಭ. ನಿಮ್ಮ ಜೊತೆಗೆ ಮನಸ್ತಾಪ ಇರುವವರಿಗೂ ಮತ್ತು ನಿಮಗೂ ಸಾಮಾನ್ಯವಾಗಿರುವ ಸ್ನೇಹಿತರು ಮಾಡುತ್ತಿರುವ ಕಾರ್ಯಕ್ರಮ.

ಬರುತ್ತಿರುವ ಅತಿಥಿಗಳ ಪಟ್ಟಿ ನಿಮಗೆ ತಿಳಿಯಿತು. ಅಥವಾ ನಿಮ್ಮೊಂದಿಗೆ ಮನಸ್ತಾಪ ಇರುವ ವ್ಯಕ್ತಿಯೂ ಬರುವುದು ನಿಮಗೆ ಖಚಿತ. “ಅವರು ಬರುವ ಹಾಗಿದ್ದರೆ ನಾನು ಬರುವುದಿಲ್ಲ. ನಿನಗೆ ನಾನು ಬರಬೇಕೆಂದಿದ್ದರೆ ಅವರನ್ನು ಕರೆಯಬೇಡ” ಎಂದಿರೋ, ನಿಮ್ಮಲ್ಲಿ ಅರಿಮೆಯ ಅರಿವು ಇನ್ನೂ ಬಂದಿಲ್ಲ ಎಂದು ಅರ್ಥ. ಅಥವಾ “ಖಂಡಿತ ಬರುತ್ತೇನೆ” ಎಂದು ನಗುಮುಖದಿಂದ ಒಪ್ಪಿಕೊಂಡು, ಆಮಂತ್ರಣ ಪತ್ರಿಕೆ ಸ್ವೀಕರಿಸಿ ನಂತರ ಅವತ್ತು ಮನೆಯಲ್ಲಿಯೇ ಟಿವಿ ನೋಡಿಕೊಂಡು ಕಾಲ ಕಳೆದುಕೊಂಡು ನಂತರ ಅವರು ಸಿಕ್ಕಾಗ, “ಸಾರಿ, ನನಗೆ ಅವತ್ತು ತುಂಬಾ ಹುಷಾರಿರಲಿಲ್ಲ” ಅಥವಾ “ಮನೆಗೆ ಇದ್ದಕ್ಕಿದ್ದಂತೆ ಯಾರೋ ಊರಿಂದ ಬಂದುಬಿಟ್ಟರು. ಅದಕ್ಕೆ ಬರಲಾಗಲಿಲ್ಲ. ಸಾರಿ, ಹೇಗಾಯಿತು ಕಾರ್ಯಕ್ರಮ? ಛೇ, ರಿಯಲಿ ಐ ಮಿಸ್ಡ್” ಅಂತ ಓಳು ಬಿಟ್ಟಿರೋ ಗ್ಯಾರಂಟಿ ನಿಮ್ಮಲ್ಲಿ ಕೀಳರಿಮೆ, ಮುಖೇಡಿತನವೇ ಮೊದಲಾದ ಮಾನಸಿಕ ಸಮಸ್ಯೆಗಳು ಇದೆ.

ಲಗಾಮಿರಲಿ ಕುದುರೆಗೆ

ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳೋಣ. ಯಾರಿಗೆ ತಮ್ಮ ಆಲೋಚನಾ ಕ್ರಮಗಳನ್ನು, ಗ್ರಹಿಸುವ ರೀತಿಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅವರಿಗೆ ಖಂಡಿತವಾಗಿ ತಮ್ಮ ಅಸಹನೆ, ಆಕ್ರೋಶ, ಆವೇಗ, ಆಗ್ರಹವೇ ಇತ್ಯಾದಿ ಅಹಿತಕರ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಕೂಡಾ ಅಭಿವೃದ್ಧಿಗೊಳ್ಳುತ್ತದೆ. ಸಂಯಮದಿಂದ ನೋಡಬಲ್ಲ, ಕೇಳಬಲ್ಲ, ಆಲೋಚಿಸಬಲ್ಲ. ಸಮತೂಕದ ಮಾತುಗಳನ್ನು ಆಡಬಲ್ಲ. ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವ ಮನುಷ್ಯನು ತನ್ನ ಮನಸ್ಸಿಗೆ ಮತ್ತು ಇತರರ ಮನಸ್ಸಿಗೆ ಗಾಯವಾಗದಂತೆ ಎಚ್ಚರಿಕೆಯಿಂದ ತನ್ನ ನಡೆ, ನುಡಿ ಮತ್ತು ಆಲೋಚನೆಗಳನ್ನು ಬಳಸಬಲ್ಲ. ಹಾಗೆಯೇ ತನ್ನ ಧೋರಣೆ, ಒಲವು ಮತ್ತು ನಿಲುವುಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಿಕೊಳ್ಳಬಲ್ಲ.

ಕಠೋಪನಿಷತ್ತೇ ಮೊದಲಾದ ತಾತ್ವಿಕ ಪಠ್ಯಗಳಲ್ಲಿ ಮನುಷ್ಯನ ವಿಷಯ ವಾಸನೆಗಳನ್ನು ಮತ್ತು ಮನೋಭಾವದ ವಸ್ತುಗಳನ್ನು ಕುದುರೆಗಳಿಗೂ ಮತ್ತು ಬುದ್ಧಿಯನ್ನು (ಅಥವಾ ಪ್ರಜ್ಞೆಯನ್ನು) ಸಾರಥಿಗೂ ಹೋಲಿಸುತ್ತಾರೆ. ಬುದ್ಧಿಯು ಮನಸ್ಸಿನ ಭಾವಗಳ ಮೇಲೆ ಲಗಾಮನ್ನು ಹೊಂದಿರಬೇಕು. ಅದನ್ನು ನಿಯಂತ್ರಿಸಬೇಕು ಎಂದು ಸೂಚಿಸುತ್ತಾರೆ. ನಿಜ, ಇದು ಬಹಳ ಸುಂದರವಾದ ಮತ್ತು ಸರಿ ಹೊಂದುವ ರೂಪಕ. ಸವಾರನು ತನ್ನ ಕುದುರೆಯ ಲಗಾಮನ್ನು ತಾನು ಹಿಡಿದುಕೊಂಡು ತನ್ನ ಸವಾರಿಯನ್ನು ತನ್ನ ಗುರಿ ಮತ್ತು ದಾರಿಗೆ ತಕ್ಕಂತೆ ಮಾಡುವುದು ಆತನಿಗಿರುವ ಸಾಮರ್ಥ್ಯ ಮತ್ತು ತರಬೇತಿಯೇ ಸರಿ. ಅದೇ ಮನಸ್ಸಿನ ವಿಷಯಗಳ ಕುದುರೆಗಳನ್ನೂ ಹತೋಟಿಯಲ್ಲಿಡುವ ಲಗಾಮು ನಮ್ಮ ಕೈಯಲ್ಲೇ ಇರಬೇಕು.

ಭಾವನೆಗಳಿಗೂ ಮತ್ತು ಮನೋಭಾವಗಳಿಗೂ ವ್ಯತ್ಯಾಸವಿದೆ. ಅಳು, ನಗು, ಬೇಸರ, ಕೋಪ; ಇತ್ಯಾದಿ ಭಾವನೆಗಳನ್ನು ಹೊರಗಿನ ಒತ್ತಡಗಳಿಂದ ಮತ್ತು ಆಂತರಿಕ ಕಾರಣಗಳಿಂದ ನಿಗ್ರಹಿಸಿಕೊಳ್ಳಬಾರದು. ಅವುಗಳನ್ನು ಅದುಮಿಟ್ಟುಕೊಳ್ಳಬಾರದು, ವ್ಯಕ್ತಪಡಿಸಬೇಕು ನಿಜ. ಆದರೆ, ಈ ರೀತಿಯ ಭಾವನೆಗಳು ಮನೋಭಾವದ ಕಾರಣದಿಂದ ಉಂಟಾದರೆ ಅದು ಸಮಸ್ಯೆಯ ಪರಿಮಿತಿಯಲ್ಲಿ ಬರುತ್ತದೆ.

ಭಾವನೆಗಳಿಗೂ ಮತ್ತು ಮನೋಭಾವಕ್ಕೂ ವ್ಯತ್ಯಾಸವನ್ನು ತಿಳಿದುಕೊಂಡರೆ ಬಹುಶಃ ಇದು ಇನ್ನೂ ಸರಿಯಾಗಿ ಅರ್ಥವಾಗಬಹುದು. ಯಾರಿಗೋ ನೋವಾಯಿತು, ಸಾವಾಯಿತು. ಯಾರೋ ಆಪ್ತರು ಪರಸ್ಪರ ದೂರಾದರು. ಯಾರೋ ಹಸಿವಿನಿಂದ ನರಳಿದರು, ಅಥವಾ ನೀವೇ ಹಸಿವಿನಿಂದಲೋ, ಅಪಮಾನದಿಂದಲೋ ಅಥವಾ ಇನ್ನಾವುದೇ ನೋವಿನಿಂದ ನರಳಿದಿರಿ. ದುಃಖವಾಗುತ್ತದೆ. ಅಳುವಿರಿ.

ಹಾಗೆಯೇ ದೂರಾಗಿದ್ದ ಎರಡು ಜೀವಗಳು ಮತ್ತೆ ಸೇರಿದವು. ಬಹುಕಾಲದ ನಂತರ ನಿಮ್ಮ ಆಪ್ತರನ್ನು ಸಂಧಿಸಿದಿರಿ. ನಿಮಗೆ ಅಥವಾ ಇನ್ನಾರಿಗೋ ಶಿಶುವಿನ ಜನವಾಯಿತು. ಮುದ್ದು ಮಗುವಿನ ಆಟ, ಮುಗ್ಧ ಪ್ರಾಣಿಗಳ ನೋಟ, ಅರಳು ಹೂಗಳು, ಎತ್ತರದ ಮರಗಳು ಖುಷಿ ತಂದವು. ನಗುವಿರಿ. ಹೀಗೆ ಕೆಲವರು ಆ ಹೊತ್ತಿಗೆ ನಡೆದುಕೊಂಡ ಕಾರಣಕ್ಕೆ ನಿಮಗೆ ಕೋಪ ಬಂದಿತು, ಗದರುವಿರಿ. ಗಟ್ಟಿಯಾಗಿ ಮಾತಾಡುವಿರಿ. ಇವೆಲ್ಲವೂ ಕೂಡಾ ಅಲ್ಲಿನ ವಸ್ತುಸ್ಥಿತಿಗಳ ಆಧಾರದಿಂದ ಅಥವಾ ಅವುಗಳು ಪ್ರಚೋದಿಸಿದ್ದರಿಂದ ನೀವು ಅಳುವುದೋ, ನಗುವುದೋ ಅಥವಾ ಕೋಪಿಸಿಕೊಳ್ಳುವುದೋ; ಎಂತದ್ದೋ ಮಾಡಿದಿರಿ. ಇವುಗಳಿಗೆಲ್ಲಾ ವಿಷಯ ವಸ್ತು ಕಾರಣಗಳಿರುತ್ತವೆ.

ಆದರೆ ನಿಮ್ಮ ಅಳು ನಗು ಮತ್ತು ಕೋಪಗಳಿಗೆ ಹೊರಗಿನ ಕಾರಣಗಳೇನೂ ಇಲ್ಲದೇ, ನಿಮ್ಮ ಆಲೋಚನೆಗಳು, ಯೋಚನೆಗಳೇ ಕಾರಣವಾಗಿದ್ದು ಅಳು, ನಗು, ಕೋಪ, ಆಗ್ರಹ, ಆವೇಶಗಳನ್ನು ಉಂಟು ಮಾಡುತ್ತಿದೆ ಎಂದರೆ ಅದು ನಿಮ್ಮ ಮನೋಭಾವ. ಈ ಭಾವನೆಗಳು ಹುಟ್ಟುವುದಕ್ಕೆ ಕಾರಣ ನಿಮ್ಮ ಮನಸ್ಸು. ಅವು ಸಾಮಾನ್ಯವಾಗಿ ಸಹಜವಾಗಿರುವುದಿಲ್ಲ.

ಉದಾಹರಣೆಗೆ ಎಲ್ಲರೂ ಸಂತೋಷವಾಗಿರುವ ಸಮಾರಂಭವೊಂದು ನಡೆಯುತ್ತಿದೆ. ಅಲ್ಲಿ ಕೆಲವರನ್ನು ನೋಡಿ ನಿಮಗೆ ಕಿರಿಕಿರಿಯಾಗುತ್ತಿದೆ. ಯಾವುದೋ ಅಹಿತಕರ ನೆನಪಿನಿಂದ ಅಲ್ಲಿ ಇರಲೂ ಕಷ್ಟವೆನಿಸುತ್ತಿದೆ. ನಗುವ ಮುಖಗಳು ಅಸಹ್ಯವಾಗಿ ಕಾಣುತ್ತಿವೆ. ಅವರೆಲ್ಲಾ ನಗುನಗುತ್ತಾ ದೊಡ್ಡದನಿಯಲ್ಲಿ ಮಾತಾಡಿಕೊಂಡಿರುವುದು ಅಸಹನೀಯವಾಗಿ ಕಿರಿಕಿರಿಯಾಗುತ್ತಿದೆ; ಹೀಗಾದರೆ ನಿಮ್ಮ ಮನೋಭಾವದ ಕಾರಣದಿಂದ ಅನುಚಿತವಾದ ಭಾವನೆಗಳು ಅಲ್ಲಿ ಉಂಟಾಗುತ್ತಿದೆ ಎಂದು ಅರ್ಥ.

ನಿಮ್ಮ ಜೊತೆಗೆ ಜಗಳ ಮಾಡಿದ್ದವರು, ಮನಸ್ತಾಪ ಮಾಡಿಕೊಂಡು ದೂರ ಸರಿದಿರುವವರು ಯಾವುದೋ ತೊಂದರೆಗೆ ಒಳಗಾಗಿ ನೋವುಣ್ಣುತ್ತಿದ್ದಾರೆ ಎಂಬ ಸುದ್ಧಿ ಬಂತು. ಆಗ, ನಿಮಗೆ ಅವರಿಗೆ ಹಾಗೇ ಆಗಬೇಕು. ಸರಿಯಾಗಿ ಆಗಿದೆ. ಅನುಭವಿಸಿಕೊಳ್ಳಲಿ ಎಂದು ಸಂತೋಷದ ಭಾವನೆ ನಿಮ್ಮಲ್ಲಿ ಉಂಟಾದರೆ ಅದು ನಿಮ್ಮ ಮನೋಭಾವದ ಪರಿಣಾಮ ಎಂದು ತಿಳಿಯಬೇಕು. ಹಾಗೆಯೇ ನನ್ನ ಎದುರಾಳಿಗೆ ಯಶಸ್ಸೋ, ಏಳ್ಗೆಯೋ ಉಂಟಾದಾಗ ನನಲ್ಲಿ ನೋವುಂಟಾದರೆ, ನನ್ನಲ್ಲಿ ದುಃಖವಾದರೆ ಅದು ನನ್ನ ಮನೋಭಾವ.

ಸ್ಥೂಲವಾಗಿ ಇಷ್ಟು ತಿಳಿಯೋಣ. ಮನೋಭಾವದ ಕಾರಣ ನಮ್ಮ ಆಲೋಚನಾ ಕ್ರಮಗಳ ಫಲವಾದರೆ, ಭಾವನೆಗಳು ಸಾಮಾನ್ಯವಾಗಿ ಹೊರಗಿನ ಪ್ರೇರಣೆಯಿಂದ ಆಗುವವು. ಹಾಗಾಗಿಯೇ ಬಹಳ ಜನ ಕಾರಣವಿಲ್ಲದೇ ನಗುವ, ಅಥವಾ ಅಳುವವರನ್ನು ಹುಚ್ಚರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರು. ಆದರೆ, ಕಾರಣಗಳಿರುತ್ತವೆ. ಅವು ಒಳಗೆ ಬಚ್ಚಿಟ್ಟುಕೊಂಡಿರುತ್ತವೆ. ಅದು ಹೊರಗೆ ನಮಗೆ ಗೊತ್ತಾಗುವುದಿಲ್ಲ.

ಕೊಂಚ ಮಟ್ಟಿಗೆ ನಿಯಂತ್ರಣ ಸಾಧಿಸಲು ಶಕ್ಯವಾಗಿರುವವರು ತಮ್ಮ ಎದುರಾಳಿ ಸತ್ತ ಎಂಬ ಸುದ್ಧಿ ಕೇಳಿ ‘ಅಬ್ಬಾ ಸತ್ತನಲ್ಲ!’ ಎನಿಸಿದರೂ ಹೊರಗೆ ‘ಅಯ್ಯೋ ಪಾಪ’ ಎನ್ನಬಲ್ಲ. ತನಗೆ ಆಗದೇ ಇರುವವನು ಅಥವಾ ತನ್ನ ಅಸೂಯೆಗೆ ಪಾತ್ರನಾಗಿರುವವನು ಎದುರಾಗಿ ತನಗೆ ಯಾವುದರಲ್ಲೋ ಗೆಲುವುಂಟಾಯಿತು, ಯಶಸ್ಸಾಯಿತು ಎಂದಾಗ ಕಸಿವಿಸಿಯಾದರೂ, ಹೊಟ್ಟೆಯಲ್ಲಿ ಮೆಣಸು ಅರೆಯುತ್ತಿದ್ದರೂ ಮುಖದಲ್ಲಿ ನಗೆಯನ್ನು ತಂದುಕೊಂಡು ‘ಓ, ಹೌದಾ, ವೆರಿ ನೈಸ್. ಕಂಗ್ರಾಜ್ಯುಲೇಶನ್’ ಎಂದು ಅಭಿನಂದಿಸಬಲ್ಲ.

ಆದರೆ, ಅವುಗಳನ್ನು ನಿಯಂತ್ರಣ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದ ಮಾತ್ರಕ್ಕೆ ಅವನು ಸ್ವಾಸ್ಥ್ಯ ಮನಸ್ಸಿನವನು ಎಂದೇನಲ್ಲ. ಅವನಲ್ಲಿ ರೋಗವಿದೆ ಆದರೆ ಸ್ಫೋಟವಾಗುವಷ್ಟು ಉಲ್ಬಣಗೊಂಡಿಲ್ಲ ಎಂದು ಅರ್ಥ. ಆದ್ದರಿಂದ ರೋಗಲಕ್ಷಣಗಳು ಕಂಡ ತಕ್ಷಣವೇ ಆಲೋಚನಾ ಕ್ರಮಗಳನ್ನು, ಚಿಂತನಾ ವಿಧಾನವನ್ನು ಬದಲಾಯಿಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡಬೇಕು.

ಸತತವಾಗಿ ಮಾಡುವ ಅಭ್ಯಾಸವು ಫಲವನ್ನು ಕೊಡುವುದು. ಅದರಲ್ಲಿ ಅನುಮಾನವೇ ಬೇಡ. ತನಗೆ ಅನ್ನಿಸಿದರ ವಿರುದ್ಧವಾಗಿ ಆಲೋಚನೆ ಮಾಡುವುದು ಆತ್ಮದ್ರೋಹವಲ್ಲವೇ? ತಾನು ಅಪ್ರಮಾಣಿಕವಾಗಿ ನಡೆದುಕೊಳ್ಳುತ್ತಿದ್ದೇನಲ್ಲವೇ? ಇನ್ನು ನನ್ನತನದ ಗುರುತೇನು? ಎಂದೇನಾದರೂ ಅಂದುಕೊಂಡರೆ ಅದನ್ನು ಸ್ಪಷ್ಟಪಡಿಸಬೇಕಾದ ಅಗತ್ಯ ಖಂಡಿತ ಇದೆ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending